Monday, November 24, 2008

ಇಂದಿನ ಇತಿಹಾಸ History Today ನವೆಂಬರ್ 22

ಇಂದಿನ ಇತಿಹಾಸ

ನವೆಂಬರ್ 22

ಬಿಹಾರ  ವಿಧಾನಸಭೆಗೆ  ನಡೆದ   ಚುನಾವಣೆಯಲ್ಲಿ   ನಿತೀಶ್  ಕುಮಾರ್ ನೇತೃತ್ವದ  ಜನತಾದಳ (ಯು)- ಬಿಜೆಪಿ  ಮೈತ್ರಿಕೂಟ  ನಿಚ್ಚಳ  ಬಹುಮತ ಗಳಿಸುವ  ಮೂಲಕ  ಲಾಲೂ  ಪ್ರಸಾದ್  ಯಾದವ್  ಅವರ  15  ವರ್ಷಗಳ `ಲಾಲೂ  ಯುಗ'ಕ್ಕೆ  ಮಂಗಳ  ಹಾಡಿತು.

2007: `ಕರ್ನಾಟಕದಲ್ಲಿ ಯಾರ ಜೊತೆಗೂಡಿಯೂ ಸರ್ಕಾರ ರಚಿಸುವುದಿಲ್ಲ, ವಿಧಾನಸಭೆ ವಿಸರ್ಜನೆ ಖಂಡಿತ. ಇದು ಸ್ಫಟಿಕದಷ್ಟು ಸ್ಪಷ್ಟ.' ಎಂಬುದಾಗಿ ಘೋಷಿಸುವ ಮೂಲಕ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ನವದೆಹಲಿಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ 
ಹಾರಾಡುತ್ತಿದ್ದ ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆದರು. `ರಾಷ್ಟ್ರಪತಿ ಆಳ್ವಿಕೆಯ ಘೋಷಣೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ನವೆಂಬರ್ 21ರಂದು ಮಂಡಿಸ ಲಾಗಿದೆ. ಅಲ್ಲಿ ಅಂಗೀಕಾರ ಸಿಕ್ಕಿದ ನಂತರ ವಿಧಾನಸಭೆ ವಿಸರ್ಜನೆಯಾಗಲಿದೆ. ಅದಕ್ಕೆ ಮತ್ತೊಮ್ಮೆ ಸಂಪುಟ ಸಭೆ ಸೇರುವ ಅಗತ್ಯವೂ ಇಲ್ಲ' ಎಂದು ಸಿಂಘ್ವಿ ಸ್ಪಷ್ಟ ಪಡಿಸಿದರು.

2007: ಕೊಪ್ಪಳದ ವಸಂತ ಕುಷ್ಟಗಿ, ಚಿತ್ರದುರ್ಗದ ಬಿ.ಎಲ್.ವೇಣು, ನಂಜನಗೂಡಿನ ಮುಳ್ಳೂರು ನಾಗರಾಜ್, ಮೈಸೂರಿನ ಡಾ. ಕೆ.ವಿ.ನಾರಾಯಣ ಹಾಗೂ ಧಾರವಾಡದ ಹೇಮಾ ಪಟ್ಟಣಶೆಟ್ಟಿ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಸಕ್ತ ಸಾಲಿನ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿತು. ಅಕಾಡೆಮಿಯ ಅಧ್ಯಕ್ಷೆ ಗೀತಾ ನಾಗಭೂಷಣ ಅವರು ಈ ವಿಚಾರವನ್ನು ಪ್ರಕಟಿಸಿದರು.

2007: ಕೆಳ ನ್ಯಾಯಾಲಯದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾರುವೇಷದ ಕಾರ್ಯಾಚರಣೆ ನಡೆಸಿ ಪ್ರಸಾರ ನಡೆಸಿದ ಖಾಸಗಿ ದೂರದರ್ಶನ ವಾಹಿನಿ ಹಾಗೂ ಅದರ ವರದಿಗಾರ ಬೇಷರತ್ ಕ್ಷಮಾಪಣೆ ಕೇಳಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು. ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರನ್ನು ಒಳಗೊಂಡ ಪೀಠವು ಪ್ರತಿವಾದಿಗಳು ಸಲ್ಲಿಸಿದ ಪ್ರಮಾಣ ಪತ್ರದ ಬಗ್ಗೆ ಸಂತೃಪ್ತರಾಗದೆ ಪ್ರಕರಣದ ಬಗ್ಗೆ  4 ವಾರಗಳ ನಂತರ ವಿಚಾರಣೆ ನಡೆಸಲು ಸೂಚಿಸಿತು. ಜೀ ಟಿವಿ 2004ರಲ್ಲಿ ಮಾರುವೇಷದ ಕಾರ್ಯಾಚರಣೆ ನಡೆಸಿ `ಕ್ಯಾಶ್ ಫಾರ್ ವಾರಂಟ್ ಸ್ಕಾಮ್' ಕಾರ್ಯಕ್ರಮ ಬಿತ್ತರಿಸಿತ್ತು. ಅದರಲ್ಲಿ ಅಹಮದಾಬಾದಿನ ಮೂವರು ವಕೀಲರು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ, ಮಾಜಿ ಮುಖ್ಯ ನ್ಯಾಯಮೂರ್ತಿ ವಿ.ಎನ್.ಖರೆ, ಅಂದಿನ ಅಪೆಕ್ಸ್ ಕೋರ್ಟಿನ ನ್ಯಾಯಮೂರ್ತಿ ಬಿ.ಪಿ.ಸಿಂಗ್ ಮತ್ತು ಹಿರಿಯ ವಕೀಲ ದಿ.ಆರ್.ಕೆ. ಜೈನ್ ವಿರುದ್ಧ ಜಾಮೀನು ವಾರಂಟ್ ಪಡೆಯಲು ರೂ.40,000 ಲಂಚ ಪಡೆದಿರುವ ಬಗ್ಗೆ ಬಿತ್ತರಿಸಲಾಗಿತ್ತು.  

2007: ಉತ್ತರ ಅಮೆರಿಕದಲ್ಲಿ ಕೃತಜ್ಞತಾ ಸ್ಮರಣೆ ದಿನ ಆಚರಿಸಲಾಯಿತು. ಸುಗ್ಗಿಯ ಹಿನ್ನೆಲೆಯ ಈ ಸಂಭ್ರಮದ ಹಬ್ಬ `ಥ್ಯಾಂಕ್ಸ್ ಗಿವಿಂಗ್' ಆಚರಣೆ ಎಂದೇ ಪ್ರಸಿದ್ಧಿ ಪಡೆದಿದೆ. ಈ ಸಂಬಂಧ ಒಂದು ದಿನ ಮೊದಲು ನೆವಾಡಾದಲ್ಲಿನ ಇಗರ್ಜಿಯೊಂದರಲ್ಲಿ (ಚರ್ಚ್) ನಡೆದ ಆರಾಧನೆಯ ಸಂದರ್ಭದಲ್ಲಿ ಸಂಸ್ಕೃತ ಮಂತ್ರಗಳನ್ನು ಪಠಿಸಲಾಯಿತು. ನೆವಾಡಾದ ರಿನೋ ಪ್ರದೇಶದಲ್ಲಿರುವ ಎಪಿಸ್ಕೋಪಲ್ ಇಗರ್ಜಿಯಲ್ಲಿ ಆರಾಧನೆ ನಡೆದಾಗ ಪಾದ್ರಿ ರಜನ್ ಜೇಡ್ ಅವರು, ಋಗ್ವೇದ, ಉಪನಿಷತ್ ಹಾಗೂ ಭಗವದ್ಗೀತೆ ಶ್ಲೋಕಗಳನ್ನು ಪಠಿಸಿದರು.

2007: ಸುಸ್ತಿದಾರರಿಂದ ಸಾಲ ವಸೂಲಿಗೆ ನೇಮಿಸಿಕೊಂಡ ಖಾಸಗಿ ಸಂಸ್ಥೆಯು ಕಾರು ಜಪ್ತಿ ಮಾಡಿಕೊಂಡದ್ದಕ್ಕಾಗಿ ಪುಣೆಯ ಗ್ರಾಹಕರ ವ್ಯಾಜ್ಯ ಪರಿಹಾರ ನ್ಯಾಯಾಲಯವು, ಸಾಲ ಪಡೆದ ಮಹಿಳೆಗೆ ರೂ 1 ಲಕ್ಷ ಪರಿಹಾರ ನೀಡುವಂತೆ ಖಾಸಗಿ ವಲಯದ ಐಸಿಐಸಿಐ ಬ್ಯಾಂಕಿಗೆ ಆದೇಶಿಸಿತು. ಬ್ಯಾಂಕಿನ ಗ್ರಾಹಕರಾಗಿರುವ ರೇಣು ಭಂಡ್ವಾಳಕರ್ ಅವರಿಗೆ ಆಗಿರುವ ಮಾನಸಿಕ ಕಿರುಕುಳಕ್ಕೆ ಪ್ರತಿಯಾಗಿ ಈ ಮೊತ್ತದ ಪರಿಹಾರ ನೀಡಬೇಕೆಂದು ಗ್ರಾಹಕ ನ್ಯಾಯಾಲಯ ಸೂಚಿಸಿತು. ಸಾಲ ವಸೂಲಿಗೆ ತಾವು ನೀಡಿದ್ದ ಸಲಹೆಯನ್ನು ಬ್ಯಾಂಕ್ ಸಮರ್ಪಕವಾಗಿ ಪಾಲಿಸಿರಲಿಲ್ಲ. ತಮ್ಮ ಉಳಿತಾಯ ಖಾತೆಯಿಂದ ಸಾಲದ ಮೊತ್ತ ಮರು ಪಾವತಿ ಮಾಡಿಕೊಳ್ಳಲು ನೀಡಿದ್ದ ಚೆಕ್ಕುಗಳನ್ನು ಸರಿಯಾಗಿ ಬಳಸದ ಕಾರಣಕ್ಕೆ ತಾವು ಸುಸ್ತಿದಾರರಾಗಬೇಕಾಯಿತು. ಇದೇ ನೆಪ ಮುಂದಿಟ್ಟುಕೊಂಡು ಸಾಲ ವಸೂಲಿ ಏಜೆಂಟರು ತಮ್ಮ ಕಾರನ್ನು ಜಪ್ತಿ ಮಾಡಿಕೊಂಡಿದ್ದರು. ಅದರಲ್ಲಿ ಲ್ಯಾಪ್ ಟಾಪ್ ಅಳವಡಿಸಲಾಗಿತ್ತು ಎಂದು ರೇಣು ಅವರು ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. 

2006: ಕೋಲ್ಕತ್ತದ ಪೂರ್ವ ವಲಯದ ಟೊಪ್ಸಿಯಾ ಪ್ರದೇಶದಲ್ಲಿ ಚರ್ಮದ ಕಾರ್ಖಾನೆಗೆ ಬೆಂಕಿ ತಗುಲಿ 9 ಕಾರ್ಮಿಕರು ಮೃತರಾಗಿ 12 ಮಂದಿ ಗಂಭೀರವಾಗಿ ಗಾಯಗೊಂಡರು.

2006: ಕ್ಯಾನ್ಸರ್ ಅಥವಾ ಅಣು ವಿಕಿರಣ ಕಾಯಿಲೆಗೆ ಆಯುರ್ವೇದದ `ತ್ರಿಫಲ' ಚೂರ್ಣ ರಾಮಬಾಣ ಎಂದು ಮುಂಬೈಯ ಭಾಭಾ ಅಣು ಸಂಶೋಧನಾ ಕೇಂದ್ರದ (ಬಿ ಎ ಆರ್ ಸಿ) ಜೊತೆಗೆ ಈ ಹಿಂದೆ ಕೆಲಸ ಮಾಡಿದ್ದ ಖ್ಯಾತ ವಿಕಿರಣ ಜೀವ ಶಾಸ್ತ್ರಜ್ಞ ಎಂ.ಪಿ. ಮಿಶ್ರ ಪ್ರತಿಪಾದಿಸಿದರು. ಬನಾರಸ್ ಹಿಂದೂ ವಿಶ್ವ ವಿದ್ಯಾಲಯವು ಆಯೋಜಿಸಿದ್ದ ಐದನೇ ಅಂತಾರಾಷ್ಟ್ರೀಯ `ಮಾನವ ಆರೋಗ್ಯ ಮತ್ತು ಪರಿಸರದ ಮೇಲೆ ಕನಿಷ್ಠ ಪ್ರಮಾಣದ ವಿಕಿರಣ ಪರಿಣಾಮ' (ಲೋ ಡೋಸ್ ರೇಡಿಯೇಷನ್ ಎಫೆಕ್ಟ್ಸ್ ಆನ್ ಹ್ಯೂಮನ್ ಹೆಲ್ತ್ ಮತ್ತು ಎನ್ವಿರಾನ್ ಮೆಂಟ್) ಸಮಾವೇಶದಲ್ಲಿ ಈ ವಿಚಾರ ತಿಳಿಸಿದರು. ತ್ರಿಫಲ ಚೂರ್ಣವು ಅಳಲೆ, ನೆಲ್ಲಿ ಹಾಗೂ ತಾರೆ ಕಾಯಿಗಳ ಸಮ ಪ್ರಮಾಣದ ಮಿಶ್ರಣದಿಂದ ತಯಾರಾಗುವ ಚೂರ್ಣ. ಈ ಚೂರ್ಣಕ್ಕೆ ಕ್ಯಾನ್ಸರಿನಂತಹ ಮಾರಣಾಂತಿಕ ರೋಗ ನಿವಾರಿಸುವ ಶಕ್ತಿ ಇದೆ. ಅದು ದೇಹದ ರೋಗ ನಿರೋಧಕ ಶಕ್ತಿ ವರ್ಧಕ. ಅದು ಬೇಧಿ ನಿವಾರಕ ಟಾನಿಕ್ ಅಷ್ಟೇ ಅಲ್ಲ, ಶೀತ, ಜ್ವರ, ಗ್ಯಾಸ್ಟ್ರಿಕ್ ಹಾಗೂ ಅಲರ್ಜಿಯಂತಹ ಇತರ ಕಾಯಿಲೆಗಳಿಗೂ ಸಿದ್ಧೌಷಧ. ತ್ರಿಫಲ ಔಷಧದ ಮತ್ತೊಂದು ವಿಶೇಷ ಗುಣವೆಂದರೆ, ಮನುಷ್ಯನ ದೇಹದೊಳಗೆ ಇದು ಹೊಕ್ಕ ಕೂಡಲೇ, ರೋಗಗ್ರಸ್ತ ಹಾಗೂ ಆರೋಗ್ಯಯುತ ಜೀವಕೋಶಗಳನ್ನು ಗುರುತಿಸುತ್ತದೆ. ರೋಗಗ್ರಸ್ತವಾದವುಗಳನ್ನು ಕೊಂದು, ಹೊಸ ಜೀವಕೋಶಗಳನ್ನು ಸೃಷ್ಟಿಸುತ್ತದೆ. ಆರೋಗ್ಯಯುತ ಜೀವಕೋಶಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬುದು ಮಿಶ್ರ ವಿವರಣೆ. ಡಾ. ಮಿಶ್ರ, ಬಾಬಾ ಅಣು ಸಂಶೋಧನಾ ಕೇಂದ್ರದಲ್ಲಿ ಸೈನಿಕರಿಗೆ ಅಣುವಿಕಿರಣದಿಂದ ಉಂಟಾಗುವ ತೊಂದರೆ ನಿವಾರಣೆ ಹಾಗೂ ಅವರ ದೇಹಕ್ಕೆ ಬಂದೆರಗುವ ರೋಗಗಳನ್ನು ಶಮನಗೊಳಿಸಲು ಔಷಧ ಕಂಡು ಹಿಡಿಯವ ಯೋಜನೆಯಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ತ್ರಿಫಲದಲ್ಲಿ ಇಂಥ ಶಕ್ತಿಯುತ ಔಷಧವಿದೆ ಎಂದು ಕಂಡು ಹಿಡಿದಿರುವ ಡಾ.ಸಂಧ್ಯಾ ಅವರು ಈ ಯೋಜನೆಯ ಸದಸ್ಯರಲ್ಲಿ ಒಬ್ಬರು.

2006: ರಾಷ್ಟ್ರಕವಿ ಗೌರವಕ್ಕೆ ಪಾತ್ರರಾಗಿರುವ ಕನ್ನಡದ ಹಿರಿಯ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಕುವೆಂಪು ವಿವಿ ಸಿಂಡಿಕೇಟ್ ಸಭೆ ನಿರ್ಧರಿಸಿತು.

2006: ಕೋಲ್ಕತ್ತದ ಪೂರ್ವ ವಲಯದ ಟೊಪ್ಸಿಯಾ ಪ್ರದೇಶದಲ್ಲಿ ಚರ್ಮದ ಕಾರ್ಖಾನೆಗೆ ಬೆಂಕಿ ತಗುಲಿದ್ದರಿಂದ ಒಂಬತ್ತು ಕಾರ್ಮಿಕರು ಮೃತರಾಗಿ 12 ಮಂದಿ ಗಾಯಗೊಂಡರು.

2006: ಚಲನಚಿತ್ರಗಳ ಹಂಚಿಕೆದಾರ, `ಟ್ರಿಣ್ ಟ್ರಿಣ್' ಚಿತ್ರದ ನಿರ್ಮಾಪಕ ಎ.ಎನ್. ರಂಗಸ್ವಾಮಿ (57) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

2006: ಖ್ಯಾತ ವಿಜ್ಞಾನಿ ಮತ್ತು ಶಿಕ್ಷಣ ತಜ್ಞೆ ಅಸೀಮಾ ಚಟರ್ಜಿ (90) ಕೋಲ್ಕತ್ತಾದಲ್ಲಿ ನಿಧನರಾದರು. ಶುದ್ಧ ರಸಾಯನಶಾಸ್ತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಅಸೀಮಾ, ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರಾಗಿದ್ದರು. ಪದ್ಮಭೂಷಣ ವಿಜೇತರೂ ಆಗಿದ್ದ ಅವರು ರಾಜ್ಯಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು.

2005: ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಯು)- ಬಿಜೆಪಿ ಮೈತ್ರಿಕೂಟ ನಿಚ್ಚಳ ಬಹುಮತ ಗಳಿಸುವ ಮೂಲಕ ಲಾಲೂ ಪ್ರಸಾದ್ ಯಾದವ್ ಅವರ 15 ವರ್ಷಗಳ `ಲಾಲೂ ಯುಗ'ಕ್ಕೆ ಮಂಗಳ ಹಾಡಿತು.

2005: ಹಿರಿಯ ಬಾಲಿವುಡ್ ಚಿತ್ರ ನಿರ್ದೇಶಕ, `ನಗೀನಾ' ಹಾಗೂ `ನಿಗಾಹೇಂ' ಚಿತ್ರಗಳ ಖ್ಯಾತಿಯ ಹರ್ಮೇಶ್ ಮಲ್ಹೋತ್ರಾ (66) ಅವರು ಮುಂಬೈಯಲ್ಲಿ ಹೃದಯಾಘಾತದಿಂದ ನಿಧನರಾದರು. ಪಾಕಿಸ್ಥಾನದ ಖುಸಬ್ ಪ್ರಾಂತ್ಯದಲ್ಲಿ ಜನಿಸಿದ್ದ ಮಲ್ಹೋತ್ರಾ ದೇಶವಿಭಜನೆ ಬಳಿಕ ಆಗ್ರಾಕ್ಕೆ ವಲಸೆ ಬಂದಿದ್ದರು. ಪದವಿ ಪಡೆದ ನಂತರ ಚಿತ್ರೋದ್ಯಮದಲ್ಲಿ ಭವಿಷ್ಯ ಅರಸಿ ಮುಂಬೈಗೆ ಬಂದಿದ್ದರು. 70ರ ದಶಕದಲ್ಲಿ ಬಿಡುಗಡೆಯಾದ `ಬೇಟಿ' ಅವರ ಚೊಚ್ಚಲ ಚಿತ್ರ. ಸಂಜಯಖಾನ್ ಮತ್ತು ನಂದಾ ಇದರಲ್ಲಿ ನಟಿಸಿದ್ದರು. 1972ರಲ್ಲಿ ತಮ್ಮದೇ ಆದ ಎಚ್.ಎಂ. ಪ್ರೊಡಕ್ಷನ್ಸ್ ಸ್ಥಾಪಿಸಿ `ಗದ್ದಾರ್' ಚಿತ್ರ ನಿರ್ದೇಶಿಸಿದರು. ರಿಷಿ ಕಪೂರ್, ಶ್ರೀದೇವಿ ಹಾಗೂ ಅಮರೇಶಪುರಿ ನಟಿಸಿದ `ನಗೀನಾ' ಚಿತ್ರ ಅವರಿಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿತು. ನಂತರ ಅದರ ಮುಂದಿನ ಭಾಗವಾಗಿ `ನಿಗಾಹೇಂ' ಬಂತು. ಗೋವಿಂದ ನಟಿಸಿದ `ದುಲ್ಹೆ ರಾಜಾ' ಕೂಡಾ ಅವರ ಯಶಸ್ವಿ ಚಿತ್ರಗಳ ಪೈಕಿ ಒಂದು.

2005: ಹಿರಿಯ ಪತ್ರಕರ್ತ ಎಂ. ಮಲ್ಲಿಕಾರ್ಜುನಯ್ಯ ಬೆಂಗಳೂರಿನಲ್ಲಿ ನಿಧನರಾದರು. 'ಪೊಲೀಸ್ ನ್ಯೂಸ್' ಪತ್ರಿಕೆಯ ಮೂಲಕ ಕನ್ನಡದಲ್ಲಿ ಕ್ರೈಂ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ್ದ ಅವರು 'ಆದರ್ಶ ಗಂಡ ಹೆಂಡತಿ' ಮಾಸಪತ್ರಿಕೆ, ಮುಂಬೈಯಲ್ಲಿ `ಕರ್ನಾಟಕ ಮಲ್ಲ' ದಿನಪತ್ರಿಕೆ ಹಾಗೂ ಮಂಗಳೂರಿನಲ್ಲಿ `ಮಂಗಳೂರು ಮಿತ್ರ' ಸಂಜೆ ಪತ್ರಿಕೆ ಆರಂಭಿಸಿ ಯಶಸ್ಸು ಪಡೆದಿದ್ದರು.

1990: ಬ್ರಿಟನ್ ಪ್ರಧಾನ ಮಂತ್ರಿ ಮಾರ್ಗರೆಟ್ ಥ್ಯಾಚರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದರು.

2000: ಜೆಕ್ ಓಟಗಾರ ಎಮಿಲ್ ಝಾಟೊಪೆಕ್ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾದರು. 1952ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 5000 ಮತ್ತು 10,000 ಮೀಟರ್ ಓಟಗಳಲ್ಲಿ ಭಾಗವಹಿಸಿ ಅವರು ದಾಖಲೆ ನಿರ್ಮಿಸಿದ್ದರು.

1986: ಕಾನ್ಪುರದಲ್ಲಿ ನಡೆದ ಶ್ರೀಲಂಕಾ ಜೊತೆಗಿನ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗಾವಸ್ಕರ್ ಅವರು ತಮ್ಮ 34ನೇ ಟೆಸ್ಟ್ ಸೆಂಚುರಿ (176) ಸಿಡಿಸಿದರು.

1967: ಜರ್ಮನಿಯ ಟೆನಿಸ್ ಆಟಗಾರ ಬೋರಿಸ್ ಬೆಕರ್ ಹುಟ್ಟಿದ ದಿನ. ವಿಂಬಲ್ಟನ್ನಿನಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಚಾಂಪಿಯನ್ ಆಗುವ ಮೂಲಕ ಅತ್ಯಂತ ಕಿರಿಯ ಟೆನಿಸ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು.

1963: ಅಮೆರಿಕಾದ ಅಧ್ಯಕ್ಷ ಕೆನಡಿ ಅವರನ್ನು ಡಲ್ಲಾಸಿನಲ್ಲಿ ಮೋಟಾರು ವಾಹನ ರ್ಯಾಲಿಯಲ್ಲಿಪಾಲ್ಗೊಂಡ್ದಿದಾಗ ಕೊಲೆಗೈಯಲಾಯಿತು. ಟೆಕ್ಸಾಸಿನ ಗವರ್ನರ್ ಜಾನ್ ಬಿ. ಕೊನ್ನಾಲ್ಲಿ ಅವರು ಗಂಭೀರವಾಗಿ ಗಾಯಗೊಂಡರು. ಶಂಕಿತ ವ್ಯಕ್ತಿ ಲೀ ಹಾರ್ವೇ ಓಸ್ವಾಲ್ಡನನ್ನು ಬಂಧಿಸಲಾಯಿತು. ಉಪಾಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಅವರು ಅಮೆರಿಕದ 36ನೇ ಅಧ್ಯಕ್ಷರಾದರು.

1956: ಸಾಹಿತಿ ಅಕ್ಕಮಹಾದೇವಿ ಜನನ.

1939: ಖ್ಯಾತ ಸಂಶೋಧಕ, ಅನುವಾದಕ, ಪ್ರೊ. ಬಾಲಚಂದ್ರ ಜಯಶೆಟ್ಟಿ ಅವರು ಭೀಮಣ್ಣ- ಜಯಮ್ಮ ದಂಪತಿಯ ಮಗನಾಗಿ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರದಲ್ಲಿ ಜನಿಸಿದರು.

1919: ಸಾಹಿತಿ ಸೀತಮ್ಮ ನಂಜೇಗೌಡ ಜನನ.

1902: ಸಾಹಿತಿ ಚುಳುಕಿ ಗೋವಿಂದ ವೆಂಕಟೇಶ ಜನನ.

1774: ಯೋಧ ಹಾಗೂ ಬಂಗಾಳದ ಮೊತ್ತ ಮೊದಲ ಬ್ರಿಟಿಷ್ ಆಡಳಿತಗಾರ ರಾಬರ್ಟ್ ಕ್ಲೈವ್ ತನ್ನ 49 ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಭಾರತದಲ್ಲಿ ಬ್ರಿಟಿಷ್ ಆಡಳಿತ ಸ್ಥಾಪನೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ ವ್ಯಕ್ತಿಗಳಲ್ಲಿ ಈತನೂ ಒಬ್ಬ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement