Wednesday, March 20, 2024

ವಿವಿಧ ಭಾರತಿಯಲ್ಲಿ ಆತ್ಮನಿರ್ಭರ ಗ್ರಾಮ ಪಂಚಾಯಿತಿ

 ವಿವಿಧ ಭಾರತಿಯಲ್ಲಿ ಆತ್ಮನಿರ್ಭರ ಗ್ರಾಮ ಪಂಚಾಯಿತಿ

ಬೆಂಗಳೂರು: ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕುರಿತು ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಸಂಸ್ಥಾಪಕ ಡಾ. ಶಂಕರ ಕೆ. ಪ್ರಸಾದ್‌ ಅವರ ಬಾನುಲಿ ಕಾರ್ಯಕ್ರಮವು 2024 ಮಾರ್ಚ್‌ 21ರ ಗುರುವಾರ ರಾತ್ರಿ 8 ಗಂಟೆಗೆ ವಿವಿಧ ಭಾರತಿಯಲ್ಲಿ (ತರಂಗಾಂತರ 102.9೯ ಎಫ್‌ ಎಂ) ಪ್ರಸಾರವಾಗಲಿದೆ ಎಂದು ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಡಾ. ಪ್ರಸಾದ್‌ ಅವರು ಗ್ರಾಮ ಪಂಚಾಯಿತಿಗಳನ್ನು ಸ್ವಾವಲಂಬಿಯಾಗಿಸಲು ಸೀಮಾತೀತ ತಂತ್ರಜ್ಞಾನಗಳನ್ನು ಬಳಸುವ ಬಗ್ಗೆ ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಪುಸ್ತಕಗಳನ್ನು ಬರೆದಿದ್ದು ಈ ಪುಸ್ತಕದಲ್ಲಿನ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಕಾರ್ಯಕ್ರಮವನ್ನು ಆಲಿಸಲು ಈ ಕೊಂಡಿಯನ್ನು ಒತ್ತಿರಿ:  Pls click the link below to Listen the Programme: https://images.app.goo.gl/wgix9Kec7fGhRmVu5

ಇವುಗಳನ್ನೂ ನೋಡಿ:

ಇದೀಗ ಬಿಡುಗಡೆಯಾಗಿದೆ……

ಏನಿದೆ ಈ ಪುಸ್ತಕಗಳಲ್ಲಿ?

Saturday, March 2, 2024

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

 ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಭಾನುವಾರ ಲೋಕಾರ್ಪಣೆ, ಅಯೋಧ್ಯೆಯ ನಂಟೂ ಉಂಟು..

ಬೆಂಗಳೂರು: ಇದು ಕೇವಲ 30 ದಿನಗಳ ಅವಧಿಯಲ್ಲಿ ನಿರ್ಮಾಣಗೊಂಡ ಕಲ್ಲಿನ ದೇಗುಲ. ಅಷ್ಟೇ ಅಲ್ಲ ಅಯೋಧ್ಯೆಯ ಬಾಲರಾಮನ ಜೊತೆ ನಂಟು ಹೊಂದಿರುವ ದೇವಾಲಯ. ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನವು ಕೇವಲ 30 ದಿನಗಳ ಅವಧಿಯಲ್ಲಿ ನಿರ್ಮಾಣಗೊಳ್ಳುವುದರೊಂದಿಗೆ ಇತಿಹಾಸ ಸೃಷಿಸಿದೆ.

ವಾಸ್ತವವಾಗಿ ಈ ಬಡಾವಣೆಯಲ್ಲಿ ದೇವಾಲಯದ ನಿರ್ಮಾಣ ಆಗಬೇಕು ಎಂಬುದು ಇಲ್ಲಿನ ನಿವಾಸಿಗಳ ಸುಮಾರು ಎರಡು ದಶಕಕ್ಕೂ ಹೆಚ್ಚಿನ ಅವಧಿಯ ಕನಸು. ಸುಮಾರು 20 ವರ್ಷಗಳ ಹಿಂದೆ ಇಲ್ಲಿ ಬಡಾವಣೆ ನಿರ್ಮಾಣ ಮಾಡುವ ಸಮಯದಲ್ಲೇ ಬಡಾವಣೆಯ ನಿರ್ಮಾಪಕರು ಇಲ್ಲಿ ದೇವಾಲಯ ನಿರ್ಮಿಸಿಕೊಡುವ ಭರವಸೆ ಕೊಟ್ಟದ್ದಲ್ಲದೆ ಅದಕ್ಕಾಗಿ ಭೂಮಿ ಪೂಜೆಯನ್ನೂ ನೆರವೇರಿಸಿದ್ದರು.

ಆದರೆ ಕಾರಣಾಂತರಗಳಿಂದ ದೇವಾಲಯ ನಿರ್ಮಾಣ ಕಾರ್ಯ ಮುಂದಕ್ಕೆ ಹೋಗುತ್ತಲೇ ಬಂದಿತ್ತು. ಒಂದು ವರ್ಷದ ಹಿಂದೆ ಬಡಾವಣೆಯ ಹಿರಿಯ ಸದಸ್ಯರು ದೇವಾಲಯ ನಿರ್ಮಾಣ ಮಾಡಲೇಬೇಕು ಎಂಬ ಸಂಕಲ್ಪದೊಂದಿಗೆ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್‌ ರಚಿಸಿಕೊಂಡು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಬಡಾವಣೆಯ ನಿರ್ಮಾಪಕರೂ ದೇವಸ್ಥಾನ ನಿರ್ಮಾಣಕ್ಕೆ ನೆರವಿನ ಹಸ್ತ ನೀಡುವ ಭರವಸೆ ಕೊಟ್ಟರು.

ಆದರೂ ದೇವಾಲಯ ನಿರ್ಮಾಣ ಕಾರ್ಯಕ್ಕೆ ವೇಗ ಲಭಿಸಲಿಲ್ಲ. ಮತ್ತೆ ಮತ್ತೆ ಅಡ್ಡಿ ಆತಂಕಗಳು ಎದುರಾಗುತ್ತಲೇ ಬಂದವು. ಕೊನೆಗೆ ಸಾದಹಳ್ಳಿಯ ಸಾಲಿಗ್ರಾಮ ಭೂ ವರಾಹ ಸ್ವಾಮಿ ಸನ್ನಿಧಿಗೆ ತೆರಳಿ ದೇವಾಲಯ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸಿಕೊಂಡ ಸಮಿತಿಯ ಸದಸ್ಯರು ಅಲ್ಲಿನ ಆನಂದ ಗುರೂಜಿ ಮಾರ್ಗದರ್ಶನದಂತೆ ದೇವಸ್ಥಾನ ನಿರ್ಮಾಣಕ್ಕೆ ಮುಂದಾದರು.

2024 ಜನವರಿ 11ರ ನಸುಕಿನಲ್ಲಿ ಅತ್ಯಂತ ಶ್ರೇಷ್ಠ ಮುಹೂರ್ತ ಎಂಬುದಾಗಿ ಪರಿಗಣಿಸಲಾಗಿರುವ ಬ್ರಾಹ್ಮೀ ಮುಹೂರ್ತದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿ ದೇವಾಲಯದ ಪಾಯ ನಿರ್ಮಾಣದ ಕೆಲಸ ಆರಂಭಿಸಿದರು. ಸಮಿತಿಯ ಒಂದು ತಂಡವು ತಮಿಳುನಾಡಿನ ಮಹಾಬಲಿಪುರಂಗೆ ತೆರಳಿ ಇಡೀ ದಿನ ಹುಡುಕಾಡಿ ಶ್ರೀ ವೆಂಕಟೇಶ್ವರ (ಬಾಲಾಜಿ) ಮತ್ತು ಅಭಯ ಆಂಜನೇಯ ಸ್ವಾಮಿಯ ವಿಗ್ರಹಗಳನ್ನು ಆಯ್ಕೆ ಮಾಡಿಕೊಂಡು ಬಂದಿತು.

ಅಯೋಧ್ಯೆಯ ಸಂಬಂಧ!

ಬಡಾವಣೆಯ ಶಿಲ್ಪಿ ಎನ್.‌ ಎಂ. ಬಡಿಗೇರ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ ಮೈಸೂರಿನ ಹೆಗ್ಗಡದೇವನ ಕೋಟೆಯಿಂದ ಕೆಲವು ಕಪ್ಪು ಶಿಲೆ ಅಥವಾ ಕೃಷ್ಣ ಶಿಲೆಗಳನ್ನು ಆಯ್ಕೆ ಮಾಡಿಕೊಂಡು ಬೆಂಗಳೂರಿನ ತಮ್ಮ ನಿವಾಸಕ್ಕೆ ವಿಗ್ರಹಗಳನ್ನು ಕೆತ್ತಲೆಂದೇ ತಂದಿದ್ದರು. ಈ ಬಂಡೆಗಳಲ್ಲಿ ಅವರು ಮಹಾಗಣಪತಿ ಮತ್ತು ಸರಸ್ವತಿ ದೇವಿಯ ವಿಗ್ರಹಗಳನ್ನು ನಿರ್ಮಿಸಿದ್ದಾರೆ. ಅತ್ಯಂತ ವಿಶೇಷವೆಂದರೆ ಈ ವರ್ಷ ಲೋಕಾರ್ಪಣೆಗೊಂಡಿರುವ ಅಯೋಧ್ಯೆಯ ಚಾರಿತ್ರಿಕ ರಾಮ ಮಂದಿರದಲ್ಲಿ ಈಗ ಪ್ರತಿಷ್ಠಾಪನೆಗೊಂಡಿರುವ ಬಾಲರಾಮ ಕೂಡಾ ಇದೇ ಪ್ರದೇಶದ ಕೃಷ್ಣಶಿಲೆಯಿಂದ ನಿರ್ಮಾಣಗೊಂಡಿರುವ ವಿಗ್ರಹ.

ಬಡಾವಣೆಯಲ್ಲಿ ದೇವಾಲಯ ನಿರ್ಮಾಣದ ಪ್ರಸ್ತಾಪ ಬರುತ್ತಿದ್ದಂತೆಯೇ ಬಡಿಗೇರ ಅವರು ತಾವು ನಾಲ್ಕು ವರ್ಷಗಳ ಶ್ರಮದಲ್ಲಿ ನಿರ್ಮಿಸಿದ ಇದೇ ಕೃಷ್ಣ ಶಿಲೆಯ ಶ್ರೀ ಮಹಾಗಣಪತಿ ವಿಗ್ರಹವನ್ನು ದೇವಾಲಯಕ್ಕೆ ನೀಡುವುದಾಗಿ ಘೋಷಿಸಿದರು.


ಅತ್ತ ಮಹಾಬಲಿಪುರಂನಲ್ಲಿ ಬಾಲಾಜಿ ಮತ್ತು ಅಭಯ ಆಂಜನೇಯ ವಿಗ್ರಹದ ಹುಡುಕಾಟಕ್ಕಾಗಿ ತೆರಳಿದ್ದ ತಂಡಕ್ಕೆ ಇಡೀ ದಿನ ಹುಡುಕಾಡಿದರೂ ಯಾವುದೇ ವಿಗ್ರಹ ಮನಸ್ಸಿಗೆ ತೃಪ್ತಿ ನೀಡಿರಲಿಲ್ಲ. ಕೊನೆಗೆ ವಾಪಸಾಗಬೇಕೆಂದು ಯೋಚಿಸಿ ಹೊರಟಾಗ ವಿಗ್ರಹಗಳಿದ್ದ ಪುಟ್ಟ ಅಂಗಡಿಯೊಂದು ಕಂಡಿತು. ಅಲ್ಲಿದ್ದ ವೆಂಕಟೇಶ್ವರ ವಿಗ್ರಹ ಎಲ್ಲರಿಗೂ ತೃಪ್ತಿ ನೀಡಿತು. ಬೆಂಗಳೂರಿನ ದಿಕ್ಕಿಗೆ ಮುಖ ಮಾಡಿ ನಿಂತಿದ್ದ ಈ ವಿಗ್ರಹ ಕಳೆದ ನಾಲ್ಕು ವರ್ಷಗಳಿಂದ ಅಲ್ಲಿ ಮಾರಾಟವಾಗದೆ ಹಾಗೆಯೇ ಉಳಿದಿತ್ತು ಎಂಬುದು ಅಂಗಡಿಕಾರರ ಜೊತೆಗೆ ಮಾತನಾಡಿದಾಗ ತಿಳಿಯಿತು.

ಈ ಬಾಲಾಜಿ ವಿಗ್ರಹದ ಎದುರಿನಲ್ಲೇ ಇದ್ದ ಅಭಯ ಆಂಜನೇಯ ಸ್ವಾಮಿಯ ವಿಗ್ರಹವೂ ತಂಡದ ಗಮನ ಸೆಳೆಯಿತು. ವಿಗ್ರಹ ಆಯ್ಕೆಯ ತಂಡ ಈ ಎರಡೂ ವಿಗ್ರಹಗಳನ್ನು ದೇವಾಲಯದ ಸಲುವಾಗಿ ಆಯ್ಕೆ ಮಾಡಿತು. ಮರುದಿನವೇ ಎರಡೂ ವಿಗ್ರಹಗಳು ಬಡಾವಣೆಗೆ ಬಂದಿಳಿದವು.

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ದಿನವೇ ಬಡಾವಣೆಯ ಮಂದಿರದ ಉದ್ಘಾಟನೆಯೂ ನೆರವೇರಬೇಕು ಎಂಬುದು ಸಮಿತಿಯ ಸದಸ್ಯರ ಆಶಯವಾಗಿತ್ತು. ಆದರೆ ಮತ್ತೆ ವಿಘ್ನಗಳು ಎದುರಾಗಿ ಸುಮಾರು ಜನವರಿ 16ಕ್ಕೆ ದೇವಾಲಯ ನಿರ್ಮಾಣ ಕಾಮಗಾರಿ ನಿಂತಿತು.

ಛಲ ಬಿಡದ ತ್ರಿವಿಕ್ರಮನಂತೆ ಸಮಿತಿ ಸದಸ್ಯರು ಫೆಬ್ರುವರಿ ಮೊದಲ ವಾರದಲ್ಲಿ ಮತ್ತೆ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಸಕ್ರಿಯರಾದರು. ಫೆಬ್ರುವರಿ 3ಕ್ಕೆ ದೇವಾಲಯ ನಿರ್ಮಾಣ ಕಾರ್ಯ ಪುನರಾರಂಭ ಮಾಡಿ, ಫೆಬ್ರುವರಿ 29ರ ವೇಳೆಗೆ ಅದನ್ನು ಪೂರ್ಣಗೊಳಿಸಿದರು.

ಇದೀಗ ಭವ್ಯವಾಗಿ ಎದ್ದು ನಿಂತಿರುವ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗೂ ಶ್ರೀ ದೇವರುಗಳ ಪ್ರಾಣ ಪ್ರತಿಷ್ಠಾಪನೆ 2024ರ ಭಾನುವಾರ ಮಾಘ ಬಹುಳ ಸಪ್ತಮೀ ಅನೂರಾಧ ನಕ್ಷತ್ರ ಪ್ರಾತಃಕಾಲ 9.15ರಿಂದ 10.30ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ನೆರವೇರಲಿದೆ.

ಅದಕ್ಕೆ ಪೂರ್ವಭಾವಿಯಾಗಿ ಶನಿವಾರ ಸಂಜೆಯಿಂದಲೇ ಗಂಗಾಪೂಜೆ ಮತ್ತಿತರ ಧಾರ್ಮಿಕ ವಿಧಿಗಳು ಆರಂಭವಾಗಲಿದೆ.

 

Tuesday, February 27, 2024

ಇದೀಗ ಬಿಡುಗಡೆಯಾಗಿದೆ……

 ಇದೀಗ ಬಿಡುಗಡೆಯಾಗಿದೆ……

ಬೆಂಗಳೂರು: ಬೆಂಗಳೂರಿನಲ್ಲಿ ತಲೆಯ ಮೇಲೊಂದು ಸೂರು ಕಟ್ಟಿಸಿಕೊಳ್ಳಲು ದಶಕಗಳ ಕಾಲ ನಡೆದ ʼಗಾಂಧಿಗಿರಿ ಹೋರಾಟವನ್ನು ಬಿಡಿಸಿಟ್ಟಿರುವ ʼಬೆಂಗಳೂರಿನ ಭೂ ಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹʼ ಪುಸ್ತಕ ಇದೀಗ ಬಿಡುಗಡೆಯಾಗಿದೆ.

ಬೆಂಗಳೂರಿನ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಕಾಲೇಜು ಸಭಾಂಗಣದಲ್ಲಿ ೨೦೨೪ ಫೆಬ್ರುವರಿ ೨೫ರ ಭಾನುವಾರ ನಡೆದ ಸಮಾರಂಭದಲ್ಲಿ ಡಿಜಿಟಲ್‌ ತಜ್ಞ ಡಾ. ಶಂಕರ ಕೆ. ಪ್ರಸಾದ್‌ ಮತ್ತು ಪತ್ರಕರ್ತ ನೆತ್ರಕೆರೆ ಉದಯಶಂಕರ ವಿರಚಿತ ʼಬೆಂಗಳೂರಿನ ಭೂ ಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹʼ ಪುಸ್ತಕವನ್ನು ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್‌ ಮತ್ತು ಚಾಣಕ್ಯ ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾದ್ಯಾಪಕ ಪ್ರೊ. ಸದಾನಂದ ಜಾನೆಕರೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಆನ್‌ ಲೈನ್‌ ಮೂಲಕ ತಮ್ಮ ಸಂದೇಶ ನೀಡಿದ ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.‌ ಸಂತೋಷ ಹೆಗ್ಡೆ ಅವರು “ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ತೃಪ್ತಿ ಮತ್ತು ಮಾನವೀಯತೆಯನ್ನು ಅಳವಡಿಸಿಕೊಳ್ಳುವುದೊಂದೇ ದಾರಿ” ಎಂದು ಹೇಳಿದರು.

ನಮ್ಮಲ್ಲಿ ಅರ್ಥಿಕತೆ ಮುನ್ನಡೆಯುತ್ತಿದ್ದರೂ ದುರಾಸೆಯಿಂದಾಗಿ ಸಮಾಜದಲ್ಲಿನ ಶಾಂತಿ, ಸೌಹಾರ್ದತೆ ಅಳಿಯುತ್ತಿದೆ.  ನಾವು ಚಿಕ್ಕವರಾಗಿದ್ದಾಗ ನಮ್ಮ ಹಿರಿಯರು ಮಕ್ಕಳಿಗೆ ಚಿಕ್ಕಂದಿನಿಂದಲೇ ಮೌಲ್ಯಗಳನ್ನು ಹೇಳಿಕೊಡುತ್ತಿದ್ದರು. ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಿದ್ದರು. ಅಂತಹ ಮೌಲ್ಯ ಆಗ ಇತ್ತು.  ಇಂದು ಪ್ರಾಮಾಣಿಕತೆ ಉಳಿದಿಲ್ಲ. ಶ್ರೀಮಂತಿಕೆಯ ಪೂಜೆ ನಡೆಯುತ್ತಿದೆ. ತಪ್ಪೆಸಗಿದ ವ್ಯಕ್ತಿ ಜೈಲಿಗೆ ಹೋಗಿ ಹೊರಕ್ಕೆ ಬಂದರೆ ಅವರಿಗೆ ಅಪೂರ್ವ ಸ್ವಾಗತ ನೀಡಲಾಗುತ್ತಿದೆʼ ಎಂದು ಅವರು ವಿಷಾದಿಸಿದರು.

ವ್ಯಕ್ತಿ ಶ್ರೀಮಂತನಾಗುವುದು ತಪ್ಪಲ್ಲ. ಆದರೆ ಅಕ್ರಮ ಎಸಗಿ ಅದನ್ನು ಸಂಪಾದಿಸಬಾರದು. ಅಂತಹ ಸಂಪತ್ತು ಉಳಿಯುವುದಿಲ್ಲ ಎಂದು ನುಡಿದ ಹೆಗ್ಡೆ,  ಕಳೆದ ಕೆಲವು ದಶಕಗಳಿಂದ ದುರಾಸೆಯ ಪರಿಣಾಮವಾಗಿ ಸಂಭವಿಸಿದ 1948 ಜೀಪ್‌ ಹಗರಣ, ಬೊಪೋರ್ಸ್‌ ಹಗರಣ, ಕಾಮನ್ವೆಲ್ತ್‌ ಗೇಮ್ಸ್‌ ಹಗರಣ, ಪೂಂಜಿ ಹಗರಣ, ಕೋಲ್‌ ಗೇಟ್ ಹಗರಣಗಳನ್ನು ಉದಾಹರಿಸಿ ಭ್ರಷ್ಟಾಚಾರದ ಪ್ರಮಾಣ 52 ಲಕ್ಷ ರೂಪಾಯಿಗಳಿಂದ 1.92 ಕೋಟಿ ರೂಪಾಯಿಗಳವರೆಗೆ ಬೆಳೆದದ್ದನ್ನು ಉದಾಹರಿಸಿದರು.

ಇದೇ ವೇಳೆಗೆ ಸಂಸತ್ತಿನಲ್ಲಿ ವೇತನ, ಭತ್ಯೆ ಪಡೆಯುವ ಜನ ಪ್ರತಿನಿಧಿಗಳು ಸಂಸತ್ತಿನಲ್ಲಿ ಮಾತನಾಡುವುದು ಕಡಿಮೆಯಾಗುತ್ತಿದೆ ಎಂದು ನುಡಿದ ಅವರು ಇಂತಹ ಸ್ಥಿತಿಯಲ್ಲಿ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯ ಅತಿಥಿ ಚಾಣಕ್ಯ ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಸದಾನಂದ ಜಾನೆಕೆರೆ ಅವರು ಜನಹಿತಕ್ಕಾಗಿ ಶ್ರಮಿಸಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಪುಸ್ತಕ ಬಿಡಿಸಿ ಇಡುತ್ತಿದೆ. ಯುವಕರು, ವಿಶೇಷವಾಗಿ ಸಮಾಜ ಶಾಸ್ತ್ರ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾದ ವಿಚಾರಗಳು ಇಲ್ಲಿವೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮರಂಗಕ್ಕೆ ಜನಹಿತ ಸಾಧನೆಗಾಗಿ ತಮ್ಮದೇ ಆದ ಕೆಲಸಗಳಿವೆ. ಅವುಗಳ ಜಾರಿಗಾಗಿ ಕಾನೂನುಗಳಿವೆ. ಆದರೆ ಈ ವ್ಯವಸ್ಥೆಯ ಆಯಕಟ್ಟಿನ ಜಾಗದಲ್ಲಿ ಇರುವವರು ತಮ್ಮ ಸ್ವಹಿತಾಸಕ್ತಿ ಬೆಳೆಸಿಕೊಂಡು ಅದರ ಪೋಷಣೆಗಾಗಿ ಕಾನೂನುಗಳನ್ನೇ ಹೇಗೆ ತಿರುಚುತ್ತಾರೆ ಎಂಬುದರ ಒಳನೋಟವನ್ನು ಪುಸ್ತಕ ನೀಡುತ್ತಿದೆ ಎಂದು ಅವರು ನುಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ನಿರಂತರ ಜಾಗೃತಿ, ಹೋರಾಟ ಅಗತ್ಯ. ಹಾಗೆಯೇ ಆರ್‌ ಟಿ ಐ ವ್ಯವಸ್ಥೆ ದುರ್ಬಲವಾಗದಂತೆ ನೋಡಿಕೊಳ್ಳಬೇಕು ಎಂದು ಅವರು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್‌ ಅವರು ಮಾತನಾಡಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಇರುವುದು ಒಂದೇ ದಾರಿ. ಲಂಚ ಕೊಡುವುದಿಲ್ಲ ಮತ್ತು ಇತರರಿಂದ ತೆಗೆದುಕೊಳ್ಳುವುದಿಲ್ಲ ಎಂಬುದಾಗಿ ಹಿರಿಯರು ನಿರ್ಧಾರ ಮಾಡುವುದು ಮತ್ತು ಮಕ್ಕಳಿಗೆ ಇಂತಹ ಮೌಲ್ಯಗಳನ್ನು ಶಾಲಾ ಮಟ್ಟದಿಂದಲೇ ಕಲಿಸಿಕೊಡುವುದು ಎಂದು ಹೇಳಿದರು.

ʼಏನೇ ಮಾಡಿದರೂ ನಡೀತದೆ ಎಂಬ ಭಾವನೆ ಮಕ್ಕಳಲ್ಲಿ ಮೂಡದಂತೆ ಎಚ್ಚರಿಕೆ ವಹಿಸಬೇಕುʼ ಎಂದೂ ಅವರು ನುಡಿದರು.

ಚಿತ್ರನಟ ಅರುಣ ಕುಮಾರ್‌ ಪುಸ್ತಕದ ಅಧ್ಯಾಯವೊಂದನ್ನು ವಾಚಿಸಿದರು.

ಲೇಖಕರಲ್ಲಿ ಒಬ್ಬರಾದ ಡಾ. ಶಂಕರ ಕೆ. ಪ್ರಸಾದ್‌ ಪವರ್‌ ಪಾಯಿಂಟ್‌ ಪ್ರಸಂಟೇಷನ್‌ ಮೂಲಕ ಪುಸ್ತಕ ಬರೆಯಲು ಏನು ಕಾರಣ ಎಂದು ವಿವರಿಸಿ, ಸಮಸ್ಯೆಗಳ ನಿವಾರಣೆಗೆ ತಂತ್ರಜ್ಞಾನ ಅಳವಡಿಕೆಯ ಮಾಹಿತಿ ಪುಸ್ತಕದಲ್ಲಿದೆ ಎಂದರು.

ಸಹಲೇಖಕ ನೆತ್ರಕೆರೆ ಉದಯಶಂಕರ ಧನ್ಯವಾದ ಅರ್ಪಿಸಿದರು. ನಿವೃತ್ತ ನ್ಯಾಯಾಧೀಶ ಪ್ರಾಣೇಶ್‌,  ವಾಸುಕಿ ರಮೇಶ್‌, ಅಮರನಾಥ್‌, ನಾಗೇಶ್‌, ಗುಣಶೇಖರ ನಾಯ್ಡು ಮಾತನಾಡಿದರು. ಶಂಕರ ನಾರಾಯಣ ಕಾರಂತ ಕಾರ್ಯಕ್ರಮ ನಿರ್ವಹಿಸಿದರು. 

ಹಿರಿಯ  ಸಾಹಿತಿ ಗೊ.ರು. ಚನ್ನಬಸಪ್ಪ, ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಕಾಲೇಜು ಪ್ರಾಂಶುಪಾಲ ಪೃಥ್ವೀ ರೆಡ್ಡಿ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

ಚಿತ್ರಗಳ ಸಮೀಪ ದರ್ಶನಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ.

ಆನ್‌ ಲೈನ್‌ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.‌ ಸಂತೋಷ ಹೆಗ್ಡೆ ಅವರ ವಿಡಿಯೋ ಸಂದೇಶ ಆಲಿಸಲು ಕೆಳಗೆ ಕ್ಲಿಕ್‌ ಮಾಡಿ. 


ಪುಸ್ತಕ ಖರೀದಿಗೆ ಕ್ಲಿಕ್‌ ಮಾಡಿ: https://buynow.sampoornaswaraj.org/

Sunday, February 25, 2024

ಸಮುದ್ರದಡಿಯಲ್ಲಿ ಶ್ರೀಕೃಷ್ಣನಿಗೆ ಪ್ರಧಾನಿ ಮೋದಿ ಪೂಜೆ

 ಸಮುದ್ರದಡಿಯಲ್ಲಿ ಶ್ರೀಕೃಷ್ಣನಿಗೆ ಪ್ರಧಾನಿ ಮೋದಿ ಪೂಜೆ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2024 ಫೆಬ್ರುವರಿ 25ರ ಭಾನುವಾರ ಗುಜರಾತ್ ಕರಾವಳಿಯ ಅರಬ್ಬೀ ಸಮುದ್ರದ ಒಳಕ್ಕೆ ಇಳಿದು ಸಮುದ್ರದಡಿ ಮುಳುಗಿದ್ದ ಪುರಾತನ ದ್ವಾರಕಾದಲ್ಲಿ ನೀರೊಳಗಿನ ಪೂಜೆಯನ್ನು ನೆರವೇರಿಸಿ ಇತಿಹಾಸ ಸೃಷ್ಟಿಸಿದರು.

ಭಗವಾನ್ ಶ್ರೀಕೃಷ್ಣನೊಂದಿಗಿನ ಸಂಪರ್ಕಕ್ಕೆ ಹೆಸರುವಾಸಿಯಾದ ದ್ವಾರಕಾ, ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದ್ದು, ಶತಮಾನಗಳ ಹಿಂದೆ ಸಮುದ್ರದ ಅಡಿಯಲ್ಲಿ ಮುಳುಗಿದೆ ಎಂದು ನಂಬಲಾಗಿದೆ.

ಸ್ಕೂಬಾ ಡೈವಿಂಗ್ ಅನ್ನು ಬೈಟ್ ದ್ವಾರಕಾ ದ್ವೀಪದ ಬಳಿ ದ್ವಾರಕಾದ ಕರಾವಳಿಯಲ್ಲಿ ನಡೆಸಲಾಗುತ್ತದೆ, ಅಲ್ಲಿ ಜನರು ಪುರಾತತ್ತ್ವಜ್ಞರು ಉತ್ಖನನ ಮಾಡಿದ ಪ್ರಾಚೀನ ದ್ವಾರಕಾದ ನೀರೊಳಗಿನ ಅವಶೇಷಗಳನ್ನು ನೋಡಬಹುದು.

ಈದಿನ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವವುಳ್ಳ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರಧಾನಿ ಮೋದಿ ಸ್ಕೂಬಾ ಗೇರ್‌ನಲ್ಲಿ ಮತ್ತು ನೀಲಿ ನೀರಿಗೆ ಇಳಿಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಈ ವಿಡಿಯೋ ಚಿತ್ರ ಇಲ್ಲಿದೆ: 

Saturday, February 24, 2024

ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ

 ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ

ಬೆಂಗಳೂರು: ಬಿಬಿಎಂಪಿ ಖಾತೆಗಳಿಗಾಗಿ ʼಗಾಂಧಿಗಿರಿʼ ಹೋರಾಟ ನಡೆಸುತ್ತಿದ್ದ ಬೆಂಗಳೂರಿನ ಗುಲಾಬಿ ಗ್ಯಾಂಗ್‌ ಕಥೆ ಇದೀಗ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಪುಸ್ತಕದ ಬಿಡುಗಡೆ ಸಮಾರಂಭವು ಫೆಬ್ರುವರಿ 25ರ ಭಾನುವಾರ ಬೆಳಗ್ಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದಲ್ಲಿನ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.‌ ಸಂತೋಷ ಹೆಗ್ಡೆ ಅವರು ʼಬೆಂಗಳೂರಿನ ಭೂ ಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹʼ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಹಾಗೂ ಲೇಖಕ ಡಾ. ಡಿ.ವಿ. ಗುರುಪ್ರಸಾದ್‌ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಚಾಣಕ್ಯ ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಸದಾನಂದ ಜಾನೆಕೆರೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಡಿಜಿಟಲ್‌ ತಂತ್ರಜ್ಞಾನ ಪರಿಣತ ಡಾ. ಶಂಕರ ಕೆ. ಪ್ರಸಾದ್‌ ಮತ್ತು ಹಿರಿಯ ಪತ್ರಕರ್ತ ನೆತ್ರಕೆರೆ ಉದಯಶಂಕರ ಈ ಪುಸ್ತಕವನ್ನು ಬರೆದಿದಾರೆ. ಸಚ್ಚಿದಾನಂದ ನಗರ ನ್ಯಾಯಪರ ಆಂದೋಲನವು ಸಮಾರಂಭವನ್ನು ಸಂಘಟಿಸಿದೆ.

ಬೆಂಗಳೂರಿನ ಬಡಾವಣೆಯೊಂದರ ಸುಮಾರು 950 ಕುಟುಂಬಗಳ ಸದಸ್ಯರು ಸೂರು ಕಟ್ಟಿಕೊಳ್ಳಲು ಹೊರಟಾಗ ಎದುರಾದ ಸಮಸ್ಯೆಗಳ ಸರಮಾಲೆಯ ಕಥೆಯನ್ನು ಪುಸ್ತಕ ಹೊಂದಿದೆ. ಭೂ ಮಾಫಿಯಾ, ಅಧಿಕಾರಿಗಳು ಮತ್ತು ರಾಜಕಾರಣಿಗಳ ʼಭ್ರಷ್ಟಾಚಾರದ ಚಕ್ರವ್ಯೂಹʼ ಪಡೆ ಹೇಗೆ ಅವರನ್ನು ಕಾಡಿತು ಎಂಬ ವಿವರದ ಜೊತೆಗೆ ಇಂತಹ ಸಮಸ್ಯೆಗಳ ಪರಿಹಾರಕ್ಕೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಅನ್ವೇಷಣೆಯೇ ಈ ಪುಸ್ತಕದ ಹೂರಣ ಎಂದು ಪುಸ್ತಕವನ್ನು ಪ್ರಕಟಿಸಿರುವ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Sunday, February 4, 2024

ಇಂದಿನ ಇತಿಹಾಸ History Today ಫೆಬ್ರುವರಿ 04

ಇಂದಿನ ಇತಿಹಾಸ
ಫೆಬ್ರುವರಿ 04

2024:ಡೆಹ್ರಾಡೂನ್:‌ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ನಿವಾಸದಲ್ಲಿ 2024 ಫೆಬ್ರುವರಿ 4ರಂದು ನಡೆದ ಸಂಪುಟ ಸಭೆಯಲ್ಲಿ ಉತ್ತರಾಖಂಡ ಸಚಿವ ಸಂಪುಟವು ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ವರದಿಯನ್ನು ಅನುಮೋದಿಸಿತು. ಇದರೊಂದಿಗೆ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಿರುವ ದೇಶದ ಮೊತ್ತ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಭಾಜನವಾಗಲಿದೆ. ಸಂಪುಟದ ಅನುಮೋದನೆ ಪಡೆದಿರುವ ಯುಸಿಸಿ ಮಸೂದೆಯನ್ನು ಫೆಬ್ರವರಿ 6 ರಂದು ಉತ್ತರಾಖಂಡ್ ಅಸೆಂಬ್ಲಿ ಅಧಿವೇಶನದಲ್ಲಿ ಸರ್ಕಾರ ಮಂಡಿಸುವ ಸಾಧ್ಯತೆಯಿದೆ. ಉತ್ತರಾಖಂಡ ವಿಧಾನಸಭೆಯ ವಿಶೇಷ ನಾಲ್ಕು ದಿನಗಳ ಅಧಿವೇಶನವನ್ನು ಫೆಬ್ರವರಿ 5ರಿಂದ 8ರವರೆಗೆ ಈಗಾಗಲೇ ಕರೆಯಲಾಗಿದೆ.

2009: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಗೆ 'ಸಿದ್ಧಗಂಗಾಶ್ರೀ' ಪ್ರಶಸ್ತಿಯನ್ನು ತುಮಕೂರು ಸಿದ್ಧಗಂಗಾ ಮಠದಲ್ಲಿ ನಡೆದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಿ, ಗೌರವಿಸಲಾಯಿತು. ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘದ ಕೊಡುಗೆಯಾದ ಪ್ರಶಸ್ತಿಯನ್ನು ಮಠದ ಹಳೆಯ ವಿದ್ಯಾರ್ಥಿಯೂ ಆದ ಕವಿ ಶಿವರುದ್ರಪ್ಪ ಅವರಿಗೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಪ್ರದಾನ ಮಾಡಿ, ಆಶೀರ್ವದಿಸಿದರು. ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿಯನ್ನು ಶಿವರುದ್ರಪ್ಪ ಅವರು ತೆಗೆದುಕೊಳ್ಳದೆ ಮಠದ ದಾಸೋಹ ನಿಧಿಗೆ ಅರ್ಪಿಸಿದರು.

2009: ಹಲವು ಔಷಧೀಯ ಗುಣಗಳ ಆಗರವಾಗಿರುವ 'ತುಳಸಿ' ಸಸ್ಯವನ್ನು ಅದ್ಭುತ ಪ್ರೇಮಸೌಧ 'ತಾಜ್ ಮಹಲ್' ರಕ್ಷಣೆಗಾಗಿ ಈಗ ಬಳಸಿಕೊಳ್ಳಲಾಗುತ್ತಿದೆ ಎಂದು 'ಆರ್ಗ್ಯಾನಿಕ್ ಇಂಡಿಯಾ'ದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೃಷ್ಣನ್ ಗುಪ್ತಾ ಲಖನೌದಲ್ಲಿ ಪ್ರಕಟಿಸಿದರು. 'ತಾಜ್ ಮಹಲ್' ಅನ್ನು ವಾಯು ಮಾಲಿನ್ಯದಿಂದ ರಕ್ಷಿಸಲು ಉತ್ತರಪ್ರದೇಶದ ಅರಣ್ಯ ಇಲಾಖೆ ಹಾಗೂ ಲಖನೌ ಮೂಲದ ಆರ್ಗ್ಯಾನಿಕ್ ಇಂಡಿಯಾ ಕಂಪೆನಿ ಜಂಟಿಯಾಗಿ ಹತ್ತು ಲಕ್ಷ ತುಳಸಿ ಗಿಡಗಳನ್ನು ನೆಡಲು ನಿರ್ಧರಿಸಿವೆ ಎಂದು ಅವರು ಹೇಳಿದರು. ಈಗಾಗಲೇ 20 ಸಾವಿರ ತುಳಸಿ ಗಿಡಗಳನ್ನು ನೆಡಲಾಗಿದೆ. ತಾಜಮಹಲ್ ಸುತ್ತಲಿನ ಪಾರ್ಕ್‌ಗಳು ಹಾಗೂ ಆಗ್ರಾದಾದ್ಯಂತ ಇನ್ನಷ್ಟು ಸಸಿಗಳನ್ನು ನೆಡಲಾಗುವುದು ಎಂದು ಕೃಷ್ಣನ್ ಗುಪ್ತಾ ತಿಳಿಸಿದರು. ತುಳಸಿ ಪರಿಸರವನ್ನು ಶುದ್ಧೀಕರಿಸಲು ಅತ್ಯಂತ ಸೂಕ್ತ ಸಸ್ಯ. ಈ ಸಸ್ಯ ಅತಿ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಕೈಗಾರಿಕೆಗಳು ಹಾಗೂ ಸಂಸ್ಕರಣಾ ಘಟಕಗಳಿಂದ ಹೊರಸೂಸುವ ಮಲಿನ ವಾಯುವನ್ನು ಶುದ್ಧೀಕರಿಸುತ್ತದೆ ಎಂದು ನುಡಿದರು. ಆಗ್ರಾದ ಸುತ್ತಲೂ ಬೃಹತ್ ಪ್ರಮಾಣದಲ್ಲಿ ತುಳಸಿ ಗಿಡ ನೆಡುವ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಈ ಕೆಲಸದಲ್ಲಿ ಕೈಜೋಡಿಸುವಂತೆ ಗ್ರಾಮ ಪಂಚಾಯಿತಿಗಳು ಹಾಗೂ ಶಾಲೆಗಳನ್ನು ಕೇಳಿಕೊಳ್ಳಲಾಗಿದೆ ಎಂದು ಆಗ್ರಾದ ವಲಯ ಅರಣ್ಯಾಧಿಕಾರಿ ಆರ್.ಪಿ. ಭಾರ್ತಿ ಹೇಳಿದರು.

2009: ಶ್ರೀಲಂಕಾದ ಕದನ ನಿರತ ಉತ್ತರ ವನ್ನೀ ಪ್ರಾಂತ್ಯದಲ್ಲಿ ಶೆಲ್ ದಾಳಿಯಿಂದ ಕನಿಷ್ಠ 52 ನಾಗರಿಕರು ಮೃತರಾದರು. ಆಸ್ಪತ್ರೆಯೊಂದಕ್ಕೆ ಬಾಂಬ್ ಬಿದ್ದಿತು. ಗಾಯಾಳುಗಳಿಗೆ ವೈದ್ಯಕೀಯ ಸೌಲಭ್ಯ ಪೂರೈಸುವಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಆಸ್ಪತ್ರೆಯ ಮೇಲೆ ಸರಣಿ ಬಾಂಬ್‌ಗಳನ್ನು ಹಾಕಲಾಯಿತು.

2009: ದೇವನಹಳ್ಳಿ ತಾಲ್ಲೂಕಿನ ಎಂಟು ಮರಳು ಫಿಲ್ಟರ್ ಘಟಕಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಅಕ್ರಮದಲ್ಲಿ ತೊಡಗಿದ್ದ ಮೂರು ಮಂದಿಯನ್ನು ಬಂಧಿಸಿ, 18 ಲಾರಿ, ಐದು ಟ್ರಾಕ್ಟರ್, ಐದು ಜೆಸಿಬಿ ಮತ್ತು 34 ಬೃಹತ್ ಪಂಪ್‌ಗಳನ್ನು ವಶಪಡಿಸಿಕೊಂಡರು. ತಾಲ್ಲೂಕಿನ ಚಿಕ್ಕಗೊಲ್ಲಹಳ್ಳಿ, ಗೊಲ್ಲಹಳ್ಳಿ, ಕಾರಹಳ್ಳಿ, ಮಾಯಸಂದ್ರ, ತೈಲಗಿರಿ, ಮಿಸ್ಕನಹಳ್ಳಿ, ಬ್ಯಾಡರಹಳ್ಳಿ, ಗುಡ್‌ರಿಚ್ ಗ್ರಾಮಗಳಲ್ಲಿ ಮರಳು ದಂಧೆ ನಡೆಯುತ್ತಿತ್ತು. ಸರ್ಕಾರ ಭೂ ರಹಿತರಿಗೆ ಮಂಜೂರು ಮಾಡುವ ಜಮೀನಿನಲ್ಲಿ ಮರಳು ಫಿಲ್ಟರ್ ಮಾಡಲಾಗುತ್ತಿತ್ತು. ನಿಯಮ ಪ್ರಕಾರ ಈ ಭೂಮಿಯನ್ನು ಕೃಷಿಗೆ ಬಿಟ್ಟು ಬೇರೆ ಯಾವುದೇ ಉದ್ಧೇಶಕ್ಕೂ ಬಳಸುವಂತಿಲ್ಲ. ಆದರೆ ಈ ಜಮೀನನ್ನು ಮರಳು ಫಿಲ್ಟರ್ ದಂಧೆಗೆ ಗುತ್ತಿಗೆ ನೀಡಲಾಗಿತ್ತು.

2008: ಉಡುಪಿ ಕೃಷ್ಣಮಠದ ಇತಿಹಾಸದಲ್ಲಿ ಅಲ್ಲೋಲ, ಕಲ್ಲೋಲಕ್ಕೆ ಕಾರಣವಾಗಿದ್ದ ಪುತ್ತಿಗೆ ಪರ್ಯಾಯ ವಿವಾದ ಬಗೆಹರಿಯಿತು. ಈದಿನ ಜರುಗಿದ ನಾಟಕೀಯ ಬೆಳವಣಿಗೆಯೊಂದರಲ್ಲಿ ಪುತ್ತಿಗೆ ಪರ್ಯಾಯ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದು, ಭಯೋತ್ಪಾದಕರ ಬೆದರಿಕೆಯ ಮಧ್ಯೆಯೂ ಕೃಷ್ಣಮಠದ ಪರಿಸರದಲ್ಲಿ ಹೊಸ ಸಂಚಲನ ಆರಂಭಗೊಂಡಿತು. ಪುತ್ತಿಗೆ ಪರ್ಯಾಯ ವಿವಾದ ಸೌಹಾರ್ದಯುತವಾಗಿ ಬಗೆಹರಿದಿದೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ಹೇಳಿಕೆ ನೀಡಿದರು. ಅದನ್ನು `ತಾತ್ವಿಕ'ವಾಗಿ ಬೆಂಬಲಿಸಿರುವ ವಿರೋಧಿ ಯತಿಗಳು ಕೃಷ್ಣ ಪೂಜೆ ವಿಚಾರದಲ್ಲಿ `ಷರತ್ತುಬದ್ಧ' ಒಪ್ಪಿಗೆ ಸೂಚಿಸಿದರು. ಇದರ ಬೆನ್ನಲ್ಲೇ ಪುತ್ತಿಗೆ ಶ್ರೀಗಳೂ `ಸುಖಾಂತ್ಯಕ್ಕೆ ಸಮ್ಮತಿ ಇದೆ' ಎಂದು ತಿಳಿಸಿದರು. ಇದರೊಂದಿಗೆ ವಿವಾದ ಬಗೆಹರಿದದ್ದು ಖಚಿತವಾಯಿತು. ಅಷ್ಟಮಠದ ಆರು ಯತಿಗಳು ವಿಧಿಸಿದ್ದ ಷರತ್ತಿನಲ್ಲಿ 'ಕೃಷ್ಣಪೂಜೆ' ಪ್ರಮುಖವಾಗಿತ್ತು. ಪುತ್ತಿಗೆ ಶ್ರೀಗಳು ಕೃಷ್ಣಪೂಜೆಯನ್ನು ಸ್ವತಃ ಮಾಡುವ ಬದಲು ಶೀರೂರು ಮಠಾಧೀಶರಿಗೆ ವಹಿಸಿದ್ದರು. ಶೀರೂರು ಮಠಾಧೀಶರು ಅಸ್ವಸ್ಥತೆ ಕಾರಣ ಈದಿನ ಕೃಷ್ಣಪೂಜೆ ಮಾಡಲಾಗದೇ ಹೋದಾಗ ಪೇಜಾವರ ಶ್ರೀಗಳ ಜೊತೆ ನಡೆದ ಮಾತುಕತೆಯಿಂದ ವಿವಾದ ಬಗೆಹರಿಯಿತು. ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು ಈವರೆಗೆ ಗರ್ಭಗುಡಿಯಲ್ಲಿರುವ ಕಡೆಗೋಲು ಕೃಷ್ಣನ ಮೂಲ ಬಿಂಬವನ್ನು ಸ್ಪರ್ಶಿಸಿಲ್ಲ. ಅವರು ಮುಂದಿನ ದಿನಗಳಲ್ಲೂ ಅದನ್ನು ಸ್ಪರ್ಶಿಸಬಾರದು. ಅವರು ಎಲ್ಲಿಯವರೆಗೆ ಸ್ಪರ್ಶಿಸುವುದಿಲ್ಲವೋ, ಅಲ್ಲಿಯವರೆಗೆ ಕೃಷ್ಣಪೂಜಾ ವಿಷಯದಲ್ಲಿ ಷರತ್ತುಬದ್ಧ ಬೆಂಬಲ ನೀಡುತ್ತೇವೆ ಎಂದು ಇತರ ಯತಿಗಳು ಸ್ಪಷ್ಟ ಪಡಿಸಿದರು.

2008: ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಎನ್. ಆರ್. ನಾರಾಯಣ ಮೂರ್ತಿ ಅವರು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಂದಿನ ರಾಷ್ಟ್ರಪತಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಸಮ್ಮುಖದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆಪಾದಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಸಿ. ಕೆ. ಠಕ್ಕರ್ ಮತ್ತು ಆರ್. ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠವು ಅರ್ಜಿಯನ್ನು ತಿರಸ್ಕರಿಸಿ, `ಇದೊಂದು ಪ್ರಚಾರ ತಂತ್ರ. ಘಟನೆಯ ಬಗ್ಗೆ ನಾರಾಯಣಮೂರ್ತಿ ಅವರು ಈಗಾಗಲೇ ಕ್ಷಮೆ ಕೋರಿದ್ದಾರೆ, ಈ ಅರ್ಜಿಯನ್ನು ಪುರಸ್ಕರಿಸಲಾಗದು' ಎಂದು ಹೇಳಿತು. ಕನ್ನಡ ರಕ್ಷಣಾ ವಕೀಲರ ವೇದಿಕೆ ಈ ಸಂಬಂಧ ಅರ್ಜಿ ಸಲ್ಲಿಸಿ, ರಾಷ್ಟ್ರಪತಿ ಡಾ. ಕಲಾಂ ಪಾಲ್ಗೊಂಡ್ದಿದ ಕಾರ್ಯಕ್ರಮದಲ್ಲಿ ಅಧಿಕೃತ ಶಿಷ್ಟಾಚಾರದ ಹಾಡಿನ ರೂಪದ ರಾಷ್ಟ್ರಗೀತೆ ಹಾಡಿಸದೆ ನಾರಾಯಣಮೂರ್ತಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ' ಎಂದು ಆಪಾದಿಸಿತ್ತು.

2008: ಇಂದಿರಾನಗರದ ಚಿನ್ಮಯ ಮಿಷನ್ ಆಸ್ಪತ್ರೆಯಿಂದ (ಸಿಎಂಎಚ್) 100 ಅಡಿ ರಸ್ತೆಯವರೆಗಿನ ಮರಗಳನ್ನು ಕಡಿಯುವುದಕ್ಕೆ ತಡೆ ನೀಡಿ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿ ಎಂ ಆರ್ ಸಿ) ಹೈಕೋರ್ಟ್ ಆದೇಶಿಸಿತು. ಮರ ಕಡಿಯುತ್ತಿರುವುದನ್ನು ಪ್ರಶ್ನಿಸಿ `ಸಿಎಂಎಚ್ ರಸ್ತೆ ವ್ಯಾಪಾರಸ್ಥರು ಮತ್ತು ನಾಗರಿಕರ ಕ್ಷೇಮಾಭಿವೃದ್ಧಿ ಸಂಘ' ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಈ ಆದೇಶ ಹೊರಡಿಸಿ, ವಿಚಾರಣೆ ಮುಂದೂಡಿದರು.

2008: ಚಲಿಸುವ ರೈಲಿಗೆ ಸಿಕ್ಕಿ ಹಾಕಿಕೊಂಡು ಗರ್ಭಣಿ ಆನೆ ಸೇರಿದಂತೆ ಮೂರು ಆನೆಗಳು ಸ್ಥಳದಲ್ಲೇ ಸತ್ತುಹೋದ ಕರುಳು ಹಿಂಡುವ ದುರ್ಘಟನೆ ಈದಿನ ಬೆಳಗಿನ ಜಾವ ಕೊಯಮತ್ತೂರು ಸಮೀಪ ಘಟಿಸಿತು. ವರ್ಕ್ ಶಾಪಿನಲ್ಲಿ `ಸರ್ವೀಸಿಂಗ್' ಮುಗಿದ ಮೇಲೆ ಮೂರು ಬೋಗಿಗಳ ಖಾಲಿ ರೈಲು ನಿಲ್ದಾಣಕ್ಕೆ ವಾಪಸ್ಸು ಹೋಗುತ್ತಿದ್ದಾಗ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿತು.

2008: ಬೆಂಗಳೂರಿನ ರಾಜರಾಜೇಶ್ವರಿ ನಗರದ ಆಂಧ್ರ ಬ್ಯಾಂಕಿಗೆ ಹಾಡಹಗಲೇ ಮಾರಕಾಸ್ತ್ರಗಳೊಂದಿಗೆ ನುಗ್ಗಿದ ದರೋಡೆಕೋರರು ವ್ಯವಸ್ಥಾಪಕರನ್ನು ಥಳಿಸಿ, ಸುಮಾರು 2.50 ಲಕ್ಷ ರೂಪಾಯಿ ನಗದು ದೋಚಿಕೊಂಡು ಪರಾರಿಯಾದರು. ಮಧ್ಯಾಹ್ನ 1.50ರ ಸುಮಾರಿಗೆ ಐವರು ಮುಸುಕುಧಾರಿಗಳು ಬಿಇಎಂಎಲ್ ಮೂರನೇ ಹಂತದ ಎ ಎನ್ ಎಸ್ ರಸ್ತೆಯಲ್ಲಿನ ಬ್ಯಾಂಕಿಗೆ ನುಗ್ಗಿ ಈ ದುಷ್ಕೃತ್ಯ ಎಸಗಿದರು.

2008: ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹರಿಯುವ ಕೃಷ್ಣಾ- ಗೋದಾವರಿ ಸೇರಿದಂತೆ ಮೂರು ಅಂತಾರಾಜ್ಯ ನದಿ ಜೋಡಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿತು.

2008: ಕಥಕ್ಕಳಿ ನೃತ್ಯ ಪ್ರಕಾರದ ಹೆಸರಾಂತ ಕಲಾವಿದ ಗಿರಿಸನ್ (46) ತಿರುವನಂತಪುರದಲ್ಲಿ ಹೃದಯಾಘಾತದಿಂದ ನಿಧನರಾದರು. ರೆಸಾರ್ಟ್ ಒಂದರಲ್ಲಿ ಈದಿನ ರಾತ್ರಿ ನೃತ್ಯ ಪ್ರದರ್ಶನ ನೀಡಿದ ನಂತರ ಗಿರಿಸನ್ ನೆರೆದ ವಿದೇಶಿ ಪ್ರವಾಸಿಗರ ಜತೆ ಛಾಯಾಚಿತ್ರಕ್ಕೆ ಪೋಜು ನೀಡುತ್ತಿದ್ದಾಗ ತೀವ್ರ ಹೃದಯಾಘಾತಕ್ಕೊಳಗಾಗಿ ನೆಲಕ್ಕೆ ಕುಸಿದರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಮುಖದ ಮೇಲಿನ ಮೇಕಪ್, ಆಭರಣಗಳು ಮತ್ತು ಕಾಸ್ಟ್ಯೂಮ್ ಹಾಗೇ ಇದ್ದವು.

2008: ಪೂರ್ವ ನೇಪಾಳದ ಬಿರಾಟ್ ನಗರದಲ್ಲಿ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುವ ರೇಡಿಯೋ ಕೇಂದ್ರವೊಂದು ಅಸ್ತಿತ್ವಕ್ಕೆ ಬಂದಿತು. ಈ `ಪೂರ್ವಾಂಚಲ' ಎಫ್ ಎಂ ಕೇಂದ್ರ ನೇಪಾಳದಲ್ಲಿ ಸಮುದಾಯದಿಂದಲೇ ನಿರ್ವಹಿಸಲ್ಪಡುವ ಮೊದಲ ಎಫ್ ಎಂ ಕೇಂದ್ರವಾಗಿದ್ದು, ದಿನಕ್ಕೆ ಎಂಟು ಗಂಟೆಗಳ ಕಾಲ ಕಾರ್ಯಕ್ರಮ ಪ್ರಸಾರ ಮಾಡುವುದು. ಅಂಗರಕ್ಷಕ ಸಿಬ್ಬಂದಿಯಿಂದ ಹಿಡಿದು ಮ್ಯಾನೇಜರ್ ಹುದ್ದೆಯವರೆಗೆ 24 ಮಹಿಳೆಯರು ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2007: ವಿಶ್ವದ ಮಾಜಿ ಅಗ್ರ ರಾಂಕಿಂಗ್ ಆಟಗಾರ್ತಿ ಸ್ವಿಟ್ಜಲ್ಯಾಂಡಿನ ಮಾರ್ಟಿನಾ ಹಿಂಗಿಸ್ ಅವರು ಟೋಕಿಯೋದಲ್ಲಿ ನಡೆದ ಪಾನ್ ಫೆಸಿಫಿಕ್ ಓಪನ್ ಟೆನಿಸ್ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ದಾಖಲೆಯ ಐದನೇ ಬಾರಿಗೆ ಪ್ರಶಸ್ತಿಯ ಕಿರೀಟವನ್ನು ಮುಡಿಗೆ ಏರಿಸಿಕೊಂಡರು. ಫೈನಲ್ ಪಂದ್ಯದಲ್ಲಿ ಹಿಂಗಿಸ್ ರಷ್ಯಾದ ಅನಾ ಇವಾನೋವಿಕ್ ಅವರನ್ನು ಮಣಿಸಿದರು. 1997, 1999, 2000 ಮತ್ತು 2002ರಲ್ಲಿಯೂ ಹಿಂಗಿಸ್ ಅವರು ಪಾನ್ ಫೆಸಿಫಿಕ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಕಳೆದ ವರ್ಷ ಮಾತ್ರ ಎಲೆನಾ ಡೆಮೆಂಟೀವಾ ಎದರು ಸೋತು ಪ್ರಶಸ್ತಿಯಿಂದ ವಂಚಿತರಾಗಿದ್ದರು.

2007: ನೆಲದಿಂದ ನೆಲಕ್ಕೆ ಪ್ರಯೋಗಿಸಬಹುದಾದ `ಬ್ರಹ್ಮೋಸ್' ಕ್ಷಿಪಣಿಯ ಪರೀಕ್ಷಾ ಪ್ರಯೋಗವನ್ನು ಒರಿಸ್ಸಾದ ಬಾಲಸೋರ್ ಜಿಲ್ಲೆಯ ಚಂಡಿಪುರದ ಆಂತರಿಕ ಪರೀಕ್ಷಾ ವಲಯದಲ್ಲಿ ಮಧ್ಯಾಹ್ನ 12.15ರ ವೇಳೆಗೆ ಯಶಸ್ವಿಯಾಗಿ ನಡೆಸಲಾಯಿತು. 9.2 ಮೀಟರ್ ಉದ್ದದ ಈ ಕ್ಷಿಪಣಿ 290 ಕಿ.ಮೀ. ವ್ಯಾಪ್ತಿಯವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದ್ದಿದು 200 ಕಿಲೋ ತೂಕದ ಸಿಡಿತಲೆಗಳನ್ನು ಒಯ್ಯಬಲ್ಲುದು.

2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಮೈಕೆಲ್ ಲೋಪೆಜ್ ಅವರ ಜೊತೆಗೆ ತಮ್ಮ ಎರಡನೇ ಬಾಹ್ಯಾಕಾಶ ನಡಿಗೆಯಲ್ಲಿ ಪಾಲ್ಗೊಂಡರು. ಅಂದಾಜು ಆರೂವರೆ ಗಂಟೆಗಳ ಕಾಲದ ಈ ಬಾಹ್ಯಾಕಾಶ ನಡಿಗೆಯಲ್ಲಿ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ತಂಪುಗೊಳಿಸುವ ವ್ಯವಸ್ಥೆಯ ದುರಸ್ತಿ ಕಾರ್ಯ ಕೈಗೊಂಡರು.

2007: ಕನ್ನಡ ಸಿನೆಮಾ ಮತ್ತು ರಂಗಭೂಮಿಯ ಹಿರಿಯ ನಟ ಶಿವಮೊಗ್ಗ ವೆಂಕಟೇಶ್ (60) ಶಿವಮೊಗ್ಗದಲ್ಲಿ ನಿಧನರಾದರು. 70ರ ದಶಕದಲ್ಲಿ ಅಭಿನಯ ತಂಡ ಕಟ್ಟುವ ಮೂಲಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಭುತ್ವದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ವೆಂಕಟೇಶ್ ಪ್ರಮುಖ ಪಾತ್ರ ವಹಿಸಿದ್ದರು. ಉತ್ತಮ ಪ್ರಭುತ್ವ ಲೊಳಲೊಟ್ಟೆ, ನಮ್ಮೊಳಗೊಬ್ಬ ನಾಜೂಕಯ್ಯ, ಹಯವದನ ಮುಂತಾದ ನಾಟಕಗಳ ಮೂಲಕ ರಂಗಭೂಮಿಯಲ್ಲಿ ತಮ್ಮ ಛಾಪು ಮೂಡಿಸಿದ್ದ ಅವರು ರಾಜ್ಯಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳನ್ನು ಗಳಿಸಿದ್ದರು. ಕನ್ನೇಶ್ವರ ರಾಮ, ಸಂತ ಶಿಶುನಾಳ ಶರೀಫ, ಆಸ್ಫೋಟ, ಚೋಮನ ದುಡಿ, ಆಕ್ಸಿಡೆಂಟ್ ಸೇರಿದಂತೆ ಇತ್ತೀಚಿನ ಮುನ್ನುಡಿ ಚಿತ್ರದವರೆಗೂ ವಿವಿಧ ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

2006: ಫಿಲಿಪ್ಪೀನ್ಸಿನ ಮನಿಲಾಕ್ಕೆ 15 ಕಿ.ಮೀ. ದೂರದ ಪಾಸಿಗ್ ಎಂಬಲ್ಲಿನ ಕ್ರೀಡಾಂಗಣ ಒಂದರಲ್ಲಿ ಆಯೋಜಿಸಲಾಗಿದ್ದ ಕೌನ್ ಬನೇಗಾ ಕರೋಡಪತಿ ಮಾದರಿಯ ವೊವೊವಿ ಹೆಸರಿನ ಟೆಲಿವಿಷನ್ ಕಾರ್ಯಕ್ರಮ ವೀಕ್ಷಿಸಲು ನೆರೆದಿದ್ದ ಗುಂಪಿನಲ್ಲಿ ಉಂಟಾದ ನೂಕುನುಗ್ಗಲಿಗೆ 88 ಜನ ಬಲಿಯಾಗಿ 200ಕ್ಕೂ ಹೆಚ್ಚು ಜನ ಗಾಯಗೊಂಡರು.

2006: ಅಂತಾರಾಷ್ಟ್ರೀಯ ಸಮುದಾಯದ ವಿರೋಧದ ನಡುವೆಯೂ ಪರಮಾಣು ಕಾರ್ಯಕ್ರಮ ಮುಂದುವರೆಸಿದ ಇರಾನ್ ಪ್ರಕರಣವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಶಿಫಾರಸು ಮಾಡಲಾಯಿತು. ಇರಾನ್ ಹಣೆಬರಹ ನಿರ್ಧರಿಸುವ ನಿಟ್ಟಿನಲ್ಲಿ ಈ ದಿನ ನಡೆದ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ನಡೆಸಿದ ಚುನಾವಣೆಯಲ್ಲಿ ಭಾರತ ಸೇರಿದಂತೆ 27 ರಾಷ್ಟ್ರಗಳು ಇರಾನ್ ವಿರುದ್ಧ ಮತ ಚಲಾಯಿಸಿದವು. ಪರವಾಗಿ 3 ಮತಗಳು ಚಲಾವಣೆಗೊಂಡವು.

1990: ಕೇರಳದ ಎರ್ನಾಕುಲಂ ಜಿಲ್ಲೆಯನ್ನು ಭಾರತದ ಮೊತ್ತ ಮೊದಲ ಸಾಕ್ಷರ ಜಿಲ್ಲೆ ಎಂಬುದಾಗಿ ಘೋಷಿಸಲಾಯಿತು.

1983: ಅಮೆರಿಕನ್ ಗಾಯಕಿ ಕರೇನ್ ಕಾರ್ಪೆಂಟರ್ ಮೃತರಾದರು. ಇವರ ಸಹೋದರ ಕೂಡಾ ಗಾಯಕನಾಗಿದ್ದು ಇವರಿಬ್ಬರ ಜೋಡಿ `ಕಾರ್ಪೆಂಟರ್ ದ್ವಯರ ಜೋಡಿ' ಎಂದೇ ಖ್ಯಾತಿ ಪಡೆದಿತ್ತು.

1977: ಕಲಾವಿದ ಮನು ಚಕ್ರವರ್ತಿ ಜನನ.

1974: ಕಲಾವಿದ ಗಣೇಶ ರಾಮಣ್ಣ ಮರೂರ ಜನನ.

1974: ಭಾರತದ ಗಣಿತ ತಜ್ಞ ಹಾಗೂ ಭೌತ ತಜ್ಞ ಸತ್ಯೇಂದ್ರನಾಥ ಬೋಸ್ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು.

1958: ಕಲಾವಿದೆ ಮೀರಾ ಎಚ್. ಎನ್. ಜನನ.

1945: ಮಿತ್ರ ಪಡೆಗಳ ಧುರೀಣರಾದ ರೂಸ್ ವೆಲ್ಟ್, ಚರ್ಚಿಲ್ ಮತ್ತು ಸ್ಟಾಲಿನ್ ಕ್ರೀಮಿಯಾದ ಯಾಲ್ಟಾದಲ್ಲಿ ಸಭೆ ಸೇರಿದರು. ಪೋಲಿಶ್ ಸಮಸ್ಯೆ ಕುರಿತು ಚರ್ಚಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು.

1942: ಕಲಾವಿದ ಸದಾಶಿವಗೌಡ ಸಿದ್ದಗೌಡ ಜನನ.

1938: ಬಿರ್ಜು ಮಹಾರಾಜ್ ಹುಟ್ಟಿದ ದಿನ. ಕಥಕ್ ನೃತ್ಯ ಪಟು ಹಾಗೂ ನೃತ್ಯ ಸಂಯೋಜಕರಾದ ಇವರು ಕಥಕ್ ಕಲೆಯನ್ನು ನೃತ್ಯರೂಪದಲ್ಲಿ ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

1938: ರಂಗಭೂಮಿಯ ಹಿರಿಯ ಕಲಾವಿದೆ, ದೂರದರ್ಸನ ಧಾರಾವಾಹಿಗಳ ಮೌಲ್ಯಯುತ ಪಾತ್ರಗಳ ನಿರ್ವಹಣೆಯ ಅನುಭವಿ ಪಾತ್ರಧಾರಿ ಎಂದೇ ಖ್ಯಾತರಾದ ಭಾರ್ಗವಿ ನಾರಾಯಣ್ ಅವರು ಡಾ. ಎಂ. ರಾಮಸ್ವಾಮಿ- ನಾಮಗಿರಿಯಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1931: ಸಾಹಿತಿ, ಸಮಾಜ ಸೇವಕ ಮಾ.ಭ. ಪೆರ್ಲ ಹುಟ್ಟಿದ ದಿನ. ಕಾಸರಗೋಡು ಜಿಲ್ಲೆಯ ಸೆಟ್ಟಬೈಲು ಗ್ರಾಮ ಇವರ ಹುಟ್ಟೂರು. ತಂದೆ ಗುರು ವೆಂಕಟೇಶ ಭಟ್ಟರು, ತಾಯಿ ಲಕ್ಷ್ಮಿ. ಕಥೆ, ಲೇಖನ, ಕಾದಂಬರಿ, ಸಂದರ್ಶನ ಸೇರಿದಂತೆ 25ಕ್ಕೂ ಹೆಚ್ಚು ಕೃತಿ ರಚಿಸಿದ ಇವರು ರಾಯಚೂರಿನ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾಗಲೇ ಸೇವಾ ಭಾರತಿ ಟ್ರಸ್ಟ್ ಮೂಲಕ ಪ್ರೇರಣಾ ಬುದ್ದಿಮಾಂದ್ಯ ಮಕ್ಕಳ ಶಾಲೆ ಸ್ಥಾಪಿಸಿದ್ದರು. ಪೆರ್ಲಕ್ಕೆ ವಾಪಸಾದ ಬಳಿಕವೂ ಬಾಲಮಂದಿರ, ಬಾಲಭಾರತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆ ಆರಂಭಿಸಿದವರು. ಸಮುದಾಯ ಪತ್ರಿಕೆ ಕರಾಡ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದರು.

1926: ಕಲಾವಿದ ವೆಂ.ಮು. ಜೋಶಿ ಜನನ.

1924: ಮಾಜಿ ರಾಷ್ಟ್ರಪತಿ ದಿವಂಗತ ಕೆ.ಆರ್. ನಾರಾಯಣನ್ ಅವರು ಈದಿನ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಜನಿಸಿದರು. ತೀರಾ ಬಡ ಕುಟುಂಬದಲ್ಲಿ ಹುಟ್ಟಿದ ಅವರು 1997ರ ಜುಲೈ 25ರಿಂದ ಐದು ವರ್ಷಗಳ ಕಾಲ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಮೊಟ್ಟ ಮೊದಲ ದಲಿತ ಹಾಗೂ ಮಲಯಾಳಿ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದು.

1922: ಪಂಡಿತ್ ಭೀಮಸೇನ್ ಜೋಶಿ ಹುಟ್ಟಿದ ದಿನ. ಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದವರು.

1920: ಕಲಾವಿದ ಕೆ.ಬಿ. ಕುಲಕರ್ಣಿ ಜನನ.

1920: ಕಲಾವಿದ ಕೆ.ಬಿ. ಕಾಳೆ ಜನನ.

1917: ಪಾಕಿಸ್ಥಾನಿ ಸೇನಾಪಡೆಗಳ ಮುಖ್ಯ ಸೇನಾಧಿಕಾರಿ ಆಗಾ ಮಹಮ್ಮದ್ ಯಾಹ್ಯಾ ಖಾನ್ (1917-1980) ಹುಟ್ಟಿದರು.

1969-71ರ ಅವಧಿಯಲ್ಲಿ ಇವರು ಪಾಕಿಸ್ಥಾನದಲ್ಲಿ ಅಧ್ಯಕ್ಷರಾಗಿದ್ದರು.

1913: ಅಮೆರಿಕಾದ ಕರಿಯ ಮಹಿಳೆ ರೋಸಾ ಪಾರ್ಕ್ಸ್ (1913-2005) ಹುಟ್ಟಿದರು. ಬಸ್ಸಿನಲ್ಲಿ ಬಿಳಿಯ ವ್ಯಕ್ತಿಯೊಬ್ಬನಿಗೆ ಆಸನ ಬಿಟ್ಟುಕೊಡಲು ಈಕೆ ನಿರಾಕರಿಸಿದ ಘಟನೆ 1955ರಲ್ಲಿ ಅಲಬಾಮಾದ ಮಾಂಟ್ಗೊಮೆರಿಯಲ್ಲಿ ಬಸ್ಸು ಬಹಿಷ್ಕಾರ ಚಳವಳಿಯೊಂದಿಗೆ ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಗೆ ನಾಂದಿಯಾಯಿತು.

1902: ಲಿಂಡ್ ಬರ್ಗ್ (1902-1974) ಹುಟ್ಟಿದ ದಿನ. ಇವರು 1927ರ ಮೇ ತಿಂಗಳಲ್ಲಿ ನ್ಯೂಯಾರ್ಕಿನಿಂದ ಪ್ಯಾರಿಸ್ಸಿಗೆ ಮೊತ್ತ ಮೊದಲ ಬಾರಿಗೆ ಅಟ್ಲಾಂಟಿಕ್ ಸಾಗರದ ಮೇಲಿನಿಂದ ಎಲ್ಲೂ ನಿಲ್ಲದೆ ಸತತವಾಗಿ ಏಕವ್ಯಕ್ತಿ ವಿಮಾನ ಹಾರಾಟ ನಡೆಸಿ ದಾಖಲೆ ನಿರ್ಮಿಸಿದರು.

1861: ಅಲಬಾಮಾದ ಮಾಂಟ್ಗೊಮೆರಿಯಲ್ಲಿ ದಕ್ಷಿಣ ಅಮೆರಿಕಾದ ಏಳು ಪ್ರತ್ಯೇಕತಾವಾದಿ ರಾಜ್ಯಗಳು ಒಟ್ಟುಗೂಡಿ `ಕನ್ಫೆಡರೇಟ್ ಸ್ಟೇಟ್ ಆಫ್ ಅಮೆರಿಕಾ' ಸ್ಥಾಪನೆ ಮಾಡಿದವು.

Advertisement