Thursday 17 December 2009

ಇಂದಿನ ಇತಿಹಾಸ History Today ನವೆಂಬರ್ 25

ಇಂದಿನ ಇತಿಹಾಸ

ನವೆಂಬರ್ 25

ಸ್ಪೇನಿನ  ಮ್ಯಾಡ್ರಿಡಿನಲ್ಲಿ ನಡೆದ ಮಕ್ಕಳ ಹಾಗೂ ಯುವಕರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2008ರಲ್ಲಿ ಮಾ. ಕಿಶನ್ ನಿರ್ದೇಶನದ 'ಕೇರಾಫ್ ಫುಟ್‌ಪಾತ್' ಚಿತ್ರ 'ಅತ್ಯುತ್ತಮ ಮಕ್ಕಳ ತೀರ್ಪುಗಾರರ ಪ್ರಶಸ್ತಿ' ಹಾಗೂ ಚಿತ್ರದಲ್ಲಿನ ನಟನೆಗಾಗಿ 'ಅತ್ಯುತ್ತಮ ನಟ' ಪ್ರಶಸ್ತಿ ಪಡೆಯಿತು.

2008:  ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ  ಒಬಾಮ ಅವರಿಗೆ ನೆರವು ನೀಡುವ ತಂಡದಲ್ಲಿ ಭಾರತೀಯ ಮೂಲದ ಹಲವರನ್ನು ಸೇರಿಸಿಕೊಳ್ಳ      ಲಾಯಿತು. ಈ ತಂಡಕ್ಕೆ ಸೇರಿಕೊಂಡವರೆಲ್ಲ ಒಂದಿಲ್ಲೊಂದು ಬಗೆಯಲ್ಲಿ ಒಬಾಮ ಅವರ ಹಳೆಯ ಸ್ನೇಹಿತರೇ.  ಭಾರತೀಯ ಮೂಲದ ನಿಕ್ ರಾಥೋಡ್ ಅವರನ್ನು ಅಂತರ್- ಸರ್ಕಾರ ವ್ಯವಹಾರಗಳ ನಿರ್ದೇಶಕರಾಗಿ ನೇಮಿಸಲಾಯಿತು. ನಿಕ್ ರಾಥೋಡ್ ಪ್ರಸ್ತುತ ದಕ್ಷಿಣಾ ಏಷ್ಯಾ ಜನರ ನೆರವಿಗಾಗಿ ಸ್ಥಾಪಿಸಲಾದ ರಾಷ್ಟ್ರೀಯ ಸಂಸ್ಥೆಯೊಂದರ ನಿರ್ದೇಶಕರು. 'ಅಂತರ್- ಸರ್ಕಾರ ವ್ಯವಹಾರಗಳ ಉಪ ನಿರ್ದೇಶಕರಾಗಿ ಪರಾಗ್ ಮೆಹ್ತಾ ಅವರನ್ನು ನೇಮಿಸಲಾಯಿತು. ಮೆಹ್ತಾ ಏಷ್ಯಾ ಮೂಲದವರು ಸೇರಿದಂತೆ ಅಮೆರಿಕದಲ್ಲಿ ನೆಲೆಸಿರುವ ಹಲವು ಅಲ್ಪಸಂಖ್ಯಾತ ಗುಂಪುಗಳ ಸಮನ್ವಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುವರು. ಹಾರ್ವರ್ಡ್ ಲಾ ಸ್ಕೂಲ್‌ನಲ್ಲಿ ಒಬಾಮ ಅವರ ಸಹಪಾಠಿಯಾಗಿದ್ದ, ಡ್ಯುಕ್ ವಿವಿ ಅಧ್ಯಾಪಕಿ ಆರತಿ ರೈ ಅವರನ್ನು ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಹಾಗೂ ಮಾನವಿಕ ವಿಭಾಗದ ಪರಿಶೀಲನಾ ಸಂಸ್ಥೆಯ ಸದಸ್ಯೆಯಾಗಿ ನೇಮಿಸಲಾಯಿತು.

2008: ಎಂಡೆವರ್ ನೌಕೆಯಲ್ಲಿ ತೆರಳಿದ ಅಮೆರಿಕದ ಇಬ್ಬರು ಗಗನಯಾತ್ರಿಗಳು ನಾಲ್ಕನೇಯ ಹಾಗೂ ಅಂತಿಮ ಬಾಹ್ಯಾಕಾಶ  ನಡಿಗೆಯನ್ನು ಪೂರ್ಣಗೊಳಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ವಿದ್ಯುತ್ ಒದಗಿಸುವ ಸೌರ ಫಲಕಗಳನ್ನು ಜೋಡಿಸುವ ಕಾರ್ಯವನ್ನು ಈ ಜೋಡಿ ಪೂರ್ಣಗೊಳಿಸಿತು. ಸ್ಟೆವ್ ಬೊವೆನ್ ಹಾಗೂ ಶೇನ್ ಕಿಂಬ್ರೋಗ್ ಎರಡೂವರೆ ಗಂಟೆಗಳ ಕಾಲ ಕಾರ್ಯನಿರ್ವಹಿಸಿ ತಮಗೆ ವಹಿಸಿದ್ದ ಕೆಲಸಗಳನ್ನು ಪೂರ್ಣಗೊಳಿಸಿದರು. ಜಪಾನಿನ ಕಿಬೊ ಪ್ರಯೋಗಾಲಯದ ಮೇಲಿರುವ ಉಷ್ಣನಿಯಂತ್ರಕ ಕವಚವನ್ನು ಈ ಜೋಡಿ ತೆಗೆದುಹಾಕಿತು. ಬೊವೆನ್ ಪ್ರಯೋಗಾಲಯದ ಮೇಲೆ ಜಿಪಿಎಸ್ ಆಂಟೆನಾವನ್ನು ಅಳವಡಿಸಿದರು. ಈ ಎಂಡೆವರ್ ಯಾತ್ರೆ 16 ದಿನಗಳ ಅವಧಿಯದ್ದು.

2008: 437 ಕೋಟಿ ರೂಪಾಯಿಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಸುವರ್ಣ ಸಹಕಾರಿ ಬ್ಯಾಂಕಿನ ಸಂಸ್ಥಾಪಕ- ಮಾಜಿ ಅಧ್ಯಕ್ಷ  ಸೇರಿದಂತೆ 14 ಮಂದಿಯನ್ನು  ಪುಣೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನ್ಯಾಯಾಂಗ ವಶಕ್ಕೆ ಒಪ್ಪಿಸಿತು. ಪೊಲೀಸ್ ವಶದಲ್ಲೇ ಮುಂದುವರಿಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿತು. ಪುಣೆ ಆರ್ಥಿಕ ಅಪರಾಧಗಳ ಘಟಕದ ಪೊಲೀಸರು ನವೆಂಬರ್ 22ರಂದು ಇವರನ್ನು ಬಂಧಿಸಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಾಮವಳಿಗಳನ್ನು ಉಲ್ಲಂಘಿಸಿ  ಸರಿಯಾದ ದಾಖಲೆಗಳು ಇಲ್ಲದಿದ್ದರೂ ಇವರು ದೊಡ್ಡ ಮೊತ್ತದ ಸಾಲ ನೀಡುತ್ತಿದ್ದರೆಂದು ಈ 14 ಮಂದಿ ಮೇಲೆ ಆರೋಪ ಹೊರಿಸಲಾಯಿತು. ಈ ಪ್ರಕರಣ 2006 ರಲ್ಲಿ ಬೆಳಕಿಗೆ ಬಂದಾಗ ಬ್ಯಾಂಕಿನಲ್ಲಿ ಠೇವಣಿ ಇರಿಸಿದವರು ಕಂಗಾಲಾಗಿದ್ದರು.

2008: ಸ್ವಾತಂತ್ರ್ಯ ಯೋಧ ಹಾಗೂ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜಿನಲ್ಲಿ ಸೈನಿಕರಾಗಿ ಹೋರಾಡಿದ್ದ ಗೋಪಾಲ ಶೆಟ್ಟಿ (90) ಅವರು ಈದಿನ ಮಂಗಳೂರಿನ ಪಡೀಲಿನಲ್ಲಿನ ಪೇರ್ಲ ವಠಾರದಲ್ಲಿ ನಿಧನರಾದರು. ಶೆಟ್ಟಿ ಅವರು 1941ರಲ್ಲಿ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ದ್ವಿತೀಯ ಮಹಾಯುದ್ಧದಲ್ಲಿ ಭಾಗವಹಿಸಿ ಲಿಬಿಯಾದಲ್ಲಿ ಜರ್ಮನಿಯ ಸೈನಿಕ ಕೈದಿಯಾಗಿ ಬಂಧಿತರಾಗಿ ಇಟಲಿ ಹಾಗೂ ಜರ್ಮನಿಯ ಕ್ಯಾಂಪಿನಲ್ಲಿದ್ದರು. ಬೋಸ್‌ ಅವರು ಜರ್ಮನಿಯಲ್ಲಿ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ್ದಾಗ ಬಂಧನದಲ್ಲಿದ್ದ ಇತರ ಭಾರತೀಯ ಸೈನಿಕರೊಂದಿಗೆ ಅವರು ಈ ಪಡೆಗೆ ಸೇರಿದ್ದರು. ಸ್ವಾತಂತ್ರ್ಯಾನಂತರ ಭಾರತೀಯ ಸೇನೆಗೆ ಸೇರಿದ್ದರು. ಸೈನ್ಯದಿಂದ ನಿವೃತ್ತರಾದ ಮೇಲೆ ಮಂಗಳೂರಿನ ಎನ್‌ಸಿಸಿ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದರು.

2008: ಸ್ಪೇನಿನ  ಮ್ಯಾಡ್ರಿಡಿನಲ್ಲಿ ನಡೆದ ಮಕ್ಕಳ ಹಾಗೂ ಯುವಕರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2008ರಲ್ಲಿ ಮಾ. ಕಿಶನ್ ನಿರ್ದೇಶನದ 'ಕೇರಾಫ್ ಫುಟ್‌ಪಾತ್' ಚಿತ್ರ 'ಅತ್ಯುತ್ತಮ ಮಕ್ಕಳ ತೀರ್ಪುಗಾರರ ಪ್ರಶಸ್ತಿ' ಹಾಗೂ ಚಿತ್ರದಲ್ಲಿನ ನಟನೆಗಾಗಿ 'ಅತ್ಯುತ್ತಮ ನಟ' ಪ್ರಶಸ್ತಿ ಪಡೆಯಿತು. ನವೆಂಬರ್ 17-22ರವರೆಗೆ ನಡೆದ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾಸ್ಟರ್ ಕಿಶನ್ ಹಾಗೂ ಚಿತ್ರದ ನಿರ್ಮಾಪಕಿ ಶೈಲಜಾ ಶ್ರೀಕಾಂತ್ ಭಾಗವಹಿಸಿದ್ದರು. ಈ ಚಲನ ಚಿತ್ರೋತ್ಸವದಲ್ಲಿ ಇದು ಭಾರತದಿಂದ ಪ್ರದರ್ಶನಗೊಂಡ ಏಕೈಕ ಚಲನ ಚಿತ್ರವಾಗಿತ್ತು. ಪ್ರಶಸ್ತಿ ಸ್ವೀಕರಿಸಿದ ಕಿಶನ್ 'ಈ ಪ್ರಶಸ್ತಿ ನನಗೆ ಮಾತ್ರವಲ್ಲ, ಇಡೀ ಚಿತ್ರ ತಂಡಕ್ಕೆ ಸಂದ ಪ್ರಶಸ್ತಿ' ಎಂದು ತಿಳಿಸಿದರು.

2008: ಖ್ಯಾತ ಮಾಜಿ ಫುಟ್‌ಬಾಲ್ ತಾರೆ ಪೀಟರ್ ತಂಗರಾಜ್ (72) ಅವರು ರಾಂಚಿಯಲ್ಲಿ ಹೃದಯಾಘಾತದಿಂದ ನಿಧನರಾದರು. ದೀರ್ಘ ಕಾಲ ಅನಾರೋಗ್ಯದಿಂದ ಬಳಲಿದ್ದ ಅವರನ್ನು ಈದಿನ ಬೆಳಿಗ್ಗೆಯಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಕೊನೆಯುಸಿರೆಳೆದರೆಂದು ಕುಟುಂಬದ ಮೂಲಗಳು ತಿಳಿಸಿದವು. 1962ರಲ್ಲಿ ಜಕಾರ್ತಾ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ತಂಡವು ಫುಟ್‌ಬಾಲ್‌ನಲ್ಲಿ ಸ್ವರ್ಣ ಪದಕ ಗೆದ್ದ ಸಂದರ್ಭದಲ್ಲಿ ತಂಗರಾಜ್  ಗೋಲ್ ಕೀಪರ್ ಆಗಿ ಕಾರ್ಯ ನಿರ್ವಹಿಸಿದ್ದರು. 1958ರಲ್ಲಿ ಏಷ್ಯಾದ ಅತ್ಯಂತ ಶ್ರೇಷ್ಠ ಗೋಲ್ ಕೀಪರ್ ಎನ್ನುವ ಶ್ರೇಯವನ್ನೂ ಪಡೆದಿದ್ದರು. 1954ರಿಂದ 1968ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿ ಅನೇಕ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ್ದರು. 1954, 1958,  1962  ಹಾಗೂ 1966ರ ಏಷ್ಯಾ ಕ್ರೀಡಾಕೂಟಗಳಲ್ಲಿ ಕೂಡಾ ಪಾಲ್ಗೊಂಡ್ದಿದರು. 1968ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದ ಅವರು 1960ರಲ್ಲಿ ಏಷ್ಯಾದ ಆಲ್‌ ಸ್ಟಾರ್ ತಂಡದಲ್ಲಿಯೂ ಪಾಲ್ಗೊಂಡಿದ್ದರು.. ಮೆಲ್ಬೋರ್ನ್ (1956) ಹಾಗೂ ರೋಮ್ (1960) ಒಲಿಂಪಿಕ್ ಕೂಟಗಳಲ್ಲಿ ಪಾಲ್ಗೊಂಡ ಭಾರತ ತಂಡದ ಸದಸ್ಯರಾಗಿದ್ದರು.

2007: ಭಾರತ ತಂಡದ ಸಚಿನ್ ತೆಂಡೂಲ್ಕರ್ ತೆಂಡೂಲ್ಕರ್ ಅವರು ಟೆಸ್ಟ್  ಕ್ರಿಕೆಟಿನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗುವ ಮೂಲಕ ಮತ್ತೊಂದು ವಿಶ್ವದಾಖಲೆ ಸ್ಥಾಪಿಸಿದರು. ಪಾಕಿಸ್ಥಾನ ವಿರುದ್ಧ ನವದೆಹಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಚಿನ್ 11183 ರನ್ ಪಡೆಯುವ ಮೂಲಕ ಅವರು ಈ ಸಾಧನೆ ಮಾಡಿದರು. ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ 24ನೇ ರನ್ ಗಳಿಸುವುದರೊಂದಿಗೆ ಅವರ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅತ್ಯಂತ ಹೆಚ್ಚು ರನ್ನು ಗಳಿಸಿದ ವಿಶ್ವದಾಖಲೆ (11,183) ಅವರದಾಯಿತು. ಅಂತಾರಾಷ್ಟ್ರೀಯ ಟೆಸ್ಟ್  ಕ್ರಿಕೆಟಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ನರಲ್ಲಿ ಎರನೆಯವರೆಂಬ ಹೆಗ್ಗಳಿಕೆ ಭಾರತದ ತೆಂಡೂಲ್ಕರ್ ಅವರಿಗೆ ಪ್ರಾಪ್ತಿಯಾಯಿತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರು 11174 ರನ್ ಪೇರಿಸಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ದಾಖಲೆಯನ್ನು ಅಳಿಸಿಹಾಕಿದರು. ಈ ಪಂದ್ಯದಲ್ಲಿ 32 ರನ್ ಗಳಿಸಿ ಅಜೇಯರಾಗಿ ಉಳಿದ ತೆಂಡೂಲ್ಕರ್ ಅವರಿಗೆ ಇದು 141ನೇ ಟೆಸ್ಟ್ ಹಾಗೂ 228ನೇ ಇನಿಂಗ್ಸ್. ಅವರು ಈಗ 54.79 ಸರಾಸರಿಯಲ್ಲಿ 11183 ರನ್ ಕಲೆಹಾಕಿದರು. ವೆಸ್ಟ್ ಇಂಡೀಸಿನ ಮಾಜಿ ಆಟಗಾರ ಬ್ರಯನ್ ಲಾರಾ (11953 ರನ್) ಮೊದಲ ಸ್ಥಾನದಲ್ಲಿದ್ದಾರೆ.

2007: ಮೊಘಲ್ ಹಾಗೂ ಬಹಮನಿ ಆಡಳಿತ ಕಾಲಕ್ಕೆ ಸೇರಿರುವ ಐತಿಹಾಸಿಕ ಮೌಲ್ಯದ 640 ಬೆಳ್ಳಿ ನಾಣ್ಯಗಳು ಗುಲ್ಬರ್ಗದಲ್ಲಿ ಪತ್ತೆಯಾದವು. ಸುಮಾರು 7143 ಗ್ರಾಂ ತೂಕದ ಈ ನಾಣ್ಯಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಲಾಯಿತು. ಪ್ರಾಚ್ಯವಸ್ತು ತಜ್ಞರ ಪ್ರಕಾರ ಈ ನಾಣ್ಯಗಳು 1269-1299ರ ಕಾಲಕ್ಕೆ ಸೇರಿದವು ಎಂದು ಖಚಿತಪಡಿಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ಎನ್. ನಾಗರಾಜ ಪ್ರಕಟಿಸಿದರು. ಗುಲ್ಬರ್ಗದ ಬ್ರಹ್ಮಪೂರ ಬಡಾವಣೆಯ ಕುಂಬಾರಗಲ್ಲಿಯ ಗುಂಡಪ್ಪ ಹಡಗಿಲ್ ಎಂಬುವರ ಬಿದ್ದುಹೋದ ಮನೆಯಲ್ಲಿ ಈ ನಾಣ್ಯಗಳು ದೊರಕಿದವು. ಇದೇ ಬಡಾವಣೆಯ ಪ್ರಕಾಶ ಪಾಟೀಲ್ ಎಂಬುವರ ಬಳಿ ಕೆಲಸಕ್ಕೆ ಇದ್ದ ಹಣಮಂತಪ್ಪ ಹರಗೆನೂರ ಹೂವಿನ ಕುಂಡಗಳಿಗೆ ಹಾಕಲು ಮಣ್ಣು ತರಲು ಹೋದಾಗ ಅವರಿಗೆ ನವೆಂಬರ್ 22ರಂದು ಈ ನಾಣ್ಯಗಳು ದೊರಕಿದವು. ಈ ನಾಣ್ಯಗಳ ಹಾಲಿ ಬೆಲೆ ಅಂದಾಜು 1.40 ಲಕ್ಷ ರೂಪಾಯಿಗಳು. ಐತಿಹಾಸಿಕ ಮೌಲ್ಯದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ನಾಣ್ಯಗಳ ಮೌಲ್ಯ ಸುಮಾರು 15-20 ಲಕ್ಷ ರೂ.ಗಳು ಎಂದು ಅಂದಾಜು. ಹರಗೇನೂರ ಕುಟುಂಬ ಸದಸ್ಯರು ಈ ನಾಣ್ಯಗಳನ್ನು ಸರ್ಕಾರಕ್ಕೆ ಒಪ್ಪಿಸಿದರು.

2007: ಗಡಿಪಾರಾದ ಸುಮಾರು 7 ವರ್ಷಗಳ ಬಳಿಕ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಈದಿನ ಲಾಹೋರಿಗೆ ಆಗಮಿಸಿದರು. ಪಾಕಿಸ್ಥಾನದ ಮುಸ್ಲಿಂ ಲೀಗ್ (ಪಿಎಂಎಲ್ -ಎನ್) ಮುಖಂಡ ಶರೀಫ್ ಅವರು ಕಳೆದ ಸೆಪ್ಟೆಂಬರಿನಲ್ಲಿ ಮೊದಲ ಬಾರಿ ಪಾಕಿಸ್ಥಾನಕ್ಕೆ ಆಗಮಿಸಿದಾಗ ಅವರನ್ನು ಬಂಧಿಸಲಾಗಿತ್ತು.

2007: ಪಶ್ಚಿಮ ಇಂಡೋನೇಷ್ಯದಲ್ಲಿ ಈದಿನ  ಬೆಳಗ್ಗೆ ಶಕ್ತಿಶಾಲಿ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.2 ರಷ್ಟಿತ್ತು. ಕರಾವಳಿ ಪ್ರದೇಶ ಸುಮಾತ್ರ  ದ್ವೀಪದ ಬೇಕ್ ಕುಲಾ ನಗರದ 28 ಕಿ.ಮೀ ದೂರದಲ್ಲಿ ಈ  ಕಂಪನದ ಕೇಂದ್ರಬಿಂದು ಇತ್ತು.  2004ರಲ್ಲಿ ಸಮುದ್ರದಲ್ಲಿ ಸಂಭವಿಸಿದ  ಭೂಕಂಪದಿಂದ ಉಂಟಾದ ಸುನಾಮಿಗೆ ಸುಮಾರು 1.70 ಲಕ್ಷ ಜನ ಬಲಿಯಾಗಿದ್ದರು.

2007: ತಮ್ಮ ಹೊಸ ಚಿತ್ರಕ್ಕಾಗಿ ಚೀನಾದ ಖ್ಯಾತ ಚಿತ್ರನಟ ಜೆಟ್ ಲೀ 100 ದಶಲಕ್ಷ ಯೂನ್ (13 ದಶಲಕ್ಷ ಡಾಲರುಗಳು)ಸಂಭಾವನೆ ಪಡೆದು ದಾಖಲೆ ನಿರ್ಮಿಸಿದರು. ಚೀನಾ ಭಾಷೆಯ ಚಿತ್ರಗಳಲ್ಲಿ ಇದುವರೆಗೆ ಯಾರೂ ಇಷ್ಟು  ದೊಡ್ಡ ಪ್ರಮಾಣದ ಸಂಭಾವನೆ ಪಡೆದಿರಲಿಲ್ಲ. ಜೆಟ್ ಲೀ ನಟಿಸಿದ `ದಿ ವಾರ್ ಲಾರ್ಡ್ಸ್' ಚಿತ್ರದ ಒಟ್ಟಾರೆ ಬಜೆಟ್ 40 ದಶಲಕ್ಷ ಡಾಲರುಗಳು.

2006: ಹಿರಿಯ ಕವಿ ಡಾ. ಕಯ್ಯಾರ ಕಿಂಞಣ್ಣರೈ, ಡಾ. ಎಂ. ಸರೋಜಿನಿ ಮಹಿಷಿ, ಜಾನಪದ ವಿದ್ವಾಂಸ ಮುದೇನೂರು ಸಂಗಣ್ಣ, ಸಾಹಿತಿ ಸಂಶೋಧಕ ಡಾ. ಹಂಪ ನಾಗರಾಜಯ್ಯ ಹಾಗೂ ಜನಪದ ಗಾಯಕಿ ಬುರ್ರಕಥಾ ಈರಮ್ಮ ಅವರಿಗೆ 2006ನೇ ಸಾಲಿನ `ನಾಡೋಜ' ಗೌರವವನ್ನು ಕನ್ನಡ ವಿಶ್ವವಿದ್ಯಾಲಯವು ಘೋಷಿಸಿತು.

2006: ರಾಷ್ಟ್ರದ ಮೊತ್ತ ಮೊದಲ `ಚಿಟ್ಟೆ ಉದ್ಯಾನ'ವನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆವರಣದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಕಪಿಲ್ ಸಿಬಲ್ ರಾಷ್ಟ್ರಕ್ಕೆ ಅರ್ಪಿಸಿದರು. 10,490 ಚದರಡಿ ವ್ಯಾಪ್ತಿಯಲ್ಲಿ ನಿರ್ಮಿತವಾದ `ಚಿಟ್ಟೆ ಉದ್ಯಾನ' ಜಗತ್ತಿನ ಇಂತಹ ವಿಶಾಲ ಉದ್ಯಾನಗಳ ಸಾಲಿನಲ್ಲಿ ಒಂದಾಗಲಿದೆ. ನಗರ ಮತ್ತು ಸುತ್ತಮುತ್ತಣ ಸುಮಾರು 42 ಜಾತಿಯ ಚಿಟ್ಟೆಗಳಿಗೆ ಆವಾಸ ಸ್ಥಾನವಾಗಲಿರುವ ಈ ಉದ್ಯಾನದಲ್ಲಿ 2ನೇ ಹಂತದಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಚಿಟ್ಟೆಗಳನ್ನೂ ಸಾಕಲಾಗುವುದು. ಉದ್ಯಾನದ ನಿಮರ್ಾಣ ವೆಚ್ಚ 4.9 ಕೋಟಿ ರೂಪಾಯಿಗಳು.       

2005: ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಹಾಗೂ ನಾಥೂರಾಂ ಗೋಡ್ಸೆ ಕಿರಿಯ ಸಹೋದರ ಗೋಪಾಲ್ ವಿನಾಯಕ ಗೋಡ್ಸೆ (86) ಈ ದಿನ ರಾತ್ರಿ ನಿಧನರಾದರು. ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಗೋಪಾಲ್ ಗೋಡ್ಸೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಸೆರೆವಾಸ ಅನುಭವಿಸಿದ್ದರು.

2005: ಮಾಜಿ ಲೋಕಸಭಾಧ್ಯಕ್ಷ ಪಿ.ಎ. ಸಂಗ್ಮಾ ಅವರು ಲೋಕಸಭಾ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯನ್ನು ಸಭಾಧ್ಯಕ್ಷ ಸೋಮನಾಥ ಚಟರ್ಜಿ ಅಂಗೀಕರಿಸಿದರು. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ತೃಣಮೂಲ ಕಾಂಗ್ರೆಸ್ಸಿನಿಂದ ಮೇಘಾಲಯದ ತುರಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ತಿಂಗಳ ಹಿಂದೆ ಈ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

2005: ಬಹು ವಿವಾದಿತ ಅರ್ಕಾವತಿ ಬಡಾವಣೆಗಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿತು. ಇದರೊಂದಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಜಮೀನು ಮಾಲೀಕರ ನಡುವಣ ಕಾನೂನು ಸಮರಕ್ಕೆ ತೆರೆಬಿತ್ತು. ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯ ಮಾಲೀಕತ್ವದ ಹಕ್ಕುಗಳನ್ನು ಮೂಲ ಮಾಲೀಕರಿಗೆ ವರ್ಗಾಯಿಸುವಂತೆ ಏಕಸದಸ್ಯ ಪೀಠ ನೀಡಿದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎನ್. ಕೆ. ಸೋಧಿ ಹಾಗೂ ನ್ಯಾಯಮೂರ್ತಿ ಎನ್. ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ರದ್ದುಪಡಿಸಿತು.

2005: ಆಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರಿಂದ ಹತ್ಯೆಗೀಡಾದ ಮಣಿಯಪ್ಪನ್ ಕುಟ್ಟಿಯ ಶವವನ್ನು ಹುಟ್ಟೂರಾದ ಅಳಪ್ಪುಳ ಗ್ರಾಮಕ್ಕೆ ತಂದು ಸೇನಾಪಡೆ ಗೌರವದ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.

2002: ನ್ಯೂಕ್ಯಾಸಲ್ನ ಜಾನ್ ಹಂಟರ್ ಆಸ್ಪತ್ರೆಂಯಲ್ಲಿ ಹಾನಿಗೀಡಾದ ತನ್ನ ಹೃದಯವನ್ನು ದುರಸ್ತಿಪಡಿಸಲು ಆಸ್ಟ್ರೇಲಿಯಾದ ಜಿಮ್ ನಿಕೊಲ್ ವಿಶಿಷ್ಟ ಶಸ್ತ್ರಚಿಕಿತ್ಸೆಗೆ ಒಳಗಾದರು. `ಅಡಲ್ಟ್ ಸ್ಟೆಮ್ ಸೆಲ್ಸ್' (ಮೂಲಕೋಶ) ಬಳಸಿ ನಡೆಸಲಾದ ಜಗತ್ತಿನ ಮೊತ್ತ ಮೊದಲ ರಿಪೇರಿ ಕೆಲಸ ಇದು.

2001: ಜಗತ್ತಿನಲ್ಲಿ ಮೊತ್ತ ಮೊದಲಬಾರಿಗೆ ತಾನು ಮಾನವ ಭ್ರೂಣದ ತದ್ರೂಪು (ಕ್ಲೋನಿಂಗ್) ಸೃಷ್ಟಿ ಮಾಡಿರುವುದಾಗಿ ಮೆಸಾಚ್ಯುಸೆಟ್ಸಿನ ಎಸಿಟಿ ಕಂಪೆನಿ ಈ ದಿನ ಪ್ರಕಟಿಸಿತು. ತನಗೆ ಮಾನವ ಸೃಷ್ಟಿಯ ಉದ್ದೇಶವಿಲ್ಲ. ಆದರೆ ರೋಗಗಳಿಗೆ ಚಿಕಿತ್ಸೆ ನೀಡುವ ಮೂಲಕೋಶಗಳಿಗಾಗಿ ಭ್ರೂಣವನ್ನು ಬಳಸುವ ಉದ್ದೇಶವಿದೆ ಎಂದು ಅದು ಹೇಳಿತು. ಮನುಕುಲವನ್ನು ಕಾಡುವ ವ್ಯಾಪಕ ಕಾಯಿಲೆಗಳಿಂದ ಪ್ರಾಣ ಉಳಿಸುವ ಚಿಕಿತ್ಸಾ ವಿಧಾನ ರೂಪಿಸುವ ಉದ್ದೇಶ ತಮ್ಮದು ಎಂದು ಅದು ಹೇಳಿತು. ಭ್ರೂಣದಿಂದ ಪಡೆದ ಭ್ರೂಣ ಮೂಲಕೋಶವನ್ನು ದೇಹದ ಯಾವುದೇ ಅಂಗವಾಗಿ ಬೆಳೆಸಬಹುದು.

1981: ಭಾರತದಲ್ಲಿ ನಡೆದ ಮೊತ್ತ ಮೊದಲ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಅಹಮದಾಬಾದಿನ ಸರ್ದಾರ್ ಪಟೇಲ್ ಸ್ಟೇಡಿಯಂ ಪಾತ್ರವಾಯಿತು. ಪಂದ್ಯದಲ್ಲಿ ಭಾರತವನ್ನು ಇಂಗ್ಲೆಂಡ್ ಐದು ವಿಕೆಟ್ ಅಂತರದಲ್ಲಿ ಸೋಲಿಸಿತು.

1952: ಅಗಾಥಾ ಕ್ರಿಸ್ಟೀ ಅವರ ನಾಟಕ `ದಿ ಮೌಸ್ ಟ್ರ್ಯಾಪ್'ನ ಮೊತ್ತ ಮೊದಲ ಪ್ರದರ್ಶನ ಲಂಡನ್ನಿನ ಅಂಬಾಸಡರ್ ಥಿಯೇಟರಿನಲ್ಲಿ ನಡೆಯಿತು.

1948: ನ್ಯಾಷನಲ್ ಕೆಡೆಟ್ ಕೋರ್ (ಎನ್ ಸಿ ಸಿ) ಎನ್ ಸಿ ಸಿ ಕಾಯ್ದೆಗೆ ಅನುಗುಣವಾಗಿ ಈ ದಿನ ಅಸ್ತಿತ್ವಕ್ಕೆ ಬಂತು. ಭಾರತೀಯ ವಿದ್ಯಾರ್ಥಿಗಳ ಕಲ್ಯಾಣದ ದೃಷ್ಟಿಯಿಂದ ಇದನ್ನು ರೂಪಿಸಲಾಗಿದ್ದು `ಏಕತೆ ಮತ್ತು ಶಿಸ್ತು' ಇದರ ಪ್ರಮುಖ ಗುರಿ.

1945: ನಾಜಿ ನಾಯಕರ ವಿಚಾರಣೆಯನ್ನು ಅಂತಾರಾಷ್ಟ್ರೀಯ ಮಿಲಿಟರಿ ಟ್ರಿಬ್ಯೂನಲ್ ಈದಿನ ನ್ಯೂರೆಂಬರ್ಗಿನ ನ್ಯಾಯ ಅರಮನೆಯಲ್ಲಿ (ಪ್ಯಾಲೇಸ್ ಆಫ್ ಜಸ್ಟೀಸ್) ಆರಂಭಿಸಿತು. `ನ್ಯೂರೆಂಬರ್ಗ್ ಟ್ರಯಲ್' (ನ್ಯೂರೆಂಬರ್ಗ್ ವಿಚಾರಣೆ) ಎಂದೇ ಖ್ಯಾತಿ ಪಡೆದ ಈ ವಿಚಾರಣೆ 1946ರ ಸೆಪ್ಟೆಂಬರ್ 30ರಂದು ಕೊನೆಗೊಂಡಿತು. ಅಕ್ಟೋಬರ್ 1ರಂದು ತೀರ್ಪು ಪ್ರಕಟಿಸಲಾಯಿತು. ಒಳಸಂಚು, ಶಾಂತಿ ವಿರೋಧಿ ಅಪರಾಧಗಳು, ಯುದ್ಧ ಅಪರಾಧಗಳು ಹಾಗೂ ಮಾನವತೆ ವಿರುದ್ಧ ಎಸಗಿದ ಅಪರಾಧಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಲಾಯಿತು.10 ಮಂದಿಗೆ ಮರಣದಂಡನೆ, 7 ಮಂದಿಗೆ ಸೆರೆವಾಸದ ಶಿಕ್ಷೆ ವಿಧಿಸಿದರೆ, ಮೂವರನ್ನು ಖುಲಾಸೆ ಮಾಡಲಾಯಿತು.

1916: ಕನ್ನಡಕ್ಕಿಂತ ಇಂಗ್ಲಿಷಿನಲ್ಲಿಯೇ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದ  ಸಾಹಿತಿ ಹೇಮಂತ ಕುಲಕರ್ಣಿ (21-11-1916ರಿಂದ 22-7-1994) ಅವರು ಬಿಜಾಪುರದಲ್ಲಿ ಜನಿಸಿದರು.

1916: ಸಾಹಿತಿ ರಾಮಕೃಷ್ಣ ಉಡುಪ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ನವೆಂಬರ್ 24

ಇಂದಿನ ಇತಿಹಾಸ

ನವೆಂಬರ್ 24





ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ನಿಕ್ಕಿತಾಶಾ ಮರ್ವಾಹಾ ಅವರು 'ಮಿಸ್ ಇಂಡಿಯಾ ಯು ಎಸ್‌ಎ' ಪ್ರಶಸ್ತಿ ಗೆದ್ದರು. ಕಳೆದ ಬಾರಿಯ ಸುಂದರಿ  ರಿಚಾ ಗಂಗೋಪಾಧ್ಯಾಯ ಅವರು ನಿಕ್ಕಿತಾಶಾಗೆ ಕಿರೀಟ ತೊಡಿಸಿದರು.

2008: ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ನಿಕ್ಕಿತಾಶಾ ಮರ್ವಾಹಾ ಅವರು 'ಮಿಸ್ ಇಂಡಿಯಾ ಯು ಎಸ್‌ಎ' ಪ್ರಶಸ್ತಿ ಗೆದ್ದರು. ಕಳೆದ ಬಾರಿಯ ಸುಂದರಿ  ರಿಚಾ ಗಂಗೋಪಾಧ್ಯಾಯ ಅವರು ನಿಕ್ಕಿತಾಶಾಗೆ ಕಿರೀಟ ತೊಡಿಸಿದರು.

2008: ಎಲ್‌ಟಿಟಿಇಗಳ ಭದ್ರಕೋಟೆ ಕಿಲಿನೋಚ್ಚಿ ಪ್ರದೇಶದಲ್ಲಿ ನಡೆದ ಶ್ರೀಲಂಕಾ ಸೇನೆ ಹಾಗೂ ಎಲ್‌ಟಿಟಿಇ ನಡುವಿನ ಕಾಳಗದಲ್ಲಿ ಸುಮಾರು 120 ಎಲ್‌ಟಿಟಿಇ ಬಂಡುಕೋರರು ಹಾಗೂ 27 ಸೈನಿಕರು ಸಾವನ್ನಪ್ಪಿದರು. ಬಂಡುಕೋರರ ರಾಜಧಾನಿ ಎಂದೇ ಪರಿಗಣಿಸಲಾದ ಕಿಲಿನೋಚ್ಚಿ ಪ್ರದೇಶವನ್ನು ಕೈವಶ ಮಾಡಿಕೊಳ್ಳಲು ಶ್ರೀಲಂಕಾ ಸೇನೆ ತೀವ್ರ ಸೆಣಸಾಟ ನಡೆಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದವು.

2008: ಪ್ರಪಂಚದಲ್ಲೇ ಅತ್ಯಂತ ಅನ್ವೇಷಣಾ ಪ್ರವೃತ್ತಿ ಹೊಂದಿದ ಭಯೋತ್ಪಾದನಾ ಸಂಘಟನೆ ಎಂಬ ಹೆಸರು ಪಡೆದ ಎಲ್‌ಟಿಟಿಇ ತನ್ನ ಗೆರಿಲ್ಲಾ ಯುದ್ಧ ತಂತ್ರಜ್ಞಾನದಲ್ಲಿ ಮತ್ತೊಂದು ಹೊಸ ಹೆಜ್ಜೆ ಇರಿಸಿತು. ಅತ್ಯಂತ ಆಧುನಿಕ ತಂತ್ರಜ್ಞಾನಗಳಿಂದ ಒಡಗೂಡಿದ ಅತ್ಯುನ್ನತ ಮಟ್ಟದ ಆತ್ಮಹತ್ಯಾ ಮೇಲು ಹೊದಿಕೆಗಳನ್ನು  (ಜಾಕೆಟ್) ಎಲ್‌ಟಿಟಿಇ ಕಂಡು ಹಿಡಿದಿದೆ ಎಂದು ಶ್ರೀಲಂಕಾ ಸರ್ಕಾರ ಹೇಳಿತು. ಈ ಆತ್ಮಹತ್ಯಾ ಮೇಲು ಹೊದಿಕೆಗಳನ್ನು ಎಲ್‌ಟಿಟಿಇ ಮಧ್ಯಪ್ರಾಚ್ಯದ ಆತ್ಮಹತ್ಯಾ ದಳಗಳಿಗೆ ಪೂರೈಕೆ ಮಾಡುತ್ತಿದೆ ಎಂಬ ಅಂಶವನ್ನೂ ಸರ್ಕಾರ ಬಯಲು ಮಾಡಿತು. ಈ ಮೇಲು ಹೊದಿಕೆಗಳು ಪಾಸ್ಲ್ಟಿಕ್ಕಿನ ಪದಾರ್ಥಗಳಿಂದ ಕೂಡಿದ ಸ್ಫೋಟಕಗಳನ್ನು ಹೊಂದಿರುತ್ತವೆ. ಈಗ ಎಲ್‌ಟಿಟಿಇ ಇವುಗಳನ್ನು ಬಹುಶಃ ಹಣಕ್ಕಾಗಿ ಮಧ್ಯಪ್ರಾಚ್ಯದ ಆತ್ಮಹತ್ಯಾ ದಳಗಳಿಗೆ ಮಾರಾಟ ಮಾಡುತ್ತಿದೆ ಎಂದು ಶ್ರೀಲಂಕಾ ರಕ್ಷಣಾ ಪಡೆಯ ವೆಬ್‌ಸೈಟಿನ ಲೇಖನವೊಂದು ವಿವರಿಸಿತು.

2008: ಕಾಡುಗಳ್ಳತನಕ್ಕೆ ಬಳಸಿದ ವಾಹನಗಳನ್ನು ಮತ್ತು ಇತರ ಸಲಕರಣೆಗಳನ್ನು ವಶಕ್ಕೆ ತೆಗೆದುಕೊಳ್ಳುವ ಮತ್ತು ಅವುಗಳನ್ನು ಹರಾಜು ಹಾಕುವ ಹಕ್ಕು ಸರ್ಕಾರಕ್ಕೆ ಇದೆ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿತು. ಅರಣ್ಯ ಎಂಬುದು ಒಂದು ರಾಷ್ಟ್ರೀಯ ಸಂಪತ್ತು. ಅರಣ್ಯ ನಾಶದಿಂದ ಪರಿಸರ ಅಸಮತೋಲನ ತಲೆದೋರುತ್ತದೆ. ಹೀಗಾಗಿ ಅರಣ್ಯ  ಸಂರಕ್ಷಿಸುವುದಕ್ಕೆ ಮತ್ತು ಅರಣ್ಯಗಳ್ಳರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರಕ್ಕೆ ಹಕ್ಕಿದೆ ಎಂದು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ಮುಕುಂದಕಂ ಶರ್ಮಾ ಅವರನ್ನು  ಒಳಗೊಂಡ ಪೀಠ ಹೇಳಿತು. ಮಹಾರಾಷ್ಟ್ರದಲ್ಲಿ 1999ರಲ್ಲಿ ಅಕ್ರಮ ಮರ ಸಾಗಾಣಿಕೆ ವೇಳೆ ಸಿಕ್ಕಿಬಿದ್ದ. ಟ್ರಕ್ ವಿಷಯದಲ್ಲಿ  ಮಹಮ್ಮದ್ ಅಶೀಖ್ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ತೀರ್ಪು ನೀಡಿತು.

2008: ಮಾಂಟೆಕಾರ್ಲೊ: ಜಮೈಕಾದ ಸ್ಪ್ರಿಂಟರ್ ಉಸೇನ್ ಬೋಲ್ಟ್ ಮತ್ತು ರಷ್ಯಾದ ಮಹಿಳಾ ಪೋಲ್‌ವಾಲ್ಟ್ ಸ್ಪರ್ಧಿ ಎಲೆನಾ ಇಸಿನ್ಬಯೇವಾ ಅವರು ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ (ಐಎಎಎಫ್) 'ವರ್ಷದ ಶ್ರೇಷ್ಠ ಅಥ್ಲೀಟ್' ಗೌರವ ತಮ್ಮದಾಗಿಸಿಕೊಂಡರು. ಬೋಲ್ಟ್ ಮತ್ತು ಇಸಿನ್ಬಯೇವಾ ಅವರು ತಲಾ ಒಂದು ಲಕ್ಷ ಡಾಲರ್ ನಗದು ಬಹುಮಾನ ಪಡೆದರು. ಈದಿನ ಮಾಂಟೆಕಾರ್ಲೊದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಇಬ್ಬರಿಗೂ ಪ್ರಶಸ್ತಿ ವಿತರಿಸಲಾಯಿತು. ಪ್ರಸಕ್ತ ವರ್ಷ ಟ್ರ್ಯಾಕಿನಲ್ಲಿ ಮಿಂಚಿನ ಸಂಚಲನ ಮೂಡಿಸಿದ 22ರ ಹರೆಯದ ಬೋಲ್ಟ್ ಅವರು ಬೀಜಿಂಗ್ ಒಲಿಂಪಿಕ್ ಕೂಟದಲ್ಲಿ ಮೂರು ಚಿನ್ನ ಗೆದ್ದುಕೊಂಡಿದ್ದರು. ಅವು ಮೂರನ್ನು ಕೂಡಾ ವಿಶ್ವದಾಖಲೆಯ ಸಮಯದೊಂದಿಗೆ ತಮ್ಮದಾಗಿಸಿದ್ದು ವಿಶೇಷವಾಗಿತ್ತು. 100 ಮೀ. ಓಟವನ್ನು 9.69 ಸೆಕೆಂಡುಗಳಲ್ಲಿ ಪೂರೈಸಿದ್ದ ಅವರು 200 ಮೀ. ಓಟ ಪೂರೈಸಲು 19.30 ಸೆಕೆಂಡ್ ಮಾತ್ರ ತೆಗೆದುಕೊಂಡಿದ್ದರು. ಅದೇ ರೀತಿ ಇವರನ್ನೊಳಗೊಂಡ ಜಮೈಕಾ ತಂಡ 4x100 ಮೀ. ರಿಲೇಯಲ್ಲಿ ವಿಶ್ವದಾಖಲೆಯ ಸಮಯದೊಂದಿಗೆ ಸ್ವರ್ಣ ಜಯಿಸಿತ್ತು.

2007: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸರೆಡ್ಡಿ ಅವರ ಬೆಂಗಳೂರು, ಆನೆಕಲ್ಲಿನ ಮನೆ ಮತ್ತು ಕಚೇರಿ ಮೇಲೆ ಈದಿನ ಬೆಳಗ್ಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 20 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಖಚಿತ ಮಾಹಿತಿಯನ್ನು ಆಧರಿಸಿ ರೆಡ್ಡಿ ಅವರ ಸದಾಶಿವನಗರದ ನಿವಾಸ, ಅವರ ಅತ್ತೆ (ಪತ್ನಿಯ ತಾಯಿ) ಚೌಡಮ್ಮ ಅವರ ಇಂದಿರಾನಗರದ ನಿವಾಸ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ತಿರುಮಗೊಂಡನಹಳ್ಳಿಯ ರಮಣ ಮಹರ್ಷಿ ಸೇವಾ ಟ್ರಸ್ಟ್ ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನಗದು, ಬ್ಯಾಂಕ್ ಖಾತೆಗಳು ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವಶಪಡಿಸಿಕೊಂಡರು. ಆದಾಯಕ್ಕಿಂತ 57 ಪಟ್ಟು ಅಧಿಕ ಆಸ್ತಿಪಾಸ್ತಿ ಶ್ರೀನಿವಾರ ರೆಡ್ಡಿ ಅವರ ಬಳಿ ದೊರಕಿತು. ಅವರ ಒಟ್ಟು ಸೇವಾ ಅವಧಿಯಲ್ಲಿ ಸರ್ಕಾರದಿಂದ ಪಡೆದ ಸಂಬಳ ಮತ್ತು ಇತರೆ ಸೌಲಭ್ಯಗಳ ಮೊತ್ತ ಕೇವಲ ರೂ 35 ಲಕ್ಷ! ಅದರೆ ದಾಳಿ ಕಾಲದಲ್ಲಿ ಪತ್ತೆಯಾದದ್ದು 20 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಆಸ್ತಿಪಾಸ್ತಿ ಎಂದು ಲೋಕಾಯುಕ್ತ ಸಂತೋಷ ಹೆಗ್ಡೆ ಹೇಳಿದರು.

2007: ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಆದಿವಾಸಿ ವಿದ್ಯಾರ್ಥಿಗಳ ಸಂಘಟನೆ ಅಸ್ಸಾಮಿನ ಗುವಾಹಟಿಯಲ್ಲಿ ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಅದನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರಿಗೆ ಐವರು ಬಲಿಯಾದರು. ರಾಜ್ಯದ 2.6 ಕೋಟಿ ಜನ ಸಂಖ್ಯೆಯಲ್ಲಿ ಶೇ 6 ರಷ್ಟಿರುವ ಸಂತಲ್ ಆದಿವಾಸಿಗಳು ಬಹುತೇಕ ಚಹಾ ತೋಟಗಳಲ್ಲಿ ಕೆಲಸ ಮಾಡುವವರು. ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕಳೆದ ಹಲವಾರು ವರ್ಷಗಳಿಂದ  ಹೋರಾಟ ನಡೆಸಿದ್ದು, ಇದೇ ಆಗ್ರಹ ಮುಂದಿಟ್ಟು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ್ದರು.

2007: ಜೈಪುರದಿಂದ ನವದೆಹಲಿಗೆ ಕರೆತರಲಾದ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಅವರನ್ನು ರಾಜಸ್ಥಾನ ಹೌಸಿನಲ್ಲಿ ಇರಿಸಿ ದೆಹಲಿ ಹಾಗೂ ರಾಜಸ್ಥಾನೀ ಪೊಲೀಸರು ಬಿಗಿ ಭದ್ರತೆ ಒದಗಿಸಿದರು. ಅತಿಥಿ ಗೃಹಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಯಿತು. `ಲಜ್ಜಾ' ಪುಸ್ತಕ ಬರೆದು ತಸ್ಲಿಮಾ  ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದರು.

2007: ಪಾಕಿಸ್ಥಾನದ ರಾವಲ್ಪಿಂಡಿ ಹಾಗೂ ಆಪ್ಘಾನಿಸ್ಥಾನದ ಕಾಬೂಲಿನಲ್ಲಿ ಸಂಭವಿಸಿದ ಪ್ರತ್ಯೇಕ  ಆತ್ಮಹತ್ಯಾ ದಾಳಿಗಳಲ್ಲಿ ಒಟ್ಟು 39ಮಂದಿ ಮೃತರಾದರು. ರಾವಲ್ಪಿಂಡಿಯಲ್ಲಿ 30 ಜನ, ಕಾಬೂಲಿನಲ್ಲಿ 9 ಮಂದಿ ಸಾವನ್ನಪ್ಪಿದರು.

2007: ಹುಬ್ಬಳ್ಳಿ - ಧಾರವಾಡ ಅವಳಿ ನಗರದ ಕೆಲವೆಡೆ ಈದಿನ ಸಂಜೆ ಲಘು ಭೂಕಂಪದ ಅನುಭವವಾಯಿತು. ಸಂಜೆ 5ರ ಸುಮಾರಿಗೆ ಮನೆಗಳಲ್ಲಿ ಮೇಜು, ಕುರ್ಚಿ, ಪಾತ್ರೆಗಳು ಅಲುಗಾಡಿದ ಅನುಭವವಾಯಿತು.

2007: ವಿಚಾರವಾದಿ ದಿವಂಗತ ಕೆ.ರಾಮದಾಸ್ ಅವರ ಪತ್ನಿ ಆರ್. ನಿರ್ಮಲ (59) ದೀರ್ಘಕಾಲದ ಅನಾರೋಗ್ಯದಿಂದಾಗಿ ಮೈಸೂರಿನ ನಿವಾಸದಲ್ಲಿ ನಿಧನರಾದರು. ಕೆಲವು ತಿಂಗಳ ಹಿಂದೆಯಷ್ಟೆ ಪತಿ ಕೆ.ರಾಮದಾಸ್ ತೀರಿಕೊಂಡಿದ್ದರು. ಮೂರು ದಶಕಗಳ ಕಾಲ ಕನ್ನಡ ಅಧ್ಯಾಪಕಿಯಾಗಿ ಕೆಲಸ  ಮಾಡಿ ನಿವೃತ್ತಿಹೊಂದಿದ್ದ ನಿರ್ಮಲ ತಮ್ಮ ಪತಿಯೊಂದಿಗೆ ಸೇರಿ ನಾಡಿನ ಹಲವಾರು ಪ್ರಗತಿಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ನಿರ್ಮಲ ಅವರ  `ಚಲ್ ಮೇರಿ ಲೂನಾ' ಎಂಬ ಲಲಿತ ಪ್ರಬಂಧ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಪಚ್ಚೆಪೈರು (ಮಕ್ಕಳ  ಸಾಹಿತ್ಯ), ಉರಿವ ಒಲೆಗಳ ಮುಂದೆ (ಕವನ ಸಂಕಲನ) ಪ್ರಕಟವಾಗಿವೆ. 

2007: ಇಂಗ್ಲೆಂಡಿನಲ್ಲಿ ಭಾರತೀಯ ರಾಯಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಕಮಲೇಶ್ ಶರ್ಮಾ ಅವರು ಕಾಮನ್ವೆಲ್ತ್ ಒಕ್ಕೂಟದ ನೂತನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಉಗಾಂಡದ ಕಂಪಾಲಾದಲ್ಲಿ ನಡೆದ ಕಾಮನ್ವೆಲ್ತ್ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯಲ್ಲಿ 66 ವರ್ಷದ ಐ ಎಫ್ ಎಸ್ ಅಧಿಕಾರಿ ಕಮಲೇಶ್ ಅವರನ್ನು ಈ ಮಹತ್ವದ ಹುದ್ದೆಗೆ ಬಹುಮತದಿಂದ ಆಯ್ಕೆ ಮಾಡಲಾಯಿತು.

2007: ಅಂಟಾರ್ಟಿಕ್ ಸಾಗರದಲ್ಲಿ ಮುಳುಗುತ್ತಿದ್ದ ಹಡಗಿನಿಂದ ಬಹುತೇಕ ಎಲ್ಲ 154 ಪ್ರಯಾಣಿಕರು ಹಾಗೂ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾದರು ಎಂದು ಬ್ರಿಟಿಷ್ ಕರಾವಳಿ ರಕ್ಷಣಾ ಪಡೆ ವಕ್ತಾರ ಆ್ಯಂಡಿ ಕಟ್ರೆಲ್ ತಿಳಿಸಿದರು. 154 ಮಂದಿಯನ್ನು ರಕ್ಷಿಸಲು ಅರ್ಜೆಂಟೀನಾ ಹಾಗೂ ಅಮೆರಿಕಾ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ನೆರವು ನೀಡಿದರು.

2006: ಕೆನ್ ಶಾಲೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘವು ಖ್ಯಾತ ಕಲಾವಿದ ಆರ್. ಎಂ. ಹಡಪದ್ ಹೆಸರಿನಲ್ಲಿ ನೀಡುವ ಪ್ರಶಸ್ತಿಯು ಕೆನ್ ಕಲಾ ಶಾಲೆಯ ಪ್ರಾಚಾರ್ಯ ಹಾಗೂ ಕಲಾವಿದ ಜಿ.ಎಂ.ಎನ್. ಮಣಿ ಅವರಿಗೆ ಲಭಿಸಿತು.

2006: ಭೋಪಾಲಿನಿಂದ 30 ಕಿ.ಮೀ. ದೂರದ ಭೋಜಪುರದಲ್ಲಿ ಪರ್ಮಾರ್ ರಾಜಮನೆತನದ ರಾಜಾ ಭೋಜಪಾಲ್ ನಿರ್ಮಿಸಿ ಕಾರಣಾಂತರಗಳಿಂದ ಅಪೂರ್ಣವಾಗಿ ಬಿಟ್ಟಿದ್ದ ಒಂದು ಸಹಸ್ರ ವರ್ಷಗಳ ಹಿಂದಿನ ಶಿವ ದೇವಸ್ಥಾನವನ್ನು ಭಾರತೀಯ ಸರ್ವೇಕ್ಷಣಾಲಯ ಇಲಾಖೆಯು ಪೂರ್ಣಗೊಳಿಸಿತು. ರಾಷ್ಟ್ರದಲ್ಲೇ ಅತ್ಯಂತ ದೊಡ್ಡದಾದ ಈ ದೇವಸ್ಥಾನವು ಕಳೆದ 1000 ವರ್ಷಗಳಿಂದ ಛಾವಣಿ ಇಲ್ಲದೆ ನಿಂತಿತ್ತು. ಸ್ಥಂಭಗಳ ಕೆಲಸವೂ ಅಪೂರ್ಣವಾಗಿತ್ತು. ಶಿವಲಿಂಗ ಬಿಸಿಲಿಗೆ ಒಣಗಿ ಮಳೆಗೆ ನೆನೆಯುತ್ತಿತ್ತು.

2006: ಭಾರತೀಯ ಏರೋನಾಟಿಕಲ್ ಎಂಜಿನಿಯರ್ ಬೆಂಗಳೂರಿನ ಜೋಸೆಫ್ ಪಿಚಮುತ್ತು ಅವರು ವಿಮಾನಗಳ ಸುರಕ್ಷಿತ ಭೂಸ್ಪರ್ಶಕ್ಕೆ ಅನುವು ಮಾಡುವ ಉಪಕರಣವೊಂದನ್ನು ಸಂಶೋಧಿಸಿರುವುದಾಗಿ ಪ್ರಕಟಿಸಿದರು. ಹವಾಮಾನ ವೈಪರೀತ್ಯಗಳ ನಡುವೆಯೂ ವಿಮಾನ ಭೂಸ್ಪರ್ಶ ಮಾಡಬೇಕಿರುವ ರನ್ ವೇ ನಡುವಿನ ಅಂತರವನ್ನು ಈ ಉಪಕರಣದ ಮೂಲಕ ನಿಖರವಾಗಿ ತಿಳಿಯಬಹುದು. ಇದರಿಂದ ಸುರಕ್ಷಿತ ಭೂಸ್ಪರ್ಶ ಮಾಡಲು ಪೈಲಟ್ ಗೆ ಅನುಕೂಲವಾಗುತ್ತದೆ.

2005: ಎನ್ ಡಿ ಎ ನಾಯಕ ನಿತೀಶ್ ಕುಮಾರ್ ಅವರು ಪಟ್ನಾದ ಚಾರಿತ್ರಿಕ ಗಾಂಧಿ ಮೈದಾನದಲ್ಲಿ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಎಂಟೂವರೆ ತಿಂಗಳ ರಾಷ್ಟ್ರಪತಿ ಆಡಳಿತ ಕೊನೆಗೊಂಡು ಜೆಡಿ (ಯು)-ಬಿಜೆಪಿ ಮೈತ್ರಿಕೂಟದ ಆಡಳಿತ ಆರಂಭಗೊಂಡಿತು.

2005: ಸರ್ಕಾರಿ ಸ್ವಾಮ್ಯದ ಎನ್ ಜಿ ಇ ಎಫ್ ಕಾರ್ಖಾನೆಗೆ ಬೀಗಮುದ್ರೆ ಘೋಷಿಸಿ ಆಸ್ತಿ ಮಾರಾಟ ಮಾಡುವ ನಿರ್ಧಾರವನ್ನು ಕೈಬಿಡಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿತು.

1992: ಲೋಕಸಭೆ ಅಧಿವೇಶನವು ವಂದೇ ಮಾತರಂನಿಂದ ಆರಂಭಗೊಂಡು ಜನಗಣಮನದೊಂದಿಗೆ ಅಂತ್ಯಗೊಳ್ಳುವಂತೆ ನಿರ್ಣಯ ಕೈಗೊಳ್ಳಲಾಯಿತು.

1991: ಬ್ರಿಟಿಷ್ ರಾಕ್ ಗ್ರೂಪಿನ ಸಂಗೀತ ರಾಣಿ ಫ್ರೆಡ್ಡೀ ಮರ್ಕ್ಯೂರಿ ಲಂಡನ್ನಿನಲ್ಲಿ ಏಡ್ಸ್ ಪರಿಣಾಮವಾಗಿ ತನ್ನ 45ನೇ ವಯಸ್ಸಿನಲ್ಲಿ ಮೃತರಾದರು.

1969: ಚಂದ್ರ ಗ್ರಹಕ್ಕೆ ಎರಡನೇ ಯಾತ್ರೆಯನ್ನು ಮುಗಿಸಿದ ಅಪೋಲೊ 12 ಗಗನನೌಕೆ ಕ್ಷೇಮವಾಗಿ ಪೆಸಿಫಿಕ್ ಸಾಗರಕ್ಕೆ ಬಂದಿಳಿಯಿತು.

1961: ಖ್ಯಾತ ಲೇಖಕಿ, ಪರಿಸರ ಚಿಂತಕಿ ಅರುಂಧತಿ ರಾಯ್ ಹುಟ್ಟಿದ ದಿನ. ಅವರ ಕಾದಂಬರಿ `ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್' (ಕ್ಷುದ್ರದೇವತೆ) ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಲಭಿಸಿದೆ.

1952: ಮಾಜಿ ಕ್ರಿಕೆಟ್ ಆಟಗಾರ ಬ್ರಿಜೇಶ್ ಪಟೇಲ್ ಹುಟ್ಟಿದ ದಿನ.

1926: ಶ್ರೀ ಅರಬಿಂದೊ ಘೋಷ್ ಅವರು ಪಾಂಡಿಚೇರಿಯಲ್ಲಿ `ಪೂರ್ಣಸಿದ್ಧಿ' ಪಡೆದರು. ಈ ದಿನವನ್ನು ಶ್ರೀ ಅರಬಿಂದೋ ಆಶ್ರಮ ಸ್ಥಾಪನಾ ದಿನ ಎಂಬುದಾಗಿ  ಪರಿಗಣಿಸಲಾಗಿದೆ.

1924: ಖ್ಯಾತ ವ್ಯಂಗ್ಯಚಿತ್ರಕಾರ ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ (ಆರ್. ಕೆ. ಲಕ್ಷ್ಮಣ್) ಹುಟ್ಟಿದ ದಿನ. ಇವರು ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಸಹೋದರ. ಲಕ್ಷ್ಮಣ್ ಅವರ ಸೃಷ್ಟಿ `ಕಾಮನ್ ಮ್ಯಾನ್' ತುಂಬ ಜನಪ್ರಿಯ.

1917: ಐತಿಹಾಸಿಕ ಕಾದಂಬರಿಕಾರರೆಂದೇ ಖ್ಯಾತರಾಗಿದ್ದ ಸಮೇತನಹಳ್ಳಿ ರಾಮರಾಯರು (24-11-1917ರಿಂದ 5-1-1999) ಶ್ರೀನಿವಾಸರಾವ್- ರುಕ್ಮಿಣಿಯಮ್ಮ ದಂಪತಿಯ ಮಗನಾಗಿ ಬೆಂಗಳೂರು ಜಿಲ್ಲೆ ಹೊಸಕೋಟೆಯ ಸಮೇತನಹಳ್ಳಿಯಲ್ಲಿ ಜನಿಸಿದರು.

1896: ಸಂಸ್ಕೃತ ವಿದ್ವಾಂಸ ಕ್ಷಿತಿಶ್ ಚಂದ್ರ ಚಟರ್ಜಿ (1896-1961) ಹುಟ್ಟಿದ ದಿನ.

1859: ಚಾರ್ಲ್ಸ್ ಡಾರ್ವಿನ್ ಅವರ `ಆನ್ ದಿ ಒರಿಜಿನ್ ಆಫ್ ಸ್ಪೀಸೀಸ್' ಪುಸ್ತಕ ಪ್ರಕಟಗೊಂಡಿತು. ಈ ಪುಸ್ತಕ ಡಾರ್ವಿನ್ ಅವರ ವಿಕಾಸವಾದವನ್ನು ವಿವರಿಸುತ್ತದೆ. ಮೊದಲ ಆವೃತ್ತಿಯ ಎಲ್ಲ 1250 ಪ್ರತಿಗಳು ಪ್ರಕಟವಾದ ದಿನವೇ ಮಾರಾಟವಾಗಿ ಹೋದವು.

1642: ಟಾಸ್ಮಾನಿಯಾವನ್ನು ಡಚ್ ಸಂಶೋಧಕ ಅಬೆಲ್ ಟಾಸ್ಮನ್ ಪತ್ತೆ ಹಚ್ಚಿದ. ಈ ಭೂಪ್ರದೇಶಕ್ಕೆ ಆತ ವ್ಯಾನ್ ಡೇಮಿನ್ಸ್ ಲ್ಯಾಂಡ್ ಎಂಬುದಾಗಿ ಡಚ್ ಈಸ್ಟ್ ಇಂಡೀಸ್ ನ ಗವರ್ನರ್ ಜನರಲನ ಹೆಸರನ್ನು ಇಟ್ಟ. ವ್ಯಾನ್ ಡೇಮಿನ್ಸ್ ಆತನ ಸಂಶೋಧನೆಗೆ ನೆರವು ನೀಡಿದ ವ್ಯಕ್ತಿ. 1853ರಲ್ಲಿ ಇದಕ್ಕೆ `ಟಾಸ್ಮಾನಿಯಾ' ಎಂಬುದಾಗಿ ಮರುನಾಮಕರಣ ಮಾಡಲಾಯಿತು.


(ಸಂಗ್ರಹ: ನೆತ್ರಕೆರೆ ಉದಯಶಂಕರ)

Monday 14 December 2009

ಇಂದಿನ ಇತಿಹಾಸ History Today ನವೆಂಬರ್ 23

 ಇಂದಿನ ಇತಿಹಾಸ

ನವೆಂಬರ್ 23
ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಅರ್ಥಶಾಸ್ತ್ರಜ್ಞ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು  ಲಂಡನ್‌ನ 'ಅಂತಾರಾಷ್ಟ್ರೀಯ ಸಿಖ್ ವೇದಿಕೆ' ನೀಡುವ ಪ್ರತಿಷ್ಠಿತ 'ವರ್ಷದ ಸಿಖ್ ವ್ಯಕ್ತಿ' ಪುರಸ್ಕಾರಕ್ಕೆ ಪಾತ್ರರಾದರು. ಇಲ್ಲಿನ ಲಿಂಕನ್ಸ್ ಇನ್‌ನ ಝಗಮಗಿಸುವ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ  ಪ್ರದಾನ ಮಾಡಲಾಯಿತು.

2008: ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಅರ್ಥಶಾಸ್ತ್ರಜ್ಞ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು  ಲಂಡನ್‌ನ 'ಅಂತಾರಾಷ್ಟ್ರೀಯ ಸಿಖ್ ವೇದಿಕೆ' ನೀಡುವ ಪ್ರತಿಷ್ಠಿತ 'ವರ್ಷದ ಸಿಖ್ ವ್ಯಕ್ತಿ' ಪುರಸ್ಕಾರಕ್ಕೆ ಪಾತ್ರರಾದರು. ಇಲ್ಲಿನ ಲಿಂಕನ್ಸ್ ಇನ್‌ನ ಝಗಮಗಿಸುವ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ  ಪ್ರದಾನ ಮಾಡಲಾಯಿತು. ಭಾರತದ ಆಧುನಿಕ ಆರ್ಥಿಕತೆಗೆ ಮೊಂಟೆಕ್ ನೀಡಿದ ಗಣನೀಯ ಕೊಡುಗೆ  ಪರಿಗಣಿಸಿ ಈ ಪುರಸ್ಕಾರ ನೀಡಲಾಗಿದೆ ಎಂದು ವೇದಿಕೆ ವಿವರಿಸಿತು.

2008: ಮಲೇಷ್ಯಾದಲ್ಲಿ ಯೋಗ ನಿಷೇಧಿಸಿ  ರಾಷ್ಟ್ರೀಯ ಫತ್ವಾ ಮಂಡಳಿ ಹೊರಡಿಸಿದ ಆದೇಶಕ್ಕೆ  ಅನೇಕ ಮುಸ್ಲಿಮ್ ಯೋಗ ತರಬೇತುದಾರರು ಅಸಮಾಧಾನ ವ್ಯಕ್ತಪಡಿಸಿದರು. ಮಲೇಷ್ಯಾದಲ್ಲಿನ ಯೋಗ ತರಬೇತಿಯಲ್ಲಿ ಯಾವುದೇ  ಧಾರ್ಮಿಕ ಕಾರಣಗಳಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ಇಸ್ಲಾಮಿನಲ್ಲಿ ಯೋಗ ನಿಷಿದ್ಧ ಮತ್ತು ಮುಸ್ಲಿಮರು ಯೋಗಾಭ್ಯಾಸ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ರಾಷ್ಟ್ರೀಯ ಫತ್ವಾ ಮಂಡಳಿ ಪ್ರಕಟಿಸಿತ್ತು. ಯೋಗದಿಂದ ಇಸ್ಲಾಮಿನಲ್ಲಿ ಇರುವ ನಮ್ಮ ನಂಬಿಕೆಗೆ ಯಾವುದೇ ಹಾನಿ ಇಲ್ಲ ಎಂದು ಯೋಗ ಶಿಕ್ಷಕಿ ನಿನೈ ಅಹ್ಮದ್ ಹೇಳಿದರು.

2008:  ಭಾರತದ ಇತಿಹಾಸ, ಸಂಸ್ಕೃತಿ ಹಾಗೂ ರಾಜಕೀಯ ಸ್ಥಿತಿಗತಿ ಅರಿತಕೊಳ್ಳಲು ಅನುವಾಗುವಂತೆ ತನ್ನ ಪ್ರೌಢಶಾಲೆಗಳಲ್ಲಿ  ಭಾರತದ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದಾಗಿ ಸಿಂಗಪುರ ಪ್ರಕಟಿಸಿತು. ವಿಕ್ಟೋರಿಯ ಜೂನಿಯರ್ ಕಾಲೇಜು ಮುಂದಿನ ವರ್ಷದ ಶೈಕ್ಷಣಿಕ ವರ್ಷದಿಂದ  ಭಾರತದ ಅಧ್ಯಯನದ ಪಠ್ಯ ಪರಿಚಯಿಸುತ್ತಿದೆ ಎಂದು ಶಾಲಾ ಅಧಿಕಾರಿಗಳು ತಿಳಿಸಿದರು.

2008: ಆಫ್ಘಾನಿಸ್ಥಾನ ವಲಯದಲ್ಲಿ ನೆಲೆಸಿರುವ ಭಯೋತ್ಪಾದಕರನ್ನು ಕಿತ್ತೊಗೆಯುವುದಕ್ಕೆ ತಾವು ಮೊದಲ ಆದ್ಯತೆ ನೀಡುವುದಾಗಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬರಾಕ್ ಒಬಾಮ ಸ್ಪಷ್ಟಪಡಿಸಿದರು.

2008: ಸಶಸ್ತ್ರ ಪಡೆಯಲ್ಲಿ ಲಿಂಗ ಸಮಾನತೆಗೆ ಒತ್ತು ನೀಡಿದ  ದೆಹಲಿ ಹೈಕೋರ್ಟ್,  ಮಹಿಳಾ ಅಧಿಕಾರಿಗಳ ಕುಂದುಕೊರತೆ ಆಲಿಸಲು ತ್ವರಿತವಾಗಿ ಶಾಶ್ವತ ಆಯೋಗ ರಚಿಸುವಂತೆ  ಕೇಂದ್ರಕ್ಕೆ ನಿರ್ದೇಶನ ನೀಡಿತು. ಇನ್ನು ಮುಂದೆ ನೇಮಕಮಾಡಿಕೊಳ್ಳುವ ಮಹಿಳಾ ಅಧಿಕಾರಿಗಳ ಅಹವಾಲು ಆಲಿಸಲು ಶಾಶ್ವತ ಆಯೋಗ ರಚಿಸಲು ನಿರ್ಧರಿಸುವುದಾಗಿ ಸರ್ಕಾರ ಹೇಳಿಕೆ ನೀಡಿದ ಬೆನ್ನಲ್ಲಿಯೇ ದೆಹಲಿ ಹೈಕೋರ್ಟ್ ಈ ಸೂಚನೆ ನೀಡಿತು.

2008: ತಬಲಾ ಬಾರಿಸುವುದರ ಜೊತೆಗೆ ಸತತ 12 ಗಂಟೆಗಳ ಕಾಲ ತಾವೇ ಸ್ವತಃ ಹಾಡುಗಳನ್ನು ಹಾಡುವ ಮೂಲಕ ಜಾನಪದ ಗಾಯಕ ಬಿ. ವಿಜಯಕುಮಾರ್ 'ಲಿಮ್ಕಾ' ದಾಖಲೆ ಸ್ಥಾಪಿಸುವ ಪ್ರಯತ್ನ ಮಾಡಿದರು. ಮಡಿಕೇರಿಯ ರಾಜಾಸೀಟು ಉದ್ಯಾನದಲ್ಲಿ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಸತತವಾಗಿ ತಬಲಾ ಬಾರಿಸುವುದರ ಜೊತೆಗೆ, ಸುಮಾರು 200ಕ್ಕೂ ಅಧಿಕ ಜಾನಪದ, ಭಾವಗೀತೆ ಹಾಗೂ ರಂಗ ಗೀತೆಗಳನ್ನು ಹಾಡಿದರು. 'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್' ಕಂಪೆನಿಯ ಸೂಚನೆ ಮೇರೆಗೆ ಈ ಕಾರ್ಯಕ್ರಮ ನಡೆಸಿಕೊಟ್ಟದ್ದಾಗಿ ವಿಜಯಕುಮಾರ್ ತಿಳಿಸಿದರು. ಮೂಲತಃ ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲ್ ಬಳಿಯ ಚಾಮರಾಯನಕೋಟೆಯ ನಿವಾಸಿಯಾದ ವಿಜಯಕುಮಾರ್, ಪ್ರಸ್ತುತ ಕುಶಾಲನಗರ ಸಮೀಪದ ಹೆಬ್ಬಾಲೆಯಲ್ಲಿ ನೆಲೆಸಿದ್ದು ಹಾರಂಗಿ ಬಳಿಯ ಅತ್ತೂರು ಜ್ಞಾನಗಂಗಾ ಶಾಲೆಯಲ್ಲಿ ಹಿಂದಿ ಶಿಕ್ಷಕ. ಈಗಾಗಲೇ ಸತತ 48 ಗಂಟೆಗಳ ಕಾಲ ತಬಲಾ ಬಾರಿಸಿರುವುದು ಲಿಮ್ಕಾ ದಾಖಲೆಯಲ್ಲಿದೆ. ಆದರೆ, ಸತತ 12 ಗಂಟೆಗಳ ಕಾಲ ತಬಲಾ ಬಾರಿಸುವುದರ ಜೊತೆಗೆ, ಹಾಡುಗಳನ್ನು ಹಾಡಿರುವುದು ಇದೇ ಮೊದಲು ಎನ್ನಲಾಗಿದೆ. 'ನನ್ನ ಹೆಸರು ಲಿಮ್ಕಾ ದಾಖಲೆ ಸೇರಿದ ನಂತರ ಮುಂದಿನ ವರ್ಷ  48 ಗಂಟೆಗಳ ಕಾಲ ಕಾರ್ಯಕ್ರಮ ನಡೆಸುವ ಗುರಿ ಹೊಂದಿದ್ದೇನೆ' ಎಂದು ವಿಜಯಕುಮಾರ್ ಹೇಳಿದರು.

2007: ಸರಣಿ ಭಯೋತ್ಪಾದನಾ ಕೃತ್ಯಗಳಿಂದ ಉತ್ತರ ಪ್ರದೇಶ ತತ್ತರಿಸಿತು. ವಾರಣಾಸಿ, ಫೈಜಾಬಾದ್ ಮತ್ತು ಲಖನೌ ಸಿವಿಲ್ ನ್ಯಾಯಾಲಯಗಳ ಆವರಣಗಳಲ್ಲಿ ಈದಿನ ಮಧ್ಯಾಹ್ನ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಕೆಲವು ವಕೀಲರು ಸೇರಿ 14 ಜನ ಮೃತರಾಗಿ, ಇತರ 65ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ತಮ್ಮ ಪರವಾಗಿ ವಾದಿಸಲು ನಿರಾಕರಿಸಿದ ವಕೀಲ ಸಮುದಾಯದ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ಉಗ್ರರು ಈ ಸ್ಫೋಟ ನಡೆಸಿದ್ದಾರೆ ಎಂದು ಪೊಲೀಸರು ಶಂಕಿಸಿದರು. 2006ರ ಬಳಿಕ ಸಂಭವಿಸಿದ ಪ್ರಮುಖ ಬಾಂಬ್ ಸ್ಫೋಟಗಳು: 3ನೇ ಮಾರ್ಚ್ 2006: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮೂರು ಬಾಂಬ್ ಸ್ಫೋಟ-  28 ಜನರ ಸಾವು. 14ನೇ ಏಪ್ರಿಲ್ 2006: ಹಳೆ ದೆಹಲಿಯ ಮಸೀದಿಯೊಂದರಲ್ಲಿ ಶಕ್ತಿಶಾಲಿಯಲ್ಲದ ಬಾಂಬ್ ಸ್ಫೋಟ. 11ನೇ ಜುಲೈ 2006: ಮುಂಬೈ ಸ್ಥಳೀಯ ರೈಲು ಜಾಲದ ನಿಲ್ದಾಣ, ಮಾರ್ಗಗಳಲ್ಲಿ 11 ನಿಮಿಷಗಳಲ್ಲಿ 7 ಬಾಂಬ್ಗಳ ಸ್ಫೋಟ- 209 ಜನರ ಸಾವು. 8ನೇ ಸೆಪ್ಟೆಂಬರ್ 2006: ಮಹಾರಾಷ್ಟ್ರದ ಮಾಲೆಗಾಂವ್ ಪಟ್ಟಣದ ಮೂರು ಕಡೆ ಏಕಕಾಲದಲ್ಲಿ ಬಾಂಬ್ ಸ್ಫೋಟ - 38 ಜನರ ಸಾವು. 19ನೇ ಫೆಬ್ರುವರಿ 2007: ದೆಹಲಿ ಮತ್ತು ಲಾಹೋರ್ ನಡುವೆ ಓಡಾಡುವ ಸಮ್ ಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ಫೋಟ, ಪರಿಣಾಮವಾಗಿ ಅಗ್ನಿದುರಂತ-  68 ಜನರ ಸಾವು. 18 ಮೇ 2007:  ಹೈದರಾಬಾದಿನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಫೋಟ- 9 ಸಾವು, ಪೊಲೀಸ್ ಗೋಲಿಬಾರಿಗೆ 5 ಜನರ ಬಲಿ. 26 ಆಗಸ್ಟ್ 2007:  ಹೈದರಾಬಾದಿನ ಜನಪ್ರಿಯ ಚಾಟ್ ಸೆಂಟರ್ ಹಾಗೂ ವಿಹಾರ ತಾಣ ಲುಂಬಿಣಿ ಉದ್ಯಾನದಲ್ಲಿ ಸರಣಿ ಸ್ಫೋಟ-  42 ಜನರ ಸಾವು

2007: ಹತ್ತು ಮಂದಿ ಮಹನೀಯರಿಗೆ `ಆಳ್ವಾಸ್ ನುಡಿಸಿರಿ ಪ್ರಶಸ್ತಿ' ಯನ್ನು ಪ್ರಕಟಿಸಲಾಯಿತು. ಪ್ರಶಸ್ತಿಗೆ ಪಾತ್ರರಾದವರು: ಡಾ. ಮತ್ತೂರು ಕೃಷ್ಣಮೂರ್ತಿ, (ಕನ್ನಡ ಸಂಸ್ಕೃತಿ ಪ್ರಸರಣ), ಪ್ರೊ. ಅ.ರಾ.ಮಿತ್ರ (ಸಾಹಿತ್ಯ), ಕೆ.ಎಸ್.ಅಶ್ವತ್ಥ್ (ಚಲನಚಿತ್ರ), ಎಂ.ಬಿ.ಸಿಂಗ್ (ಪತ್ರಿಕೋದ್ಯಮ). ಬಿ.ಎಂ.ಇದಿನಬ್ಬ (ಕನ್ನಡ ಚಳವಳಿ), ಡಾ. ಪಿ.ಎಸ್. ಶಂಕರ್ (ವೈದ್ಯಕೀಯ ಸಾಹಿತ್ಯ), ಆನಂದ ಗಾಣಿಗ (ರಂಗಭೂಮಿ, ಸಂಘಟನೆ), ಪ್ರೊ. ಸುನೀತಾ ಶೆಟ್ಟಿ (ಹೊರನಾಡು, ಕನ್ನಡ ಸಾಹಿತ್ಯ), ಕರ್ನೂರು ಕೊರಗಪ್ಪ ರೈ (ಯಕ್ಷಗಾನ) ಮತ್ತು ಪ್ರೇಮಾ ಭಟ್ (ಸಾಹಿತ್ಯ).

2007: ಮಾಂಡೊವಿ ನದಿಗೆ ತಾಗಿಕೊಂಡಂತಿರುವ ಪಣಜಿಯ ಕಲಾ ಅಕಾಡೆಮಿಯ ಸಭಾಂಗಣದಲ್ಲಿ ಈದಿನ ಸಂಜೆ ಜರುಗಿದ ಸರಳ, ಸುಂದರ ಸಮಾರಂಭದಲ್ಲಿ ಯುವ ಪೀಳಿಗೆಯ ಮೆಚ್ಚಿನ ನಟ ಶಾರುಖ್ ಖಾನ್, 38ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

2007: ಕೋಲ್ಕತ್ತ ಗಲಭೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವಿವಾದಾತ್ಮಕ ಬರಹಗಾರ್ತಿ ತಸ್ಲಿಮಾ ನಸ್ರೀನ್ ಅವರನ್ನು ಜೈಪುರದಿಂದ ದೆಹಲಿಗೆ ಕರೆದೊಯ್ಯಲಾಯಿತು.

2007: 59 ಮಂದಿಯನ್ನು ಬಲಿ ತೆಗೆದುಕೊಂಡಿದ್ದ 1997ರ ಉಪಾಹಾರ್ ಚಿತ್ರ ಮಂದಿರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಚಿತ್ರ ಮಂದಿರದ ಮಾಲೀಕರಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಹಾಗೂ ಚಿತ್ರಮಂದಿರಕ್ಕೆ ಲೈಸೆನ್ಸ್ ನೀಡಿದ್ದ ಡಿಸಿಪಿ ವಿರುದ್ಧ ಹೊಸದಾಗಿ ತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಲಾಯಿತು.

2007: ರಾಷ್ಟ್ರದಲ್ಲಿ ತುರುಸ್ಥಿತಿ ಹೇರಿದ ಪಾಕಿಸ್ಥಾನವನ್ನು ಕಾಮನ್ವೆಲ್ತ್ ರಾಷ್ಟ್ರಗಳ ಸಚಿವರ ಸಮಾವೇಶವು ತನ್ನ 53 ರಾಷ್ಟ್ರಗಳ ಒಕ್ಕೂಟದಿಂದ ಅಮಾನತುಗೊಳಿಸಿತು.

2006: ದೆಹಲಿಯ ಸುಮಾರು 18,000 ಮಂದಿ ವರ್ತಕರು ಮತ್ತು ವೃತ್ತಿ ನಿರತರಿಗೆ ವಸತಿ ಪ್ರದೇಶಗಳಲ್ಲಿನ ಅಕ್ರಮ ವಾಣಿಜ್ಯ ಕಟ್ಟಡಗಳ ಬೀಗಮುದ್ರೆ ಕಾರ್ಯಾಚರಣೆಯಿಂದ ತಾತ್ಕಾಲಿಕ ರಕ್ಷಣೆ ಒದಗಿಸಲು ಸುಪ್ರೀಂಕೋರ್ಟ್ ಆಜ್ಞಾಪಿಸಿತು. ವಸತಿ ಪ್ರದೇಶಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳುವುದಿಲ್ಲ ಎಂಬುದಾಗಿ ಬರೆದು ಕೊಟ್ಟಿರುವ ತಮ್ಮ ವಚನವನ್ನು ಇವರು ಪಾಲಿಸಿದ್ದಾರೆ ಎಂಬುದಾಗಿ ನ್ಯಾಯಾಲಯದ ಪರಿಶೀಲನಾ ಸಮಿತಿ ನೀಡಿರುವ ವರದಿಯನ್ನು ಅನುಸರಿಸಿ ಸುಪ್ರೀಂಕೋರ್ಟ್ ಈ ಕ್ರಮ ಕೈಗೊಂಡಿತು.

2006: ಇರಾಕ್ ರಾಜಧಾನಿ ಬಾಗ್ದಾದಿನ ದಕ್ಷಿಣದಲ್ಲಿನ ಶಿಯಾ ಪ್ರಾಬಲ್ಯದ ಸದರ್ ನಗರದಲ್ಲಿ ಸರಣಿ ಆತ್ಮಾಹುತಿ ಕಾರುಬಾಂಬ್ ದಾಳಿಗಳಲ್ಲಿ 154 ಜನ ಮೃತರಾಗಿ 250ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2005: ಐದು ದಿನಗಳ ಹಿಂದೆ ತಾಲಿಬಾನ್ ಉಗ್ರರಿಂದ ಅಪಹರಣಗೊಂಡ ಭಾರತೀಯ ಚಾಲಕ ಮಣಿಯಪ್ಪನ್ ಕುಟ್ಟಿ (36) ಅವರ ಶವ ದಕ್ಷಿಣ ಆಫ್ಘಾನಿಸ್ತಾನದ ನಿಮ್ರೋಜ್ ಪ್ರಾಂತ್ಯದ ದೇಲರಾಂ ಜ್ಲಿಲೆಯಲ್ಲಿ ಪತ್ತೆಯಾಯಿತು. ಬಾರ್ಡರ್ ರೋಡ್ಸ್ ಸಂಸ್ಥೆಯಲ್ಲಿ ಚಾಲಕರಾಗಿದ್ದ ಕುಟ್ಟಿ ಅವರನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆಗೈದದ್ದು ಇದರೊಂದಿಗೆ ಬೆಳಕಿಗೆ ಬಂತು.
1991: ಧುಲೆಯಲ್ಲಿ ಭಾಸ್ಕರಾಚಾರ್ಯ ಸಂಶೋಧನಾ ಕೇಂದ್ರದ ಸ್ಥಾಪನೆ.

1983: ಭಾರತದ ನವದೆಹಲಿಯಲ್ಲಿ ಮೊತ್ತ ಮೊದಲ ಬಾರಿಗೆ ಕಾಮನ್ವೆಲ್ತ್ ಮುಖ್ಯಸ್ಥರ ಸಭೆ (ಸಿ ಎಚ್ ಓ ಜಿ ಎಂ) ನಡೆಯಿತು.

1979: ಸಾಹಿತಿ ಮಂಜುಶ್ರೀ ಹೊಸಮನಿ ಜನನ.

1956: ದಕ್ಷಿಣ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಅಪಘಾತವೊಂದು ಟ್ಯುಟಿಕಾರನ್- ಮದ್ರಾಸ್ ಎಕ್ಸ್ ಪ್ರೆಸ್ ರೈಲುಗಾಡಿಗೆ ಈದಿನ ಬೆಳಗಿನ ಜಾವ ಸಂಭವಿಸಿತು. 104 ಜನ ಮೃತರಾದರು. ತಿರುಚಿನಾಪಳ್ಳಿಗೆ ಸಮೀಪದ ಅರಿಯಲೂರು ಮತ್ತು ಕಳಗಂ ನಿಲ್ದಾಣಗಳ ಮಧ್ಯೆ ಈ ಅಪಘಾತ ಸಂಭವಿಸಿತು.

1939: ಅಂಕಣಗಾರ್ತಿ, ಸಂಪಾದಕಿ, ಅಧ್ಯಾಪಕಿಯಾಗಿ ಖ್ಯಾತರಾದ ಸಾಹಿತಿ ಉಷಾ ನವರತ್ನರಾಂ (23-11-1989ರಿಂದ 1-10-2000) ಅವರು ಎಂ.ವಿ. ಸುಬ್ಬರಾವ್- ಶಾಂತಾ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.
1937: ಭಾರತದ ಸಸ್ಯವಿಜ್ಞಾನಿ ಹಾಗೂ ಭೌತವಿಜ್ಞಾನಿ ಸರ್. ಜಗದೀಶ ಚಂದ್ರ ಬೋಸ್ (1858-1937) ಅವರು ತಮ್ಮ 79ನೇ ಹುಟ್ಟು ಹಬ್ಬಕ್ಕೆ ಒಂದು ವಾರ ಮೊದಲು ನಿಧನರಾದರು.

1936: `ಲೈಫ್' ಮ್ಯಾಗಜಿನ್ ನ ಮೊದಲ ಸಂಚಿಕೆ ಪ್ರಕಟಗೊಂಡಿತು. ಇದು ಹೆನ್ರಿ ಆರ್. ಲ್ಯೂಸ್ ಅವರ ಸೃಷ್ಟಿ.

1915: ಸಾಹಿತಿ ಎಸ್. ಆರ್. ಚಂದ್ರ ಜನನ.

1925: ಭಾರತೀಯ ಆಧ್ಯಾತ್ಮಿಕ ಧುರೀಣ ಪುಟ್ಟಪರ್ತಿಯ ಸತ್ಯಸಾಯಿ ಬಾಬಾ ಹುಟ್ಟಿದ ದಿನ.

1899: ಸಾಹಿತಿ ಬೆಂಗೇರಿ ಮಾಸ್ತರ ಜನನ.

1897: ಭಾರತೀಯ ವಿದ್ವಾಂಸ, ಬರಹಗಾರ ನೀರದ್ ಸಿ. ಚೌಧುರಿ (1897-1999) ಹುಟ್ಟಿದ ದಿನ.

1889: ನಾಣ್ಯ ಹಾಕಿದರೆ ಸಂಗೀತ ಹಾಡುವ ಸಂಗೀತ ಪೆಟ್ಟಿಗೆ `ಜ್ಯೂಕ್ ಬಾಕ್ಸ್' ಮೊತ್ತ ಮೊದಲ ಬಾರಿಗೆ ಸ್ಥಾಪನೆಗೊಂಡಿತು. ಲೂಯಿ ಗ್ಲಾಸ್ ಎಂಬ ಉದ್ಯಮಿ ಹಾಗೂ ಅವರ ಸಹೋದ್ಯೋಗಿ ವಿಲಿಯಂ ಎಸ್ ಅರ್ನಾಲ್ಡ್ ಅವರು ನಾಣ್ಯ ಹಾಕಿದರೆ ಹಾಡುವಂತಹ `ಎಡಿಸನ್ ಸಿಲಿಂಡರ್ ಫೊನೋಗ್ರಾಫ್' ನ್ನು ಸ್ಯಾನ್ ಫ್ರಾನ್ಸಿಸ್ಕೊದ ಪಲಾಯಿಸ್ ರಾಯಲ್ ಸಲೂನಿನಲ್ಲಿ ಸ್ಥಾಪಿಸಿದರು. ಈ ಯಂತ್ರ ಅದ್ಭುತ ಯಶಸ್ಸು ಗಳಿಸಿತು. ಕೇವಲ ಆರು ತಿಂಗಳಲ್ಲಿ 1000 ಡಾಲರ್ ಆದಾಯವನ್ನು ಇದು ತಂದು ಕೊಟ್ಟಿತು.

1885: ಸಾಹಿತಿ ಕಂದಗಲ್ ಹನುಮಂತರಾಯ ಜನನ.

1882: ಭಾರತೀಯ ಕೈಗಾರಿಕೋದ್ಯಮಿ ವಾಲ್ ಚಂದ್ ಹೀರಾಚಂದ್ ದೋಶಿ (1882-1953) ಹುಟ್ಟಿದ ದಿನ. ಇವರು ಭಾರತದ ಮೊತ್ತ ಮೊದಲ ಹಡಗುಕಟ್ಟೆ (ಶಿಪ್ ಯಾರ್ಡ್), ಮೊದಲ ವಿಮಾನ ಕಾರ್ಖಾನೆ ಹಾಗೂ ಮೊದಲ ಕಾರು ಕಾರ್ಖಾನೆ ಸ್ಥಾಪಿಸಿದವರು. ಮುಂಬೈ-ಪುಣೆ ನಡುವಣ ಭೋರ್- ಘಾಟ್ ಟನೆಲ್ಸ್ ನಿರ್ಮಿಸಿದ್ದೂ ಇವರ ನಿರ್ಮಾಣ ಸಂಸ್ಥೆಯೇ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Saturday 12 December 2009

ಇಂದಿನ ಇತಿಹಾಸ History Today ನವೆಂಬರ್ 22

ಇಂದಿನ ಇತಿಹಾಸ

ನವೆಂಬರ್ 22

ಕಲರ್ಸ್‌ ಟಿವಿಯಲ್ಲಿ ಮೂರು ತಿಂಗಳಿನಿಂದ ಪ್ರಸಾರವಾಗುತ್ತಿದ್ದ  'ಬಿಗ್ ಬಾಸ್' ರಿಯಾಲಿಟಿ ಶೋದ ಅಂತಿಮ ಸುತ್ತಿನಲ್ಲಿ ಅಶುತೋಷ್ ಕೌಶಿಕ್ ವಿಜಯಿಯಾದರು. ರಿಯಾಲಿಟಿ ಶೋ ನಿರೂಪಕಿ ಶಿಲ್ಪಾ ಶೆಟ್ಟಿ ಹಾಗೂ ಸ್ಪರ್ಧಾಳುಗಳ ಹಾಜರಿಯಲ್ಲಿ ಹಿಂದಿ ಚಿತ್ರನಟ ಅಕ್ಷಯ್ ಕುಮಾರ್ ಅಶುತೋಷ್ ಹೆಸರು ಮಹಾರಾಷ್ಟ್ರದ ಲೋನಾವಾಲಾದಲ್ಲಿ ಈ ವಿಚಾರ ಪ್ರಕಟಿಸಿದರು

2008: ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಸ್.ಎ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಕೃಷಿ ಮಿಷನ್ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಅಧಿಕಾರೇತರ ಸದಸ್ಯರಾಗಿ ಶಿವಮೊಗ್ಗದ ಪ್ರಗತಿಪರ ರೈತ ಡಾ. ಪ್ರಫುಲ್ಲಚಂದ್ರ, ಹುನಗುಂದದ ಮಲ್ಲಣ್ಣ ನಾಗರಾಳ್, ಬಾಗಲಕೋಟೆಯ ಬೆನಕಟ್ಟೆಯ ಎಸ್.ಎನ್. ಅಮಟಪ್ಪನವರ್, ಗುಲ್ಬರ್ಗದ ಬಸವರಾಜ ಜೀವಣಗಿ, ಬೆಳಗಾವಿಯ ಶರದ್ ಪೈ, ರಾಯಚೂರಿನ ಪ್ರೊ. ಸಿ.ಪಾಟೀಲ್, ಬೆಂಗಳೂರು ಕೃಷಿ ವಿ.ವಿಯ ವಿಶ್ರಾಂತ ಕುಲಪತಿಗಳಾದ ಡಾ.ಮಹದೇವಪ್ಪ ಹಾಗೂ ಡಾ. ಎಸ್.ಬಿಸಲಯ್ಯ, ಗುಲ್ಬರ್ಗದ ಬಸವರಾಜ ಇಂಗಿನ್, ಬಿಎಐಎಫ್‌ನ ಜಿ.ಎನ್.ಎಸ್.ರೆಡ್ಡಿ, ಲಕ್ಷ್ಮೀಶ ತೋಳ್ಪಾಡಿ, ಕೋಲಾರದ ಪಾಪಮ್ಮ ಅವರನ್ನು ಸರ್ಕಾರ ನೇಮಿಸಿತು.

2008:  ಕಲರ್ಸ್‌ ಟಿವಿಯಲ್ಲಿ ಮೂರು ತಿಂಗಳಿನಿಂದ ಪ್ರಸಾರವಾಗುತ್ತಿದ್ದ  'ಬಿಗ್ ಬಾಸ್' ರಿಯಾಲಿಟಿ ಶೋದ ಅಂತಿಮ ಸುತ್ತಿನಲ್ಲಿ ಅಶುತೋಷ್ ಕೌಶಿಕ್ ವಿಜಯಿಯಾದರು. ರಿಯಾಲಿಟಿ ಶೋ ನಿರೂಪಕಿ ಶಿಲ್ಪಾ ಶೆಟ್ಟಿ ಹಾಗೂ ಸ್ಪರ್ಧಾಳುಗಳ ಹಾಜರಿಯಲ್ಲಿ ಹಿಂದಿ ಚಿತ್ರನಟ ಅಕ್ಷಯ್ ಕುಮಾರ್ ಅಶುತೋಷ್ ಹೆಸರು ಮಹಾರಾಷ್ಟ್ರದ ಲೋನಾವಾಲಾದಲ್ಲಿ ಈ ವಿಚಾರ ಪ್ರಕಟಿಸಿದರು. ಕೊಡಗು ಮೂಲದ ರೂಪದರ್ಶಿ ಜುಲ್ಫಿ ಸಯ್ಯದ್ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು. ರಾಜಾ ಚೌಧುರಿ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರು.

2008:  ಮಲೇಷ್ಯಾದಲ್ಲಿ ಕೆಲವು ತಿಂಗಳುಗಳಿಂದ ತೀವ್ರ ಚರ್ಚೆಗೆ ಕಾರಣವಾಗಿದ್ದ 'ಯೋಗ ನಿಷೇಧ' ವಿಷಯವು ನಿರ್ಣಾಯಕ ಹಂತಕ್ಕೆ ಬಂದಿತು. ಅಲ್ಲಿನ ಅತ್ಯುಚ್ಚ ಇಸ್ಲಾಮ್ ಸಮಿತಿಯು ಈದಿನದಿಂದ ಅನ್ವಯವಾಗುವಂತೆ ಯೋಗದ ಮೇಲೆ ನಿಷೇಧ ವಿಧಿಸಿತು. ರಾಷ್ಟ್ರೀಯ ಫತ್ವಾ ಮಂಡಲಿ ಧಾರ್ಮಿಕ ಆದೇಶವನ್ನು ಹೊರಡಿಸಿ ಯೋಗದ ಆಚರಣೆಯಲ್ಲಿ ತೊಡಗಲು ಮುಸ್ಲಿಮರಿಗೆ ಇಸ್ಲಾಮಿನಲ್ಲಿ ಅವಕಾಶವಿಲ್ಲ ಎಂದು ಹೇಳಿತು. ಯೋಗವು ಕೇವಲ ಅಂಗಸಾಧನೆಯನ್ನು ಮಾತ್ರ ಒಳಗೊಂಡಿಲ್ಲ. ದೈವ ಪೂಜೆ ಹಾಗೂ ಮಂತ್ರ ಪಠಣವನ್ನೂ ಅದು ಒಳಗೊಂಡಿದ್ದು, ಇಸ್ಲಾಮಿನಲ್ಲಿ ಅವಕ್ಕೆ ಅವಕಾಶವಿಲ್ಲ ಎಂದೂ ಆದೇಶದಲ್ಲಿ ವಿವರಿಸಲಾಯಿತು.  2.7 ಕೋಟಿ ಜನಸಂಖ್ಯೆಯ ಈ ರಾಷ್ಟ್ರದ ಮೂರನೇ ಎರಡು ಭಾಗದಷ್ಟು ಜನ ಮುಸ್ಲಿಮರಾಗಿದ್ದು ಹಿಂದೂ ಧರ್ಮದ ಅವಿಭಾಜ್ಯ ಅಂಗವಾದ ಯೋಗಾಭ್ಯಾಸದ ಪ್ರಭಾವದೆಡೆಗೆ ಇಸ್ಲಾಮ್ ಧರ್ಮೀಯರು ಹೆಚ್ಚೆಚ್ಚು ಆಕರ್ಷಿತರಾಗಬಹುದು ಎಂಬ ಚಿಂತೆಯೇ ಫತ್ವಾ ಮಂಡಳಿಯ ಈ ನಿರ್ಧಾರಕ್ಕೆ ಕಾರಣವೆಂದು ವಿಶ್ಲೇಷಿಸಲಾಯಿತು. ಈ ಮಧ್ಯೆ, 'ಸಿಸ್ಟರ್ಸ್‌ ಇನ್ ಇಸ್ಲಾಮ್' ಎಂಬ ಸರ್ಕಾರೇತರ ಸಂಘಟನೆಯೊಂದು ಫತ್ವಾ ಮಂಡಳಿಯ ನಿಲುವನ್ನು ವಿರೋಧಿಸಿತು. ಫತ್ವಾ ಮಂಡಲಿಯು ರಾಷ್ಟ್ರದ ಮಹಿಳೆಯರನ್ನು, ವಿಶೇಷವಾಗಿ ಮುಸ್ಲಿಮ್ ಸ್ತ್ರೀಯರನ್ನು ಮುಂಚಿನಿಂದಲೂ ತಾರತಮ್ಯ ದೃಷ್ಟಿಯಿಂದ ಹಾಗೂ ಭೋಗದ ವಸ್ತುವೆಂಬಂತೆಯೇ ನೋಡಿಕೊಂಡು ಬಂದಿದೆ ಎಂದು ಸಂಘಟನೆ ಟೀಕಿಸಿತು.

2008: ಒಂದು ಕಾಲದ ವೈರಿಯಾಗಿದ್ದ ಲಿಬಿಯಾಕ್ಕೆ 36 ವರ್ಷಗಳ ನಂತರ ರಾಯಭಾರಿಯನ್ನು ಕಳುಹಿಸಲು ಅಮೆರಿಕ ಸೆನೆಟ್ ಒಪ್ಪಿಗೆ ನೀಡಿತು. ಅಮೆರಿಕದ ಹಿರಿಯ ರಾಯಭಾರಿ ಜಿನಿ ಕ್ರೆಟ್ಜ್ ಅವರನ್ನು ಈ ಸ್ಥಾನಕ್ಕೆ ಸೆನೆಟ್ ನಿಯೋಜಿಸಿತು.

2007: `ಕರ್ನಾಟಕದಲ್ಲಿ ಯಾರ ಜೊತೆಗೂಡಿಯೂ ಸರ್ಕಾರ ರಚಿಸುವುದಿಲ್ಲ, ವಿಧಾನಸಭೆ ವಿಸರ್ಜನೆ ಖಂಡಿತ. ಇದು ಸ್ಫಟಿಕದಷ್ಟು ಸ್ಪಷ್ಟ.' ಎಂಬುದಾಗಿ ಘೋಷಿಸುವ ಮೂಲಕ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ನವದೆಹಲಿಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಹಾರಾಡುತ್ತಿದ್ದ ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆದರು. `ರಾಷ್ಟ್ರಪತಿ ಆಳ್ವಿಕೆಯ ಘೋಷಣೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ನವೆಂಬರ್ 21ರಂದು ಮಂಡಿಸಲಾಗಿದೆ. ಅಲ್ಲಿ ಅಂಗೀಕಾರ ಸಿಕ್ಕಿದ ನಂತರ ವಿಧಾನಸಭೆ ವಿಸರ್ಜನೆಯಾಗಲಿದೆ. ಅದಕ್ಕೆ ಮತ್ತೊಮ್ಮೆ ಸಂಪುಟ ಸಭೆ ಸೇರುವ ಅಗತ್ಯವೂ ಇಲ್ಲ' ಎಂದು ಸಿಂಘ್ವಿ ಸ್ಪಷ್ಟ ಪಡಿಸಿದರು.

2007: ಕೊಪ್ಪಳದ ವಸಂತ ಕುಷ್ಟಗಿ, ಚಿತ್ರದುರ್ಗದ ಬಿ.ಎಲ್.ವೇಣು, ನಂಜನಗೂಡಿನ ಮುಳ್ಳೂರು ನಾಗರಾಜ್, ಮೈಸೂರಿನ ಡಾ. ಕೆ.ವಿ.ನಾರಾಯಣ ಹಾಗೂ ಧಾರವಾಡದ ಹೇಮಾ ಪಟ್ಟಣಶೆಟ್ಟಿ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಸಕ್ತ ಸಾಲಿನ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿತು. ಅಕಾಡೆಮಿಯ ಅಧ್ಯಕ್ಷೆ ಗೀತಾ ನಾಗಭೂಷಣ ಅವರು ಈ ವಿಚಾರವನ್ನು ಪ್ರಕಟಿಸಿದರು.

2007: ಕೆಳ ನ್ಯಾಯಾಲಯದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾರುವೇಷದ ಕಾರ್ಯಾಚರಣೆ ನಡೆಸಿ ಪ್ರಸಾರ ನಡೆಸಿದ ಖಾಸಗಿ ದೂರದರ್ಶನ ವಾಹಿನಿ ಹಾಗೂ ಅದರ ವರದಿಗಾರ ಬೇಷರತ್ ಕ್ಷಮಾಪಣೆ ಕೇಳಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು. ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರನ್ನು ಒಳಗೊಂಡ ಪೀಠವು ಪ್ರತಿವಾದಿಗಳು ಸಲ್ಲಿಸಿದ ಪ್ರಮಾಣ ಪತ್ರದ ಬಗ್ಗೆ ಸಂತೃಪ್ತರಾಗದೆ ಪ್ರಕರಣದ ಬಗ್ಗೆ  4 ವಾರಗಳ ನಂತರ ವಿಚಾರಣೆ ನಡೆಸಲು ಸೂಚಿಸಿತು. ಜೀ ಟಿವಿ 2004ರಲ್ಲಿ ಮಾರುವೇಷದ ಕಾರ್ಯಾಚರಣೆ ನಡೆಸಿ `ಕ್ಯಾಶ್ ಫಾರ್ ವಾರಂಟ್ ಸ್ಕಾಮ್' ಕಾರ್ಯಕ್ರಮ ಬಿತ್ತರಿಸಿತ್ತು. ಅದರಲ್ಲಿ ಅಹಮದಾಬಾದಿನ ಮೂವರು ವಕೀಲರು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ, ಮಾಜಿ ಮುಖ್ಯ ನ್ಯಾಯಮೂರ್ತಿ ವಿ.ಎನ್.ಖರೆ, ಅಂದಿನ ಅಪೆಕ್ಸ್ ಕೋರ್ಟಿನ ನ್ಯಾಯಮೂರ್ತಿ ಬಿ.ಪಿ.ಸಿಂಗ್ ಮತ್ತು ಹಿರಿಯ ವಕೀಲ ದಿ.ಆರ್.ಕೆ. ಜೈನ್ ವಿರುದ್ಧ ಜಾಮೀನು ವಾರಂಟ್ ಪಡೆಯಲು ರೂ.40,000 ಲಂಚ ಪಡೆದಿರುವ ಬಗ್ಗೆ ಬಿತ್ತರಿಸಲಾಗಿತ್ತು. 

2007: ಉತ್ತರ ಅಮೆರಿಕದಲ್ಲಿ ಕೃತಜ್ಞತಾ ಸ್ಮರಣೆ ದಿನ ಆಚರಿಸಲಾಯಿತು. ಸುಗ್ಗಿಯ ಹಿನ್ನೆಲೆಯ ಈ ಸಂಭ್ರಮದ ಹಬ್ಬ `ಥ್ಯಾಂಕ್ಸ್ ಗಿವಿಂಗ್' ಆಚರಣೆ ಎಂದೇ ಪ್ರಸಿದ್ಧಿ ಪಡೆದಿದೆ. ಈ ಸಂಬಂಧ ಒಂದು ದಿನ ಮೊದಲು ನೆವಾಡಾದಲ್ಲಿನ ಇಗರ್ಜಿಯೊಂದರಲ್ಲಿ (ಚರ್ಚ್) ನಡೆದ ಆರಾಧನೆಯ ಸಂದರ್ಭದಲ್ಲಿ ಸಂಸ್ಕೃತ ಮಂತ್ರಗಳನ್ನು ಪಠಿಸಲಾಯಿತು. ನೆವಾಡಾದ ರಿನೋ ಪ್ರದೇಶದಲ್ಲಿರುವ ಎಪಿಸ್ಕೋಪಲ್ ಇಗರ್ಜಿಯಲ್ಲಿ ಆರಾಧನೆ ನಡೆದಾಗ ಪಾದ್ರಿ ರಜನ್ ಜೇಡ್ ಅವರು, ಋಗ್ವೇದ, ಉಪನಿಷತ್ ಹಾಗೂ ಭಗವದ್ಗೀತೆ ಶ್ಲೋಕಗಳನ್ನು ಪಠಿಸಿದರು.

2007: ಸುಸ್ತಿದಾರರಿಂದ ಸಾಲ ವಸೂಲಿಗೆ ನೇಮಿಸಿಕೊಂಡ ಖಾಸಗಿ ಸಂಸ್ಥೆಯು ಕಾರು ಜಪ್ತಿ ಮಾಡಿಕೊಂಡದ್ದಕ್ಕಾಗಿ ಪುಣೆಯ ಗ್ರಾಹಕರ ವ್ಯಾಜ್ಯ ಪರಿಹಾರ ನ್ಯಾಯಾಲಯವು, ಸಾಲ ಪಡೆದ ಮಹಿಳೆಗೆ ರೂ 1 ಲಕ್ಷ ಪರಿಹಾರ ನೀಡುವಂತೆ ಖಾಸಗಿ ವಲಯದ ಐಸಿಐಸಿಐ ಬ್ಯಾಂಕಿಗೆ ಆದೇಶಿಸಿತು. ಬ್ಯಾಂಕಿನ ಗ್ರಾಹಕರಾಗಿರುವ ರೇಣು ಭಂಡ್ವಾಳಕರ್ ಅವರಿಗೆ ಆಗಿರುವ ಮಾನಸಿಕ ಕಿರುಕುಳಕ್ಕೆ ಪ್ರತಿಯಾಗಿ ಈ ಮೊತ್ತದ ಪರಿಹಾರ ನೀಡಬೇಕೆಂದು ಗ್ರಾಹಕ ನ್ಯಾಯಾಲಯ ಸೂಚಿಸಿತು. ಸಾಲ ವಸೂಲಿಗೆ ತಾವು ನೀಡಿದ್ದ ಸಲಹೆಯನ್ನು ಬ್ಯಾಂಕ್ ಸಮರ್ಪಕವಾಗಿ ಪಾಲಿಸಿರಲಿಲ್ಲ. ತಮ್ಮ ಉಳಿತಾಯ ಖಾತೆಯಿಂದ ಸಾಲದ ಮೊತ್ತ ಮರು ಪಾವತಿ ಮಾಡಿಕೊಳ್ಳಲು ನೀಡಿದ್ದ ಚೆಕ್ಕುಗಳನ್ನು ಸರಿಯಾಗಿ ಬಳಸದ ಕಾರಣಕ್ಕೆ ತಾವು ಸುಸ್ತಿದಾರರಾಗಬೇಕಾಯಿತು. ಇದೇ ನೆಪ ಮುಂದಿಟ್ಟುಕೊಂಡು ಸಾಲ ವಸೂಲಿ ಏಜೆಂಟರು ತಮ್ಮ ಕಾರನ್ನು ಜಪ್ತಿ ಮಾಡಿಕೊಂಡಿದ್ದರು. ಅದರಲ್ಲಿ ಲ್ಯಾಪ್ ಟಾಪ್ ಅಳವಡಿಸಲಾಗಿತ್ತು ಎಂದು ರೇಣು ಅವರು ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು.

2006: ಕೋಲ್ಕತ್ತದ ಪೂರ್ವ ವಲಯದ ಟೊಪ್ಸಿಯಾ ಪ್ರದೇಶದಲ್ಲಿ ಚರ್ಮದ ಕಾರ್ಖಾನೆಗೆ ಬೆಂಕಿ ತಗುಲಿ 9 ಕಾರ್ಮಿಕರು ಮೃತರಾಗಿ 12 ಮಂದಿ ಗಂಭೀರವಾಗಿ ಗಾಯಗೊಂಡರು.

2006: ಕ್ಯಾನ್ಸರ್ ಅಥವಾ ಅಣು ವಿಕಿರಣ ಕಾಯಿಲೆಗೆ ಆಯುರ್ವೇದದ `ತ್ರಿಫಲ' ಚೂರ್ಣ ರಾಮಬಾಣ ಎಂದು ಮುಂಬೈಯ ಭಾಭಾ ಅಣು ಸಂಶೋಧನಾ ಕೇಂದ್ರದ (ಬಿ ಎ ಆರ್ ಸಿ) ಜೊತೆಗೆ ಈ ಹಿಂದೆ ಕೆಲಸ ಮಾಡಿದ್ದ ಖ್ಯಾತ ವಿಕಿರಣ ಜೀವ ಶಾಸ್ತ್ರಜ್ಞ ಎಂ.ಪಿ. ಮಿಶ್ರ ಪ್ರತಿಪಾದಿಸಿದರು. ಬನಾರಸ್ ಹಿಂದೂ ವಿಶ್ವ ವಿದ್ಯಾಲಯವು ಆಯೋಜಿಸಿದ್ದ ಐದನೇ ಅಂತಾರಾಷ್ಟ್ರೀಯ `ಮಾನವ ಆರೋಗ್ಯ ಮತ್ತು ಪರಿಸರದ ಮೇಲೆ ಕನಿಷ್ಠ ಪ್ರಮಾಣದ ವಿಕಿರಣ ಪರಿಣಾಮ' (ಲೋ ಡೋಸ್ ರೇಡಿಯೇಷನ್ ಎಫೆಕ್ಟ್ಸ್ ಆನ್ ಹ್ಯೂಮನ್ ಹೆಲ್ತ್ ಮತ್ತು ಎನ್ವಿರಾನ್ ಮೆಂಟ್) ಸಮಾವೇಶದಲ್ಲಿ ಈ ವಿಚಾರ ತಿಳಿಸಿದರು. ತ್ರಿಫಲ ಚೂರ್ಣವು ಅಳಲೆ, ನೆಲ್ಲಿ ಹಾಗೂ ತಾರೆ ಕಾಯಿಗಳ ಸಮ ಪ್ರಮಾಣದ ಮಿಶ್ರಣದಿಂದ ತಯಾರಾಗುವ ಚೂರ್ಣ. ಈ ಚೂರ್ಣಕ್ಕೆ ಕ್ಯಾನ್ಸರಿನಂತಹ ಮಾರಣಾಂತಿಕ ರೋಗ ನಿವಾರಿಸುವ ಶಕ್ತಿ ಇದೆ. ಅದು ದೇಹದ ರೋಗ ನಿರೋಧಕ ಶಕ್ತಿ ವರ್ಧಕ. ಅದು ಬೇಧಿ ನಿವಾರಕ ಟಾನಿಕ್ ಅಷ್ಟೇ ಅಲ್ಲ, ಶೀತ, ಜ್ವರ, ಗ್ಯಾಸ್ಟ್ರಿಕ್ ಹಾಗೂ ಅಲರ್ಜಿಯಂತಹ ಇತರ ಕಾಯಿಲೆಗಳಿಗೂ ಸಿದ್ಧೌಷಧ. ತ್ರಿಫಲ ಔಷಧದ ಮತ್ತೊಂದು ವಿಶೇಷ ಗುಣವೆಂದರೆ, ಮನುಷ್ಯನ ದೇಹದೊಳಗೆ ಇದು ಹೊಕ್ಕ ಕೂಡಲೇ, ರೋಗಗ್ರಸ್ತ ಹಾಗೂ ಆರೋಗ್ಯಯುತ ಜೀವಕೋಶಗಳನ್ನು ಗುರುತಿಸುತ್ತದೆ. ರೋಗಗ್ರಸ್ತವಾದವುಗಳನ್ನು ಕೊಂದು, ಹೊಸ ಜೀವಕೋಶಗಳನ್ನು ಸೃಷ್ಟಿಸುತ್ತದೆ. ಆರೋಗ್ಯಯುತ ಜೀವಕೋಶಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬುದು ಮಿಶ್ರ ವಿವರಣೆ. ಡಾ. ಮಿಶ್ರ, ಬಾಬಾ ಅಣು ಸಂಶೋಧನಾ ಕೇಂದ್ರದಲ್ಲಿ ಸೈನಿಕರಿಗೆ ಅಣುವಿಕಿರಣದಿಂದ ಉಂಟಾಗುವ ತೊಂದರೆ ನಿವಾರಣೆ ಹಾಗೂ ಅವರ ದೇಹಕ್ಕೆ ಬಂದೆರಗುವ ರೋಗಗಳನ್ನು ಶಮನಗೊಳಿಸಲು ಔಷಧ ಕಂಡು ಹಿಡಿಯವ ಯೋಜನೆಯಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ತ್ರಿಫಲದಲ್ಲಿ ಇಂಥ ಶಕ್ತಿಯುತ ಔಷಧವಿದೆ ಎಂದು ಕಂಡು ಹಿಡಿದಿರುವ ಡಾ.ಸಂಧ್ಯಾ ಅವರು ಈ ಯೋಜನೆಯ ಸದಸ್ಯರಲ್ಲಿ ಒಬ್ಬರು.

2006: ರಾಷ್ಟ್ರಕವಿ ಗೌರವಕ್ಕೆ ಪಾತ್ರರಾಗಿರುವ ಕನ್ನಡದ ಹಿರಿಯ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಕುವೆಂಪು ವಿವಿ ಸಿಂಡಿಕೇಟ್ ಸಭೆ ನಿರ್ಧರಿಸಿತು.

2006: ಕೋಲ್ಕತ್ತದ ಪೂರ್ವ ವಲಯದ ಟೊಪ್ಸಿಯಾ ಪ್ರದೇಶದಲ್ಲಿ ಚರ್ಮದ ಕಾರ್ಖಾನೆಗೆ ಬೆಂಕಿ ತಗುಲಿದ್ದರಿಂದ ಒಂಬತ್ತು ಕಾರ್ಮಿಕರು ಮೃತರಾಗಿ 12 ಮಂದಿ ಗಾಯಗೊಂಡರು.

2006: ಚಲನಚಿತ್ರಗಳ ಹಂಚಿಕೆದಾರ, `ಟ್ರಿಣ್ ಟ್ರಿಣ್' ಚಿತ್ರದ ನಿರ್ಮಾಪಕ ಎ.ಎನ್. ರಂಗಸ್ವಾಮಿ (57) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

2006: ಖ್ಯಾತ ವಿಜ್ಞಾನಿ ಮತ್ತು ಶಿಕ್ಷಣ ತಜ್ಞೆ ಅಸೀಮಾ ಚಟರ್ಜಿ (90) ಕೋಲ್ಕತ್ತಾದಲ್ಲಿ ನಿಧನರಾದರು. ಶುದ್ಧ ರಸಾಯನಶಾಸ್ತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಅಸೀಮಾ, ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರಾಗಿದ್ದರು. ಪದ್ಮಭೂಷಣ ವಿಜೇತರೂ ಆಗಿದ್ದ ಅವರು ರಾಜ್ಯಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು.

2005: ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಯು)- ಬಿಜೆಪಿ ಮೈತ್ರಿಕೂಟ ನಿಚ್ಚಳ ಬಹುಮತ ಗಳಿಸುವ ಮೂಲಕ ಲಾಲೂ ಪ್ರಸಾದ್ ಯಾದವ್ ಅವರ 15 ವರ್ಷಗಳ `ಲಾಲೂ ಯುಗ'ಕ್ಕೆ ಮಂಗಳ ಹಾಡಿತು.

2005: ಹಿರಿಯ ಬಾಲಿವುಡ್ ಚಿತ್ರ ನಿರ್ದೇಶಕ, `ನಗೀನಾ' ಹಾಗೂ `ನಿಗಾಹೇಂ' ಚಿತ್ರಗಳ ಖ್ಯಾತಿಯ ಹರ್ಮೇಶ್ ಮಲ್ಹೋತ್ರಾ (66) ಅವರು ಮುಂಬೈಯಲ್ಲಿ ಹೃದಯಾಘಾತದಿಂದ ನಿಧನರಾದರು. ಪಾಕಿಸ್ಥಾನದ ಖುಸಬ್ ಪ್ರಾಂತ್ಯದಲ್ಲಿ ಜನಿಸಿದ್ದ ಮಲ್ಹೋತ್ರಾ ದೇಶವಿಭಜನೆ ಬಳಿಕ ಆಗ್ರಾಕ್ಕೆ ವಲಸೆ ಬಂದಿದ್ದರು. ಪದವಿ ಪಡೆದ ನಂತರ ಚಿತ್ರೋದ್ಯಮದಲ್ಲಿ ಭವಿಷ್ಯ ಅರಸಿ ಮುಂಬೈಗೆ ಬಂದಿದ್ದರು. 70ರ ದಶಕದಲ್ಲಿ ಬಿಡುಗಡೆಯಾದ `ಬೇಟಿ' ಅವರ ಚೊಚ್ಚಲ ಚಿತ್ರ. ಸಂಜಯಖಾನ್ ಮತ್ತು ನಂದಾ ಇದರಲ್ಲಿ ನಟಿಸಿದ್ದರು. 1972ರಲ್ಲಿ ತಮ್ಮದೇ ಆದ ಎಚ್.ಎಂ. ಪ್ರೊಡಕ್ಷನ್ಸ್ ಸ್ಥಾಪಿಸಿ `ಗದ್ದಾರ್' ಚಿತ್ರ ನಿರ್ದೇಶಿಸಿದರು. ರಿಷಿ ಕಪೂರ್, ಶ್ರೀದೇವಿ ಹಾಗೂ ಅಮರೇಶಪುರಿ ನಟಿಸಿದ `ನಗೀನಾ' ಚಿತ್ರ ಅವರಿಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿತು. ನಂತರ ಅದರ ಮುಂದಿನ ಭಾಗವಾಗಿ `ನಿಗಾಹೇಂ' ಬಂತು. ಗೋವಿಂದ ನಟಿಸಿದ `ದುಲ್ಹೆ ರಾಜಾ' ಕೂಡಾ ಅವರ ಯಶಸ್ವಿ ಚಿತ್ರಗಳ ಪೈಕಿ ಒಂದು.

2005: ಹಿರಿಯ ಪತ್ರಕರ್ತ ಎಂ. ಮಲ್ಲಿಕಾರ್ಜುನಯ್ಯ ಬೆಂಗಳೂರಿನಲ್ಲಿ ನಿಧನರಾದರು. 'ಪೊಲೀಸ್ ನ್ಯೂಸ್' ಪತ್ರಿಕೆಯ ಮೂಲಕ ಕನ್ನಡದಲ್ಲಿ ಕ್ರೈಂ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ್ದ ಅವರು 'ಆದರ್ಶ ಗಂಡ ಹೆಂಡತಿ' ಮಾಸಪತ್ರಿಕೆ, ಮುಂಬೈಯಲ್ಲಿ `ಕರ್ನಾಟಕ ಮಲ್ಲ' ದಿನಪತ್ರಿಕೆ ಹಾಗೂ ಮಂಗಳೂರಿನಲ್ಲಿ `ಮಂಗಳೂರು ಮಿತ್ರ' ಸಂಜೆ ಪತ್ರಿಕೆ ಆರಂಭಿಸಿ ಯಶಸ್ಸು ಪಡೆದಿದ್ದರು.

1990: ಬ್ರಿಟನ್ ಪ್ರಧಾನ ಮಂತ್ರಿ ಮಾರ್ಗರೆಟ್ ಥ್ಯಾಚರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದರು.

2000: ಜೆಕ್ ಓಟಗಾರ ಎಮಿಲ್ ಝಾಟೊಪೆಕ್ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾದರು. 1952ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 5000 ಮತ್ತು 10,000 ಮೀಟರ್ ಓಟಗಳಲ್ಲಿ ಭಾಗವಹಿಸಿ ಅವರು ದಾಖಲೆ ನಿರ್ಮಿಸಿದ್ದರು.

1986: ಕಾನ್ಪುರದಲ್ಲಿ ನಡೆದ ಶ್ರೀಲಂಕಾ ಜೊತೆಗಿನ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗಾವಸ್ಕರ್ ಅವರು ತಮ್ಮ 34ನೇ ಟೆಸ್ಟ್ ಸೆಂಚುರಿ (176) ಸಿಡಿಸಿದರು.

1967: ಜರ್ಮನಿಯ ಟೆನಿಸ್ ಆಟಗಾರ ಬೋರಿಸ್ ಬೆಕರ್ ಹುಟ್ಟಿದ ದಿನ. ವಿಂಬಲ್ಟನ್ನಿನಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಚಾಂಪಿಯನ್ ಆಗುವ ಮೂಲಕ ಅತ್ಯಂತ ಕಿರಿಯ ಟೆನಿಸ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು.

1963: ಅಮೆರಿಕಾದ ಅಧ್ಯಕ್ಷ ಕೆನಡಿ ಅವರನ್ನು ಡಲ್ಲಾಸಿನಲ್ಲಿ ಮೋಟಾರು ವಾಹನ ರ್ಯಾಲಿಯಲ್ಲಿಪಾಲ್ಗೊಂಡ್ದಿದಾಗ ಕೊಲೆಗೈಯಲಾಯಿತು. ಟೆಕ್ಸಾಸಿನ ಗವರ್ನರ್ ಜಾನ್ ಬಿ. ಕೊನ್ನಾಲ್ಲಿ ಅವರು ಗಂಭೀರವಾಗಿ ಗಾಯಗೊಂಡರು. ಶಂಕಿತ ವ್ಯಕ್ತಿ ಲೀ ಹಾರ್ವೇ ಓಸ್ವಾಲ್ಡನನ್ನು ಬಂಧಿಸಲಾಯಿತು. ಉಪಾಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಅವರು ಅಮೆರಿಕದ 36ನೇ ಅಧ್ಯಕ್ಷರಾದರು.

1956: ಸಾಹಿತಿ ಅಕ್ಕಮಹಾದೇವಿ ಜನನ.

1939: ಖ್ಯಾತ ಸಂಶೋಧಕ, ಅನುವಾದಕ, ಪ್ರೊ. ಬಾಲಚಂದ್ರ ಜಯಶೆಟ್ಟಿ ಅವರು ಭೀಮಣ್ಣ- ಜಯಮ್ಮ ದಂಪತಿಯ ಮಗನಾಗಿ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರದಲ್ಲಿ ಜನಿಸಿದರು.

1919: ಸಾಹಿತಿ ಸೀತಮ್ಮ ನಂಜೇಗೌಡ ಜನನ.

1902: ಸಾಹಿತಿ ಚುಳುಕಿ ಗೋವಿಂದ ವೆಂಕಟೇಶ ಜನನ.

1774: ಯೋಧ ಹಾಗೂ ಬಂಗಾಳದ ಮೊತ್ತ ಮೊದಲ ಬ್ರಿಟಿಷ್ ಆಡಳಿತಗಾರ ರಾಬರ್ಟ್ ಕ್ಲೈವ್ ತನ್ನ 49 ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಭಾರತದಲ್ಲಿ ಬ್ರಿಟಿಷ್ ಆಡಳಿತ ಸ್ಥಾಪನೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ ವ್ಯಕ್ತಿಗಳಲ್ಲಿ ಈತನೂ ಒಬ್ಬ.


(ಸಂಗ್ರಹ: ನೆತ್ರಕೆರೆ ಉದಯಶಂಕರ)

Friday 11 December 2009

ಇಂದಿನ ಇತಿಹಾಸ History Today ನವೆಂಬರ್ 21

ಇಂದಿನ ಇತಿಹಾಸ

ನವೆಂಬರ್ 21

`ಜೈಹಿಂದ್' ಬರಹ ಹೊತ್ತ ಸ್ವತಂತ್ರ ಭಾರತದ ಮೊತ್ತ ಮೊದಲ ಅಂಚೆ ಚೀಟಿ ಬಿಡುಗಡೆಗೊಂಡಿತು.


2008: 2000 ಇಸವಿಯಲ್ಲಿ ರಾಜ್ಯವನ್ನು ತಲ್ಲಣಗೊಳಿಸಿದ್ದ ಸರಣಿ ಇಗರ್ಜಿ (ಚರ್ಚ್) ಸ್ಫೋಟ ಪ್ರಕರಣದಲ್ಲಿ ಪಾಲ್ಗೊಂಡಿದ್ದ ದೀನ್‌ದಾರ್ ಅಂಜುಮನ್ ಸಂಘಟನೆಯ 23 ಮಂದಿ ವಿರುದ್ಧದ ಆರೋಪವು ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಯಿತು. ಈ ಎಲ್ಲ ಆರೋಪಿಗಳ ಶಿಕ್ಷೆಯ ಪ್ರಮಾಣವನ್ನು ಮರುದಿನ ಪ್ರಕಟಿಸುವುದಾಗಿ ನ್ಯಾಯಾಧೀಶ ಎಸ್.ಎಂ. ಶಿವನಗೌಡರ್ ತಿಳಿಸಿದರು. ಇದೇ ವೇಳೆ ಪ್ರಕರಣದ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. 2000ನೇ ಇಸವಿಯಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಗುಲ್ಬರ್ಗಾದ ವಿವಿಧ ಇಗರ್ಜಿಗಳ (ಚರ್ಚ್‌) ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಅದೇ ಸಾಲಿನ ಜುಲೈ 10ರಂದು ಬೆಂಗಳೂರಿನ ಜಗಜೀವನರಾಮ್ ನಗರದ ಸೇಂಟ್ ಪೀಟರ್ ಮತ್ತು ಪಾಲ್ ಇಗರ್ಜಿಯಲ್ಲಿ (ಚರ್ಚ್‌) ದುಷ್ಕರ್ಮಿಗಳು ಬಾಂಬ್ ಸ್ಫೋಟಿಸಿದ್ದರು. ಇದಕ್ಕೂ ಮೊದಲು ಹುಬ್ಬಳ್ಳಿಯ ಸೇಂಟ್‌ ಜಾನ್ ಲೂಥರನ್ಸ್ ಇಗರ್ಜಿ (ಚರ್ಚ್) ಮತ್ತು ಗುಲ್ಬರ್ಗದ ವಾಡಿಯಲ್ಲಿ ಕೂಡ ಸ್ಫೋಟ ನಡೆಸಿದ್ದರು. ರಾಜ್ಯದಲ್ಲಿ ಕೋಮು ಗಲಭೆ ಹುಟ್ಟು ಹಾಕುವ ಉದ್ದೇಶದಿಂದ ದುಷ್ಕರ್ಮಿಗಳು ಇಗರ್ಜಿಗಳ ಮೇಲೆ ಬಾಂಬ್ ದಾಳಿ ನಡೆಸಿದ್ದರು. ಬೆಂಗಳೂರಿನ ಜಗಜೀವನರಾಮ್ ನಗರದ ಇಗರ್ಜಿಯಲ್ಲಿ (ಚರ್ಚ್‌) ಬಾಂಬ್ ಇಟ್ಟ ದುಷ್ಕರ್ಮಿಗಳು ಮಾರುತಿ ವ್ಯಾನಿನಲ್ಲಿ ಮರಳುತ್ತಿದ್ದ ವೇಳೆ ವಾಹನದಲ್ಲಿದ್ದ ಬಾಂಬ್ ಮಾಗಡಿ ರಸ್ತೆಯ ಮಿನರ್ವ ಮಿಲ್ ಸಮೀಪ ಸ್ಫೋಟಗೊಂಡಿತ್ತು. ಕಾರಿನಲ್ಲಿದ್ದ ಮೂವರ ಪೈಕಿ ಇಬ್ಬರು ಮೃತರಾಗಿದ್ದರು. ಆದರೆ ವಾಹನ ಚಾಲನೆ ಮಾಡುತ್ತಿದ್ದ ಮಹಮ್ಮದ್ ಇಬ್ರಾಹಿಂ ಗಾಯಗೊಂಡಿದ್ದ. ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಇಗರ್ಜಿ ಮೇಲಿನ ದಾಳಿಯ ಬಗ್ಗೆ ಮಾಹಿತಿ ನೀಡಿದ್ದ. ಈ ಘಟನೆ ಇಗರ್ಜಿ ಮೇಲಿನ ದಾಳಿಯ ತನಿಖೆಗೆ ಮಹತ್ವದ ತಿರುವು ನೀಡಿತ್ತು.

2008: ಕಳೆದ ಎರಡು ದಶಕಗಳಲ್ಲಿ ಜಮ್ಮು ಕಾಶ್ಮೀರದಾದ್ಯಂತ ನಡೆದ ಭಯೋತ್ಪಾದಕ ಕೃತ್ಯಗಳಿಗೆ 47 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ, ಅವರಲ್ಲಿ 20 ಸಾವಿರ ಮಂದಿ ನಾಗರಿಕರಾಗಿದ್ದರೆ, ಉಗ್ರಗಾಮಿಗಳು ನಡೆಸಿದ ವಿವಿಧ ದಾಳಿಗಳಲ್ಲಿ 7 ಸಾವಿರ ಪೊಲೀಸ್ ಸಿಬ್ಬಂದಿ ಹಾಗೂ ವಿಶೇಷ ಪೊಲೀಸ್ ಅಧಿಕಾರಿಗಳು ಹತರಾಗಿದ್ದಾರೆ.  ಭದ್ರತಾ ಸಿಬ್ಬಂದಿ 20 ಸಾವಿರ ಉಗ್ರರನ್ನು ಕೊಂದು ಹಾಕಿದ್ದಾರೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್.ಎಸ್.ಕಪೂರ್ ಮಾಹಿತಿ ನೀಡಿದರು.

2008: ಮಾಜಿ ಕೇಂದ್ರ ಸಚಿವ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಸಂಬಂಧಿ ದಯಾನಿಧಿ ಮಾರನ್ ಡಿಎಂಕೆ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಚೆನ್ನೈಯಲ್ಲಿ ಘೋಷಿಸಿದರು. ತನ್ನ ರಾಜೀನಾಮೆ ಕುರಿತು ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕರುಣಾನಿಧಿಯವರಿಗೆ  ಬರೆದಿರುವ ಪತ್ರದಲ್ಲಿ 'ಒಂದೂವರೆ ವರ್ಷದ ಹಿಂದೆ ತನ್ನ ಹಾಗೂ ತನ್ನ ಸಹೋದರ ಕಲಾನಿಧಿ ಮಾರನ್ ಮೇಲೆ ನಡೆದ ಹಲ್ಲೆಯಿಂದ ಬೇಸತ್ತು ಪಕ್ಷ ತ್ಯಜಿಸುತ್ತಿರುವುದಾಗಿ' ವಿವರಿಸಿದರು. ತನ್ನ ರಾಜೀನಾಮೆ ಹಾಗೂ ಪಕ್ಷದ ಅಧ್ಯಕ್ಷರಿಗೆ ಬರೆದ ಪತ್ರವನ್ನು ಕಿಕ್ಕಿರಿದ ಪತ್ರಿಕಾ ಗೋಷ್ಠಿಯಲ್ಲಿ ದಯಾನಿಧಿ ಮಾರನ್ ಬಿಡುಗಡೆ ಮಾಡಿದರು

2008: ಖ್ಯಾತ ಪಾಪ್ ಗಾಯಕ ಮೈಕೆಲ್ ಜಾಕ್ಸನ್ ಇಸ್ಲಾಮ್ ಧರ್ಮಕ್ಕೆ ಮತಾಂತರ ಹೊಂದಿ ತಮ್ಮ ಹೆಸರನ್ನು ಮಿಕಾಯಿಲ್ ಎಂದು ಬದಲಾಯಿಸಿಕೊಂಡರು.  ಲಾಸ್‌ ಏಂಜಲೀಸಿನಲ್ಲಿನ ತಮ್ಮ ಭವ್ಯ ಕಟ್ಟಡದ ಗೃಹ ಪ್ರವೇಶವನ್ನು  'ಕುರಾನ್' ಧರ್ಮಗ್ರಂಥ ನಿಯಮಾನುಸಾರ ಮಾಡುವುದಾಗಿ ಪ್ರಮಾಣ ಅವರು ಪ್ರಮಾಣ ಮಾಡಿದರು ಎಂದು ವರದಿಗಳು ತಿಳಿಸಿದವು. 

2008: ಮೇ ತಿಂಗಳಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಿಯಾಚಿನ್ ಪ್ರಾಂತ್ಯದಲ್ಲಿ ಸುಮಾರು 19 ಸಾವಿರ ಶಾಲಾ ಮಕ್ಕಳು ಮೃತರಾದರು ಎಂದು ಚೀನಾ ಇದೇ ಮೊದಲ ಬಾರಿಗೆ ಬಹಿರಂಗಪಡಿಸಿತು. ಅಂದು ನಡೆದ ದುರಂತದಲ್ಲಿ ಸುಮಾರು 90 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದರು. ಕೆಲವು ಶಾಲೆಗಳು ಕುಸಿದಿದ್ದವು. ಆದರೆ ಎಷ್ಟು ಶಾಲಾ ಮಕ್ಕಳು ಮೃತರಾಗಿದ್ದರು ಎಂಬ ಸತ್ಯವನ್ನು ಸರ್ಕಾರ ಹೇಳಿರಲಿಲ್ಲ.

2007: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿನ ಹಿಂಸಾಚಾರದ ಖಂಡನೆ ಹಾಗೂ ಬಾಂಗ್ಲಾದೇಶದ ವಿವಾದಾತ್ಮಕ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರ ವೀಸಾವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಅಲ್ಪಸಂಖ್ಯಾತರ ವೇದಿಕೆಯ ಕರೆಯ ಮೇರೆಗೆ ನಡೆದ ಮೂರು ಗಂಟೆಗಳ ಬಂದ್ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಜವಾಬ್ದಾರಿಯನ್ನು ಸೇನೆಗೆ ವಹಿಸಲಾಯಿತು. ಇದರೊಂದಿಗೆ  `ನಂದಿಗ್ರಾಮ ಪ್ರಕರಣ'ವು ಹೊಸ ತಿರುವು ಪಡೆದುಕೊಂಡಿತು. ಕೇಂದ್ರ ಕೋಲ್ಕತ್ತದ ವಿವಿಧ ಕಡೆ ಹಿಂಸಾಚಾರವನ್ನು ತಡೆಗಟ್ಟುವುದಕ್ಕಾಗಿ ಐದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರಿ ಕರ್ಫ್ಯೂ ಹೇರಲಾಯಿತು. ಗಲಭೆಕೋರರು ನೂರಾರು ವಾಹನಗಳಿಗೆ ಬೆಂಕಿ ಹಚ್ಚಿದರು. ಸುಮಾರು 70ಕ್ಕೂ ಹೆಚ್ಚು ಮಂದಿ ಹಿಂಸಾತ್ಮಕ ಘಟನೆಗಳಲ್ಲಿ ಗಾಯಗೊಂಡರು.

2007: ಚಿತ್ರನಟ ವಿಜಯ್ ಮೇಲೆ ಹೇರಿದ್ದ ಒಂದು ವರ್ಷದ ನಿಷೇಧವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೆಗೆದುಹಾಕಿತು. `ಚಂಡ' ಚಿತ್ರದ ಡಬ್ಬಿಂಗ್ ವಿವಾದದ ಕಾರಣಕ್ಕೆ ವಿಜಯ್ ಮೇಲೆ ಈ ಮೊದಲು ಮಂಡಳಿ 1 ವರ್ಷ ನಿಷೇಧ ಹೇರಿತ್ತು. ನಂತರ ಹಿರಿಯ ನಟ ಅಂಬರೀಷ್ ಮಧ್ಯಸ್ಥಿಕೆಯಲ್ಲಿ ಇನ್ನೊಂದು ಸಭೆ ನಡೆಸಿ, ನವೆಂಬರ್ 7ರಂದು ಡಬ್ಬಿಂಗ್ ಮಾಡಿಕೊಡುವಂತೆ ವಿಜಯ್ ಅವರಿಗೆ ಸೂಚಿಸಲಾಗಿತ್ತು. ಆದರೆ ಆ ಹೊತ್ತಿಗೆ ಚಿತ್ರದ ಡಿಟಿಎಸ್ ಪ್ರಕ್ರಿಯೆ ಮುಗಿದಿದ್ದ ಕಾರಣ ವಿಜಯ್ ಕೈಲಿ ಡಬ್ಬಿಂಗ್ ಮಾಡಿಸುವುದು ಸಾಧ್ಯವಿಲ್ಲ ಎಂದು `ಚಂಡ' ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಎಸ್.ನಾರಾಯಣ್ ಹೇಳಿದ್ದರು. ಈದಿನ ಮಂಡಳಿಯ ಸಂಧಾನ ಸಮಿತಿ ಸಭೆ ನಡೆಸಿ, ವಿಜಯ್ ಮೇಲಿನ ನಿಷೇಧ ತೆಗೆದುಹಾಕಿತು. ವಿಜಯ್ ಗೆ ತಮ್ಮ ತಪ್ಪುಗಳ ಅರಿವಾಗಿರುವುದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಮಂಡಳಿಯ ಗೌರವ ಕಾರ್ಯದರ್ಶಿ ಕೆ.ವಿ. ವಿಜಯ್ ಕುಮಾರ್ ತಿಳಿಸಿದರು.

2007: ಮಲೇಷ್ಯಾದಲ್ಲಿರುವ ಬಡ ಭಾರತೀಯರ ದುಃಸ್ಥಿತಿಗೆ ಬ್ರಿಟಿಷ್ ವಸಾಹತುಶಾಹಿ ಆಡಳಿತವೇ ಕಾರಣ, ಅಂಥ ಭಾರತೀಯರ ಸಂಕಷ್ಟಗಳಿಗೆ 4 ಸಾವಿರ ಶತಕೋಟಿ ಡಾಲರ್ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕ್ವಾಲಾಲಂಪುರದ ಭಾರತೀಯ ಸಮುದಾಯಕ್ಕೆ ಸೇರಿದ ವೈತ ಮೂರ್ತಿ ಎಂಬ ವ್ಯಕ್ತಿ ಬ್ರಿಟಿಷರ ವಿರುದ್ಧ ಹೋರಾಡಲು ಮುಂದಾದರು. ಮಲೇಷ್ಯಾ ಸರ್ಕಾರ ಇದು ಆಧಾರರಹಿತ ಪ್ರಕರಣವೆಂದು ಆತನ ಆರೋಪಗಳನ್ನು ತಳ್ಳಿಹಾಕಿತು. ಆದರೆ ಪಟ್ಟು ಬಿಡದ, ವೃತ್ತಿಯಲ್ಲಿ ವಕೀಲರಾಗಿರುವ ವೈತ ಮೂರ್ತಿ, ಈ ಮೊದಲು ಬ್ರಿಟಿಷ್ ವಸಾಹತುಶಾಹಿ ಆಡಳಿತದಲ್ಲಿ ಇಲ್ಲಿನ ಬಡ ಭಾರತೀಯರು ಶೋಷಣೆ ಒಳಪಟ್ಟಿದ್ದರು, ಈಗ ಸ್ವತಂತ್ರ ಮಲೇಷ್ಯಾದಲ್ಲಿ ಮಲೇಷ್ಯ ಮೂಲದ ಜನರಿಂದ ಶೋಷಣೆಗೆ ಒಳಪಟ್ಟಿದ್ದಾರೆ ಎಂದು ಆಪಾದಿಸಿದರು. ಪರಿಹಾರಕ್ಕಾಗಿ ಬ್ರಿಟನ್ ರಾಣಿಯವರಿಗೂ ಪ್ರಕರಣವನ್ನು ಒಯ್ಯುವುದಾಗಿ ಮೂರ್ತಿ ಪ್ರಕಟಿಸಿದರು.

2007: ಬ್ರಿಟನ್ನಿನ ಬ್ರಿಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈದಿನ ಡೈನೊಸಾರಾಸ್ಸಿಗಿಂತಲೂ ಮುಂಚಿನ ಸಮುದ್ರ ಚೇಳಿನ ಪಳೆಯುಳಿಕೆಯ ಚಿತ್ರವನ್ನು ಬಿಡುಗಡೆ ಮಾಡಿದರು. ಇದು 390 ಮಿಲಿಯನ್ ವರ್ಷಗಳಷ್ಟು ಹಿಂದೆ ಅಸ್ತಿತ್ವದಲ್ಲಿತ್ತು ಎನ್ನಲಾಗಿದೆ. ಈ ಚೇಳಿನ ಕೊಂಡಿ 2.5 ಮೀಟರಿನಷ್ಟು ಉದ್ದವಾಗಿತ್ತು ಎಂಬುದು ವಿಜ್ಞಾನಿಗಳ ಹೇಳಿಕೆ.

2006: ಕಾಂಚೀಪುರಂ ಜಿಲ್ಲೆಯ ವಲ್ಲಕೊಟ್ಟಾಯಿಯಲ್ಲಿನ ಮುರುಘಾ ದೇವಸ್ಥಾನದ ತಳಭಾಗದಲ್ಲಿ ಭೂಗರ್ಭ ಸುರಂಗವೊಂದು ಪತ್ತೆಯಾಗಿದ್ದು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ (ಎಎಸ್ ಐ) ಅದರ ಅಧ್ಯಯನ ನಡೆಸುತ್ತಿರುವುದಾಗಿ ಇಲಾಖೆಯ ಸಂಶೋಧನಾ ವಿಶ್ಲೇಷಕ ಜಿ. ತಿರುಮೂರ್ತಿ ಪ್ರಕಟಿಸಿದರು. ದೇವಾಲಯವನ್ನು 1200 ವರ್ಷಗಳಷ್ಟು ಹಿಂದೆಯೇ ಮುಚ್ಚಲಾಗಿತ್ತು. ಯಾವುದೇ ದೇವಸ್ಥಾನದ ತಳಭಾಗದಲ್ಲಿ ಇಂತಹ ಸುರಂಗ ಇರುವುದು ಈವರೆಗೆ ಬೆಳಕಿಗೆ ಬಂದಿಲ್ಲ. ದೇವಾಲಯದ ಅಧಿಕಾರಿಗಳು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಮಂಟಪ ನಿರ್ಮಿಸಲು ಅಗೆಯುತ್ತಿದ್ದಾಗ ಈ ಸುರಂಗ ಪತ್ತೆಯಾಯಿತು. ಅರ್ಚಕರಿಗೆ ದೇವಸ್ಥಾನದ ಗರ್ಭಗುಡಿಗೆ ಕ್ಷಿಪ್ರವಾಗಿ ತಲುಪಲು ಸಾಧ್ಯವಾಗುವಂತೆ ಈ ಸುರಂಗವನ್ನು ನಿರ್ಮಿಸಲಾಗಿದೆ.

2006: ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಹಾಗೂ ಉಭಯಕಡೆಗಳಲ್ಲಿ ಬಂಡವಾಳ ಹರಿಯುವಿಕೆಗೆ ಪ್ರೋತ್ಸಾಹ ನೀಡುವ ಸುಮಾರು 13 ಒಪ್ಪಂದಗಳಿಗೆ ಭಾರತ ಮತ್ತು ಚೀನಾ ನವದೆಹಲಿಯಲ್ಲಿ ಸಹಿ ಹಾಕಿದವು. ಇದರ ಪ್ರಕಾರ 2010ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರ ವಹಿವಾಟನ್ನು ದುಪ್ಪಟ್ಟುಗೊಳಿಸಿ, 4000 ಕೋಟಿ ಡಾಲರುಗಳಿಗೆ ಏರಿಸಿಕೊಳ್ಳಲು ತೀರ್ಮಾನಿಸಿದವು. ಈ ಕುರಿತ ಜಂಟಿ ಘೋಷಣೆಗೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಚೀನಾದ ಅಧ್ಯಕ್ಷ ಹು ಜಿಂಟಾವೊ ಸಹಿ ಹಾಕಿದರು.

2006: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ಬ್ರಯನ್ ಲಾರಾ ಅವರು ಮುಲ್ತಾನಿನಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 34ನೇ ಶತಕ ದಾಖಲಿಸಿ, ಭಾರತದ ಸುನಿಲ್ ಗಾವಸ್ಕರ್ ಅವರ 34 ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಸಚಿನ್ ತೆಂಡೂಲ್ಕರ್ ಮಾತ್ರ 35 ಶತಕಗಳೊಂದಿಗೆ ಲಾರಾ - ಸುನಿಲ್ ಗಾವಸ್ಕರ್ ಅವರಿಗಿಂತ ಮುಂದಿದ್ದಾರೆ. ಪಾಕ್ ವಿರುದ್ಧ ಅವರು ಬಾರಿಸಿದ  ಸತತ 4ನೇ ಶತಕ ಇದಾಗಿದ್ದು, ಒಂದೇ ಅವಧಿಯಲ್ಲಿ ಶತಕ ಗಳಿಸಿದ ಐದನೇ ಆಟಗಾರ ಎಂಬ ಹೆಗ್ಗಳಿಕೆಯೂ ಲಾರಾಗೆ ದಕ್ಕಿತು. ಈವರೆಗೆ ಲಾರಾ ಟೆಸ್ಟ್ ಕ್ರಿಕೆಟಿನಲ್ಲಿ ಗಳಿಸಿದ ಒಟ್ಟು ರನ್ನುಗಳ ಸಂಖ್ಯೆ 11,884.

2005: `ವಿಕ್ಟೋರಿಯಾ ಕ್ರಾಸ್' ಗೌರವ ಪಡೆದ 40 ಭಾರತೀಯರ ಪೈಕಿ ಈವರೆಗೆ ಜೀವಿಸಿದ್ದ ಏಕೈಕ ವ್ಯಕ್ತಿ ಸುಬೇದಾರ್ ಮೇಜರ್ ಹಾಗೂ ಗೌರವ ಕ್ಯಾಪ್ಟನ್ ಉಮ್ರಾವೋ ಸಿಂಗ್ (85) ನಿಧನರಾದರು. ಹರಿಯಾಣದ ರೋಹ್ಟಕ್ ನಿವಾಸಿ ಸಿಂಗ್ 1944ರ ಡಿಸೆಂಬರಿನಲ್ಲಿ ಬರ್ಮಾದ (ಈಗ ಮ್ಯಾನ್ಮಾರ್) ಕಲದನ್ ಕಣಿವೆಯಲ್ಲಿ ಜಪಾನೀಯರ ನಾಲ್ಕು ಆಕ್ರಮಣಗಳನ್ನು ಹಿಮ್ಮೆಟ್ಟಿಸಿದ್ದರು. ಗಾಯಗೊಂಡು ಬೀಳುವ ಮುನ್ನ 10 ಜಪಾನ್ ಸೈನಿಕರನ್ನು ನೆಲಕ್ಕೆ ಉರುಳಿಸಿದ್ದರು. ಇದಕ್ಕಾಗಿ ಬ್ರಿಟಿಷರು ಅವರಿಗೆ ಅತ್ಯುಚ್ಚ ಪರಾಕ್ರಮ ಪ್ರಶಸ್ತಿ ನೀಡಿದ್ದರು.

2005: ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ವಿವಾದಾಸ್ಪದ ನಿರ್ಣಯ ಕೈಗೊಂಡಿದ್ದ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿತು.

2005: ರತ್ನಸಿರಿ ವಿಕ್ರಮ ನಾಯಕೆ ಶ್ರೀಲಂಕಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಹಿಂದೆ 2000 ಹಾಗೂ 2001ರಲ್ಲಿ ರತ್ನಸಿರಿ ಪ್ರಧಾನಿಯಾಗಿದ್ದರು.

1985: ಮೈಕ್ರೋಸಾಫ್ಟ್ ಕಾರ್ಪೊರೇಷನ್ `ವಿಂಡೋಸ್ 1.03'ನ್ನು ಬಿಡುಗಡೆ ಮಾಡಿತು. 80 ಮಾನವ ವರ್ಷಗಳ ಯತ್ನದ ಬಳಿಕ ಬಿಡುಗಡೆಯಾದ ಇದು `ವಿಂಡೋಸ್' ನ ಮೊತ್ತ ಮೊದಲ ಆವೃತ್ತಿ. ಮೈಕ್ರೋಸಾಫ್ಟ್ ಇತಿಹಾಸದಲ್ಲಿ ಇದು ಅತ್ಯಂತ ಸುದೀರ್ಘ ಅಭಿವೃದ್ಧಿ. ಇದನ್ನು ನಿರ್ಮಿಸಲು 1.10 ಲಕ್ಷ ಪ್ರೊಗ್ರಾಮಿಂಗ್ ಗಂಟೆಗಳು ಬೇಕಾದವು.

1970: ಭಾರತೀಯ ವಿಜ್ಞಾನಿ ಸರ್ ಚಂದ್ರಶೇಖರ ವೆಂಕಟ ರಾಮನ್ (ಸಿವಿ ರಾಮನ್)  ಅವರು ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು. ಬೆಳಕಿನ ವರ್ತನೆ ಬಗ್ಗೆ ನಡೆಸಿದ ಸಂಶೋಧನೆಗಾಗಿ 1930ರಲ್ಲಿ ಅವರು ಭೌತ ವಿಜ್ಞಾನಕ್ಕೆ ನೀಡಲಾಗುವ `ನೊಬೆಲ್ ಪ್ರಶಸ್ತಿ'ಯನ್ನು ಪಡೆದಿದ್ದರು. ಅವರ ಈ ಸಂಶೋಧನೆ `ರಾಮನ್ ಎಫೆಕ್ಟ್' ಎಂದೇ ಖ್ಯಾತಿ ಪಡೆದಿದೆ.

1964: ನ್ಯೂಯಾರ್ಕಿನ ವೆರ್ರಾಂಝಾನೊ ನ್ಯಾರೋಸ್ ಸೇತುವೆ ಸಾರ್ವಜನಿಕ ಸಂಚಾರಕ್ಕಾಗಿ ತೆರವುಗೊಂಡಿತು. ಹಂಬರ್ ಸೇತುವೆ ಆಗುವವರೆಗೆ ಈ ಸೇತುವೆಯೇ ಜಗತ್ತಿನ ಅತ್ಯಂತ ದೊಡ್ಡ `ಏಕ ಕಮಾನಿನ' (ಸಿಂಗಲ್ ಸ್ಪಾನ್) (Single span bridge) ಸೇತುವೆ ಆಗಿತ್ತು.

1963: ಥುಂಬಾ ಉಡಾವಣಾ ಕೇಂದ್ರದಿಂದ ಮೊತ್ತ ಮೊದಲ `ನಿರ್ದೇಶನ ರಹಿತ ರಾಕೆಟ್' (ಅನ್ ಗೈಡೆಡ್ ರಾಕೆಟ್) ಉಡ್ಡಯನದೊಂದಿಗೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಆರಂಭಗೊಂಡಿತು.

1950: ಸಾಹಿತಿ ಚಂದ್ರಕಲಾ ನಂದಾವರ ಜನನ.

1947: `ಜೈಹಿಂದ್' ಬರಹ ಹೊತ್ತ ಸ್ವತಂತ್ರ ಭಾರತದ ಮೊತ್ತ ಮೊದಲ ಅಂಚೆ ಚೀಟಿ ಬಿಡುಗಡೆಗೊಂಡಿತು.

1928: ಸಾಹಿತಿ ಎಸ್. ನಾಗರಾಜ್ ಜನನ.

1909: ಭಾರತದ ಖ್ಯಾತ ಇಂಗ್ಲಿಷ್ ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರ ರಾಜಾ ರಾವ್ ಹುಟ್ಟಿದ ದಿನ.

1877: ಸಂಶೋಧಕ ಥಾಮಸ್ ಆಲ್ವ ಎಡಿಸನ್ ಅವರು ಫೋನೋಗ್ರಾಫ್ ಸಂಶೋಧನೆಯನ್ನು ಪ್ರಕಟಿಸಿದರು.

1854: ಹೊಸಗನ್ನಡದ ಆರಂಭಿಕ ಕಾಲದ ಸಾಹಿತಿ ಎಂ.ಎಸ್. ಪುಟ್ಟಣ್ಣ (ಲಕ್ಷ್ಮೀನರಸಿಂಹ ಶಾಸ್ತ್ರಿ) (21-11-1854ರಿಂದ 11-4-1930ರವರೆಗೆ) ಅವರು ಸೂರ್ಯನಾರಾಯಣ ಭಟ್ಟ- ಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1785: ಅಮೆರಿಕದ ಸೇನಾ ಸರ್ಜನ್ ವಿಲಿಯಮ್ ಬಿಯಾಮೊಂಟ್ (1785-1853) ಹುಟ್ಟಿದ ದಿನ. ಮಾನವನ ಹೊಟ್ಟೆಯ ಒಳಗೆ ಪಚನಕ್ರಿಯೆ ಹೇಗೆ ನಡೆಯುತ್ತದೆ ಎಂದು ಮೊತ್ತ ಮೊದಲಿಗೆ ಅಧ್ಯಯನ ಮಾಡಿದ ಸಂಶೋಧಕ ಈತ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Thursday 10 December 2009

ಇಂದಿನ ಇತಿಹಾಸ History Today ನವೆಂಬರ್ 20

 ಇಂದಿನ ಇತಿಹಾಸ

ನವೆಂಬರ್ 20

 ಬಿಹಾರದಲ್ಲಿನ ಬೌದ್ಧ ಧರ್ಮೀಯರ ಪವಿತ್ರ ಕ್ಷೇತ್ರ ಬೋಧ ಗಯಾದ ಮಹಾಬೋಧಿ ದೇಗುಲ ಸಂಕೀರ್ಣದೊಳಗೆ ಬರುವ ಭಕ್ತರು ಮತ್ತು ಪ್ರವಾಸಿಗರು ಇನ್ನು ಮುಂದೆ ಗರ್ಭಗುಡಿ ಹೊರತುಪಡಿಸಿ ಉಳಿದೆಡೆಯೆಲಾ ಚಪ್ಪಲಿ ಧರಿಸಬಹುದು. ಈವರೆಗೆ ಈ ಸಂಬಂಧ ಇದ್ದ ದಶಕಗಳಷ್ಟು ಹಳೆಯದಾದ ನಿರ್ಬಂಧವನ್ನು ದೇವಸ್ಥಾನದ ಆಡಳಿತ ಮಂಡಳಿ ತೆಗೆದುಹಾಕಿತು.

2008: ದಿವಂಗತ ಜೋಕಿಮ್ ಮತ್ತು ವಯೊಲೆಟ್ ಆಳ್ವಾ ಅವರ ಸಂಸ್ಮರಣಾರ್ಥ ಅಂಚೆ ಚೀಟಿಯನ್ನು ಅವರ ಜನ್ಮ ಶತಮಾನೋತ್ಸವ ವರ್ಷದ ಅಂಗವಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ವಯೊಲೆಟ್ ಮತ್ತು ಜೋಕಿಮ್ ಅವರು ರಾಜ್ಯಸಭೆ ಮತ್ತು ಲೋಕಸಭೆಗೆ 1952ರಲ್ಲಿ ಆಯ್ಕೆಯಾದರು. ಇವರು ದೇಶದ ಇತಿಹಾಸದಲ್ಲಿ ಸಂಸತ್ತಿಗೆ ಆಯ್ಕೆಯಾದ ಮೊದಲ ದಂಪತಿ. ಈ ಸ್ವಾತಂತ್ರ್ಯ ಹೋರಾಟಗಾರ ದಂಪತಿಯ ನೆನಪಿಗಾಗಿ ಪ್ರಥಮ ದಿನದ ಲಕೋಟೆಯನ್ನೂ ಸಹ ಪಾಟೀಲ್  ಬಿಡುಗಡೆ ಮಾಡಿದರು. ಈ ಸಮಾರಂಭದಲ್ಲಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ, ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಪ್ರಭಾರಾವ್, ಸಂಪರ್ಕ ಸಚಿವ ಎ.ರಾಜ, ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಹಾಗೂ ಜೋಕಿಮ್ ಮತ್ತು ವಯೊಲೆಟ್ ಆಳ್ವ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಭಾಗವಹಿಸಿದ್ದರು.

2008: ಮಹಾರಾಷ್ಟ್ರ ಸರ್ಕಾರವು ಮಾಲೆಗಾಂವ್ ಸ್ಫೋಟ ಪ್ರಕರಣದ ಎಲ್ಲ 10 ಆರೋಪಿಗಳ ವಿರುದ್ಧ ಮೊಕಾ ಕಾಯ್ದೆ ಜಾರಿಗೊಳಿಸಿತು.

2008: ಬಿಹಾರದಲ್ಲಿನ ಬೌದ್ಧ ಧರ್ಮೀಯರ ಪವಿತ್ರ ಕ್ಷೇತ್ರ ಬೋಧ ಗಯಾದ ಮಹಾಬೋಧಿ ದೇಗುಲ ಸಂಕೀರ್ಣದೊಳಗೆ ಬರುವ ಭಕ್ತರು ಮತ್ತು ಪ್ರವಾಸಿಗರು ಇನ್ನು ಮುಂದೆ ಗರ್ಭಗುಡಿ ಹೊರತುಪಡಿಸಿ ಉಳಿದೆಡೆಯೆಲಾ ಚಪ್ಪಲಿ ಧರಿಸಬಹುದು. ಈವರೆಗೆ ಈ ಸಂಬಂಧ ಇದ್ದ ದಶಕಗಳಷ್ಟು ಹಳೆಯದಾದ ನಿರ್ಬಂಧವನ್ನು ದೇವಸ್ಥಾನದ ಆಡಳಿತ ಮಂಡಳಿ ತೆಗೆದುಹಾಕಿತು. ಚಳಿಗಾಲದಲ್ಲಿ 2ರಿಂದ 4 ಡಿಗ್ರಿ ಸೆಲ್ಸಿಯಸ್ಸಿಗೆ ಕುಸಿಯುವ ಉಷ್ಣಾಂಶ ಹಾಗೂ ಬೇಸಿಗೆ ಕಾಲದಲ್ಲಿ ಅತಿಯಾದ ಬಿಸಿಲಿನಲ್ಲಿ ಬರಿಗಾಲಲ್ಲಿ ನಡೆಯುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸಬೇಕಾಗಿದ್ದ ಹಿನ್ನೆಲಯಲ್ಲಿ, ಚಪ್ಪಲಿ ಧರಿಸಲು ಇದ್ದ ನಿರ್ಬಂಧ ತೆಗೆದು ಹಾಕಬೇಕೆಂಬ  ಒತ್ತಾಯ ಕೇಳಿಬಂದಿತ್ತು. ಟಿಬೆಟಿನ ಬೌದ್ಧೀಯರ ಕರ್ಮಪಾ ಪಂಗಡದ ಯುವ ಮುಖ್ಯಸ್ಥ ಉಗೇನ್ ಟ್ರಿನ್ಲ್ಲೆ ದೋರ್ಜೆ 2001ರಲ್ಲಿ ನಿಯಮ ಉಲ್ಲಂಘಿಸಿ ದೊಡ್ಡ ಶೂಗಳನ್ನು ಧರಿಸಿ ದೇವಸ್ಥಾನ ಸಂಕೀರ್ಣಪ್ರವೇಶಿಸುವ ಮೂಲಕ ಮತ್ತೊಂದು ಪಂಗಡದ  ವಿರೋಧ ಎದುರಿಸಿದ್ದರು. 1500 ವರ್ಷ ಹಳೆಯದಾದ ಮಹಾಬೋಧಿ ದೇವಸ್ಥಾನವನ್ನು 2550 ವರ್ಷ ಹಿಂದೆ ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷದ ಎದುರು ಕಟ್ಟಲಾಗಿತ್ತು. 2002ರಲ್ಲಿ ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಅದನ್ನು ಸೇರಿಸಿದ್ದರಿಂದ ವರ್ಷವಿಡೀ ಸಾವಿರಾರು ಪ್ರವಾಸಿಗರು, ಅದರಲ್ಲೂ ಬೌದ್ಧ ಸಮುದಾಯ ಹೆಚ್ಚಾಗಿರುವ ದೇಶಗಳ ಜನ ಅಲ್ಲಿಗೆ ಭೇಟಿ ನೀಡುತ್ತಾರೆ.

2008: ಎರಡು ವರ್ಷದ ಹಿಂದೆ ತಮ್ಮ ನಾಯಕನನ್ನು ಕೊಲೆ ಮಾಡಿದ್ದ21 ಮಂದಿ ಸಿಪಿಎಂ ಕಾರ್ಯಕರ್ತರಿಗೆ ಪಶ್ಚಿಮಬಂಗಾಳದ ಹೂಗ್ಲಿಯ ಸ್ಥಳೀಯ ನ್ಯಾಯಾಲಯವೊಂದು  ಜೀವಾವಧಿ ಶಿಕ್ಷೆ ವಿಧಿಸಿ, ಜೊತೆಗೆ ತಲಾ 25 ಸಾವಿರ ರೂ. ದಂಡವನ್ನೂ ವಿಧಿಸಿತು.

2008: ಇಂಗ್ಲಿಷಿನ ಕ್ಲಾಸಿಕಲ್ ಪದವನ್ನು ಕನ್ನಡದಲ್ಲಿ ಶಾಸ್ತ್ರೀಯ ಎಂದು ಬಳಸಿದರೆ ಹೆಚ್ಚು ಅರ್ಥ ನೀಡುವುದಿಲ್ಲ. `ಶಾಸ್ತ್ರೀಯ' ಎಂದರೆ ಸಾಂಪ್ರದಾಯಿಕ, ನಿಯಮ ಬದ್ಧ ಎಂದರ್ಥ. ಆದ್ದರಿಂದ `ಕ್ಲಾಸಿಕಲ್' ಪದಕ್ಕೆ ತೀರಾ ಸಮೀಪವಿರುವ `ಅಭಿಜಾತ' (ಅತ್ಯುತ್ತಮ) ಪದವನ್ನೇ ಇನ್ನು ಮುಂದೆ ಎಲ್ಲರೂ ಬಳಸಬೇಕು ಎಂದು ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಬೆಂಗಳೂರಿನಲ್ಲಿ ಸಲಹೆ ನೀಡಿದರು. `ಇಂಗ್ಲಿಷಿನ `ಕ್ಲಾಸಿಕಲ್' ಎಂಬ ಮಾತಿಗೆ ಗ್ರೀಕ್, ರೋಮನ್ ಮಾದರಿಯಲ್ಲಿ ಅತ್ಯುನ್ನತ, ಚಿರಂತನ ಶ್ರೇಷ್ಠತೆಯ ಎಂಬ ಅರ್ಥವಿದೆ. `ಶಾಸ್ತ್ರೀಯ' ಎಂಬ ಪದಕ್ಕೆ ಸಂಬಂಧಿಸಿದಂತೆ  ಹಲವಾರು ವಿದ್ವಾಂಸರೊಂದಿಗೆ ಚರ್ಚಿಸಿ, `ಶಾಸ್ತ್ರೀಯ ಭಾಷೆ' ಬದಲು `ಅಭಿಜಾತ ಭಾಷೆ' ಎಂದು ಬಳಸಿದರೆ ಒಳಿತು ಎಂಬ ನಿರ್ಧಾರಕ್ಕೆ ಬಂದಿರುವುದಾಗಿ' ಅವರು ತಿಳಿಸಿದರು.

2008: ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಹಿರಿಯ ಶಿಲ್ಪ ಕಲಾವಿದ ಗುಂಡಪ್ಪ ದೇವೇಂದ್ರಪ್ಪ ಮಾಯಾಚಾರಿ (83) ಬಾಗಲಕೋಟೆಯಲ್ಲಿ ನಿಧನರಾದರು. ಕೃಷ್ಣಶಿಲೆ ಕೆತ್ತನೆಯಲ್ಲಿ ಪರಿಣತಿ ಹೊಂದಿದ್ದ ಗುಂಡಪ್ಪ, ಅವರಿಗೆ 1999ರಲ್ಲಿ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ, 1978ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1998ರಲ್ಲಿ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಹಾಗೂ ಸಮ್ಮಾನಗಳು ಲಭಿಸಿದ್ದವು. ಮೂಲತಃ ಬೀಳಗಿ ತಾಲ್ಲೂಕು ಹೆರಕಲ್ ಗ್ರಾಮದವರಾದ ಗುಂಡಪ್ಪ ಮಾಯಾಚಾರಿ, ದೇವಿಮೂರ್ತಿಗಳ ಕೆತ್ತನೆಯ ಮೂಲಕ ಪ್ರಸಿದ್ಧಿ ಗಳಿಸಿದ್ದರು.

2007: ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿ, ವಿಧಾನಸಭೆಯ ವಿಸರ್ಜನೆಗೆ ಸಂಸತ್ತನ್ನು ಕೋರಲು ನಿರ್ಧರಿಸಿತು. ಸಂಪುಟದ ನಿರ್ಣಯಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಂಗೀಕಾರದ ಮೊಹರು ಒತ್ತಿದ ನಂತರ ಗೃಹಸಚಿವ ಶಿವರಾಜ್ ಪಾಟೀಲ್ ರಾಷ್ಟ್ರಪತಿ ಆಳ್ವಿಕೆಯ ಅಧಿಕೃತ ನಿರ್ಧಾರವನ್ನು ಸಂಜೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ರವಾನಿಸಿದರು. ಹೀಗಾಗಿ ಕರ್ನಾಟಕ ಕೇವಲ ಆರು ವಾರಗಳ ಅವಧಿಯಲ್ಲಿ ಎರಡನೇ ಬಾರಿಗೆ ರಾಷ್ಟ್ರಪತಿ ಆಳ್ವಿಕೆಗೆ ಒಳಗಾಯಿತು. ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಜೆಡಿ (ಎಸ್) ನಿರಾಕರಿಸಿದ್ದರಿಂದ ನಿರ್ಮಾಣವಾದ ರಾಜಕೀಯ ಬಿಕ್ಕಟ್ಟಿನಿಂದಾಗಿ 2007ರ ಅಕ್ಟೋಬರ್ ಒಂಬತ್ತರಿಂದ ನವೆಂಬರ್ 12ರ ವರೆಗೆ 34 ದಿನಗಳ ಕಾಲ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.

2007: ಹನೂರು ಕ್ಷೇತ್ರ ಶಾಸಕಿ ಪರಿಮಳಾ ನಾಗಪ್ಪ ಅವರ ಅಳಿಯ ಡಾ.ಕಿರಣ್ ಪಟೇಲ್ (34) ಅವರು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭೂಪಸಂದ್ರ ಬಡಾವಣೆಯಲ್ಲಿ ಸಂಭವಿಸಿತು. ಎಂಬಿಬಿಎಸ್ ವ್ಯಾಸಂಗ ಮುಗಿಸಿದ ಬಳಿಕ ವೈದ್ಯಕೀಯ ಉಪಕರಣಗಳ ವ್ಯಾಪಾರ ಮಾಡಿಕೊಂಡಿದ್ದ ಕಿರಣ್ ಪಟೇಲ್ ಅವರು ಭೂಪಸಂದ್ರದಲ್ಲಿ ನೆಲೆಸಿದ್ದರು.

2007: 1997ರಲ್ಲಿ ದೆಹಲಿಯ ಉಪಾಹಾರ್ ಸಿನಿಮಾ ಮಂದಿರದ ಬೆಂಕಿ ದುರಂತದಲ್ಲಿ 59 ಜನರು ಸಜೀವ ದಹನಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ಮಂದಿರದ ಮಾಲಿಕರಾದ ಸುಶಿಲ್, ಗೋಪಾಲ್ ಅನ್ಸಾಲ್ ಮತ್ತು ದೆಹಲಿ ನಗರಪಾಲಿಕೆ ಅಧಿಕಾರಿಗಳಾದ ಶಾಂ ಸುಂದರ್ ಶರ್ಮಾ, ಎನ್. ಡಿ. ತಿವಾರಿ ಹಾಗೂ ಅಗ್ನಿ ಶಾಮಕದ ದಳದ ಅಧಿಕಾರಿ ಎಚ್. ಎಸ್. ಪನ್ವರ್ ಅವರೂ ಸೇರಿ ಇತರ 12 ಮಂದಿಯನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ಘೋಷಿಸಿತು. ಅನ್ಸಾಲ್ ಮತ್ತು ಇತರ 12 ಮಂದಿ ಭಾರತೀಯ ದಂಡ ಸಂಹಿತೆ 304ಎ (ಆತುರ ಹಾಗೂ ನಿರ್ಲ್ಯಕ್ಷದ ಕ್ರಮ) ಮತ್ತು ಜನರ ಜೀವಕ್ಕೆ ಅಪಾಯ ಒಡ್ಡಿದ ಇತರ ಪ್ರಕರಣಗಳ ಪ್ರಕಾರ ತಪ್ಪಿತಸ್ಥರು. ಇದಲ್ಲದೆ ಅನ್ಸಾಲ್ ಸಹೋದರರು ಸಿನಿಮಾಟೋಗ್ರಫಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಹೆಚ್ಚುವರಿ ಸೆಷನ್ ನ್ಯಾಯಾಧೀಶರಾದ ಮಮತಾ ಸೆಹಗಲ್ ತೀರ್ಪು ನೀಡಿದರು. ಅನ್ಸಾಲ್ ಸಹೋದರರ ಎಂಟು ಮಂದಿ ಸಂಬಂಧಿಕರೂ ಸೇರಿದಂತೆ ಸಿಬಿಐ ಅಧಿಕಾರಿಗಳು ಒಟ್ಟು 115 ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ಅನ್ಸಾಲ್ ಸಂಬಂಧಿಗಳು ನಂತರ ತದ್ವಿರುದ್ಧ ಹೇಳಿಕೆ ನೀಡಿದ್ದರು. ಈ ಮಧ್ಯೆ ಅನ್ಸಾಲ್ ಸಹೋದರರ ಆಮಿಷಕ್ಕೆ ಒಳಗಾಗಿ ದಾಖಲೆ ಪತ್ರಗಳನ್ನು ತಿದ್ದಿದ್ದ  ನ್ಯಾಯಾಲಯದ ಸಿಬ್ಬಂದಿಯೊಬ್ಬರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

2007:  ದೇವರ ಆಜ್ಞೆಯ ನೆಪ ಹೇಳಿ  ಜಲಪೈಗುರಿ ಜಿಲ್ಲೆಯ ಕಾಶಿಯಾಜ್ಹೋರಾ ಗ್ರಾಮದ ಅಫಿಜುದ್ದೀನ್ ಅಲಿ (37) ಎಂಬಾತ  ತನ್ನ ಹದಿಹರೆಯದ ಮಗಳನ್ನೇ ಮದುವೆಯಾದ ವಿಚಿತ್ರ ಘಟನೆ ತಡವಾಗಿ ಬೆಳಕಿಗೆ ಬಂದಿತು. ದೈವಿಕ ಇಚ್ಛೆಯೇ ತಾನು ತನ್ನ ಮಗಳನ್ನು ಮದುವೆಯಾಗಲು ಕಾರಣ. ದೇವರು ಕನಸಲ್ಲಿ ಬಂದು ಹಿರಿಯ ಮಗಳನ್ನು ಮದುವೆಯಾಗಲು ಆಜ್ಞಾಪಿಸಿದ ಎಂಬ ಸಬೂಬನ್ನು ಈ ಭೂಪ ನೀಡಿದ. ಹುಡುಗಿ ಐದು ತಿಂಗಳ ಗರ್ಭಿಣಿಯಾದಾಗ ವಿಷಯ ಬೆಳಕಿಗೆ ಬಂತು.

2007: ತಿರುಮಕೂಡಲಿನ ಇತಿಹಾಸ ಪ್ರಸಿದ್ಧ ಸೋಸಲೆ ವ್ಯಾಸರಾಜಮಠದ ಮಠಾಧಿಪತಿಗಳಾಗಿದ್ದ ವಿದ್ಯಾವಾಚಸ್ಪತಿ ತೀರ್ಥ ಸ್ವಾಮೀಜಿ (87) ತಿ. ನರಸೀಪುರದಲ್ಲಿ ನಿಧನರಾದರು. ಮೂಲತಃ ತಿ. ನರಸೀಪುರ ತಾಲ್ಲೂಕಿನ ತಲಕಾಡಿನವರಾದ ಸ್ವಾಮೀಜಿ, ಗುಂಬಳ್ಳಿ ನರಸಿಂಹಾಚಾರ್ ಅವರ ಪುತ್ರರಾಗಿದ್ದರು. ತಿ.ನರಸೀಪುರದಲ್ಲಿ ತಮ್ಮ ವಿದ್ಯಾಭ್ಯಾಸ ಪಡೆದಿದ್ದರು. ಮಹಾರಾಜರ ಕಾಲದಲ್ಲಿ ಇವರು 5 ಭಾಷೆಗಳಲ್ಲಿ ಹರಿಕಥಾ ವಿದ್ವಾಂಸರಾಗಿ ಸೇವೆ ಸಲ್ಲಿಸಿದ್ದರು. ಇವರಿಗೆ 10 ಮಂದಿ ಮಕ್ಕಳಿದ್ದರು. 1997ರಲ್ಲಿ ಮಠದ 54ನೇ ಮಠಾಧಿಪತಿಗಳಾಗಿ ಇವರು ನೇಮಕಗೊಂಡಿದ್ದರು.

2007: ಪೆಪ್ಸಿಕೊದ ಚೇರ್ಮನ್ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಇಂದ್ರಾ ಕೆ. ನೂಯಿ ಅವರನ್ನು ಅಮೆರಿಕ ಭಾರತ ವಾಣಿಜ್ಯ ಮಂಡಳಿಯ (ಯುಎಸ್ಐಬಿಸಿ) ನಿರ್ದೇಶಕ ಮಂಡಳಿಗೆ ನೇಮಕ ಮಾಡಲಾಯಿತು. ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಅಮೆರಿಕದ 250 ಬೃಹತ್ ಉದ್ದಿಮೆ ಸಂಸ್ಥೆಗಳಿಗೆ ಮತ್ತು ಭಾರತದ 24 ಜಾಗತಿಕ ಸಂಸ್ಥೆಗಳಿಗೆ `ಯು ಎಸ್ ಐ ಬಿ ಸಿ' ಸಲಹಾ ರೂಪದ ಸೇವೆ ನೀಡುತ್ತದೆ.

2006: ಕ್ಯಾನ್ಸರ್, ಏಡ್ಸ್, ಮಧುಮೇಹ ಮತ್ತು ರಕ್ತದ ಒತ್ತಡದಂತಹ ರೋಗಗಳನ್ನು ವಾಸಿ ಮಾಡುವಲ್ಲಿಪರಿಣಾಮಕಾರಿ ಫಲ ನೀಡಿರುವ ಗೋಮೂತ್ರ ಇದೀಗ ಗಡಿಯಾರದ ಮುಳ್ಳುಗಳನ್ನು ಚಲಿಸುವಂತೆ ಮಾಡುವಲ್ಲಿಯೂ ಯಶಸ್ವಿಯಾಯಿತು. ಕಛ್ ಮೂಲದ ವರ್ಧಮಾನ ಜೀವದಯಾ ಕೇಂದ್ರದ ಆಡಳಿತ ಟ್ರಸ್ಟಿ ವಸಂತಜಿ ಪ್ರೇಮ್ ಜಿ ಸೋನಿ ಅವರು ಆನಂದದಲ್ಲಿ ಗುಜರಾತ್ ಪ್ರದೇಶ ಆಯುರ್ವೇದ ಸಮ್ಮೇಳನದ ಆಶ್ರಯದಲ್ಲಿ ನಡೆದ ಆಯುರ್ವೇದ ಮೇಳದಲ್ಲಿ ಇದನ್ನು ಯಶಸ್ವಿಯಾಗಿ ಪ್ರಯೋಗ ಮಾಡಿ ತೋರಿಸಿದರು. ಅವರು ಮಾಡಿದ್ದು ಇಷ್ಟೆ: ಒಂದು ಲೋಟದದಲ್ಲಿ ಗೋಮೂತ್ರ ತುಂಬಿ ಅದರಲ್ಲಿ ತಾಮ್ರ ಹಾಗೂ ಸತುವಿನ ಒಂದೊಂದು ವಿದ್ಯುತ್ ವಾಹಕಗಳನ್ನು (ಎಲೆಕ್ಟ್ರೋಡ್) ಮುಳುಗಿಸಿದರು. ವಿದ್ಯುತ್ ಸಂಪರ್ಕ ಕಲ್ಪಿಸುವ ಈ ಪ್ರಕ್ರಿಯೆ ಪೂರ್ಣಗೊಂಡಾಗ ವಿದ್ಯುತ್ ಸಂಚಾರ ಆರಂಭವಾಗಿ ಗಡಿಯಾರದ ಮುಳ್ಳುಗಳು ಟಿಕ್ ಟಿಕ್ ಸದ್ದು ಮಾಡುತ್ತಾ ಚಲಿಸಲಾರಂಭಿಸಿದವು. `ಗೋಮೂತ್ರದಿಂದ ಈ ರೀತಿ ಉತ್ಪನ್ನವಾಗುವ ವಿದ್ಯುತ್ತಿನಿಂದ ಗಡಿಯಾರವನ್ನು 15 ದಿನಗಳ ಕಾಲ ನಿರಂತರವಾಗಿ ಚಲಾಯಿಸಬಹುದು. ಗೋಮೂತ್ರದ ವಿದ್ಯುತ್ ಶಕ್ತಿಯ ಬಗ್ಗೆ 1999ರಿಂದಲೇ ಪ್ರಯೋಗ ನಡೆಸುತ್ತಿದ್ದೇನೆ. ಎಲೆಕ್ಟ್ರಾನಿಕ್ ಕ್ಯಾಲ್ಕುಲೇಟರುಗಳು ಹಾಗೂ ರೇಡಿಯೋಗಳನ್ನು ಸಹಾ ಗೋಮೂತ್ರ ಬಳಸಿ ಚಲಾಯಿಸುವಲ್ಲಿ ಯಶಸ್ವಿಯಾಗಿದ್ದೇನೆ' ಎಂದು ಅವರು ಪ್ರತಿಪಾದಿಸಿದರು. ವರ್ಧಮಾನ ಜೀವದಯಾ ಕೇಂದ್ರವು ಗೋಶಾಲೆಯೊಂದನ್ನು ನಡೆಸುತ್ತಿದ್ದು ಅಲ್ಲಿ ಭಾರಿ ಪ್ರಮಾಣದಲ್ಲಿ ಹಸುಗಳನ್ನು ಸಾಕುತ್ತಿದೆ.

2006: ಉತ್ತರ ಬಂಗಾಳದ ನ್ಯೂ ಜಲಪೈಗುರಿ ಸಮೀಪದ ಬೆಲಕೋಬ ನಿಲ್ದಾಣದಲ್ಲಿ, ಹಲ್ದಿಬಾರಿ-ಸಿಲಿಗುರಿ ಪ್ಯಾಸೆಂಜರ್ ರೈಲಿನಲ್ಲಿ ಸಂಜೆ ಸಂಭವಿಸಿದ ಭಾರಿ ಬಾಂಬ್ ಸ್ಫೋಟದಲ್ಲಿ 8 ಪ್ರಯಾಣಿಕರು ಮೃತರಾಗಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಅನಧಿಕೃತ ಮೂಲಗಳ ಪ್ರಕಾರ ಸತ್ತವರ ಸಂಖ್ಯೆ 15 ಎಂದು ಹೇಳಲಾಗಿದೆ. ರೈಲುಗಾಡಿಯ ಬೋಗಿಯೊಂದರ ಶೌಚಾಲಯದಲ್ಲಿ ಉಗ್ರಗಾಮಿಗಳು ಬಾಂಬನ್ನು ಅಡಗಿಸಿ ಇಟ್ಟಿದ್ದರು ಎಂದು ಶಂಕಿಸಲಾಗಿದೆ.

2006: ತ್ವರಿತವಾಗಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವ ಭಾರತ ಮತ್ತು ಚೀನಾ ದೇಶಗಳ ಪರಸ್ಪರ ಬಾಂಧವ್ಯ ಸುಧಾರಣೆಗೆ ಒತ್ತು ಸಿಗುವ ನಿರೀಕ್ಷೆಗಳ ಮಧ್ಯೆ ಚೀನಾ ಅಧ್ಯಕ್ಷ ಹು ಜಿಂಟಾವೊ ಅವರು ನವದೆಹಲಿಗೆ ಆಗಮಿಸಿದರು. ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿರುವ ಜಿಂಟಾವೊ ಅವರನ್ನು ಪಾಲಂ ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಹಾಗೂ ಕೇಂದ್ರ ಸಚಿವ ಕಪಿಲ್ ಸಿಬಲ್ ಸ್ವಾಗತಿಸಿದರು. 10 ವರ್ಷಗಳ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ ಮೊದಲ ಚೀನೀ ರಾಷ್ಟ್ರಪತಿ ಜಿಂಟಾವೊ.

2005: ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಬೆಂಗಳೂರಿನಲ್ಲಿ ಕರ್ನಾಟಕ ವಿಧಾನಮಂಡಲ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದರು. ಉಜ್ವಲ ಕರ್ನಾಕಕಕ್ಕೆ ನೀಲನಕ್ಷೆಯನ್ನು ಪ್ರಕಟಿಸಿದರು.

1999: ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ಹಿರಿಯ ಪತ್ರಕರ್ತ ರಾಮಸ್ವಾಮಿ, ನ್ಯಾಯಮೂರ್ತಿ ಫಾಲಿ ಎಸ್. ನಾರಿಮನ್ ಮತ್ತು ಹಿರಿಯ ಆರೆಸ್ಸೆಸ್ ನಾಯಕ ನಾನಾಜಿ ದೇಶಮುಖ್ ಅವರನ್ನು ರಾಜ್ಯಸಭೆ ಸದಸ್ಯರಾಗಿ ನಾಮಕರಣ ಮಾಡಲಾಯಿತು.

1995: ತಾನು ರಾಜಕುಮಾರ ಚಾರ್ಲ್ಸ್ ಅವರಿಗೆ ವಿಧೇಯಳಾಗಿಲ್ಲ ಎಂದು ರಾಜಕುಮಾರಿ ಡಯಾನಾ ಬಿಬಿಸಿಯಲ್ಲಿ ಪ್ರಸಾರವಾದ ಸಂದರ್ಶನವೊಂದರಲ್ಲಿ ಒಪ್ಪಿಕೊಂಡರು.

1981: ಭಾರತದ ಎರಡನೇ ಭೂ ವೀಕ್ಷಣಾ ಉಪಗ್ರಹ `ಭಾಸ್ಕರ-2'ನ್ನು ಮಾಸ್ಕೋದ ಬಾಹ್ಯಾಕಾಶ ಉಪಗ್ರಹ ನಿಲ್ದಾಣದಿಂದ ಯಶಸ್ವಿಯಾಗಿ ಅಂತರಿಕ್ಷಕ್ಕೆ ಹಾರಿಬಿಡಲಾಯಿತು.

1975: ಸ್ಪೇನಿನ ಜನರಲ್ ಫ್ರಾನ್ಸಿಸ್ಕೊ ಫ್ರಾಂಕೊ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು. ಹೆಚ್ಚು ಕಡಿಮೆ 40 ವರ್ಷಗಳ ಕಾಲ ಅವರು ಸ್ಪೇನಿನ ಆಡಳಿತ ನಡೆಸಿದರು.

1970: ಸಾಹಿತಿ ಟಿ. ಪದ್ಮ ಜನನ.

1962: ಕ್ಯೂಬಾದ ಕ್ಷಿಪಣಿ ಬಿಕ್ಕಟ್ಟು ಅಂತ್ಯಗೊಂಡಿತು. ಸೋವಿಯತ್ ಯೂನಿಯನ್ ಕ್ಯೂಬಾದಲ್ಲಿದ್ದ ತನ್ನ ಎಲ್ಲ ಕ್ಷಿಪಣಿ ಹಾಗೂ ಬಾಂಬರುಗಳನ್ನು. ಅಮೆರಿಕ ದ್ವೀಪದ ಮೇಲೆ ವಿಧಿಸಿದ್ದ ದಿಗ್ಬಂಧನವನ್ನು ರದ್ದು ಪಡಿಸಿತು.

1952: ಸಾಹಿತಿ ಕಮಲಾ ಹೆಮ್ಮಿಗೆ ಜನನ.

1947: ಬ್ರಿಟನ್ನಿನ ರಾಜಕುಮಾರಿ ಎಲಿಜಬೆತ್ ಮತ್ತು ಎಡಿನ್ ಬರೋದ ಡ್ಯೂಕ್ ಫಿಲಿಪ್ ಮೌಂಟ್ ಬ್ಯಾಟನ್ ಅವರ ವಿವಾಹ ವೆಸ್ ್ಟಮಿನ್ ಸ್ಟರ್ ಅಬ್ಬೆಯಲ್ಲಿ ನಡೆಯಿತು.

1944: ಸಾಹಿತಿ ದಾಸೇಗೌಡ (ಜಿವಿಡಿ) ಜನನ.

1931: ಸಾಹಿತಿ ವಿ.ಜೆ. ನಾಯಕ ಜನನ.

1918: ಸಾಹಿತಿ ಇ.ಆರ್. ಸೇತೂರಾಂ ಜನನ.

1900: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ದೇಶಭಕ್ತರಿಗೆ ಕನ್ನಡ ದೇಶಭಕ್ತಿ ಗೀತೆಗಳನ್ನು ರಚಿಸಿಕೊಟ್ಟ `ಭಾರತಿ' ಕಾವ್ಯನಾಮದ ರಾಜಮ್ಮ (20-11-1900ರಿಂದ 24-10-1984) ಅವರು ರಾಘವಾಚಾರ್ಯರು- ಸೀತಮ್ಮ ದಂಪತಿಯ ಮಗನಾಗಿ ತುಮಕೂರಿನಲ್ಲಿ ಜನಿಸಿದರು.

1889: ಅಮೆರಿಕದ ಖಗೋಳ ವಿಜ್ಞಾನಿ ಎಡ್ವಿನ್ ಪೊವೆಲ್ ಹಬಲ್ (1889-1953) ಹುಟ್ಟಿದ ದಿನ. ವಿಶ್ವವು ವಿಸ್ತಾರಗೊಳ್ಳುತ್ತಿದೆ ಎಂಬುದಕ್ಕೆ ಇವರು ಮೊತ್ತ ಮೊದಲ ಸಾಕ್ಷ್ಯ ಒದಗಿಸಿದರು. ಇಂದು ಇವರು `ಎಕ್ಸ್ ಟ್ರಾ ಗ್ಯಾಲಕ್ಟಿಕ್ ಅಸ್ಟ್ರಾನಮಿ'ಯ ಸ್ಥಾಪಕರೆಂದೇ ಖ್ಯಾತರಾಗಿದ್ದಾರೆ.

1873: ಪ್ರತಿಸ್ಪರ್ಧಿ ನಗರಗಳಾಗಿದ್ದ ಬುಡಾ ಮತ್ತು ಪೆಸ್ಟ್ ಒಂದಾಗಿ ಹಂಗರಿಯ ರಾಜಧಾನಿ `ಬುಡಾಪೆಸ್ಟ್' ರೂಪುಗೊಂಡಿತು.

1659: ಮರಾಠಾ ಯೋಧ ಶಿವಾಜಿ ತನ್ನ ಕೈಗೆ ಅಂಟಿಸಲಾಗಿದ್ದ `ವ್ಯಾಘ್ರನಖ' (ಹುಲಿ ಉಗುರು) ಬಳಸಿ ಬಿಜಾಪುರದ ಅದಿಲ್ ಶಹಾನ ಜನರಲ್ ಅಫ್ಜಲ್ ಖಾನನನ್ನು ಕೊಂದು ಹಾಕಿದ. ಸಂಧಾನದ ಹೆಸರಿನಲ್ಲಿ ಶಿವಾಜಿಯ ಹತ್ಯೆಗಾಗಿ ನಡೆದಿದ್ದ ಸಂಚೊಂದು ಈ ರೀತಿ ವಿಫಲಗೊಂಡಿತು. ಈ ಘಟನೆಯ ಬಳಿಕ ಶಿವಾಜಿ `ಹೀರೋ' ಆಗಿ ಬೆಳೆದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Fashion TV Live

Guest Book .. Entirely for You..!

Visit over?..See.. Now you became a Twinkle Star !