Sunday, 12 July, 2009

ಇಂದಿನ ಇತಿಹಾಸ History Today ಜುಲೈ 11

ಇಂದಿನ ಇತಿಹಾಸ

ಜುಲೈ 11

ಧೂಮಪಾನದ ಮೇಲೆ ಇನ್ನಷ್ಟು ಕಟ್ಟಳೆ ಹೇರುವ ಸಲುವಾಗಿ, ಗಾಂಧಿ ಜಯಂತಿ ದಿನದಿಂದ (ಅಕ್ಟೋಬರ್ 2) ಅನ್ವಯವಾಗುವಂತೆ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ಕಟ್ಟಡಗಳ ಒಳಭಾಗದಲ್ಲಿ ಬೀಡಿ, ಸಿಗರೇಟ್ ಸೇದುವುದಕ್ಕೆ ನಿಷೇಧ ವಿಧಿಸುವುದಾಗಿ ಕೇಂದ್ರ ಸರ್ಕಾರವು ಪ್ರಕಟಿಸಿತು.

2008: ಧೂಮಪಾನದ ಮೇಲೆ ಇನ್ನಷ್ಟು ಕಟ್ಟಳೆ ಹೇರುವ ಸಲುವಾಗಿ, ಗಾಂಧಿ ಜಯಂತಿ ದಿನದಿಂದ (ಅಕ್ಟೋಬರ್ 2) ಅನ್ವಯವಾಗುವಂತೆ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ಕಟ್ಟಡಗಳ ಒಳಭಾಗದಲ್ಲಿ ಬೀಡಿ, ಸಿಗರೇಟ್ ಸೇದುವುದಕ್ಕೆ ನಿಷೇಧ ವಿಧಿಸುವುದಾಗಿ ಕೇಂದ್ರ ಸರ್ಕಾರವು ಪ್ರಕಟಿಸಿತು.

2007: 2006ರ ಜುಲೈ 11ರಂದು ನಡೆದ ಸರಣಿ ರೈಲು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಡೆಸಿದ ತನಿಖೆ ಕಾಲದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದ್ದ ಆರೋಪಿಯ ಹೇಳಿಕೆಯ ವಿಡಿಯೊ `ಸಿಡಿ' ಬಹಿರಂಗಗೊಂಡ ಬಗ್ಗೆ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿತು. ವರ್ಷದ ಹಿಂದೆ ಇದೇ ದಿನ ಲಷ್ಕರ್-ಎ- ತೊಯ್ಬಾ ಸಂಘಟನೆಗೆ ಸೇರಿದ ಉಗ್ರರು ಮುಂಬೈ ಮಹಾನಗರದ ರೈಲುಗಳ ಏಳು ಬೋಗಿಗಳಲ್ಲಿ ಶಕ್ತಿಶಾಲಿ ಬಾಂಬುಗಳನ್ನು ಸ್ಫೋಟಿಸಿದಾಗ 187 ಪ್ರಯಾಣಿಕರು ಮೃತರಾಗಿ 812 ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

2007: ಬೆಂಗಳೂರು ಮೂಲದ ಐ.ಟಿ. ಸಂಸ್ಥೆ ಇನ್ಫೋಸಿಸ್, 2007ರ ಸಾಲಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಟ್ಟು ರೂ 3773 ಕೋಟಿ ವಹಿವಾಟು ನಡೆಸಿ ರೂ 1,079 ಕೋಟಿ ನಿವ್ವಳ ಲಾಭ ಗಳಿಸಿ, ಶೇ 34.5ರಷ್ಟು ಏರಿಕೆ ದಾಖಲಿಸಿತು.

2007: ಪುಣೆಯಲ್ಲಿ ಮುಕ್ತಾಯವಾದ 104ನೇ ಆಗಾಖಾನ್ ಟ್ರೋಫಿ ಹಾಕಿ ಟೂರ್ನಿಯ ಹಿರಿಯರ ವಿಭಾಗದಲ್ಲಿ ವಿಕ್ರಮ್ ಪಿಳ್ಳೈ ಅಕಾಡೆಮಿ (ವಿಪಿಎ) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ವಿಪಿಎ ತಂಡವು 5-2 ಗೋಲುಗಳ ಅಂತರದಿಂದ ಫೈನಲ್ ಪಂದ್ಯದಲ್ಲಿ ಪುಣೆಯ ಕೇಂದ್ರ ರೈಲ್ವೆ ತಂಡವನ್ನು ಸೋಲಿಸಿತು.

2007: ಟೆನಿಸ್ ತಾರೆ, ಗ್ಲೋಬೋಸ್ಪೋರ್ಟ್ ಮುಖ್ಯಸ್ಥ ಮಹೇಶ್ ಭೂಪತಿ ಹಾಗೂ ಅನ್ಸಾಲ್ ಪ್ರಾಪರ್ಟೀಸ್ ಅಂಡ್ ಇನ್ ಫ್ರಾಸ್ಟ್ರಕ್ಚರ್ (ಎಪಿಐ) ನಿರ್ದೇಶಕ ಅನ್ಸಾಲ್ ನೇತೃತ್ವದ ಅನ್ಸಾಲ್ ಪ್ರಾಪರ್ಟೀಸ್ ಅಂಡ್ ಇನ್ ಫ್ರಾಸ್ಟ್ರಕ್ಚರ್ (ಎಪಿಐ) ಭಾರತದ ವಿವಿಧೆಡೆ 16 ಟೆನಿಸ್ ಅಕಾಡೆಮಿಗಳನ್ನು ತೆರೆಯುವ ಮಹತ್ವದ ತಿಳಿವಳಿಕೆ ಒಪ್ಪಂದಕ್ಕೆ ಈದಿನ ನವದೆಹಲಿಯಲ್ಲಿ ಸಹಿ ಹಾಕಿದರು. `ಮಹೇಶ್ ಭೂಪತಿ ಟೆನಿಸ್ ಅಕಾಡೆಮೀಸ್' (ಎಂಬಿಟಿಎ) ಹೆಸರಿನಲ್ಲಿ 16 ಅಕಾಡೆಮಿಗಳು ತಲೆಎತ್ತುವುವು.

2006: ಭಾರತದ ವಾಣಿಜ್ಯ ರಾಜಧಾನಿ ಮುಂಬೈಯ ಉಪನಗರ ರೈಲುಗಳಲ್ಲಿ ಈದಿನ ಸಂಜೆ ಸರಣಿ ಬಾಂಬ್ ಸ್ಫೋಟ ಸಂಭವಿಸಿ 200ಕ್ಕೂ ಹೆಚ್ಚು ಜನ ಮೃತರಾಗಿ 500ಕ್ಕೂ ಹೆಚ್ಚು ಜನ ಗಾಯಗೊಂಡರು. ಸಂಜೆ 6ರಿಂದ 6.30ರ ಅವಧಿಯಲ್ಲಿ ಮಾತುಂಗ, ಖಾರ್, ಸಾಂತಾಕ್ರೂಜ್, ಜೋಗೇಶ್ವರಿ, ಬೊರಿವಿಲಿ, ಭಯಂದರಿನಲ್ಲಿ ರೈಲುಗಳ ಮೊದಲ ದರ್ಜೆ ಬೋಗಿಗಳಲ್ಲಿ ಈ ಬಾಂಬ್ ಸ್ಫೋಟಗಳು ಸಂಭವಿಸಿದವು.

2006: ಇರಾಕಿನಾದ್ಯಂತ ನಡೆದ ಬಾಂಬ್ ಮತ್ತು ಬಂದೂಕು ದಾಳಿಗಳಲ್ಲಿ 10 ಮಂದಿ ಶಿಯಾಗಳು ಸೇರಿ ಒಟ್ಟು 36 ಮಂದಿ ಮೃತರಾದರು.

2006: ಬಾಂಗ್ಲಾದೇಶದ ವಾಯವ್ಯ ಭಾಗದಲ್ಲಿ ರೈಲು-ಬಸ್ ಅಪಘಾತದಲ್ಲಿ ಬಸ್ಸಿನಲ್ಲಿದ್ದ ಕನಿಷ್ಠ 33 ಪ್ರಯಾಣಿಕರು ಮೃತರಾಗಿ ಇತರ 35 ಮಂದಿ ಗಾಯಗೊಂಡರು.

1994: ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿತು. ಈಕೆ ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ 1972ರಲ್ಲಿ ಸೇವೆಗೆ ಸೇರಿದವರು. 1949ರ ಜೂನ್ 9ರಂದು ಜನಿಸಿದ ಕಿರಣ್ ಅಮೃತಸರ, ಪಂಜಾಬ್ ಮತ್ತು ಭಾರತದ ಇತರ ಕಡೆಗಳಲ್ಲಿ ಪೊಲೀಸ್ ಇಲಾಖೆಗಳಲ್ಲಿ ಸೇವೆ ಮಾಡಿದ್ದಾರೆ. 2005ರಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯವು ಇವರಿಗೆ ಡಾಕ್ಟರ್ ಆಫ್ ಲಾ ಪದವಿ ನೀಡಿ ಗೌರವಿಸಿತು.

1948: ಮಿತ್ರಾ ವೆಂಕಟರಾಜ್ ಜನನ.

1937: ಕಥೆ, ಕಾದಂಬರಿಗಾರ್ತಿ, ಸಂಘಟಕಿ ಸುನೀತಿ ಉದ್ಯಾವರ ಅವರು ಶಾಂತಾ ರಾಮರಾವ್- ಸೀತಾಬಾಯಿ ದಂಪತಿಯ ಪುತ್ರಿಯಾಗಿ ಮಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರ ಮನೆತನದಲ್ಲಿ ಜನಿಸಿದರು. ಮುಂಬೈ ವಿಶ್ವವಿದ್ಯಾಲಯಕ್ಕೆ `ಕಡೆಂಗೋಡ್ಲು ಶಂಕರ ಭಟ್ಟರ ಸೃಜನಶೀಲ ಪ್ರಕಟಿತ ಕೃತಿಗಳು' ಮಹಾಪ್ರಬಂಧ ಮಂಡಿಸಿ ಪಿ ಎಚ್ ಡಿ ಪಡೆದ ಅವರು ಕನ್ನಡ ವಿಭಾಗದಿಂದ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

1932: ಎಚ್. ಎ. ರಾಮಕೃಷ್ಣ ಜನನ.

1897: ಸಮಾಜ ಸುಧಾರಕ, ಸ್ವಾತಂತ್ರ್ಯ ಸೇನಾನಿ ಸಿಖ್ ನಾಥ್ ಬ್ಯಾನರ್ಜಿ ಜನನ.

1882: ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರ ಬಾಬಾ ಕಾನ್ಷಿರಾಮ್ ಜನನ

(ಸಂಗ್ರಹ: ನೆತ್ರಕೆರೆ ಉದಯಶಂಕರ)

Friday, 10 July, 2009

ಇಂದಿನ ಇತಿಹಾಸ History Today ಜುಲೈ 10

ಇಂದಿನ ಇತಿಹಾಸ

ಜುಲೈ 10

ಪಾಕಿಸ್ಥಾನದ ಇಸ್ಲಾಮಾಬಾದಿನ ಲಾಲ್ ಮಸೀದಿಯಲ್ಲಿ ಒಂದು ವಾರದಿಂದ ಅವಿತುಕೊಂಡಿದ್ದ ಉಗ್ರಗಾಮಿಗಳ ವಿರುದ್ಧ ಪಾಕಿಸ್ಥಾನ ಸೇನೆ ಈದಿನ ಬೆಳಗಿನ ಜಾವ ನಾಲ್ಕು ಗಂಟೆಗೆ ಆರಂಭಿಸಿದ ಪೂರ್ಣ ಪ್ರಮಾಣದ ಕಾರ್ಯಾಚರಣೆಯಲ್ಲಿ ಉಗ್ರರ ನೇತಾರ ಅಬ್ದುಲ್ ರಶೀದ್ ಘಾಜಿ ಸೇರಿದಂತೆ 88 ಉಗ್ರರು ಪ್ರಾಣ ಕಳೆದುಕೊಂಡರು.

2008: ಭಾರತ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (ಐಎಇಎ) ನಡುವಿನ ಸುರಕ್ಷತಾ ಒಪ್ಪಂದದ ಕರಡು ಪ್ರತಿಯನ್ನು ಈದಿನ ದಿಢೀರನೆ ಬಹಿರಂಗಪಡಿಸಲಾಯಿತು.

2007: ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಮ್ಮಡ್ಲು ಎಂಬಲ್ಲಿ ಈದಿನ ಬೆಳಗ್ಗೆ ನಕ್ಸಲ್ ನಿಗ್ರಹ ಪಡೆ (ಎ ಎನ್ ಎಫ್) ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಒಬ್ಬ ನಕ್ಸಲೀಯ, ಮತ್ತು ಅವರಿಗೆ ಆಶ್ರಯ ನೀಡಿದ್ದರೆನ್ನಲಾದ ನಾಲ್ವರು ಸ್ಥಳೀಯರು ಸೇರಿದಂತೆ ಐದು ಮಂದಿ ಗುಂಡೇಟಿಗೆ ಬಲಿಯಾದರು. ಮೃತರನ್ನು ಪೊಲೀಸ್ ಇಲಾಖೆಯ ನಕ್ಸಲೀಯರ ಪಟ್ಟಿಯಲ್ಲಿದ್ದ ಗೌತಮ, ಸ್ಥಳೀಯರಾದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟದ ಕಾರ್ಯದರ್ಶಿ ಅತ್ಯಡ್ಕದ ಪರಮೇಶ್ವರ್, ಗಾಳಿಗಂಡಿ ತೋಟದಮನೆಯ ಸುಂದರೇಶ್, ರಾಮೇಗೌಡ್ಲು (45), ಆತನ ಪತ್ನಿ ಕಾವೇರಮ್ಮ (35) ಎಂದು ಗುರುತಿಸಲಾಯಿತು.

2007: ಪಾಕಿಸ್ಥಾನದ ಇಸ್ಲಾಮಾಬಾದಿನ ಲಾಲ್ ಮಸೀದಿಯಲ್ಲಿ ಒಂದು ವಾರದಿಂದ ಅವಿತುಕೊಂಡಿದ್ದ ಉಗ್ರಗಾಮಿಗಳ ವಿರುದ್ಧ ಪಾಕಿಸ್ಥಾನ ಸೇನೆ ಈದಿನ ಬೆಳಗಿನ ಜಾವ ನಾಲ್ಕು ಗಂಟೆಗೆ ಆರಂಭಿಸಿದ ಪೂರ್ಣ ಪ್ರಮಾಣದ ಕಾರ್ಯಾಚರಣೆಯಲ್ಲಿ ಉಗ್ರರ ನೇತಾರ ಅಬ್ದುಲ್ ರಶೀದ್ ಘಾಜಿ ಸೇರಿದಂತೆ 88 ಉಗ್ರರು ಪ್ರಾಣ ಕಳೆದುಕೊಂಡರು. ಲಾಲ್ ಮಸೀದಿಯ ಉಪ ಆಡಳಿತಾಧಿಕಾರಿ ಮತ್ತು ಉಗ್ರರ ನೇತಾರನಾಗಿದ್ದ ಅಬ್ದುಲ್ ರಶೀದ್ ಘಾಜಿ ಜತೆ ಪಾಕಿಸ್ಥಾನ ಆಡಳಿತ ನಡೆಸಿದ ಹನ್ನೊಂದು ಗಂಟೆಗಳ ಮಾತುಕತೆ ವಿಫಲವಾದ ಬಳಿಕ `ಆಪರೇಷನ್ ಸೈಲೆನ್ಸ್'ನ್ನು ನಡೆಸಲಾಯಿತು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 150 ಜನರನ್ನು ಉಗ್ರರು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಕಾರ್ಯಾಚರಣೆಯಲ್ಲಿ 12 ಯೋಧರೂ ಹತರಾದರು.

2007: ಛತ್ತೀಸ್ ಗಢದ ದಾಂಟೇವಾಡ ಜಿಲ್ಲೆಯ ಅರಣ್ಯದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ವಿಶೇಷ ಪೊಲೀಸ್ ಪಡೆ ಜತೆ ನಡೆದ ಗುಂಡಿನ ಕಾಳಗದಲ್ಲಿ 20ಕ್ಕೂ ಹೆಚ್ಚು ಮಾವೋವಾದಿ ನಕ್ಸಲೀಯರು ಮತ್ತು 24 ಪೊಲೀಸರು ಸಾವನ್ನಪ್ಪಿದರು. ರಾಯಪುರದಿಂದ 550 ಕಿ.ಮೀ. ದೂರದ ಎಳಾಂಪಟ್ಟಿ- ರಗದ್ ಗಟ್ಟ ವಲಯದ ಅರಣ್ಯದಲ್ಲಿ ಈ ಗುಂಡಿನ ಕಾಳಗ ನಡೆಯಿತು. ಕೇಂದ್ರ ಮೀಸಲು ಪಡೆ ಮತ್ತು ವಿಶೇಷ ಪೊಲೀಸ್ ಪಡೆಯ 115 ಸದಸ್ಯರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

2006: ಅತಿ ದೊಡ್ಡ ರವಿಕೆ ಹೊಲಿಯುವ ಮೂಲಕ ಎಸ್ಸೆಸ್ಸೆಲ್ಸಿ ಓದಿರುವ ಬೆಂಗಳೂರು ರಾಜಾಜಿನಗರದ ಗೃಹಿಣಿ ಕಮಲಾವತಿ ವಾಸುದೇವ `ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್'ನಲ್ಲಿ ಸ್ಥಾನ ಗಿಟ್ಟಿಸಿದರು. 2005ರ ಆಗಸ್ಟ್ 23ರಂದು 60 ಅಂಗುಲದ ಪನ್ನಾದ 83.5 ಮೀಟರ್ ಬಟ್ಟೆ ಹಿಡಿದು ಪಟ್ಟಾಗಿ ಕುಳಿತ ಕಮಲಾವತಿ ಆಗಸ್ಟ್ 25ರ ವೇಳೆಗೆ (3 ದಿನದಲ್ಲಿ) 18 ಅಡಿ ಎತ್ತರ, 10 ಅಡಿ 10 ಅಂಗುಲ ಉದ್ದ ಹಾಗೂ 12 ಅಡಿ 6 ಅಂಗುಲ ಸುತ್ತಳತೆಯ ತೋಳುಗಳು, 72.5 ಅಡಿ ಸುತ್ತಳೆಯ ಎದೆಯ ಗಾತ್ರದ ಭಾರಿ ರವಿಕೆಯನ್ನು ಹೊಲಿದು ಮುಗಿಸಿದ್ದರು. ಹೊಲಿಯಲು ಆಕೆ ಬಳಸಿದ ದಾರ 1250 ಮೀಟರುಗಳು.

2006: ಪಾಕಿಸ್ಥಾನ ಅಂತಾರಾಷ್ಟ್ರೀಯ ಏರ್ ಲೈನ್ಸ್ (ಪಿಐಎ) ವಿಮಾನವೊಂದು ಮುಲ್ತಾನ್ ನಗರದ ವಿಮಾನ ನಿಲ್ದಾಣದಿಂದ ಗಗನಕ್ಕೆ ಏರಿದ ಕೆಲವೇ ನಿಮಿಷಗಳಲ್ಲಿ ನೆಲಕ್ಕೆ ಅಪ್ಪಳಿಸಿ ಇಬ್ಬರು ಹಿರಿಯ ರಕ್ಷಣಾ ಅಧಿಕಾರಿಗಳ ಸಹಿತ 45 ಜನ ಮೃತರಾದರು.

2006: ಇನ್ಸಾಟ್ 4 ಸಿ ಸಂಪರ್ಕ ಉಪಗ್ರಹವನ್ನು ಅಂತರಿಕ್ಷಕ್ಕೆ ಸಾಗಿಸಬೇಕಾಗಿದ್ದ ಭೂಸ್ಥಿರ ಕಕ್ಷೆ ಉಪಗ್ರಹ ಉಡಾವಣಾ ವಾಹನವು (ಜಿ ಎಸ್ ಎಲ್ ವಿ-ಎಫ್ ಒ2) ನಭಕ್ಕೆ ಹಾರಿದ ಕೆಲವೇ ಕ್ಷಣಗಳಲ್ಲಿ ಆಕಾಶದಲ್ಲಿ ಸ್ಫೋಟಗೊಂಡು ಪಥ ಬದಲಿಸಿ ಬಂಗಾಳಕೊಲ್ಲಿಗೆ ಉರಿದು ಬಿತ್ತು.

1994: ಪರಮವೀರ ಚಕ್ರ ಪುರಸ್ಕೃತ ರಾಮರಾವ್ ರಘೋಬ ರಾಣೆ ನಿಧನ.

1992: ರಾಜ್ಯಸಭೆಯ ಉಪಸಭಾಪತಿಯಾಗಿ ನಜ್ಮಾ ಹೆಪ್ತುಲ್ಲಾ ಆಯ್ಕೆ.

1991: ಖ್ಯಾತ ವಿಜ್ಞಾನಿ ಪದ್ಮಭೂಷಣ ಸಿ.ಜಿ. ಪಂಡಿತ್ ನಿಧನ.

1991: ಹತ್ತನೇ ಲೋಕಸಭೆಯ ಅಧ್ಯಕ್ಷರಾಗಿ ಕಾಂಗ್ರೆಸ್ಸಿನ ಶಿವರಾಜ ಪಾಟೀಲ್ ಆಯ್ಕೆ.

1962: ಸಾಹಿತಿ ಸಕಲವಾರ ಕಾವೇರಪ್ಪ ಜನನ.

1943: ಸಾಹಿತಿ ಲೀಲಾವತಿ ಎಸ್. ರಾವ್ ಜನನ.

1940: ಸಾಹಿತಿ ಶಾರದಾ ಆರ್. ರಾವ್ ಜನನ.

1927: ಸಮಾಜ ಸುಧಾರಕ ಗಂಗಾರಾಮ್ ನಿಧನ.

1865: ಇತಿಹಾಸ ತಜ್ಞ, ಗೆಜೆಟಿಯರ್, ಪ್ರಸಿದ್ಧ ಬಹುಭಾಷಾ ವಿದ್ವಾಂಸ, ಸಂಘ ಸಂಸ್ಥೆಗಳ ಸ್ಥಾಪಕ, ಜನಪ್ರತಿನಿಧಿ ಹಯವದನರಾವ್

(1865-1946) ಅವರು ತಮಿಳುನಾಡಿನ ಕೃಷ್ಣಗಿರಿ ತಾಲ್ಲೂಕಿನ ಹೊಸೂರಿನಲ್ಲಿ ರಾಜಾರಾವ್ ಅವರ ಪುತ್ರನಾಗಿ ಜನಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Thursday, 9 July, 2009

ಸಮುದ್ರ ಮಥನ 31: ಪ್ರೇಮದಿಂದ ಜಾರಿದ್ದನ್ನು ಮೇಲೆತ್ತಲು ಕನಿಕರಿಸಿ, ಸಹಕರಿಸಿ

ಸಮುದ್ರ ಮಥನ 31: ಪ್ರೇಮದಿಂದ ಜಾರಿದ್ದನ್ನು

ಮೇಲೆತ್ತಲು ಕನಿಕರಿಸಿ, ಸಹಕರಿಸಿ

ಪ್ರಸ್ತುತ, ನಮ್ಮ ರಾಷ್ಟ್ರದ ಪರಿಸ್ಥಿತಿಯೂ ಕನಿಕರಿಸಲು ಯೋಗ್ಯವಾಗಿದೆ. ಬಲ್ಲ ಪ್ರತಿಯೊಬ್ಬರೂ ಅದನ್ನು ಸುಧಾರಿಸಲು ತಮ್ಮನ್ನು ತಾವು ಕೊಟ್ಟುಕೊಳ್ಳಬೇಕು.

ಪ್ರೇಮ ತತ್ತ್ವದ ಮೇಲೆ ರಾಷ್ಟ್ರ ಕಟ್ಟಲು ದೂರ ದೇಶದ ದಾರ್ಶನಿಕ ಕಟ್ಟಿಕೊಟ್ಟ ನೋಟವನ್ನು ಕಳೆದ ಸಂಚಿಕೆಯಲ್ಲಿ ನೋಡಿದ್ದೇವೆ.

ಅದರಂತೆ ಪರಿಸ್ಥಿತಿ ಇಲ್ಲದಾದಾಗ, ಬಲ್ಲವರು ಎಷ್ಟೆಷ್ಟು ರೀತಿಯಲ್ಲಿ ಕನಿಕರಿಸಬಹುದು ಮತ್ತು ಬಿದ್ದ ಪ್ರಜೆಗಳನ್ನು ಎಲ್ಲೆಲ್ಲಿಂದ ಮೇಲೆತ್ತಬೇಕಾಗುವುದು ಎಂಬುದನ್ನೂ ಆ ದಾರ್ಶನಿಕ ತನ್ನ ಸುಂದರ ಸಾಲುಗಳಲ್ಲಿ ಹಿಡಿದಿಡುತ್ತಾನೆ.

"ಯಾವ ರಾಷ್ಟ್ರದಲ್ಲಿ ನಂಬಿಕೆಗಳೇ ತುಂಬಿದ್ದು ಧರ್ಮ ಶೂನ್ಯವಾಗಿದೆಯೋ ಅಂಥ ರಾಷ್ಟ್ರವನ್ನು ಕನಿಕರಿಸಿ /
ಯಾವ ರಾಷ್ಟ್ರ ತಾನು ನೇಯದ ಬಟ್ಟೆಯನ್ನು ಉಡುತ್ತದೆಯೋ, ತಾನು ಬೆಳೆಯದ ಆಹಾರವನ್ನು ತಿನ್ನುತ್ತದೆಯೋ ಅದನ್ನು ಕನಿಕರಿಸಿ / ಯಾವ ರಾಷ್ಟ್ರ ಪೀಡಕರನ್ನು ಧೀರ ಶೂರ ಎಂದು ಹೊಗಳುತ್ತದೆಯೋ, ಹೊಳೆಯುವ ಆಕ್ರಮಣಕಾರರನ್ನು ಉದಾರಿ ಎಂದು ಹೊಗಳುತ್ತದೆಯೋ ಅದನ್ನು ಕನಿಕರಿಸಿ / ಯಾವ ರಾಷ್ಟ್ರ ಒಂದು ಭಾವೋದ್ರೇಕವನ್ನು ಕನಸಿನಲ್ಲಿ ಕನಿಕರಿಸಿ, ಎಚ್ಚರದ ಸ್ಥಿತಿಯಲ್ಲಿ ಅದಕ್ಕೆ ವಶವಾಗುತ್ತದೆಯೋ ಅದನ್ನು ಕನಿಕರಿಸಿ / ಸ್ಮಶಾನ ಯಾತ್ರೆಯಲ್ಲಲ್ಲದೇ ಬೇರೆ ಸಮಯದಲ್ಲಿ ತನ್ನ ದನಿಯನ್ನು ಎತ್ತರಿಸದ, ತನ್ನ ಅವಶೇಷಗಳನ್ನಲ್ಲದ ಬೇರೇನನ್ನೂ ಹಾಡಿ ಹೊಗಳದ, ತನ್ನ ಕತ್ತನ್ನು ಕತ್ತಿ ಮತ್ತು ವಧೆಯ ಪೀಠದ ನಡುವೆ ಇಟ್ಟಾಗಲಲ್ಲದೆ ದಂಗೆಯೇಳದ ರಾಷ್ಟ್ರವನ್ನು ಕನಿಕರಿಸಿ / ಯಾವ ರಾಷ್ಟ್ರದಲ್ಲಿ ರಾಜತಂತ್ರಜ್ಞ ನರಿಯೋ, ತತ್ತ್ವಶಾಸ್ತ್ರಜ್ಞ ಯಕ್ಷಿಣಿಗಾರನೋ, ಕಲೆ ತೇಪೆ ಹಾಕುವುದೋ ಅಥವಾ ಅನುಕರಿಸುವುದೋ ಅದನ್ನು ಕನಿಕರಿಸಿ / ಹೊಸ ರಾಜನನ್ನು ಬಾಜಾ ಬಜಂತ್ರಿಯಿಂದ ಸ್ವಾಗತಿಸಿ, ಹಳೆಯವನನ್ನು ಕೂಗಿ ಕಿರುಚಿ ಓಡಿಸುವ, ಮತ್ತೆ ಹೊಸಬನನ್ನು ಬಾಜಾ ಬಜಂತ್ರಿಯಿಂದ ಸ್ವಾಗತಿಸುವ ರಾಷ್ಟ್ರವನ್ನು ಕನಿಕರಿಸಿ / ಯಾವ ರಾಷ್ಟ್ರದಲ್ಲಿ ಸಂತರು ವಯೋವೃದ್ಧರಾಗಿ ಮೌನಿಗಳಾಗಿದ್ದಾರೋ, ಅಲ್ಲಿನ ಸಶಕ್ತರು ಇನ್ನೂ ತೊಟ್ಟಿಲಲ್ಲಿದ್ದಾರೋ ಅಂಥದನ್ನು ಕನಿಕರಿಸಿ / ಯಾವ ರಾಷ್ಟ್ರ ಚೂರು ಚೂರಾಗಿ ಒಡೆದು ಹೋಗಿ, ಪ್ರತಿಯೊಂದು ಚೂರು ತಾನೇ ಒಂದು ರಾಷ್ಟ್ರ ಎಂದು ಭಾವಿಸಿದೆಯೋ ಅಂಥ ರಾಷ್ಟ್ರವನ್ನು ಕನಿಕರಿಸಿ /"

ಪ್ರಸ್ತುತ, ನಮ್ಮ ರಾಷ್ಟ್ರದ ಪರಿಸ್ಥಿತಿಯೂ ಕನಿಕರಿಸಲು ಯೋಗ್ಯವಾಗಿದೆ. ಬಲ್ಲ ಪ್ರತಿಯೊಬ್ಬರೂ ಅದನ್ನು ಸುಧಾರಿಸಲು ತಮ್ಮನ್ನು ತಾವು ಕೊಟ್ಟುಕೊಳ್ಳಬೇಕು.


ಇಂದಿನ ಇತಿಹಾಸ History Today ಜುಲೈ 09

ಇಂದಿನ ಇತಿಹಾಸ

ಜುಲೈ 09

ವನ್ಯ ಜೀವಿ ಮಂಡಳಿಯ ಸಲಹೆಯ ಮೇರೆಗೆ ಬಂಗಾಳದ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಭಾರತ ಸರ್ಕಾರ ಮಾನ್ಯ ಮಾಡಿತು. ಈ ಹುಲಿ ಕೆಂಪು ಮಿಶ್ರಿತ ಹಳದಿ ಚರ್ಮ ಅದರ ಮೇಲೆ ಕಪ್ಪು ಪಟ್ಟಿಯನ್ನು ಹೊಂದಿ ರಾಜ ಗಾಂಭೀರ್ಯವನ್ನು ಪಡೆದಿದೆ.

2008: ಶಿವಸೇನೆಯ ಮಾಜಿ ಸಂಸದ ಮಧುಕರ್ ಸರ್ಪೋತದಾರ್ ಹಾಗೂ ಇಬ್ಬರು ಕಾರ್ಯಕರ್ತರಿಗೆ 1992- 93ರಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಮುಂಬೈ ನಗರ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಮತ್ತು ತಲಾ 5 ಸಾವಿರ ರೂಪಾಯಿ ದಂಡ ವಿಧಿಸಿತು.

2007: ಮಾಜಿ ಪ್ರಧಾನಿ ಮತ್ತು ಹಿರಿಯ ಸಮಾಜವಾದಿ ನಾಯಕ ಚಂದ್ರಶೇಖರ್ ಅವರ ಅಂತ್ಯಸಂಸ್ಕಾರವನ್ನು ಈದಿನ ಸಂಜೆ ನವದೆಹಲಿಯ ಯಮುನಾ ನದಿ ದಂಡೆಯಲ್ಲಿರುವ ರಾಜ್ ಘಾಟಿನನ ಏಕತಾ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವದೊಡನೆ ನೆರವೇರಿಸಲಾಯಿತು. ಹಿಂದೂ ಧಾರ್ಮಿಕ ವಿಧಿ-ವಿಧಾನಗಳನ್ವಯ ವೇದ ಪಠಣಗಳೊಂದಿಗೆ ಚಂದ್ರಶೇಖರ್ ಅಂತಿಮ ಸಂಸ್ಕಾರವನ್ನು ಅವರ ಪುತ್ರರಾದ ಪಂಕಜ್ ಮತ್ತು ನೀರಜ್ ಅವರು ನೆರವೇರಿಸಿದರು.

2007: ವೃತ್ತಿರಂಗಭೂಮಿಯ ಹಿರಿಯ ಕಲಾವಿದ ವಿಜಾಪುರದ ಕೆ.ಬಿ.ಶಂಕರ್, ಹಾರ್ಮೋನಿಯಂ ಮೇಷ್ಟ್ರು ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ದೇವೇಂದ್ರ ರೆಡ್ಡಿ ನಂದಿಪುರ, ನಟ ಬೆಂಗಳೂರಿನ ಮೈಕೋ ಚಂದ್ರು ಸೇರಿದಂತೆ ಹದಿನೈದು ಮಂದಿ ರಂಗಭೂಮಿಯ ಹಿರಿಯ ಕಲಾವಿದರಿಗೆ ಕರ್ನಾಟಕ ನಾಟಕ ಅಕಾಡೆಮಿಯ 2006- 07ರ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. `ನಾಟಕ ಕ್ಷೇತ್ರಕ್ಕೆ ಶಿಷ್ಟ ಕೊಡುಗೆ ನೀಡಿದ ಕವಿ ಎಚ್.ಡುಂಡಿರಾಜ್ ಅವರನ್ನು ಗೌರವ ಪ್ರಶಸ್ತಿಗೆ, ಪ್ರಭಾತ್ ಕಲಾವಿದರು ಸಂಸ್ಥೆಯನ್ನು ಕೆ.ಹಿರಣ್ಣಯ್ಯ ಪುರಸ್ಕಾರಕ್ಕೆ ಹಾಗೂ ಆರು ಮಂದಿಯನ್ನು ಸಿಜಿಕೆ ಯುವರಂಗ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ ಕಪ್ಪಣ್ಣ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಮೋಸ, ನಕಲಿ ದಾಖಲೆ ಸೃಷ್ಟಿ ಸೇರಿದಂತೆ ನಾಲ್ಕು ವಿವಿಧ ಆರೋಪಗಳಿಗೆ ಗುರಿಯಾದ ಚಿತ್ರ ನಟ ಶ್ರೀನಿವಾಸ ಮೂರ್ತಿ ಅವರಿಗೆ ಏಳು ವರ್ಷ ಶಿಕ್ಷೆ ಹಾಗೂ ಮೂರು ಸಾವಿರ ರೂಪಾಯಿ ದಂಡ ವಿಧಿಸಿ ನಗರದ ಆರನೇ ಎಸಿಎಂಎಂ ಕೋರ್ಟ್ ಆದೇಶ ನೀಡಿತು. 1988ರಲ್ಲಿ ಬಿಡುಗಡೆಗೊಂಡ `ಬಾಳ ನೌಕೆ' ಚಿತ್ರಕ್ಕೆ ಸಂಬಂಧಿಸಿದಂತೆ ಅವರು ಈ ಆರೋಪಗಳಿಗೆ ಗುರಿಯಾಗಿದ್ದರು.

2007: `ದಲಾಲ್ ಸ್ಟ್ರೀಟ್' ಎಂದೂ ಕರೆಯಿಸಿಕೊಳ್ಳುವ ಷೇರುಪೇಟೆಯ 133ನೇ ಸ್ಥಾಪನಾ ದಿನವಾಗಿರುವ ಈದಿನ ಮುಂಬೈ ಷೇರು ಪೇಟೆಯ ಸೂಚ್ಯಂಕವು ಬ್ಯಾಂಕ್ ಮತ್ತು ಮಾಹಿತಿ ತಂತ್ರಜ್ಞಾನದ ಷೇರುಗಳ ಖರೀದಿ ಬೆಂಬಲದ ಫಲವಾಗಿ 81.61 ಅಂಶಗಳಷ್ಟು ಏರಿಕೆ ದಾಖಲಿಸಿ 15,000 ಅಂಶಗಳ ಮೈಲಿಗಲ್ಲು ದಾಟಿ ಹೊಸ ದಾಖಲೆ ಬರೆಯಿತು.

2006: ಬರ್ಲಿನ್ನಿನಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪೈನಲ್ ಪಂದ್ಯದಲ್ಲಿ ಇಟೆಲಿಯು ಫ್ರಾನ್ಸನ್ನು ಪೆನಾಲ್ಟಿ ಶೂಟೌಟಿನಲ್ಲಿ 5-3 ಗೋಲುಗಳಿಂದ ಸೋಲಿಸಿ 2006ರ 18ನೇ ವಿಶ್ವ ಕಪ್ಪನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಸ್ಟುಟ್ ಗರ್ಟಿನಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪೋರ್ಚುಗಲ್ ತಂಡವನ್ನು 3-1 ಗೋಲುಗಳಿಂದ ಸೋಲಿಸುವ ಮೂಲಕ ಜರ್ಮನಿ ಮೂರನೇ ಸ್ಥಾನವನ್ನು ಪಡೆದು `ಪೀಫಾ' ವಿಶ್ವಕಪ್ ಫುಟ್ಬಾಲ್ ಕಂಚಿನ ಪದಕವನ್ನು ಗೆದ್ದುಕೊಂಡಿತು.

2006: ದೇಶದ ಪ್ರತಿಷ್ಠಿತ ಅತ್ಯಾಧುನಿಕ ಮಧ್ಯಮ ಶ್ರೇಣಿಯ ಖಂಡಾತರ ಅಗ್ನಿ - 3 ಕ್ಷಿಪಣಿಯನ್ನು ಒರಿಸ್ಸಾದ ಕಡಲ ತೀರದ ವೀಲರ್ ದ್ವೀಪದಿಂದ ಪರೀಕ್ಷಾರ್ಥ ಹಾರಿಬಿಡಲಾಯಿತು. ಆದರೆ ತಾಂತ್ರಿಕ ದೋಷದ ಪರಿಣಾಮವಾಗಿ ಸಮುದ್ರಕ್ಕೆ ಬಿದ್ದಿತು.

2006: ರಷ್ಯಾದ ಸೈಬೀರ್ ಏರ್ ಲೈನ್ಸ್ಗೆ ಸೇರಿದ ವಿಮಾನವೊಂದು ಸೈಬೀರಿಯಾದ ಇರ್ಕುತ್ಸ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಅಪಘಾತಕ್ಕೆ ಈಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಚಾಲಕ, ಸಿಬ್ಬಂದಿ ಸೇರಿದಂತೆ 150ಕ್ಕೂ ಹೆಚ್ಚು ಜನ ಮೃತರಾದರು.

2006: `ಬಿಗ್ ಬಿ' ಎಂದೇ ಖ್ಯಾತರಾದ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ಗೆ ಬ್ರಿಟನ್ನಿನ ಲೈಸೆಸ್ಟರಿನ ಡಿ. ಮೊಂಟ್ ಫೋರ್ಡ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು.

1969: ವನ್ಯ ಜೀವಿ ಮಂಡಳಿಯ ಸಲಹೆಯ ಮೇರೆಗೆ ಬಂಗಾಳದ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಭಾರತ ಸರ್ಕಾರ ಮಾನ್ಯ ಮಾಡಿತು. ಈ ಹುಲಿ ಕೆಂಪು ಮಿಶ್ರಿತ ಹಳದಿ ಚರ್ಮ ಅದರ ಮೇಲೆ ಕಪ್ಪು ಪಟ್ಟಿಯನ್ನು ಹೊಂದಿ ರಾಜ ಗಾಂಭೀರ್ಯವನ್ನು ಪಡೆದಿದೆ.

1942: ಆನ್ ಫ್ರಾಂಕ್ ಮತ್ತು ಆಕೆಯ ಕುಟುಂಬ ನಾಝಿಗಳ ದಾಳಿಯಿಂದ ಪಾರಾಗಲು ಆ್ಯಮ್ಸ್ಟರ್ಡ್ಯಾಮಿನಲ್ಲಿ ಆಶ್ರಯ ಪಡೆದರು. ಆ್ಯಮ್ಸ್ಟರ್ಡ್ಯಾಮಿನ ಪ್ರಿನ್ಸ್ ಗ್ರಾಚಿನಲ್ಲಿ ಕಳೆದ `ಅಜ್ಞಾತವಾಸ'ದ ಕುರಿತು ಆನ್ ಫ್ರಾಂಕ್ ಬರೆದ ದಿನಚರಿ ಮುಂದೆ ಜಾಗತಿಕ ಖ್ಯಾತಿ ಪಡೆಯಿತು. ಅವರು ಆಶ್ರಯಪಡೆದಿದ್ದ ತಾಣ ಮ್ಯೂಸಿಯಂ ಆಯಿತು.

1922: ಜಾನಿ ವೀಸ್ ಮುಲ್ಲರ್ 100 ಮೀಟರುಗಳನ್ನು ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ (58.6 ಸೆಕೆಂಡುಗಳು) ಈಜಿದ ಜಗತ್ತಿನ ಮೊತ್ತ ಮೊದಲಿನ ಈಜುಗಾರ ಎಂಬ ಖ್ಯಾತಿ ಗಳಿಸಿದರು. ಮುಂದೆ ಇವರು ಚಿತ್ರನಟನಾಗಿ `ಟಾರ್ಜಾನ್- ದಿ ಏಪ್ ಮ್ಯಾನ್' ಚಿತ್ರದ ಮೂಲಕ ಮಿಂಚಿದರು. ಮೊದಲ `ಟಾರ್ಜಾನ್' ಚಿತ್ರವಲ್ಲದೆ ಇನ್ನೂ 11 `ಟಾರ್ಜಾನ್' ಚಿತ್ರಗಳಲ್ಲಿ ಜಾನಿ ನಟಿಸಿದರು.

1838: ಮುಂಬೈಯ ಗವರ್ನರ್ ಆಗಿದ್ದ ಸರ್ ರಾಬರ್ಟ್ ಗ್ರಾಂಟ್ (1780-1838) ಮೃತರಾದರು. ಇವರ ಹೆಸರನ್ನೇ ಗ್ರಾಂಟ್ ಮೆಡಿಕಲ್ ಕಾಲೇಜಿಗೆ ನೀಡಲಾಯಿತು.

1877: ವಿಂಬಲ್ಡನ್ನಿನ ಆಲ್ ಇಂಗ್ಲೆಂಡ್ ಕ್ರೊಕೆಟ್ ಮತ್ತು ಲಾನ್ ಟೆನಿಸ್ ಕ್ಲಬ್ಬಿನಲ್ಲಿ ಮೊತ್ತ ಮೊದಲ `ವಿಂಬಲ್ಡನ್ ಚಾಂಪಿಯನ್ ಶಿಪ್' ಆರಂಭವಾಯಿತು

(ಸಂಗ್ರಹ: ನೆತ್ರಕೆರೆ ಉದಯಶಂಕರ)

Wednesday, 8 July, 2009

ಇಂದಿನ ಇತಿಹಾಸ History Today ಜುಲೈ 08

ಇಂದಿನ ಇತಿಹಾಸ

ಜುಲೈ 08

ಮಾಜಿ ಪ್ರಧಾನಿ ಮತ್ತು ಹಿರಿಯ ಸಮಾಜವಾದಿ ನಾಯಕ ಚಂದ್ರಶೇಖರ್ ಅವರು ಬಹುಕಾಲದ ಅಸ್ವಸ್ಥತೆಯ ನಂತರ ಈದಿನ ನವದೆಹಲಿಯ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದರು. ಒಂದು ಕಾಲಕ್ಕೆ ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದ ಮಾಜಿ ಪ್ರಧಾನಿ ಮತ್ತು ಹಿರಿಯ ಸಮಾಜವಾದಿ ನಾಯಕರಿವರು.

2008: ಭಾರತ- ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದವನ್ನು ಕಾರ್ಯಗತಗತಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ `ಐಎಇಎ' ಜೊತೆಗಿನ ಒಪ್ಪಂದ ಪೂರ್ಣಗೊಳಿಸುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಟೋಕಿಯೋದಲ್ಲಿ ನೀಡಿದ ಹೇಳಿಕೆಯಿಂದ ಕೆರಳಿದ ಎಡಪಕ್ಷಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂದಕ್ಕೆ ಪಡೆಯುವುದಾಗಿ ಪ್ರಕಟಿಸಿದವು.

2007: ಮಾಜಿ ಪ್ರಧಾನಿ ಮತ್ತು ಹಿರಿಯ ಸಮಾಜವಾದಿ ನಾಯಕ ಚಂದ್ರಶೇಖರ್ ಅವರು ಬಹುಕಾಲದ ಅಸ್ವಸ್ಥತೆಯ ನಂತರ ಈದಿನ ನವದೆಹಲಿಯ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದರು. ಒಂದು ಕಾಲಕ್ಕೆ ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದ ಮಾಜಿ ಪ್ರಧಾನಿ ಮತ್ತು ಹಿರಿಯ ಸಮಾಜವಾದಿ ನಾಯಕರಿವರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ರಕ್ತದ ಕ್ಯಾನ್ಸರಿನಿಂದ ಬಳಲಿದ್ದ ಅವರು ಈದಿನ ಬೆಳಗ್ಗೆ 8.45ರ ವೇಳೆಗೆ ಕೊನೆಯುಸಿರೆಳೆದರು. ಹಾಲಿ ಲೋಕಸಭಾ ಸದಸ್ಯರಾಗಿದ್ದ ಚಂದ್ರಶೇಖರ್ ದೇಶದ 11ನೇ ಪ್ರಧಾನಿಯಾಗಿ 1990ರ ನವೆಂಬರ್ 10ರಿಂದ 1991ರ ಜೂನ್ 21ರವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಬೆಂಬಲದೊಡನೆ ಅಲ್ಪ ಬಹುಮತದ ಸರ್ಕಾರವನ್ನು ಮುನ್ನಡೆಸಿದ್ದರು. ಉತ್ತರ ಪ್ರದೇಶದ ಬಲ್ಲಿಯಾ ಕ್ಷೇತ್ರದಿಂದ ಎಂಟು ಬಾರಿ ಲೋಕಸಭೆಗೆ ಮತ್ತು ಒಂದು ಬಾರಿ ರಾಜ್ಯಸಭೆಗೆ ಚುನಾಯಿತರಾಗಿದ್ದ ಅವರು, ಆರ್ಥಿಕ ಉದಾರೀಕರಣದ ನೀತಿಗಳು ಮತ್ತು ವೈಯಕ್ತಿಕ ರಾಜಕಾರಣವನ್ನು ಬಲವಾಗಿ ವಿರೋಧಿಸಿದವರು. ತತ್ವ-ಸಿದ್ಧಾಂತದ ರಾಜಕಾರಣಕ್ಕೆ ಹೆಸರಾಗಿದ್ದ ಅವರು ಪ್ರಧಾನಿಯಾಗುವ ಮುನ್ನ ಯಾವುದೇ ಸರ್ಕಾರಿ ಅಧಿಕಾರದ ಸ್ಥಾನವನ್ನು ಅಲಂಕರಿಸಿರಲಿಲ್ಲ. ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರೊಡನೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಜನತಾದಳದಿಂದ ವಿಭಜನೆಗೊಂಡು ಸಮಾಜವಾದಿ ಜನತಾ ಪಕ್ಷ ರಚಿಸಿಕೊಂಡ ಅವರು, ದಿವಂಗತ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಬೆಂಬಲದಿಂದ ಅಲ್ಪಮತದ ಸರ್ಕಾರ ರಚಿಸಿದರು. ಆದರೆ ಸ್ಪಲ್ಪವೇ ಸಮಯದಲ್ಲಿ ಕಾಂಗ್ರೆಸ್ ಬೆಂಬಲ ವಾಪಸ್ ಪಡೆದ ಪರಿಣಾಮ ಅವರ ಸರ್ಕಾರ ಪತನಗೊಂಡಿತು. ಇತ್ತೀಚಿನ ವರ್ಷಗಳಲ್ಲಿನ ಧನಬಲದ ರಾಜಕಾರಣದ ಮಧ್ಯೆ ತಮ್ಮ ಪಕ್ಷವನ್ನು ಬಲವಾಗಿ ಕಟ್ಟಲು ಅಸಹಾಯಕರಾಗಿದ್ದ ಚಂದ್ರಶೇಖರ್, ತಮ್ಮ ಸ್ವಕ್ಷೇತ್ರದಿಂದ ಮಾತ್ರ ಅಜಾತಶತುವಿನಂತೆ ಗೆಲ್ಲುತ್ತಲೇ ಬಂದರು. ಆದರೆ ಅವರದು ಲೋಕಸಭೆಯಲ್ಲಿ ಒಂಟಿ ದನಿಯಾಗಿತ್ತು. ನೇರ ನಡೆ-ನುಡಿಯ ಹಿರಿಯ ರಾಜಕಾರಣಿಯಾಗಿದ್ದ ಅವರು ಎಲ್ಲ ಪಕ್ಷಗಳ ಹಿರಿಯ ನಾಯಕರೊಡನೆ ಸರಾಗವಾಗಿ ಬೆರೆಯುವ `ಗೌರವಾನ್ವಿತ ವ್ಯಕ್ತಿ' ಯಾಗಿದ್ದರು.

2007: ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಪ್ರಸಿದ್ಧ ಯಡೆಯೂರು ಕ್ಷೇತ್ರದಲ್ಲಿ ಆನೆಯ ತುಳಿತಕ್ಕೆ ಒಳಗಾಗಿ ಸಚಿನ್ ಎಂಬ ಎಂಟು ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತನಾದನು. ದೇವಾಲಯ ಆವರಣದಲ್ಲೇ ಬಾಲಕ ಆನೆಗೆ ಬಾಳೆಹಣ್ಣು ನೀಡುತ್ತಿದ್ದಾಗ ಈ ಘಟನೆ ನಡೆಯಿತು. ಈ ಬಾಲಕ ಮೂಲತಃ ಅರಕಲಗೂಡಿನವರಾದ ಮಂಜುನಾಥ ಮತ್ತು ಶ್ರೀಮತಿ ಮಂಜುನಾಥ ದಂಪತಿಯ ಪುತ್ರ. ಇವರು ಪ್ರಸ್ತುತ ಬೆಂಗಳೂರಿನ ನಂದಿನಿ ಲೇ ಔಟ್ ನಿವಾಸಿಗಳು.

2007: ಸ್ವಿಟ್ಜರ್ಲೆಂಡ್ ಆಟಗಾರ ರೋಜರ್ ಫೆಡರರ್ ಸತತ ಐದು ಬಾರಿ ವಿಂಬಲ್ಡನ್ ಪ್ರಶಸ್ತಿ ಪಡೆದ ಸಾಧನೆ ಮಾಡಿದರು. ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್ಬಿನ ಸೆಂಟರ್ ಕೋರ್ಟಿನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನಿನ ರಫೆಲ್ ನಡಾಲ್ ವಿರುದ್ಧ ಫೆಡರರ್ 7-6 (9-7), 4-6, 7-6 (7-3), 2-6, 6-2ರಲ್ಲಿ ಗೆಲುವಿನ ನಗೆ ಬೀರಿದರು. ಬೋರ್ನ್ ಬರ್ಗ್ ಅವರನ್ನು ಬಿಟ್ಟರೆ ಸತತ ಐದು ಸಲ ವಿಂಬಲ್ಡನ್ ಚಾಂಪಿಯನ್ ಆದ ಶ್ರೇಯಸ್ಸು ಫೆಡರರ್ ಒಬ್ಬರದೇ.

2007: ಸಂಪತ್ತಿನ ಗಳಿಕೆಯಲ್ಲಿ ಹಿರಿಯಣ್ಣ ಮುಖೇಶ್ ಅಂಬಾನಿ ಅವರನ್ನು ಹಿಂಬಾಲಿಸುತ್ತಿರುವ ಅನಿಲ್ ಅಂಬಾನಿ ಸಹ ಪ್ರತಿಷ್ಠಿತ `ಲಕ್ಷ ಕೋಟಿ ಕ್ಲಬ್'ಗೆ (ಟ್ರಿಲಿಯನರ್ ಕ್ಲಬ್) ಸೇರ್ಪಡೆಯಾಗಿ, ಈ ಗೌರವಕ್ಕೆ ಪಾತ್ರರಾದ ದ್ವಿತೀಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಿಯಲ್ ಎಸ್ಟೇಟ್ ಕ್ಷೇತ್ರದ ದೈತ್ಯ ಕಂಪೆನಿ ಡಿಎಲ್ಎಫ್ನ ಅಧ್ಯಕ್ಷ ಕೆ.ಪಿ.ಸಿಂಗ್ ಅವರು ಸಂಪತ್ತಿನ ಗಳಿಕೆಯಲ್ಲಿ ಅಂಬಾನಿ ಸಹೋದರರ ನಂತರದ ಮೂರನೇ ಸ್ಥಾನವನ್ನು ಪಡೆದರು.

2007: ಜಗತ್ತಿನ ಅತ್ಯಂತ ಸುಂದರ ಸ್ಮಾರಕ ಎಂದೇ ಪರಿಗಣಿಸಲಾಗಿರುವ ತಾಜ್ ಮಹಲ್ ನಿರೀಕ್ಷೆಯಂತೆಯೇ ಹೊಸ ಏಳು ಅದ್ಭುತಗಳಲ್ಲಿ ಒಂದೆನಿಸಿತು. ವಿಶ್ವದ ಹೊಸ ಏಳು ಅದ್ಭುತಗಳಲ್ಲಿ ತಾಜ್ ಮಹಲ್ ಕೂಡಾ ಒಂದು ಎಂಬುದಾಗಿ ಪೋರ್ಚುಗಲ್ಲಿನ ಲಿಸ್ಬನ್ನಿನಲ್ಲಿ ನಡೆದ ಸಮಾರಂಭದಲ್ಲಿ ಘೋಷಿಸಲಾಯಿತು. ಬಾಲಿವುಡ್ ನಟಿ ಬಿಪಾಸಾ ಬಸು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಯಿತು. ಏಳು ಅದ್ಭುತಗಳ ಆಯ್ಕೆ ಅಧಿಕೃತವಲ್ಲದಿದ್ದರೂ ಮೊಘಲರ ಕಾಲದ್ದೆಂದು ಹೇಳಲಾಗುತ್ತಿರುವ ಈ ಅಚ್ಚರಿದಾಯಕ ಕಟ್ಟಡ ಭಾರತೀಯರು ಹೆಮ್ಮೆಪಡುವಂತೆ ಮಾಡಿತು. ವಿಶ್ವದಾದ್ಯಂತ ಹೊಸ ಏಳು ಅದ್ಭುತಗಳನ್ನು ಗುರುತಿಸುವ ಕಾರ್ಯಕ್ರಮವನ್ನು ಪೋರ್ಚುಗಲ್ಲಿನ ಚಿತ್ರ ನಿರ್ಮಾಪಕ ಬರ್ನಾರ್ಡ್ ವೆಬರ್ ಆರಂಭಿಸಿದ್ದರು. ಈ ಅಮೃತಶಿಲೆಯ ಕಟ್ಟಡ ಶೇಕಡಾವಾರು ಮತದಾನದಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಒಟ್ಟು ಚಲಾವಣೆಯಾದ ಮತಗಳ ಪೈಕಿ 20 ಶೇಕಡಾ ಮತ ಪಡೆದ ಪೆರುವಿನ ಮಾಚು ಪಿಚು ಮೊದಲ ಸ್ಥಾನ ಗಿಟ್ಟಿಸಿತು. ವಿಶ್ವದ 100 ಕೋಟಿಗೂ ಹೆಚ್ಚು ಮಂದಿ ಮತದಾನ ಮಾಡಿದ್ದರು. `ನ್ಯೂ ಸೆವೆನ್ ವಂಡರ್ಸ್ ಆಫ್ ವರ್ಲ್ಡ್' ಸಂಸ್ಥೆ ಪೋರ್ಚುಗಲ್ಲಿನ ಲಿಸ್ಬನ್ನಿನ `ಎಸ್ಟಾಡಿಯೊ ಡ ಲುಜ್' ಹಾಲ್ನಲ್ಲಿ ಸಮಾರಂಭ ಏರ್ಪಡಿಸಿತ್ತು. ತಾಜ್ ಮಹಲ್ ಮತ್ತು ಮಾಚು ಪಿಚು ಅಲ್ಲದೆ ಚೀನಾದ ಮಹಾಗೋಡೆ, ಜೋರ್ಡಾನಿನ ಪೆಟ್ರಾ ಸ್ಮಾರಕ, ಬ್ರೆಜಿಲ್ ನಲ್ಲಿರುವ ಏಸುಕ್ರಿಸ್ತನ ಪ್ರತಿಮೆ, ಮೆಕ್ಸಿಕೊದ ಚಿಚೆನ್ ಇಟ್ಜಾ ಪಿರಾಮಿಡ್ ಮತ್ತು ರೋಮ್ ನಗರದ ಮಧ್ಯಭಾಗದಲ್ಲಿರುವ ಕಲೊಸಿಯಂ (ವೃತ್ತಕಾರದ ಬೃಹತ್ ರಂಗಮಂಟಪ) ಏಳು ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂದು ಸಮಾರಂಭದಲ್ಲಿ ಪ್ರಕಟಿಸಲಾಯಿತು. ತಾಜ್ ಮಹಲ್ ಗೆ ಸಂಬಂಧಿಸಿದ ಪ್ರಶಸ್ತಿ ಪತ್ರವನ್ನು ಆಗ್ರಾದ ಮೇಯರ್ ಅಂಜುಲಾ ಸಿಂಗ್ ಸ್ವೀಕರಿಸಿದರು.

2007: ವರ್ಷದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿರುವ ಮೇಘಾಲಯದ ಕಣ್ಸೆಳೆಯುವ ಪಟ್ಟಣ ಚಿರಾಪುಂಜಿಗೆ 'ಸೊಹ್ರಾ' ಎಂಬುದಾಗಿ ಮರುನಾಮಕರಣ ಮಾಡಲು `ಸಯೆಮ್' ಬುಡಕಟ್ಟಿನ ಮುಖ್ಯಸ್ಥ, ಪ್ರಭಾವಶಾಲಿ ಖಾಸಿ ವಿದ್ಯಾರ್ಥಿ ಸಂಘಟನೆ (ಕೆಎಸ್ಯು) ಹಾಗೂ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡವು. ಸ್ಥಳೀಯರು `ಸೊಹ್ರಾ'ಎಂದೇ ಕರೆಯುವ ಇದನ್ನು ಬ್ರಿಟಿಷ್ ಆಡಳಿತಗಾರರು ಸರಿಯಾಗಿ ಉಚ್ಚರಿಸಲಾಗದೇ `ಚೆರ್ರಾ' ಎಂದು ಅಪಭ್ರಂಶಗೊಳಿಸಿದ್ದರು. 1830ರಲ್ಲಿ `ಸೊಹ್ರಾ'ದಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿದ್ದ ಬ್ರಿಟಿಷರು `ಪುಂಜೊ' ಎಂಬ ಬಂಗಾಳಿ ಪದವನ್ನು `ಚೆರ್ರಾ'ಕ್ಕೆ ಸೇರಿಸಿದರು. ಆಗ ಅದು ಚಿರಾಪುಂಜಿ ಎಂದು ಬಳಕೆಗೆ ಬಂದಿತು.

2007: ಕೋಲ್ಕತ್ತ ಸಮೀಪದ ಚಿತ್ತೂರಿನಿಂದ ಸಂಚಾರವನ್ನು ಆರಂಭಿಸಿದ ಪ್ರಾಯೋಗಿಕ ರೈಲು ಈದಿನ ಬೆಳಗ್ಗೆ ಭಾರತೀಯ ಕಾಲಮಾನ 10.45ರ ಹೊತ್ತಿಗೆ ಬಾಂಗ್ಲಾದೇಶದ ದರ್ಶನಾ ರೈಲ್ವೆ ನಿಲ್ದಾಣವನ್ನು ತಲುಪಿತು. ಇದರೊಂದಿಗೆ ಬಂಗಾಳದಿಂದ ಬಾಂಗ್ಲಾ ನಡುವೆ ರೈಲು ಸಂಚಾರ ಆರಂಭಿಸುವ ಉದ್ದೇಶ ಭಾಗಶಃ ಯಶಸ್ಸು ಕಂಡಿತು.

2007: ನಾಟಿಂಗ್ ಹ್ಯಾಮಿನಲ್ಲಿ ಅಂತ್ಯಗೊಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸೊಗಸಾದ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ತಂಡ ವಿಜಯದುಂಧುಬಿ ಮೊಳಗಿಸಿತು. ಟ್ರೆಂಟ್ ಬ್ರಿಜ್ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಪ್ರವಾಸಿ ವಿಂಡೀಸ್ 93 ರನ್ನುಗಳಿಂದ ಆತಿಥೇಯ ಇಂಗ್ಲೆಂಡ್ ತಂಡವನ್ನು ಪರಾಭವಗೊಳಿಸಿತು.

2006: ಉಡುಪಿ ಅಂಬಾಗಿಲಿನ ಸುಸಿ ಗ್ಲೋಬಲ್ ರೀಸರ್ಚ್ ಸೆಂಟರ್ ಅಧ್ಯಕ್ಷ ಬಿ. ವಿಜಯ ಕುಮಾರ್ ಹೆಗ್ಡೆ ಅವರು ಕಡಲ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಸಂಶೋಧನೆಗೆ ಬೌದ್ಧಿಕ ಹಕ್ಕು (ಪೇಟೆಂಟ್) ಪಡೆದುಕೊಂಡಿರುವುದಾಗಿ ಪ್ರಕಟಿಸಿದರು. 27 ವರ್ಷಗಳಿಂದ ನಡೆಸಿದ ಸಂಶೋಧನೆಗೆ ಮೂರೇ ವರ್ಷದಲ್ಲಿ ಕೇಂದ್ರ ಸರ್ಕಾರಿ ಆಧೀನದ ಪೇಟೆಂಟ್ ಕಚೇರಿ ಬೌದ್ಧಿಕ ಹಕ್ಕನ್ನು ನೀಡಿದ್ದು, ಅಧ್ಯಯನ ಯೋಜನೆಗಾಗಿ 2.5 ಕೋಟಿ ರೂಪಾಯಿಗಳನ್ನು ವ್ಯಯಿಸಿದ್ದು, ಯೋಜನೆ ಅನುಷ್ಠಾನಕ್ಕೆ ಕಂಪೆನಿ ಸ್ಥಾಪಿಸಲಾಗುವುದು ಎಂದು ಹೆಗ್ಡೆ ಹೇಳಿದರು.

2006: ಭಾರತೀಯ ಇಂಗ್ಲಿಷ್ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ ಕನ್ನಡಿಗ, ಹಾಸನದ ರಾಜಾರಾವ್ ಅವರು ಅಮೆರಿಕದ ಟೆಕ್ಸಾಸ್ನ ಆಸ್ಟಿನ್ನಲ್ಲಿ (98) ನಿಧನರಾದರು. 1908ರಲ್ಲಿ ಹಾಸನದಲ್ಲಿ ಎಚ್.ಎಸ್. ಕೃಷ್ಣಸ್ವಾಮಿ- ಜಯಲಕ್ಷ್ಮಮ್ಮ ದಂಪತಿಯ ಮಗನಾಗಿ ಜನಿಸಿದ್ದ ರಾಜಾರಾವ್ ಅವರ ಸ್ವಂತ ಊರು ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ. 1969ರಲ್ಲಿ ಭಾರತ ಸರ್ಕಾರದ `ಪದ್ಮಭೂಷಣ', 1988ರಲ್ಲಿ ಸಾಹಿತಿ ವಲಯದ ಅತ್ಯಂತ ಪ್ರತಿಷ್ಠಿತ `ನ್ಯೂಸ್ಟಾಡ್ಟ್ ಇಂಟರ್ ನ್ಯಾಷನಲ್ ಪ್ರೈಜ್' ಪಡೆದಿದ್ದ ರಾಜಾರಾವ್ ತಮ್ಮ ಕೃತಿಗಳ ಮೂಲಕ ಹುಟ್ಟೂರನ್ನು ಇಡೀ ಜಗತ್ತಿಗೆ ಪರಿಚಯಿಸಿದ ವ್ಯಕ್ತಿ. ಯೌವನದ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲೂ ತೊಡಗಿಸಿಕೊಂಡಿದ್ದ ಅವರ ಕೃತಿಗಳಲ್ಲಿ `ಕಾಂತಾಪುರ', `ದಿ ಕೌ ಆಫ್ ದಿ ಬ್ಯಾರಿಕೇಡ್ಸ್ ಮತ್ತು ಇತರ ಕಥೆಗಳು', `ವಿದರ್ ಇಂಡಿಯಾ' `ದಿ ಸರ್ಪೆಂಟ್ ಅಂಡ್ ದಿ ರೋಪ್', `ದಿ ಕ್ಯಾಟ್ ಅಂಡ್ ಶೇಕ್ಸ್ಪಿಯರ್' `ದಿ ಮೀನಿಂಗ್ ಆಫ್ ಇಂಡಿಯಾ' ಇತ್ಯಾದಿ ಪ್ರಮುಖವಾದವು.

2006: ಹಿರಿಯ ಸಾಹಿತಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ `ಅನಕೃ- ನಿರ್ಮಾಣ್ ಪ್ರಶಸ್ತಿ' ಪ್ರದಾನ ಮಾಡಲಾಯಿತು.

2006: ಲಂಡನ್ನಿನಲ್ಲಿ ನಡೆದ ಮಹಿಳಾ ವಿಂಬಲ್ಡನ್ ಟೆನಿಸ್ ಸಿಂಗಲ್ಸ್ ಫೈನಲ್ಸಿನಲ್ಲಿ ಫ್ರಾನ್ಸಿನ ಅಮೆಲಿ ಮೌರೆಸ್ಮೊ ಅವರು ಬೆಲ್ಜಿಯಂನ ಜಸ್ಟಿನ್ ಹೆನಿನ್ ಹಾರ್ಡಿನ್ ಅವರನ್ನು 2-6, 6-3, 6-4 ಅಂತರದಲ್ಲಿ ಪರಾಭವಗೊಳಿಸಿ ಚೊಚ್ಚಲ `ಮಹಿಳಾ ವಿಂಬಲ್ಡನ್ ಕಿರೀಟ'ಕ್ಕೆ ಪಾತ್ರರಾದರು.

2006: ಮಾಲೀಕರಿಂದ ಪತ್ರಿಕೆಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಆಪಾದಿಸಿ ಕ್ಯಾಲಿಫೋರ್ನಿಯಾದ `ಸಂಟಾ ಬಾರ್ಬಾರಾ ನ್ಯೂಸ್ ಪ್ರೆಸ್' ಪತ್ರಿಕೆಯ ಆರು ಮಂದಿ ಹಿರಿಯ ಸಂಪಾದಕರು ಮತ್ತು ದೀರ್ಘ ಕಾಲದ ಅಂಕಣಕಾರರೊಬ್ಬರು ಪತ್ರಿಕೆಗೆ ರಾಜೀನಾಮೆ ನೀಡಿದರು ಎಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿತು.

1981: ಬೆಂಗಳೂರು ನಗರದ ಕಳ್ಳಬಟ್ಟಿ ಸಾರಾಯಿ ದುರಂತದಲ್ಲಿ ಸತ್ತವರ ಸಂಖ್ಯೆ 224ಕ್ಕೆ ಏರಿತು. ಮೈಸೂರಿನಲ್ಲೂ ಕಳ್ಳಬಟ್ಟಿ ಸಾರಾಯಿ ಸೇವನೆಯಿಂದ 25 ಮಂದಿ ಪೌರ ಕಾರ್ಮಿಕರ ಪೈಕಿ 12 ಮಂದಿ ಅಸು ನೀಗಿದರು.

1936: ಶಿವರಾಮು ಎಂದೇ ಖ್ಯಾತರಾಗಿದ್ದ ಸಾಹಿತಿ ಎಂ.ಎಸ್. ಶಿವರಾಮಯ್ಯ ಅವರು ಸೀತಾರಾಮಯ್ಯ- ಶಿವಮ್ಮ ದಂಪತಿಯ ಮಗನಾಗಿ ಮಳವಳ್ಳಿಯಲ್ಲಿ ಜನಿಸಿದರು. ಸಾವರ್ಕರ್ ಅವರ `ಗೋಮಾಂತಕ' ಗದ್ಯರೂಪವನ್ನು `ನೆತ್ತರು ತಾವರೆ' ಹೆಸರಿನಲ್ಲಿ ಕನ್ನಡಕ್ಕೆ ತಂದ ಶಿವರಾಮು `ರಣವೀಳ್ಯ', `ಅಕ್ಕ ನಿವೇದಿತಾ', `ಕನ್ನಡ ಕಡುಗಲಿಗಳು' ಕೃತಿಗಳ ಮೂಲಕ ಜನರಿಗೆ ಸುಪರಿಚಿತರು. ಸಾವರ್ಕರ್ ಜೀವನ ಚರಿತ್ರೆಯ ಕಾದಂಬರಿ ರೂಪ `ಆತ್ಮಾಹುತಿ', ಉಜ್ವಲ ರಾಷ್ಟ್ರಗೀತೆ ವಂದೇ ಮಾತರಂಗೆ ಬಂದ ದುಸ್ಥಿತಿಯನ್ನು ಬಣ್ಣಿಸುವ `ಒಂದು ಕಥೆ ಒಂದು ವ್ಯಥೆ' ಕೃತಿಗಳು ಅವರ ಕೃತಿಗಳಲ್ಲಿ ಅತ್ಯಂತ ಪ್ರಮುಖ ಕೃತಿಗಳು. ಶಿವರಾಮ ಕಾರಂತರಿಂದ ಹೊಗಳಿಕೆಗೆ ಪಾತ್ರರಾದ ಶಿವರಾಮು 1999ರ ನವೆಂಬರ್ 14ರಂದು ನಿಧನರಾದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜುಲೈ 07

ಇಂದಿನ ಇತಿಹಾಸ

ಜುಲೈ 07

ಸುಪ್ರಸಿದ್ಧ ಅಮರನಾಥ ಮಂದಿರದ ಆಡಳಿತ ಮಂಡಳಿಗೆ ಯಾತ್ರಿಗಳಿಗೆ ತಾತ್ಕಾಲಿಕ ಶೆಡ್ ನಿರ್ಮಿಸುವ ಸಂಬಂಧ 39 ಎಕರೆಯಷ್ಟು ಅರಣ್ಯ ಭೂಮಿ ಹಸ್ತಾಂತರ ವಿವಾದದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಪಿಡಿಪಿ ಬೆಂಬಲ ಹಿಂದಕ್ಕೆ ಪಡೆದ 9 ದಿನಗಳ ನಂತರ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ವಿಧಾನಸಭೆಯಲ್ಲಿ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದರು.

2008: ಸುಪ್ರಸಿದ್ಧ ಅಮರನಾಥ ಮಂದಿರದ ಆಡಳಿತ ಮಂಡಳಿಗೆ ಯಾತ್ರಿಗಳಿಗೆ ತಾತ್ಕಾಲಿಕ ಶೆಡ್ ನಿರ್ಮಿಸುವ ಸಂಬಂಧ 39 ಎಕರೆಯಷ್ಟು ಅರಣ್ಯ ಭೂಮಿ ಹಸ್ತಾಂತರ ವಿವಾದದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಪಿಡಿಪಿ ಬೆಂಬಲ ಹಿಂದಕ್ಕೆ ಪಡೆದ 9 ದಿನಗಳ ನಂತರ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ವಿಧಾನಸಭೆಯಲ್ಲಿ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದರು. ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

2007: ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಶೃಂಗಾರ್ ವಾಣಿಜ್ಯ ಮಳಿಗೆ ಸಂಕೀರ್ಣದಲ್ಲಿ ಈದಿನ ರಾತ್ರಿ ದಿಢೀರನೆ ಬೆಂಕಿ ಅನಾಹುತ ಸಂಭವಿಸಿತು. ಸಂಕೀರ್ಣದ ಜಂಗಲ್ ಲಾಜಸ್ ಅಂಡ್ ರೆಸಾರ್ಟ್ಸ್ ಕಚೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹತ್ತಿಕೊಂಡಿತು.

2007: ಪಾಕಿಸ್ಥಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ರಾವಲ್ಪಿಂಡಿಯಲ್ಲಿ ಪ್ರಯಾಣಿಸುತ್ತಿದ್ದ ವಿಮಾನದತ್ತ ಉಗ್ರಗಾಮಿಗಳು ರಾಕೆಟ್ ಮತ್ತು ಗುಂಡಿನ ದಾಳಿ ನಡೆಸಿದರು. ಆದರೆ ಮುಷರಫ್ ಪ್ರಾಣಾಪಾಯದಿಂದ ಪಾರಾದರು. ರನ್ವೇಗೆ ಹತ್ತಿರದಲ್ಲೇ ಇದ್ದ ಮನೆಯೊಂದರಿಂದ ಈ ದಾಳಿ ನಡೆಸಲಾಯಿತು.

2007: ಪೊಲೀಸರು ದೂರು ದಾಖಲಿಸಿಕೊಳ್ಳದೇ ಇರುವುದರಿಂದ ರೋಸಿದ ಪೂಜಾ ಚೌಹಾಣ್ ಎಂಬ ಮಹಿಳೆಯೊಬ್ಬರು ಗುಜರಾತಿನ ರಾಜಕೋಟದಲ್ಲಿ ಅರೆ ನಗ್ನಾವಸ್ಥೆ ನಡಿಗೆ ನಡೆಸಿ ಪ್ರತಿಭಟಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ಸೂಚಿಸಿತು. ವರದಕ್ಷಿಣೆ ಹಿಂಸೆ ಪ್ರಕರಣವನ್ನು ದಾಖಲಿಸಲು ಪೊಲೀಸರು ನಿರಾಕರಿಸಿದ್ದನ್ನು ವಿರೋಧಿಸಿ ಪೂಜಾ ಚೌಹಾಣ್ ಅರೆನಗ್ನರಾಗಿ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದರು.

2007: ತುಮಕೂರಿನ `ಅನನ್ಯ ಪ್ರಕಾಶನ' ಸಂಸ್ಥೆಯು ಪ್ರಸಕ್ತ ಸಾಲಿನ `ಕೆ.ಸಾಂಬಶಿವಪ್ಪ' ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿಗೆ ಪತ್ರಕರ್ತ ರಘುನಾಥ ಚ.ಹ ಅವರ `ಹೊರಗೂ ಮಳೆ, ಒಳಗೂ ಮಳೆ' ಕಥಾ ಸಂಕಲವನ್ನು ಆಯ್ಕೆ ಮಾಡಿತು.

2007: ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರು ಸ್ಥಾಪಿಸಿದ್ದ ಪ್ರತಿಭಾ ಮಹಿಳಾ ಬ್ಯಾಂಕ್ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕ್ ಒಕ್ಕೂಟದ ನಿರ್ದೇಶಕ ಕೆ.ಡಿ.ವೋರಾ ಸ್ಪಷ್ಟಪಡಿಸಿದರು. 2001- 2004ರ ಅವಧಿಯಲ್ಲಿ ಸಹಕಾರ ಕ್ಷೇತ್ರದಲ್ಲಿ ಉದ್ಭವಿಸಿದ್ದ ಬಿಕ್ಕಟ್ಟಿನಿಂದಾಗಿ ಸುಮಾರು 150 ಸಹಕಾರ ಬ್ಯಾಂಕುಗಳು ದಿವಾಳಿ ಎದ್ದವು. ಇವುಗಳಲ್ಲಿ ಪ್ರತಿಭಾ ಮಹಿಳಾ ಬ್ಯಾಂಕ್ ಕೂಡ ಒಂದು ಎಂದು ಅವರು ಹೇಳಿದರು.

2007: ಪ್ರತಿ ಚುನಾವಣೆಯ ನಂತರ ಮೀಸಲು ಕ್ಷೇತ್ರಗಳನ್ನು ಬದಲಾವಣೆ ಮಾಡಲು ಕ್ಷೇತ್ರ ಮರುವಿಂಗಡಣೆ ಆಯೋಗಕ್ಕೆ ಆದೇಶ ನೀಡಬೇಕೆಂದು ಪರಿಶಿಷ್ಟ ಪಂಗಡಕ್ಕೆ ಸೇರಿದ ಧಾರವಾಡದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶಾಂತವ್ವ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದರು. ಸ್ವಾತಂತ್ರ್ಯ ಸಿಕ್ಕಿದ ನಂತರ ಕೇವಲ ಎರಡು ಬಾರಿ ಮೊದಲು 1952ರಲ್ಲಿ ನಂತರ 1972ರಲ್ಲಿ ಕ್ಷೇತ್ರ ಮರುವಿಂಗಡಣೆ ನಡೆದಿದೆ. ಮೂರನೆಯ ಆಯೋಗ 30 ವರ್ಷಗಳ ನಂತರ ರಚನೆಯಾಗಿದೆ. ಮೀಸಲು ಕ್ಷೇತ್ರಗಳನ್ನು ಚುನಾವಣೆಯ ನಂತರ ಬದಲಾಯಿಸದೆ ಹೋದರೆ ಈಗಿನ ಮೀಸಲು ಕ್ಷೇತ್ರಗಳು ಮುಂದಿನ 25-30 ವರ್ಷಗಳ ಕಾಲ ಮುಂದುವರಿಯಲಿವೆ. ಇದರಿಂದ ಬೇರೆ ಕ್ಷೇತ್ರಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ರಾಜಕೀಯ ಮೀಸಲು ಸೌಲಭ್ಯದಿಂದ ವಂಚಿತವಾಗಲಿವೆ ಎಂದು ಶಾಂತವ್ವ ಪ್ರತಿಪಾದಿಸಿದರು.

2007: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಳಸಲು ರಷ್ಯಾ ನಿರ್ಮಿತ ಶೌಚಗೃಹವೊಂದನ್ನು ನಾಸಾ ಖರೀದಿಸಿತು. ಅದಕ್ಕಾಗಿ 19 ಮಿಲಿಯನ್ ಯುರೋ ನೀಡಲು ಅದು ಒಪ್ಪಿಕೊಂಡಿತು. ಇದು ಭೂಮಿಯ ಮೇಲಿನ ಪಾಯಿಖಾನೆಗಿಂತ ಅತ್ಯಂತ ದುಬಾರಿ. ಆದರೆ, ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮದೇ ಸ್ವಂತ ಶೌಚಗೃಹ ನಿರ್ಮಿಸಲು ತಗಲುವ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಇದು ಲಭಿಸಿತು ಎಂದು ನಾಸಾ ಹೇಳಿತು. ಅಮೆರಿಕ ಸ್ವಾಮ್ಯದ ಬಾಹ್ಯಾಕಾಶ ನಿಲ್ದಾಣಕ್ಕಾಗಿ 2008ಕ್ಕೆ ರಷ್ಯಾವು ಈ ಶೌಚಗೃಹವನ್ನು ನಿರ್ಮಿಸಿ ಕೊಡುವುದು.

2007: ಕಳೆದ ಫೆಬ್ರುವರಿಯಲ್ಲಿ ಸಂಭವಿಸಿದ ಸಮ್ ಜೌತ ಎಕ್ಸ್ಪ್ರೆಸ್ ರೈಲು ದುರಂತದಲ್ಲಿ ಸಾವನ್ನಪ್ಪಿದ 34 ಮಂದಿ ಪಾಕಿಸ್ಥಾನಿ ನಾಗರಿಕರ ಸಂಬಂಧಿಕರಿಗೆ ಹತ್ತು ಲಕ್ಷ ಪಾಕಿಸ್ಥಾನಿ ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ಭಾರತವು ಇಸ್ಲಾಮಾಬಾದಿನಲ್ಲಿ ನಡೆದ ಸಮಾರಂಭದಲ್ಲಿ ಈದಿನ ನೀಡಿತು. ಸಮ್ ಜೌತ ಎಕ್ಸ್ಪ್ರೆಸ್ ಬಾಂಬ್ ಸ್ಫೋಟದಲ್ಲಿ ಭಾರತ ಮತ್ತು ಪಾಕಿಸ್ಥಾನ ಸೇರಿದಂತೆ ಒಟ್ಟು 69 ಮಂದಿ ಮೃತರಾಗಿದ್ದರು.

2007: ಹರಿಹರ ತಾಲ್ಲೂಕಿನ ರೈತ ಸಂಘದ ಮುಖಂಡ ಗೋಪಾಲರಾವ್ ಅವರ ತೆಂಗಿನ ತೋಟದಲ್ಲಿ ಈದಿನ ಸಾರ್ವಜನಿಕರಿಗೆ ನೀರಾ ನೀಡಿ 'ಸಾರಾಯಿ ಬದಲು ನೀರಾ ಕುಡಿಯಿರಿ, ಆರೋಗ್ಯ ರಕ್ಷಿಸಿಕೊಳ್ಳಿ' ಪ್ರಚಾರ ಆಂದೋಲನವನ್ನು ಹರಿಹರ ತಾಲ್ಲೂಕು ರೈತಸಂಘ ಆರಂಭಿಸಿತು. ನೀರಾ ರಾಸಾಯನಿಕ ಮುಕ್ತ, ನಿರಪಾಯಕಾರಿ, ಜೊತೆಗೆ ನುಸಿ ರೋಗದಿಂದ ತೆಂಗಿನ ಮರಗಳನ್ನೂ ಪಾರುಮಾಡುತ್ತದೆ ಎಂಬುದು ಅವರ ವಿವರಣೆ.

2007: ಮುಂಬೈ ಷೇರು ಪೇಟೆಯಲ್ಲಿ ಇದೇ ಮೊದಲ ಬಾರಿಗೆ ಷೇರು ಪೇಟೆ ಸಂವೇದಿ ಸೂಚ್ಯಂಕ 15,000ರ ಗಡಿ ಸ್ಪರ್ಶಿಸಿತು.

2006: ದಕ್ಷಿಣ ಕನ್ನಡದ ಯುವ ನಿರ್ದೇಶಕ ರಾಮಚಂದ್ರ ಪಿ.ಎನ್. ಅವರ ಚೊಚ್ಚಲ ತುಳು ಚಿತ್ರ `ಸುದ್ದ' (ತಿಥಿ) ಓಷಿಯಾನ್ ಸಿನೆಫ್ಯಾನ್ ಆಯೋಜಿಸಿದ ಎಂಟನೇ ಏಷ್ಯಾ ಚಲನಚಿತ್ರೋತ್ಸವದಲ್ಲಿ ಜಾಗತಿಕ ಪ್ರೀಮಿಯರ್ನ ಗೌರವ ಪಡೆಯಿತು. ಇದೇ ವಿಭಾಗದಲ್ಲಿ ಗಿರೀಶ ಕಾಸರವಳ್ಳಿ ಅವರ `ನಾಯಿ ನೆರಳು' ಸಂತೋಷ ಶಿವನ್ ಅವರ ಮಲಯಾಳಿ ಚಿತ್ರ `ಆನಂದಭದ್ರಂ', ಸುಮಿತ್ರಾ ಭಾವೆ ಮತ್ತು ಆನಂದ ಸುಕತಂಕರ್ ಅವರ ಮರಾಠಿ ಚಿತ್ರ `ನಿಶಾಲ್' ಕೂಡಾ ಸ್ಪರ್ಧೆಗೆ ಆಯ್ಕೆಯಾದವು.

2006: ಬೆಂಗಳೂರು - ಮೈಸೂರು ಕಾರಿಡಾರ್ ರಸ್ತೆಗೆ ಮೈಸೂರು ಕಡೆಯಿಂದ ಕಾಮಗಾರಿ ಆರಂಭಿಸಲು ನಂದಿ ಇನ್ಫ್ರಾಸ್ಟ್ರಕ್ಚರ್ ಎಂಟರ್ಪ್ರೈಸಸ್ (ನೈಸ್) ನಿರ್ದೇಶಕ ಅಶೋಕ ಖೇಣಿ ಅವರು ನಡೆಸಿದ ಭಗೀರಥ ಯತ್ನ ಕೈಗೂಡಲಿಲ್ಲ. ಮುಡಾ ಅಧಿಕಾರಿಗಳು ಪೊಲೀಸರ ಸರ್ಪಗಾವಲು ಹಾಕಿ ಖೇಣಿ ಅವರ ಎಲ್ಲಾ ಯತ್ನಗಳನ್ನು ವಿಫಲಗೊಳಿಸಿದರು.

2006: ಮಾಜಿ ಸಚಿವ, ಚಿತ್ರ ನಿರ್ಮಾಪಕ ಎಸ್. ರಮೇಶ್ (53) ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

1981: `ಮೃತ್ಯುಪಾನೀಯ' ಕಳ್ಳಬಟ್ಟಿ ಸಾರಾಯಿಗೆ ಬೆಂಗಳೂರು ನಗರದಲ್ಲಿ 132 ಮಂದಿ ಆಹುತಿ. ವಿವಿಧ ಆಸ್ಪತ್ರೆಗಳಲ್ಲಿಇತರ 200 ಮಂದಿಯ ಜೀವನ್ಮರಣ ಹೋರಾಟ. ರಾಜ್ಯ ಇತಿಹಾಸದಲ್ಲೇ ಸಂಭವಿಸಿದ ಈ ಭೀಕರ ದುರಂತದಲ್ಲಿ ಸತ್ತವರಲ್ಲಿ 40 ಮಂದಿ ಮಹಿಳೆಯರು.

1970: ಪೆಂಗ್ವಿನ್ ಬುಕ್ನ ಸ್ಥಾಪಕ ಸರ್. ಅಲನ್ ಲೇನ್ ನಿಧನರಾದರು. 1902ರ ಸೆಪ್ಟೆಂಬರ್ 21ರಂದು ಬ್ರಿಸ್ಟಲ್ನಲಿ ್ಲಜನಿಸಿದ ಇವರು ಪುಸ್ತಕ ಪ್ರಕಾಶನದಲ್ಲಿ ಹಿರಿಮೆ ಸಾಧಿಸಿದವರು.

1928: ಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ವೈದ್ಯ ಸಾಹಿತಿ ಅನ್ನಪೂರ್ಣಮ್ಮ ಅವರು ವೇದ ಪಾರಂಗತ ಚನ್ನಕೇಶವ ಶಾಸ್ತ್ರಿಗಳು-ಮೀನಾಕ್ಷಮ್ಮ ದಂಪತಿಯ ಪುತ್ರಿಯಾಗಿ ಸಂಸ್ಕೃತ ಗ್ರಾಮ ಮತ್ತೂರಿನಲ್ಲಿ ಜನಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Tuesday, 7 July, 2009

ಇಂದಿನ ಇತಿಹಾಸ History Today ಜುಲೈ 06

ಇಂದಿನ ಇತಿಹಾಸ

ಜುಲೈ 06
ಭಾರತ ಮತ್ತು ಚೀನಾದ ಐತಿಹಾಸಿಕ ಒಪ್ಪಂದದ ಮೂಲಕ `ರೇಷ್ಮೆ ಮಾರ್ಗ' ಎಂದೇ ಹೆಸರುವಾಸಿಯಾಗಿದ್ದ ನಾಥು-ಲಾ ಮಾರ್ಗದಲ್ಲಿ ವ್ಯಾಪಾರ ಚಟುವಟಿಕೆಗಳನ್ನು 44 ವರ್ಷಗಳ ಬಳಿಕ ಪುನರಾರಂಭಿಸಲಾಯಿತು.

2008: ಇಸ್ಲಾಮಾಬಾದಿನ ವಿವಾದಿತ ಲಾಲ್ ಮಸೀದಿ ಬಳಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 19 ಜನರು ಮೃತರಾದರು. ಪಾಕಿಸ್ಥಾನ ಸೇನೆ ಕಳೆದ ವರ್ಷ ಲಾಲ್ ಮಸೀದಿ ಮೇಲೆ ಆಕ್ರಮಣ ಮಾಡಿದ್ದನ್ನು ಖಂಡಿಸಿ ನಿಷೇಧಿತ ಉಗ್ರಗಾಮಿ ಸಂಘಟನೆಗಳು ಜನರಲ್ ಪರ್ವೇಜ್ ಮುಷರಫ್ ಅವರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕೆಂದು ಪ್ರತಿಭಟನೆ ನಡೆಸಿದ ಕೆಲವೇ ಕ್ಷಣಗಳಲ್ಲಿ ಈ ಸ್ಫೋಟ ಸಂಭವಿಸಿತು.

2006: ಕನ್ನಡದ ಖ್ಯಾತ ಚಲನಚಿತ್ರ ನಟಿಯರಲ್ಲಿ ಒಬ್ಬರಾದ ಪ್ರೇಮಾ ಮತ್ತು ಎಂಜಿನಿಯರ್ ಜೀವನ್ ಅವರ ಮದುವೆ ಬೆಂಗಳೂರಿನ ವಸಂತನಗರದ ಕೊಡವ ಸಮಾಜ ಭವನದಲ್ಲಿ ನಡೆಯಿತು.

2006: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರು ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿ (73) ಬೆಂಗಳೂರಿನ ಶಾಖಾಮಠದಲ್ಲಿ ಹೃದಯಾಘಾತದಿಂದ ನಿಧನರಾದರು.

2006: ಭಾರತ ಮತ್ತು ಚೀನಾದ ಐತಿಹಾಸಿಕ ಒಪ್ಪಂದದ ಮೂಲಕ `ರೇಷ್ಮೆ ಮಾರ್ಗ' ಎಂದೇ ಹೆಸರುವಾಸಿಯಾಗಿದ್ದ ನಾಥು-ಲಾ ಮಾರ್ಗದಲ್ಲಿ ವ್ಯಾಪಾರ ಚಟುವಟಿಕೆಗಳನ್ನು 44 ವರ್ಷಗಳ ಬಳಿಕ ಪುನರಾರಂಭಿಸಲಾಯಿತು.

2006: ಬಿಎಂಐಸಿ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರಕಟಿಸಿದರು.

1932: ಪದ್ಮಾಮೂರ್ತಿ ಜನನ.

1918: ಖ್ಯಾತ ಸಾಹಿತಿ ದೇ. ಜವರೇಗೌಡ ಅವರು ದೇವೇಗೌಡ-ಚೆನ್ನಮ್ಮ ದಂಪತಿಯ ಪುತ್ರನಾಗಿ ಚೆನ್ನಪಟ್ಟಣ ತಾಲ್ಲೂಕಿನ ಚೆಕ್ಕೆರೆ ಗ್ರಾಮದಲ್ಲಿ ಜನಿಸಿದರು. ಜನಪದ, ಭಾಷಾಂತರ, ಭಾಷಾ ವಿಜ್ಞಾನ, ಹರಿದಾಸ ಸಾಹಿತ್ಯ, ಶಾಸನ ಸಂಪಾದನೆ, ವಿಶ್ವಕೋಶ ಇತ್ಯಾದಿ ಎಲ್ಲ ಅಧ್ಯಯನ ಕ್ಷೇತ್ರಗಳನ್ನು ಒಂದೆಡೆಗೆ ತಂದ ಕೀರ್ತಿ ಜವರೇಗೌಡರದ್ದು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜುಲೈ 05

ಇಂದಿನ ಇತಿಹಾಸ

ಜುಲೈ 05
ವರದಕ್ಷಿಣೆ ಹಿಂಸೆಯ ದೂರನ್ನು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದನ್ನು ಪ್ರತಿಭಟಿಸಿ ರಾಜಕೋಟ್ನ ಪೂಜಾ ಚೌಹಾನ್ ನವದೆಹಲಿಯಲ್ಲಿ ಅರೆಬೆತ್ತಲೆ ನಡಿಗೆ ನಡೆಸಿದರು. ಪೂಜಾ ನೆರವಿಗೆ ಬಂದ ರಾಷ್ಟ್ರೀಯ ಮಹಿಳಾ ಆಯೋಗವು ಆಕೆ ವಿರುದ್ಧ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಎಚ್ಚರಿಕೆ ನೀಡಿತು.

2008: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಾ. ಕೆ.ಜಿ. ಬಾಲಕೃಷ್ಣನ್ ಅವರು ಗುಲ್ಬರ್ಗದ ಸಂಚಾರಿ ಹೈಕೋರ್ಟ್ ಪೀಠವನ್ನು ಉದ್ಘಾಟಿಸಿ ಈ ಭಾಗದ ಜನರ ಐದು ದಶಕಗಳ ಕನಸನ್ನು ನನಸು ಮಾಡಿದರು. ರಾಜ್ಯ ಹೈಕೋರ್ಟ್ ಕಟ್ಟಡದ ಮಾದರಿಯಲ್ಲೇ ನಿರ್ಮಾಣಗೊಂಡಿರುವ ಸಂಚಾರಿ ಹೈಕೋರ್ಟ್ ಪೀಠ ಉದ್ಘಾಟನೆಯನ್ನು ಗುಲ್ಬರ್ಗ, ಬೀದರ್, ವಿಜಾಪುರ ಮತ್ತು ರಾಯಚೂರು ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಜನರು ವೀಕ್ಷಿಸಿದರು.

2007: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಕೆರೆ ಗ್ರಾಮ ಪಂಚಾಯಿತಿಯ ಹುಲುಗಾರುಬೈಲಿನ ಕೃಷಿಕ ಕೇಶವ ಹೆಗ್ಡೆ ಅವರ ಮನೆಯಲ್ಲಿ ಈದಿನ ಪ್ರತ್ಯಕ್ಷರಾದ ಶಸ್ತ್ರಸಜ್ಜಿತ ನಕ್ಸಲೀಯರ ತಂಡವು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ದರೋಡೆ ನಡೆಸಿತು. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿನ ಹೆಗ್ಡೆ ಅವರ ಒಂಟಿ ಮನೆ ಬಳಿ ರಾತ್ರಿ 9.30ರ ವೇಳೆಗೆ ದಿಢೀರನೆ ಪ್ರತ್ಯಕ್ಷವಾದ ನಕ್ಸಲೀಯರ ಗುಂಪು ಮನೆಯಲ್ಲಿದ್ದ ಒಂದು ತೋಟಾ ಕೋವಿ, ಬಂದೂಕಿಗೆ ಬಳಸುವ ಎರಡು ತೋಟಾ, 55 ಸಾವಿರ ನಗದು ಹಣವನ್ನು ಅಪಹರಿಸಿತು.

2007: ವರದಕ್ಷಿಣೆ ಹಿಂಸೆಯ ದೂರನ್ನು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದನ್ನು ಪ್ರತಿಭಟಿಸಿ ರಾಜಕೋಟ್ನ ಪೂಜಾ ಚೌಹಾನ್ ನವದೆಹಲಿಯಲ್ಲಿ ಅರೆಬೆತ್ತಲೆ ನಡಿಗೆ ನಡೆಸಿದರು. ಪೂಜಾ ನೆರವಿಗೆ ಬಂದ ರಾಷ್ಟ್ರೀಯ ಮಹಿಳಾ ಆಯೋಗವು ಆಕೆ ವಿರುದ್ಧ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಎಚ್ಚರಿಕೆ ನೀಡಿತು.

2007: ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 10ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿತು. ಹಾಲಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಅಧಿಕಾರಾವಧಿ ಆ.18ಕ್ಕೆ ಮುಕ್ತಾಯಗೊಳ್ಳುವುದು.

2007: ಅಮೆರಿಕದ ಪರಮಾಣು ವಿದ್ಯುತ್ ಚಾಲಿತ ನಿಮಿಜ್ ಯುದ್ಧ ವಿಮಾನಗಳನ್ನು ಹೊತ್ತ ನೌಕೆ ಈದಿನ ಮುಂಜಾನೆ ಚೆನ್ನೈ ಬಂದರಿನಿಂದ ನಿರ್ಗಮಿಸಿತು. ಜುಲೈ 2ರಂದು `ನಿಮಿಜ್' ಇಲ್ಲಿಗೆ ಆಗಮಿಸಿದಾಗ ಪರಿಸರ ಪ್ರೇಮಿಗಳು ಅದನ್ನು ವಿರೋಧಿಸಿದ್ದರು. ಅದರಲ್ಲಿರುವ ಪರಮಾಣು ವಿಕಿರಣಗಳು ಪರಿಸರಕ್ಕೆ ಹಾನಿಯುಂಟು ಮಾಡಬಹುದು. ಆದ್ದರಿಂದ ನೌಕೆಗೆ ಲಂಗರು ಹಾಕಲು ಅವಕಾಶ ನೀಡಬಾರದೆಂದು ಪರಸರ ಪ್ರೇಮಿಗಳು ವಾದಿಸಿದ್ದರು. ಇಷ್ಟೆಲ್ಲ ವಿರೋಧದ ಮಧ್ಯೆಯೂ ನೌಕೆಯ ಸಿಬ್ಬಂದಿ ನಾಲ್ಕು ದಿನ ಚೆನ್ನೈಯಲ್ಲಿ ಶಾಪಿಂಗ್, ವಿಹಾರ ಮುಗಿಸಿಕೊಂಡು ಕೊಲ್ಲಿ ದೇಶಗಳತ್ತ ಸಂಚಾರ ಮುಂದುವರೆಸಿದರು.

2007: ಮೆಕ್ಸಿಕೊದ ಪುಯೆಬ್ಲಾ ಪ್ರಾಂತ್ಯದ ಪರ್ವತ ಬಳಿ ಈದಿನ ರಾತ್ರಿ ಭೂ ಕುಸಿತ ಉಂಟಾಗಿ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸೊಂದು ಭೂಮಿಯಲ್ಲಿ ಹುದುಗಿ ಸುಮಾರು 60 ಪ್ರಯಾಣಿಕರು ಸಾವನ್ನಪ್ಪಿದರು.

2007: ಚೀನಾದ ಲಿಯೊನಿಂಗ್ ಪ್ರಾಂತ್ಯದ ಬೆಂಕ್ಸಿ ಪಟ್ಟಣದ ರಾತ್ರಿ ಕ್ಲಬ್ ಒಂದರಲ್ಲಿ ಸ್ಪೋಟ ಸಂಭವಿಸಿ 25 ಜನರು ಸಾವನ್ನಪ್ಪಿದರು. 33 ಮಂದಿ ಗಾಯಗೊಂಡರು.

2007: ರಷ್ಯದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರ ವಿಶೇಷ ಆಸಕ್ತಿಯ ಪರಿಣಾಮವಾಗಿ 2014ರ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯವು ಇದೇ ಮೊದಲ ಬಾರಿ ರಷ್ಯಾದ ಪಾಲಾಯಿತು. ಚಳಿಗಾಲದ ಒಲಿಂಪಿಕ್ ಸೋಚಿಯ ಬ್ಲಾಕ್ ಸೀ ರೆಸಾರ್ಟಿನಲ್ಲಿ ನಡೆಯುವುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಜಾಕ್ ರಾಂಗ್ ಗ್ವಾಟೆಮಾಲಾ ಸಿಟಿಯಲ್ಲಿ ಪ್ರಕಟಿಸಿದರು.

2006: ವಿವಾದಿತ ಎನ್ರಾನ್ ವಿದ್ಯುತ್ ಸಂಸ್ಥೆಯ ಸ್ಥಾಪಕ ಕೆನಿತ್ (64) ಹೃದಯಾಘಾತದಿಂದ ಹ್ಯೂಸ್ಟನ್ನಿನಲ್ಲಿ ನಿಧನರಾದರು. ಕೋಟ್ಯಂತರ ರೂಪಾಯಿಗಳ ಮೊತ್ತದ ಎನ್ರಾನ್ ಅವ್ಯವಹಾರ ಹಗರಣದಲ್ಲಿ ವಿಚಾರಣೆ ಎದುರಿಸಿದ್ದ ಎನ್ರಾನ್ ಅವರ ವಿರುದ್ಧ ಮಾಡಲಾಗಿದ್ದ ಆರೋಪಗಳು ಸಾಬೀತಾಗಿದ್ದವು. ಪರಿಣಾಮವಾಗಿ ಅವರು 45 ವರ್ಷಗಳ ಕಠಿಣ ಸೆರೆವಾಸದ ಶಿಕ್ಷೆಗೆ ಗುರಿಯಾಗಬೇಕಿತ್ತು.

2006: ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರದ ನಿವೃತ್ತ ಉಪ ಮಹಾನಿರ್ದೇಶಕ ಆರ್. ಸಿ. ಭೂಸನೂರಮಠ (84) ಬೆಂಗಳೂರಿನಲ್ಲಿ ನಿಧನರಾದರು.

2006: ಮುಂಬೈಯಲ್ಲಿ ಮಹಾಮಳೆಯ ಆರ್ಭಟ ಮುಂದುವರೆದು, ಮಹಾರಾಷ್ಟ್ರದ್ಲಲಿ ಮತ್ತೆ 24 ಮಂದಿ ಅಸು ನೀಗಿದರು.

2006: ಅಮೆರಿಕದ ಎಚ್ಚರಿಕೆಯ ಹೊರತಾಗಿಯೂ ಉತ್ತರ ಕೊರಿಯಾ 6 ಕ್ಷಿಪಣಿಗಳ ಪರೀಕ್ಷೆ ನಡೆಸಿತು.

1940: ಜ್ಞಾನಾನಂದ ಜನನ.

1939: ಎಂ. ರಾಮಚಂದ್ರ ಜನನ.

1938: ಶೇಖರಪ್ಪ ಹುಲಗೇರಿ ಜನನ.

1930: ಪಳಕಳ ಸೀತಾರಾಮಭಟ್ಟ ಜನನ.

1916: ಸಾಹಿತಿ ಅರ್ಚಿಕ ವೆಂಕಟೇಶ್ ಅವರು ಗೋಪಾಲಕೃಷ್ಣಾಚಾರ್ಯ- ರಾಧಾಬಾಯಿ ದಂಪತಿಯ ಪುತ್ರನಾಗಿ ಧಾರವಾಡದಲ್ಲಿ ಈದಿನ ಜನಿಸಿದರು. ಪೂರ್ವೀಕರು ಅರ್ಚಕ ವೃತ್ತಿಯನ್ನು ನಡೆಸಿಕೊಂಡು ಬಂದದ್ದರಿಂದ ಅವರ ಹೆಸರಿಗೆ `ಅರ್ಚಿಕ' ಅನ್ವರ್ಥನಾಮವಾಗಿ ಸೇರಿಕೊಂಡಿತು. ಪತ್ರಕರ್ತ, ಸಾಹಿತಿಯಾಗಿ ಹಲವಾರು ಕೃತಿಗಳನ್ನು ರಚಿಸಿದ ಅವರು 1997ರ ಡಿಸೆಂಬರ್ 20ರಂದು ತಿರುಚೆಂಡೂರಿನಲ್ಲಿ ಅಕಾಲ ಮೃತ್ಯುವಿಗೀಡಾದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Monday, 6 July, 2009

ಇಂದಿನ ಇತಿಹಾಸ History Today ಜುಲೈ 04

ಇಂದಿನ ಇತಿಹಾಸ

ಜುಲೈ 4

ಪ್ಯಾಲಸ್ಟೈನಿನ ಇಸ್ಲಾಮಿಕ್ ಸೇನೆ ಮತ್ತು ಹಮಾಸ್ ಆಡಳಿತದ ನಡುವೆ ನಡೆದ ಮಾತುಕತೆಯ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಮಾರ್ಚ್ ತಿಂಗಳಲ್ಲಿ ಅಪಹರಣಗೊಂಡಿದ್ದ ಬಿಬಿಸಿ ವರದಿಗಾರ ಅಲಾನ್ ಜಾನ್ ಸ್ಟನ್ ಅವರನ್ನು ಗಾಜಾದಿಂದ ಬಿಡುಗಡೆ ಮಾಡಲಾಯಿತು. ಅಲಾನ್ ಅವರನ್ನು ಇಸ್ಲಾಮಿಕ್ ಸೇನೆಯು ಈದಿನ ಬೆಳಿಗ್ಗೆ ಹಮಾಸ್ ಆಡಳಿತಕ್ಕೆ ಒಪ್ಪಿಸಿತು.

2008: ಧಾರವಾಡದ `ವಾಲ್ಮಿ' ಪ್ರಾಂಗಣದಲ್ಲಿ ಹೈಕೋರ್ಟ್ ಸಂಚಾರಿ ಪೀಠವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ. ಕೆ.ಜಿ.ಬಾಲಕೃಷ್ಣನ್ ದೀಪ ಬೆಳಗಿಸಿ ಉದ್ಘಾಟಿಸುವುದರೊಂದಿಗೆ ಈ ಭಾಗದ ಜನರ ದಶಕಗಳ ಹೋರಾಟ ಸಾರ್ಥಕವಾಯಿತು. ಕಿಕ್ಕಿರಿದು ನೆರೆದಿದ್ದ ಜನಸಮೂಹ, ರಾಜಕಾರಣಿಗಳ ದಂಡು, ನ್ಯಾಯಮೂರ್ತಿಗಳು, ನ್ಯಾಯವಾದಿಗಳು ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು. ಹುಬ್ಬಳ್ಳಿ-ಧಾರವಾಡವಲ್ಲದೆ ಉತ್ತರ ಕರ್ನಾಟಕದ ಸಾವಿರಾರು ಜನರು, ರೈತರು ಸಮಾರಂಭದಲ್ಲಿ ಪಾಲ್ಗೊಂಡರು.

2007: ಮಹಿಳೆಯೊಬ್ಬರಿಗೆ ಸಿಜೇರಿಯನ್ ಶಸ್ತ್ರಚಿಕಿತ್ಸೆ ನಡೆಸಿ ವಿವಾದ ಸೃಷ್ಟಿಸಿದ್ದ ಬಾಲಕ ದಿಲೀಪನ್ ರಾಜ್ (16) ತಿರುಚಿರಾಪಳ್ಳಿಯ ಬಾಲ ನ್ಯಾಯ ಮಂಡಳಿಯ ಎದುರು ಶರಣಾಗತನಾದ. ಹತ್ತನೇ ತರಗತಿ ವಿದ್ಯಾರ್ಥಿಯಾದ ಈತ ದಾಖಲೆಗಾಗಿ ತನ್ನ ವೈದ್ಯ ತಂದೆ ತಾಯಿಯ ನೆರವಿನಿಂದ ಗರ್ಭಿಣಿ ಮಹಿಳೆಗೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ನಡೆಸಿದ್ದ. ಆದರೆ ವೈದ್ಯಕೀಯ ಸಂಘ ಇದನ್ನು ಆಕ್ಷೇಪಿಸಿ ಪೊಲೀಸರಿಗೆ ದೂರು ನೀಡಿದ್ದರಿಂದ ದಿಲೀಪನ್ ನಾಪತ್ತೆಯಾಗಿದ್ದ. ಆತನ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ಹೈಕೋರ್ಟ್ ತಿರಸ್ಕರಿಸಿತ್ತು. ಈದಿನ ಮಧ್ಯಾಹ್ನ ಆತ ತನ್ನ ವಕೀಲರೊಂದಿಗೆ ಬಾಲ ನ್ಯಾಯ ಮಂಡಳಿ ಎದುರು ಹಾಜರಾದ.

2007: ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಮ್ ಸಮುದಾಯಕ್ಕೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ 4 ರಷ್ಟು ಮೀಸಲು ನೀಡಲು ಹೊಸದಾಗಿ ಸುಗ್ರೀವಾಜ್ಞೆ ಹೊರಡಿಸಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿತು. ರಾಜ್ಯ ಹಿಂದುಳಿದ ಆಯೋಗ ಮುಸ್ಲಿಂ ಸಮುದಾಯದ 15 ಪಂಗಡಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು ಆ ಪಂಗಡದ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಒದಗಿಸುವಂತೆ ಶಿಫಾರಸು ಮಾಡಿತ್ತು. ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಈದಿನ ಇದನ್ನು ಅಂಗೀಕರಿಸಿತು. ಸರ್ಕಾರ ಈ ಹಿಂದೆ ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ ನೀಡಿದ್ದನ್ನು ಹೈಕೋರ್ಟ್ ರದ್ದು ಮಾಡಿತ್ತು.

2007: ಪ್ಯಾಲಸ್ಟೈನಿನ ಇಸ್ಲಾಮಿಕ್ ಸೇನೆ ಮತ್ತು ಹಮಾಸ್ ಆಡಳಿತದ ನಡುವೆ ನಡೆದ ಮಾತುಕತೆಯ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಮಾರ್ಚ್ ತಿಂಗಳಲ್ಲಿ ಅಪಹರಣಗೊಂಡಿದ್ದ ಬಿಬಿಸಿ ವರದಿಗಾರ ಅಲಾನ್ ಜಾನ್ ಸ್ಟನ್ ಅವರನ್ನು ಗಾಜಾದಿಂದ ಬಿಡುಗಡೆ ಮಾಡಲಾಯಿತು. ಅಲಾನ್ ಅವರನ್ನು ಇಸ್ಲಾಮಿಕ್ ಸೇನೆಯು ಈದಿನ ಬೆಳಿಗ್ಗೆ ಹಮಾಸ್ ಆಡಳಿತಕ್ಕೆ ಒಪ್ಪಿಸಿತು. ನಂತರ ಹಮಾಸ್ ಆಡಳಿತ ಅವರನ್ನು ಬಂಧಮುಕ್ತರನ್ನಾಗಿ ಮಾಡಿತು. ಅಪಹರಣಕ್ಕೆ ಸಂಬಂಧಿಸಿ ಹಮಾಸ್ ಆಡಳಿತ ತನಗೆ ತೊಂದರೆ ನೀಡಿದರೆ ಜಾನ್ ಸ್ಟನ್ ಅವರನ್ನು ಹತ್ಯೆ ಮಾಡುವುದಾಗಿ ಇಸ್ಲಾಮಿಕ್ ಸೇನೆ ಬೆದರಿಕೆ ಹಾಕಿತ್ತು.

2007: ಬಾಂಗ್ಲಾದೇಶದ ಮಾಜಿ ನಾಗರಿಕ ವಿಮಾನಯಾನ ಸಚಿವ ಮಹಮ್ಮದ್ ನಾಸಿರುದ್ದೀನ್ ಅವರಿಗೆ, ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ಸಂಗ್ರಹಿಸಿದ ಆರೋಪದ ಹಿನ್ನೆಲೆಯಲ್ಲಿ ಢಾಕಾದ ಭ್ರಷ್ಟಾಚಾರ ವಿರೋಧಿ ವಿಶೇಷ ನ್ಯಾಯಾಲಯವು 13 ವರ್ಷ ಸಜೆ ವಿಧಿಸಿತು. ನ್ಯಾಯಾಧೀಶ ಅಮರ್ ಕುಮಾರ್ ನಾಥ್ ಈ ತೀರ್ಪು ನೀಡಿದರು. ಮಾಜಿ ಸಚಿವ ಅಮಾನುಲ್ಲಾ ಅಮಾನ್ ಅವರಿಗೆ ಸಜೆ ವಿಧಿಸಿದ ನಂತರ ಅಕ್ರಮ ಸಂಪತ್ತು ಗಳಿಕೆಯ ಆರೋಪದ ಹಿನ್ನೆಲೆಯಲ್ಲಿ ಶಿಕ್ಷೆಗೆ ಒಳಗಾದ ಮಾಜಿ ಸಚಿವರಲ್ಲಿ ನಾಸಿರುದ್ದೀನ್ ಎರಡನೆಯವರು. ಐದು ಲಕ್ಷ ಟಾಕಾ (ಬಾಂಗ್ಲಾ ನಾಣ್ಯ) ದಂಡ ವಿದಿಸಿದ್ದಲ್ಲದೆ, ಅಕ್ರಮ ಹಣ ಗಳಿಕೆಗೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಅವರ ಮಗ ಮಹಮ್ಮದ್ ಹಿದಾಯತ್ ಉಲ್ಲಾನಿಗೂ ಮೂರು ವರ್ಷ ಸಜೆ ಹಾಗೂ ಒಂದು ಲಕ್ಷ ಟಾಕಾ ದಂಡವನ್ನೂ ನ್ಯಾಯಾಲಯ ವಿಧಿಸಿತು.

2007: ಇಸ್ಲಾಮಾಬಾದಿನ ಲಾಲ್ ಮಸೀದಿಯಲ್ಲಿ ಅಡಗಿದ ತೀವ್ರಗಾಮಿ ವಿದ್ಯಾರ್ಥಿಗಳು ಹಾಗೂ ಪಾಕಿಸ್ಥಾನದ ಭದ್ರತಾ ಪಡೆಗಳ ನಡುವೆ ನಡೆದ ಎರಡು ದಿನಗಳ ಗುಂಡಿನ ಚಕಮಕಿಯಲ್ಲಿ ವಿದ್ಯಾರ್ಥಿಗಳು ಮತ್ತು ಸೈನಿಕರೂ ಸೇರಿದಂತೆ ಬಲಿಯಾದವರ ಸಂಖ್ಯೆ 21ಕ್ಕೆ ಏರಿತು. ಸರ್ಕಾರದ ಆದೇಶದಂತೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶರಣಾಗತರಾದರು.

2007: ಪರಿಶಿಷ್ಟ ಪಂಗಡಗಳಿಗೆ ಅನುಕೂಲವಾಗುವ ಕರ್ನಾಟಕದ ಮಹತ್ವಾಕಾಂಕ್ಷಿ `ಸುವರ್ಣ ಸಂಕಲ್ಪ' ಯೋಜನೆಗೆ ತುಮಕೂರು ಜಿಲ್ಲೆಯ ಬೆಳ್ಳಾವೆ ವಿಧಾನಸಭಾ ಕ್ಷೇತ್ರದ ಬುಳ್ಳಸಂದ್ರ ಗ್ರಾಮದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಚಾಲನೆ ನೀಡಿದರು. ತಮ್ಮದೇ ಆದ ಜಮೀನು ಹೊಂದಿರುವ ಪರಿಶಿಷ್ಟ ವರ್ಗದ ಕುಟುಂಬಗಳಿಗೆ ವಿಶೇಷ ಕೇಂದ್ರೀಯ ಸಹಾಯಧನದಡಿ ತುಮಕೂರು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮುಂಬರುವ 5- 6 ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ಯೋಜನೆ ಅನುಷ್ಠಾನಕ್ಕೆ ಬರುವುದು. ಬೈಫ್ ಸಂಸ್ಥೆಯು ಯೋಜನೆಯ ಅನುಷ್ಠಾನಕ್ಕೆ ನೋಡಲ್ ಏಜೆನ್ಸಿ.

2006: ಗಿನ್ನೆಸ್ ದಾಖಲೆ ಪುಸ್ತಕದ ವೆಬ್ಸೈಟಿನಲ್ಲಿ ಮ್ಯಾರಥಾನ್ ಉಪನ್ಯಾಸದ `ಗಿನ್ನೆಸ್ ದಾಖಲೆ'ಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸಕ ಅಣ್ಣಯ್ಯ ರಮೇಶ್ ಅವರ ಹೆಸರು ದಾಖಲಾಯಿತು. 98 ಗಂಟೆ 30 ನಿಮಿಷಗಳ ಕಾಲ ನಿರಂತರ ಉಪನ್ಯಾಸ ನೀಡಿ `ಗಿನ್ನೆಸ್ ದಾಖಲೆ' ಪುಸ್ತಕದಲ್ಲಿ ಅವರು ಸ್ಥಾನ ಗಿಟ್ಟಿಸಿದರು. ಮಾರ್ಚ್ 22ರಿಂದ 26ರವರೆಗೆ 98 ಗಂಟೆ, 32 ನಿಮಿಷ ಉಪನ್ಯಾಸ ನೀಡಿ ಗಿನ್ನೆಸ್ ಪುಸ್ತಕದ ದಾಖಲೆಗಾಗಿ ದಾಖಲೆ ಪತ್ರಗಳನ್ನು ಕಳುಹಿಸಿದ್ದರು. ಈ ಹಿಂದೆ ಆಂಧ್ರ ಪ್ರದೇಶದ ಶಿವಶಂಕರ್ ಹೆಸರಿನಲ್ಲಿ ಈ ದಾಖಲೆ (72 ಗಂಟೆ 9 ನಿಮಿಷ) ಇತ್ತು.

2006: ಪೀಠಾಧಿಪತಿ ಶ್ರೀ ಸುಶಮೀಂದ್ರ ತೀರ್ಥರು ದಿಢೀರ್ ಅಸ್ವಸ್ಥರಾದ ಹಿನ್ನೆಲೆಯ್ಲಲಿ ಸುಯತೀಂದ್ರ ತೀರ್ಥರು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ 39ನೇ ಪೀಠಾಧಿಕಾರಿಯಾಗಿ ಪದಗ್ರಹಣ ಮಾಡಿದರು.

2006: ಸತತ ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಮುಂಬೈ ತತ್ತರಿಸಿತು. ಮತ್ತೆ 7 ಮಂದಿ ಅಸು ನೀಗಿದರು.

1902: ಸ್ವಾಮಿ ವಿವೇಕಾನಂದ ಅವರು ಈ ದಿನ ನಿಧನರಾದರು.

1952: ಸುಶೀಲಾದೇವಿ ಆರ್. ರಾವ್ ಜನನ

1936: ಎಂ.ಸಿ. ಅಂಟಿನ ಜನನ.

1930: ಸರೋಜಿನಿ ಶಿಂತ್ರಿ ಜನನ.

1927: ಗೀತಾ ಕುಲಕರ್ಣಿ ಜನನ.

1904: ಹಳ್ಳಿಯ ಬದುಕಿನ ಯಥಾವತ್ ಚಿತ್ರ ನೀಡುವುದರ್ಲಲಿ ನಿಸ್ಸೀಮರಾಗಿದ್ದ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಶ್ರೀನಿವಾಸ ಅಯ್ಯಂಗಾರ್- ಲಕ್ಷ್ಮಮ್ಮ ದಂಪತಿಯ ಪುತ್ರನಾಗಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಜನಿಸಿದರು. 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಗೊರೂರು 1991ರ ಸೆಪ್ಟೆಂಬರ್ 28ರಂದು ನಿಧನರಾದರು.

1904: ಖ್ಯಾತ ಸಾಹಿತಿ ಸಿದ್ದವನಹಳ್ಳಿ ಕೃಷ್ಣ ಶರ್ಮ ಜನನ.

1898: ಗುಲ್ಜಾರಿಲಾಲ್ ನಂದಾ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Guest Book .. Entirely for You..!