Tuesday, November 13, 2007

Gou Puja Vaibhava at Bangalore

ರಾಜಧಾನಿಯಲ್ಲಿ 'ಗೋ ಪೂಜಾ' ವೈಭವ..!

ದೀಪಾವಳಿಗೆ ಮೊದಲೇ ತಿಂಗಳುಗಟ್ಟಲೆ ದೀಪ ಸಂಭ್ರಮ. ಬೆಂಗಳೂರು ಬಡಾವಣೆಗಳಲ್ಲಿ ಗೋವುಗಳಿಗೆ ಆರತಿ, ಪೂಜೆ. ಗೋ ಸಂರಕ್ಷಣೆಯ ಪ್ರತಿಜ್ಞೆ. ನವೆಂಬರ್ 18ರಂದು ಅರಮನೆ ಮೈದಾನದಲ್ಲಿ 'ಗೋಸಂಧ್ಯಾ'' ವಿರಾಟ್ದರ್ಶನ..!

ನೆತ್ರಕೆರೆ ಉದಯಶಂಕರ

ಬೆಂಗಳೂರಿನ ಎಚ್ಬಿಆರ್ ಬಡಾವಣೆಯ ಕಾಚರಕನಹಳ್ಳಿಯಲ್ಲಿ ಅಂದು ಸಂಜೆ ಹತ್ತು ಸಹಸ್ರಕ್ಕೂ ಹೆಚ್ಚು ಮಂದಿ ಸೇರಿದ್ದರು. ಎಲ್ಲರಲ್ಲೂ ಕಾತರ, ಕುತೂಹಲ. ಇದೇನಿದು ಹೊಸ ಬಗೆಯ ಕಾರ್ಯಕ್ರಮ?ಭವ್ಯ ವೇದಿಕೆಯ ಮೇಲೆ ಎರಡು ಗೋವುಗಳು ಕರುಗಳ ಜೊತೆಗೆ ಹುಲ್ಲು ತಿನ್ನುತ್ತಾ ಪವಡಿಸಿದ್ದವು. ಸಭಾಂಗಣದ ಹೊರಭಾಗದಲ್ಲೂ ಹತ್ತಾರು ಗೋವುಗಳು, ಎತ್ತುಗಳು. ಅವುಗಳನ್ನು ಸಾಕಿದ್ದ ರೈತರು ಹೆಮ್ಮೆಯಿಂದ ಅಡ್ಡಾಡುತ್ತಿದ್ದರು.ಅಂದು ಮುಂಜಾನೆಯಿಂದಲೇ ಬಡಾವಣೆಯ ಆಸುಪಾಸಿನ ಪ್ರಮುಖ ರಸ್ತೆಗಳಲ್ಲಿ ಗೋ ರಥಯಾತ್ರೆ ಸಂಚರಿಸಿತ್ತು. ಈ ರಥದಲ್ಲಿ ತನ್ನ ಕರುವಿಗೆ ಹಾಲುಣಿಸುತ್ತಿದ್ದ ಬಿಳಿಯ ಸುಂದರ ದನದ ಆಳೆತ್ತರದ ಪ್ರತಿಮೆ. ಜೊತೆಗೆ ಭಾರತದ ವಿವಿಧ ಪ್ರದೇಶಗಳ ಸುಮಾರು 32ಕ್ಕೂ ಹೆಚ್ಚಿನ ವೈವಿಧ್ಯಮಯ ಗೋತಳಿಗಳ ಚಿತ್ರವನ್ನು ಕಣ್ಮುಂದೆ ತರುವಂತಹ ಗೋವುಗಳ ಪುಟ್ಟಪುಟ್ಟ ಮೂತರ್ಿಗಳು. ರಸ್ತೆಯುದ್ದಕ್ಕೂ ಈ ರಥಕ್ಕೆ ಆರತಿ, ಪುಷ್ಪಾರ್ಚನೆ, ಪೂಜೆ. ಧ್ವನಿವರ್ಧಕದಲ್ಲಿ ಭಾರತೀಯ ಗೋವು ತಳಿಗಳ ಮಹತ್ವದ ಬಗ್ಗೆ ಪ್ರಚಾರ.

ಸಭಾಂಗಣದಲ್ಲಿ ಆಸು ಪಾಸಿನ ಗ್ರಾಮಗಳ ರೈತರು ಸಾಕಿದ ಭಾರತೀಯ ಗೋವು- ಎತ್ತುಗಳ ಪ್ರದರ್ಶನ. ಗೋ ಮೂತ್ರ, ಗೋಮಯದಿಂದ ತಯಾರಿಸಿದ ಔಷಧಿಗಳು, ಸೌಂದರ್ಯ ಸಾಧನಗಳ ಪ್ರದರ್ಶನ, ಮಾರಾಟ. ವೈದ್ಯರಿಂದ ಗವ್ಯ ಚಿಕಿತ್ಸೆ.ಸಭೆಯಲ್ಲಿ ಮಕ್ಕಳಿಂದ ಗೋವಿನ ಮಹತ್ವ ಸಾರುವ ಗೀತನೃತ್ಯ, ಮನ ಮಿಡಿಯುವ 'ಇಟ್ಟರೆ ಸಗಣಿಯಾದೆ...'' ಗೋವಿನ ಹಾಡು ಮೊಳಗುತ್ತಿದ್ದಂತೆಯೇ ಖ್ಯಾತ ಕಲಾವಿದ ಬಿ.ಕೆ.ಎಸ್. ವಮರ್ಾ ಅವರಿಂದ ಸುಂದರವಾದ ಗೋವಿನ ಚಿತ್ರ ರಚನೆ. 'ಕಾಮಧೇನು ಧ್ವಜದ ಆರೋಹಣದೊಂದಿಗೆ ಸಭೆಗೆ ಚಾಲನೆ. ಭಾರತೀಯ ಗೋವಿನ ಮಹತ್ವ, ಅದರ ಉಪಯುಕ್ತತೆ ಕುರಿತು ಸಭೆಯಲ್ಲಿ ಚಚರ್ೆ, ಭಾಷಣ. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರಿಂದ ಭಾರತೀಯ ಗೋವು ಸಂರಕ್ಷಣೆ- ಸಂವರ್ಧನೆಯ ಕಾರ್ಯದಲ್ಲಿ ಪಾಲ್ಗೊಳ್ಳುವ ಪ್ರಮಾಣ ವಚನ ಬೋಧನೆ. ಸಭೆಯಿಂದ ಒಕ್ಕೊರಲಿನೊಂದಿಗೆ ಅದರ ಅನುರಣನ.ಗೋವುಗಳಿಗೆ ಸ್ವಾಮೀಜಿ ಮತ್ತು ಸಹಸ್ರಾರು ಮಹಿಳೆಯರಿಂದ ಆರತಿ ಬೆಳಗಿ ಪೂಜೆ ಸಲ್ಲಿಸುವುದರೊಂದಿಗೆ ಸಭೆ ಸಮಾಪ್ತಿ.

''ಇದು ಎರಡನೆಯ ಸ್ವಾತಂತ್ರ್ಯ ಸಂಗ್ರಾಮ. ನಮ್ಮ ಜನರ ಆಥರ್ಿಕ, ಆರೋಗ್ಯ, ಆಧ್ಯಾತ್ಮಿಕ ಅಭ್ಯುದಯದ ಚಳವಳಿ. ನಮ್ಮ ಬಿಂದು ಬಿಂದು ರಕ್ತದಲ್ಲೂ ಹಂಡೆ ಹಂಡೆ ಗೋವಿನ ಹಾಲು ಇದೆ. ಈ ಹಾಲು ಕುಡಿದ ಎಲ್ಲರೂ ಜಾತಿ, ಮತ, ರಾಜಕೀಯ ಪಕ್ಷ ಭೇದಗಳಿಲ್ಲದೆ ಪಾಲ್ಗೊಳ್ಳಬೇಕು'' -ಇದು ಸಮಾವೇಶದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಕಳಕಳಿಯ ಕರೆ.ಬೆಂಗಳೂರಿನ ಕಾಚರಕನಹಳ್ಳಿಯಲ್ಲಷ್ಟೇ ಅಲ್ಲ, ರಾಜರಾಜೇಶ್ವರಿ ನಗರ, ರಾಜಾಜಿ ನಗರ, ಸಂಜಯ ನಗರ, ಆರ್.ಟಿ. ನಗರ, ಬಸವನಗುಡಿ, ವತರ್ೂರು, ಕೋರಮಂಗಲ, ಗಿರಿನಗರ ಮತ್ತಿತರ ಕಡೆಗಳಲ್ಲೂ ಇಂತಹ ಸಮಾವೇಶಗಳು ನಡೆದಿವೆ. ಈ ಸಮಾವೇಶಕ್ಕೆ ಸ್ವಾಮೀಜಿ ಇಟ್ಟಿರುವ ಹೆಸರು ''ಗೋಸಂಧ್ಯಾ''. ತಮ್ಮ ಆಧ್ಯಾತ್ಮಿಕ, ನೈತಿಕ ಬಲ ಸಂವರ್ಧನೆಗಾಗಿ ಮಠಾಧಿಪತಿಗಳು ಚಾತುಮರ್ಾಸ್ಯ ಕೈಗೊಳ್ಳುವುದು ರೂಢಿ. ಆದರೆ ರಾಘವೇಶ್ವರ ಸ್ವಾಮೀಜಿ ಅವರು ತಮ್ಮ ಚಾತುಮರ್ಾಸ್ಯವನ್ನು ಬೆಂಗಳೂರಿನಲ್ಲಿ ಗೋ ಸಂರಕ್ಷಣೆಯ ಚಳವಳಿಗೆ ಬಳಸಿಕೊಂಡಿರುವುದೇ ವಿಶೇಷ.

ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸದ್ದಿಲ್ಲದೆ ಈ ''ಗೋಸಂಧ್ಯಾ'' ಕಾರ್ಯಕ್ರಮಗಳು ನಡೆಯುತ್ತಿವೆ. ದೀಪಾವಳಿ ಗೋಪೂಜೆಗೆ ಮೊದಲೇ, ಗೋಧೂಳಿಯ ಹೊತ್ತಿನಲ್ಲಿ ಗೋವುಗಳಿಗೆ ಆರತಿಯೊಂದಿಗೆ ಪೂಜೆ ನಡೆಯುತ್ತಿದೆ. ಗೋವು ಕೇವಲ ಹಾಲಿಗಾಗಿ ಅಲ್ಲ, ಸಂಪೂರ್ಣ ಬದುಕಿನ ಉನ್ನತಿಗೆ ಹೇಗೆ ಉಪಯುಕ್ತ ಎಂಬ ಕುರಿತು ಚಿಂತನೆ, ಚಚರ್ೆ, ಉಪನ್ಯಾಸ, ಪ್ರದರ್ಶನಗಳೂ ನಡೆಯುತ್ತಿವೆ. ನಾವು ಗೋವನ್ನು ಸಾಕಬೇಕಿಲ್ಲ, ಗೋವುಗಳೇ ನಮ್ಮನ್ನು ಹೇಗೆ ಸಲಹಬಲ್ಲವು ಎಂಬ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಚಳವಳಿಯ ಬೃಹತ್ ಸ್ವರೂಪ ದೀಪಾವಳಿ- ಗೋಪೂಜೆಯ ಬಳಿಕ ಬೆಂಗಳೂರು ಅರಮನೆ ಮೈದಾನದಲ್ಲಿ ನವೆಂಬರ್ 18ರ ಭಾನುವಾರ ಅನಾವರಣಗೊಳ್ಳಲಿದೆ. ಅಂದು ಲಕ್ಷಕ್ಕೂ ಹೆಚ್ಚು ಮಹಿಳೆಯರು ಗೋವುಗಳಿಗೆ 'ಕೋಟಿ ನೀರಾಜನ' ಅಂದರೆ ಕೋಟಿ ಆರತಿ ಬೆಳಗಲಿದ್ದಾರೆ. ಈ ನಾಡು ಹಿಂದೆಂದೂ ಕಂಡರಿಯದ ಮನಮೋಹಕ ಹಬ್ಬ ಅದಾಗಲಿದೆ.

ಚಳವಳಿ: ಒಂದೇ ವಿಚಾರದ ಬಗ್ಗೆ ನಿರಂತರ ಚಿಂತನೆ, ಅದರ ಪ್ರಚಾರಕ್ಕಾಗಿ ನಿರಂತರ ಕಾರ್ಯಕ್ರಮ, ಹೋರಾಟಗಳು ನಡೆದರೆ ಅದು ಚಳವಳಿ ಎನಿಸಿಕೊಳ್ಳುತ್ತದೆ. ಈ ಕಾರಣಕ್ಕಾಗಿಯೇ ಸ್ವಾಮೀಜಿ ಇದನ್ನು ''ಎರಡನೆಯ ಸ್ವಾತಂತ್ರ್ಯ ಚಳವಳಿ' ಎಂಬುದಾಗಿ ಕರೆದದ್ದು. ಈ ಚಳವಳಿಯ ಮುಖ್ಯ ಉದ್ದೇಶ ಅವಸಾನದ ಅಂಚಿನತ್ತ ಸಾಗುತ್ತಿರುವ ಭಾರತೀಯ ಗೋ ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆ.ಭಾರತೀಯ ಗೋ ಸಂರಕ್ಷಣೆ- ಸಂವರ್ಧನೆಯ ಈ ವಿನೂತನ ಕಾರ್ಯಕ್ರಮ ಬೆಂಗಳೂರಿನಲ್ಲಿ ಹುಟ್ಟಿಕೊಂಡದ್ದಲ್ಲ. ಆದರೆ ಕನರ್ಾಟಕದಲ್ಲೇ ಇರುವ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಹುಟ್ಟಿದ್ದು.

ಕೆಲವಾರು ವರ್ಷಗಳ ಹಿಂದೆ ಆರಂಭವಾದ ''ಕಾಮದುಘಾ'' ಅದಕ್ಕೆ ನಾಂದಿ.

ಸ್ವಾತಂತ್ರ್ಯ ಸಿಗುವುದಕ್ಕೂ ಪೂರ್ವದಲ್ಲಿ ಸುಮಾರು 70ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಭಾರತೀಯ ಗೋವುಗಳ ತಳಿಗಳು ಅಳಿಯುತ್ತಾ ಈಗ ಸುಮಾರು 27-30ರ ಅಂಚಿಗೆ ತಲುಪಿವೆ. ರೈತರ ಜೀವನಾಡಿಯಂತಿದ್ದ ಭಾರತೀಯ ಗೋವುಗಳು ಮತ್ತು ಎತ್ತುಗಳು ದೇಶವು ಹಸಿರುಕ್ರಾಂತಿ ಮತ್ತು ಶ್ವೇತಕ್ರಾಂತಿ ಸಾಧಿಸಿದ ಬಳಿಕ ಅವಸಾನದ ಅಂಚಿಗೆ ಸಾಗಿದರೆ, ಲಕ್ಷಾಂತರ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಇತ್ತೀಚೆಗಿನ ವರ್ಷಗಳ ವಿದ್ಯಮಾನ.ಹಸಿರು ಕ್ರಾಂತಿಗಾಗಿ ರಸಗೊಬ್ಬರ ಮತ್ತು ಶ್ವೇತಕ್ರಾಂತಿಗಾಗಿ ವಿದೇಶೀ ಹಸುಗಳನ್ನು ನೆಚ್ಚಿಕೊಂಡದ್ದರ ಪರಿಣಾಮ ಈ ಅವನತಿ. ಗೋವು ಕೇವಲ ಹಾಲಿಗಾಗಿ ಅಲ್ಲ, ಸಂಪೂರ್ಣ ಬದುಕಿಗಾಗಿ ಎಂಬ ಪ್ರಜ್ಞೆಯನ್ನು ಕಳೆದುಕೊಂಡದ್ದಕ್ಕೆ ಈ ದುರವಸ್ಥೆ.

'ಕಾಮದುಘಾ, ಗೋಬ್ಯಾಂಕ್: ಭಾರತೀಯ ಗೋವುಗಳು ಭಾರತೀಯ ಪರಿಸರಕ್ಕೆ ಒಗ್ಗಿಕೊಳ್ಳುವಂತಹುಗಳು, ಅತಿವೃಷ್ಟಿ- ಅನಾವೃಷ್ಟಿಯನ್ನು ತಾಳಿಕೊಳ್ಳಬಲ್ಲವುಗಳು. ಎತ್ತುಗಳು ಹೊಲ ಉಳುವುದರಿಂದ ಹಿಡಿದು ಸರಕು ಸಾಗಣೆಗೆ ಬಂಡಿಗಳಲ್ಲಿ ಬಳಸಲು ಬೇಕಾದ ತಾಕತ್ತು ಉಳ್ಳಂತಹವುಗಳು.ಈ ಗೋವು- ಎತ್ತುಗಳ ಹಾಲು ಮಾತ್ರವೇ ಅಲ್ಲ, ಮೂತ್ರ ಹಾಗೂ ಸಗಣಿಯಲ್ಲೂ ಔಷಧೀಯ ಗುಣಗಳಿವೆ, ಕೃಷಿಗೆ ಅವು ಅತ್ಯುತ್ತಮ ಗೊಬ್ಬರ. ಹಾಲಿಗಿಂತ ಹೆಚ್ಚಿನ ಬೆಲೆ ಈ ಗೋಮೂತ್ರ ಗೋಮಯಗಳಿಗೆ ಇವೆ ಎಂಬುದನ್ನು ಮತ್ತೆ ಜನರಿಗೆ ಮನದಟ್ಟು ಮಾಡುವುದರಿಂದ ಮಾತ್ರವೇ ಮತ್ತೆ ನಮ್ಮ ರೈತಾಪಿ ಜನರ ಆಥರ್ಿಕಸ್ಥಿತಿ, ಆರೋಗ್ಯ ಪರಿಸ್ಥಿತಿಗೆ ಚೇತರಿಕೆ ನೀಡಲು ಸಾಧ್ಯ ಎಂಬುದನ್ನು ಮನಗಂಡು ಸ್ವಾಮೀಜಿ ಆರಂಭಿಸಿದ ಯೋಜನೆಯೇ 'ಕಾಮದುಘಾ'.

ಅಳಿವಿನ ಅಂಚಿನಲ್ಲಿ ಇರುವ ಭಾರತೀಯ ಗೋವುಗಳ ಸಂರಕ್ಷಣೆ ಸಂವರ್ಧನೆಗಾಗಿ ಈ ಯೋಜನೆಯ ಅಡಿಯಲ್ಲಿ 27ಕ್ಕೂ ಹೆಚ್ಚು ಭಾರತೀಯ ಗೋ ತಳಿಗಳನ್ನು ದೇಶದಾದ್ಯಂತದಿಂದ ಸಂಗ್ರಹಿಸಿ ಸಂರಕ್ಷಿಸಲು 'ಅಮೃತಧಾರಾ'' ಗೋಶಾಲೆಗಳನ್ನು ಮಠ ಸ್ಥಾಪಿಸಿದೆ. ಹೊಸನಗರ, ಬೆಂಗಳೂರಿನ ಕಗ್ಗಲಿಪುರ, ಮೈಸೂರು, ಮಂಗಳೂರಿನ ಮುಳಿಯ, ವಿಟ್ಲ ಸಮೀಪದ ಪೆರಾಜೆ, ಕೇರಳದ ಬಜಕ್ಕೂಡ್ಲು ಮತ್ತಿತರ ಸ್ಥಳಗಳು ಸೇರಿದಂತೆ 18 ಕಡೆಗಳಲ್ಲಿ ಈಗ 'ಅಮೃತಧಾರಾ'' ಗೋಶಾಲೆಗಳಿವೆ. ಇವುಗಳ ಸಂಖ್ಯೆಯನ್ನು 108ಕ್ಕೆ ಏರಿಸುವ ಗುರಿ ಮಠದ್ದು.

ಗೋವುಗಳ ಸಂರಕ್ಷಣೆ ಕಷ್ಟಕರ ಎನಿಸಿದಾಗ ರೈತರ ನೆರವಿಗಾಗಿ ವಿಶಿಷ್ಟ ಕಲ್ಪನೆಯ ''ಗೋಬ್ಯಾಂಕ್''ನ್ನು ಮಠ ತೆರೆದಿದೆ. ಕಷ್ಟ ಕಾಲದಲ್ಲಿ ರೈತರು ತಮ್ಮ ಗೋವುಗಳನ್ನು ಈ ಬ್ಯಾಂಕಿನಲ್ಲಿ ಬಿಟ್ಟು ತಮ್ಮ ಕಷ್ಟ ಪರಿಹಾರದ ಬಳಿಕ ಒಯ್ಯಬಹುದು.ಸಾವಯವ ಗೊಬ್ಬರ ಬಳಸಿ ಮಾಡುವಂತಹ ಕೃಷಿ ವಿಧಾನ ಮೂಲಕ ಭೂಮಿಯ ಅಂತಃಸತ್ವ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿಗಾಗಿ 'ಅಮೃತಸತ್ವ'' ಯೋಜನೆ ರೂಪಿಸಿದೆ.ಔಷಧೀಯ ಗುಣ ಹೊಂದಿರುವ ಗೋಮೂತ್ರದಿಂದ ಅರ್ಕ ಮತ್ತಿತರ ಔಷಧಿ, ಕೇಶ ಸಂರಕ್ಷಕ, ದಂತ ಮಂಜನ, ಶ್ಯಾಂಪೂ, ಸ್ನಾನದ ಸಾಬೂನು, ಧೂಪ ಮತ್ತಿತರ ನಿತ್ಯ ಬಳಕೆ ವಸ್ತುಗಳು, ಸೌಂದರ್ಯ ಸಾಧನಗಳು, ಎರೆಗೊಬ್ಬರ ಇತ್ಯಾದಿಗಳನ್ನು ತಯಾರಿಸಿ ಜನಪ್ರಿಯಗೊಳಿಸುತ್ತಿದೆ. ವಿವಿಧ ರೋಗಗಳನ್ನು ಗುಣಪಡಿಸಬಲ್ಲಂತಹ ಗವ್ಯ ಚಿಕಿತ್ಸಾ ಕೇಂದ್ರಗಳನ್ನೂ ತೆರೆದಿದೆ.ಭಾರತೀಯ ಗೋವುಗಳ ರಕ್ಷಣೆಗಾಗಿ ಗೋರಕ್ಷಾ ಪರಿಷತ್ತುಗಳನ್ನು ತಾಲ್ಲೂಕು, ಜಿಲ್ಲಾ ಮಟ್ಟಗಳಲ್ಲಿ ರಚಿಸಿದೆ.ಗೋಮೂತ್ರ, ಗೋಮಯಗಳನ್ನು ಖರೀದಿಸುವ ಮೂಲಕ ಗೋವು ಜೀವಿಸಿರುವವರೆಗೂ ಅದರಿಂದ ಸಂಪಾದನೆಯ ದಾರಿ ತೋರಲು ರೈತರಿಂದ ಗೋವುಗಳು ಕಸಾಯಿಖಾನೆಯ ಹಾದಿ ಹಿಡಿಯದಂತೆ ರಕ್ಷಿಸಲು ಗವ್ಯ ಡೈರಿಗಳನ್ನೂ ಆರಂಭಿಸಿದೆ.

ಗೋವಿನಿಂದ ಇಷ್ಟೆಲ್ಲ ಉಪಯೋಗ ಇರುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿಯೇ ಕನರ್ಾಟಕ ಹಾಗೂ ಕೇರಳದಲ್ಲಿ 2005ರಲ್ಲಿ 'ಗೋರಥಯಾತ್ರೆ' ಸಂಘಟಿಸಿದ ಮಠ, 2007ರ ಏಪ್ರಿಲ್ನಲ್ಲಿ 9 ದಿನಗಳ 'ವಿಶ್ವ ಗೋ ಸಮ್ಮೇಳನ'ವನ್ನೂ ಹೊಸನಗರದಲ್ಲಿ ಸಂಘಟಿಸಿ, ಗೋ ಸಂರಕ್ಷಣಾ ಚಳವಳಿಗೆ ಹೊಸ ಆಯಾಮ ನೀಡಿತ್ತು.2005ರಲ್ಲಿ ಗೋರಥಯಾತ್ರೆ ಬಳಿಕ ಹೊಸನಗರದಲ್ಲಿ ನಡೆದ 'ರಾಮಾಯಣ ಸತ್ರ'' ಸಂದರ್ಭದಲ್ಲಿ ಸ್ವಾಮೀಜಿ ತಮ್ಮ ಮುಂದಿನ ಇಡೀ ಜೀವನವನ್ನು ಭಾರತೀಯ ಗೋ ಸಂರಕ್ಷಣೆಯ ಕಾರ್ಯಕ್ಕಾಗಿ ಮೀಸಲಿಡುವ ಪ್ರತಿಜ್ಞೆ ಮಾಡಿದರು.ಈ ಪ್ರತಿಜ್ಞಾ ಪಾಲನೆಯ ಅಂಗವಾಗಿಯೇ 'ಗೋ ಸಂರಕ್ಷಣೆಯ ಚಳವಳಿ ರಾಜಧಾನಿ ಬೆಂಗಳೂರಿಗೂ ವ್ಯಾಪಿಸಿದೆ.

ಬೆಂಗಳೂರಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳು ಫಲವೇನು? ಸ್ವಾಮೀಜಿ ಹೇಳುತ್ತಾರೆ: 'ಸಾಕಷ್ಟು ಸಂಖ್ಯೆಯಲ್ಲಿ ಇದೀಗ ವೈದ್ಯರು ಗವ್ಯ ಚಿಕಿತ್ಸೆ ನೀಡಲು ಹಾಗೂ ಉದ್ಯಮಿಗಳು ಗ್ರಾಮಾಂತರ ಪ್ರದೇಶಗಳಲ್ಲಿ ಗವ್ಯ ಆಧಾರಿತ ಉದ್ಯಮಗಳ ಸ್ಥಾಪನೆಗೆ ಮುಂದೆ ಬರುತ್ತಿದ್ದಾರೆ.'ಹಳ್ಳಿ ಹಳ್ಳಿಗಳಲ್ಲಿ ಇಂತಹ ಉದ್ಯಮಗಳು ಮತ್ತು ಗೋಮೂತ್ರ ಸಂಗ್ರಹದ ಡೇರಿಗಳು ಆರಂಭವಾಗಬೇಕು. ಜೀವಂತ ಗೋವು ಹೆಚ್ಚು ಉಪಯುಕ್ತ, ಹಾಲಿಗಿಂತ ಗೋವಿನ ಮೂತ್ರ ಹೆಚ್ಚು ಲಾಭದಾಯಕ ಎಂಬುದು ಜನರ ಅರಿವಿಗೆ ಬರಬೇಕು. ಆಗ ಗೋ ತಳಿ ಸಂರಕ್ಷಣೆ, ಸಂವರ್ಧನೆ ಸಲೀಸಾಗಿ ಗ್ರಾಮೀಣ ಬದುಕು ಸುಧಾರಿಸುತ್ತದೆ ಎಂಬ ದೃಢವಿಶ್ವಾಸ ವ್ಯಕ್ತಪಡಿಸುತ್ತಾರೆ ರಾಘವೇಶ್ವರ ಸ್ವಾಮೀಜಿ.

ಇದೋ ನಿಮಗಾಗಿ 'ಗೋ ಸಂಜೀವಿನಿ'...!

ಗೋಸಂರಕ್ಷಣೆಯ ಕಾರ್ಯ ಕೇವಲ ರೈತರಿಗಷ್ಟೇ ಸೀಮಿತ ಎಂದು ನಗರದ ಮಂದಿ ಭಾವಿಸಬೇಕಿಲ್ಲ. ಇದಕ್ಕಾಗಿ ರಾಮಚಂದ್ರಾಪುರ ಮಠ ''ಗೋಸಂಜೀವಿನಿ'' ಯೋಜನೆ ರೂಪಿಸಿದೆ. ಈ ಯೋಜನೆಯ ಅಡಿಯಲ್ಲಿ ಯಾರು ಬೇಕಾದರೂ 3000 ರೂಪಾಯಿ ದೇಣಿಗೆ ನೀಡಿ ಒಂದು ಗೋವಿನ ಪ್ರಾಣ ಉಳಿಸಬಹುದು. ಸಹಸ್ರಾರು ಮಂದಿ ಈಗಾಗಲೇ ಈ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ.

* ಗೋವಿನ ಹಾಲಿಗೆ ರೈತರಿಗೆ ಸಿಗುವ ದರ ಲೀಟರಿಗೆ ಅಂದಾಜು 12 ರೂಪಾಯಿ ಮಾತ್ರ. ಆದರೆ ಗೋವಿನ ಮೂತ್ರಕ್ಕೆ 80ರಿಂದ 100 ರೂಪಾಯಿವರೆಗೆ ಬೆಲೆ ಇದೆ. ಪುಟ್ಟ ಕರುವಿನಿಂದ ಹಿಡಿದು ಮುದಿ ಹಸು, ಮುದಿ ಎತ್ತಿನವರೆಗೂ ಪ್ರತಿ ಗೋವು ಕೂಡಾ ದಿನ ನಿತ್ಯವೂ ಕನಿಷ್ಠ 2-3 ಲೀಟರಿಗೆ ಕಡಿಮೆ ಇಲ್ಲದಂತೆ ಮೂತ್ರ ಹಾಗೂ ಸಗಣಿ ನೀಡುತ್ತದೆ. ಆದಾಯ ನೀವೇ ಲೆಕ್ಕ ಹಾಕಿಕೊಳ್ಳಿ.

* ಹಾಲು ಸಂಗ್ರಹಕ್ಕಿಂತ ಗೋಮೂತ್ರ ಸಂಗ್ರಹ ಸುಲಭ. ಹಟ್ಟಿಯಿಂದ ನೇರವಾಗಿ ಹರಿದು ಬಂದು ಒಂದೆಡೆ ಸಂಗ್ರಹ ಆಗುವಂತೆ ಮಾಡಿದರೆ ಸಾಕು. ಅದನ್ನು ಶೇಖರಿಸಿ, ಮನೆಯಲ್ಲೇ ಮಡಕೆ ಬಳಸಿ ಶುದ್ಧೀಕರಿಸಬಹುದು, ಇಲ್ಲವೇ ದೊಡ್ಡ ಪ್ರಮಾಣದ ಸಂಸ್ಕರಣಾ ಘಟಕಕ್ಕೆ ಒಯ್ದು ಶುದ್ಧೀಕರಿಸಬಹುದು.

* ಗೋಮೂತ್ರ ಶುದ್ಧೀಕರಿಸಿ ಅರ್ಕ ತಯಾರಿಸುವ 100 ಲೀಟರ್ ಸಾಮಥ್ರ್ಯದ ಘಟಕ ಸ್ಥಾಪನೆಗೆ ಅಂದಾಜು 3.60 ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಎರಡು ವರ್ಷಗಳಲ್ಲಿ ಈ ಹಣ ವಾಪಸ್ ಬರುತ್ತದೆ ಎಂಬುದು ಎಂಜಿನಿಯರ್ಗಳು ನೀಡಿರುವ ಅಧ್ಯಯನ ವರದಿ. ಮಾದರಿ ಘಟಕವೊಂದು ಶೀಘ್ರದಲ್ಲೇ ಬೆಂಗಳೂರಿನಲ್ಲೇ ಸ್ಥಾಪನೆಯಾಗಲಿದೆ. ಜೋಧಪುರದಲ್ಲಿ ಇಂತಹ ಘಟಕ ಈಗಾಗಲೇ ಸ್ಥಾಪನೆಗೊಂಡಿದೆ.

* ಭಾರತೀಯ ಗೋ ತಳಿಗಳ ಮೂತ್ರದಲ್ಲಿ 33 ಬಗೆಯ ವಿಶೇಷ ಔಷಧೀಯ ಗುಣಗಳಿವೆ. ನೀರಿನ ಅಂಶ ಶೇಕಡಾ 90ರಷ್ಟು ಇದ್ದರೆ, ಬ್ಯಾಕ್ಟೀರಿಯಾ ನಿರೋಧಕ ವಸ್ತು ಯೂರಿಯಾ ಶೇಕಡಾ 2.5ರಷ್ಟು, ಇತರ ಔಷಧೀಯ ಅಂಶಗಳು ಶೇಕಡಾ 2.5ರಷ್ಟು ಇವೆ. ಹಾನಿಗೊಳಗಾದ ಜೀವಕೋಶಗಳ ದುರಸ್ತಿ, ಅವುಗಳ ಪುನರ್ರಚನೆ, ಜೀವಕೋಶಗಳ ಸಂಖ್ಯೆ ವೃದ್ಧಿ, ಕೆಂಪು ರಕ್ತಕಣಗಳ ಉತ್ಪತ್ತಿ, ರಕ್ತಶುದ್ಧಿ, ರೋಗನಿರೋಧಕ ಶಕ್ತಿವರ್ಧನೆ ಸೇರಿದಂತೆ ಸುಮಾರು 164ಕ್ಕೂ ಹೆಚ್ಚು ಆರೋಗ್ಯ ಸಮಸ್ಯೆಗಳಿಗೆ ಇದರಲ್ಲಿ ಪರಿಹಾರ ಇದೆ ಎಂಬುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

* ಗೋಮೂತ್ರ, ಗೋಮಯಗಳಿಂದ ಹಲವಾರು ಬಗೆಯ ಆರೋಗ್ಯವರ್ಧಕ ಸೌಂದರ್ಯ ಸಾಧನಗಳನ್ನೂ ತಯಾರಿಸಲಾಗಿದೆ.

* ಗೋವಿನ ಮೂತ್ರ, ಸೆಗಣಿಯಿಂದ ಸಾವಯವ ಗೊಬ್ಬರವಷ್ಟೇ ಅಲ್ಲ, ವಿದ್ಯುತ್ ಇಂಧನ ಪಡೆಯಬಹುದು. ಇತ್ತೀಚಿನ ಸಂಶೋಧನೆಗಳ ಪ್ರಕಾರ ಎತ್ತುಗಳನ್ನು ಗಾಣ, ಗಾಡಿಗಳಲ್ಲಿ ಬಳಸಿ ನೇರವಾಗಿಯೇ ವಿದ್ಯುತ್ ಪಡೆಯಬಹುದು. ಹಳ್ಳಿಗಳಲ್ಲಿ ಎತ್ತಿನ ಗಾಡಿಗಳ ಮೂಲಕ ಸಾಗಣೆ ಸಮಸ್ಯೆ, ವಿದ್ಯುತ್ ಸಮಸ್ಯೆ ಎರಡಕ್ಕೂ ಪರಿಹಾರ ಉಂಟು.

* ನಗರಗಳಲ್ಲಿ ನಾಯಿ ಸಾಕುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ಭಾರತೀಯ ಗೋವು ಸಾಕಬಹುದು. ಅವುಗಳಿಗೆ ತಗಲುವ ವೆಚ್ಚ ಅವುಗಳಿಂದಲೇ ನಿಮಗೆ ಬರುತ್ತದೆ. ಅಷ್ಟಕ್ಕೂ ಗೋವು ಸಾಕಲು ಸಾಧ್ಯ ಇಲ್ಲವೇ ಇಲ್ಲ ಎಂದಾದರೆ 'ಗೋ ಸಂಜೀವಿನಿ' ಯೋಜನೆ ಉಂಟು. ಖಂಡಿತ ಇದರಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು.

1 comment:

ಉಕ್ಕಿನಡ್ಕಾಸ್ ಆಯುರ್ವೇದ said...

It Is Good job keep it up It is like big world in small hand

Advertisement