Friday, October 31, 2008

ಕುಲಾಂತರಿ ಅವಾಂತರ: ಆರೋಗ್ಯ ಸಚಿವರ ಬೆನ್ನು ಹತ್ತಿ...!

ಕುಲಾಂತರಿ ಅವಾಂತರ:

 ಆರೋಗ್ಯ ಸಚಿವರ ಬೆನ್ನು ಹತ್ತಿ...!



ಕುಲಾಂತರಿ ಬೆಳೆಗಳ ಅವಾಂತರದಿಂದ ನಮ್ಮ ಆಹಾರದ ಬಟ್ಟಲು ವಿಷಮಯವಾಗುತ್ತಿರುವ ಬಗ್ಗೆ ಜನ ಜಾಗೃತಿಗಾಗಿ ಗ್ರೀನ್ ಪೀಸ್ ಸಂಘಟನೆಯು 'ಸಹಜ ಸಮೃದ್ಧ' ಸಾವಯವ ಕೃಷಿಕರ ಬಳಗ ಹಾಗೂ 'ಸಂವಾದ' ಸಂಸ್ಥೆಯ ಜತೆಗೂಡಿ `ನಾನು ಪ್ರಯೋಗ ಜೀವಿ ಅಲ್ಲ' (ಐ ಆಮ್ ನೋ ಲ್ಯಾಬ್ ರಾಟ್) ಚಳವಳಿ ರೂಪಿಸಿದೆ. ಈ ಬಗ್ಗೆ ಆನಂದ ತೀರ್ಥ ಪ್ಯಾಟಿ ಬರೆದ ಲೇಖನದ ಪ್ರಮುಖ ಅಂಶಗಳನ್ನು ಸಹಜ ಸಮೃದ್ಧದ ಕೃಷ್ಣ ಪ್ರಸಾದ್ 'ಪರ್ಯಾಯ'ಕ್ಕೆ ಕಳುಹಿಸಿದ್ದಾರೆ. ಇದನ್ನು ಓದಿದರಷ್ಟೇ ಸಾಲದು ಚಳವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ನಮ್ಮ 'ಅನ್ನದ ಬಟ್ಟಲು' ರಕ್ಷಣೆಗೆ ಇಳಿದರೆ ಈ ಲೇಖನ ಓದಿದ್ದಕ್ಕೆ ಸಾರ್ಥಕ.
 
`ಭಾರತದಲ್ಲಿ 2000ರಲ್ಲಿ 44 ದಶಲಕ್ಷ ಟನ್ ಆಹಾರಧಾನ್ಯ ಸರ್ಕಾರದ ಉಗ್ರಾಣಗಳಲ್ಲಿ ಉಳಿದಿತ್ತು. 2002ರ ಹೊತ್ತಿಗೆ ಇದರ ಪ್ರಮಾಣ 65 ದಶಲಕ್ಷ ಟನ್ನುಗಳಿಗೆ ಏರಿತು. ಆದರೆ, ಇದು ಉತ್ಪಾದನೆಯ ಹೆಚ್ಚಳದಿಂದಲ್ಲ; ಬದಲಾಗಿ ಆಹಾರಧಾನ್ಯ ಖರೀದಿಸುವಷ್ಟು ಹಣ ಜನರ ಕೈಯಲ್ಲಿ ಇರಲಿಲ್ಲ. ಅದಕ್ಕಾಗಿ ಅಷ್ಟೊಂದು ಪ್ರಮಾಣದ ಆಹಾರ ಉಗ್ರಾಣದಲ್ಲಿ ಕೊಳೆಯುತ್ತ ಬಿದ್ದಿತ್ತು..'

ಕೃಷಿ ಆರ್ಥಿಕ ತಜ್ಞ ದೇವಿಂದರ್ ಶರ್ಮಾ ಅವರ ಈ ವಿಶ್ಲೇಷಣೆಯು ಒಂದೆಡೆ ನಮ್ಮ ದೇಶದ ಜನರ ಹಸಿವನ್ನು ಅನಾವರಣ ಮಾಡುತ್ತದೆ. ಇನ್ನೊಂದೆಡೆ ಆಹಾರ ಧಾನ್ಯ ಉತ್ಪಾದನೆ ಹೆಚ್ಚಿಸುವ ಕೃಷಿ ವಿವಿ, ಸಂಶೋಧನಾ ಕೇಂದ್ರಗಳ ಪೊಳ್ಳುತನ ಬಿಚ್ಚಿಡುತ್ತದೆ.

ಕೋಟಿಗಟ್ಟಲೆ ಹಣ ಸುರಿದು ಮಾಡುವ ಸಂಶೋಧನೆಗಳ ಲಾಭವೆಲ್ಲ ಬಹುರಾಷ್ಟ್ರೀಯ ಕಂಪೆನಿಗಳ ಬೊಕ್ಕಸ ತುಂಬಿಸುತ್ತವೆಯೇ ಹೊರತು, ಬಡವರಿಗೆ ಕಡಿಮೆ ವೆಚ್ಚದಲ್ಲಿ ಒಂದು ಹಿಡಿ ಆಹಾರ ನೀಡುವುದಕ್ಕಲ್ಲ ಎಂಬುದು ಸಾಬೀತಾಗುತ್ತಲೇ ಇರುತ್ತದೆ. ಈ ಸಾಲಿಗೆ ಈಗ ಸೇರ್ಪಡೆಯಾಗಿದೆ- `ಕುಲಾಂತರಿ ಆಹಾರ' (ಜೆನಿಟಿಕಲಿ ಮಾಡಿಫೈಡ್ ಫುಡ್- ಜಿ.ಎಂ. ಫುಡ್).

ವಿದೇಶಗಳಲ್ಲಿ ಈಗಾಗಲೇ ಹುಯಿಲೆಬ್ಬಿಸಿರುವ `ಕುಲಾಂತರಿ ಆಹಾರ' ಇನ್ನೇನು ಭಾರತದ ಮಾರುಕಟ್ಟೆಗೆ- ತನ್ಮೂಲಕ ನಮ್ಮ ಅಡುಗೆ ಮನೆಗಳಿಗೂ- ದಾಳಿಯಿಡಲು ಸಿದ್ಧವಾಗಿದೆ. 'ಕುಲಾಂತರಿ ಬೆಳೆ ಮಾನವನ ಆರೋಗ್ಯಕ್ಕೆ ಅಷ್ಟೇ ಅಲ್ಲ ಪರಿಸರದ ಆರೋಗ್ಯಕ್ಕೂ ಹಾನಿಕರ' ಎಂಬ ವಾದದೊಂದಿಗೆ ಹಲವು ಸ್ವಯಂಸೇವಾ ಸಂಸ್ಥೆಗಳು ಹೋರಾಟದ ಅಖಾಡಕ್ಕೆ ಇಳಿದಿವೆ. `ಇದರಿಂದ ಅಂಥ ಅಪಾಯವೇನೂ ಇಲ್ಲ ಬಿಡಿ' ಎನ್ನುತ್ತಾರೆ, ಕುಲಾಂತರಿ ಬೆಳೆ ಸೃಷ್ಟಿಸುವ ದೈತ್ಯ ಕಂಪೆನಿಗಳ ವಿಜ್ಞಾನಿಗಳು.

ಒಂದರದ್ದು ಇನ್ನೊಂದಕ್ಕೆ!

ಹಾಗೆ ನೋಡಿದರೆ, ಒಂದು ಜೀವಿಯ ಕೋಶದ ಬೀಜಕೇಂದ್ರ (ನ್ಯೂಕ್ಲಿಯಸ್)ದಲ್ಲಿರುವ ವಂಶವಾಹಿಯನ್ನು (ಜೀನ್) ಇನ್ನೊಂದು ಜೀವಿಗೆ ಸೇರಿಸುವ ಈ ಪ್ರಕ್ರಿಯೆ ತುಂಬ ಕುತೂಹಲವಾದದ್ದೇ. ಇಲ್ಲಿ ವಿಜ್ಞಾನಿಗಳು ಮಾಡುವುದೇನೆಂದರೆ- ಬ್ಯಾಕ್ಟೀರಿಯಾ, ವೈರಸ್, ಜೇಡ, ಚೇಳು ಮತ್ತಿತರ ಜೀವಿಗಳಿಂದ ವಂಶವಾಹಿಗಳನ್ನು ಹೊರತೆಗೆದು ಬದನೆ, ಆಲೂಗಡ್ಡೆ, ಮೆಕ್ಕೆಜೋಳದಂಥ ಬೆಳೆಗಳ ವಂಶವಾಹಿಯೊಳಗೆ ಬಲವಂತದಿಂದ ಸೇರಿಸುತ್ತಾರೆ. ಇದರಿಂದಾಗಿ, ಸೇರ್ಪಡೆ ಮಾಡುವ ವಂಶವಾಹಿಯ ಕೆಲವು ವಿಶೇಷ ಗುಣ- ಸ್ವಭಾವಗಳು ಬೆಳೆಗೆ ವರ್ಗಾವಣೆಯಾಗುತ್ತವೆ. ಆದರೆ ಈ ವಿಧಾನ ಸುಲಭದ್ದೇನಲ್ಲ. ಲಕ್ಷಾಂತರ ಡಾಲರ್ ಖರ್ಚು.

ಕೃಷಿಕರ ಉದ್ಧಾರದ ಹೆಸರಿನಲ್ಲಿ ಶುರುವಾದ 'ಕುಲಾಂತರಿ ತಂತ್ರಜ್ಞಾನ' ವಹಿವಾಟು ಈಗ ಕೋಟಿ- ಕೋಟಿ ಡಾಲರ್ ತಲುಪಿದೆ. ಆದರೆ ಇದರಿಂದ ರೈತರಿಗೆ ಪ್ರಯೋಜನವೇನಾದರೂ ಆಗಿದೆಯೇ?

ಸಾಕಷ್ಟು ಪರೀಕ್ಷೆಗೆ ಒಳಪಡಿಸದೇ 'ಕುಲಾಂತರಿ ಆಹಾರ' ಮಾರುಕಟ್ಟೆಗೆ ಬಿಡುವುದೇ ತಪ್ಪು. ಮಾನವ ಹಾಗೂ ಪರಿಸರದ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುವ ಅನೇಕ ಶಂಕೆಗಳಿಗೆ ವಿಜ್ಞಾನಿಗಳು ಸ್ಪಷ್ಟ ಉತ್ತರ ನೀಡದೇ ಈ ಆಹಾರ ಅಡುಗೆ ಮನೆ ಸೇರಬಾರದು ಎಂದು ಜಗತ್ತಿನ ವಿವಿಧ ಪರಿಸರಪರ ಸಂಘಟನೆಗಳು ಆಪ್ಷೇಪದ ದನಿಯೆತ್ತಿವೆ.

`ಕೃಷಿ ಉತ್ಪನ್ನ ಹೆಚ್ಚಳಕ್ಕೆ ಬಿ.ಟಿ ಅಥವಾ ಜಿ.ಎಂ. ತಂತ್ರಜ್ಞಾನ ಉತ್ತರವಲ್ಲ. ಭಾರತದಂಥ ಸಮಶೀತೋಷ್ಣ ವಲಯದ ದೇಶಗಳಲ್ಲಿ ವ್ಯವಸಾಯ ನಾನಾ ಅಂಶಗಳನ್ನು ಅವಲಂಬಿಸಿದೆ. ಆಯಾ ಭಾಗದ ವಾತಾವರಣ, ನೀರಾವರಿ ಲಭ್ಯತೆ, ಮಳೆ ಪ್ರಮಾಣ, ತೇವಾಂಶ ಪ್ರಮಾಣ, ಮಣ್ಣಿನ ಗುಣಧರ್ಮ, ರೈತರ ಸಾಂಪ್ರದಾಯಿಕ ಜ್ಞಾನ ಹಾಗೂ ಬೆಳೆಗೆ ಬರುವ ಕೀಟ- ರೋಗ ಬಾಧೆ ಇನ್ನಿತರ ಅಂಶಗಳ ಮೇಲೆ ಆಯಾ ಪ್ರದೇಶದ ಕೃಷಿ ವ್ಯವಸ್ಥೆ ರೂಪಗೊಂಡಿದೆ' ಎನ್ನುತ್ತಾರೆ ದೇವಿಂದರ್ ಶರ್ಮಾ. ಸಾಕಷ್ಟು ವಿರೋಧದ ಮಧ್ಯೆಯೂ ಆಂಧ್ರದಲ್ಲಿ ಬಿ.ಟಿ. ಹತ್ತಿ ಬೆಳೆದಾಗ ಆರಂಭದಲ್ಲಿ (2002-03) ಇಳುವರಿ ಹೆಚ್ಚು ಪಡೆದರೂ, ನಂತರದ ಒಂದೆರಡು ವರ್ಷಗಳಲ್ಲಿ ಶೇ 71ರಷ್ಟು ರೈತರು ಇಳುವರಿ ಕುಸಿತದಿಂದ ನಷ್ಟ ಅನುಭವಿಸಿದರು. ತಂತ್ರಜ್ಞಾನವನ್ನು ರೈತರ ಮೇಲೆ ಹೇರುವವರಿಗೆ ಇದು ಪಾಠವಾಗಬೇಕು ಎಂದು ಶರ್ಮಾ ಹೇಳುತ್ತಾರೆ.

ನೂರಾರು ವರ್ಷಗಳಿಂದ ರೈತರು ಜತನದಿಂದ ಕಾಪಾಡಿಕೊಂಡು ಬಂದಿರುವ ಅಗಾಧ ಪ್ರಮಾಣದ ಬೀಜ ವೈವಿಧ್ಯ ಕಣ್ಮರೆಯಾಗುವುದು ಕುಲಾಂತರಿ ತಂತ್ರಜ್ಞಾನ ಒಡ್ಡಿರುವ ದೊಡ್ಡ ಅಪಾಯ. ನಿಸರ್ಗದಲ್ಲಿ ಕೋಟಿಗಟ್ಟಲೇ ವರ್ಷಗಳಿಂದ ವ್ಯವಸ್ಥಿತವಾಗಿ ರೂಪುಗೊಳ್ಳುತ್ತ ಬಂದ ಜೀವಜಾಲವನ್ನು ನಮಗೆ ಬೇಕಾದ ಹಾಗೆ ಮಾರ್ಪಡಿಸಿಕೊಳ್ಳುವ ನೈತಿಕ ಹಕ್ಕು ನಮಗಿದೆಯೇ? ಎಂಬ ಪ್ರಶ್ನೆ ನಮ್ಮ ಮುಂದಿದೆ. ಮಾನವನ ಹಸ್ತಕ್ಷೇಪದಿಂದ ಆಗುವ ಸಣ್ಣ ತಪ್ಪು ಕೂಡ ಪ್ರಕೃತಿಗೆ ದೊಡ್ಡ ಅನಾಹುತವನ್ನೇ ತಂದೊಡ್ಡಬಹುದು.

ಆರೋಗ್ಯಕ್ಕೆ...

ಒಂದು ಜೀವಿಯ ವಂಶವಾಹಿಯನ್ನು ಬೇರೊಂದು ಜೀವಿಗೆ ಸೇರಿಸಿದಾಗ, ಅದು ಇಡೀ ವರ್ಣತಂತುವಿನ ವ್ಯವಸ್ಥೆಯನ್ನೇ ಹಾಳುಗೆಡವುತ್ತದೆ. ಈ 'ತಂತ್ರ' ಅನುಸರಿಸಿ ತಯಾರಿಸುವ ಆಹಾರವು ದೇಹದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಕೆಲವು ವಿಜ್ಞಾನಿಗಳೇ ಅಪಸ್ವರ ಎತ್ತಿದ್ದಾರೆ. ಪ್ರಯೋಗಾಲಯದಲ್ಲಿ ಇಲಿಗಳಿಗೆ ಜಿ.ಎಂ. ಆಹಾರ ತಿನ್ನಿಸಿದ ಬಳಿಕ ಅವುಗಳ ದೇಹದಲ್ಲಿ ವಿಪರೀತ ಎನ್ನುವಂಥ ಬದಲಾವಣೆ ಕಂಡುಬಂದಿದೆ. ಬೆಳವಣಿಗೆಯಲ್ಲಿ ಕುಂಠಿತ, ರೋಗನಿರೋಧಕ ಶಕ್ತಿ ಕುಸಿತ, ಕರುಳಿನಲ್ಲಿ ಕ್ಯಾನ್ಸರ್ ಕೋಶಗಳು ಬೆಳೆದಿದ್ದು, ಶ್ವಾಸಕೋಶ ಹಾಗೂ ಮೂತ್ರಪಿಂಡದ ಕೋಶಗಳಲ್ಲಿ ಊತ, ಕುಂದಿದ ಮಿದುಳಿನ ಕಾರ್ಯಕ್ಷಮತೆ, ಯಕೃತ್ತಿನ ತೊಂದರೆಯಂಥ ಸಮಸ್ಯೆಗಳು ಇಲಿಗಳಲ್ಲಿ ಉದ್ಭವಿಸಿವೆ.

ಕೇವಲ ಇಳುವರಿ ಹೆಚ್ಚಳ ಅಥವಾ ರೋಗ- ಕೀಟ ನಿರೋಧಕ ಶಕ್ತಿ ನೀಡುವ ತಂತ್ರಜ್ಞಾನ ಬಳಸಿ, ತಯಾರಿಸಲಾದ ಆಹಾರ ಮಾನವನ ಆರೋಗ್ಯಕ್ಕೆ ಪೂರಕವಾದೀತೆ? ಪರಿಸರದ ಮೇಲಾಗುವ ಅಡ್ಡಪರಿಣಾಮಗಳಿಗೆ ಪರಿಹಾರ ಏನು?

'ನಾನು ಪ್ರಯೋಗ ಜೀವಿಯಲ್ಲ'

ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ GM Free India `ಜಿ.ಎಂ. ಆಹಾರ'ದ ವಿರುದ್ಧ ದನಿಯೆತ್ತಿದೆ. ಈಗಾಗಲೇ ಕೇರಳ, ಉತ್ತರಾಂಚಲ ಹಾಗೂ ಒರಿಸ್ಸಾದಲ್ಲಿ ಅಲ್ಲಿನ ಸರ್ಕಾರಗಳು 'ಕುಲಾಂತರಿ ಬೆಳೆಗೆ ಅವಕಾಶ ಕೊಡುವುದಿಲ್ಲ' ಎಂದು ಘೋಷಿಸಿವೆ. ಉತ್ತರ ಪ್ರದೇಶ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದ ಕೆಲವು ಗ್ರಾಮಗಳ ಪಂಚಾಯತಿಗಳು 'ಕುಲಾಂತರಿ ಬೆಳೆ ನಿಷೇಧಿತ ಪ್ರದೇಶ' ಎಂದು ಘೋಷಿಸಿಕೊಂಡಿವೆ. ಪಶ್ಚಿಮ ಬಂಗಾಳದ ಕೃಷಿ ಆಯೋಗವು 'ಕುಲಾಂತರಿ ಬೆಳೆ ಪ್ರಯೋಗಕ್ಕೆ ಅವಕಾಶ ನೀಡಬಾರದು' ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಬಿ.ಟಿ. ಬದನೆ ನಮ್ಮ ದೇಶದ ರೈತರ ಹೊಲಕ್ಕೆ ಬರಲು ಸಿದ್ಧವಾಗಿದೆ. ಅದರ ಬಳಿಕ ಆಲೂ, ನಂತರ ಟೊಮ್ಯಾಟೊ, ಪಪ್ಪಾಯ, ಮೆಕ್ಕೆಜೋಳ, ಸೋಯಾ ಇನ್ನಿತರ ಬಿ.ಟಿ. ಬೆಳೆ ಸಾಲಾಗಿ ನಿಂತಿವೆ. 'ಕುಲಾಂತರಿ ಆಹಾರ'ದ ಸುರಕ್ಷತೆ ಬಗ್ಗೆ ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಪರೀಕ್ಷೆ ನಡೆಸಲಾಗುತ್ತದೆ. ಈಗ ಅದಕ್ಕೆಲ್ಲ ಸಮಯವಿಲ್ಲ. ಅತ್ಯವಸರದಲ್ಲಿ ಪರೀಕ್ಷೆ ನಡೆಸಿ, ಅಡಿಗೆ ಮನೆಗೆ ಕುಲಾಂತರಿ ಆಹಾರ ರವಾನಿಸಲು ಸಿದ್ಧತೆ ನಡೆದಿದೆ. ಇದನ್ನೇ ಸಂಕೇತವಾಗಿಸಿ, 'ನಾನು ಪ್ರಯೋಗ ಜೀವಿ ಅಲ್ಲ' ಎಂಬ ಆಂದೋಲನವನ್ನು ಭಾರತದಲ್ಲಿ ಆರಂಭಿಸಲಾಗಿದೆ..

ಮಳೆ ಕೊರತೆ, ಬರ, ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ನೂರಾರು ವರ್ಷಗಳಿಂದ ರೂಪುಗೊಂಡ ಸಾಂಪ್ರದಾಯಿಕ ಕೃಷಿ ಬೆಳೆ ಉಳಿಸಿಕೊಳ್ಳಬೇಕೇ ಹೊರತು, ರೈತರ ಪ್ರಗತಿ ನೆಪದಲ್ಲಿ ಕೋಟಿಗಟ್ಟಲೇ ಲಾಭ ಗಳಿಸುವ ಉದ್ದೇಶದ ಬಹುರಾಷ್ಟ್ರೀಯ ಕಂಪೆನಿಗಳ ತಂತ್ರಜ್ಞಾನ ನಮಗೇಕೆ ಬೇಕು? 

ನಮ್ಮ ನಾಡಿನಲ್ಲೂ

ವಿವಿಧ ರಾಜ್ಯಗಳಲ್ಲಿ ಆರಂಭವಾದ `ಕುಲಾಂತರಿ ವಿರೋಧಿ' ಆಂದೋಲನಕ್ಕೆ ಕರ್ನಾಟಕದಲ್ಲೂ ಚಾಲನೆ ದೊರೆತಿದೆ. ಗ್ರೀನ್ ಪೀಸ್ ಸಂಘಟನೆಯು 'ಸಹಜ ಸಮೃದ್ಧ' ಸಾವಯವ ಕೃಷಿಕರ ಬಳಗ ಹಾಗೂ 'ಸಂವಾದ' ಸಂಸ್ಥೆಯ ಜತೆಗೂಡಿ `ನಾನು ಪ್ರಯೋಗ ಜೀವಿ ಅಲ್ಲ' (ಐ ಆಮ್ ನೋ ಲ್ಯಾಬ್ ರಾಟ್) ಚಳವಳಿ ರೂಪಿಸಿದೆ.

 ಮೂರು ತಿಂಗಳ ಅವಧಿಯವರೆಗೆ ನಡೆಯುವ ಆಂದೋಲನದಲ್ಲಿ 'ಕುಲಾಂತರಿ ಬೆಳೆ' ತಂದೊಡ್ಡುವ ಅಪಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು. ಕೇಂದ್ರ ಆರೋಗ್ಯ ಸಚಿವರಿಗೆ ಪ್ರತಿಭಟನೆಯ ಪತ್ರ ಕಳುಹಿಸಲಾಗುವುದು. ಈ ಚಳವಳಿಯಲ್ಲಿ ನೀವೂ ಪಾಲ್ಗೊಂಡು ಆರೋಗ್ಯ ಸಚಿವರಿಗೆ ಪ್ರತಿಭಟನೆಯ ಪತ್ರ ಕಳುಹಿಸಬಹುದು. 

ಹೌದು. ನಿಮ್ಮ ಆಹಾರದ ಬಟ್ಟಲು ರಕ್ಷಿಸಿಕೊಳ್ಳಬೇಕು ಎಂದಿದ್ದರೆ ತತ್ ಕ್ಷಣ ಈ ಕೆಳಗಿನ ವೆಬ್ ಸೈಟ್ ಸಂದರ್ಶಿಸಿ: 
Website: www.iamnolabrat.com (ಫೋನ್: 9880862058)

ನಿಮ್ಮ ಪ್ರತಿಭಟನೆ ದಾಖಲಿಸಿ.
 

ಇಂದಿನ ಇತಿಹಾಸ History Today ಅಕ್ಟೋಬರ್ 31

ಇಂದಿನ ಇತಿಹಾಸ

ಅಕ್ಟೋಬರ್ 31

ಖ್ಯಾತ ಪಂಜಾಬಿ ಹಾಗೂ ಹಿಂದಿ ಲೇಖಕಿ ಅಮೃತಾ ಪ್ರೀತಮ್ (86) ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು. 1919ರ ಆಗಸ್ಟ್ 31ರಂದು ಜನಿಸಿದ ಅಮೃತಾ ಪಂಜಾಬಿ ಸಾಹಿತ್ಯದ ಮೇರು ಸಾಹಿತಿ. ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ.

2007: ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಸಮಗ್ರ ವರದಿ ನೀಡಲು ರಚಿಸಲಾಗಿದ್ದ ಲಿಬರಾನ್ 
ಆಯೋಗದ ಕಾಲಾವಧಿಯನ್ನು ಮತ್ತೆ ಎರಡು ತಿಂಗಳ ಅವಧಿಗೆ ವಿಸ್ತರಿಸಲಾಯಿತು. ಈಗಾಗಲೇ 7.20 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದರೂ ಇನ್ನು ವರದಿಯನ್ನು ಅಂತಿಮಗೊಳಿಸದ ಕಾರಣ ಸರ್ಕಾರ ಈ ಕ್ರಮ ಕೈಗೊಂಡಿತು. 1992ರಲ್ಲಿ ಬಾಬರಿ ಮಸೀದಿ ಧ್ವಂಸ ಕಾರ್ಯಾಚರಣೆಗೆ ಕಾರಣವಾದ ಪರಿಸ್ಥಿತಿಗಳ ಬಗ್ಗೆ ಕಳೆದ 15 ವರ್ಷಗಳಿಂದ ವರದಿ ತಯಾರಿಸುತ್ತಲೇ ಇರುವ ಈ ಆಯೋಗವು ಇದರೊಂದಿಗೆ 42ನೇ ಬಾರಿಗೆ ಕಾಲಾವಧಿ ವಿಸ್ತರಣೆ ಪಡೆದಂತಾಯಿತು.

2007: ಬಿಜೆಪಿ- ಜೆಡಿಎಸ್ ಮೈತ್ರಿಕೂಟವು ಸರ್ಕಾರ ರಚನೆಗೆ ಹಕ್ಕು ಮಂಡಿಸಿ ನಾಲ್ಕು ದಿನಗಳು ಕಳೆದ ನಂತರ ಈದಿನ ರಾತ್ರಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ರಾಷ್ಟ್ರಪತಿ ಮತ್ತು ಕೇಂದ್ರ ಗೃಹ ಸಚಿವರಿಗೆ ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಮಧ್ಯಂತರ ವರದಿಯನ್ನು ರವಾನಿಸಿದರು. ಕಾನೂನು ಮತ್ತು ಇತರ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು ಮತ್ತೊಂದು ವರದಿಯನ್ನು ಸದ್ಯದಲ್ಲೇ ಕಳುಹಿಸಿಕೊಡಲಾಗುವುದು ಎಂದು ರಾಜಭವನದ ಪತ್ರಿಕಾ ಪ್ರಕಟಣೆ ತಿಳಿಸಿತು. ತಮ್ಮ ವರದಿಯಲ್ಲಿ ವಿಧಾನಸಭೆ ಅಮಾನತನ್ನು ಹಿಂತೆಗೆದುಕೊಳ್ಳುವ ಅಥವಾ ವಿಸರ್ಜಿಸುವ ಬಗ್ಗೆ ಯಾವುದೇ ಶಿಫಾರಸು ಮಾಡದ ರಾಜ್ಯಪಾಲರು ಮುಂದಿನ ತೀರ್ಮಾನವನ್ನು ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಯವರ ವಿವೇಚನೆಗೆ ಬಿಟ್ಟರು. ಸರ್ಕಾರ ರಚನೆಗೆ ಆಹ್ವಾನಿಸದೆ ರಾಜ್ಯಪಾಲರು ಅನುಸರಿಸುತ್ತಿರುವ ವಿಳಂಬ ಧೋರಣೆ ವಿರುದ್ಧ ನಗರದ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಬಿಜೆಪಿಯು, ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

2007: ಉತ್ತರದ ಕ್ಯಾಲಿಫೋರ್ನಿಯಾ ಸಮೀಪದ ಸ್ಯಾನ್ ಜೋಸ್ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ  ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, ಅದರ ತೀವ್ರತೆ 5.6 ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಗಿರುವುದಾಗಿ ಅಮೆರಿಕದ ಭೂಗರ್ಭ ಇಲಾಖೆ ತಿಳಿಸಿತು. ಜಪಾನ್ ಮತ್ತು ಟರ್ಕಿಯಲ್ಲೂ ಭೂಕಂಪ ಸಂಭವಿಸಿತು. ಈ ಪ್ರದೇಶಗಳಲ್ಲಿ ಭೂಕಂಪದ ತೀವ್ರತೆ ಕ್ರಮವಾಗಿ 7.1 ಮತ್ತು 5.1 ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಯಿತು.

2007: ಅಶಿಸ್ತಿನ ವರ್ತನೆ ಆರೋಪದ ಮೇಲೆ `ದುನಿಯಾ' ಖ್ಯಾತಿಯ ನಟ ವಿಜಯ್ ಅವರನ್ನು ಒಂದು ವರ್ಷ ಕನ್ನಡ ಚಿತ್ರರಂಗದಿಂದ ಬಹಿಷ್ಕರಿಸಲು ಸಂಧಾನ ಸಮಿತಿ ತೀರ್ಮಾನಿಸಿತು. ಎಸ್. ನಾರಾಯಣ್ ನಿರ್ದೇಶನದ `ಚಂಡ' ಚಿತ್ರದ ಡಬ್ಬಿಂಗ್ ಕಾರ್ಯದಲ್ಲಿ ಭಾಗವಹಿಸುವಂತೆ ಈ ಹಿಂದೆ ಸಂಧಾನ ಸಮಿತಿ ಸೂಚಿಸಿತ್ತು. ಆದರೆ ವಿಜಯ್ ಈ ಸೂಚನೆಯನ್ನು ಪಾಲಿಸಿರಲಿಲ್ಲ. ಇದನ್ನು ಅಶಿಸ್ತು ಎಂದು ಪರಿಗಣಿಸಿ ಬಹಿಷ್ಕಾರದ ತೀರ್ಮಾನ ಕೈಗೊಳ್ಳಲಾಯಿತು ಎಂದು ಸಮಿತಿ ಹೇಳಿತು.

2007: ಕೆಂಗೇರಿ ಬಳಿಯ ಶ್ರೀನಿವಾಸಪುರದ ಓಂಕಾರ ಹಿಲ್ಸಿನಲ್ಲಿ ಇರುವ ಓಂಕಾರಾಶ್ರಮದ ಚರ ಮತ್ತು ಸ್ಥಿರಾಸ್ತಿಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವಂತೆ ನಗರ ದಕ್ಷಿಣ ಉಪವಿಭಾಗದ ಮ್ಯಾಜಿಸ್ಟ್ರೇಟ್ ಅವರು ಅಕ್ಟೋಬರ್ 24ರಂದು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿತು. 2007ರ ನವೆಂಬರ್ 5ರವರೆಗೆ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಮೂರ್ತಿ ಎ.ಸಿ.ಕಬ್ಬಿಣ ಆದೇಶ ನೀಡಿದರು.

2006: ವರ್ಣಭೇದವನ್ನು ಪ್ರತಿಪಾದಿಸಿ, ಅಂತಾರಾಷ್ಟ್ರೀಯ ನಿಷೇಧದ ನಡುವೆ ಆಳ್ವಿಕೆ ನಡೆಸಿದ್ದ, `ಗ್ರೇಟ್ ಕ್ರೊಕೋಡೈಲ್' ಎಂದೇ ಖ್ಯಾತರಾಗಿದ್ದ ದಕ್ಷಿಣ ಆಫ್ರಿಕದ ಮಾಜಿ ಪ್ರಧಾನಿ ಹಾಗೂ ಮಾಜಿ ಅಧ್ಯಕ್ಷ ಪೀಟರ್ ವಿಲ್ಹೆಮ್ ಬೋಥಾ (90) ವೆಸ್ಟರ್ನ್ ಕೇಪ್ ನ ತಮ್ಮ ಗ್ರಾಮದಲ್ಲಿ ನಿಧನರಾದರು. ವರ್ಣಭೇದದ ಕಟ್ಟ ಕಡೆಯ ಕಟ್ಟಾ ಪ್ರತಿಪಾದಕರಾಗಿದ್ದ ಬೋಥಾ `ವರ್ಣಭೇದದ ಸಂಕೇತ' ಎಂದೇ ಬಿಂಬಿತರಾಗಿದ್ದರು. ವ್ಯಾಪಕ ವಿರೋಧ, ಪ್ರತಿಭಟನೆಗಳ ಮಧ್ಯೆ ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಅವರು ಅಧಿಕಾರದಲ್ಲಿದ್ದರು.

 2006: ಜಗತ್ತಿನಲ್ಲೇ ಮೊತ್ತ ಮೊದಲ ಬಾರಿಗೆ ಈ ದಿನ ರೈಲ್ವೆ ಹಳಿಗಳ ಬದಲಿಗೆ ರಸ್ತೆ ಮೇಲೆ ರೈಲುಗಾಡಿ ಚಲಿಸಿತು. ಅದು ಚಲಿಸಿದ್ದು 300 ಕಿ.ಮೀ. ಉದ್ದದ ಜಮ್ಮು- ಶ್ರೀನಗರ ರಾಷ್ಟ್ರೀಯ ಹ್ದೆದಾರಿಯಲ್ಲಿ. ಡೀಸೆಲ್ ಸಂಚಾರಿ ಬೋಗಿಗಳ (ಮೊಬೈಲ್ ಯೂನಿಟ್) ಈ ರೈಲು ಜಮ್ಮು ರೈಲ್ವೆ ನಿಲ್ದಾಣದಿಂದ ಕಾಶ್ಮೀರದ ಬದ್ಗಾಮ್ ನಿಲ್ದಾಣಕ್ಕೆ ಹಳಿಗಳ ಬದಲಿಗೆ ರಸ್ತೆಯ ಮೂಲಕ ಚಲಿಸುವಾಗ ಮಂತ್ರಘೋಷದೊಂದಿಗೆ ಹೂವಿನ ಮಳೆಗರೆಯಲಾಯಿತು. ಲಾರಿ, ಬಸ್ಸುಗಳ ನಡುವೆ ಸ್ಪರ್ಧಿಸುತ್ತಾ ಓರೆಕೋರೆಯ ರಸ್ತೆಯಲ್ಲಿ ರೈಲು ಓಡಿದಾಗ, ಜನರು ಮಂತ್ರಮುಗ್ಧರಾಗಿ ವೀಕ್ಷಿಸಿ ಆನಂದಿಸಿದರು. ಹಿಮಚ್ಛಾದಿತ ಕಾಶ್ಮೀರ ಕಣಿವೆಯಲ್ಲಿ 2007ರ ಫೆಬ್ರುವರಿ ತಿಂಗಳಲ್ಲಿ ಈ ವಿಶೇಷ ರೈಲು ಅಧಿಕೃತ ಸಂಚಾರಕ್ಕೆ ಸಜ್ಜಾಗಲಿದ್ದು, ಈ ದಿನ ನಡೆದದ್ದು ಇದರ ಪ್ರಾಯೋಗಿಕ ಓಟ. ಈ ಮೂಲಕ 4700 ಕೋಟಿ ರೂಪಾಯಿಗಳ ವೆಚ್ಚದ ಜಮ್ಮು- ಉಧಂಪುರ- ಖ್ವಾಜಿಗುಂಡ್- ಶ್ರೀನಗರ- ಬಾರಾಮುಲ್ಲಾ ರಾಷ್ಟ್ರೀಯ ರೈಲು ಯೋಜನೆಗೆ ಮಾತ್ರವಲ್ಲದೆ, ಇಡೀ ಭಾರತೀಯ ರೈಲ್ವೆಯ ಇತಿಹಾಸಕ್ಕೆ ಹೊಸ ಅಧ್ಯಾಯ ಸೇರ್ಪಡೆಯಾಯಿತು. ಈ ರೈಲಿಗೆ 36 ವಿಶೇಷ ಲಾರಿ ಚಕ್ರಗಳಿದ್ದು 460 ಎಚ್ ಪಿ (ಅಶ್ವಶಕ್ತಿಯ) ವಿಶೇಷ ಎಂಜಿನ್ ಅಳವಡಿಸಲಾಗಿತ್ತು.

2006: ಪೋಲಿಯೋ ಲಸಿಕೆಗಳ ದಾಸ್ತಾನಿಗೆ ಅನುಕೂಲವಾಗುವಂತಹ `ಸೋಲಾರ್ ಚಿಲ್' ಹೆಸರಿನ `ಸೌರ ಲಸಿಕಾ ಶೈತ್ಯ ಪೆಟ್ಟಿಗೆಯನ್ನು (ಸೋಲಾರ್ ವ್ಯಾಕ್ಸೀನ್ ಕೂಲರ್) ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮದ (ಯುಎನ್ಇಪಿ) ಅಡಿಯಲ್ಲಿ ಭಾರತೀಯ ವಿಜ್ಞಾನಿ ರಾಜೇಂದ್ರ ಶೆಂಡೆ ಅವರು ನಿರ್ಮಿಸಿದರು. ಬ್ಯಾಟರಿಗಳು ಹಾಗೂ ಸಾಂಪ್ರದಾಯಿಕ ರೆಫ್ರಿಜರೇಟರುಗಳಲ್ಲಿ ಬಳಸುವ ಓಝೋನ್ ಗೆ ಮಾರಕವಾದ ಕ್ಲೋರೋ-ಫ್ಲುರೋ ಕಾರ್ಬನ್ನುಗಳಿಗೆ ಪರ್ಯಾಯವಾಗಿರುವ ಈ `ಸೋಲಾರ್ ಚಿಲ್' ಪರಿಸರ ಮಿತ್ರ ಸಾಧನವಾಗಿದ್ದು ವಿದ್ಯುತ್ ಸರಬರಾಜು ತೊಂದರೆಯಿಂದ ಬಳಲುತ್ತಿರುವ ಹಳ್ಳಿಗಳಿಗೆ ವರದಾನ ಆಗ ಬಲ್ಲುದು. `ಸೋಲಾರ್ ಚಿಲ್' ನಲ್ಲಿ ಸಾಂಪ್ರದಾಯಿಕ ಸೌರ ಶೈತ್ಯಾಗಾರಗಳಲ್ಲಿ ಬಳಸುವಂತೆ ಬ್ಯಾಟರಿಗಳು ಅಥವಾ ಸೀಮೆ ಎಣ್ಣೆಯನ್ನು ಬಳಸುವುದಿಲ್ಲ. ಮಂಜು ಗಡ್ಡೆಯ ದಪ್ಪ ಪೊರೆ ನಿರ್ಮಿಸಲು ಸೌರಶಕ್ತಿಯನ್ನೇ ಬಳಸಲಾಗುತ್ತದೆ. ಇದು ಕೂಲರ್ ನ ಒಳಗಿನ ಉಷ್ಣತೆಯನ್ನು ಮೈನಸ್ 2 ಡಿಗ್ರಿಯಿಂದ 8 ಡಿಗ್ರಿ ಸೆಲ್ಷಿಯಸ್ ಮಟ್ಟದಲ್ಲಿ ಇರಿಸುತ್ತದೆ. ಈ ಶೈತ್ಯ ಪೆಟ್ಟಿಗೆ ರಾತ್ರಿಯಲ್ಲಿ ಕೂಡಾ ಲಸಿಕೆಯನ್ನು ತಂಪಾಗಿ ಇರಿಸಬಲ್ಲುದು. ಸೂರ್ಯನಿಲ್ಲದೇ ಇದ್ದರೂ ನಾಲ್ಕೈದು ದಿನಗಳ ಕಾಲ ಲಸಿಕೆಯನ್ನು ತಂಪಾಗಿ ಇಡಬಲ್ಲುದು. ಶೈತ್ಯ ಪೆಟ್ಟಿಗೆಗೆ ಯಾವುದೇ ರಾಸಾಯನಿಕಗಳ ಬಳಕೆ ಮಾಡುವುದಿಲ್ಲವಾದ ಕಾರಣ ಅದರಿಂದ ಓಝೋನ್ ಗೆ ಧಕ್ಕೆಯಾಗುವುದಿಲ್ಲ. ವಾತಾವರಣವೂ ಬಿಸಿ ಆಗುವುದಿಲ್ಲ.

2006: ಅಡ್ಮಿರಲ್ ಸುರೇಶ ಮೆಹ್ತಾ ಅವರು ಭಾರತೀಯ ನೌಕಾದಳದ ಮುಖ್ಯಸ್ಥರಾಗಿ ಮುಖ್ಯ ಅಡ್ಮಿರಲ್ ಅರುಣ್ ಪ್ರಕಾಶ್ ಅವರಿಂದ ಅಧಿಕಾರ ವಹಿಸಿಕೊಂಡರು. 

2005: ಖ್ಯಾತ ಪಂಜಾಬಿ ಹಾಗೂ ಹಿಂದಿ ಲೇಖಕಿ ಅಮೃತಾ ಪ್ರೀತಮ್ (86) ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು. 1919ರ ಆಗಸ್ಟ್ 31ರಂದು ಜನಿಸಿದ ಅಮೃತಾ ಪಂಜಾಬಿ ಸಾಹಿತ್ಯದ ಮೇರು ಸಾಹಿತಿ. ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ.

2005: ದೆಹಲಿಯ ಕೆಂಪುಕೋಟೆ ಮೇಲೆ 2000ರ ಡಿಸೆಂಬರ್ 22ರಂದು ನಡೆಸಿದ ದಾಳಿ ಪ್ರಕರಣದ ಆರೋಪಿ ಪಾಕಿಸ್ಥಾನ ಮೂಲದ ಲಷ್ಕರ್-ಎ-ತೊಯಿಬಾ ಸಂಘಟನೆಯ ಉಗ್ರಗಾಮಿ ಮಹಮ್ಮದ್ ಅರಿಫ್ ಯಾನೆ ಅಶ್ಭಾಕನಿಗೆ ನವದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಒ.ಪಿ. ಸೈನಿ ಮರಣದಂಡನೆ ವಿಧಿಸಿದರು. ನಜೀರ್ ಅಹಮದ್ ಖಾಸಿದ್ ಹಾಗೂ ಆತನ ಪುತ್ರ ಫಾರೂಕ್ ಅಹಮದ್ ಖಾಸಿದ್ ಗೆ  ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಕೆಂಪುಕೋಟೆಯ 17ನೇ ಶತಮಾನದ ಮೊಘಲ್ ಸ್ಮಾರಕಕ್ಕೆ ನುಗ್ಗಿದ್ದ ಉಗ್ರರು ಇಬ್ಬರು ಸೈನಿಕರು ಹಾಗೂ ನಾಗರಿಕನೊಬ್ಬನನ್ನು ಗುಂಡಿಟ್ಟು ಕೊಂದಿದ್ದರು.

1987: ನಾಗಪುರದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡಿನ ಮೂವರು ಆಟಗಾರರನ್ನು ಒಬ್ಬರ ಹಿಂದೊಬ್ಬರಂತೆ ಔಟ್ ಮಾಡುವ ಮೂಲಕ ಭಾರತಿಯ ಕ್ರಿಕೆಟ್ ಆಟಗಾರ ಚೇತನ್ ಶರ್ಮಾ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಭಾಜನರಾದರು.

1984: ಭಾರತದ ಪ್ರಧಾನಿ ಇಂದಿರಾಗಾಂಧಿ ಅವರನ್ನು ನವದೆಹಲಿಯಲ್ಲಿ ಸಿಖ್ ಅಂಗರಕ್ಷಕರು ಕೊಲೆಗೈದರು. ಅವರ ಪುತ್ರ ರಾಜೀವಗಾಂಧಿ ಅವರ ಉತ್ತರಾಧಿಕಾರಿಯಾಗಿ ಪ್ರಧಾನಿ ಪಟ್ಟವನ್ನು ಏರಿದರು.

1975: ಖ್ಯಾತ ಸಂಗೀತ ನಿರ್ದೇಶಕ ಸಚಿನ್ ದೇವ್ ಬರ್ಮನ್ ನಿಧನ.

1951: ಇಂಗ್ಲೆಂಡಿನ ಬೆರ್ಕ್ ಶೈರಿನ ಸ್ಲೊವ್ ನಲ್ಲಿ ಮೊತ್ತ ಮೊದಲ ಬಾರಿಗೆ `ಝೀಬ್ರಾ ಕ್ರಾಸಿಂಗ್' ನ್ನು ಅನುಷ್ಠಾನಗೊಳಿಸಲಾಯಿತು. ರಸ್ತೆ ದಾಟುವಾಗ ಸಂಭವಿಸುತ್ತಿದ್ದ ಅಪಘಾತಗಳಲ್ಲಿ ಪಾದಚಾರಿಗಳ ಸಾವನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಯಿತು. ಈ ನಿಟ್ಟಿನಲ್ಲಿ ನಡೆಸಿದ ಇತರ ಪ್ರಯತ್ನಗಳು ವಿಫಲಗೊಂಡ ಬಳಿಕ ರಸ್ತೆಗೆ ಅಡ್ಡವಾಗಿ ಬಿಳಿ ಹಾಗೂ ಕಪ್ಪು ಬಣ್ಣಗಳ ದಪ್ಪ ಪಟ್ಟಿಗಳನ್ನು ಹಾಕಿ ವಾಹನ ಸಂಚಾರ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಯಿತು.

1949: ಸಾಹಿತ್ಯ, ಸಂಗೀತ, ನಟನೆ, ವಾಜ್ಞಯ ಹೀಗೆ ಹಲವಾರು ಪ್ರತಿಭೆಗಳ ಸಂಗಮವಾದ ಅನಸೂಯಾದೇವಿ ಅವರು ದಕ್ಷಿಣ ಕನ್ನಡ ಮೂಲದವರಾದ ತಮ್ಮಯ್ಯ ಅಡಿಗ- ಕಾವೇರಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1933: ವಾಷಿಂಗ್ಟನ್, ಜೆಫರ್ಸನ್, ಲಿಂಕನ್ ಮತ್ತು ಥಿಯೋಡೋರ್ ರೂಸ್ ವೆಲ್ಟ್ ಈ ನಾಲ್ಕು ಮಂದಿ ಅಮೆರಿಕದ ಅಧ್ಯಕ್ಷರ ಕಲ್ಲಿನಲ್ಲಿ ಕೆತ್ತಲಾದ ಶಿರಗಳನ್ನು ಒಳಗೊಂಡ `ಮೌಂಟ್ ರಶ್ಮೋರ್' ಸ್ಮಾರಕ ಯೋಜನೆಯನ್ನು ಅಂತಿಮಗೊಳಿಸಲಾಯಿತು. ದಕ್ಷಿಣ ಡಕೋಟದ ಕೀಸ್ಟೋನ್ ಸಮೀಪ ಈ ಸ್ಮಾರಕಗಳನ್ನು ನಿರ್ಮಿಸಲಾಯಿತು. ಹದಿನಾಲ್ಕು ವರ್ಷಗಳ ಕಾಲ ಇದರ ಯೋಜನಾ ಶಿಲ್ಪಿಯಾಗಿದ್ದ ಗುಟ್ ಝೋನ್ ಬೋರ್ಗ್ಲರ್ಮ್(1867-1941) ಕೆಲಸ ಪೂರ್ಣಗೊಳ್ಳುವುದಕ್ಕೆ 8 ತಿಂಗಳ ಮೊದಲು ಮೃತರಾದಾಗ ಅವರ ಪುತ್ರ ಲಿಂಕನ್ ಬೋರ್ಗ್ಲರ್ಮ್ ಅದನ್ನು ಪೂರ್ಣಗೊಳಿಸಿದರು. 60 -70 ಅಡಿ ಎತ್ತರದ ಈ ಮುಖಗಳು 97 ಕಿಮೀಗಳಷ್ಟು ದೂರದಿಂದಲೇ ಕಾಣಿಸುತ್ತವೆ.

1926: ಖ್ಯಾತ ಅಮೆರಿಕನ್ ಐಂದ್ರಜಾಲಿಕ ಹ್ಯಾರಿ ಹೌಡಿನಿ ಅವರು ತಮ್ಮ 52ನೇ ವಯಸ್ಸಿನಲ್ಲಿ ಮೃತರಾದರು.

1926: ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ಸಿನ (ಐಟಕ್) ಉದ್ಘಾಟನಾ ಅಧಿವೇಶನ ಬಾಂಬೆಯಲ್ಲಿ (ಈಗಿನ ಮುಂಬೈ) ನಡೆಯಿತು. ಲಾಲಾ ಲಜಪತ್ ರಾಯ್ ಇದರ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು.

1919: ಖ್ಯಾತ ಕೈಗಾರಿಕೋದ್ಯಮಿ ಜೈ ಕಿಸಾನ್ ಹರಿ ವಲ್ಲಭ ದಾಸ್ ಜನನ.

1875: ಸ್ವಾತಂತ್ರ್ಯ ಯೋಧ, ಮುತ್ಸದ್ದಿ ಹಾಗೂ ಮಹಾತ್ಮಾ ಗಾಂಧೀಜಿಯವರ ನಿಕಟವರ್ತಿ ವಲ್ಲಭಭಾಯಿ ಝವೆರ್ ಭಾಯಿ ಪಟೇಲ್ (1875-1950) ಜನ್ಮದಿನ. `ಸರ್ದಾರ್' ಎಂದೇ ಇವರು ಜನಪ್ರಿಯರಾಗಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Thursday, October 30, 2008

ಸಮುದ್ರ ಮಥನ 8: ಗುಣಗಳಿದ್ದರೆ ಹೇಗಿರಬೇಕು?

ಸಮುದ್ರ ಮಥನ 8:

ಗುಣಗಳಿದ್ದರೆ ಹೇಗಿರಬೇಕು?

ದೋಷ ಮಾತ್ರವಲ್ಲ. ಮುಚ್ಚಿಟ್ಟ ಗುಣವೂ ಹೀಗೇ. ವ್ಯತ್ಯಾಸವಿಷ್ಟೆ. ದೋಷ ಕಿತ್ತು ಹೊರಬಂದಾಗ ಅಸಹ್ಯವೆನಿಸುತ್ತದೆ. ಪೂರ್ವದಲ್ಲಿ ತಳೆದಿದ್ದ ಸದಭಿಪ್ರಾಯ ನುಚ್ಚುನೂರಾಗುತ್ತದೆ. ಗುಣ ಪ್ರಕಟಗೊಂಡಾಗ ಹಾಗಲ್ಲ. ಕಸ್ತೂರಿಯ ಪರಿಮಳದಂತೆ, ಏಲಕ್ಕಿಯ ಸ್ವಾದದಂತೆ ನಾಲ್ಕೂ ಕಡೆಗೂ ವ್ಯಾಪಿಸುತ್ತದೆ. ಮೆಚ್ಚುಗೆ ಮೂಡುತ್ತದೆ. ಅಭಿಪ್ರಾಯ 
ಗಟ್ಟಿಗೊಳ್ಳಲು ಶುರುವಿಟ್ಟುಕೊಳ್ಳುತ್ತದೆ.

ಹೇಳುವುದುಂಟು. ಇವರು ಪ್ರಾಮಾಣಿಕರು, ಸತ್ಯವಂತರು, ಜ್ಞಾನಸಂಪನ್ನರು ಇನ್ನು ಏನೇನೋ ಎಂದು. ಹಾಗೆಯೇ ಎಷ್ಟರಮಟ್ಟಿಗೆ ಎಂಬ ಅಂಶವನ್ನು ಉಪೇಕ್ಷಿಸುವುದೂ ಉಂಟು.

ಗುಣಗಳ ಬಗ್ಗೆ ಚಿಂತನೆ ನಡೆಸಲು ಒಂದು ಉತ್ತಮ ಉದಾಹರಣೆಯುಂಟು. ಅದು 'ಬೀಜವೃಕ್ಷ ನ್ಯಾಯ'. ಬೀಜದಲ್ಲಿ ಸುಪ್ತವಾಗಿರುವುದು ಮರದಲ್ಲಿ ಪ್ರಕಟವಾಗಿರುತ್ತದೆ. ಬೀಜದಲ್ಲಿಲ್ಲದ್ದು ಮರದಲ್ಲಿರುವುದಿಲ್ಲ. ಮಾವಿನ ಗೊರಟೆಯಿಂದ ಮಾವಿನಮರ, ಹಲಸಿನ ಬೀಜದಿಂದ ಹಲಸಿನಮರ. ಹಾಗಾಗದೇ ಮಾವಿನಲ್ಲಿ ಹಲಸು, ಹಲಸಿನಲ್ಲಿ ಮಾವು ಹೀಗೆಲ್ಲ ಶುರುವಾದರೆ ಹೊಲಸಾಗುತ್ತದೆ.

ಗುಣಗಳ ಕತೆಯೂ ಹಾಗೇ. ನಮ್ಮಲ್ಲಿ ಗುಣಗಳಿಗೆ ಆತ್ಮಗುಣಗಳು ಎಂದು ವಿಶೇಷವಾಗಿ ಹೇಳುತ್ತಾರೆ. ಒಳಗಿನಿಂದ ಸ್ವಾಭಾವಿಕವಾಗಿ ಹೊರಟಿರುವುದು ಮಾತ್ರ ಗುಣ ಎಂಬ ಭಾವದಲ್ಲಿ. ಹಾಗಿರುವ ಗುಣಗಳಿಗೆ ಇತರರಿಂದ ತಮ್ಮನ್ನು ರಕ್ಷಸಿಕೊಳ್ಳುವ ಸಲುವಾಗಿ ಮಾತ್ರ ಎಂಬ ಮಿತಿ ಇರುವುದಿಲ್ಲ.

ಪ್ರದರ್ಶನಕ್ಕೆ ಗುಣಗಳನ್ನು ಲೇಪಿಸಿಕೊಂಡಾಗ ಹಾಗಿರುವುದಿಲ್ಲ. ಸತ್ಯಸಂಧರ ಕತೆ ನೋಡಿ. ಅವರು ಸತ್ಯವಾಡುತ್ತಾರೆ. ಉಳಿದವರು ಸುಳ್ಳಾಡಿ, ತಮ್ಮನ್ನು ಮೋಸಗೊಳಿಸದಿರಲಿ ಎಂಬ ಏಕೈಕ ಉದ್ದೇಶದಿಂದ ಹೊರತು ಮತ್ತೇನಕ್ಕೂ ಅಲ್ಲ. ಹಲವು ಪ್ರಾಮಾಣಿಕರು ಹೇಳುವುದುಂಟು 'ಕೈಯ್ಯನ್ನು ಎಷ್ಟು ಶುದ್ಧವಾಗಿಟ್ಟುಕೊಂಡು ಏನು ಪ್ರಯೋಜನ? ಅವರು ಕೈಯ್ಯನ್ನು ಹೇಗೇ ಇಟ್ಟುಕೊಂಡ್ರೂ ಬೆಳೆಯುತ್ತಿರುವ ರೀತಿ ನೋಡ್ರೀ'.

 ಇನ್ನು ಕಳ್ಳತನ ಮಾಡದಿರುವವರು. ಅವರು ಕದಿಯುವುದಿಲ್ಲ. ಏಕೆಂದರೆ ಅದನ್ನು ನೋಡಿ ಇನ್ನೊಬ್ಬರು ತಮ್ಮದನ್ನು ಕದ್ದರೆ ಕಷ್ಟ ಅಂತ.

ಆಡು ಮಾತಿನಲ್ಲಿ ಹೇಳುವುದುಂಟು. ಒಳಗಡೆ ದೋಷ ಇಟ್ಟುಕೊಂಡು ರಾಶಿರಾಶಿ ಒಳ್ಳೆಯ ಬಟ್ಟೆಹಾಕಿ, ಒಳ್ಳೆಯ ಸ್ನೋ, ಪೌಡರ್ ಉಪಯೋಗಿಸಿ, ಒಳ್ಳೆಯ ಕೇಶವಿನ್ಯಾಸ ಮಾಡಿಕೊಂಡು, ಉತ್ತಮೋತ್ತಮವಾದ ವಸ್ತುವಾಹನಗಳನ್ನು ಬಳಸಿದರೆ ಏನು ಬಂತು. ಅದು ಎಲ್ಲೋ ಒಂದು ಕಡೆ ತನ್ನ ಸಣ್ಣ ಬುದ್ಧಿಯನ್ನು ತೋರಿಸದೇ ಬಿಡುವುದಿಲ್ಲ. ಒಳಗಿನ ಒತ್ತಡ ತೀವ್ರವಾದಾಗ ಅದು ಉಕ್ಕುಕ್ಕಿ ಹರಿಯದೇ ಬೇರೆ ಗತಿಯೇ ಇರುವುದಿಲ್ಲ. ಆಗದು ಮೇಲಿಂದ ಮಾಡಿದ ಪಾಲೀಷು, ಸೋಫೆಷ್ಟಿಕೇಷನ್ ಯಾವುದನ್ನೂ ಲೆಕ್ಕಿಸುವುದಿಲ್ಲ.

ದೋಷ ಮಾತ್ರವಲ್ಲ. ಮುಚ್ಚಿಟ್ಟ ಗುಣವೂ ಹೀಗೇ. ವ್ಯತ್ಯಾಸವಿಷ್ಟೆ. ದೋಷ ಕಿತ್ತು ಹೊರಬಂದಾಗ ಅಸಹ್ಯವೆನಿಸುತ್ತದೆ. ಪೂರ್ವದಲ್ಲಿ ತಳೆದಿದ್ದ ಸದಭಿಪ್ರಾಯ ನುಚ್ಚುನೂರಾಗುತ್ತದೆ. ಗುಣ ಪ್ರಕಟಗೊಂಡಾಗ ಹಾಗಲ್ಲ. ಕಸ್ತೂರಿಯ ಪರಿಮಳದಂತೆ, ಏಲಕ್ಕಿಯ ಸ್ವಾದದಂತೆ ನಾಲ್ಕೂ ಕಡೆಗೂ ವ್ಯಾಪಿಸುತ್ತದೆ. ಮೆಚ್ಚುಗೆ ಮೂಡುತ್ತದೆ. ಅಭಿಪ್ರಾಯ ಗಟ್ಟಿಗೊಳ್ಳಲು ಶುರುವಿಟ್ಟುಕೊಳ್ಳುತ್ತದೆ.

ಹಾಗೆ ರಾಮಾಯಣ ಒಂದೊಂದು ಪಾತ್ರವನ್ನೂ ಮುಂದಿಟ್ಟು, ಮಥಿಸಲು ಅವಕಾಶ ಮಾಡಿಕೊಡುತ್ತದೆ. ಒಂದೊಂದು ಘಟ್ಟ ಸವೆದಂತೆಯೂ ರಾಮನ ಗಟ್ಟಿತನ ಪ್ರಕಟಗೊಳ್ಳುತ್ತಾ ಹೋಗುತ್ತದೆ. ಎಲ್ಲೂ ಸೋಲುವುದು, ಸಹಿಸುವುದು ಎನ್ನುವ ವಿಷಯವೇ ಬರುವುದಿಲ್ಲ. ಇದ್ದದ್ದನ್ನು ಇದ್ದಂತೆಯೇ ಪ್ರಕಟಿಸುವವರಿಗೆ ಯಾತರ ಭಯ, ಸೋಲು?
  

ಇಂದಿನ ಇತಿಹಾಸ History Today ಅಕ್ಟೋಬರ್ 30

ಇಂದಿನ ಇತಿಹಾಸ

ಅಕ್ಟೋಬರ್ 30

ಮಂಗಳೂರು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿರುವ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ತನ್ನ ಜಲಾನಯನ ಅಭಿವೃದ್ಧಿ ಮತ್ತು ನಿರ್ವಹಣಾ ಕಾರ್ಯಕ್ರಮಕ್ಕಾಗಿ ಪ್ರಸ್ತುತ ಸಾಲಿನ ಅಮೆರಿಕದ ಪ್ರತಿಷ್ಠಿತ `ಜಿಮ್ಮಿ ಅಂಡ್ ರೋಸಲಿನ್ ಪಾರ್ಟ್ನರ್ ಶಿಪ್' ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಪ್ರಶಸ್ತಿಯ ಮೊತ್ತ 10,000 ಅಮೆರಿಕನ್ ಡಾಲರುಗಳು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅಮೆರಿಕದಿಂದ ಹೊರಗಿನ ಜಂಟಿ ಕಾರ್ಯಕ್ರಮವೊಂದಕ್ಕೆ ನೀಡಿರುವುದು ಇದೇ ಮೊದಲು.

2007: ಬಿಜೆಪಿ- ಜೆಡಿಎಸ್ ಮೈತ್ರಿಕೂಟದ 129 ಶಾಸಕರು ಸಲ್ಲಿಸಿದ ವೈಯಕ್ತಿಕ ಪ್ರಮಾಣ ಪತ್ರವನ್ನು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದ ರಾಜ್ಯಪಾಲ ರಾಮೇಶ್ವರ ಠಾಕೂರ್, ಎರಡು ದಿನಗಳಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು. ಜಂಟಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡ ಅವರನ್ನು ರಾಜಭವನಕ್ಕೆ 
ಕರೆಸಿಕೊಂಡ ರಾಜ್ಯಪಾಲರು ಈ ವಿಷಯ ತಿಳಿಸಿದರು. ರಾಜಭವನದ ಈ ಬೆಳವಣಿಗೆಯಿಂದಾಗಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದಲ್ಲಿ ಒಂದು ರೀತಿಯ ಸಮಾಧಾನ ಕಂಡುಬಂದಿತು.

2007: ವಾಯುಭಾರ ಕುಸಿತದಿಂದಾಗಿ ಐದು ದಿನಗಳಿಂದ ಭಾರಿ ಹಿಂಗಾರು ಮಳೆಗೆ ಸಿಲುಕಿದ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಾದ ಕಡಪಾ, ನೆಲ್ಲೂರು, ಪ್ರಕಾಶಮ್ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ 20 ಜನರು ಸಾವಿಗೀಡಾದರು.

2007: ವಿಶ್ವಕಪ್ ಫುಟ್ ಬಾಲ್ ಟೂರ್ನಿಗೆ ಆತಿಥ್ಯ ವಹಿಸಬೇಕೆಂಬ ಬ್ರೆಜಿಲ್ ದೇಶದ ಸುದೀರ್ಘ ಕಾಯುವಿಕೆ ಕೊನೆಗೊಂಡಿತು. 2014ರ ವಿಶ್ವಕಪ್ ಟೂರ್ನಿ ದಕ್ಷಿಣ ಅಮೆರಿಕದ ಈ ದೇಶದಲ್ಲಿ ನಡೆಯುವುದು ಖಚಿತಗೊಂಡಿತು. ಬ್ರೆಜಿಲ್ ಸಲ್ಲಿಸಿದ್ದ ಬಿಡ್ ಗೆ ಕಳೆದ ವಾರವೇ ಫಿಫಾ ತಾಂತ್ರಿಕ ಸಮಿತಿಯು ಅನುಮೋದನೆ ನೀಡಿತ್ತು. ವಿಶ್ವದ ಅತಿದೊಡ್ಡ ಕ್ರೀಡಾಮೇಳವನ್ನು ಸಂಘಟಿಸುವ ಅವಕಾಶ ಬ್ರೆಜಿಲ್ಲಿಗೆ ಲಭಿಸುವುದು ಆಗಲೇ ಖಚಿತವಾಗಿತ್ತು. ಇತರ ಯಾವುದೇ ದೇಶಗಳು ಬಿಡ್ ಸಲ್ಲಿಸಿರಲಿಲ್ಲ. 1950ರಲ್ಲಿ ಬ್ರೆಜಿಲಿನಲ್ಲಿ ಕೊನೆಯದಾಗಿ ವಿಶ್ವಕಪ್ ಟೂರ್ನಿ ನಡೆದಿತ್ತು. ಇದೀಗ 64 ವರ್ಷಗಳ ಬಳಿಕ ಮತ್ತೊಮ್ಮೆ ಅವರಿಗೆ ಆತಿಥ್ಯ ವಹಿಸುವ ಅವಕಾಶ ಒದಗಿತು. ಐದು ಬಾರಿ ವಿಶ್ವಕಪ್ ಗೆದ್ದಿರುವ ಬ್ರೆಜಿಲ್ ಗೆ ಲಭಿಸಿದ ಈ ಅವಕಾಶವನ್ನು ಯಾರಾದರೂ ಕಿತ್ತುಕೊಳ್ಳಬಹುದೇ ಎಂಬ ಪ್ರಶ್ನೆಗೆ ಫಿಫಾ ಅಧ್ಯಕ್ಷ ಸೆಪ್ ಬಾಟ್ಲರ್, `ಇಲ್ಲ. ಹಾಗಾಗಲು ಸಾಧ್ಯವಿಲ್ಲ. ಬ್ರೆಜಿಲ್ ಈ ಅವಕಾಶದಿಂದ ವಂಚಿತವಾಗಲು ಸಾಧ್ಯವಿಲ್ಲ. ಏಕೆಂದರೆ  ಅವರಿಗೆ ಯಾರೂ ಸ್ಪರ್ಧೆ ನೀಡುತ್ತಿಲ್ಲ' ಎಂದು ಜ್ಯೂರಿಚ್ಚಿನಲ್ಲಿ ಉತ್ತರಿಸಿದರು.

2007:  ನಾಲ್ಕುನೂರು ವರ್ಷಗಳಷ್ಟು ದೀರ್ಘಕಾಲ ಬದುಕಿದ್ದ ಜೀವಿಯೊಂದು ಬ್ರಿಟನ್ ವಿಜ್ಞಾನಿಗಳಿಗೆ ಕರಾವಳಿಯ ಐಸ್ ಲ್ಯಾಂಡಿನಲ್ಲಿ ದೊರಕಿತು. ಈ ಜೀವಿ ಕಪ್ಪೆ ಚಿಪ್ಪಿನಲ್ಲಿ ಬದುಕುತ್ತಿತ್ತು. ವಿಜ್ಞಾನಿಗಳು ಈ ಪುರಾತನ ಜೀವಿಯ ಆಯಸ್ಸಿನ ಹಿಂದಿರುವ ಗುಟ್ಟನ್ನು ರಟ್ಟು ಮಾಡಲು ಮುಂದಾದರು. ವಿಜ್ಞಾನಿಗಳ ಪ್ರಕಾರ ಜೀವಿಯ ವಯಸ್ಸು 405ರಿಂದ 410 ವರ್ಷಗಳು. ಜೀವಿಗೆ ಮಿಂಗ್ ಎಂದು ಹೆಸರಿಡಲಾಯಿತು. ಮಿಂಗ್ ಎನ್ನುವುದು ಚೀನಾದ ಒಂದು ಸಾಮ್ರಾಜ್ಯದ ಹೆಸರು. ಜೀವಿ ಹುಟ್ಟುವಾಗ ಆ ಸಾಮ್ರಾಜ್ಯ ಆಡಳಿತ ನಡೆಸುತ್ತಿತ್ತು ಎಂಬುದು ವಿಜ್ಞಾನಿಗಳ ವಿವರಣೆ. ಮರಗಳ ವಯಸ್ಸನ್ನು ಅಳೆದಂತೆ ಈ ಜೀವಿಯ ವಯಸ್ಸನ್ನು ಆ ಜೀವಿಯ  ಕಪ್ಪೆಚಿಪ್ಪಿನ  ಮೇಲಿನ ಗೆರೆಗಳನ್ನು ಆಧರಿಸಿ ಅಂದಾಜಿಸಲಾಗುತ್ತಿದೆ ಎನ್ನುತ್ತಾರೆ ವಿಜ್ಞಾನಿಗಳು. ಗಿನ್ನೆಸ್ ದಾಖಲೆ ಪುಸ್ತಕದ ಪ್ರಕಾರ `ಮಿಂಗ್' ಲಭ್ಯವಾಗುವುದಕ್ಕೆ ಮುನ್ನ 1982ರಲ್ಲಿ 220 ವರ್ಷ ಬದುಕಿದ್ದ ಜೀವಿಯೊಂದು ಸಿಕ್ಕಿತ್ತು. ಆಮೆಗಳೂ ಸುದೀರ್ಘ ವರ್ಷಗಳ ಕಾಲ ಬದುಕಿದ ಉದಾಹರಣೆಗಳಿವೆ. 

2006: ಮಂಗಳೂರು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿರುವ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ತನ್ನ ಜಲಾನಯನ ಅಭಿವೃದ್ಧಿ ಮತ್ತು ನಿರ್ವಹಣಾ ಕಾರ್ಯಕ್ರಮಕ್ಕಾಗಿ ಪ್ರಸ್ತುತ ಸಾಲಿನ ಅಮೆರಿಕದ ಪ್ರತಿಷ್ಠಿತ `ಜಿಮ್ಮಿ ಅಂಡ್ ರೋಸಲಿನ್ ಪಾರ್ಟ್ನರ್ ಶಿಪ್' ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಪ್ರಶಸ್ತಿಯ ಮೊತ್ತ 10,000 ಅಮೆರಿಕನ್ ಡಾಲರುಗಳು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅಮೆರಿಕದಿಂದ ಹೊರಗಿನ ಜಂಟಿ ಕಾರ್ಯಕ್ರಮವೊಂದಕ್ಕೆ ನೀಡಿರುವುದು ಇದೇ ಮೊದಲು. ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸ್ಥಳೀಯ ಸಮುದಾಯಗಳು ಪಾಲ್ಗೊಳ್ಳುವಂತೆ ಮಾಡಿ ಜನರನ್ನು ತಲುಪುವಂತಹ ವಿಶೇಷ ಕಾರ್ಯಕ್ರಮ ರೂಪಿಸುವ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ವಾರ್ಷಿಕ ಕಾರ್ಟರ್ ಪಾರ್ಟ್ನರ್ ಶಿಪ್ ಯೋಜನೆಯು ಈ ಪ್ರಶಸ್ತಿಯನ್ನು ನೀಡುತ್ತದೆ. ನೆರೆಯ ಹಳ್ಳಿಯೊಂದರಲ್ಲಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರೇ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಂಡು ಸಮೀಕ್ಷೆ ನಡೆಸಿ, ಕಾಲುವೆ, ಬದುಗಳನ್ನು ನಿರ್ಮಿಸಿ ನೀರು ಇಂಗಲು ವ್ಯವಸ್ಥೆ ಮಾಡಿದ್ದಲ್ಲದೆ 10,000 ಗಿಡಗಳನ್ನೂ ನೆಟ್ಟು ಬೆಳೆಸಿದ್ದಕ್ಕಾಗಿ ಈ ಪ್ರಶಸ್ತಿ ಸಂದಿದೆ.  ದ್ವಿತೀಯ ಮತ್ತು ತೃತೀಯ ಪ್ರಶಸ್ತಿಗಳನ್ನು ಗೆದ್ದಿರುವ ಪಂಜಾಬ್ ವಿಶ್ವವಿದ್ಯಾಲಯ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಕ್ರಮವಾಗಿ 3000 ಅಮೆರಿಕನ್ ಡಾಲರ್ ಹಾಗೂ 2000 ಅಮೆರಿಕನ್ ಡಾಲರುಗಳನ್ನು ಪಡೆದಿವೆ. ಪಂಜಾಬ್ ವಿಶ್ವವಿದ್ಯಾಲಯಕ್ಕೆ ಸಾಕ್ಷರತೆ ಕಾರ್ಯಕ್ರಮಕ್ಕಾಗಿ ಈ ಪ್ರಶಸ್ತಿ ಲಭಿಸಿದ್ದರೆ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಉತ್ತರ ಪ್ರದೇಶದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡದ್ದಕ್ಕಾಗಿ ಈ ಪ್ರಶಸ್ತಿ ಬಂದಿದೆ.

2006: ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಕಾನೂನು ವಿದ್ಯಾರ್ಥಿನಿ ಪ್ರಿಯದರ್ಶಿನಿ ಮಟ್ಟ ಹಂತಕ ಸಂತೋಷ ಕುಮಾರ್ ಸಿಂಗ್ ಗೆ ದೆಹಲಿ ಹೈಕೋರ್ಟ್ ಮರಣದಂಡನೆ ವಿಧಿಸಿತು. ನ್ಯಾಯಮೂರ್ತಿಗಳಾದ ಆರ್. ಎಸ್. ಸೋಧಿ ಮತ್ತು ಪಿ.ಕೆ. ಭಾಸಿನ್ ಅವರ ಪೀಠವು ಹಂತಕ ಸಂತೋಷನನ್ನು ಸಾಯುವ ತನಕ ಗಲ್ಲಿಗೆ ಏರಿಸಬೇಕು ಎಂದು ಆದೇಶ ನೀಡಿತು. 1996ರ ಜನವರಿ 3ರಂದು ಸಹಪಾಠಿ ಪ್ರಿಯದರ್ಶಿನಿ ಮನೆಗೆ ಬಂದ ಸಂತೋಷ ಕುಮಾರ್ ಸಿಂಗ್ ಆಕೆಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಿದ್ದ.

2006: ಶಿರಸಿ ತಾಲ್ಲೂಕಿನ ಮತ್ತಿಘಟ್ಟದ ರಂಗಬಳಗದವರಿಂದ ಗೋಕರ್ಣದ ಓಂ ಬೀಚಿನಲ್ಲಿ `ಆವರ್ತನ' ನಾಟಕ ಪ್ರದರ್ಶನಗೊಂಡಿತು. ಮಾನಸಾ ಹೆಗಡೆ ರಚಿಸಿ, ಕೆ.ಆರ್. ಪ್ರಕಾಶ ನಿರ್ದೇಶಿಸಿದ ಈ ನಾಟಕದ ಪ್ರದರ್ಶನ ಸಮುದ್ರದ ತೆರೆಗಳ ಮಧ್ಯೆ ನಡೆದು ಇದನ್ನು ಒಂದು ಅಪರೂಪದ ಪ್ರಯೋಗವನ್ನಾಗಿಸಿತು.

2005: ಜಗತ್ತಿನ ಅತ್ಯಂತ ಪುರಾತನ ಖಗೋಲ ವೀಕ್ಷಣಾಲಯ ಉತ್ತರ ಚೀನಾದ ಶಾಂಕ್ಷಿ ಪ್ರಾಂತ್ಯದಲ್ಲಿ ಪತ್ತೆಯಾಯಿತು. 4300 ವರ್ಷಗಳಷ್ಟು ಹಳೆಯದು ಎನ್ನಲಾಗಿರುವ ಇದನ್ನು ಖಗೋಲ ವಿದ್ಯಮಾನ ವೀಕ್ಷಣೆ ಹಾಗೂ ಧಾರ್ಮಿಕ ಬಲಿ ಪದ್ಧತಿಗೂ ಬಳಸಲಾಗುತ್ತಿತ್ತು ಎಂಬುದು ಪುರಾತತ್ವ ಸಂಶೋಧಕರ ವರದಿ.

2005: ತಾವು ಕಲಿತ ಶಾಲೆಯಲ್ಲಿಯೇ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಮುಂದಿನ 15 ವರ್ಷಕಾಲ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಮುಂಬೈಯ ಕನ್ನಡತಿ ಸಿ.ಆರ್. ಶ್ಯಾಮಲ ತಮ್ಮ 70ನೇ ವಯಸ್ಸಿನಲ್ಲಿ ಪಿ. ಎಚ್. ಡಿ. ಪದವಿ ಪಡೆದುಕೊಂಡರು. ಅವರು ಆಯ್ದುಕೊಂಡಿದ್ದ ವಿಷಯ `ಪೂರ್ವ ಕರ್ನಾಟಕದ ಪಾಳೆಯಗಾರರು'. ಡಾ. ವಿಶ್ವನಾಥ ಕಾರ್ನಾಡ್ ಹಾಗೂ ಡಾ. ಶ್ರೀನಿವಾಸ ಹಾವನೂರು ಮಾರ್ಗದರ್ಶಕರಾಗಿದ್ದರು.

1996: ಕ್ವೆಟ್ಟಾದಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ಥಾನ ಆಡಿದ ಪಂದ್ಯದಲ್ಲಿ ಆಟವಾಡುವ ಮೂಲಕ ಪಾಕಿಸ್ಥಾನದ 14 ವರ್ಷ 233 ದಿನಗಳ ವಯಸ್ಸಿನ ಹಸನ್ ರಝಾ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಟವಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ಪಂದ್ಯದಲ್ಲಿ  ವಾಸಿಮ್ ಆಕ್ರಮ್ ಅವರು ಒಂದು ದಿನದ ಕ್ರಿಕೆಟಿನಲ್ಲಿ 300 ವಿಕೆಟುಗಳನ್ನು ಪಡೆದ ಮೊದಲ ಬೌಲರ್ ಎನಿಸಿದರು.

1996: ಮುಂಬೈಯ ಶಿವಾಜಿ ಪಾರ್ಕಿನಲ್ಲಿ ಶಿವಸೇನೆಯ ಮೊದಲ ಸಭೆ.

1990: ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯತ್ತ ಹೊರಟಿದ್ದ ಕರ ಸೇವಕರನ್ನು ತಡೆಯಲು ರಕ್ಷಣಾ ಸಿಬ್ಬಂದಿ ಗುಂಡು ಹಾರಿಸಿದ್ದರಿಂದ ಹಲವರ ಸಾವು.

1956: ಭಾರತದ ಪ್ರಪ್ರಥಮ ಪಂಚತಾರಾ ಡಿಲಕ್ಸ್ ಹೋಟೆಲ್ `ಅಶೋಕ' ನವದೆಹಲಿಯ್ಲಲಿ ಉದ್ಘಾಟನೆಗೊಂಡಿತು.

1945: ಭಾರತವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದರೂ ಮೂಲ ರಾಷ್ಟ್ರಗಳ ಪೈಕಿ ಒಂದಾಗಿ ವಿಶ್ವಸಂಸ್ಥೆಗೆ ಸೇರ್ಪಡೆಯಾಯಿತು.

1928: ಆರ್ಯ ಸಮಾಜದ ಕಾರ್ಯಕರ್ತ, ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರು ಲಾಹೋರಿನಲ್ಲಿ ಸೈಮನ್ ಕಮೀಷನ್ ವಿರುದ್ಧ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾಗ ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡರು. ಇದೇ ಗಾಯಗಳ ಪರಿಣಾಮವಾಗಿ ಅವರು ನವೆಂಬರ್ 17ರಂದು ಮೃತರಾದರು. 

1909: ಭಾರತೀಯ ಪರಮಾಣು ವಿಜ್ಞಾನಿ ಹೋಮಿ ಜಹಾಂಗೀರ್ ಭಾಭಾ (1909-66) ಜನ್ಮದಿನ. ಭಾರತೀಯ ಪರಮಾಣು ಯೋಜನೆಗೆ ಅಡಿಗಲ್ಲನ್ನು ಇಟ್ಟ ಭಾಭಾ 1966ರಲ್ಲಿ ಸ್ವಿಸ್ ಆಲ್ಪ್ಸ್ ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಅಸುನೀಗಿದರು.

1895: ಜರ್ಮನ್ ಬ್ಯಾಕ್ಟೀರಿಯಾ ತಜ್ಞ ಗೆರ್ಹಾರ್ಡ್ ಡೊಮಾಗ್ಕ್ (1895-1964) ಜನ್ಮದಿನ.  ಪ್ರೊಟೆನ್ ಸಿಲ್ ನ ಬ್ಯಾಕ್ಟೀರಿಯಾ ನಿರೋಧಿ ಪರಿಣಾಮಗಳ ಕುರಿತ ಸಂಶೋಧನೆಗಾಗಿ ಅವರಿಗೆ 1939ರಲ್ಲಿ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಯಿತು. ಆದರೆ ನಾಝಿ ಸರ್ಕಾರ ಅವರಿಗೆ ಪ್ರಶಸ್ತಿಯನ್ನು ಸ್ವೀಕರಿಸಲು ಅವಕಾಶ ನೀಡಲಿಲ್ಲ. ಈ ರೀತಿ ನಿರಾಕರಿಸಿದ್ದು ನೊಬೆಲ್ ಪ್ರಶಸ್ತಿಗಳ ಚರಿತ್ರೆಯಲ್ಲಿ ಇದೇ ಪ್ರಥಮವೆನ್ನಿಸಿತು. ನಂತರ 1947ರಲ್ಲಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

1888: ಮೊದಲ ಬಾಲ್ ಪಾಯಿಂಟ್ ಪೆನ್ ಗೆ ಹಕ್ಕುಸ್ವಾಮ್ಯ.

1883: ಆರ್ಯ ಸಮಾಜದ ಸ್ಥಾಪಕ, ಸಮಾಜ ಸುಧಾರಕ ಮಹರ್ಷಿ ಸ್ವಾಮಿ ದಯಾನಂದ ಸರಸ್ವತಿ (1824-83) ಅವರು ನಿಧನರಾದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Wednesday, October 29, 2008

ನಮೂದು ದರ ಒಂದು, ಮಾರುವ ದರ ಇನ್ನೊಂದು..!

ನಮೂದು ದರ ಒಂದು,

 ಮಾರುವ ದರ ಇನ್ನೊಂದು..!


 

ಹೆಚ್ಚುವರಿಯಾಗಿ ಪಡೆದ 10 ರೂಪಾಯಿ ಮತ್ತು 250 ರೂಪಾಯಿಗಳ ಖಟ್ಲೆ ವೆಚ್ಚದ ಜೊತೆಗೆ 10,000 ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸುವುದರಿಂದ 'ಅಪ್ರಾಮಾಣಿಕ ವ್ಯಾಪಾರ' ಪುನರಾವರ್ತಿಸದಂತೆ ಸಂದೇಶ ರವಾನೆಯಾಗುತ್ತದೆ ಎಂದು ನ್ಯಾಯಾಲಯ ಭಾವಿಸಿತು.

 ನೆತ್ರಕೆರೆ ಉದಯಶಂಕರ

ಯಾವುದೇ ಒಂದು ವಸ್ತುವಿನ ಪೊಟ್ಟಣದಲ್ಲಿ ನಮೂದಾಗಿರುವ ದರ ಒಂದು, ಅಂಗಡಿಯಾತ ತೆಗೆದುಕೊಳ್ಳುವ ದರ ಇನ್ನೊಂದು ಆಗಿದ್ದರೆ ಅದು ಅಪ್ರಾಮಾಣಿಕ ವ್ಯಾಪಾರ ಅನಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಗ್ರಾಹಕನಿಗೆ ಗ್ರಾಹಕ ಸಂರಕ್ಷಣಾ ಕಾಯ್ದೆ ನ್ಯಾಯ ಒದಗಿಸುತ್ತದೆಯೇ?

ಹೌದು. ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರ ಮೇಲ್ಮನವಿಯ ವಿಚಾರಣೆ ನಡೆಸಿದ ರಾಜ್ಯ ಗ್ರಾಹಕ ನ್ಯಾಯಾಲಯವು ಗ್ರಾಹಕನಿಗೆ ನ್ಯಾಯ ಒದಗಿಸಿದೆ.

ಈ ಪ್ರಕರಣದ ಅರ್ಜಿದಾರ: ಬಾಗಲಕೋಟೆ ಜಿಲ್ಲೆಯ ಇಳ್ಕಲ್ ಎಪಿಎಂಸಿ ಯಾರ್ಡ್ ಸಮೀಪದ ನಿವಾಸಿ ಮಲ್ಲಿಕಾರ್ಜುನ ಬಿ. ಕೋರಿ. ಪ್ರತಿವಾದಿ: ಕಾರ್ಗೊ ಟಾರ್ಪಾಲಿನ್ ಇಂಡಸ್ಟ್ರೀಸ್, ಜೆ.ಸಿ. ರಸ್ತೆ, ಬೆಂಗಳೂರು.

ಅರ್ಜಿದಾರ ಮಲ್ಲಿಕಾರ್ಜುನ ಬಿ. ಕೋರಿ ಅವರು 2006ರ ಜನವರಿ 20ರಂದು ಪ್ರತಿವಾದಿ ಕಾರ್ಗೊ ಟಾರ್ಪಾಲಿನ್ ಇಂಡಸ್ಟ್ರಿಯಿಂದ 112 ರೂಪಾಯಿ ಪಾವತಿ ಮಾಡಿ 'ಡಕ್ ಬ್ಯಾಕ್ ಬೇಬಿ ಶೀಟ್' ಖರೀದಿಸಿದರು.

ಅರ್ಜಿದಾರರ ಪ್ರಕಾರ ಈ ಡಕ್ ಬ್ಯಾಕ್ ಬೇಬಿ ಶೀಟಿನ 'ಗರಿಷ್ಠ ಬಿಡಿ ಮಾರಾಟ ದರ' 90 ರೂಪಾಯಿ ಮಾತ್ರ. ಆದರೆ ಪ್ರತಿವಾದಿ ತಮ್ಮಿಂದ 112 ರೂಪಾಯಿ ವಸೂಲಿ ಮಾಡಿದರು. ಉತ್ಪಾದಕರೇ ಗರಿಷ್ಠ ಬಿಡಿ ಮಾರಾಟ ದರ' ನಿಗದಿ ಪಡಿಸಿದ್ದಾಗ ಮಾರಾಟದ ಏಜೆಂಟ್ ಅದಕ್ಕಿಂತ ಹೆಚ್ಚಿನ ದರ ಪಡೆಯುವುದು ಸಲ್ಲದು ಎಂಬುದು ಅವರ ವಾದ.

ಈ ಪ್ರಕರಣದಲ್ಲಿ ಪ್ರತಿವಾದಿಯು ನಮೂದಿತ ಬೆಲೆಗಿಂತ ಹೆಚ್ಚು ಹಣ ಪಡೆದದ್ದು ಅಪ್ರಾಮಾಣಿಕ ವ್ಯಾಪಾರ ಆಗುತ್ತದೆ ಎಂದು ದೂರಿದ ಅರ್ಜಿದಾರರು ತಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು ಪ್ರತಿವಾದಿಯು ನಮೂದಿತ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಪಡೆದ 10 ರೂಪಾಯಿಗಳನ್ನು ಅರ್ಜಿದಾರರಿಗೆ ಹಿಂದಿರುಗಿಸಬೇಕು. ಮತ್ತು 250 ರೂಪಾಯಿಗಳ ಖಟ್ಲೆ ವೆಚ್ಚವನ್ನು ನೀಡಬೇಕು ಎಂದು ಪ್ರತಿವಾದಿ ಸಂಸ್ಥೆಗೆ ಆಜ್ಞಾಪಿಸಿತು. ಆದರೆ ಯಾವುದೇ ಪರಿಹಾರ ನೀಡಲು ಆದೇಶ ನೀಡಲಿಲ್ಲ.

ಆದರೆ ಅರ್ಜಿದಾರ ಮಲ್ಲಿಕಾರ್ಜುನ ಕೋರಿ ಅವರಿಗೆ ಈ ತೀರ್ಪಿನಿಂದ ಸಮಾಧಾನ ಆಗಲಿಲ್ಲ. ಅವರು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದರು.

ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ರಮಾ ಅನಂತ್ ಮತ್ತು ಎಂ. ಶಾಮಭಟ್ ಅವರನ್ನು ಒಳಗೊಂಡ ಪೀಠವು ಮೇಲ್ಮನವಿಯ ವಿಚಾರಣೆ ನಡೆಸಿ ಅರ್ಜಿದಾರರ ಹಾಗೂ ಪ್ರತಿವಾದಿಯ ವಕೀಲ ಆರ್. ನರೇಂದ್ರ ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಗಳನ್ನು ಪರಿಶೀಲಿಸಿತು.

ಪ್ರತಿವಾದಿಯು ಪೊಟ್ಟಣದಲ್ಲಿ ನಮೂದಿಸಲಾಗಿದ್ದ ದರಕ್ಕಿಂತ 10 ರೂಪಾಯಿಗಳಷ್ಟು ಹೆಚ್ಚು ಹಣ ಪಡೆದದ್ದು ಸ್ಪಷ್ಟವಾಗಿ ಅಪ್ರಾಮಾಣಿಕ ವ್ಯಾಪಾರ ಆಗುತ್ತದೆ ಎಂದು ಅಭಿಪ್ರಾಯಪಟ್ಟ ರಾಜ್ಯ ಗ್ರಾಹಕ ನ್ಯಾಯಾಲಯವು ಜಿಲ್ಲಾ ಗ್ರಾಹಕ ನ್ಯಾಯಾಲಯವು ಹೆಚ್ಚುವರಿಯಾಗಿ ಪಡೆದ ಹಣವನ್ನು ಮತ್ತು ಖಟ್ಲೆ ವೆಚ್ಚವನ್ನು ಪಾವತಿ ಮಾಡಲು ಆದೇಶಿಸಿರುವುದು ಸಮರ್ಪಕವಾಗಿಯೇ ಇದೆ. ಆದರೆ ಯಾವುದೇ ಪರಿಹಾರ ನೀಡಿಲ್ಲ. ಅಪ್ರಾಮಾಣಿಕ ವ್ಯಾಪಾರ ನಡೆಸಿದ್ದಕ್ಕೆ ದಂಡ ವಿಧಿಸದೇ ಇದ್ದರೆ ಪ್ರತಿವಾದಿಯು ಮತ್ತೆ ಮತ್ತೆ ಇಂತಹ ಕೃತ್ಯಕ್ಕೆ ಇಳಿಯಬಹುದು ಎಂದು ಅಭಿಪ್ರಾಯಪಟ್ಟಿತು.

ಈ ಹಿನ್ನೆಲೆಯಲ್ಲಿ 10,000 ರೂಪಾಯಿಗಳ ಪರಿಹಾರ ನೀಡಲು ಆದೇಶಿಸುವುದುರಿಂದ ಅರ್ಜಿದಾರರಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಭವಿಷ್ಯದಲ್ಲಿ ಇಂತಹ ಅಪ್ರಾಮಾಣಿಕ ವ್ಯಾಪಾರದಲ್ಲಿ ತೊಡಗದಂತೆ ಎಚ್ಚರಿಕೆಯ ಸಂದೇಶವೂ ಆಗುತ್ತದೆ ಎಂದು ನ್ಯಾಯಾಲಯ ಭಾವಿಸಿತು.

ಹೀಗಾಗಿ ಹೆಚ್ಚುವರಿಯಾಗಿ ಪಡೆದ 10 ರೂಪಾಯಿಗಳನ್ನು 250 ರೂಪಾಯಿಗಳ ಖಟ್ಲೆವೆಚ್ಚದ ಜೊತೆಗೆ ಹಿಂದಿರುಗಿಸಬೇಕು ಎಂಬ ಜಿಲ್ಲಾ ಗ್ರಾಹಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದು ಸ್ಪಲ್ಪ ಪರಿಷ್ಕರಿಸಿದ ರಾಜ್ಯ ಗ್ರಾಹಕ ನ್ಯಾಯಾಲಯವು ಇದರ ಜೊತೆಗೆ 10,000 ರೂಪಾಯಿಗಳ ಪರಿಹಾರವನ್ನು ಶೇಕಡಾ 6ರ ಬಡ್ಡಿ ಸಹಿತವಾಗಿ ಅರ್ಜಿದಾರರಿಗೆ ಪಾವತಿ ಮಾಡಬೇಕು ಎಂದು ಪ್ರತಿವಾದಿಗೆ ಆಜ್ಞಾಪಿಸಿತು.

ಇಂದಿನ ಇತಿಹಾಸ History Today ಅಕ್ಟೋಬರ್ 29

ಇಂದಿನ ಇತಿಹಾಸ 

ಅಕ್ಟೋಬರ್ 29

ತೀವ್ರವಾಗಿ ಅಸ್ವಸ್ಥರಾಗಿದ್ದ ಖ್ಯಾತ ರಂಗಕರ್ಮಿ ಪ್ರೇಮಾ ಕಾರಂತ (73) ಬೆಂಗಳೂರಿನ ಟ್ರಿನಿಟಿ ಆಸ್ಪತ್ರೆಯಲ್ಲಿ ಈದಿನ ಮಧ್ಯಾಹ್ನ ನಿಧನರಾದರು. ಸಂಜೆ ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.  ಅವರ ಆಸಕ್ತಿ ಹಾಗೂ ಸಾಧನೆ ಸಿನಿಮಾ, ರಂಗಭೂಮಿ, ಭಾಷಾಂತರ, ಬೋಧನೆ- ಹೀಗೆ ಹಲವು ಕ್ಷೇತ್ರಗಳಲ್ಲಿ ಹಂಚಿಹೋಗಿತ್ತು.

2007: ತೀವ್ರವಾಗಿ ಅಸ್ವಸ್ಥರಾಗಿದ್ದ ಖ್ಯಾತ ರಂಗಕರ್ಮಿ ಪ್ರೇಮಾ ಕಾರಂತ (73) ಬೆಂಗಳೂರಿನ ಟ್ರಿನಿಟಿ ಆಸ್ಪತ್ರೆಯಲ್ಲಿ ಈದಿನ ಮಧ್ಯಾಹ್ನ ನಿಧನರಾದರು. ಸಂಜೆ ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಪ್ರಸಿದ್ಧ ವ್ಯಕ್ತಿಯ ಪತ್ನಿಯಾಗಿದ್ದೂ ಅಸ್ತಿತ್ವವನ್ನು ಉಳಿಸಿಕೊಂಡ ಅಪರೂಪದ ಮಹಿಳೆಯರ ಸಾಲಿಗೆ ಸೇರಿದವರು ಪ್ರೇಮಾ ಕಾರಂತ. ಅವರ ಆಸಕ್ತಿ ಹಾಗೂ ಸಾಧನೆ ಸಿನಿಮಾ, ರಂಗಭೂಮಿ, ಭಾಷಾಂತರ, ಬೋಧನೆ- ಹೀಗೆ ಹಲವು ಕ್ಷೇತ್ರಗಳಲ್ಲಿ ಹಂಚಿಹೋಗಿತ್ತು.  ದೆಹಲಿಯ `ರಾಷ್ಟ್ರೀಯ ನಾಟಕ ಶಾಲೆ'ಯಲ್ಲಿ ರಂಗಭೂಮಿಯ ಪಟ್ಟುಗಳನ್ನು ಕಲಿಯುವಾಗ ಅಂಕುರಿಸಿದ ಪ್ರೇಮ ಬಿ.ವಿ. ಕಾರಂತರೊಂದಿಗೆ ಪ್ರೇಮ ವಿವಾಹದಲ್ಲಿ ಪರ್ಯವಸಾನಗೊಂಡಿತ್ತು. ಪ್ರೇಮ ವಿವಾಹದ ಸಂಕಷ್ಟ, ಆರ್ಥಿಕ ಅಡಚಣೆಗಳ ನಡುವೆ ಸಾಗಿದ ಅವರ ಬಾಳ ಹಾದಿಯಲ್ಲಿ ಗುರಿ ನಿಚ್ಚಳವಾಗಿತ್ತು. ರಂಗಭೂಮಿಯ ಹಾದಿಯ ಪಯಣ ಲೌಕಿಕ ತೊಂದರೆಗಳನ್ನು ಮರೆಸುವಷ್ಟು ಪ್ರಭಾವಶಾಲಿಯಾಗಿತ್ತು. ಅರವತ್ತು ಎಪ್ಪತ್ತರ ದಶಕ ಕಾರಂತರು ನಾಟಕ ಹಾಗೂ ಸಿನಿಮಾಗಳಲ್ಲಿ ನಿರಂತರ ಪ್ರಯೋಗಶೀಲರಾಗಿದ್ದಾಗ, ಆರಂಭವಾದ ಕನ್ನಡದ ಹೊಸ ಅಲೆಯ ಚಿತ್ರಗಳ ನಿರ್ಮಾಣ ಸೇರಿದಂತೆ ಪತಿಯ ಎಲ್ಲ ಪ್ರಯೋಗಗಳಲ್ಲಿ ಪ್ರೇಮಾ ಸಹಕಾರವಿತ್ತು. `ಹಂಸಗೀತೆ' ಚಿತ್ರಕ್ಕೆ ಪ್ರೇಮಾ ಅವರೇ ವಸ್ತ್ರವಿನ್ಯಾಸ ಮಾಡಿದ್ದರು. ಜೊತೆಗೆ ಪ್ರೇಮಾ ತಮ್ಮದೇ ಆದ ದಾರಿಯಲ್ಲಿಯೂ ನಡೆದರು. ಅವರು ನಿರ್ದೇಶಿಸಿದ `ಫಣಿಯಮ್ಮ' ರಾಷ್ಟ್ರಪ್ರಶಸ್ತಿ ಪಡೆಯಿತು. ಎಂ.ಕೆ. ಇಂದಿರಾ ಅವರ ಕಾದಂಬರಿ ಆಧಾರಿತ ಚಿತ್ರದಲ್ಲಿ ಪ್ರೇಮಾ ಎಳೆಯ ವಯಸ್ಸಿನಲ್ಲಿ ವಿಧವೆಯಾದ ಹೆಣ್ಣುಮಗಳ ತವಕ ತಲ್ಲಣಗಳನ್ನು ಅದ್ಭುತವಾಗಿ ಚಿತ್ರಿಸಿದ್ದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. ಪ್ರೇಮಾ ನಿರ್ದೇಶಿಸಿದ `ಬಂಧ್ ಝರೋಕೆ' ಹಿಂದಿಚಿತ್ರ ರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಹೆಸರು ತಂದು ಕೊಟ್ಟಿತ್ತು. `ನಕ್ಕಳಾ ರಾಜಕುಮಾರಿ', `ಲಕ್ಷ್ಮೀ ಕಟಾಕ್ಷ', `ಅಬ್ದುಲ್ಲಾ ಗೋಪಾಲ' ಅವರ ನಿರ್ದೇಶನದ ಇತರ ಚಿತ್ರಗಳು. ಮಕ್ಕಳನ್ನು ಕಂಡರೆ ಪ್ರೇಮಾ ಅವರಿಗೆ ಮೈಮರೆಯುವಷ್ಟು ಅಕ್ಕರೆ. `ಬೆನಕ' ಮಕ್ಕಳ ರಂಗತಂಡದ ಮೂಲಕ ಅವರು ಮಕ್ಕಳ ನಾಟಕಗಳನ್ನು ರೂಪಿಸಲಿಕ್ಕೆ ಈ ಅಕ್ಕರೆಯೇ ಕಾರಣ. ಅವರ ನಿರ್ದೇಶನದ `ಆಲೀಬಾಬಾ' ನಾಟಕ- ಆ ನಾಟಕದ ಸಂಗೀತ- ಮಕ್ಕಳಿಗೆ ತುಂಬಾ ಇಷ್ಟವಾಗಿತ್ತು, `ಸಿಂದಾಬಾದ್', `ನಕ್ಕಳಾ ರಾಜಕುಮಾರಿ', `ಇಸ್ಪೀಟ್ ರಾಜ್ಯ', `ಪಂಜರಶಾಲೆ', `ಅಳಿಲು ರಾಮಾಯಣ', `ಸುಣ್ಣದ ಸುತ್ತು', `ಕುಣಿಯೋ ಕತ್ತೆ', `ಹಿಂದುಮುಂದಾದ ಕಾಳಿ' ಅವರ ಕೆಲವು ಜನಪ್ರಿಯ ಮಕ್ಕಳ ನಾಟಕಗಳು. ಷೇಕ್ಸ್ಪಿಯರ್ನ `ಕಿಂಗ್ಲಿಯರ್' ಹಾಗೂ ಎಚ್.ಎಸ್. ವೆಂಕಟೇಶಮೂರ್ತಿಯವರ `ಹುಚ್ಚುದೊರೆ ಮತ್ತು ಮೂವರು ಮಕ್ಕಳು' ನಾಟಕಗಳು ಪ್ರೇಮಾ ಅವರ ಯಶಸ್ವಿ ನಾಟಕಗಳಲ್ಲಿ ಕೆಲವು. ವಿಪರ್ಯಾಸವೆಂದರೆ ಮಕ್ಕಳ ಬಗ್ಗೆ ಇಷ್ಟೆಲ್ಲ ಕಾಳಜಿ ಹೊಂದಿದ್ದ ಪ್ರೇಮಾ ಅವರಿಗೆ ಸಂತಾನವಿರಲಿಲ್ಲ. ಭಾಷಾಂತರದಲ್ಲೂ ಪ್ರೇಮಾ ಪ್ರವೀಣೆಯಾಗಿದ್ದರು. ಹಿಂದಿಯಿಂದ ಶಂಭುಮಿತ್ರ, ವಿಜಯ್ ತೆಂಡೂಲ್ಕರರ ಕೃತಿಗಳನ್ನು, ಗುಜರಾತಿ ಏಕಾಂಕಗಳನ್ನು, ಇಂಗ್ಲಿಷಿನ ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದರು. ರಾಷ್ಟ್ರೀಯ ಪುಸ್ತಕ ಟ್ರಸ್ಟಿನಿಂದ ಭಾಷಾಂತರಕಾರಳಾಗಿ ಮನ್ನಣೆ ಪಡೆದಿದ್ದರು. ಪ್ರೇಮಾ ಅವರು ರಂಗಕ್ಕೆ ತಂದ ದ.ರಾ. ಬೇಂದ್ರೆಯವರ `ಸಾಯೋ ಆಟ', ಗಿರೀಶ್ ಕಾರ್ನಾಡರ `ಹಿಟ್ಟಿನ ಹುಂಜ', ವಿಜಯ್ ತೆಂಡೂಲ್ಕರರ `ಹಕ್ಕಿ ಹಾರುತಿದೆ ನೋಡಿದಿರಾ', ಶ್ರೀರಂಗರ `ಸ್ವಗತ ಸಂಭಾಷಣೆ', ಲಂಕೇಶರ `ಪೊಲೀಸರಿದ್ದಾರೆ ಎಚ್ಚರಿಕೆ' ನಾಟಕಗಳು ಅವರ ರಂಗಪ್ರೀತಿ ಹಾಗೂ ಬದ್ಧತೆಗೆ ಸಾಕ್ಷಿಯಾಗಿದ್ದವು. ದೇಶದ ವಿವಿಧ ಭಾಗಗಳಲ್ಲಿ ರಂಗಭೂಮಿಗೆ ಸಂಬಂಧಿಸಿದ ಕಮ್ಮಟಗಳನ್ನು ನಡೆಸಿದ್ದರು. ಸಿನೆಮಾಗಳಿಗೆ ಲಭಿಸಿದ ರಾಷ್ಟ್ರಪ್ರಶಸ್ತಿಗಳ ಜೊತೆಗೆ ಪ್ರೇಮಾ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿತ್ತು. ಪತಿ ಬಿ.ವಿ. ಕಾರಂತರ ನಿಧನದ ಬಳಿಕ ಅವರು ಸ್ಥಾಪಿಸಿದ್ದ `ಬಾಬುಕೋಡಿ ಪ್ರತಿಷ್ಠಾನ'ದ ಮೂಲಕ ಪತಿಯ ಕನಸುಗಳನ್ನು ನನಸಾಗಿಸುವ ಯತ್ನದಲ್ಲಿ ಪ್ರೇಮಾ ಸಕ್ರಿಯರಾಗಿದ್ದರು. ಕಾರಂತರ ಬೃಹತ್ ಪುಸ್ತಕ ಸಂಗ್ರಹ ಹಾಗೂ ದೇಶವಿದೇಶಗಳ- ಅಪರೂಪದ ವಾದ್ಯಗಳನ್ನೊಳಗೊಂಡ- ವಸ್ತು ಸಂಗ್ರಹವನ್ನು ಜೋಪಾನವಾಗಿರಿಸುವ ಕನಸು ಅವರಿಗಿತ್ತು.

2007: ವಾಯುಭಾರ ಕುಸಿತದಿಂದಾಗಿ ವರ್ಷದ ಅತ್ಯಂತ ಬಿರುಸಿನ ಮಳೆಯ ಆರ್ಭಟಕ್ಕೆ ಸಿಲುಕಿದ ತಮಿಳುನಾಡಿನ ವಿವಿಧೆಡೆಗಳಲ್ಲಿ 48 ಗಂಟೆಗಳ ಅವಧಿಯಲ್ಲಿ 30 ಜನ ಮೃತರಾಗಿ ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ನಷ್ಟವಾಯಿತು. ತಂಜಾವೂರು, ಕಡಲೂರು, ಚೆನ್ನೈ ಜಿಲ್ಲೆಗಳಲ್ಲಿ ಮಳೆಯಿಂದ ಅಪಾರ ಹಾನಿ ಉಂಟಾಯಿತು.

2007: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಈದಿನ ವಹಿವಾಟಿನಲ್ಲಿ ದೀಪಾವಳಿಯ ರಾಕೆಟ್ನಂತೆ ಚಿಮ್ಮಿ 20 ಸಾವಿರ ಅಂಶಗಳ ಮಾಂತ್ರಿಕ ಸಂಖ್ಯೆ ದಾಟಿ ಹೊಸ ಇತಿಹಾಸ ಬರೆಯಿತು.  

2007: ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್, ನಟ ಅನಂತನಾಗ್, ಬಿಲಿಯರ್ಡ್ಸ್ ವಿಶ್ವ ಚಾಂಪಿಯನ್ ಪಂಕಜ್ ಆಡ್ವಾಣಿ ಸಹಿತ ವಿವಿಧ ಕ್ಷೇತ್ರಗಳ ಗಣ್ಯರಿಗೆ 2007ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಯಿತು. 51ನೇ ರಾಜ್ಯೋತ್ಸವ ನಿಮಿತ್ತ 51 ಮಂದಿಯನ್ನು ಪ್ರಶಸ್ತಿಗೆ ಆರಿಸಲಾಯಿತು.

2007: ನಿರೀಕ್ಷಿತ ಬೆಂಬಲ ಸಿಗದೆ ಮುಗ್ಗರಿಸಿದ ಎಂ.ಪಿ.ಪ್ರಕಾಶ್ ಬಣ, ರಾಜ್ಯಪಾಲರ ಮುಂದೆ ಬಿಜೆಪಿ- ಜೆಡಿಎಸ್ ಮೈತ್ರಿ ಕೂಟದ ಸ್ವಯಂ ಪ್ರೇರಿತ ಶಕ್ತಿ ಪ್ರದರ್ಶನ, ರಾಜಭವನದಲ್ಲಿ 129 ಶಾಸಕರ ಖುದ್ದು ಹಾಜರಿ ಹಾಜರಿ, ಮರು ಮೈತ್ರಿಗೆ ಕಾಂಗ್ರೆಸ್ಸಿನಿಂದ ಮುಂದುವರೆದ ಕಿರಿಕಿರಿ, ತಮಗೆ ಅವಕಾಶ ನೀಡುವಲ್ಲಿ ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆಂಬ ಮಿತ್ರ ಪಕ್ಷಗಳ ತೀವ್ರ ಅಸಮಾಧಾನ- ಈ ಪ್ರಮುಖ ಬೆಳವಣಿಗೆಗಳು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಈದಿನ ನಡೆದವು. ಇಡೀದಿನ ರಾಜಕೀಯ ಚಟುವಟಿಕೆಗಳು ನಡೆದರೂ ರಾಜ್ಯಪಾಲರ ಮನದಿಂಗಿತ ಬಹಿರಂಗಗೊಳ್ಳದ ಕಾರಣ ಪರ್ಯಾಯ ಸರ್ಕಾರ ರಚನೆ ಸಂಬಂಧದ ಅನಿಶ್ಚಿತತೆ ಮುಂದುವರೆಯಿತು. ಬಿಜೆಪಿ ಮತ್ತು ಜೆಡಿಎಸ್ ಜಂಟಿ ಶಾಸಕಾಂಗ ಪಕ್ಷದ ನಾಯಕರಾಗಿ ಬಿ.ಎಸ್. ಯಡಿಯೂರಪ್ಪ ಆಯ್ಕೆಯಾದರು. ವಿಂಡ್ಸರ್ ಮ್ಯಾನರಿನಲ್ಲಿ ಸಂಜೆ ಹದಿನೈದು ನಿಮಿಷಗಳ ಕಾಲ ನಡೆದ ಜಂಟಿ ಸಭೆಯಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೆಸರನ್ನು ಸೂಚಿಸಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ- ಜೆಡಿಎಸ್ ರಾಜ್ಯ ಘಟಕಗಳ ಅಧ್ಯಕ್ಷರಾದ ಸದಾನಂದಗೌಡ ಮತ್ತು ಮೆರಾಜ್ದುದೀನ್ ಪಟೇಲ್, ಶಾಸಕರು ಭಾಗವಹಿಸಿದ್ದರು.

2006: ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಅಕ್ಟೋಬರ್ 27ರಂದು ಮಧ್ಯಪ್ರದೇಶದಲ್ಲಿ ನಿಧನರಾಗಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ಗುನಾದಲ್ಲಿ ತನಿಖೆ ಆರಂಭಿಸಿದರು. ಮಧ್ಯ ಪ್ರದೇಶದ ಅಶೋಕ ನಗರ ಜಿಲ್ಲೆಯ ಸಾಯಿಜಿ ಗ್ರಾಮದಲ್ಲಿ 30 ವರ್ಷಗಳಿಂದ ವಾಸವಾಗಿದ್ದ 100ಕ್ಕೂ ಹೆಚ್ಚು ವಯಸ್ಸಿನ ಸಂತ ಬಾಬಾ ಲಾಲ್ ಜಿ ಮಹಾರಾಜ್ ಎರಡು ದಿನಗಳ ಹಿಂದೆ ಮರಣಶಯ್ಯೆಯಲ್ಲಿ ಇದ್ದಾಗ ತಾವೇ ನೇತಾಜಿ ಸುಭಾಶ್ ಚಂದ್ರ ಬೋಸ್ ಎಂಬುದಾಗಿ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಮಾಜಿ ಗ್ರಾಮ ಸರಪಂಚ ಗಜೇಂದ್ರ ಸಿಂಗ್ ರಘುವಂಶಿ ಪ್ರಕಟಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ವಾಪಸಾಗುವಾಗ ಬಾಬಾ ತಾವೇ ನೇತಾಜಿ ಸುಭಾಶ್ ಚಂದ್ರ ಬೋಸ್ ಎಂಬುದಾಗಿ ಒಪ್ಪಿಕೊಂಡಿದ್ದು, ಅಂತ್ಯಕ್ರಿಯೆ ಪೂರ್ಣಗೊಳ್ಳುವವರೆಗೆ ಈ ವಿಚಾರವನ್ನು ಬಹಿರಂಗ ಪಡಿಸಬಾರದು ಎಂದು ನಮಗೆ ಸೂಚಿಸಿದ್ದರು' ಎಂದು ರಘುವಂಶಿ ಹೇಳಿದರು. ಸಾಯಿಜಿ ಗ್ರಾಮಕ್ಕೆ ಬರುವ ಮುನ್ನ ಬಾಬಾ ಲಾಲ್ ಜಿ ಮಹಾರಾಜ್ ಅವರು ನೆರೆಯ ಚಾಕ್ ಚಿರೋಲಿ ಗ್ರಾಮದಲ್ಲಿ 20 ವರ್ಷಗಳ ಕಾಲ ವಾಸವಾಗಿದ್ದರು. ಸಾಯುವ ಮುನ್ನ ಲಾಲ್ ಜಿ ಅವರು ತಮ್ಮ ಬಳಿ ಇದ್ದ ಹಲವಾರು ಪುಸ್ತಕಗಳನ್ನು ರಘುವಂಶಿ ಅವರಿಗೆ ನೀಡಿದ್ದರು. ಇದಲ್ಲದೆ ಬೌದ್ಧಮತಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳು, ಹಳೆಯ ರೈಲು ಮತ್ತು ಬಸ್ ಟಿಕೆಟ್ಟುಗಳು, ಸುಭಾಶ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಹಳೆ ವೃತ್ತ ಪತ್ರಿಕಾ ತುಣುಕುಗಳು ಮತ್ತು ಫೊಟೋಗಳು ಆಶ್ರಮದಲ್ಲಿ ಲಭಿಸಿದವು.

2006: ಬಾಂಗ್ಲಾದೇಶದ ರಾಷ್ಟ್ರಪತಿ ಇವಾಜ್ದುದೀನ್ ಅಹ್ಮದ್ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅವರೇ ಜನವರಿ ತಿಂಗಳಲ್ಲಿ ನಡೆಯಲಿರುವ ಮಹಾಚುನಾವಣೆಯ ಮೇಲುಸ್ತುವಾರಿ ನೋಡಿಕೊಳ್ಳುವುದಾಗಿ ಪ್ರಕಟಿಸಿದರು. ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಹಸನ್ ಹಂಗಾಮಿ ಆಡಳಿತಗಾರರಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ವಿರೋಧ ಪಕ್ಷಗಳಿಂದ ವ್ಯಕ್ತವಾದ ತೀವ್ರ ಪ್ರತಿಭಟನೆ  ಹಾಗೂ ಹಸನ್ ಅವರು ಹಠಾತ್ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಶನಿವಾರ ಪ್ರಮಾಣ ವಚನ ಸಮಾರಂಭ ಮುಂದೂಡಿದ್ದ ಇವಾಜುದ್ದೀನ್ ಅಹ್ಮದ್ ಅವರು ಮೌನ ಮುರಿದು ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ಕ್ರಮ ಕೈಗೊಂಡರು.

2006: ನೈಜೀರಿಯಾದ ರಾಜಧಾನಿ ಅಬುಜಾ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ವಿಮಾನ ಕೆಲ ಕ್ಷಣಗಳಲ್ಲೇ ಪತನಗೊಂಡು 100ಕ್ಕೂ ಹೆಚ್ಚು ಮಂದಿ ಮೃತರಾದರು. ವಿಮಾನದಲ್ಲಿ 110ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.

2006: ಇನ್ಫೋಸಿಸ್ ಟೆಕ್ನಾಲಜೀಸ್ ಸಿಇಓ ನಂದನ್ ನೀಲೇಕಣಿ ಅವರಿಗೆ 2006ನೇ ಸಾಲಿನ ಡೇಟಾ ಕ್ವೆಸ್ಟ್ ಐಟಿ ವ್ಯಕ್ತಿ ಪ್ರಶಸ್ತಿ ಲಭಿಸಿತು. ಡೇಟಾಕ್ವೆಸ್ಟ್ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಪ್ಲೆಕ್ಸ್ ಟ್ರಾನಿಕ್ಸ್ ಸಾಫ್ಟ್ ವೇರ್ ಮುಖ್ಯಸ್ಥರಾಗಿದ್ದ ಅರುಣ್ ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಲಾಯಿತು.

2006: ಕನ್ನಡದ ಹಿರಿಯ ನಟಿ ಜಯಶ್ರೀ (77) ಅವರು ಮೈಸೂರಿನಲ್ಲಿ ನಿಧನರಾದರು. `ಭಕ್ತ ಕುಂಬಾರ' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀ ಕನ್ನಡ, ತಮಿಳು ಸೇರಿದಂತೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.ನಾಯಕಿಯಾಗಿ ನಟಿಸಿದ  ಮೊದಲ  ಚಿತ್ರ ನಾಗಕನ್ನಿಕಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಮೂಲಕ ಆ ಕಾಲದಲ್ಲೇ ಪ್ರೇಕ್ಷಕರು ಹುಬ್ಬೇರಿಸುವಂತೆ ಮಾಡಿದ್ದರು. 1970-71ರ ಸಾಲಿನಲ್ಲಿ `ಅಮರ ಭಾರತಿ' ಚಿತ್ರಕ್ಕೆ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಲಭಿಸಿತ್ತು.

2006: ಕನಕದಾಸರ ನೆಲೆವೀಡಾದ ಹಾವೇರಿ ಜಿಲ್ಲೆ ಕಾಗಿನೆಲೆಯ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಎರಡನೇ ಜಗದ್ಗುರುಗಳಾಗಿ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅಧಿಕಾರ ಸ್ವೀಕರಿಸಿದರು.

 2005: ಆಂಧ್ರಪ್ರದೇಶದ ನಲಗೊಂಡ ಜಿಲ್ಲೆಯಲ್ಲಿ ನಸುಕಿನ 4.40ರ ವೇಳೆಗೆ ಸಿಕಂದರಾಬಾದ್ ಡೆಲ್ಟಾ ಫಾಸ್ಟ್ ಪ್ಯಾಸೆಂಜರ್ ರೈಲಿನ ಬೋಗಿಗಳು ಪ್ರವಾಹದಿಂದ ಕೊಚ್ಚಿಹೋದ ಸೇತುವೆ ಮೇಲೆ ಹಳಿತಪ್ಪಿದವು. 150ಕ್ಕೂ ಹೆಚ್ಚು ಜನ ಮೃತರಾಗಿ 200ಕ್ಕೂ ಹೆಚ್ಚು ಜನ ಗಾಯಗೊಂಡರು.

2005: ದೆಹಲಿಯ ಪಹಾಡ್ ಗಂಜ್, ಸರೋಜಿನಿ ನಗರ ಮಾರುಕಟ್ಟೆ, ಗೋವಿಂದ ಪುರಿಯ ಬಸ್ಸುಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ 62 ಜನ ಮೃತರಾಗಿ ನೂರಾರು ಮಂದಿ ಗಾಯಗೊಂಡರು.

2005: ಇಪ್ಪತ್ಮೂರು ವರ್ಷಗಳ ಕಾನೂನು ಸಮರದ ಬಳಿಕ ಬೆಂಗಳೂರು ನಗರ ರೇಸ್ ಕೋರ್ಸ್ ರಸ್ತೆಯ ಸಂಖ್ಯೆ 3ರ ಪಕ್ಷದ ಕಚೇರಿ ಕಟ್ಟಡವನ್ನು ತೆರವುಗೊಳಿಸಿ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಬೆಂಗಳೂರಿನ ಸಿವಿಲ್ ನ್ಯಾಯಾಲಯ ಜನತಾದಳಕ್ಕೆ (ಎಸ್) ಆದೇಶ ನೀಡಿತು. ಈ ಕಟ್ಟಡದ ಮಾಲೀಕತ್ವ ಕೋರಿ ಕಾಂಗ್ರೆಸ್ 1982ರಲ್ಲಿ ಅರ್ಜಿ ಸಲ್ಲಿಸಿತ್ತು. ಅಂದಿನ ಜನತಾ ಪಕ್ಷವೂ ಇಂತಹುದೇ ಅರ್ಜಿ ಸಲ್ಲಿಸಿತ್ತು. ನಂತರ ಕಟ್ಟಡ ವಶಪಡಿಸಿಕೊಂಡ ಜನತಾದಳ (ಎಸ್) ಪ್ರತಿವಾದಿಯಾಗಿ ಸೇರಿಕೊಂಡು ಕಟ್ಟಡ ತನಗೆ ಸೇರಬೇಕು ಎಂದು ವಾದಿಸಿತ್ತು.

2005: ಮಂಗಳ ಗ್ರಹವು ಭೂಮಿಗೆ ಅತ್ಯಂತ ಸಮೀಪ ಬಂತು. ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು ಈ ವಿದ್ಯಮಾನವನ್ನು ಸೆರೆ ಹಿಡಿಯಿತು. 2018ರಲ್ಲಿ ಇನ್ನೊಮ್ಮೆ ಇಂತಹ ಘಟನೆ ಘಟಿಸಲಿದೆ.

2000: ಶಾರ್ಜಾದಲ್ಲಿ ನಡೆದ ಕೋಕಾ-ಕೋಲಾ ಪಂದ್ಯದಲ್ಲಿ ಭಾರತವು ಶ್ರೀಲಂಕೆಯ ಎದುರಲ್ಲಿ ಅತ್ಯಂತ ಹೀನಾಯ ಸೋಲು ಅನುಭವಿಸಿತು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅಂದರೆ 54 ರನ್ನುಗಳಿಗೆ ಅದು ಆಲ್ ಔಟ್ ಆಯಿತು. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಕೇವಲ 63 ರನ್ ಗಳಿಕೆಯೊಂದಿಗೆ ಭಾರತ ಸೋಲು ಅನುಭವಿಸಿತ್ತು.

1990: ಖ್ಯಾತ ಹಿಂದಿ ನಟ ವಿನೋದ ಮೆಹ್ರಾ ನಿಧನ.

1987: ಥಾಮಸ್ ಹೀಯರ್ನ್ಸ್ ಲಾಸ್ ಏಂಜೆಲಿಸ್ ನಲ್ಲಿ ಜಾಗತಿಕ ಮಿಡ್ಲ್ ವೇಯ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಇದರೊಂದಿಗೆ ನಾಲ್ಕು ಬೇರೆ ಬೇರೆ ವೇಯ್ಟ್ ಗಳಲ್ಲಿ ಜಾಗತಿಕ ಪ್ರಶಸ್ತಿಗಳನ್ನು ಗೆದ್ದ ಪ್ರಥಮ ಬಾಕ್ಸರ್ ಎಂಬ ಎಂಬ ಹೆಗ್ಗಳಿಕೆ ಅವರದಾಯಿತು.

1967: ತತ್ವಜ್ಞಾನಿ ಕುರ್ತಕೋಟಿ ಲಿಂಗನಗೌಡ ನಿಧನ.

1959: `ಆಸ್ಟೆರಿಕ್ಸ್' ಎಂಬ ಕಾಮಿಕ್ಸ್ ಕಥಾಸರಣಿ ಫ್ರೆಂಚ್ ಸಾಪ್ತಾಹಿಕ ಮ್ಯಾಗಜಿನ್ `ಪೈಲೊಟ್' ನಲ್ಲಿ ಜನಿಸಿತು. ಈವರೆಗೆ `ಆಸ್ಟೆರಿಕ್ಸ್' ನ 35 ಕಥೆಗಳು ಪ್ರಕಟವಾಗಿದ್ದು 40 ಭಾಷೆಗಳಿಗೆ ಅದು ಭಾಷಾಂತರಗೊಂಡಿದೆ. 22 ಕೋಟಿ ಪ್ರತಿಗಳು ಮಾರಾಟವಾಗಿವೆ.

1936: ಸಾಹಿತಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರು ನೈಲಾಡಿ ರಾಮಭಟ್ಟ- ಮೂಕಾಂಬಿಕೆ ದಂಪತಿಯ ಮಗನಾಗಿ ಶಿವಮೊಗ್ಗದಲ್ಲಿ ಜನಿಸಿದರು.

1931: ಸಾಹಿತಿ ಎಂ.ಜಿ. ಭೀಮರಾವ್ (ವಂಶಿ) ಜನನ.

1931: ಸಾಹಿತಿ ಆರ್.ಜಿ. ಕುಲಕರ್ಣಿ ಜನನ.

1929: ಅಮೆರಿಕದ ಸ್ಟಾಕ್ ಮಾರ್ಕೆಟ್ `ಕರಾಳ ಮಂಗಳವಾರ'ದ ದಿನ ಕುಸಿಯಿತು. 1.60 ಕೋಟಿ ಷೇರುಗಳ ಮಾರಾಟಗೊಂಡವು. ಇದರಿಂದಾಗಿ ಸ್ಟಾಕ್ ಮಾರ್ಕೆಟಿನಲ್ಲಿ ಬೆಲೆಗಳು ಸಂಪೂರ್ಣ ಕುಸಿದು ಬಿದ್ದವು. ಬ್ಯಾಂಕ್ ಸಾಲಗಳನ್ನು ಭರಿಸಲು ಸಾಧ್ಯವಾಗುವುದಿಲ್ಲ ಎಂಬದಾಗಿ ಹರಡಿದ ಊಹಾಪೋಹಗಳು ಸ್ಟಾಕ್ ಮಾರ್ಕೆಟಿನ ಈ ಭಾರೀ ಕುಸಿತಕ್ಕೆ ಕಾರಣವಾಗಿದ್ದವು. ಇದರಿಂದಾಗಿ ಭಾರೀ ಬೆಲೆ ಇಳಿಕೆ ಉಂಟಾಗಿ ಪಶ್ಚಿಮದ ಕೈಗಾರಿಕಾ ದೇಶಗಳಲ್ಲಿ 10 ವರ್ಷಗಳ ಕಾಲ ಆರ್ಥಿಕತೆ ಸ್ಥಗಿತಗೊಂಡಿತು.

1923: `ಟರ್ಕಿಶ್' ರಿಪಬ್ಲಿಕ್ ಜನಿಸಿತು. ಕೆಮಲ್ ಅಟಾಟರ್ಕ್ ಮೊದಲ ಅಧ್ಯಕ್ಷರಾದರು. ಅಂಕಾರಾ ಅದರ ರಾಜಧಾನಿಯಾಯಿತು.

1920: ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಮಹಮೂದ್ ಹಸನ್ ಅವರಿಂದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾಕ್ಕೆ ಅಡಿಗಲ್ಲು ಹಾಕಲಾಯಿತು.

1916: ಸಾಹಿತಿ ಚಂದ್ರಭಾಗಿ ಕೆ. ರೈ ಜನನ.

1907: ಸಾಹಿತಿ ಡಿ.ವಿ. ಶೇಷಗಿರಿ ರಾವ್ ಜನನ.

1903: ಇಪ್ಪತ್ತನೇ ಶತಮಾನದಲ್ಲಿ ಮಹಿಳೆಯರ ಉನ್ನತಿಗಾಗಿ ದುಡಿದ ಕಮಲಾದೇವಿ ಚಟ್ಟೋಪಾಧ್ಯಾಯ ನಿಧನರಾದರು.

1897: ಅಡಾಲ್ಫ್ ಹಿಟ್ಲರನ ಪ್ರಚಾರ ಸಚಿವ ಜೋಸೆಫ್ ಗೋಬೆಲ್ಸ್ (1897-1945) ಜನ್ಮದಿನ. ಜರ್ಮನ್ನರಲ್ಲಿ ಹಿಟ್ಲರನ ನಾಝಿ ಆಡಳಿತ ಬಗ್ಗೆ ಅನುಕಂಪ ಮೂಡುವಂತೆ ಮಾಡುವಲ್ಲಿ ಈತನ ಪ್ರಚಾರ ತಂತ್ರಗಳೇ ಪ್ರಮುಖ ಪಾತ್ರ ವಹಿಸಿದ್ದವು.

1863: ಹೆನ್ರಿ ಡ್ಯುನಾನ್ ಅವರು ಇಂಟರ್ ನ್ಯಾಷನಲ್ ರೆಡ್ ಕ್ರಾಸ್ ಸಂಸ್ಥೆಯನ್ನು ಸ್ಥಾಪಿಸಿದರು.  ಉತ್ತರ ಇಟಲಿಯ ಮಂಟುವಾ ಸಮೀಪ ಸೊಲ್ಫರಿನೋ ಕದನದಲ್ಲಿ ಗಾಯಗೊಂಡವರ ಪರಿಸ್ಥಿತಿಯನ್ನು ಕಂಡು ಮನಮಿಡಿದ ಹೆನ್ರಿ ಅವರ ನೆರವಿಗಾಗಿ ಈ ಸಂಸ್ಥೆ ಸ್ಥಾಪನೆಗೆ ಮುಂದಾದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Tuesday, October 28, 2008

ಇಂದಿನ ಇತಿಹಾಸ History Today ಅಕ್ಟೋಬರ್ 28

ಇಂದಿನ ಇತಿಹಾಸ

ಅಕ್ಟೋಬರ್ 28

ಕರ್ನಾಟಕದ ಕೈಗಾ ಅಣುವಿದ್ಯುತ್ ಸ್ಥಾವರದ ಎರಡನೇ ಘಟಕವು ಸತತ 436 ದಿನ ವಿದ್ಯುತ್ ಉತ್ಪಾದಿಸುವ ಮೂಲಕ ವಿಶ್ವದಾಖಲೆಗೆ ಅರ್ಹವಾಯಿತು. 
 
2007: ಕರ್ನಾಟಕದ ಕೈಗಾ ಅಣುವಿದ್ಯುತ್ ಸ್ಥಾವರದ ಎರಡನೇ ಘಟಕವು ಸತತ 436 ದಿನ ವಿದ್ಯುತ್ ಉತ್ಪಾದಿಸುವ ಮೂಲಕ ವಿಶ್ವದಾಖಲೆಗೆ ಅರ್ಹವಾಯಿತು. 2006ರ ಆಗಸ್ಟ್ 19ರಂದು ಆರಂಭವಾದ ಕೈಗಾದ ಎರಡನೇ ಘಟಕ ಒಂದೇ ಒಂದು ದಿನವೂ ಸಹ ವಿದ್ಯುತ್ ಉತ್ಪಾದನೆ ನಿಲ್ಲಿಸದೆಯೇ ಕಾರ್ಯ ನಿರ್ವಹಿಸುವ ಮೂಲಕ ಅಮೆರಿಕಾದ ಅಣುವಿದ್ಯುತ್ ಘಟಕ ಸ್ಥಾಪಿಸಿದ್ದ ಸತತ 406 ದಿನಗಳ ವಿದ್ಯುತ್ ಉತ್ಪಾದನೆಯ ದಾಖಲೆಯನ್ನು ಮುರಿಯಿತು. ದೇಶದಲ್ಲಿರುವ ಒಟ್ಟು 18 ಅಣುವಿದ್ಯುತ್ ಘಟಕಗಳಲ್ಲಿ ಈ ಘಟಕ ಮಾತ್ರ ಈ ಸಾಧನೆಗೆ ಅರ್ಹವಾಗಿದ್ದು, ವಿಶ್ವದಲ್ಲಿಯೇ ಈ ಸಾಧನೆ ಮಾಡಿದ ಮೊದಲ ಘಟಕ ಎಂಬ ಹೆಗ್ಗಳಿಕೆಯನ್ನೂ ಪಡೆಯಿತು.

2007: ವಿಶೇಷ ಆರ್ಥಿಕ ವಲಯಕ್ಕಾಗಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ನಂದಿಗ್ರಾಮದಲ್ಲಿ ನಡೆದ ಸಂಗ್ರಾಮ ಮತ್ತೊಮ್ಮೆ ಉಗ್ರ ಸ್ವರೂಪ ಪಡೆಯಿತು. ಈದಿನ ಇಲ್ಲಿ ಸಂಭವಿಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ ಸಿಪಿಎಂನ ನಾಲ್ವರು ಕಾರ್ಯಕರ್ತರು ಮೃತರಾಗಿ, ಐವರು ಗಾಯಗೊಂಡರು. ನಂದಿಗ್ರಾಮಕ್ಕೆ ಸಮೀಪದ ಖೆಜೂರಿ ಪೊಲೀಸ್ ಠಾಣೆ ವ್ಯಾಪ್ತಿಯ ಶೇರ್ಖನ್ ಚಕ್ ಎಂಬಲ್ಲಿ ಈ ದುರಂತ ಸಂಭವಿಸಿತು. ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ರೈತರ ತೀವ್ರ ವಿರೋಧದ ಮಧ್ಯೆ ವಿಶೇಷ ವಿತ್ತ ವಲಯಕ್ಕಾಗಿ ಬಲವಂತದಿಂದ ಭೂಮಿ ಸ್ವಾಧೀನ ಪಡೆಯಲು ಸರ್ಕಾರ ಮುಂದಾದುದರ ವಿರುದ್ಧ ಹೋರಾಟದ ನೇತೃತ್ವ ವಹಿಸಿದ ಭೂಮಿ ಉಚೇಡ್ ಪ್ರತಿರೋಧ ಕಮಿಟಿ (ಬಿಯುಪಿಸಿ)ಯು ಹಿಂದಿನ ದಿನ ನಡೆದ ಘರ್ಷಣೆಯನ್ನು ಖಂಡಿಸಿ ನೀಡಿದ್ದ 12 ಗಂಟೆಗಳ ಬಂದ್ ಸಂದರ್ಭದಲ್ಲಿ ಈ ಘಟನೆ ನಡೆಯಿತು.

2007: ಭಾರತದ ಮೊದಲ 500 ಮೆಗಾ ವಾಟ್ ಸಾಮರ್ಥ್ಯದ ಅಣು ಸ್ಥಾವರದ (ಫಾಸ್ಟ್ ಬ್ರೀಡರ್ ರಿಯಾಕ್ಟರ್) ನಿರ್ಮಾಣ ನಿರ್ಣಾಯಕ ಹಂತ ತಲುಪಿದ್ದು, ಸುಮಾರು 165 ಟನ್ ಭಾರದ ಸುರಕ್ಷಾ ಕವಾಟವನ್ನು ಅಳವಡಿಸಲು ಸಿದ್ಧತೆಗಳು ನಡೆದವು. ಸುಮಾರು ರೂ.3,492 ಕೋಟಿ ವೆಚ್ಚದಲ್ಲಿ ತಮಿಳುನಾಡಿನ ಕಲ್ಪಾಕಮ್ಮಿನಲ್ಲಿ ನಿರ್ಮಿಸಲಾಗುತ್ತಿರುವ ಈ ಪ್ರಾಯೋಗಿಕ ಅಣು ವಿದ್ಯುತ್ ಸ್ಥಾವರ ಹಲವಾರು ದಾಖಲೆಗಳನ್ನು ಹೊಂದಿದೆ. ಈಗ ಇದಕ್ಕೆ ಅಳವಡಿಸಲಾದ ಸುರಕ್ಷಾ ಕವಾಟ ಕೂಡ ಇದೇ ಮೊದಲನೆಯದು ಎನ್ನಲಾಗಿದೆ. ಅಣು ಸ್ಥಾವರ 2010ರ ವೇಳೆಗೆ ವಿದ್ಯುತ್ ಉತ್ಪಾದನೆ ಪ್ರಾರಂಭಿಸಲಿದ್ದು, 2020ರ ವೇಳೆಗೆ ಇಂತಹ ಇನ್ನೂ ನಾಲ್ಕು ಸ್ಥಾವರಗಳು ಕಾರ್ಯಾರಂಭ ಮಾಡುವುವು.

2007: ಆಫ್ಘಾನಿಸ್ಥಾನದಲ್ಲಿ ಉಗ್ರಗಾಮಿಗಳ ಹಠಾತ್ ದಾಳಿಗೆ ಪ್ರತಿಯಾಗಿ ಅಮೆರಿಕ ನೇತೃತ್ವದ ಸೇನೆ ಮತ್ತು ಆಫ್ಘನ್ ಸೇನೆ ಜಂಟಿಯಾಗಿ ಆರು ಗಂಟೆಗಳ ಕಾಲ ಹೋರಾಟ ನಡೆಸಿ, ಸುಮಾರು 80 ಮಂದಿ ತಾಲಿಬಾನ್ ಉಗ್ರರನ್ನು ಕೊಂದವು ಎಂದು ಅಮೆರಿಕ ಸೇನೆ ಪ್ರಕಟಿಸಿತು. ಹೆಲ್ಮಾಂಡ್ ಪ್ರಾಂತ್ಯದ ಸೇನಾ ಶಿಬಿರದ ಮೇಲೆ ತಾಲಿಬಾನ್ ಉಗ್ರರು ಸ್ವಯಂಚಾಲಿತ ಕೋವಿ ಮತ್ತು ರಾಕೆಟ್ ಇರುವ ಗ್ರೆನೇಡುಗಳಿಂದ ದಾಳಿ ನಡೆಸಿದರು. ತತ್ ಕ್ಷಣ ಇದಕ್ಕೆ ಪ್ರತಿಯಾಗಿ ಸೇನೆ ದಾಳಿ ನಡೆಸಿತು. ಸೆಪ್ಟೆಂಬರ್ 1ರಿಂದ ಇಲ್ಲಿ ನಡೆದ ದಾಳಿಗಳಲ್ಲಿ ಸುಮಾರು 250 ತಾಲಿಬಾನ್ ಉಗ್ರರನ್ನು ಕೊಲ್ಲಲಾಯಿತು.

2007: ಕರ್ನಾಟಕದಲ್ಲಿ ಮರುಮೈತ್ರಿಗೆ ಮುಂದಾದ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಮತ್ತೊಮ್ಮೆ ಸರ್ಕಾರ ರಚನೆಗೆ ಅವಕಾಶ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತ್ವತ್ವದಲ್ಲಿ ಕಾಂಗ್ರೆಸ್ ನಾಯಕರ ದಂಡೊಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಆಗ್ರಹಿಸಿತು. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಚ್. ಕೆ. ಪಾಟೀಲ್ ಜೊತೆಗಿದ್ದರು.

 2007: ಸಿಟ್ಟಿನ ಭರದಲ್ಲಿ ಹೆಂಡತಿಗೆ ಗಂಡ ಮೂರು ಬಾರಿ ತಲಾಖ್ ಹೇಳಿದರೆ ಅಥವಾ ನಿಗದಿತ ಅವಧಿಯೊಳಗೆ ಆಕೆಗೆ ಅದನ್ನು ತಿಳಿಸದೇ ಹೋದರೆ ಅಂಥ `ತಲಾಖ್' ಗೆ ಮಾನ್ಯತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ತೀವ್ರ ಕೋಪದಿಂದ ಸ್ವಯಂ ನಿಯಂತ್ರಣ ಕಳೆದುಕೊಂಡ ಪತಿ, `ತಲಾಖ್, ತಲಾಖ್, ತಲಾಖ್' ಎಂದು ಹೇಳಿದರೆ ಅದನ್ನು ಒಪ್ಪಲಾಗದು. ಅಷ್ಟೇ ಅಲ್ಲದೆ ಪತ್ನಿಯ ಅನುಪಸ್ಥಿತಿಯಲ್ಲಿ ಕೊಟ್ಟ ತಲಾಖ್ ಪತ್ನಿಗೆ ತಿಳಿಸದ್ದಿದರೆ ಅದು ಸಹ ಕ್ರಮಬದ್ಧವಾಗದು ಎಂದು ನ್ಯಾಯಮೂರ್ತಿ ಬಿ.ಡಿ.ಅಹ್ಮದ್ ಹೇಳಿದರು. ಆಯೇಷಾ ಅಂಜುಂ ಅವರು ತಮ್ಮಿಂದ ದೂರವಾದ ಪತಿ ಮಸೂರ್ ಅಹ್ಮದ್ ವಿರುದ್ಧ ಮಾಡಿರುವ ಅತ್ಯಾಚಾರದ ಆರೋಪವನ್ನೂ ತಿರಸ್ಕರಿಸಿದ ನ್ಯಾಯಾಲಯ, 2005ರ ಅಕ್ಟೋಬರಿನಲ್ಲಿ ಸಾರಲಾದ ತಲಾಖ್ ಕ್ರಮಬದ್ಧವಲ್ಲ, ಆದ್ದರಿಂದ ಅತ್ಯಾಚಾರದ ಆರೋಪ ಮಾಡಿದ ಸಂದರ್ಭದಲ್ಲಿಯೂ ೂ ಅವರು ಪತಿ-ಪತ್ನಿಯಾಗಿಯೇ ಇದ್ದರು ಎಂದು ಹೇಳಿತು. ತಲಾಖ್ ಕ್ರಮಬದ್ಧವಲ್ಲದ ಕಾರಣ ಕಾನೂನುಬದ್ಧವಾಗಿ ಮದುವೆಯಾದ ಪತ್ನಿಯೊಂದಿಗೆ ಪತಿ ಹೊಂದುವ ದೈಹಿಕ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿತು. 'ಅಕ್ಟೋಬರ್ 2005 ರಂದು ನನಗೆ ತಲಾಖ್ ನೀಡಿದ್ದರೂ ಮಸೂರ್ ಅಹ್ಮದ್ 2006ರ ಏಪ್ರಿಲ್ 13 ರಿಂದ 19ರವರೆಗೆ ತವರು ಮನೆಯಲ್ಲಿದ್ದ ನನ್ನ ಮೇಲೆ ಅತ್ಯಾಚಾರವೆಸಗಿದ' ಎಂಬುದು ಆಯೆಷಾ ಅಂಜುಂ ನೀಡಿದ ದೂರಿನ ಸಾರಾಂಶವಾಗಿತ್ತು. 

2006: ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಹಸನ್ ತೀವ್ರ ಅನಾರೋಗ್ಯಕ್ಕೆ ಈಡಾಗಿ ಅಧಿಕಾರ ಸ್ವೀಕರಿಸಲು ಅಶಕ್ತರಾಗಿದ್ದಾರೆ ಎಂಬ ಕಾರಣ ನೀಡಿ ರಾಷ್ಟ್ರಪತಿ ಇಯಾಜ್ದುದೀನ್ ಅಹ್ಮದ್ ಅವರು ಹಂಗಾಮಿ ಮುಖ್ಯಸ್ಥರ ಪ್ರಮಾಣವಚನ ಸಮಾರಂಭವನ್ನು ಮುಂದೂಡಿದರು.

2006: ಭಾರತದಲ್ಲಿ ಹೊಸದಾಗಿ ಜಾರಿಯಾಗಿರುವ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಅನ್ವಯ ತಿರುನಲ್ವೇಲಿ ಸಮೀಪದ ಮೆಲಪಾಳ್ಯಂನಲ್ಲಿ ಸರ್ಕಾರಿ ನೌಕರ ಜೋಸೆಫ್ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸಿದರು. ಈ ಕಾಯ್ದೆಯ ಅಡಿಯಲ್ಲಿ ಬಂಧಿತನಾದ ಮೊತ್ತ ಮೊದಲ ವ್ಯಕ್ತಿ ಈತ. ಅಕ್ಟೋಬರ್ 25ರಂದು ತನ್ನ ಪತ್ನಿ ಬೆನೆಡಿಕ್ಟ್ ಮೇರಿಯನ್ನು ಈತ ಛತ್ರಿಯ ಮೊನೆಯಿಂದ ತಿವಿದು ಹಿಂಸಿಸಿದ್ದ. ಕತ್ತು ಹಾಗೂ ಮೂಗಿಗೆ ಗಾಯಗಳಾಗಿ ರಕ್ತ ಸೋರುತ್ತ್ದಿದ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

2005: ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಕ್ಷೇತ್ರದಲ್ಲಿ ಮಾಡಿದ ಜೀವಮಾನದ ಸಾಧನೆಗಾಗಿ ಕರ್ನಾಟಕದ ಖ್ಯಾತ ಗಾಯಕಿ ಗಂಗೂಬಾಯಿ ಹಾನಗಲ್ ಅವರು 2005ನೇ ಸಾಲಿನ ಆದಿತ್ಯ ವಿಕ್ರಮ್ ಬಿರ್ಲಾ ಕಲಾ ಪುರಸ್ಕಾರಕ್ಕೆ ಆಯ್ಕೆಯಾದರು. ಈ ಪ್ರಶಸ್ತಿಯ ಮೊತ್ತ 1.50 ಲಕ್ಷ ರೂಪಾಯಿಗಳು.

1997: ಮೈಸೂರು ಸಂಪ್ರದಾಯದ ಸಂಗೀತ ಸುಧೆಯನ್ನು ಹರಡಿ ಕರ್ನಾಟಕದಲ್ಲಿ ಮನೆ ಮಾತಾಗಿದ್ದ ವೈಣಿಕ ಡಾ. ವಿ. ದೊರೆಸ್ವಾಮಿ ಅಯ್ಯಂಗಾರ್ (77) ಬೆಂಗಳೂರಿನಲ್ಲಿ ನಿಧನರಾದರು.

1965: ಅಮೆರಿಕದ ಮಿಸ್ಸೌರಿಯ ಸೈಂಟ್ ಲೂಯಿಯಲ್ಲಿ ಜಗತ್ತಿನ ಅತ್ಯಂತ ಎತ್ತರದ ಸ್ಮಾರಕ ಸ್ಟೆಯಿನ್ ಲೆಸ್ ಸ್ಟೀಲಿನ `ಗೇಟ್ ವೇ ಟು ದಿ ವೆಸ್ಟ್' (ಜೆಫರ್ಸನ್ ನ್ಯಾಷನಲ್ ಎಕ್ಸ್ ಪಾನ್ಶನ್ ಮೆಮೋರಿಯಲ್) ನಿರ್ಮಾಣ ಕಾರ್ಯ ಪೂರ್ಣಗೊಂಡಿತು. 1803ರಲ್ಲಿ ಲೂಸಿಯಾನಾ ಖರೀದಿಯ ಬಳಿಕ ಪಶ್ಚಿಮದೆಡೆಗಿನ ವಿಸ್ತರಣೆಯ ನೆನಪಿಗಾಗಿ ಇದನ್ನು ನಿರ್ಮಿಸಲಾಯಿತು. ಫಿನ್ನಿಶ್- ಅಮೆರಿಕನ್ ಶಿಲ್ಪಿ ಎರೋ ಸಾರಿನೆನ್ ಅವರ ವಿನ್ಯಾಸ ಮಾಡಿದ ಈ ಸ್ಮಾರಕ 630 ಅಡಿಗಳಷ್ಟು ವಿಸ್ತಾರ ಹಾಗೂ ಅಷ್ಟೇ ಎತ್ತರವಾಗಿದೆ.

1955: ಅಮೆರಿಕದ ಕಂಪ್ಯೂಟರ್ ತಜ್ಞ, ಉದ್ಯಮಿ ಮೂರನೆಯ ವಿಲಿಯಂ ಹೆನ್ರಿ `ಬಿಲ್' ಗೇಟ್ಸ್ ಜನ್ಮದಿನ. ಜಗತ್ತಿನ ಪ್ರಪ್ರಥಮ ಪರ್ಸನಲ್ ಕಂಪ್ಯೂಟರ್ ಸಾಫ್ಟ್ ವೇರ್ ಕಂಪೆನಿ `ಮೈಕ್ರೋಸಾಫ್ಟ'ನ್ನು ಸ್ಥಾಪಿಸಿದ ಇವರು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

1935: ಕನ್ನಡ ಸಾಹಿತಿ ಬೆಂಗಳೂರು ಜಿಲ್ಲೆ ದೇವನಹಳ್ಳಿಯ ಕಮಲಾ ಹಂಪನಾ ಹುಟ್ಟಿದ ದಿನ. `ಅತ್ತಿಮಬ್ಬೆ' ಪ್ರಶಸ್ತಿ ವಿಜೇತರಾದ ವಿವರು `ನಕ್ಕಿತು ಹಾಲಿನ ಬಟ್ಟಲು', `ಬಿಂದಲಿ', `ಬುಗುಡಿ' ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

1933: ಸಾಹಿತಿ ಕೆ. ಶಾಂತಾ ಜನನ.

1926: ಸಾಹಿತಿ ವೈ.ಎಂ.ಎನ್. ಮೂರ್ತಿ ಜನನ.

1898: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಊಧಮ್ ಸಿಂಗ್ (1898-1940) ಜನ್ಮದಿನ. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ರೂವಾರಿ ಮೈಕೆಲ್ ಒ' ಡೈಯರನನ್ನು ಕೊಲೆಗೈದುದಕ್ಕಾಗಿ 1940ರಲ್ಲಿ ಊಧಮ್ಸಿಂಗ್ ಅವರನ್ನು ಲಂಡನ್ನಿನಲ್ಲಿ ಗಲ್ಲಿಗೇರಿಸಲಾಯಿತು.

1886: ಸ್ವಾತಂತ್ರ್ಯ ಘೋಷಣೆಯ ಶತಮಾನೋತ್ಸವ ಸಂದರ್ಭದಲ್ಲಿ ಫ್ರಾನ್ಸ್ ನೀಡಿದ ಕೊಡುಗೆಯಾದ `ಸ್ಟಾಚ್ಯೂ ಆಫ್ ಲಿಬರ್ಟಿಯನ್ನು ಅಧ್ಯಕ್ಷ ಗ್ರೋವರ್ ಕ್ಲೆವ್ ಲ್ಯಾಂಡ್ ಅನಾವರಣ ಮಾಡಿದರು. 

1881: ಕನ್ನಡ ಸಾಹಿತಿ ಧಾರವಾಡದ ಉತ್ತಂಗಿ ಚನ್ನಪ್ಪ (28/10/1881-8/5/1971) ಜನ್ಮದಿನ. `ಹಿಂದೂ ಸಮಾಜದ ಹಿತಚಿಂತಕ', `ಮಕ್ಕಳ ಶಿಕ್ಷಣಪಟ' ಇತ್ಯಾದಿ ಕೃತಿಗಳನ್ನು ರಚಿಸಿದ ಇವರು 1949ರಲ್ಲಿ 32ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

1867: ಸ್ವಾಮಿ ವಿವೇಕಾನಂದರ ಶಿಷ್ಯೆ ಸಿಸ್ಟರ್ ನಿವೇದಿತಾ (1867-1911) ಜನ್ಮದಿನ. ಇಂಗ್ಲೆಂಡಿನಲ್ಲಿ ಹುಟ್ಟಿದ ಮಾರ್ಗರೆಟ್ ಎಲಿಜಬೆತ್ ನೊಬಲ್ ಅವರು ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾಗಿ ಅವರ ಶಿಷ್ಯೆಯಾಗಿ ಸಿಸ್ಟರ್ ನಿವೇದಿತಾ ಎಂಬುದಾಗಿ ಹೆಸರು ಇಟ್ಟುಕೊಂಡದ್ದಷ್ಟೇ ಅಲ್ಲ, ತಮ್ಮ ಸಾಮಾಜಿಕ, ರಾಜಕೀಯ ಸುಧಾರಣಾ ಕಾರ್ಯಗಳಿಗೆ ಭಾರತವನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು

1636: ಮೆಸಾಚ್ಯುಸೆಟ್ಸಿನ ಕೇಂಬ್ರಿಜಿನಲ್ಲಿ ಹಾರ್ವರ್ಡ್ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲಾಯಿತು. ಇಂಗ್ಲಿಷ್ ಸಂಜಾತ ಪ್ಯುರಿಟನ್ ಸಚಿವ ಜಾನ್ ಹಾರ್ವರ್ಡ್ ಅವರ ಗೌರವಾರ್ಥ ಅದಕ್ಕೆ ಹಾರ್ವರ್ಡ್ ವಿಶ್ವ ವಿದ್ಯಾಲಯ ಎಂಬ ಹೆಸರು ಇಡಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Monday, October 27, 2008

ಬಾ ಬೆಳಗು ಬಾ ಹಣತೆಯನು Happy Deepavali

Happy Deepavali


'PARYAYA' wishes health, wealth, peaceful and prosperous life to all during the occasion of Deepavali. Let the Festival of Lights kindle noble thinking of living and helping others, protection of nature, environment, water and trees and letting others including animals like cows and birds live peacefully on this earth.


ಬಾ ಬೆಳಗು ಬಾ ಹಣತೆಯನು


हॆ दीवाली,

मन कॆ आंगन मॆ जॊत जलादॆ ।

अंग अंग मॆ रंग भर दॆ ॥

इस मिट्टी पॆ फूल खिलादॆ ।

दिवाली कॆ इस शुभ अवसर पर हमारॆ समस्त परिजनॊं कॆ और सॆ हार्दिक शुभ कामनायॆं ।


ಕಾಲಕಾಲಕೂ ಬೆಂದ ಭೂಮಿಗಿದೆ

ಮಳೆಯ ಬೆಳೆಯ ಸಿರಿನೋಟ;

ವರ್ಷವರ್ಷಕೂ ನೊಂದ ಜೀವಕಿದೆ

ಹಬ್ಬದಿಬ್ಬಣದ ಕೂಟ


ಈ ಬದುಕೆಂಬ ಸಂತೆಯ ವ್ಯಾಪಾರದಲ್ಲಿ ಒಮ್ಮೆ ಏಕತಾನತೆ ಕಟ್ಟಿ ಕಾಡಿದರೆ, ಇನ್ನೊಮ್ಮೆ ದುಃಖ ದುಮ್ಮಾನಗಳು ನೋಯಿಸುತ್ತವೆ, ಮತ್ತೊಮ್ಮೆ ನಷ್ಟ ಸೋಲುಗಳು ಕುಗ್ಗಿ ಕುಸಿಯುವಂತೆ ಮಾಡುತ್ತವೆ. ಕುಸಿದ ಕಾಲುಗಳ ಎತ್ತಲೇಬೇಕು. ಬದುಕಬಂಡಿ ಸಾಗಿಸಲು ಬಾಳಿಗಷ್ಟು ಭರವಸೆ ಇದೆ ಎಂದು ಉತ್ಸಾಹ ಹರಿಸಿ, ಸೋತ ಕಾಲುಗಳಿಗಷ್ಟು ಚೈತನ್ಯ ನೀಡುವ ಸಂಭ್ರಮದ ಗಳಿಗೆಗಳ ಪುನರುಚ್ಚರಣ ಮಂತ್ರವೇ ಮರಳಿ ಮರಳಿ ಬರುವ ಹಬ್ಬಗಳು, ನಮ್ಮ ಸಂಸ್ಕೃತಿಯೆಂಬ ಚಂದದ ಗುಡಿಯ ನಿನಾದಗಳು, ಬದುಕ ಬಾಗಿಲ ಹಸಿರಾಗಿಸುವ ತೋರಣಗಳು, ನಗು ತುಂಬುವ ಹೂರಣಗಳು.


ಅಸುರ ಪ್ರವೃತ್ತಿಯ ಮೇಲೆ ಸುರರ ವಿಜಯದ ಪೌರಾಣಿಕ ಐತಿಹ್ಯ, ಅಂತಃಶುದ್ಧಿಯಾಗುವ ಧಾರ್ಮಿಕ ಆಚರಣೆ, ನಮ್ಮನ್ನು ಅನ್ನ-ನೀರು ಕೊಟ್ಟು ಕಾಪಾಡುವ ಗಂಗೆ-ಬೆಳೆ-ದವಸ-ಧಾನ್ಯದ ಪೈರುಗಳನ್ನು ಆರಾಧಿಸುವ ಸಾತ್ವಿಕ ತತ್ತ್ವ, ಕಾಮಧೇನುವಾಗಿ ಅಮೃತವುಣಿಸಿ ನಮ್ಮ ಪುಷ್ಟಿಯಾಗಿಸುವ ಗೋಮಾತೆಯನ್ನು ಪೂಜಿಸುವ ಕೃತಜ್ಞತಾ ಭಾವ, ಎಲ್ಲಕ್ಕಿಂತ ಮಿಗಿಲಾಗಿ ನಮ್ಮಂತರಂಗದ ತಮೋ ಗುಣಗಳ ಅಳಿಸಿ, ಮನೆಮಂದಿಗಳಿಂದಲೂ, ಮನಮನಗಳಿಂದಲೂ ಪ್ರೇಮದ ಅರಿವಿನ ಹೊಂಬೆಳಕು ಹರಿಹರಿದು ಸುತ್ತಲ ವಾತಾವರಣವನ್ನು ಸ್ನೇಹಮಯವಾಗಿಸಲಿ ಎಂಬ ಆಂತರ್ಯದ ಸಂದೇಶ ತೊಟ್ಟ...


ದೀಪಾವಳೀ...

ಬಾ ಬೆಳಗು ಬಾ ಹಣತೆಯನು

ನಮ್ಮೆದೆಯ ಗುಡಿಯಲ್ಲಿ

ಈ ದಿವ್ಯ ಶುಭಗಳಿಗೆಯಲ್ಲಿ

ಎದೆಯ ಕಸವನು ಗುಡಿಸಿ

ರಂಗವಲ್ಲಿಯನಿರಿಸಿ

ಸಿಂಗರಿಸು ನಮ್ಮೆದೆಯ ನಿನ್ನ ಪ್ರೇಮದ ಅಮೃತ

ಸಂಪತ್ತಿನಲ್ಲಿ

ಬಾ ಕಾರ್ತೀಕವೇ ಬಾ, ನಕ್ಷತ್ರದ ನಲಿವಿನ

ಗರಿಗೆದರುತ ಕತ್ತಲ ಕಾಡಿನಲಿ

ಸಾವಿರ ಬೆಳಕಿನ ಹೂವುಗಳರಳಲಿ

ಕೊಂಬೆ ಕೊಂಬೆಗಳ ಮೌನದಲಿ

ಇಂದಿನ ಇತಿಹಾಸ History Today ಅಕ್ಟೋಬರ್ 27

ಇಂದಿನ ಇತಿಹಾಸ

ಅಕ್ಟೋಬರ್ 27

ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ಒಪ್ಪಂದಕ್ಕೆ ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು ಸಹಿ ಹಾಕಿದರು. ಪಾಕಿಸ್ಥಾನಿ ದಾಳಿಗಳ ವಿರುದ್ಧ ನೆರವು ನೀಡುವಂತೆ ಮನವಿ ಮಾಡಿದ ಅವರು ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ಕೊಡುಗೆಯನ್ನು ಮುಂದಿಟ್ಟರು. ಭಾರತ ಸರ್ಕಾರ ಮಹಾರಾಜ ಹರಿಸಿಂಗ್ ಅವರ ಈ ಕೊಡುಗೆಯನ್ನು ಅಂಗೀಕರಿಸಿ ಕಾಶ್ಮೀರಕ್ಕೆ ತನ್ನ ಸೇನೆಯನ್ನು ಕಳುಹಿಸಿತು.

2007: ಅತ್ಯಂತ ನಾಟಕೀಯ ಬೆಳವಣಿಗೆಯಲ್ಲಿ ಮತ್ತೆ ಕೈಜೋಡಿಸಿದ ಬಿಜೆಪಿ ಮತ್ತು ಜನತಾದಳ (ಎಸ್) ಜಂಟಿಯಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಅವಕಾಶ ಕೋರುವ ಪತ್ರಗಳನ್ನು ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ಸಲ್ಲಿಸಿದವು. ಸಂವಿಧಾನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಇದಕ್ಕೆ ರಾಜ್ಯಪಾಲರು ಪ್ರತಿಕ್ರಿಯೆ ನೀಡಿದರು. ಇದರಿಂದಾಗಿ ಕಾಂಗ್ರೆಸ್ ಜೊತೆಗೆ ಸಖ್ಯ ಬೆಳೆಸುವ ಯತ್ನದಲ್ಲಿ ಜನತಾದಳದಲ್ಲಿ ಪರ್ಯಾಯ ನಾಯಕರಾಗಲು ಹೊರಟಿದ್ದ ಎಂ.ಪಿ.ಪ್ರಕಾಶ್ ಅವರ ಆಸೆಗೆ ಆರಂಭದಲ್ಲೇ ವಿಘ್ನ ಉಂಟಾಯಿತು.

 2007: ಮಾಜಿ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜ್ಯೋತಿಷಿಗಳ ಸಲಹೆ ಮೇರೆಗೆ ತಮ್ಮ ಹೆಸರನ್ನು 'ಬಿ.ಎಸ್. ಯಡ್ಯೂರಪ್ಪ' ಎಂಬುದಾಗಿ ಬದಲಾಯಿಸಿಕೊಂಡರು. ಅಕ್ಟೋಬರ್ 11ರಂದೇ ಪ್ರಮಾಣಪತ್ರ ಸಲ್ಲಿಸಿ ಈ ಬದಲಾವಣೆ ಮಾಡಲಾಗಿದೆ ಎಂದು ಅವರ ಪತ್ರಿಕಾ ಪ್ರಕಟಣೆ ತಿಳಿಸಿತು. ಕೆಲವೇ ದಿನಗಳಲ್ಲಿ ಇನ್ನೊಂದು ಪ್ರಕಟಣೆ ನೀಡಿದ ಅವರು ಇಂಗ್ಲಿಷಿನಲ್ಲಿ ಮಾತ್ರ 'ಯಡಿಯೂರಪ್ಪ' ಬದಲಿಗೆ 'ಯಡ್ಯೂರಪ್ಪ' ಎಂದು ಬದಲಿಸಲಾಗಿದ್ದು, ಕನ್ನಡದಲ್ಲಿ ಉಚ್ಚಾರಣೆ ಹಿಂದಿನಂತೆಯೇ ಇರುತ್ತದೆ ಎಂದು ಸ್ಷಷ್ಟ ಪಡಿಸಿದರು.

2007: ಜಾರ್ಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ, ಸಂಸದ ಬಾಬುಲಾಲ್ ಮರಾಂಡಿ ಅವರ ಪುತ್ರ ಪುತ್ರ ಅನೂಪ್  ಸೇರಿದಂತೆ 18 ಜನರನ್ನು ಬಿಹಾರ ಗಡಿಗೆ ಹೊಂದಿಕೊಂಡಿರುವ ಗಿರಿದಿಹ್ ಜಿಲ್ಲೆಯ ಚಿಲ್ಖಾಡಿಯಾ ಗ್ರಾಮದಲ್ಲಿ ಮಾವೋವಾದಿ ಉಗ್ರರು ಹತ್ಯೆ ಮಾಡಿದರು. ರಾತ್ರಿ 1 ಗಂಟೆಗೆ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದಾಗ ದಾಳಿ ನಡೆಸಿದ 25ರಿಂದ 30 ಜನ ಮಾವೋವಾದಿ ಉಗ್ರರು ಗುಂಡಿನ ಮಳೆಗರೆಯುವುದರೊಂದಿಗೆ ಬಾಂಬ್ಗಳನ್ನು ಸಿಡಿಸಿದರು. ಘಟನಾ ಸ್ಥಳದಲ್ಲಿ 14 ಜನರು ಸಾವಿಗೀಡಾದರು. ನಂತರ ತೀವ್ರವಾಗಿ ಗಾಯಗೊಂಡಿದ್ದ ನಾಲ್ವರು ಮೃತರಾದರು.

2007: ಉತ್ತರ ಚೀನಾದ ಕೆಲವು ಭಾಗಗಳಲ್ಲಿ ನಶಿಸಿವೆ ಎಂದು ನಂಬಲಾಗಿದ್ದ ಅಪಾಯಕಾರಿ ಹುಲಿಗಳು ಇನ್ನೂ ಅಸ್ತಿತ್ವದಲ್ಲಿ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಹುಲಿ ಬೇಟೆಯನ್ನು ನಿಷೇಧಿಸಲಾಯಿತು. ಈ ಪ್ರದೇಶದಲ್ಲಿ ಕಂಡು ಬಂದ ಹುಲಿಗಳು ನಶಿಸಿಹೋಗುತ್ತಿರುವ ಪ್ರಾಣಿ ಸಂಕುಲಕ್ಕೆ ಸೇರಿವೆ ಎಂದು ತಜ್ಞರು ದೃಢಪಡಿಸಿದ್ದಾರೆ. ಈ ಪ್ರಾಂತ್ಯದಲ್ಲಿ 1950ರಲ್ಲಿ ಇಂತಹ 4000 ಹುಲಿಗಳು ಇದ್ದವು.

2007: 'ಕರ್ನಾಟಕ ರಾಜ್ಯದಲ್ಲಿ ಗೋ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಎಲ್ಲಾ ಸ್ವಯಂ ಸೇವಾ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ದುಂಡು ಮೇಜಿನ ಸಭೆಯೊಂದನ್ನು ನಡೆಸುವ ಮೂಲಕ, ಗೋ ಸಂರಕ್ಷಣೆ ಕುರಿತ ಕೆಲ ನಿರ್ಣಯಗಳನ್ನು ಕೈಗೊಳ್ಳುವ ಅಗತ್ಯವಿದೆ' ಎಂದು ಸಂಸತ್ ಸದಸ್ಯ ಅನಂತಕುಮಾರ್ ಬೆಂಗಳೂರಿನಲ್ಲಿ ಅಭಿಪ್ರಾಯ ಪಟ್ಟರು. ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಗಿರಿನಗರದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಗೋತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಮಹತ್ವ ಸಾರುವ `ಗೋಸಂಧ್ಯಾ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಗೋ ಸಂಪತ್ತಿನಿಂದ ಪರಿಸರಕ್ಕೆ ಆಗುವ ಅನುಕೂಲ, ಗ್ರಾಮೀಣ ಪ್ರದೇಶದ ಆರ್ಥಿಕತೆ ಹಾಗೂ ಗೋ ಸಂಪತ್ತಿಗೆ ಇರುವ ಸಂಬಂಧವನ್ನು ಗಮನದಲ್ಲಿ ಇಟ್ಟುಕೊಂಡು ಸಭೆಯಲ್ಲಿ ಚರ್ಚೆ ನಡೆಯಬೇಕು. ಆ ಮೂಲಕ ರಾಷ್ಟ್ರೀಯ ಗೋ ನೀತಿ ಜಾರಿಗೆ ತರುವ ಅವಶ್ಯಕತೆ ಇದೆ' ಎಂದು ಅವರು ಪ್ರತಿಪಾದಿಸಿದರು. ರಾಜ್ಯದಲ್ಲಿ 300ರಷ್ಟಿದ್ದ ಕಸಾಯಿಖಾನೆಗಳು ಇದೀಗ 36 ಸಾವಿರಕ್ಕೆ ಏರಿದೆ. ಇದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಅಲ್ಲದೆ ಮನೆಗೊಂದು ಮರದಂತೆ ಮನೆಗೊಂದು ದೇಶಿ ತಳಿಯ ಗೋವು ಸಾಕುವ ಸಂಕಲ್ಪವನ್ನು ತೊಡಬೇಕು' ಎಂದು ಅವರು ಆಗ್ರಹಿಸಿದರು. ಹಿರಿಯ ರಂಗ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಮಾತನಾಡಿ, ನವಿಲನ್ನು ಕೊಂದವರಿಗೆ ಶಿಕ್ಷೆ ನೀಡುವ ಕಾನೂನು ನಮ್ಮ ದೇಶದಲ್ಲಿದೆ. ಆದರೆ ಗೋವನ್ನು ಕೊಂದು ತಿನ್ನುವವರಿಗೆ ಯಾವ ಶಿಕ್ಷೆಯಿಲ್ಲ. ಗೋವನ್ನು ತಿನ್ನುವುದು ನಮ್ಮ ಸಂಸ್ಕೃತಿಯೇ?' ಎಂದು ಪ್ರಶ್ನಿಸಿದರು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಶ್ವಭಾರತಿ ಗೃಹನಿರ್ಮಾಣ ಸಂಘದ ಅಧ್ಯಕ್ಷ ಬಿ.ಕೃಷ್ಣ ಭಟ್, ಬಿಜೆಪಿ ನಗರ ಉಪಾಧ್ಯಕ್ಷ ರವಿ ಸುಬ್ರಹ್ಮಣ್ಯ, ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಹಾಜರಿದ್ದರು.

2006: ರಜಪೂತ ವಂಶಜ ಮಹಾರಾಜ ಎರಡನೆಯ ಗಜಸಿಂಗ್ ಅವರಿಗೆ ನ್ಯೂಯಾರ್ಕಿನಲ್ಲಿ ಈ ಸಾಲಿನ ಅಮೆರಿಕದ ಪ್ರತಿಷ್ಠಿತ ಹಾಡ್ರಿಯನ್ ಪ್ರಶಸ್ತಿಯನ್ನು ನೀಡಿ  ಸನ್ಮಾನಿಸಲಾಯಿತು. ಪ್ರಾಚೀನ ವಾಸ್ತುಶಿಲ್ಪ ಸಂರಕ್ಷಣೆಗೆ ವಹಿಸಿರುವ ಆಸ್ಥೆಯನ್ನು ಪರಿಗಣಿಸಿ ಅವರಿಗೆ ಈ ಪುರಸ್ಕಾರ ನೀಡಲಾಯಿತು. ಅಮೆರಿಕದಲ್ಲಿರುವ ಭಾರತದ ರಾಯಭಾರಿ ರೊನೆನ್ ಸೇನ್ ಅವರು, ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ನೀಡಿ ಮಹಾರಾಜ ಗಜಸಿಂಗ್ ಅವರನ್ನು ಸನ್ಮಾನಿಸಿದರು. ಶತಮಾನಗಳಷ್ಟು ಹಳೆಯದಾದ ವಾಸ್ತುಶಿಲ್ಪ ಹಾಗೂ ಅವುಗಳ ಸಂರಕ್ಷಣೆಗೆ ನೀಡುವ ಮಹತ್ತರ ನೆರವು ಆಧರಿಸಿ ಅಮೆರಿಕದ `ವಿಶ್ವ ಸ್ಮಾರಕ ನಿಧಿ' (ವರ್ಲ್ಡ್ ಮಾನ್ಯುಮೆಂಟ್ ಫಂಡ್) ಸೇವಾ ಸಂಸ್ಥೆಯು ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡುತ್ತದೆ.

2006: ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ವರನಟ ಡಾ. ಡಾ. ರಾಜಕುಮಾರ್ ಅವರ ಪಂಚಲೋಹದ ಪುತ್ಥಳಿಯನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅನಾವರಣ ಮಾಡಿದರು.

2006: ಹಿರಿಯ ತಬಲಾ ವಾದಕ ಪ್ರೊ. ಕರವೀರಪ್ಪ ಶಿವಪ್ಪ ಹಡಪದ (ಕೆ. ಎಸ್. ಹಡಪದ) (76) ಗುಲ್ಬರ್ಗದಲ್ಲಿ ನಿಧನರಾದರು.

2006: ಅತ್ಯಾಚಾರ, ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಕೃತ ಕಾಮಿ ಉಮೇಶ ರೆಡ್ಡಿಗೆ ಬೆಂಗಳೂರು ನಗರದ ಏಳನೇ ತ್ವರಿತ ನ್ಯಾಯಾಲಯ ಮರಣದಂಡನೆ ವಿಧಿಸಿತು. ನ್ಯಾಯಾಧೀಶರಾದ ಕೆ. ಸುಕನ್ಯಾ ಈ ತೀರ್ಪು ನೀಡಿದರು. 1998ರ ಫೆಬ್ರುವರಿ 28ರ ಮಧ್ಯಾಹ್ನ ಉಮೇಶ ರೆಡ್ಡಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ಜಯಶ್ರೀ ಮರಡಿ ಸುಬ್ಬಯ್ಯ (37) ಮನೆಗೆ ನುಗ್ಗಿ ಅವರ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಹತ್ಯೆಗೈದು ಮನಯಲ್ಲಿದ್ದ ನಗನಾಣ್ಯ ದರೋಡೆ ಮಾಡಿ ಪರಾರಿಯಾಗಿದ್ದ.

2000: ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರಿಂದ ವಿಶ್ವದಾಖಲೆ. ಭಾರತದ ವಿರುದ್ಧ ಶಾರ್ಜಾದಲ್ಲಿ ನಡೆದ ಕೋಕಾಕೋಲಾ ಏಕದಿನ ಪಂದ್ಯದಲ್ಲಿ 30 ರನ್ನುಗಳಿಗೆ 7 ವಿಕೆಟ್ ಉರುಳಿಸುವ ಮೂಲಕ ಅವರಿಂದ ಈ ದಾಖಲೆ ಸ್ಥಾಪನೆಯಾಯಿತು.

1999: ಲೋಕಸಭೆಯ ಉಪಾಧ್ಯಕ್ಷರಾಗಿ ಕಾಂಗ್ರೆಸ್ಸಿನ ಪಿ.ಎಂ. ಸಯೀದ್ ಪುನರಾಯ್ಕೆಯಾದರು.

1992: ಕರ್ನಾಟಕದಲ್ಲಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸಂಪುಟದ ಸಂಸದೀಯ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯ್ಲಿ ರಾಜೀನಾಮೆ ನೀಡಿದರು.

1969: ಚಂಡೀಗಢವನ್ನು ಪಂಜಾಬ್ ರಾಜ್ಯಕ್ಕೆ ಸೇರಿಸುವಂತೆ ಒತ್ತಾಯಿಸಿ ಆಮರಣ ನಿರಶನ ನಡೆಸಿದ ಸಿಖ್ ಧುರೀಣ ದರ್ಶನ್ ಸಿಂಗ್ ಫೆರುಮಾನ್ ಅವರು ತಮ್ಮ ನಿರಶನದ 74ನೇ ದಿನವಾದ ಈದಿನ ಮೃತರಾದರು.

1947: ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ಒಪ್ಪಂದಕ್ಕೆ ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು ಸಹಿ ಹಾಕಿದರು. ಪಾಕಿಸ್ಥಾನಿ ದಾಳಿಗಳ ವಿರುದ್ಧ ನೆರವು ನೀಡುವಂತೆ ಮನವಿ ಮಾಡಿದ ಅವರು ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ಕೊಡುಗೆಯನ್ನು ಮುಂದಿಟ್ಟರು. ಭಾರತ ಸರ್ಕಾರ ಮಹಾರಾಜ ಹರಿಸಿಂಗ್ ಅವರ ಈ ಕೊಡುಗೆಯನ್ನು ಅಂಗೀಕರಿಸಿ ಕಾಶ್ಮೀರಕ್ಕೆ ತನ್ನ ಸೇನೆಯನ್ನು ಕಳುಹಿಸಿತು. ಪಾಕಿಸ್ಥಾನಿ ಸರ್ಕಾರವು ಪಠಾಣರ ದಾಳಿಗಳಿಗೆ ಕಾಶ್ಮೀರವನ್ನು ದೂರಿತು ಹಾಗೂ ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆಗೊಳಿಸಿದದನ್ನು ಮಾನ್ಯ ಮಾಡಲು ನಿರಾಕರಿಸಿತು.

1940: ಆರತಿ ಸಹಾ (1940-1994) ಜನ್ಮದಿನ.  ಇವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿನ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1920: ಭಾರತದ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಜನ್ಮದಿನ. ಇವರು 1997-2002ರ ಅವಧಿಯಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು.

1911: ಸಿಖ್ ಧಾರ್ಮಿಕ ನಾಯಕ ಸಂತ ಫತೇಸಿಂಗ್ (1911-72) ಜನ್ಮದಿನ.  ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಂಜಾಬಿ ಮಾತನಾಡುವ ಜನರಿಗಾಗಿ ಪ್ರತ್ಯೇಕ ರಾಜ್ಯ ಸ್ಥಾಪಿಸುವಂತೆ ಮಾಸ್ಟರ್ ತಾರಾಸಿಂಗ್ ಅವರ ಜೊತೆಗೂಡಿ ತೀವ್ರ ಪ್ರಚಾರ ಅಭಿಯಾನ ಕೈಗೊಂಡ ವ್ಯಕ್ತಿ ಫತೇಸಿಂಗ್.

1907: ಹರಿವಂಶರಾಯ್ ಬಚ್ಚನ್ ಜನ್ಮದಿನ. ಭಾರತೀಯ ಸಾಹಿತಿ, ಕವಿಯಾದ ಇವರು ಚಿತ್ರನಟ ಅಮಿತಾಭ್ ಬಚ್ಚನ್ ಅವರ ತಂದೆ.

1906: ಕನ್ನಡ ಸಾಹಿತಿ ದೊಡ್ಡಬೆಲೆಯ ಡಿ.ಎಲ್.ಎನ್. (27/10/1906-8/5/1971) ಜನ್ಮದಿನ. ಸಂಶೋಧನೆ, ವಿಮರ್ಷಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಇವರು `ವಡ್ಡಾರಾಧನೆ', `ಪಂಪರಾಮಾಯಣ ಸಂಗ್ರಹ', `ಭೀಷ್ಮಪರ್ವ' ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

1904: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ ದಾಸ್ (1904-1929) ಜನ್ಮದಿನ. ಅವರು ಲಾಹೋರ್ ಜೈಲಿನಲ್ಲಿ ತಮ್ಮ ಆಮರಣ ನಿರಶನದ 63ನೇ ದಿನ ಮೃತರಾದರು.

1858: ಥಿಯೋಡೋರ್ ರೂಸ್ ವೆಲ್ಟ್ (1858-1919) ಜನ್ಮದಿನ. ಇವರು 1901-1909ರ ಅವಧಿಯಲ್ಲಿ ಅಮೆರಿಕದ 26ನೇ ಅಧ್ಯಕ್ಷರಾಗಿದ್ದರು.

1811: ಅಮೆರಿಕದ ಸಂಶೋಧಕ ಐಸಾಕ್ ಮೆರ್ರಿಟ್ ಸಿಂಗರ್ (1811-75) ಜನ್ಮದಿನ. ಗೃಹ ಬಳಕೆಗೆ ಬಳಸುವಂತಹ ಮೊತ್ತ ಮೊದಲ ಹೊಲಿಗೆ ಯಂತ್ರವನ್ನು ಇವರು ಅಭಿವೃದ್ಧಿ ಪಡಿಸಿದರು. ಕಂತು ಸಾಲ ಯೋಜನೆಯನ್ನು ಜಾರಿಗೆ ತಂದವರೂ ಇವರೇ. ಇವರ ಕಂತು ಸಾಲ ಯೋಜನೆ ಆಧುನಿಕ ಸಮಾಜದಲ್ಲಿ ವ್ಯಾಪಕ ಪ್ರಭಾವ ಬೀರಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Sunday, October 26, 2008

ಇಂದಿನ ಇತಿಹಾಸ History Today ಅಕ್ಟೋಬರ್ 26

ಇಂದಿನ ಇತಿಹಾಸ

ಅಕ್ಟೋಬರ್ 26

 ಖ್ಯಾತ ಬಾಲಿವುಡ್ ನಟಿ, ರಾಜ್ಯಸಭಾ ಸದಸ್ಯೆ ಶಬಾನಾ ಆಜ್ಮಿ ಅವರಿಗೆ ಲಂಡನ್ನಿನ ಹೌಸ್ ಆಫ್ ಕಾಮನ್ಸಿನಲ್ಲಿ ಪ್ರಸ್ತುತ ವರ್ಷದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಗಾಂಧಿ ಪ್ರತಿಷ್ಠಾನ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಮುಂಬೈಯ ಕೊಳಚೆ ಪ್ರದೇಶದ ಜನರ ಮೂಲಭೂತ ಹಕ್ಕುಗಳಿಗಾಗಿ `ನಿವಾರ ಹಕ್' ಸಂಘಟನೆ ಸ್ಥಾಪಿಸಿ ಕಳೆದ ಎರಡು ದಶಕಗಳಿಂದ ನಡೆಸುತ್ತಾ ಬಂದ ಹೋರಾಟವನ್ನು ಗುರುತಿಸಿ ಈ ಗೌರವ ನೀಡಲಾಯಿತು. 

2007: ಹುಬ್ಬಳ್ಳಿಯ ಪ್ರತಿಷ್ಠಿತ ಡಾ.ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿಗೆ ಕಾಂತಾವರದ ಡಾ.ನಾ. ಮೊಗಸಾಲೆ ಅವರು ಆಯ್ಕೆಯಾದರು. ಅವರು ಕವಿ, ಕಾದಂಬರಿಕಾರ ಹಾಗೂ ಸಾಹಿತ್ಯ ಸಂಘಟಕರಾಗಿ ಪ್ರಸಿದ್ಧರು. 2006ನೇ ಸಾಲಿನ ಅತ್ಯುತ್ತಮ ಕವನ ಸಂಕಲನವೆಂದು ಡಾ.ನಾ. ಮೊಗಸಾಲೆ ಅವರು ಬರೆದ `ಇಹಪರದ ಕೊಳ' ಆಯ್ಕೆಯಾಯಿತು. ಡಾ.ಡಿ.ಎಸ್. ಕರ್ಕಿ ಜನ್ಮ ಶತಮಾನೋತ್ಸವದ ಈ ವರ್ಷದಲ್ಲಿ ವಿಶೇಷವಾಗಿ ನೀಡಲಾದ ಕಾವ್ಯ ಪ್ರಶಸ್ತಿಯನ್ನು ವಿಭಾ ಅವರು ಬರೆದ `ಜೀವ ಮಿಡಿತದ ಸದ್ದು' ಕವನ ಸಂಕಲನಕ್ಕೆ ಘೋಷಿಸಲಾಯಿತು.

2007: ಕೌಟುಂಬಿಕ ದೌರ್ಜನ್ಯ ಕಾಯ್ದೆ ಜಾರಿಯಾದ ಒಂದು ವರ್ಷದ ಅವಧಿಯೊಳಗೆ ದೇಶಾದ್ಯಂತ ಸುಮಾರು 10 ಸಾವಿರ ಪ್ರಕರಣಗಳು ದಾಖಲಾಗಿದ್ದು, ಹಲವು ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ಕಾಯ್ದೆ ಜಾರಿ ತರುವಲ್ಲಿ ಹಿಂದುಳಿದಿವೆ ಎಂದು ವರದಿಯೊಂದು ತಿಳಿಸಿತು. 2007ರ ಜುಲೈ 31ರಂದು ಕೊನೆಗೊಂಡ ಅವಧಿಯಲ್ಲಿ ಈ ಕಾಯ್ದೆಯಡಿ ಒಟ್ಟು 7,913 ದೂರುಗಳು ದಾಖಲಾಗಿದ್ದು, ಇಲ್ಲಿಯವರೆಗೆ ದೂರುಗಳ ಸಂಖ್ಯೆ ಹತ್ತು ಸಾವಿರಕ್ಕೆ ತಲುಪಿದೆ. ಇವುಗಳಲ್ಲಿ ಬಹಳಷ್ಟು ಪ್ರಕರಣಗಳ ವಿಚಾರಣೆ ಇನ್ನೂ ಬಾಕಿ ಇದೆ. ರಾಜಸ್ಥಾನದಲ್ಲಿ ಅತಿ ಹೆಚ್ಚು ಅಂದರೆ 3,440 ಪ್ರಕರಣಗಳು ಈ ಕಾಯ್ದೆಯಡಿ ದಾಖಲಾಗಿವೆ. ನಂತರ ಕೇರಳ (1,028), ಆಂಧ್ರ ಪ್ರದೇಶ (731), ದೆಹಲಿ (607), ಬಿಹಾರ (64), ಪಶ್ಚಿಮ ಬಂಗಾಳ (54) ಹಾಗೂ ಒರಿಸ್ಸಾ (12)ದಲ್ಲಿ ಪ್ರಕರಣಗಳು ವರದಿಯಾಗಿವೆ. ದೆಹಲಿ ಹಾಗೂ ಆಂಧ್ರ ಪ್ರದೇಶದಲ್ಲಿ ಸುರಕ್ಷಾ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇನ್ನುಳಿದ ರಾಜ್ಯಗಳಲ್ಲಿ ಪೂರ್ಣಾವಧಿಗೆ ಯಾರನ್ನೂ ನೇಮಿಸಿಲ್ಲ ಎಂದು ವರದಿ ಹೇಳಿತು.

2007: ಎಲ್.ಕೆ. ಅಡ್ವಾಣಿ ಭೇಟಿ ಸಂದರ್ಭದಲ್ಲಿ ಸಂಭವಿಸಿದ 1998ರ ಕೊಯಮತ್ತೂರು ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿಯಾಗಿದ್ದ ಮೈಸೂರಿನ ರಿಯಾಜ್-ಉಲ್-ರೆಹಮಾನ್ ಅವರನ್ನು ಕೊಯಮತ್ತೂರಿನ ವಿಶೇಷ ನ್ಯಾಯಾಲಯ ಬಿಡುಗಡೆಗೊಳಿಸಿತು. ರಿಯಾಜ್ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಲಾಗಲಿ ಅಥವಾ ಅವರ ವಿರುದ್ಧ ವಿಚಾರಣೆ ನಡೆಸಲಾಗಲಿ ಸರ್ಕಾರಿ ವಕೀಲರು ಬಯಸಲಿಲ್ಲ. ಆದ್ದರಿಂದ ಅವರನ್ನು ಬಿಡುಗಡೆ ಮಾಡುತ್ತಿರುವುದಾಗಿ ನ್ಯಾಯಮೂತರ್ಿ ಕೆ. ಉದಿರಪತಿ ಹೇಳಿದರು. ಮೈಸೂರಿನವರಾದ ರಿಯಾಜ್ ಸ್ಫೋಟಕ ವಸ್ತುಗಳ ವ್ಯಾಪಾರಿ. ಕೊಯಮತ್ತೂರಿನಲ್ಲಿ ಸ್ಫೋಟಗೊಂಡ ಬಾಂಬುಗಳನ್ನು ತಯಾರಿಸಲು ಸ್ಪೋಟಕ ವಸ್ತುಗಳನ್ನು ಇವರು ಪೂರೈಸಿದ್ದರು ಎಂದು ಆರೋಪಿಸಲಾಗಿತ್ತು. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರಿಗೆ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿತು. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 43 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದಂತಾಯಿತು. 1998ರ ಫೆಬ್ರುವರಿ 14ರಂದು ನಡೆದ ಸ್ಫೋಟದಲ್ಲಿ 58 ಜನರು ಹತ್ಯೆಗೀಡಾಗಿದ್ದರು. 43 ಮಂದಿ ಶಿಕ್ಷಿತರ ಪೈಕಿ 26 ಜನರಿಗೆ ಎರಡು ಅವಧಿಗೆ ಜೀವಾವಧಿ ಶಿಕ್ಷೆ, 15 ಜನರಿಗೆ ಒಂದು ಅವಧಿಗೆ ಜೀವಾವಧಿ ಶಿಕ್ಷೆ, ಒಬ್ಬನಿಗೆ ಮೂರು ಅವಧಿಗೆ ಜೀವಾವಧಿ ಶಿಕ್ಷೆ ಹಾಗೂ ಇನ್ನೊಬ್ಬನಿಗೆ ನಾಲ್ಕು ಅವಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

2007: ವಿದೇಶಿ ಬಂಡವಾಳ ಹರಿವಿಗೆ ಕಡಿವಾಣ ವಿಧಿಸುವ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಕ್ರಮಗಳಿಂದ ಧೃತಿಗೆಡದ ಹೂಡಿಕೆದಾರರು, ಷೇರು ಖರೀದಿಗೆ ಆದ್ಯತೆ ನೀಡಿದ್ದರಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಇನ್ನೊಂದು ದಾಖಲೆ ಬರೆಯಿತು. ಕಳೆದ ವಾರ ದಾಖಲೆ ಮಟ್ಟದಿಂದ (19 ಸಾವಿರ ಅಂಶಗಳಿಂದ) ತೀವ್ರ ಕುಸಿತ ದಾಖಲಿಸಿದ್ದ ಸೂಚ್ಯಂಕವು ಈದಿನದ ವಹಿವಾಟಿನಲ್ಲಿ 472 ಅಂಶಗಳ ಏರಿಕೆ ದಾಖಲಿಸಿ, 19,243 ಅಂಶಗಳೊಂದಿಗೆ ವಹಿವಾಟು ಕೊನೆಗೊಳಿಸಿ, ಇನ್ನೊಂದು ಮೈಲಿಗಲ್ಲು ದಾಟಿತು.  ರಾಷ್ಟ್ರೀಯ ಷೇರುಪೇಟೆ (ಎನ್ಎಸ್ಇ) ನಿಫ್ಟಿ ಕೂಡ 5702 ಅಂಶಗಳಿಗೆ ಏರಿಕೆ ಕಂಡು ಹೊಸ ದಾಖಲೆ ಬರೆಯಿತು.  

2007: ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರ ಆರೋಪದ ಮೇಲೆ ಜೈಲು ಸೇರಿದ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಎರಡು ಪ್ರಕರಣಗಳಲ್ಲಿ ಆರೋಪ ಮುಕ್ತರಾದರು. ಭ್ರಷ್ಟಾಚಾರದ ಎರಡು ಪ್ರಕರಣಗಳಲ್ಲಿ ಖಲೀದಾ ವಿರುದ್ಧ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಭ್ರಷ್ಟಾಚಾರ ನಿರ್ಮೂಲನೆ ಆಯೋಗ ತಿಳಿಸಿತು. 

2006: ಗಂಡ ಅಥವಾ ಸಂಗಾತಿ ಮತ್ತು ಅವರ ಸಂಬಂಧಿಕರು ನೀಡುವ ಹಿಂಸೆಯಿಂದ ರಕ್ಷಿಸಲು ರೂಪಿಸಲಾಗಿರುವ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ- 2005 ಭಾರತದಲ್ಲಿ ಜಾರಿಗೆ ಬಂತು. ಈ ಕಾಯ್ದೆಯ ಅನುಷ್ಠಾನದೊಂದಿಗೆ ಪತ್ನಿಯರನ್ನು ಹೊಡೆಯುವ ಅಥವಾ ಅವಮಾನಿಸುವ ಗಂಡಂದಿರು ಸೆರೆಮನೆ ಶಿಕ್ಷೆ ಅಥವಾ 20,000 ರೂಪಾಯಿಗಳವರೆಗೆ ದಂಡ ತೆರಬೇಕಾಗಿ ಬರುತ್ತದೆ. ಸಂಸತಿನಲ್ಲಿ ಈ ಕಾಯ್ದೆಯನ್ನು ಕಳೆದ ವರ್ಷದ ಆಗಸ್ಟಿನಲ್ಲಿ ಮಂಡಿಸಿ, ಸೆಪ್ಟೆಂಬರ್ 13ರಂದು ರಾಷ್ಟ್ರಪತಿಗಳಿಂದ ಅನುಮೋದನೆ ಪಡೆಯಲಾಗಿತ್ತು. ಕಾಯ್ದೆಯನ್ನು 2006ರ ಅಕ್ಟೋಬರ್ 26ರಂದು ಜಾರಿಗೆ ತರಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು. ನೇರ ಅಥವಾ ದೈಹಿಕ, ಲೈಂಗಿಕ, ಮೌಖಿಕ ಬೈಗುಳ, ಮಾನಸಿಕ ಅಥವಾ ಆರ್ಥಿಕ ಕಿರುಕುಳಗಳು, ಬೆದರಿಕೆ ಹಾಕುವುದು,  ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಬರುತ್ತವೆ. ಹೆಚ್ಚು ವರದಕ್ಷಿಣೆ ತರುವಂತೆ ಮಹಿಳೆ ಅಥವಾ ಅವಳ ಸಂಬಂಧಿಕರನ್ನು ಪೀಡಿಸುವುದೂ ಈ ಕಾಯ್ದೆಯಡಿ ಸೇರುತ್ತದೆ. ಹಿಂಸೆ ನೀಡಿದ ವ್ಯಕ್ತಿಯ ಜೊತೆಗೆ ಒಂದೇ ಮನೆಯಲ್ಲಿ ಒಟ್ಟಾಗಿ ಬಾಳಿದ್ದರೆ, ರಕ್ತ ಸಂಬಂಧ ಹೊಂದಿದ್ದರೆ ಅಥವಾ ಮದುವೆ ಇಲ್ಲವೇ ಮದುವೆ ಮಾದರಿಯ ಬೇರಾವುದೇ ರೀತಿಯ ಬಾಂಧವ್ಯ ಅಥವಾ ದತ್ತು ಸ್ವೀಕಾರದಂತಹ ಬಾಂಧವ್ಯ ಹೊಂದಿದ್ದರೆ ಅಂತಹ ಮಹಿಳೆಗೆ ಕಾನೂನು ರಕ್ಷಣೆ ಒದಗಿಸುತ್ತದೆ. ಇದಲ್ಲದೆ ದೈಹಿಕವಾಗಿ ಹೊಡೆಯುವುದು, ಕಪಾಳಮೋಕ್ಷ ಮಾಡುವುದು, ವ್ಯಂಗ್ಯವಾಡುವುದು, ಒದೆಯುವುದು, ತಳ್ಳುವುದು, ಬಲಾತ್ಕಾರದ ಲೈಂಗಿಕತೆ, ಪತ್ನಿ ಅಥವಾ ಜೊತೆಗಾತಿಯನ್ನು ನಗ್ನ ಇಲ್ಲವೇ ಅಸಭ್ಯ ಚಿತ್ರಗಳನ್ನು ನೋಡುವಂತೆ ಬಲಾತ್ಕರಿಸುವುದು, ಮಕ್ಕಳನ್ನು ಲೈಂಗಿಕವಾಗಿ ಹಿಂಸಿಸುವುದು, ಹೆಸರು ಹಿಡಿದು ಕೂಗಿ ಅವಮಾನಿಸುವುದು, ಪತ್ನಿಯನ್ನು ಕೆಲಸಕ್ಕೆ ಸೇರದಂತೆ ತಡೆಯುವುದು, ಅಥವಾ ಕೆಲಸ ಬಿಡುವಂತೆ ಒತ್ತಾಯಿಸುವುದು ಕೂಡಾ ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಕಾಯ್ದೆಯ ಅತ್ಯಂತ ಪ್ರಮುಖ ವೈಶಿಷ್ಟ್ಯವೇನೆಂದರೆ ಮಹಿಳೆಗೆ ವಸತಿ ಸೌಕರ್ಯದ ಹಕ್ಕು. ಮಹಿಳೆಗೆ ತವರು ಮನೆಯಲ್ಲಿ ವಾಸಿಸುವ ಮತ್ತು ಪಾಲಾದ ಮನೆಯಲ್ಲಿ ಆಕೆಗೆ ಯಾವುದೇ ಅಧಿಕಾರ ಇರಲಿ ಅಥವಾ ಇಲ್ಲದಿರಲಿ ವಾಸಿಸುವ ಹಕ್ಕನ್ನು  ಈ ಕಾನೂನು ನೀಡುತ್ತದೆ.  ಸಂರಕ್ಷಣಾ ಆದೇಶ ಅಥವಾ ತಾತ್ಕಾಲಿಕ ಸಂರಕ್ಷಣಾ ಆದೇಶವನ್ನು ಪ್ರತಿವಾದಿ ಉಲ್ಲಂಘಿಸುವುದನ್ನು ಕಾನೂನು ಶಿಕ್ಷಾರ್ಹ, ಜಾಮೀನು ರಹಿತ ಅಪರಾಧವನ್ನಾಗಿ ಮಾಡಿದೆ. ಈ ಅಪರಾಧಕ್ಕೆ ಒಂದು ವರ್ಷದವರೆಗೆ ಸೆರೆವಾಸ ಹಾಗೂ/ ಅಥವಾ 20,000 ರೂಪಾಯಿಗಳವರೆಗಿನ ದಂಡವನ್ನು ವಿಧಿಸಬಹುದು. ನಿಂದಕ ಪ್ರತಿವಾದಿಯು ಯಾವುದೇ ಕೌಟುಂಬಿಕ ಹಿಂಸಾಚಾರ ಎಸಗದಂತೆ, ಅಂತಹ ಕೃತ್ಯಕ್ಕೆ ನೆರವಾಗದಂತೆ ಅಥವಾ ಇಂತಹ ಬೇರೆ ಯಾವುದೇ ನಿರ್ದಿಷ್ಟ ಕೃತ್ಯ ಎಸಗುವುದು, ಕೆಲಸದ ಜಾಗ ಅಥವಾ ಇತರ ಸ್ಥಳಕ್ಕೆ ಪ್ರವೇಶಿಸುವುದು, ಸಂಪರ್ಕ ಸಾಧಿಸಲು ಯತ್ನಿಸುವುದು, ಉಭಯ ಕಕ್ಷಿದಾರರ ಯಾವುದೇ ಆಸ್ತಿಪಾಸ್ತಿಯನ್ನು ಪ್ರತ್ಯೇಕಿಸುವುದು ಇತ್ಯಾದಿ ಕೃತ್ಯಗಳನ್ನು ಎಸಗದಂತೆ ನಿಂದಕ ಪ್ರತಿವಾದಿಯನ್ನು ಪ್ರತಿಬಂಧಿಸಿ ಸಂರಕ್ಷಣಾ ಆದೇಶ ಹೊರಡಿಸುವ ಅಧಿಕಾರವನ್ನೂ ಕಾಯ್ದೆ ನ್ಯಾಯಾಲಯಕ್ಕೆ ನೀಡಿತು.

2006: ಮೈಸೂರು ಹೊರವಲಯದ ವಿಜಯನಗರ ವರ್ತುಲ ರಸ್ತೆ ಬಳಿ ಹಿಂದಿನ ರಾತ್ರಿ ಗುಂಡಿನ ಚಕಮಕಿ ಬಳಿಕ ಪೊಲೀಸರು ಇಬ್ಬರು ಪಾಕಿಸ್ತಾನಿ ಉಗ್ರಗಾಮಿಗಳನ್ನು ಬಂಧಿಸಿದರು.

2006: ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಕ್ಕೆ ಗಿರೀಶ ಕಾಸರವಳ್ಳಿ ನಿರ್ದೇಶನದ `ನಾಯಿ ನೆರಳು' ಚಿತ್ರ ಆಯ್ಕೆಯಾಯಿತು. `ಸಯನೈಡ್' ಮತ್ತು ಬರಗೂರು ರಾಮಚಂದ್ರಪ್ಪ ನಿರ್ದೇಶನದ `ತಾಯಿ' ಸೇರಿದಂತೆ ಕನ್ನಡದ 4 ಚಿತ್ರಗಳು ಸ್ಪರ್ಧೆಯಲ್ಲಿ ಇದ್ದವು.

2006: ಸೂರ್ಯನ ಕಿರಣದ ಮೂಲಕ ಹೊರಸೂಸುವ ವಿಕರಣಗಳಿಂದ ಬಾಹ್ಯಾಕಾಶ ನೌಕೆ, ಸಂಪರ್ಕ ವ್ಯವಸ್ಥೆ ಮತ್ತು ಗಗನಯಾನಿಗಳ ಮೇಲೆ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡಲು ಕೇಪ್ ಕೆನವರಾಲ್ ವಾಯು ನೆಲೆಯಿಂದ ಎರಡು ಬಾಹ್ಯಾಕಾಶ ನೌಕೆಗಳನ್ನು ಬಾನಿಗೆ ಹಾರಿ ಬಿಡಲಾಯಿತು.

2006: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗುರುಜ್ಯೋತಿ ಕಲಾ ಸಂಘವು 2005ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಮರದ ಮೇಲೆ ಪ್ರದರ್ಶಿಸಿದ್ದ `ನೆಲೆ' ನಾಟಕ ಲಿಮ್ಕಾ ದಾಖಲೆಗೆ ಸೇರ್ಪಡೆಯಾಯಿತು. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2005ರ ಜೂನ್ 5ರಂದು ರಂಗಭೂಮಿ ಕಲಾವಿದ ಮತ್ತು ನಿರ್ದೇಶಕ ನಾಗರಾಜ ಕೋಟೆ ತಾವೇ ನಾಟಕ ರಚಿಸಿ ನಿರ್ದೇಶಿಸಿದ್ದ ಈ ನಾಟಕ ಮರದ ಮೇಲೆ ಪ್ರದರ್ಶಿತವಾದ ಪ್ರಥಮ ನಾಟಕ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. 40 ನಿಮಿಷಗಳ ಅವದಿಯಲ್ಲಿ 11 ಕಲಾವಿದರು ಅಭಿನಯಿಸಿದ ಈ ನಾಟಕಕ್ಕೆ ಮರದ ಮೇಲೆ ಯಾವುದೇ ರಂಗಸಜ್ಜಿಕೆ, ಕೃತಕ ವಿದ್ಯುತ್ ದೀಪ ಇತ್ಯಾದಿ ಪರಿಕರ ಬಳಸಿರಲಿಲ್ಲ. ಕೇವಲ ಬೆಳದಿಂಗಳಲ್ಲೇ ಅದನ್ನು ನಡಸಿದ್ದು ಜನ ಮೆಚ್ಚುಗೆ ಗಳಿಸಿತ್ತು.

2006: ಬಾಲಿವುಡ್ ತಾರೆಯರಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ಫೆಬ್ರವರಿಯಲ್ಲಿ ಹಸೆಮಣೆ ಏರುವುದು ಖಚಿತವಾಗಿದೆ ಎಂದು ಬೆಂಗಳೂರಿನ ಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ದೃಢಪಡಿಸಿದರು.

2006: ಖ್ಯಾತ ಬಾಲಿವುಡ್ ನಟಿ, ರಾಜ್ಯಸಭಾ ಸದಸ್ಯೆ ಶಬಾನಾ ಆಜ್ಮಿ ಅವರಿಗೆ ಲಂಡನ್ನಿನ ಹೌಸ್ ಆಫ್ ಕಾಮನ್ಸಿನಲ್ಲಿ ಪ್ರಸ್ತುತ ವರ್ಷದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಗಾಂಧಿ ಪ್ರತಿಷ್ಠಾನ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಮುಂಬೈಯ ಕೊಳಚೆ ಪ್ರದೇಶದ ಜನರ ಮೂಲಭೂತ ಹಕ್ಕುಗಳಿಗಾಗಿ `ನಿವಾರ ಹಕ್' ಸಂಘಟನೆ ಸ್ಥಾಪಿಸಿ ಕಳೆದ ಎರಡು ದಶಕಗಳಿಂದ ನಡೆಸುತ್ತಾ ಬಂದ ಹೋರಾಟವನ್ನು ಗುರುತಿಸಿ ಈ ಗೌರವ ನೀಡಲಾಯಿತು. 

1990: ಚಿತ್ರ ನಿರ್ಮಾಪಕ, ನಿರ್ದೇಶಕ ದಾದಾ ಸಾಹೇಬ್ ಫಾಲ್ಕೆ ಪ್ರ್ರಶಸ್ತಿ ಪುರಸ್ಕೃತ ವಿ. ಶಾಂತಾರಾಮ್ (90) ನಿಧನ.

1981: ಕಾವ್ಯವನ್ನೇ ತಮ್ಮ ಜೀವನ ಧರ್ಮವಾಗಿ ಸ್ವೀಕರಿಸಿ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ವಿಜೃಂಭಿಸಿದ ಜ್ಞಾನಪೀಠ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವರಕವಿ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ  (ದ.ರಾ. ಬೇಂದ್ರೆ) ಈದಿನ ನಿಧನರಾದರು.

1972: ರಷ್ಯ ಸಂಜಾತ ಅಮೆರಿಕನ್ ವೈಮಾನಿಕ ಎಂಜಿನಿಯರ್ ಇಗೊರ್ ಸಿಕ್ರೊಸ್ಕಿ ತಮ್ಮ 83ನೇ ವಯಸ್ಸಿನಲ್ಲಿ ಕನೆಕ್ಟಿಕಟ್ ನ ಈಸ್ಟನ್ನಿನಲ್ಲಿ ಮೃತರಾದರು. 1939ರಲ್ಲಿ ಅವರು ಮೊತ್ತ ಮೊದಲ ಹೆಲಿಕಾಪ್ಟರನ್ನು ಯಶಸ್ವಿಯಾಗಿ ನಿರ್ಮಿಸಿದ್ದರು.

1962: ರಾಷ್ಟ್ರದ ಮೇಲೆ ಚೀನಾವು ನಡೆಸಿದ ದಾಳಿಯನ್ನು ಅನುಸರಿಸಿ ಭಾರತದ ರಾಷ್ಟ್ರಪತಿಗಳು `ತುರ್ತುಪರಿಸ್ಥಿತಿ' ಘೋಷಣೆ ಮಾಡಿದರು. ಭಾರತದ ಇತಿಹಾಸದಲ್ಲಿ ಈ ರೀತಿ `ತುರ್ತು ಪರಿಸ್ಥಿತಿ' ಘೋಷಣೆ ಆದದ್ದು ಇದೇ ಪ್ರಥಮ.

1959: ಸಾಹಿತಿ ಶಶಿಕಲಾ ಶಿವಶಂಕರ ಜನನ.

1940: ಸಾಹಿತಿ ಶಚಿದೇವಿ ಟಿ. ಜನನ.

1933: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಜನನ.

1931: ಸಾಹಿತಿ ತ.ಪು. ವೆಂಕಟರಾವ್ ಜನನ.

1919: ಮಹಮ್ಮದ್ ರೇಝಾ ಶಹ ಪಹ್ಲವಿ (1919-1980) ಜನ್ಮದಿನ. 1941ರಿಂದ 1979ರವರೆಗೆ ಇರಾನಿನ ಶಹಾ ಆಗಿದ್ದ ಇವರು ಅಯತೊಲ್ಲ ಖೊಮೇನಿಯಿಂದ ಪದಚ್ಯುತರಾದರು.

1917: ಸಾಹಿತಿ ಬೈಕಾಡಿ ವೆಂಕಟಕೃಷ್ಣರಾಯರ ಜನನ.

1906:  ಇಟೆಲಿಯ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಪ್ರಿಮೊ ಕಾರ್ನೆರಾ (1906-1967) ಜನ್ಮದಿನ. ಇವರು 1933 ರ ಜನವರಿಯಿಂದ 1934ರ ಜೂನ್ ವರೆಗೆ ವಿಶ್ವ ಹೆವಿ ವೇಯ್ಟ್ ಚಾಂಪಿಯನ್ ಆಗಿದ್ದರು. 1933ರಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆದ ಪಂದ್ಯದಲ್ಲಿ ಜ್ಯಾಕ್ ಶಾರ್ಕಿಯನ್ನು ಪರಾಜಿತಗೊಳಿಸಿ ಇವರು ವಿಶ್ವ ಚಾಂಪಿಯನ್ ಶಿಪ್ ಗಳಿಸಿದರು.

1902: ಅಮೆರಿಕದ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಜ್ಯಾಕ್ ಶಾರ್ಕಿ (1902-1994) ಜನ್ಮದಿನ. 1932ರಲ್ಲಿ ನ್ಯೂಯಾರ್ಕಿನ ಲಾಂಗ್ ಐಲ್ಯಾಂಡ್ ಸಿಟಿಯಲ್ಲಿ ನಡೆದ ಪಂದ್ಯದಲ್ಲಿ ಮ್ಯಾಕ್ಸ್ ಶಿಮೆಲಿಂಗ್ ಅವರನ್ನು ಪರಾಭವಗೊಳಿಸಿ ವಿಶ್ವ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆದ ಜ್ಯಾಕ್ ಶಾರ್ಕಿ 1933ರ ಜೂನಿನಲ್ಲಿ ಪ್ರಿಮೊ ಕಾರ್ನೆರಾ ಅವರಿಂದ ಪರಾಜಿತರಾದರು.

1868: ಸಂಸ್ಕೃತ ಹಾಗೂ ಕನ್ನಡ ಪಂಡಿತರಾಗಿದ್ದ ಸಾಹಿತಿ ಸೀತಾರಾಮ ಶಾಸ್ತ್ರಿಗಳು (26-10-1868ರಿಂದ 20-12-1933) ಗುಂಡಾವಧಾನಿಗಳು- ಪಾರ್ವತಮ್ಮ ದಂಪತಿಯ ಮಗನಾಗಿ ಮೈಸೂರಿನ ಹಳ್ಳದಕೇರಿಯಲ್ಲಿ ಜನಿಸಿದರು.

1846: ಬ್ರಿಟಿಷ್ ಪತ್ರಕರ್ತ ಚಾರ್ಲ್ಸ್ ಪ್ರಸ್ಟ್ ವಿಕ್ ಸ್ಕಾಟ್ (1846-1932) ಜನ್ಮದಿನ. ಇವರು 1959ರಿಂದ 57 ವರ್ಷಗಳ ಕಾಲ `ಮ್ಯಾಂಚೆಸ್ಟರ್ ಗಾರ್ಡಿಯನ್' (ದಿ ಗಾರ್ಡಿಯನ್) ಪತ್ರಿಕೆಯನ್ನು ಸಂಪಾದಿಸಿದರು.
ಕ್ರಿ.ಪೂ. 4004: ಕ್ರಿಸ್ತಪೂರ್ವ 4004ರಲ್ಲಿ ಈದಿನ ಬೆಳಗ್ಗೆ 9 ಗಂಟೆಗೆ ಭೂಮಿಯ ಸೃಷ್ಟಿಯಾಯಿತು ಎಂಬ ಲೆಕ್ಕಾಚಾರ ಇದೆ. ಐರ್ಲೆಂಡಿನ ಇಗರ್ಜಿಯೊಂದರ ಬಿಷಪ್ ಜೇಮ್ಸ್ ಉಷರ್ ಅವರು ಕಿ.ಶ. 1650ರಲ್ಲಿ ಈ ತೀರ್ಮಾನಕ್ಕೆ ಬಂದರು. ಅವರ ತರ್ಕಕ್ಕೆ ಬೈಬಲ್ ಆಧಾರವಾಗಿತ್ತು. ಅಧುನಿಕ ವಿಶ್ವವಿದ್ಯಾಲಯದ ಭೂಗೋಳ ವಿಭಾಗದಲ್ಲಿ ಈ ದಿನವನ್ನು ಭೂಮಿಯ ಜನ್ಮದಿನ ಎಂಬುದಾಗಿ ಆಚರಿಸಲಾಗುತ್ತದೆ. ಭೂಮಿಯ ಸದ್ಯದ ನಿಖರವಾದ ವಯಸ್ಸು 4.5 ಶತಕೋಟಿ ವರ್ಷಗಳು. ಆದರೆ ಜನ್ಮದಿನದ ಬಗ್ಗೆ ಸ್ಪಷ್ಟ ಆಧಾರವೇನೂ ಇಲ್ಲ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Saturday, October 25, 2008

Striped Hyena





ಯಣ್ಣಾ ಇನ್ನೇನ್ ಕುಡಿಯೋದು..?

ಯಣ್ಣಾ ಇನ್ನೇನ್ ಕುಡಿಯೋದು..? 


ಇಂದಿನ ಇತಿಹಾಸ 

ಅಕ್ಟೋಬರ್ 25

ಪ್ರಯಾಣಿಕರ ಅತಿ ದೊಡ್ಡ 'ಜಂಬೋ ವಿಮಾನ' ಏರ್ಬಸ್ ಎ380 ಈದಿನ ಸಿಂಗಪುರದಿಂದ ಆಸ್ಟ್ರೇಲಿಯಾದ ಸಿಡ್ನಿಗೆ ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಆರಂಭಿಸಿತು. ಸಿಂಗಪುರ ಏರ್ ಲೈನ್ಸಿಗೆ ಸೇರಿದ ಈ ವಿಮಾನದ ಮೊದಲ ಐತಿಹಾಸಿಕ ಹಾರಾಟದಲ್ಲಿ ಪ್ರಯಾಣಿಸಲು ಜನರು ಮುಗಿಬಿದ್ದು ಟಿಕೆಟುಗಳನ್ನು ಖರೀದಿಸಿದರು. ಬ್ರಿಟನ್ ನಾಗರಿಕನೊಬ್ಬ ಒಂದು ಲಕ್ಷ ಡಾಲರ್ (40 ಲಕ್ಷ ರೂಪಾಯಿ) ಹಣ ಕೊಟ್ಟು ಟಿಕೆಟ್ ಖರೀದಿಸಿದ್ದು ದಾಖಲೆಯಾಯಿತು

2007: ಪ್ರಯಾಣಿಕರ ಅತಿ ದೊಡ್ಡ 'ಜಂಬೋ ವಿಮಾನ' ಏರ್ಬಸ್ ಎ380 ಈದಿನ ಸಿಂಗಪುರದಿಂದ ಆಸ್ಟ್ರೇಲಿಯಾದ ಸಿಡ್ನಿಗೆ ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಆರಂಭಿಸಿತು. ಸಿಂಗಪುರ ಏರ್ ಲೈನ್ಸಿಗೆ ಸೇರಿದ ಈ ವಿಮಾನದ ಮೊದಲ ಐತಿಹಾಸಿಕ ಹಾರಾಟದಲ್ಲಿ ಪ್ರಯಾಣಿಸಲು ಜನರು ಮುಗಿಬಿದ್ದು ಟಿಕೆಟುಗಳನ್ನು ಖರೀದಿಸಿದರು. ಬ್ರಿಟನ್ ನಾಗರಿಕನೊಬ್ಬ ಒಂದು ಲಕ್ಷ ಡಾಲರ್ (40 ಲಕ್ಷ ರೂಪಾಯಿ) ಹಣ ಕೊಟ್ಟು ಟಿಕೆಟ್ ಖರೀದಿಸಿದ್ದು ದಾಖಲೆಯಾಯಿತು. ಆನ್ ಲೈನ್ ಹರಾಜು ಮೂಲಕ ಟಿಕೆಟ್ ಮಾರಾಟ ಮಾಡಲಾಯಿತು. ಎಲ್ಲ 455 ಪ್ರಯಾಣಿಕರಿಗೆ ಸಿಂಗಪುರ ಏರ್ ಲೈನ್ಸ್ ಶಾಂಪೇನ್ ಕಾಣಿಕೆಯಾಗಿ ನೀಡಿತು. ಮಾನವ ನಿರ್ಮಿತ ಅತಿ ದೊಡ್ಡ ಹಾರಾಟದ ವಸ್ತು ಇದಾಗಿದೆ ಎಂಬ ಹೆಗ್ಗಳಿಕೆ ಹೊತ್ತಿರುವ ಎರಡು ಅಂತಸ್ತಿನ ಈ ವಿಮಾನದಲ್ಲಿ 853 ಜನರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು.

2007: ವಿವಾಹ ನೋಂದಣಿಯನ್ನು ಎಲ್ಲ ಧರ್ಮದವರಿಗೂ ಕಡ್ಡಾಯಗೊಳಿಸುವ ಆದೇಶವನ್ನು ಸುಪ್ರೀಂಕೋರ್ಟ್ ಹೊರಡಿಸಿತು. ವಿವಾಹ ನೋಂದಣಿ ಕಡ್ಡಾಯ ಎಂಬುದಾಗಿ ಹಿಂದೆ ನೀಡಿದ್ದ ಆದೇಶವು   ಸರ್ವ ಧರ್ಮೀಯರಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಆದೇಶ ನೀಡಿದರು. ವಿವಾಹ ನೋಂದಣಿ ಕಾಯ್ದೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವೂ ಸೇರಿದಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್ ಮೂರು ತಿಂಗಳ ಕಾಲಾವಕಾಶ ನೀಡಿತು.

2007: ಬಳ್ಳಾರಿ ಜಿಲ್ಲೆಯ ಜೆಎಸ್ ಡಬ್ಲು ಸ್ಟೀಲ್ಸ್ ಲಿಮಿಟೆಡ್ ಕಂಪೆನಿಯು ಪ್ರಸ್ತುತ ಹಣಕಾಸು ಸಾಲಿನ ಅರ್ಧ ವರ್ಷದ ಅಂತ್ಯಕ್ಕೆ 511.23 ಕೋಟಿ ರೂಪಾಯಿಗಳ ಲಾಭ ಗಳಿಸುವ ಮೂಲಕ ದಾಖಲೆ ನಿರ್ಮಿಸಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭ ಗಳಿಕೆಯಲ್ಲಿ ಈ ಬಾರಿ ಶೇ 48ರಷ್ಟು ಪ್ರಗತಿಯಾಗಿದೆ. ಜಾಗತಿಕ ಮಾರುಕಟ್ಟೆ ಹಾಗೂ ಭಾರತದಲ್ಲಿ ಉಕ್ಕು ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದದ್ದರಿಂದ ಈ ಸಾಧನೆ ಸಾಧ್ಯವಾಯಿತು ಎಂದು ಕಂಪೆನಿಯ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದರು.

 2007: ಬಿಜೆಪಿ ನಾಯಕ ಎಲ್. ಕೆ. ಆಡ್ವಾಣಿ ಅವರನ್ನು ಸರಣಿ ಬಾಂಬ್ ಸ್ಫೋಟಿಸಿ ಕೊಲ್ಲಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಯಮತ್ತೂರಿನ ವಿಶೇಷ ನ್ಯಾಯಾಲಯವು ಈದಿನ ಮತ್ತೆ ಒಂಬತ್ತು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತು. ಇದರಿಂದಾಗಿ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರ ಸಂಖ್ಯೆ 40ಕ್ಕೆ ಏರಿತು. ನ್ಯಾಯಾಧೀಶ ಕೆ. ಉದಿರಪತಿ ಅವರು ಬಾಂಬ್ ಸ್ಫೋಟದ ರೂವಾರಿ ಅಲ್ ಉಮ್ಮಾ ಸಂಘಟನೆ ಸಂಸ್ಥಾಪಕ ಎಸ್. ಎ. ಬಾಷಾ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರಿ ಸೇರಿದಂತೆ 31 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಆಡ್ವಾಣಿ ಅವರು 1998ರ ಫೆಬ್ರುವರಿ 14ರಂದು ಕೊಯಮತ್ತೂರಿಗೆ ಭೇಟಿ ನೀಡಿದ್ದಾಗ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದ ರೂಪಿಸಲಾಗಿದ್ದ `ಆಪರೇಶನ್ ಅಲ್ಲ್ಲಾಹೋ ಅಕ್ಬರ್' ಹೆಸರಿನ ಸರಣಿ ಬಾಂಬ್ ಸ್ಫೋಟಗಳಿಂದಾಗಿ ಒಟ್ಟು 58 ಜನರು ಸತ್ತು 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬಾಂಬುಗಳನ್ನು ಇಟ್ಟದ್ದಕ್ಕಾಗಿ ವಜೀರ್ ಉರುಫ್ ಅಬ್ದುಲ್ ವಜೀರ್ ಎಂಬಾತನಿಗೆ ಅತಿ ಹೆಚ್ಚು, ಅಂದರೆ ನಾಲ್ಕು ಜೀವಾವಧಿ ಶಿಕ್ಷೆ ಹಾಗೂ ಇತರ ಅಪರಾಧಗಳಿಗೆ 124 ವರ್ಷ ಅವಧಿಯ ಶಿಕ್ಷೆ ಪ್ರಕಟಿಸಲಾಯಿತು.
 
2007: ಮಂಡ್ಯದಲ್ಲಿ ನವೆಂಬರ್ 24 ಮತ್ತು 25ರಂದು ನಡೆಯುವ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಲೇಖಕಿ, ಸಾಹಿತಿ ನೀಳಾದೇವಿ ಆಯ್ಕೆಯಾದರು.

2007: ಗುಜರಾತಿನ ಜಾಮ್ನಗರದ ಅಂತಾರಾಷ್ಟ್ರೀಯ ಆಯುರ್ವೇದ ವೈದ್ಯರ ಅಕಾಡೆಮಿಯು ಪ್ರಸಕ್ತ ಸಾಲಿನಲ್ಲಿ ಒಟ್ಟು 21 ಜನ ಖ್ಯಾತ ವೈದ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಅಹಮ್ಮದಾಬಾದಿನ ಡಾ. ತಪನ್ ಕುಮಾರ್ ವೈದ್ಯ ಆಯುರ್ವೇದ ಭೂಷಣ ಪ್ರಶಸ್ತಿಗೆ ಬಾಜನರಾದರು. ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ: ಡಾ. ಪ್ರಸನ್ನ ಎನ್. ರಾವ್ (ಆಯುರ್ವೇದ ಚಾಣಕ್ಯ), ಕೊಟ್ಟಕ್ಕಲ್ಲಿನ ಡಾ. ಈ. ಸುರೇಂದ್ರನ್ (ಪಂಚಕರ್ಮ ರತ್ನ), ಉಡುಪಿಯ ಡಾ. ಯು. ಶ್ರೀಕಾಂತ್ (ಪಂಚಕರ್ಮ ಭೂಷಣ), ಅಹಮದಾಬಾದಿನ ಡಾ.ತಪನ್ ಕುಮಾರ್ ವೈದ್ಯ (ಆಯುರ್ವೇದ ಭೂಷಣ 2007), ಡಾ. ಭೀಮಸೇನ್ ಬೆಹರಾ (ಆಯುರ್ವೇದ ಭೂಷಣ 2006), ಮಣಿಪಾಲದ ಡಾ.ಕೆ.ಜೆ. ಮಳಗಿ (ಆಯುರ್ವೇದ ಭೂಷಣ 2005), ಡಾ. ಸಂಜಯ್ (ಆಯುರ್ವೇದ ಭೂಷಣ 2004), ಕೋಲ್ಕತ್ತದ ಡಾ. ಬಿ.ಪಿ. ವಾ (ಸಂಸ್ಥೆಯ ಶ್ರೇಷ್ಠ ಮುಖ್ಯಸ್ಥ), ಹಾಸನದ ಡಾ. ಮುರಳೀಧರ್ ಪೂಜಾರ್ (ಶ್ರೇಷ್ಠ ಶಿಕ್ಷಕ 2005), ಹಾಸನದ ಡಾ. ನಾರಾಯಣ ಪ್ರಕಾಶ್ (ಶ್ರೇಷ್ಠ ಮಾನಸಿಕ ರೋಗ ತಜ್ಞ), ಕೇರಳದ ಡಾ. ಸಂತೋಷ್ ನಾಯರ್ (ಆಯುರ್ವೇದ ಭೂಷಣ ಸಿದ್ಧಾಂತ), ಡಾ. ಶ್ರೀನಿವಾಸ್ ಸಾಹಿ (ಶ್ರೇಷ್ಠ ಸಂಶೋಧನಾ ಅಧಿಕಾರಿ 2007), ಜಾಮ್ನಗರದ ಡಾ. ಸಂತೋಷ್ ಭಟ್ಟದ್ (ಶ್ರೇಷ್ಠ ಪಂಚಕರ್ಮ ವೈದ್ಯ 2005), ಡಾ. ಎಂ. ಅಶ್ವಿನಿಕುಮಾರ್ (ಶ್ರೇಷ್ಠ ಪಂಚಕರ್ಮ ವೈದ್ಯ 2006), ಮೂಡುಬಿದರೆಯ ಡಾ. ಪ್ರಸನ್ನ ಐತಾಳ್ (ಶ್ರೇಷ್ಠ ಜಾಗತಿಕ ಪಂಚಕರ್ಮ ಶಿಕ್ಷಕ), ಬೆಂಗಳೂರಿನ ಡಾ. ಬಿ.ಎನ್. ಶ್ರೀಧರ್ (ಶ್ರೇಷ್ಠ ಸಂಶೋಧನಾ ಅಧಿಕಾರಿ), ಸುಳ್ಯದ ಡಾ.ಎಚ್. ಗುರುರಾಜ್ (ಶ್ರೇಷ್ಠ ಪಂಚಕರ್ಮ ವೈದ್ಯ 2007). ಇದೇ ಸಂದರ್ಭದಲ್ಲಿ ಡಾ. ಬಿ.ಕೆ. ಶೋಭಾ, ಡಾ. ಬಿ.ಎ. ಲೋಹಿತ್, ಡಾ. ಪಿ.ಕೆ. ಪಂಡ ಅವರು ಅಕಾಡೆಮಿ ಫೆಲೋಶಿಪ್ ಪಡೆದರು.
 
2007: ವಿದ್ಯುನ್ಮಾನ ಸರಕು ಅಭಿವೃದ್ಧಿ, ತಯಾರಿಕೆ ಮತ್ತು ಮಾರಾಟದ ಜಾಗತಿಕ ಸಂಸ್ಥೆ ಕೂಕ್ಸನ್ ಎಲೆಕ್ಟ್ರಾನಿಕ್ಸ್, ಬೆಂಗಳೂರಿನಲ್ಲಿ ತನ್ನ ಹೊಸ ಸಂಶೋಧನಾ ಕೇಂದ್ರ ಆರಂಭಿಸಿತು.

2006: ಮರೆಯಾಗಿ ಹೋಗುತ್ತಿರುವ ಸಾಂಪ್ರದಾಯಿಕ `ಎಂಬ್ರಾಯಿಡರಿ ಕಲೆ'ಗೊಂದು ಪುಟ್ಟ ಉದ್ಯಮದ ರೂಪ ಕೊಟ್ಟು ಅಂತಾರಾಷ್ಟ್ರೀಯ ಗಮನ ಸೆಳೆದ ಗುಜರಾತಿನ ಕಛ್ ನ 73ರ ಹರೆಯದ ಗೃಹಿಣಿ ಚಂದಾ ಶ್ರಾಫ್ ಅವರು 1ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ `ರೋಲೆಕ್ಸ್ ಅವಾರ್ಡ್ ಫಾರ್ ಎಂಟರ್ ಪ್ರೈಸ್' ಗೆ ಆಯ್ಕೆಯಾದರು.. ಈಕೆ ಈ ಪ್ರಶಸ್ತಿ ಪಡೆದ ಮೊತ್ತ ಮೊದಲ ಭಾರತೀಯ ಪ್ರಜೆ. 117 ದೇಶಗಳ ಸುಮಾರು 1700 ಅಭ್ಯರ್ಥಿಗಳ ಪೈಕಿ ಪ್ರಶಸ್ತಿಗೆ ಆಯ್ಕೆಯಾದ ಐವರಲ್ಲಿ ಚಂದಾ ಒಬ್ಬರು.  ಭುಜ್ ನ ವಾಸಿಯಾಗಿರುವ ಈಕೆ ಕಛ್ ನಲ್ಲಿ ಸೃಜನ್ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದನ್ನು ನಡೆಸುತ್ತಾ ಕಳೆದ 38 ವರ್ಷಗಳಿಂದ ಗ್ರಾಮೀಣ ಮಹಿಳೆಯರಿಗೆ ಕಲಿಸುವ ಮುಖಾಂತರ ಅಳಿದು ಹೋಗುತ್ತಿರುವ ಎಂಬ್ರಾಯಿಡರಿ ಕಲೆಗಳನ್ನು ಉಳಿಸುವ ಮಹತ್ವದ ಕಾರ್ಯ ಮಾಡಿದ್ದಾರೆ. `ಎಂಬ್ರಾಯಿಡರಿ ಉತ್ಪನ್ನ ತಯಾರಿ' ಬಗ್ಗೆ ವಿಶೇಷ ಡಿಪ್ಲೋಮಾ ಪದವಿ ಪಡೆದಿರುವ ಚಂದಾ ಶ್ರಾಫ್ ಅವರು ಎಂಬ್ರಾಯಿಡರಿ ಉತ್ಪನ್ನಗಳ ತಯಾರಿಗೆ ಉದ್ಯಮದ ರೂಪ ಕೊಡುವುದಕ್ಕಾಗಿ ಗ್ರಾಮೀಣ ಮಹಿಳೆಯರನ್ನೊಳಗೊಂಡ ಪುಟ್ಟ ಸ್ವಸಹಾಯ ಗುಂಪುಗಳನ್ನು ಹುಟ್ಟು ಹಾಕಿ, ಉತ್ಪನ್ನಗಳನ್ನು ವಿವಿಧೆಡೆಗೆ ಕೊಂಡೊಯ್ದು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡಿದ್ದಾರೆ. ಈಗ ಈ ಉತ್ಪನ್ನಗಳು ದೇಶ ವಿದೇಶಗಳಲ್ಲೂ ಪ್ರಸಿದ್ಧಿಗೆ ಬರುತ್ತಿದ್ದು, ಕಛ್ ಸುತ್ತಮುತ್ತಲಿನ 120 ಗ್ರಾಮದ ಸುಮಾರು 22,000 ಗ್ರಾಮೀಣ ಮಹಿಳೆಯರಿಗೆ ಅನುಕೂಲವಾಗಿದೆ.

2006: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಇಂಡೋನೇಷ್ಯದ ಉತ್ತರ ಸುಮಾತ್ರ ಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5ರಷ್ಟು ಇತ್ತು.

2006: ಬೆಂಗಳೂರಿನಲ್ಲಿ ಪಾಸುದಾರರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರಿನ 10 ಮಾರ್ಗಗಳಲ್ಲಿ ಹಸಿರು ಬಣ್ಣದ `ಪಾಸುದಾರರ ಬಸ್ಸು ಸೇವೆ' ಆರಂಭಿಸಿತು.

2006: ಭಾರತೀಯ ಗೋವು ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆ ಸಲುವಾಗಿ 2007ರ ಏಪ್ರಿಲ್ 21ರಿಂದ 29ರವರೆಗೆ ಹೊಸನಗರದಲ್ಲಿ ಒಂಬತ್ತು ದಿನಗಳ ವಿಶ್ವ ಗೋ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಬೆಂಗಳೂರಿನಲ್ಲಿ ಪ್ರಕಟಿಸಿದರು. ಗೋವು ಎಂದರೆ ಬರೀ ಹಾಲು ಮಾತ್ರ ಅಲ್ಲ, ಗೋವಿನ ಮೂತ್ರಕ್ಕೆ 80 ರೂಪಾಯಿ ಬೆಲೆ ಇದೆ. ಈ ಹಿನ್ನೆಲೆಯಲ್ಲಿ ಗೋವುಗಳು ಹೇಗೆ ಆರ್ಥಿಕವಾಗಿ ಲಾಭ ತರಬಲ್ಲವು ಎಂಬ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಲು ಮತ್ತು ಗೋವಿನಿಂದ ಲಭಿಸುವ ವಿವಿಧ ಉತ್ಪನ್ನಗಳ ಬಗ್ಗೆ ಸಂಶೋಧನಾ ಮಾಹಿತಿ ಸಂಗ್ರಹಿಸುವ ಸಲುವಾಗಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

1955: ಹಿಚಿ. ಬೋರಲಿಂಗಯ್ಯ ಜನನ.

1950: ಸಾಹಿತಿ ಪರಿಮಳಾಬಾಯಿ ಜನನ.

1949: ಸಾಹಿತಿ ಭಾಷ್ಯಂ ತನುಜೆ ಜನನ.

1944: ಅಮೆರಿಕದ ಮೂರನೇ ಮತ್ತು ಏಳನೇ ನೌಕಾಪಡೆಗಳು ದ್ವಿತೀಯ ಜಾಗತಿಕ ಸಮರಕಾಲದಲ್ಲಿ ನಡೆದ ಗಲ್ಫ್ ಯುದ್ಧದಲ್ಲಿ ಜಪಾನಿನ ಮುಖ್ಯ ನೌಕಾಪಡೆಯನ್ನು ಸೋಲಿಸಿದವು. ಇದರೊಂದಿಗೆ ಜಪಾನಿನ ಸಮುದ್ರ ಶಕ್ತಿ ಪತನಗೊಂಡಿತು.

1943: ಲೇಖಕ ಪ್ರಕಾಶಕ ಅನಂತರಾಮು ಅವರು ಎನ್. ಎಸ್. ಕೃಷ್ಣಪ್ಪ- ಸುಬ್ಬಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗಾವಡಗೆರೆ ಗ್ರಾಮದಲ್ಲಿ ಜನಿಸಿದರು.

1930: ಸಾಹಿತಿ ಡಿ.ಎಂ. ನಂಜುಂಡಪ್ಪ ಜನನ.

1883: ಭಾರತದ ಖ್ಯಾತ ಭೂಗರ್ಭ ತಜ್ಞ ದಾರಾಶಾ ನೊಶೆರ್ ವಾನ್ ವಾಡಿಯಾ (1883-1969) ಜನ್ಮದಿನ. 1957ರಲ್ಲಿ ಇವರು ಫೆಲೋ ಆಫ್ ರಾಯಲ್ ಸೊಸೈಟಿ ಗೌರವಕ್ಕೆ ಆಯ್ಕೆಯಾದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1881: ಪಾಬ್ಲೊ ಪಿಕಾಸೊ (1881-1973) ಜನ್ಮದಿನ. ಸ್ಪೇನಿನ ವರ್ಣಚಿತ್ರಗಾರ, ಶಿಲ್ಪಿ, ರಂಗಸ್ಥಳ ವಿನ್ಯಾಸಕಾರನಾದ ಈತ 20ನೇ ಶತಮಾನದ ಪ್ರಮುಖ ಕಲಾವಿದರಲ್ಲಿ ಒಬ್ಬನೆಂದು ಖ್ಯಾತಿ ಗಳಿಸಿದ ವ್ಯಕ್ತಿ.
 
1839: ಬ್ರಾಡ್ ಶಾ ಅವರ `ರೈಲ್ವೇ ಕಂಪಾನಿಯನ್' ಮೊತ್ತ ಮೊದಲ ಪ್ರಕಟಿತ ರೈಲ್ವೇ ಟೈಮ್-ಟೇಬಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದು ಮ್ಯಾಂಚೆಸ್ಟರಿನಲ್ಲಿ ಪ್ರಕಟಗೊಂಡಿತು.

1825: ಎರೀ ಕಾಲುವೆ ಸಂಚಾರಕ್ಕೆ ಮುಕ್ತವಾಯಿತು. ಅದು ನ್ಯೂಯಾರ್ಕಿನ ಗ್ರೇಟ್ ಲೇಕ್ಸ್ ನ್ನು ಹಡ್ಸನ್ ನದಿಯ ಮುಖಾಂತರವಾಗಿ ಸಂಪರ್ಕಿಸಿತು. ಅದರ ಉದ್ದ 365 ಮೈಲುಗಳು, ಅಗಲ 40 ಅಡಿಗಳು ಮತ್ತು ಆಳ 1.2 ಮೀಟರುಗಳು.

1605: ಮೊಘಲ್ ಚಕ್ರವರ್ತಿಗಳ ಪೈಕಿ ಅತ್ಯಂತ ಹೆಚ್ಚು ಖ್ಯಾತಿ ಪಡೆದ ಅಕ್ಬರ್ ಆಗ್ರಾದಲ್ಲಿ ತನ್ನ 63ನೇ ವಯಸ್ಸಿನಲ್ಲಿ ಮೃತನಾದ. ಆಗ್ರಾ ಬಳಿಯ ಸಿಕಂದ್ರಾದಲ್ಲಿ ಆತನ ಅಂತ್ಯಕ್ರಿಯೆ ನೆರವೇರಿಸಲಾಯಿತು. 1691ರಲ್ಲಿ ಜಾಟರು ಸಮಾಧಿಯನ್ನು ಹಾನಿ ಪಡಿಸಿ ಎಲುಬುಗಳನ್ನು ಸುಟ್ಟು ಹಾಕಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Advertisement