My Blog List

Friday, August 1, 2008

ಇಂದಿನ ಇತಿಹಾಸ History Today ಆಗಸ್ಟ್ 1

ಇಂದಿನ ಇತಿಹಾಸ

ಆಗಸ್ಟ್ 1

ಭಾರತೀಯ ಚಿತ್ರನಟಿ ಮೇಹ್ಜಬೀನ್ ಬಕ್ಸ್ (1932-1972) ಜನ್ಮದಿನ. ಮೀನಾಕುಮಾರಿ ಎಂದೇ ಜನಪ್ರಿಯರಾಗಿದ್ದ ಇವರಿಗೆ `ಪಾಕೀಜಾ' ಸಿನಿಮಾದ ಪಾತ್ರ ಅದ್ಭುತ ಖ್ಯಾತಿಯನ್ನು ತಂದುಕೊಟ್ಟಿತು.

2007: 1998ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿ, ನಿಷೇಧಿತ ಅಲ್- ಉಮ್ಮಾ ಸಂಘಟನೆಯ ಸ್ಥಾಪಕ ಎಸ್. ಎ. ಬಾಷಾ ತಪ್ಪಿತಸ್ಥ ಎಂದು ಘೋಷಿಸಿತು. ಪ್ರಕರಣದ 166 ಆರೋಪಿಗಳ ಬಗ್ಗೆ ತೀರ್ಪು ನೀಡಿದ ನ್ಯಾಯಾಧೀಶ ಕೆ. ಉತ್ತರಾಪತಿ ಕೇರಳ ಮೂಲದ ಸಂಘಟನೆ ಪಿಡಿಪಿಯ ಮುಖ್ಯಸ್ಥ ಅಬ್ದುಲ್ ನಾಸರ್ ಮದನಿಯನ್ನು ಆರೋಪಗಳಿಂದ ಮುಕ್ತಗೊಳಿಸಿದರು. ಬಾಷಾ ಜೊತೆಗೆ ಅಲ್- ಉಮ್ಮಾದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರಿ, ಬಾಷಾನ ಪುತ್ರ ಸಿದ್ದೀಕ್ ಅಲಿ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ಒಟ್ಟು 166 ಆರೋಪಿಗಳಲ್ಲಿ 71 ಜನರ ಮೇಲೆ ಕ್ರಿಮಿನಲ್ ಪಿತೂರಿಯ ಆರೋಪ ಸಾಬೀತಾಗಿದ್ದು, ಇತರ 82 ಜನರ ಮೇಲಿನ ಇತರ ಆರೋಪಗಳು ಸಾಬೀತಾದವು. ಮದನಿ ಮೇಲಿದ್ದ ಕ್ರಿಮಿನಲ್ ಪಿತೂರಿ, ಪ್ರಚೋದನಕಾರಿ ಭಾಷಣ ಮತ್ತು ಕೇರಳದಿಂದ ಕೊಯಮತ್ತೂರಿಗೆ ಸ್ಫೋಟಕಗಳನ್ನು ಸಾಗಿಸಿದ ಆರೋಪಗಳು ಸಾಬೀತಾಗಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರು ಫೆಬ್ರುವರಿ 14 ರಂದು ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಸ್ವಲ್ಪ ಮೊದಲು ಕೊಯಮತ್ತೂರು ನಗರದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. 19 ಕಡೆ ಸಂಭವಿಸಿದ ಸ್ಫೋಟಗಳಲ್ಲಿ 58 ಜನರು ಬಲಿಯಾಗಿ, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅಡ್ವಾಣಿಯವರನ್ನು ಕೊಲೆ ಮಾಡುವ ಉದ್ದೇಶದಿಂದ ಸರಣಿ ಬಾಂಬ್ ಸ್ಫೋಟ ನಡೆಸಲಾಗಿತ್ತು ಎಂದು ಪ್ರಕರಣದ ಬಗ್ಗೆ ತನಿಖೆ ನಡೆಸಿದ ತಮಿಳುನಾಡಿನ ವಿಶೇಷ ತನಿಖಾ ದಳ ವಾದಿಸಿತ್ತು.

2007: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆ ತಿದ್ದುಪಡಿ ವಿರೋಧಿಸಿ ಕರೆ ನೀಡಲಾಗಿದ್ದ ಬಂದ್ ಗೆ ಕರ್ನಾಟಕದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯದ ಎಲ್ಲ ಜಿಲ್ಲೆಗಳ ಎಪಿಎಂಸಿ ಯಾರ್ಡ್ಡುಗಳು ಬಂದ್ ಆಚರಿಸಿದವು. ರಾಜ್ಯ ವಿಧಾನ ಮಂಡಲದ ಉಭಯ ಸದನಗಳು ಸೂಕ್ತ ರೀತಿಯಲ್ಲಿ ಚರ್ಚೆ ಮಾಡದೇ ಎಪಿಎಂಸಿ ತಿದ್ದುಪಡಿ ಮಸೂದೆ ಅಂಗೀಕರಿಸಿವೆ. ತಿದ್ದುಪಡಿಯು ರೈತರಿಗೆ ಮಾರಕವಾಗಲಿದೆ ಎಂದು ಆರೋಪಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಅನಿರ್ದಿಷ್ಟ ಕಾಲದ ಬಂದ್ ಗೆ ಕರೆ ನೀಡಿತ್ತು. ಒಟ್ಟು 144 ಬೃಹತ್ ಮಾರುಕಟ್ಟೆ, 350 ಉಪ ಮಾರುಕಟ್ಟೆ ಮತ್ತು 700ಕ್ಕೂ ಅಧಿಕ ಚಿಲ್ಲರೆ ಮಾರುಕಟ್ಟೆಗಳು ಬಂದ್ ಆಚರಿಸಿದವು.

2007: ಗಣಪತಿಭಟ್ ಹಾಸಣಗಿ, ಬಿ.ಪಿ. ರಾಜಮ್ಮ, ಎಂ.ಎಸ್. ಶೀಲಾ, ಎಂ. ವೆಂಕಟೇಶ ಕುಮಾರ್, ಚಿತ್ರನಟ ಶ್ರೀಧರ್ ಸೇರಿದಂತೆ 17 ಮಂದಿ ಕಲಾವಿದರು ಮತ್ತು ಬೆಂಗಳೂರಿನ ರಾಜಾಜಿನಗರದ ಕುಮಾರವ್ಯಾಸ ಮಂಟಪ ಸಂಸ್ಥೆಯನ್ನು 2007-08ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಬೆಂಗಳೂರಿನಲ್ಲಿ ಅಕಾಡೆಮಿಯ ಅಧ್ಯಕ್ಷ ರಾಜಶೇಖರ ಮನ್ಸೂರ್ ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ವಾಷರ್ಿಕ ಪ್ರಶಸ್ತಿಗಳ ವಿಭಾಗಗಳಲ್ಲಿ ಸಂಗೀತ ಮತ್ತು ನೃತ್ಯ ಪ್ರಕಾರಗಳಲ್ಲಿ ಪ್ರಶಸ್ತಿ ಪುರಸ್ಕೃತರ ವಿವರ ಈ ರೀತಿ ಇದೆ: ಕನರ್ಾಟಕ ಸಂಗೀತ: ಡಾ. ರತ್ನಾ ಶಿವಶಂಕರ್, ಬೆಂಗಳೂರು (ಹಾಡುಗಾರಿಕೆ); ಬಿ.ಜಿ. ಶ್ರೀನಿವಾಸ, ಬೆಂಗಳೂರು (ಕೊಳಲು); ಕೆ.ಜೆ. ವೆಂಕಟೇಶಾಚಾರ್, ಮೈಸೂರು (ಪಿಟೀಲು). ಹಿಂದೂಸ್ತಾನಿ ಸಂಗೀತ: ಗಣಪತಿಭಟ್ ಹಾಸಣಗಿ, ಉತ್ತರಕನ್ನಡ (ಗಾಯನ); ಎಂ. ವೆಂಕಟೇಶ ಕುಮಾರ್, ಧಾರವಾಡ (ಗಾಯನ); ಅಕ್ಕಮಹಾದೇವಿ ಹಿರೇಮಠ, ಧಾರವಾಡ (ಪಿಟೀಲು). `ಭರತನಾಟ್ಯ: ನಿರ್ಮಲಾ ಮಂಜುನಾಥ್ (ಬೆಂಗಳೂರು); ಚಿತ್ರನಟ ಶ್ರೀಧರ್ (ಬೆಂಗಳೂರು); ಕೆ.ಜಿ. ಕುಲಕರ್ಣಿ (ಹಾವೇರಿ); ಕುಮುದಿನಿರಾವ್ (ಧಾರವಾಡ). ಸುಗಮ ಸಂಗೀತ: ನಾರಾಯಣ ಢಗೆ (ರಾಯಚೂರು). ಕಥಾಕೀರ್ತನ: ಬಿ.ಪಿ. ರಾಜಮ್ಮ ಹಾಗೂ ಡಾ. ಎಂ.ಕಿರಣ್ ಕುಮಾರ್ (ಬೆಂಗಳೂರು). ಗಮಕ ವಾಚನ: ಕೆ. ಜಯಮ್ಮ (ಹಾಸನ); ಎಂ.ಆರ್. ಸತ್ಯನಾರಾಯಣ (ಬೆಂಗಳೂರು). ಸಂಘ ಸಂಸ್ಥೆ: ಕುಮಾರವ್ಯಾಸ ಮಂಟಪ, ರಾಜಾಜಿನಗರ ಬೆಂಗಳೂರು.

2007: ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ತುತ್ತಾದ ಕರ್ನಾಟಕದ ಕರ್ನಲ್ ವಿ.ವಸಂತ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸೇನಾ ಗೌರವದೊಂದಿಗೆ ಬೆಂಗಳೂರಿನಲ್ಲಿ ನೆರವೇರಿತು.

2007: ಡೇರಾ ಸಚ್ಚಾ ಸೌದಾ ಧಾರ್ಮಿಕ ಪಂಗಡದ ಗುರು ಬಾಬಾ ಗುರ್ಮಿತ್ ರಾಮ್ ಸಿಂಗ್ ಅವರ ವಿರುದ್ಧ ಎರಡು ಕೊಲೆ ಹಾಗೂ ಒಂದು ಮಾನಭಂಗ ಮೊಕದ್ದಮೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ದಾಖಲಿಸಿತು. ಡೇರಾದ ವ್ಯವಸ್ಥಾಪಕ ರಂಜಿತ್ ಸಿಂಗ್ ಮತ್ತು ಸಿರ್ಸಾ ಮೂಲದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣ ಹಾಗೂ ಶಿಷ್ಯೆಯೊಬ್ಬಳ ಮಾನಭಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆಗಳನ್ನು ಹೂಡಲಾಗಿದೆ ಎಂದು ಸಿಬಿಐ ವಕೀಲ ರಾಜನ್ ಗುಪ್ತಾ ಪ್ರಕಟಿಸಿದರು. ಕೆಲ ದಿನಗಳ ಹಿಂದೆ ಡೇರಾ ಗುರು ಅವರು ಸಿಖ್ ಗುರು ಗೋವಿಂದ್ ಸಿಂಗ್ ಅವರಂತೆ ಪೋಷಾಕುಗಳನ್ನು ಧರಿಸಿ ಪ್ರಚಾರ ಗಿಟ್ಟಿಸಿದ್ದರು. ಇದಕ್ಕೆ ಸಿಖ್ ಸಮುದಾಯದವರು ಪ್ರತಿಭಟನೆ ವ್ಯಕ್ತಪಡಿಸಿದ್ದರಿಂದ ಅಲ್ಲಲ್ಲಿ ಗಲಭೆಗಳು ಉಂಟಾಗಿ ಒಬ್ಬ ಸತ್ತು 50 ಜನರು ತೀವ್ರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸ್ ಡೇರಾ ಗುರುವಿನ ವಿರುದ್ಧ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿತ್ತು.

2007: ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆಯುವ ಸಲುವಾಗಿ ಒರಿಸ್ಸಾದ `ಭುವನೇಶ್ವರದ ಸ್ಟ್ರಾಂಗ್ ಮ್ಯಾನ್' ಎಂದೇ ಹೆಸರು ಪಡೆದಿರುವ ಕೇಶವ್ ಸ್ವೇನ್ ಭುವನೇಶ್ವರದಲ್ಲಿ ತನ್ನ ಬಲ ಮೊಣಕೈಯ ಸಹಾಯದಿಂದ ಒಂದು ನಿಮಿಷದಲ್ಲಿ 72 ತೆಂಗಿನಕಾಯಿಗಳನ್ನು ಒಡೆದು ನೂತನ ದಾಖಲೆ ನಿರ್ಮಿಸಿದ. ಮಣ್ಣು ಮತ್ತು ಸಿಮೆಂಟಿನಿಂದ ನಿರ್ಮಿಸಿದ 3 ಅಡಿ ಎತ್ತರ ಮತ್ತು 20 ಅಡಿ ಉದ್ದದ ಗೋಡೆಯಲ್ಲಿ ಸಾಲಾಗಿ ತೆಂಗಿನಕಾಯಿಗಳನ್ನು ಇರಿಸಲಾಗಿತ್ತು. ಕೇಶವ್ ಒಂದು ನಿಮಿಷದಲ್ಲಿ ಒಟ್ಟು 72 ತೆಂಗಿನಕಾಯಿಗಳನ್ನು ಒಡೆಯುವಲ್ಲಿ ಯಶಸ್ವಿಯಾದ.

2006: ಅಮೆರಿಕಕ್ಕೆ ಸಡ್ಡು ಹೊಡೆದು ನಿಂತ ಕ್ಯೂಬಾದ ಕಮ್ಯೂನಿಸ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೋ 47 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿಯನ್ನು ಸಹೋದರ ರೌಲ್ ಗೆ ತಾತ್ಕಾಲಿಕವಾಗಿ ಬಿಟ್ಟುಕೊಟ್ಟರು. ಕರುಳಿನ ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರಕ್ಕೆ ಬಂದರು.

2006: ಅರಿಶಿಣ ಮತ್ತು ಈರುಳ್ಳಿಯ ರಸಾಯನಗಳಿಂದ ಸಿದ್ಧಪಡಿಸಿದ ಗುಳಿಗೆ ಕರುಳು ಕ್ಯಾನ್ಸರ್ ನಿಯಂತ್ರಣಕ್ಕೆ ಉತ್ತಮ ಔಷಧ ಎಂಬುದು ಬೆಳಕಿಗೆ ಬಂದಿದೆ ಎಂದು ಹ್ಯೂಸ್ಟನ್ ಜಾನ್ ಕಾಪ್ ಕಿನ್ಸ್ ವಿಶ್ವವಿದ್ಯಾಲಯ ಔಷಧ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಫ್ರಾನ್ಸಿಸ್ ಪ್ರಕಟಿಸಿದರು. ಈ ಔಷಧವನ್ನು 6 ತಿಂಗಳ ಕಾಲ ರೋಗಿಗಳ ಮೇಲೆ ಪ್ರಯೋಗಿಸಲಾಗಿದೆ ಎಂದು ಅವರು ಹೇಳಿದರು.

2006: ಮಾಹಿತಿ ತಂತ್ರಜ್ಞಾನದಲ್ಲಿ ಉತ್ತಮ ಸಾಧನೆ ಮಾಡಿರುವ ಬೆಂಗಳೂರಿನ ವಿಪ್ರೊ ಸಂಸ್ಥೆಗೆ 2004-05ರ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ರಫ್ತು ಪ್ರಶಸ್ತಿ ಲಭಿಸಿತು.

2001: ಕಲ್ಯಾಣ ಕುಮಾರ್ ನಿಧನ.

1997: `ವಿಮಾನಯಾನ ದೈತ್ಯರು' ಎಂದೇ ಹೆಸರಾಗಿದ್ದ ಬೋಯಿಂಗ್ ಕಂಪೆನಿ ಮತ್ತು ಮೆಕ್ ಡೊನ್ನೆಲ್ ಡಗ್ಲಾಸ್ ಕಾರ್ಪೊರೇಷನ್ನುಗಳು ಪರಸ್ಪರ ವಿಲೀನಗೊಂಡು ಜಗತ್ತಿನ ಅತಿದೊಡ್ಡ ವಿಮಾನಯಾನ ಸಂಸ್ಥೆಯನ್ನು ಹುಟ್ಟುಹಾಕಿದವು.

1996: ಅಟ್ಲಾಂಟಾ ಒಲಿಂಪಿಕ್ಸ್ ನಲ್ಲಿ 200 ಮೀಟರ್ ಓಟದ ಸ್ವರ್ಣಪದಕವನ್ನು ಅಮೆರಿಕದ ಮೈಕೆಲ್ ಜಾನ್ಸನ್ ಗೆದ್ದುಕೊಂಡರು. ಈ ಸಾಧನೆಯಿಂದ ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 200 ಮತ್ತು 400 ಮೀಟರ್ ಓಟಗಳೆರಡರಲ್ಲೂ ಸ್ವರ್ಣಗೆದ್ದ ಪ್ರಪ್ರಥಮ ಅಥ್ಲೆಟ್ ಎಂಬ ಕೀರ್ತಿ ಅವರಿಗೆ ಲಭಿಸಿತು.

1981: ನಡುರಾತ್ರಿ 12.01 ಗಂಟೆಗೆ ಎಮ್ ಟಿವಿ (ಮ್ಯೂಸಿಕ್ ಟೆಲಿವಿಷನ್) ತನ್ನ ಚೊಚ್ಚಲ ಪ್ರಸಾರ ಆರಂಭಿಸಿತು.

1957: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಎಂಬ ಸ್ವತಂತ್ರ ಸಂಸ್ಥೆಯನ್ನು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಈದಿನ ಉದ್ಘಾಟಿಸಿದರು. ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಭಾರತೀಯ ಪ್ರಕಾಶನ ಸಂಸ್ಥೆಯಾಗಿದ್ದು, ಇತರ ಪ್ರಕಾಶಕರ ನಡುವೆ ಸ್ಪರ್ಧೆ ಏರ್ಪಡದಂತೆ ಮಾಡುವ ಸಲುವಾಗಿ ಪ್ರಾರಂಭಗೊಂಡಿತು.

1936: ಅಡಾಲ್ಫ್ ಹಿಟ್ಲರನಿಂದ ಬರ್ಲಿನ್ನಿನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಉದ್ಘಾಟನೆಗೊಂಡಿತು. ಗ್ರೀಸ್ ನಿಂದ ಒಲಿಂಪಿಕ್ ಕ್ರೀಡಾಜ್ಯೋತಿಯನ್ನು ತಂದ ಮೊತ್ತ ಮೊದಲ ಒಲಿಂಪಿಕ್ ಕ್ರೀಡಾಕೂಟ ಇದಾಗಿತ್ತು.

1932: ಭಾರತೀಯ ಚಿತ್ರನಟಿ ಮೇಹ್ಜಬೀನ್ ಬಕ್ಸ್ (1932-1972) ಜನ್ಮದಿನ. ಮೀನಾಕುಮಾರಿ ಎಂದೇ ಜನಪ್ರಿಯರಾಗಿದ್ದ ಇವರಿಗೆ `ಪಾಕೀಜಾ' ಸಿನಿಮಾದ ಪಾತ್ರ ಅದ್ಭುತ ಖ್ಯಾತಿಯನ್ನು ತಂದುಕೊಟ್ಟಿತು.

1931: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮಹಾತ್ಮಾ ಗಾಂಧೀಜಿಯವರ ರಾಷ್ಟ್ರಧ್ವಜದ ವಿನ್ಯಾಸವನ್ನು ಕೆಲವು ಬದಲಾವಣೆಗಳೊಂದಿಗೆ ಅಂಗೀಕರಿಸಿತು. (ಈ ತ್ರಿವರ್ಣ ಧ್ವಜದ ಕೇಸರಿ ಬಣ್ಣವು ಶೌರ್ಯ ಹಾಗೂ ಬಲಿದಾನ, ಬಿಳಿ ಬಣ್ಣವು ಶಾಂತಿ ಹಾಗೂ ಸತ್ಯ, ಹಸಿರು ಬಣ್ಣವು ವಿಶ್ವಾಸ ಹಾಗೂ ಶಕ್ತಿಯನ್ನು ಮತ್ತು ಚಕ್ರವು ಜನ ಸಮೂಹದ ಕಲ್ಯಾಣವನ್ನು ಸಂಕೇತಿಸುತ್ತವೆ.)

1914: ಖ್ಯಾತ ಕನ್ನಡ ಸಾಹಿತಿ ನಂಜುಂಡಾರಾಧ್ಯ (ಅಮರವಾಣಿ) ಅವರು ಗಂಗಾಧರಯ್ಯ- ವೀರಮ್ಮ ದಂಪತಿಯ ಪುತ್ರನಾಗಿ ಕೋಲಾರ ಜಿಲ್ಲೆಯ ಗೌರಿ ಬಿದನೂರು ತಾಲ್ಲೂಕಿನ ಗುಂಡ್ಲ ಹಳ್ಳಿಯಲ್ಲಿ ಜನಿಸಿದರು. ಕನ್ನಡ, ಹಿಂದಿ, ತೆಲುಗು, ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ನಂಜುಂಡಾರಾಧ್ಯ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

1882: ಭಾರತದ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಪುರುಷೋತ್ತಮದಾಸ್ ಟಂಡನ್ (1882-1962) ಜನ್ಮದಿನ.

1849: ಬ್ರಿಟಿಷ್ ಸಂಸತ್ತು ಕಾನೂನಿನ ಮೂಲಕ `ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ ರೈಲ್ವೇ'ಯನ್ನು (ಜಿಐಪಿ) ಸ್ಥಾಪಿಸಿತು. ಈಗ ಇದು `ಸೆಂಟ್ರಲ್ ರೈಲ್ವೇ' ಆಗಿದೆ.

1833: ಇಂಗ್ಲೆಂಡಿನಲ್ಲಿ `ಗುಲಾಮೀ ಪದ್ಧತಿ' ರದ್ದುಗೊಂಡಿತು. ಇದು ವಿಲಿಯಂ ವಿಲ್ಬೆರ್ ಫೋರ್ಸ್ ನಡೆಸಿದ 40 ವರ್ಷಗಳ ಹೋರಾಟದ ಫಲಶ್ರುತಿ.

1790: ಅಮೆರಿಕದ ಮೊದಲ ಜನಗಣತಿ.

1774: ಜೋಸೆಫ್ ಪ್ರೀಸ್ಲೆ ಅವರಿಂದ ಪ್ರಾಣವಾಯು ಆಮ್ಲಜನಕದ ಸಂಶೋಧನೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement