My Blog List

Tuesday, March 30, 2010

ಇಂದಿನ ಇತಿಹಾಸ History Today ಮಾರ್ಚ್ 30

ಇಂದಿನ ಇತಿಹಾಸ

ಮಾರ್ಚ್ 30

ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿ ವೇಳೆ ಸಿಕ್ಕಿಬಿದ್ದ ಏಕೈಕ ಉಗ್ರ ಮಹಮ್ಮದ್ ಅಜ್ಮಲ್ ಅಮಿರ್ ಕಸಾಬ್ ಪರವಾಗಿ ವಾದಿಸಲು ವಿಶೇಷ ಸೆಷನ್ಸ್ ನ್ಯಾಯಾಲಯವು ಮಹಾರಾಷ್ಟ್ರ ಕಾನೂನು ನೆರವು ಘಟಕದ ವಕೀಲರೊಬ್ಬರನ್ನು ನೇಮಿಸಿ, ಏಪ್ರಿಲ್ 6ರಿಂದ ವಿಚಾರಣೆ ಆರಂಭವಾಗುವುದು ಎಂದು ಹೇಳಿತು. ನ್ಯಾಯಾಧೀಶ ಎಂ. ಎಲ್. ತಹಿಲ್‌ಯಾನಿ ಅವರು ಕಸಾಬ್ ಪರ ವಕಾಲತ್ತು ನಡೆಸಲು ಮಹಾರಾಷ್ಟ್ರ ಸೇವಾ ಕಾನೂನು ಪ್ರಾಧಿಕಾರದ ಅಂಜಲಿ ವಾಗ್ಮಾರೆ ಅವರನ್ನು ನೇಮಿಸಿದರು.

2009: ಪಾಕಿಸ್ಥಾನದ ವಾಘಾ ಗಡಿ ಪ್ರದೇಶದಲ್ಲಿರುವ ಮನಾವನ್ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಶಸ್ತ್ರಸಜ್ಜಿತ ಉಗ್ರಗಾಮಿಗಳು ನಡೆಸಿದ ಭೀಕರ ದಾಳಿಯಲ್ಲಿ ಹನ್ನೊಂದು ಅಧಿಕಾರಿಗಳು ಸೇರಿ 27 ಪೊಲೀಸರು, ಎಂಟು ಉಗ್ರರ ಸಹಿತ ಒಟ್ಟು 35 ಜನ ಹತರಾಗಿ, 100ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡರು. ಕಾದಾಟದ ವೇಳೆ ನಾಲ್ವರು ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾದರೆ ಇತರೆ ನಾಲ್ವರು ತಮ್ಮನ್ನು ತಾವೇ ಸ್ಫೋಟಿಸಿಕೊಂಡು ಸಾವನ್ನಪ್ಪಿದರು. ಆರು ಉಗ್ರರನ್ನು ಜೀವಂತ ಸೆರೆ ಹಿಡಿಯುವಲ್ಲಿ ಸೇನಾ ಪಡೆ ಯಶಸ್ವಿಯಾಯಿತು. ಹಲವರನ್ನು ಒತ್ತೆಯಾಳಾಗಿ ಇರಿಸಿಕೊಂಡು ಮಧ್ಯಾಹ್ನದವರೆಗೂ ಕಾದಾಟ ನಡೆಸಿದ ಉಗ್ರರು ಇಡೀ ಪ್ರದೇಶವನ್ನು ಅಕ್ಷರಶಃ ರಣಾಂಗಣವನ್ನಾಗಿ ಪರಿವರ್ತಿಸಿ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಬೆಳಗಿನ 7ಗಂಟೆ ವೇಳೆ ನಿತ್ಯದ ಕವಾಯತು ನಡೆಸಲು ತಯಾರಾಗುತ್ತಿದ್ದ ಪೊಲೀಸರ ಮೇಲೆ 10ರಿಂದ 16 ಜನರಿದ್ದ ಉಗ್ರಗಾಮಿಗಳ ಗುಂಪು ದಿಢೀರ್ ದಾಳಿ ನಡೆಸಿತು. ಇವರು ಮೊದಲಿಗೆ ತರಬೇತಿ ಕೇಂದ್ರದ ಮುಖ್ಯ ಬಾಗಿಲಿನಲ್ಲಿದ್ದ ಕಾವಲುಗಾರರನ್ನು ಕೊಂದು ಹಾಕಿದರು. ಈ ಸಮಯದಲ್ಲಿ ಕೆಲವರನ್ನು ಒತ್ತೆಯಾಗಳುಗಳನ್ನಾಗಿ ಇರಿಸಿಕೊಂಡು ಒಳನುಗ್ಗುವ ಮೂಲಕ ಬೀಭತ್ಸ ಹತ್ಯಾಕಾಂಡಕ್ಕೆ ಮುನ್ನುಡಿ ಬರೆದರು.

2009: ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳು ಪುನಃ ಕನ್ನಡಿಗರ ತೆಕ್ಕೆಗೆ ಬಿದ್ದವು. ಈದಿನ ನಡೆದ ಚುನಾವಣೆಯಲ್ಲಿ ಮಹಾಪೌರರಾಗಿ ಯಲ್ಲಪ್ಪ ಕುರ್ಗರ ಹಾಗೂ ಉಪಮಹಾಪೌರರಾಗಿ ಜ್ಯೋತಿ ಭಾವಿಕಟ್ಟಿ ಆಯ್ಕೆಯಾದರು. ಇದರಿಂದಾಗಿ ಪಾಲಿಕೆ ಮೇಲೆ ಪುನಃ ಹಿಡಿತ ಸಾಧಿಸಲು ಯತ್ನಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂಇಎಸ್) ಮುಖಭಂಗವಾದಂತಾಯಿತು.. ಪಾಲಿಕೆ ಆಡಳಿತ ಹೊಸ ಕಟ್ಟಡಕ್ಕೆ ಸ್ಥಳಾಂತರವಾದ ನಂತರ ನಡೆದ ಮೊದಲ ಚುನಾವಣೆಯಲ್ಲಿ 57ನೇ ವಾರ್ಡಿನ ಯಲ್ಲಪ್ಪ 34 ಮತ ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಎಂ.ಇ.ಎಸ್. ಬೆಂಬಲಿತ ಧನರಾಜ ಗವಳಿ ಅವರನ್ನು 8 ಮತಗಳ ಅಂತರದಿಂದ ಮಣಿಸಿದರು. ಮೇಯರ್ ಸ್ಥಾನ ಹಿಂದುಳಿದ 'ಎ' ವರ್ಗಕ್ಕೆ ಮೀಸಲಾಗಿತ್ತು.

2009: ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿ ವೇಳೆ ಸಿಕ್ಕಿಬಿದ್ದ ಏಕೈಕ ಉಗ್ರ ಮಹಮ್ಮದ್ ಅಜ್ಮಲ್ ಅಮಿರ್ ಕಸಾಬ್ ಪರವಾಗಿ ವಾದಿಸಲು ವಿಶೇಷ ಸೆಷನ್ಸ್ ನ್ಯಾಯಾಲಯವು ಮಹಾರಾಷ್ಟ್ರ ಕಾನೂನು ನೆರವು ಘಟಕದ ವಕೀಲರೊಬ್ಬರನ್ನು ನೇಮಿಸಿ, ಏಪ್ರಿಲ್ 6ರಿಂದ ವಿಚಾರಣೆ ಆರಂಭವಾಗುವುದು ಎಂದು ಹೇಳಿತು. ನ್ಯಾಯಾಧೀಶ ಎಂ. ಎಲ್. ತಹಿಲ್‌ಯಾನಿ ಅವರು ಕಸಾಬ್ ಪರ ವಕಾಲತ್ತು ನಡೆಸಲು ಮಹಾರಾಷ್ಟ್ರ ಸೇವಾ ಕಾನೂನು ಪ್ರಾಧಿಕಾರದ ಅಂಜಲಿ ವಾಗ್ಮಾರೆ ಅವರನ್ನು ನೇಮಿಸಿದರು.

2009: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಬಯಸುವರಿಗೆ ಸಮರ್ಪಕ ಮಾಹಿತಿ ನೀಡಲು ನಿರಾಕರಿಸಿದರೆ ಅವರಿಗೆ ದಂಡ ವಿಧಿಸಬಹುದಾಗಿ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ ) ತಿಳಿಸಿತು. ಮಾಹಿತಿ ನೀಡಬೇಕೆಂಬುದು ಸಿಐಸಿ ಉದ್ದೇಶ. ಈ ಸಂಬಂಧ ಹೊರಡಿಸಲಾದ ಆದೇಶವನ್ನು ಉಲ್ಲಂಘಿಸುವ ಸರ್ಕಾರಿ ಸಂಸ್ಥೆಗಳಿಗೆ 20 ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದು. ಸಿಐಸಿ ಆದೇಶ ಉಲ್ಲಂಘಿಸಿದರೆ, ಮಾಹಿತಿಗೆ ಅಡ್ಡಿಪಡಿಸಲಾಗಿದೆ ಎಂದು ಪರಿಗಣಿಸಿ 25 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಮಾಹಿತಿ ಆಯೋಗದ ಮುಖ್ಯಸ್ಥರು ತಿಳಿಸಿದರು.

2009: ಸೌರವ್ ಗಂಗೂಲಿಗೆ ಆರಂಭದ ದಿನಗಳಲ್ಲಿ ಕ್ರಿಕೆಟ್ ಪಾಠವನ್ನು ಹೇಳಿಕೊಟ್ಟಿದ್ದ ಕೋಚ್ ಬುದ್ಧದೇವ ಬ್ಯಾನರ್ಜಿ (63) ಅವರು ಈದಿನ ಕೋಲ್ಕತದಲ್ಲಿ ನಿಧನರಾದರು. ಕೋಲ್ಕತ ನೈಟ್ ರೈಡರ್ಸ್ ತಂಡದಲ್ಲಿದ್ದ 'ದಾದಾ' ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಅಭ್ಯಾಸ ಮುಗಿಸಿ ಹೊರಬರುತ್ತಿದ್ದಂತೆಯೇ ಅವರಿಗೆ ಬ್ಯಾನರ್ಜಿ ಮೃತರಾದ ಸುದ್ದಿ ತಿಳಿಯಿತು. ತತ್ ಕ್ಷಣ ಅವರು ತಮ್ಮ ಮೊದಲ ಕ್ರಿಕೆಟ್ ಕೋಚ್ ಪಾರ್ಥಿವ ಶರೀರದ ದರ್ಶನ ಪಡೆಯಲು ಧಾವಿಸಿದರು. 'ಚಿಕ್ಕವನಾಗಿದ್ದಾಗ ನನಗೆ ಕ್ರಿಕೆಟ್‌ನ ಮೂಲ ಪಾಠವನ್ನು ಕಲಿಸಿಕೊಟ್ಟ ಅವರನ್ನು ಸದಾ ಸ್ಮರಿಸುತ್ತೇನೆ' ಎಂದು ಗಂಗೂಲಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದರು.

2009: ಶ್ರೀಲಂಕಾದ ಈಶಾನ್ಯ ಭಾಗದ ಮುಲ್ಲೈತೀವು ಕರಾವಳಿಯಲ್ಲಿ ಈದಿನ ಮುಂಜಾನೆ ಎಲ್‌ಟಿಟಿಇ ಮತ್ತು ಲಂಕಾ ಸೇನೆ ನಡುವೆ ನಡೆದ ಕಾಳಗದಲ್ಲಿ ಕನಿಷ್ಠ 47 ಜನರು ಮೃತರಾದರು. ಎಲ್‌ಟಿಟಿಇ ನೌಕಾ ಮುಖ್ಯಸ್ಥ ಮಾರನ್ ಸೇರಿದಂತೆ 26 ಎಲ್‌ಟಿಟಿಇ ಉಗ್ರರು ಕೊನೆಯುಸಿರೆಳೆದರು. ಇದಲ್ಲದೆ ಎಲ್‌ಟಿಟಿಇಗೆ ಸೇರಿದ ನಾಲ್ಕು ದೋಣಿಗಳನ್ನು ಸೇನೆ ನಾಶಪಡಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿತು.

2008: ಅನಾರೋಗ್ಯದಿಂದ ಢಾಕಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಂಗ್ಲಾ ದೇಶದ ಬಂಧಿತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಿಗಿ ಭದ್ರತೆ ನಡುವೆ ಪಾರ್ಲಿಮೆಂಟ್ ಭವನದ ತಾತ್ಕಾಲಿಕ ಕಾರಾಗೃಹಕ್ಕೆ ವಾಪಸ್ ಕಳುಹಿಸಲಾಯಿತು. ಇದಕ್ಕೂ ಮುನ್ನ ಅವರನ್ನು ಸುಲಿಗೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

2008: ಚೀನಾದ ಹುನಾನ್ ಪ್ರಾಂತ್ಯದಲ್ಲಿ ವ್ಯಾನೊಂದಕ್ಕೆ ಡಿಕ್ಕಿ ಹೊಡೆದ ಬಸ್ಸು ಬಳಿಕ 15 ಮೀಟರ್ ಆಳದ ನದಿಗೆ ಉರುಳಿ ಬಿದ್ದ ಪರಿಣಾಮವಾಗಿ 13 ಮಂದಿ ಪ್ರಯಾಣಿಕರು ಸಾವನ್ನಪ್ಪಿ, ಇತರ 10 ಮಂದಿ ಗಾಯಗೊಂಡರು.

2008: ಹಾವು ಕಚ್ಚಿ ಮನುಷ್ಯ ಸಾಯುವುದು ಸಹಜ. ಆದರೆ ಪಶ್ಚಿಮ ಬಂಗಾಳದ ಬರ್ದ್ವಾನಿನಲ್ಲಿ ವಿಷಪೂರಿತ ನಾಗರ ಹಾವನ್ನು ವ್ಯಕ್ತಿಯೊಬ್ಬ ಕಚ್ಚಿ ಎರಡು ಭಾಗ ಮಾಡಿ ಸಾಯಿಸಿದ ಘಟನೆ ನಡೆಯಿತು. ಕ್ಯಾಂಟೀನಿನಲ್ಲಿ ಕೆಲಸ ಮಾಡುತ್ತಿದ್ದ ಸುಭಾಶ್ ಬ್ಯಾನರ್ಜಿ ಎಕ್ರಾ ಗ್ರಾಮದ ತಮ್ಮ ಮನೆಗೆ ಕುಡಿದು ಹೋಗುತ್ತಿದ್ದಾಗ ಹಾವೊಂದರ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದರು. ಬ್ಯಾನರ್ಜಿ ಹಾವನ್ನು ಕಂಡು ಅದನ್ನು ಕೋಲಿನಿಂದ ಹೊಡೆದ. ಅದು ಇನ್ನೂ ಬದುಕಿರುವುದನ್ನು ನೋಡಿ ಬಾಯಿಯಿಂದ ಕಚ್ಚಿ ಎರಡು ತುಂಡು ಮಾಡಿದ್ದರಿಂದ ಹಾವು ಸತ್ತು ಹೋಯಿತು. ಘಟನೆಯ ನಂತರ ಜ್ಞಾನ ತಪ್ಪಿ ಬಿದ್ದ ಬ್ಯಾನರ್ಜಿಯನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದರು. ಆತನು ನಂತರ ಚೇತರಿಸಿಕೊಂಡ.

2008: ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್. ಕೆ. ಆಡ್ವಾಣಿ `ಆತ್ಮಚರಿತ್ರೆ' ಬಿಡುಗಡೆಯಾಗಿ ಸುದ್ದಿಯಾದ ಬೆನ್ನಲ್ಲೇ ಎನ್ ಡಿ ಎ ಸಂಚಾಲಕ, ಜಾರ್ಜ್ ಫರ್ನಾಂಡಿಸ್ ಆತ್ಮಚರಿತ್ರೆ ಬರೆಯಲು ನಿರ್ಧರಿಸಿರುವುದನ್ನು ಬಹಿರಂಗ ಪಡಿಸಿದರು. `ಈ ಆತ್ಮಚರಿತ್ರೆ ಆರು ವರ್ಷಗಳ ವಾಜಪೇಯಿ ನಾಯಕತ್ವದ ಎನ್ ಡಿ ಎ ಸರ್ಕಾರದಲ್ಲಿ ತಾವು ಸಲ್ಲಿಸಿದ ಸೇವೆಯನ್ನು ಪ್ರಾಮಾಣಿಕವಾಗಿ ತೆರೆದಿಡುತ್ತದೆ' ಎಂದು ಜಾರ್ಜ್ ಹೇಳಿದರು. `ಈ ಪುಸ್ತಕದಲ್ಲಿ ಹಲವು ವ್ಯಕ್ತಿಗಳ ಬಣ್ಣ ಬಯಲಿಗೆಳೆಯುವೆ' ಎಂದು ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

2008: ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಹಿತಿಗಳಾದ ಪಂಡಿತ್ ಸುಧಾಕರ ಚತುರ್ವೇದಿ, ಡಾ. ಬಸವರಾಜ ಪುರಾಣಿಕ, ಗುರುಮೂರ್ತಿ ಪೆಂಡಕೂರು, ಡಾ. ಬಿ.ನಂ.ಚಂದ್ರಯ್ಯ ಮತ್ತು ಡಾ. ಸರಜೂ ಕಾಟ್ಕರ್ ಅವರಿಗೆ 2007ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆ.ಎಂ.ಸೀತಾರಾಮಯ್ಯ, ಈಶ್ವರಂದ್ರ, ಸ್ನೇಹಲತಾ ರೋಹಿಡೇಕರ್, ಹಸನ್ ನಯೀಂ ಸುರಕೋಡ ಮತ್ತು ಕೆ.ವೆಂಕಟರಾಜು ಅವರಿಗೆ 2006ನೇ ಸಾಲಿನ ಪುಸ್ತಕ ಬಹುಮಾನ ನೀಡಲಾಯಿತು.

2008: ಬೆಂಗಳೂರು ನಗರದ ಪ್ರಮುಖ ಬಡಾವಣೆಗಳಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಬಿಎಂಟಿಸಿ ಆರಂಭಿಸಿದ `ವಾಯು ವಜ್ರ' ಬಸ್ ಸೇವೆಗೆ ಚಾಲನೆ ದೊರೆಯಿತು. ನಗರದ ಒಳಭಾಗದಲ್ಲಿ ದಟ್ಟಣೆ ಅವಧಿಯಲ್ಲಿ ಸಂಚರಿಸಲಿರುವ ವಿಶೇಷ `ಸುವರ್ಣ ಪೀಕ್ ಅವರ್' ಬಸ್ ಸೇವೆಯೂ ಆರಂಭವಾಯಿತು.
ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರ ಸಲಹೆಗಾರ ಪಿ.ಕೆ.ಎಚ್. ತರಕನ್ ಹಸಿರು ನಿಶಾನೆ ತೋರುವ ಮೂಲಕ `ವಾಯು ವಜ್ರ' ಸೇವೆಯನ್ನು ಉದ್ಘಾಟಿಸಿದರು. ನಗರ ಪೊಲೀಸ್ ಕಮಿಷನರ್ ಎನ್. ಅಚ್ಯುತರಾವ್ `ಪೀಕ್ ಅವರ್ ಸೇವೆ'ಗೆ ಚಾಲನೆ ನೀಡಿದರು.

2008: ಖ್ಯಾತ ಮಲಯಾಳಿ ಕವಿ ಕದಮ್ಮನಿಟ್ಟ ರಾಮಕೃಷ್ಣನ್ (73) ಅವರು ತಿರುವನಂತಪುರದ ಪಟ್ಟಣಂತಿಟ್ಟದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಕೇರಳದ ಮೂಲೆ ಮೂಲೆಗೆ ಸುತ್ತಾಡಿ ಜಾನಪದ ಸೊಗಡಿನೊಂದಿಗೆ ಕವನ ರಚಿಸಿ ಖ್ಯಾತರಾದ ಅವರ ಹಲವು ಕವನ ಜನಸಾಮಾನ್ಯರ ಬಾಯಲ್ಲೂ ಸದಾ ನಲಿದಾಡುತ್ತಿವೆ. ಸಿಪಿಎಂ ಪಕ್ಷದ ವತಿಯಿಂದ ಅವರು 1996ರಲ್ಲಿ ಅರನ್ ಮುಲ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದಿದ್ದರು.

2008: 2007ರ ಸಾಲಿನ ಯಶಸ್ವಿ ಬಾಲಿವುಡ್ ಚಿತ್ರ `ಚಕ್ ದೇ ಇಂಡಿಯಾ', ಮುಂಬೈಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರೊಡ್ಯೂಸರ್ಸ್ ಗಿಲ್ಡಿನ ಸಿಂಹಪಾಲು ಪ್ರಶಸ್ತಿಗಳನ್ನು ಬಾಚಿಕೊಂಡಿತು. `ಚಕ್ ದೇ ಇಂಡಿಯಾ...' ಉತ್ತಮ ಚಿತ್ರ ಪ್ರಶಸ್ತಿ ಜೊತೆಗೆ ಉತ್ತಮ ನಾಯಕ ನಟ ಪ್ರಶಸ್ತಿ (ಶಾರುಖ್ ಖಾನ್), ಉತ್ತಮ ನಿರ್ದೇಶಕ ಪ್ರಶಸ್ತಿ (ಶಮಿತ್ ಅಮಿನ್) ಮತ್ತು ಉತ್ತಮ ಕಥೆ ಮತ್ತು ಚಿತ್ರಕಥೆಗಾಗಿ ಜೈದೀಪ್ ಸಾಹ್ನಿ ಪ್ರಶಸ್ತಿ ಪಡೆದುಕೊಂಡಿತು. ಉತ್ತಮ ನಾಯಕಿ ನಟಿ ಪ್ರಶಸ್ತಿಯನ್ನು `ಜಬ್ ವಿ ಮೆಟ್' ಚಿತ್ರಕ್ಕಾಗಿ ಕರೀನಾ ಕಪೂರ್ ಪಡೆದರು. ಇದೇ ಚಿತ್ರದ ಉತ್ತಮ ಸಂಗೀತಕ್ಕಾಗಿ ಪ್ರೀತಮ್ ಮತ್ತು ಉತ್ತಮ ಸಂಭಾಷಣೆಗಾಗಿ ಅಲಿ ಪ್ರಶಸ್ತಿ ಸ್ವೀಕರಿಸಿದರು. `ಲೈಫ್ ಇನ್ ಮೆಟ್ರೋ' ಚಿತ್ರದಲ್ಲಿನ ಅಭಿನಯಕ್ಕಾಗಿ ಕೊಂಕಣ ಸೇನ್ ಮತ್ತು ಇರ್ಫಾನ್ ಖಾನ್ ಕ್ರಮವಾಗಿ ಉತ್ತಮ ಪೋಷಕ ನಟಿ ಮತ್ತು ನಟ ಪ್ರಶಸ್ತಿ ಪಡೆದರು.

2007: ಲೆಗ್ ಸ್ಪಿನ್ ಬ್ರಹ್ಮಾಸ್ತ್ರದಿಂದ ದಿಗ್ಗಜರನ್ನೇ ಗಿರಕಿ ಹೊಡೆಸಿದ ಮೋಡಿಗಾರ ಕ್ರಿಕೆಟಿಗ ಅನಿಲ್ ಕುಂಬ್ಳೆ (ಜನನ: 17 ಅಕ್ಟೋಬರ್ 1970, ಬೆಂಗಳೂರು) ಅವರು ಏಕದಿನ ಪಂದ್ಯಗಳಿಂದ ನಿವೃತ್ತಿ ಘೋಷಿಸಿದರು. 271 ಪಂದ್ಯಗಳಲ್ಲಿ 337 ವಿಕೆಟ್ ಉರುಳಿಸಿದ ಕುಂಬ್ಳೆ ಕೋಲ್ಕತ್ತಾದಲ್ಲಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ (6/12) ನೀಡಿದ್ದರು. 1990ರಲ್ಲಿ ಶಾರ್ಜಾದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಏಕದಿನ ಪಂದ್ಯಗಳಿಗೆ ಪದಾರ್ಪಣೆೆ ಮಾಡಿದ್ದರು. 2007ರಲ್ಲಿ ಬರ್ಮುಡಾದ ಟ್ರೆನಿಡಾಡಿನಲ್ಲಿ ನಡೆದ ವಿಶ್ವಕಪ್ ಪಂದ್ಯ ಅವರ ಕೊನೆಯ ಪಂದ್ಯವಾಯಿತು.

2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಖ್ಯಾತ ಬೋಸ್ಟನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಬಾಹ್ಯಾಕಾಶದಿಂದಲೇ ಪಾಲ್ಗೊಳ್ಳಲು ಪ್ರವೇಶ ಪಡೆದರು. 338 ಕಿ.ಮೀ. ಎತ್ತರದಲ್ಲಿ ಇರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಮ್ಯಾರಥಾನ್ ಓಟದುದ್ದಕ್ಕೂ ಪಾಲ್ಗೊಳ್ಳಲು ನಿರ್ಧರಿಸಿದ ಅವರು ಈ ರೀತಿ ಬಾನಿನಿಂದ ಸ್ಪರ್ಧಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಭಾಜನರಾಗುವರು.

2007: ಹಿರಿಯ ನಾಟ್ಯ ಕಲಾವಿದೆ ನರ್ಮದಾ (65) ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಖ್ಯಾತ ನೃತ್ಯ ಪಟುಗಳಾದ ನಿರುಪಮಾ ರಾಜೇಂದ್ರ, ಮಂಜು ಭಾರ್ಗವಿ, ಲಕ್ಷ್ಮೀ ಗೋಪಾಲ ಸ್ವಾಮಿ, ಅನುರಾಧಾ ವಿಕ್ರಾಂತ್ ಮತ್ತಿತರ ಕಲಾವಿದರಿಗೆ ನರ್ಮದಾ ಗುರುವಾಗಿದ್ದರು. 25 ವರ್ಷಗಳ ಕಾಲ ನಾಟ್ಯಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದ ಅವರಿಗೆ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಸರ್ಕಾರದ ಶಾಂತಲಾ, ರಾಜ್ಯೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿದ್ದವು. 1978ರಲ್ಲಿ ಅವರು ಶಕುಂತಲಾ ನೃತ್ಯಾಲಯ ಕಲಾಶಾಲೆ ಆರಂಭಿಸಿದ್ದರು.

2007: ಹೆಸರಾಂತ ಬಂಗಾಳಿ ಲೇಖಕಿ ಖ್ಯಾತ ಕಾದಂಬರಿಗಾರ್ತಿ ಮಹಾಶ್ವೇತಾದೇವಿ ಅವರು ಸಾರ್ಕ್ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾದರು.

2007: ಬಂಗಾಳಕೊಲ್ಲಿಯ ಪಾರಾದೀಪ್ ಬಂದರಿನ ಸಮೀಪ ಲಂಗರು ಹಾಕಿದ್ದ ನೌಕಾದಳದ ಹಡಗಿನಿಂದ 150 ಕಿ.ಮೀ. ದೂರಕ್ಕೆ ಸಾಗುವ ಸಾಮರ್ಥ್ಯವುಳ್ಳ, ಹಡಗಿನಿಂದ ಹಡಗಿಗೆ ಗುರಿ ಇಡಬಹುದಾದ ದೇಶೀ ತಂತ್ರಜ್ಞಾನ ಬಳಸಿ ನಿರ್ಮಿಸಲಾದ `ಧನುಷ್' ಕ್ಷಿಪಣಿಯ ಪರೀಕ್ಷಾ ಪ್ರಯೋಗವನ್ನು ಭಾರತ ನಡೆಸಿತು. ವಿಮಾನದಿಂದ ವಿಮಾನಕ್ಕೆ ಗುರಿ ಇಡಬಹುದಾದ ಅಲ್ಪ ದೂರ ಹಾರಬಲ್ಲ `ಅಸ್ತ್ರ' ಕ್ಷಿಪಣಿಯ ಪರೀಕ್ಷಾ ಪ್ರಯೋಗವನ್ನು ಭಾರತ ಮಾರ್ಚ್ 29ರಂದು ಯಶಸ್ವಿಯಾಗಿ ನಡೆಸಿತ್ತು. ಭೂ ಮೇಲ್ಮೈಯಿಂದ ಮೇಲ್ಮೈಗೆ ಗುರಿ ಇಡಲು ಸಾಧ್ಯವಿರುವ `ಪೃಥ್ವಿ' ಕ್ಷಿಪಣಿಯ ನೌಕಾದಳ ಆವೃತ್ತಿಯಾದ 8.56 ಮೀಟರ್ ಉದ್ದದ `ಧನುಷ್' ಕ್ಷಿಪಣಿಯನ್ನು ನೌಕಾದಳದ ಹಡಗಿನಿಂದ ಮಧ್ಯಾಹ್ನ 2.30 ಗಂಟೆಗೆ ಹಾರಿಸಲಾಯಿತು. ಈಗಾಗಲೇ ರಕ್ಷಣಾ ಪಡೆಗೆ ಸೇರ್ಪಡೆ ಮಾಡಲಾಗಿರುವ ಈ ಕ್ಷಿಪಣಿಯು, ಹಡಗಿನಿಂದ ಕ್ಷಿಪಣಿ ಉಡಾಯಿಸುವ ಸಾಮರ್ಥ್ಯ ಉಳ್ಳ ರಾಷ್ಟ್ರಗಳ ಸಾಲಿಗೆ ಭಾರತ ಸೇರುವಂತೆ ಮಾಡಿತು. ಧನುಷ್ ಕ್ಷಿಪಣಿಯು 750 ಕಿಲೋಗ್ರಾಂವರೆಗಿನ ತೂಕದ ಸಿಡಿತಲೆಯನ್ನು 150 ಕಿಮೀ. ದೂರ ಒಯ್ಯುವ ಸಾಮರ್ಥ್ಯ ಹೊಂದಿದೆ. ಆದರೆ ಸಿಡಿತಲೆ ಇನ್ನಷ್ಟು ಹಗುರವಾಗಿದ್ದರೆ ಅದು 500 ಕಿ.ಮೀ. ದೂರ ಕೂಡಾ ಕ್ರಮಿಸಬಲ್ಲುದು.

2007: ಸರಣಿ ಬಾಂಬ್ ಸ್ಫೋಟಿಸಿ ಇಬ್ಬರು ನ್ಯಾಯಾಧೀಶರ ಸಾವಿಗೆ ಕಾರಣವಾಗಿದ್ದ ಆರು ಮಂದಿ ಜಮಾತ್- ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಬಿಎಂ) ಉಗ್ರರನ್ನು ಗಲ್ಲಿಗೆ ಏರಿಸಲಾಯಿತು.

2006: ಖ್ಯಾತ ಹಿಂದಿ ಸಾಹಿತಿ, ಹಿರಿಯ ಪತ್ರಕರ್ತ ಮನೋಹರ್ ಶ್ಯಾಮ್ ಜೋ (73) ಈದಿನ ನಿಧನರಾದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕತರಾದ ಜೋ `ಹಿಂದೂಸ್ಥಾನ್' ಹಿಂದಿ ವಾರಪತ್ರಿಕೆಯ ಸಂಪಾದಕರಾಗಿದ್ದರು. 'ಹಮ್ ಲೋಗ್' ಸೇರಿದಂತೆ ಅನೇಕ ಪ್ರಸಿದ್ಧ ಧಾರಾವಾಹಿಗಳನ್ನು ಅವರು ಬರೆದಿದ್ದರು.

2006: ಪ್ರವಾಸಿ ಐಷಾರಾಮಿ ದೋಣಿ ಮಗುಚಿದ ಪರಿಣಾಮವಾಗಿ ಅದರಲ್ಲಿದ್ದ 137 ಜನರ ಪೈಕಿ 57 ಜನ ನೀರಿನಲ್ಲಿ ಮುಳುಗಿ ಮೃತರಾದ ಘಟನೆ ಬಹ್ರೇನಿನಲ್ಲಿ ಘಟಿಸಿತು. ಮೃತರಲ್ಲಿ ಬಹುತೇಕ ಮಂದಿ ಔತಣಕೂಟದಲ್ಲಿಪಾಲ್ಗೊಂಡವರಾಗಿದ್ದು, ಅವರಲ್ಲಿ ಭಾರತೀಯರ ಸಂಖ್ಯೆ 18.

2006: ಹೈಕೋರ್ಟ್ ಪೀಠ ಕಾಮಗಾರಿಗೆ ಏಪ್ರಿಲ್ 11ರಂದು ಭೂಮಿಪೂಜೆ ನೆರವೇರಿಸುವುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ತಮ್ಮ ಅನಿರ್ದಿಷ್ಟ ಅವಧಿಯ ನಿರಶನ ಕೊನೆಗೊಳಿಸಿದರು.

2006: ಲಷ್ಕರ್ ಎ ತೊಯಿಬಾ ಉಗ್ರಗಾಮಿ ಸಂಘಟನೆಗೆ ಸೇರಿದ ಅಬ್ದುಲ್ ರಹಮಾನ್ ಎಂಬ ಉಗ್ರಗಾಮಿಯನ್ನು ಗುಲ್ಬರ್ಗ ಪೊಲೀಸರು ಬಂಧಿಸಿದರು.

1979: ಜೆ. ಆರ್. ಡಿ. ಟಾಟಾ ಅವರಿಗೆ ಅಮೆರಿಕದ ಫ್ಲಾರಿಡಾದಲ್ಲಿ ವಾಣಿಜ್ಯೋದ್ಯಮ ಸಂಸ್ಥೆಯು `ಟೋನಿ ಜಾನುಸ್' ಪ್ರಶಸ್ತಿಯನ್ನು ಪ್ರದಾನ ಮಾಡಿತು. ಟಾಟಾ ಅವರು ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ 17ನೇ ವ್ಯಕ್ತಿಯಾಗಿದ್ದು, ಇದು ಅವರನ್ನು ಜಗತ್ತಿನ ಪ್ರಮುಖ ವಿಮಾನ ಹಾರಾಟಗಾರರ ಗುಂಪಿಗೆ ಸೇರಿಸಿತು.

1966: ಕಲಾವಿದ ರಘು ಎನ್ ಜನನ.

1954: ಕಲಾವಿದ ರೇಖಾ ಸುರೇಶ್ ಜನನ.

1949: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಜೈಪುರದಲ್ಲಿ `ಯೂನಿಯನ್ ಆಫ್ ಗ್ರೇಟರ್ ರಾಜಸ್ಥಾನ'ವನ್ನು ಉದ್ಘಾಟಿಸಿದರು.

1908: ಭಾರತೀಯ ಚಿತ್ರರಂಗದ ಮೊದಲ ಚಿತ್ರನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ದೇವಿಕಾ ರಾಣಿ ರೋರಿಕ್ (1908-1994) ಜನನ. 1920ರಲ್ಲಿ ಲಂಡನ್ನಿಗೆ ತೆರಳಿದ ಇವರು ಅಲ್ಲಿವಾಸ್ತುಶಾಸ್ತ್ರ ಅಧ್ಯಯನ ಮಾಡಿದರು. ಅಲ್ಲಿದ್ದಾಗ ಹಿಮಾಂಶುರಾಯ್ ಅವರ ಮೊದಲ ಚಿತ್ರ (1925) ಲೈಟ್ ಆಫ್ ಏಷ್ಯಾ ಚಿತ್ರದ ಸೆಟ್ ತಯಾರಿಗೆ ನೆರವಾಗಲು ಒಪ್ಪಿದರು. ಅನಂತರ ರಾಯ್ ಅವರು ದ್ವಿಭಾಷಾ ಚಿತ್ರ ಕರ್ಮ (1933) ಚಿತ್ರ ನಿರ್ಮಿಸಿದರು. ಆಗ ಇವರಿಬ್ಬರೂ ಈ ಚಿತ್ರ ನಿರ್ಮಾಣಕ್ಕಾಗಿ ಭಾರತಕ್ಕೆ ಬಂದರು. ಇಬ್ಬರೂ ಸೇರಿ ಬಾಂಬೆ ಟಾಕೀಸ್ ಸ್ಟುಡಿಯೋ ಆರಂಭಿಸಿದರು. 1935ರಲ್ಲಿ ಹಿಂದಿ ಚಲನಚಿತ್ರ ಬಾಂಬೆ ಟಾಕೀಸ್ ಲಿಮಿಟೆಡ್ ಅಡಿಯಲ್ಲಿ ಚಿತ್ರೀಕರಣ ಆರಂಭವಾಯಿತು. ಮುಂದೆ ದೇವಿಕಾರಾಣಿ ಅವರು ಅಶೋಕಕುಮಾರ್ ಜೊತೆಗೆ ಯಶಸ್ವಿ ತಂಡ ಕಟ್ಟಿದರು. `ಅಚುತ್ ಕನ್ಯಾ' ಚಿತ್ರ ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತು. 1943ರವರೆಗೆ ನಟನೆ ಮುಂದುವರೆಸಿದರು. 1940ರಲ್ಲಿ ರಾಯ್ ನಿಧನರಾದರು. ದೇವಿಕಾ ರಾಣಿ ರಷ್ಯನ್ ಕಲಾವಿದ ರೋರಿಕ್ ಅವರನ್ನು ಮದುವೆಯಾಗಿ ಬೆಂಗಳೂರಿನಲ್ಲಿ ಇರುವ ತಾತಗುಣಿ ಎಸ್ಟೇಟಿನಲ್ಲಿ ವಾಸಿಸಿದರು 1970ರಲ್ಲಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತು.

1892: ಖ್ಯಾತ ಪಿಟೀಲು ವಾದಕ ಎ.ಎಸ್. ಶಿವರುದ್ರಪ್ಪ ಅವರು ಆನೇಕಲ್ಲಿನಲ್ಲಿ ಈದಿನ ಜನಿಸಿದರು. ಹುಟ್ಟು ಕುರುಡರಾಗಿದ್ದ ಇವರು ವಿದ್ವಾನ್ ಮುನಿಶಂಕರಪ್ಪ ಅವರಲ್ಲಿ ಸಂಗೀತ ಅಭ್ಯಾಸ ಮಾಡಿ ನಂತರ ಮೈಸೂರಿನ ಕುರುಡ- ಮೂಗರ ಶಾಲೆ ಸೇರಿದರು. ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರ ಗಮನಕ್ಕೆ ಬಂದ ಬಳಿಕ ವಿದ್ವಾಂಸ ಬಿಡಾರಂ ಕೃಷ್ಣಪ್ಪ ಅವರಿಂದ ಸಂಸ್ಕೃತ ಕಲಿಕೆಗೆ ಏರ್ಪಾಟು. ಒಡೆಯರ್ ಆಸ್ಥಾನದಲ್ಲಿ ಫಿಡ್ಲ್ ಬಾಯ್ ಎಂಬುದಾಗಿ ನೇಮಕ. ಮುಂದೆ ಹಾರ್ನ್ ವಯೋಲಿನ್ನಿನಲ್ಲೂ ಅಭ್ಯಾಸ.

1891: ಆರ್ಥರ್ ವಿಲಿಯಂ ಸಿಡ್ನಿ ಹ್ಯಾರಿಂಗ್ಟನ್ (1891-1970) ಹುಟ್ಟಿದ ದಿನ. ಅಮೆರಿಕನ್ ಎಂಜಿನಿಯರ್ ಹಾಗೂ ಉತ್ಪಾದಕನಾದ ಈತ ಹಲವಾರು ಸೇನಾ ವಾಹನಗಳನ್ನು ನಿರ್ಮಿಸಿದ. ಇವುಗಳಲ್ಲಿ ಒಂದು ವಾಹನ ದ್ವಿತೀಯ ಜಾಗತಿಕ ಸಮರ ಜೀಪ್ ಎಂದೇ ಖ್ಯಾತಿ ಪಡೆದಿದೆ.

1856: ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಕ್ರೀಮಿಯನ್ ಯುದ್ಧ ಕೊನೆಗೊಂಡಿತು.

1785: ಹೆನ್ರಿ ಹಾರ್ಡಿಂಗ್ (1785-1856) ಹುಟ್ಟಿದ ದಿನ. ಬ್ರಿಟಿಷ್ ಯೋಧ ಹಾಗೂ ಮುತ್ಸದ್ಧಿಯಾಗಿದ್ದ ಈತ 1844-48ರ ಅವಧಿಯಲ್ಲಿ ಭಾರತದ ಗವರ್ನರ್ ಜನರಲ್ ಹಾಗೂ ಕ್ರೀಮಿಯನ್ ಯುದ್ಧ ಕಾಲದಲ್ಲಿ ಬ್ರಿಟಿಷ್ ಸೇನೆಯ ಕಮಾಂಡರ್ ಇನ್ ಚೀಫ್ ಆಗಿದ್ದ.

1699: ಗುರುಗೋಬಿಂದ್ ಸಿಂಗ್ ಪಂಜಾಬಿನ ಆನಂದಪುರ ಸಮೀಪದ ಕೇಶ್ ಗಢ ಸಾಹಿಬ್ ನಲ್ಲಿ `ಖಾಲ್ಸಾ ಪಂಥ' ಹುಟ್ಟು ಹಾಕಿದರು. ತನ್ನ ಆಯ್ದ ಅನುಯಾಯಿಗಳು ಕೇಶ, ಕಚ್ಛ, ಕರ್ರ, ಕಂಘ ಮತ್ತು ಕೃಪಾಣಗಳನ್ನು ಧರಿಸಬೇಕು ಹಾಗೂ ಹೆಸರಿನ ಜೊತೆಗೆ `ಸಿಂಗ್' (ಸಿಂಹ) ವಿಶೇಷಣವನ್ನು ಸೇರಿಸಬೇಕು ಎಂದು ಅವರು ಸೂಚಿಸಿದರು. `ಗುರುಗ್ರಂಥ ಸಾಹಿಬ್'ನ್ನು ಸಿಖ್ ಪಂಥದ ಪವಿತ್ರ ಗ್ರಂಥ ಎಂದು ಘೋಷಿಸಲಾಯಿತು

ಇಂದಿನ ಇತಿಹಾಸ History Today ಫೆಬ್ರುವರಿ 24

ಇಂದಿನ ಇತಿಹಾಸ

ಫೆಬ್ರುವರಿ 24

ಪಂಜಾಬ್ ಪ್ರಾಂತ್ಯದ ಚಕ್ವಾಲ್‌ನ ಪ್ರಸಿದ್ಧ ಕಟಾಸ್ ರಾಜ್ ದೇವಸ್ಥಾನವನ್ನು ಪುನರ್ ನವೀಕರಣಗೊಳಿಸುವಂತೆ ಧಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸಂಸದೀಯ ವ್ಯವಹಾರ ಖಾತೆ ಸಚಿವ ಬಿ. ಆವನ್ ಸೂಚಿಸಿದರು. ಇಸ್ಲಾಮಾಬಾದ್ ದೇವಸ್ಥಾನಕ್ಕೆ ಭೇಟಿ ನೀಡಿ ಇಲ್ಲಿನ ಶಿಲ್ಪಕಲೆ ಹಾಗೂ ವಿನ್ಯಾಸಕ್ಕೆ ಮನಸೋತ ಸಚಿವರು, ಇದು ಪಾರಂಪರಿಕ ಮಹತ್ವದ್ದಾಗಿದ್ದು, ಇದರ ಸುತ್ತಲೂ ಗೋಡೆ ನಿರ್ಮಿಸುವ ಮೂಲಕ ದೇವಸ್ಥಾನವನ್ನು ರಕ್ಷಿಸಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

2009: ಕರ್ನಾಟಕದ ಗುಲ್ಬರ್ಗ ಸೇರಿದಂತೆ ದೇಶದಲ್ಲಿ ಹೊಸದಾಗಿ 12 ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಸಂಬಂಧ ರೂಪಿಸಲಾದ ಮಸೂದೆಗೆ ರಾಜ್ಯಸಭೆಯೂ ತನ್ನ ಸಮ್ಮತಿ ಸೂಚಿಸುವುದರೊಂದಿಗೆ ಮಸೂದೆಗೆ ಸಂಸತ್‌ನ ಅಂಗೀಕಾರ ದೊರಕಿತು. ಲೋಕಸಭೆಯು ಹಿಂದಿನ ವಾರವೇ ಮಸೂದೆಗೆ ಅಂಗೀಕಾರ ನೀಡಿತ್ತು.

2009: ಹೈಕೋರ್ಟ್‌ನಲ್ಲಿ ತಮ್ಮ ವಿರುದ್ಧ ಬಂದಂತಹ ತೀರ್ಪುಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೇಲ್ಮನವಿ ಸಲ್ಲಿಸುವಾಗ ತೋರುವ ಅಸಡ್ಡೆಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವ ಮೇಲ್ಮನವಿಗಳನ್ನು ನಿಗದಿತ ಸಮಯದಲ್ಲಿ (ಎಸ್‌ಎಲ್‌ಪಿ) ಸಲ್ಲಿಸದೆ ತಿಂಗಳುಗಟ್ಟಲೆ ವಿಳಂಬ ಮಾಡುತ್ತಿರುವುದು ಹಾಗೂ ದೋಷಪೂರಿತ ದಾವಾಗಳನ್ನು ಬರೆಯುತ್ತಿರುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ ಎಂದು ನ್ಯಾಯಮೂರ್ತಿಗಳಾದ ಆರ್.ವಿ.ರವೀಂದ್ರನ್ ಹಾಗೂ ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್ ಅವರನ್ನೊಳಗೊಂಡ ಪೀಠವು ಹೇಳಿತು. ರೈತನೊಬ್ಬನಿಗೆ ಪರಿಹಾರ ವಿತರಿಸುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಈ ಮೇಲ್ಮನವಿ ಅನೇಕ ತಪ್ಪು ಹಾಗೂ ಗಂಭೀರವಾದ ಮೂಲ ದೋಷಗಳನ್ನು ಒಳಗೊಂಡಿತ್ತು. ಈ ಮೇಲ್ಮನವಿಯನ್ನು ಫೆಬ್ರುವರಿ 9ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮುನ್ನ ದಾವೆ ಮತ್ತು ದಾಖಲೆಗಳನ್ನು ವಿಶೇಷ ವಕೀಲರ ಮೂಲಕ ಸೂಕ್ತವಾಗಿ ಪರಾಮರ್ಶಿಸಬೇಕು ಎಂಬ ನಿಯಮವಿದೆ. ಇದಕ್ಕಾಗಿ ಕಠಿಣ ಪರೀಕ್ಷೆ ಎದುರಿಸಬೇಕಾಗುತ್ತದೆ. ಆದರೆ ಇಂತಹ ಹಂತಗಳನ್ನೂ ದಾಟಿ ಒಂದು ದಾವೆ ಇಷ್ಟೊಂದು ತಪ್ಪುಗಳ ಮೂಲಕ ಪೀಠದೆದುರು ವಿಚಾರಣೆಗೆ ಬರುತ್ತದೆ ಎಂದರೆ ಏನರ್ಥ? ಪರಾಮರ್ಶೆಯ ವಕೀಲರ ತಂಡ ಇರುವುದಾದರೂ ಏತಕ್ಕೆ ಎಂದು ಸುಪ್ರೀಂಕೋರ್ಟ್ ಖಾರವಾಗಿ ಪ್ರಶ್ನಿಸಿತು. ರಾಜ್ಯ ಸರ್ಕಾರಗಳು ತಮ್ಮ ವಿರುದ್ಧ ಬರುವ ಎಲ್ಲ ತೀರ್ಪುಗಳನ್ನೂ ಪ್ರಶ್ನಿಸುವುದು ಸಾಮಾನ್ಯವಾಗಿ ಹೋಗಿದೆ. ಅಷ್ಟೇ ಅಲ್ಲ ತಿಂಗಳುಗಟ್ಟಲೆ ವಿಳಂಬ ಎಸಗುವುದು ಅವುಗಳಿಗೆ ಅಭ್ಯಾಸವಾಗಿಬಿಟ್ಟಿದೆ. ಸುಪ್ರೀಂಕೋರ್ಟಿನಲ್ಲಿ ಸದ್ಯ ಇರುವ ಮೇಲ್ಮನವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ರಾಜ್ಯ ಮತ್ತು ಕೇಂದ್ರ ಸರ್ಕಾರಗಳದ್ದೇ ಆಗಿವೆ. ಇವುಗಳಲ್ಲಿ ಶೇಕಡಾ 90 ರಷ್ಟು ಮೇಲ್ಮನವಿಗಳು ವಿಳಂಬಿತ ಮನವಿಗಳು. ಆಡಳಿತಾತ್ಮಕ ಕಾರಣ, ಸರ್ಕಾರದ ವಿಧಿವಿಧಾನಗಳ ಪೂರೈಕೆ ಇತ್ಯಾದಿಗಳ ಕಾರಣ ನೀಡಿ ಕ್ಷಮೆ ಯಾಚಿಸುತ್ತಾ ಬರುವ ಈ ಮೇಲ್ಮನವಿಗಳು ತಮಗೆ ನಿಗದಿಪಡಿಸಲಾಗಿರುವ ಮಿತಿಯನ್ನು ಅಣಕ ಮಾಡುತ್ತಿರುವಂತಿವೆ. ಸಂವಿಧಾನದ 136ನೇ ವಿಧಿಯ ಅನುಸಾರ ನೀಡಲಾಗಿರುವ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಎಲ್ಲರೂ ಸುಲಭವಾಗಿ ಪರಿಗಣಿಸಿಬಿಟ್ಟಿದ್ದಾರೆ. ಅದರ ಗಂಭೀರತೆಯನ್ನೇ ಗಮನದಲ್ಲಿ ಇರಿಸಿಕೊಂಡಂತಿಲ್ಲ ಎಂದು ಪೀಠವು ವಿವರಿಸಿತು.

2009: ಪಂಜಾಬ್ ಪ್ರಾಂತ್ಯದ ಚಕ್ವಾಲ್‌ನ ಪ್ರಸಿದ್ಧ ಕಟಾಸ್ ರಾಜ್ ದೇವಸ್ಥಾನವನ್ನು ಪುನರ್ ನವೀಕರಣಗೊಳಿಸುವಂತೆ ಧಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸಂಸದೀಯ ವ್ಯವಹಾರ ಖಾತೆ ಸಚಿವ ಬಿ. ಆವನ್ ಸೂಚಿಸಿದರು. ಇಸ್ಲಾಮಾಬಾದ್ ದೇವಸ್ಥಾನಕ್ಕೆ ಭೇಟಿ ನೀಡಿ ಇಲ್ಲಿನ ಶಿಲ್ಪಕಲೆ ಹಾಗೂ ವಿನ್ಯಾಸಕ್ಕೆ ಮನಸೋತ ಸಚಿವರು, ಇದು ಪಾರಂಪರಿಕ ಮಹತ್ವದ್ದಾಗಿದ್ದು, ಇದರ ಸುತ್ತಲೂ ಗೋಡೆ ನಿರ್ಮಿಸುವ ಮೂಲಕ ದೇವಸ್ಥಾನವನ್ನು ರಕ್ಷಿಸಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ದೇವಸ್ಥಾನದ ಅಭಿವೃದ್ಧಿಗೆ 109 ಕೋಟಿ ಅನುದಾನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು ನಂತರ ಅವರು ಯೋಜನೆಯ ಪ್ರಗತಿಯ ಬಗ್ಗೆ ಪರಿಶೀಲಿಸಿದರು. ಇಸ್ಲಾಮ್ ಒಂದು ಪವಿತ್ರ ಧರ್ಮ ಇದು ಬೇರೆ ಧರ್ಮದವರನ್ನು ಕೂಡ ಗೌರವಿಸುತ್ತದೆ ಎಂದು ಸಚಿವರು ತಿಳಿಸಿದರು.

2008: ಆರು ತಿಂಗಳ ಅವಧಿಯಲ್ಲಿ ದೇಶದ 800 ರೈತರು ಆತ್ಮಹತ್ಯೆ ಮಾಡಿಕೊಂಡರು. ಇದರಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು ಅಂದರೆ 607 ರೈತರನ್ನು ಕಳೆದುಕೊಂಡಿತು. ಆಂಧ್ರದ 114 ಮತ್ತು ಕರ್ನಾಟಕದ 73 ರೈತರು ಆತ್ಮಹತ್ಯೆ ಮಾಡಿಕೊಂಡರು. ಕೇರಳದಲ್ಲಿ 13 ರೈತರು ನೇಣಿಗೆ ಶರಣಾದರು ಎಂದು ವರದಿಯೊಂದು ಬಹಿರಂಗಪಡಿಸಿತು. ಪಂಜಾಬ್, ಹರಿಯಾಣ, ದೆಹಲಿ, ಗುಜರಾತ್, ರಾಜಸ್ಥಾನ, ಗೋವಾ ರಾಜ್ಯಗಳು ಈ ಸಂಬಂಧ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿತು. ಪರಿಹಾರ ಕ್ರಮವಾಗಿ ಕೇಂದ್ರ ಸರ್ಕಾರ ಈತನಕ ಆಂಧ್ರದ 16 ಜಿಲ್ಲೆಗಳಿಗೆ 9650 ಕೋಟಿ ಬಿಡುಗಡೆ ಮಾಡಿದೆ. ಕರ್ನಾಟಕದ 6 ಜಿಲ್ಲೆಗಳಲ್ಲಿ 2389.64 ಕೋಟಿ, ಕೇರಳದ 3 ಜಿಲ್ಲೆಗಳಲ್ಲಿ 765.24 ಕೋಟಿ ಮತ್ತು ಮಹಾರಾಷ್ಟ್ರದ 6 ಜಿಲ್ಲೆಗಳಲ್ಲಿ ರೂ 3879.26 ಕೋಟಿ ಹಣ ಕೇಂದ್ರದಿಂದ ಬಿಡುಗಡೆ ಆಗಿದೆ ಎಂದು ವರದಿ ಹೇಳಿತು.

2008: ಕರ್ನಾಟಕ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟ ಹಾಗೂ ಇತರೆ ಸಂಘಟನೆಗಳ ಕರೆಯ ಮೇರೆಗೆ ಆರಂಭವಾದ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿತು.

2008: ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಸೂಕ್ತ ಭದ್ರತೆ ನೀಡಲಾಗುತ್ತದೆ ಎಂದು ರಾಜ್ಯಪಾಲರ ಸಲಹೆಗಾರ ಪಿ.ಕೆ.ಎಚ್. ತರಕನ್ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ (ಬಿಎಂಸಿಆರ್ಐ) ವ್ಯಾಪ್ತಿಯ ಐದು ಆಸ್ಪತ್ರೆಗಳ ಕಿರಿಯ ವೈದ್ಯರು ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡರು.

2008: ಮರಾಠಿ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿರುವ ಕರ್ನಾಟಕ-ಮಹಾರಾಷ್ಟ್ರ ಗಡಿಯ 814 ಗ್ರಾಮಗಳು ಕರ್ನಾಟಕಕ್ಕೇ ಸೇರುವುದು ಸೂಕ್ತ ಎಂಬುದನ್ನು ರಾಜ್ಯ ಪುನರ್ ವಿಂಗಡಣಾ ಆಯೋಗ (ಎಸ್ ಆರ್ ಸಿ) ಸಮರ್ಥಿಸಿತ್ತು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿತು. ಈ ಹಳ್ಳಿಗಳಲ್ಲಿ ಇರುವ ಜನರ ಒಳಿತಿನ ದೃಷ್ಟಿಯಿಂದ ಇವು ಕರ್ನಾಟಕಕ್ಕೇ ಸೇರಬೇಕು ಎನ್ನುವುದು ಆಯೋಗದ ಸ್ಪಷ್ಟ ಅಭಿಪ್ರಾಯವಾಗಿತ್ತು ಎಂದೂ ಕೇಂದ್ರ ಹೇಳಿತು. 2006ರ ನವೆಂಬರ್ 16ರಂದು ಅಂದಿನ ಸಾಲಿಸಿಟರ್ ಜನರಲ್ ಜಿ.ಇ. ವಹನ್ವತಿ ಅವರು ಸಿದ್ಧಪಡಿಸಿದ ದಾಖಲೆಗಳ ಆಧಾರದಲ್ಲಿ ಕೇಂದ್ರ ಗೃಹ ಸಚಿವಾಲಯದ ನಿರ್ದೇಶಕರು ಸಲ್ಲಿಸಿದ ಪ್ರಮಾಣಪತ್ರದಲ್ಲಿ ಈ ಅಂಶಗಳನ್ನು ಸ್ಪಷ್ಟಪಡಿಸಲಾಯಿತು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವು ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರ ಪೀಠದ ಮುಂದೆ ಮಾರ್ಚ್ 25ರಂದು ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ ಈ ಪ್ರಮಾಣಪತ್ರಕ್ಕೆ ಹೆಚ್ಚಿನ ಮಹತ್ವ ಬಂದಿತು.

2008: ಜರ್ಮನಿಯ ನಿರಂಕುಶ ದೊರೆ ರಕ್ತಪಿಪಾಸು ಅಡಾಲ್ಫ್ ಹಿಟ್ಲರ್ ಒಬ್ಬ ಚಿತ್ರ ಕಲಾವಿದನಾಗಿಯೂ ತನ್ನ ರಸಿಕತೆ ಮೆರೆದಿದ್ದ ಎಂಬುದಾಗಿ ನಾರ್ವೆ ಹೇಳಿತು. ರಕ್ತಕಾರಂಜಿಯ ವರ್ಣಗಳುಳ್ಳ ವ್ಯಂಗ್ಯ ಚಿತ್ರಗಳು ಹಾಗೂ ಅಣಕು ಚಿತ್ರಗಳನ್ನು ಆತ ರಚಿಸಿದ್ದ. ಹಿಟ್ಲರ್ ರಚಿಸಿದ ಚಿತ್ರಗಳು ತನ್ನ ಬಳಿ ಇವೆ ಎಂದು ನಾರ್ವೆ ಯುದ್ಧ ವಸ್ತುಸಂಗ್ರಹಾಲಯದ ನಿರ್ದೇಶಕ ಹ್ಯಾಕ್ ವಾಗ್ ಬಹಿರಂಗಪಡಿಸಿದರು.

2008: ವಿಪ್ರೊ ಲಿಮಿಟೆಡ್, ತನ್ನ ಜಾಗತಿಕ ಸೇವಾ ಕೇಂದ್ರಗಳನ್ನು ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಆರಂಭಿಸಿತು. ಏಷ್ಯಾ ಪೆಸಿಫಿಕ್ ವಿಪ್ರೊದ ಪ್ರಮುಖ ಮಾರುಕಟ್ಟೆಯಾಗಿರುವುದರಿಂದ ಈ ಕೇಂದ್ರ ವಿವಿಧ ಭಾಷೆಗಳಲ್ಲಿ ಗ್ರಾಹಕರಿಗೆ ಸೇವೆ ಒದಗಿಸುವುದು ಎಂದು ವಿಪ್ರೊ ಇನ್ಫೊಟೆಕ್ ನ ವೃತ್ತಿಸೇವಾ ವಿಭಾಗದ ಮುಖ್ಯಸ್ಥ ತಾಂಡವ ಮೂರ್ತಿ ತಿಳಿಸಿದರು.

2007: ಮಣಿಪುರದ ಬಿಷನ್ ಪುರ ಜಿಲ್ಲೆಯಲ್ಲಿ ಉಗ್ರಗಾಮಿಗಳು ಚುನಾವಣಾ ಕರ್ತವ್ಯದಲ್ಲಿದ್ದ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿ ಕನಿಷ್ಠ 16 ಯೋಧರನ್ನು ಹತ್ಯೆ ಮಾಡಿ, ಐವರನ್ನು ಗಾಯಗೊಳಿಸಿದರು.

2007: ಶಿರಸಿಯ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರನ್ನು ಅಗ್ನಿ ಸೇವಾ ಟ್ರಸ್ಟ್ ನೀಡುವ ಪ್ರತಿಷ್ಠಿತ ಪರಮದೇವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಯಕ್ಷಗಾನಕ್ಕಾಗಿ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟ ಹೊಸ್ತೋಟ ಅವರ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳನ್ನು ಆಧರಿಸಿ ಸುಮಾರು 95ಕ್ಕೂ ಹೆಚ್ಚು ಪ್ರಸಂಗ, ಪರಿಸರ ಹಾಗೂ ಸಾಮಾಜಿಕ ವಿಷಯಕ್ಕೆ ಸಂಬಂಧಿಸಿದ 150ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

2007: ಕುಮಟಾದ ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ 2006ನೇ ಸಾಲಿನ ಪ್ರಶಸ್ತಿಗೆ ಕಥೆಗಾರ ಕುಂ. ವೀರಭದ್ರಪ್ಪ ಅವರನ್ನು ಆಯ್ಕೆ ಮಾಡಲಾಯಿತು.

2007: ಬೆಂಗಳೂರಿನಲ್ಲಿ ನಡೆದ ಸರ್ವಪಕ್ಷಗಳ ಮುಖಂಡರ ಸಭೆಯು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ಸಂಪೂರ್ಣವಾಗಿ ತಿರಸ್ಕರಿಸಿತು. ತಜ್ಞರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ಸಭೆಯು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿತು.

2007: ಫನಾ ಮತ್ತು ಧೂಮ್-2 ಬಾಲಿವುಡ್ ಚಿತ್ರಗಳಲ್ಲಿನ ಉತ್ತಮ ಅಭಿನಯಕ್ಕಾಗಿ ಕಾಜೋಲ್ ಮತ್ತು ಹೃತಿಕ್ ರೋಷನ್ ಅವರಿಗೆ ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಫಿಲಂಫೇರ್ ಶ್ರೇಷ್ಠ ನಟಿ ಮತ್ತು ನಟ ಪ್ರಶಸ್ತಿ ನೀಡಲಾಯಿತು.

2007: ಜಾರ್ಖಂಡ್ ರಾಜ್ಯವು ರಾಜಕೀಯ ಕ್ಷೇತ್ರದಲ್ಲಿ 2002ರಿಂದ 2007ರವರೆಗಿನ ಅವದಿಯಲ್ಲಿ ಸುಮಾರು 156ಕ್ಕೂ ಹೆಚ್ಚು ದಾಖಲೆಗಳನ್ನು ಮಾಡಿದ್ದಕ್ಕಾಗಿ ಲಿಮ್ಕಾ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಯಿತು. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸಂಪಾದಕ ವಿಜಯ ಘೋಷ್ ಅವರ ಸಹಿಯನ್ನು ಒಳಗೊಂಡ ದಾಖಲೆ ಸಂಬಂಧಿ ಪ್ರಮಾಣಪತ್ರವನ್ನು ಮುಖ್ಯಮಂತ್ರಿ ಮಧು ಕೋಡಾ ಅವರಿಗೆ ಲಿಮ್ಕಾ ಪ್ರತಿನಿಧಿಗಳು ನೀಡಿದರು. `ಜಾರ್ಖಂಡಿನ ಮಧು ಕೋಡಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊತ್ತ ಮೊದಲ ಸ್ವತಂತ್ರ ಅಭ್ಯರ್ಥಿ. 2006ರ ಸೆಪ್ಟೆಂಬರ್ 18ರಂದು ಅವರು ಯುಪಿಎ ಮತ್ತು ನಾಲ್ವರು ಸ್ವತಂತ್ರ ಸದಸ್ಯರ ಬೆಂಬಲದೊಂದಿಗೆ ರಚನೆಯಾದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು' ಎಂದು ಲಿಮ್ಕಾ ಪ್ರತಿನಿಧಿಗಳು ಕೋಡಾ ಅವರಿಗೆ ನೀಡಿದ ಪ್ರಮಾಣ ಪತ್ರ ಹೇಳಿದೆ.

2006: ಸಂಸ್ಕತ ಭಾರತಿ ಸಂಘಟನೆಯು ಸಂಸ್ಕತ ಸಂಭಾಷಣಾ ಶಿಬಿರ ವರ್ಷವನ್ನು ಆರಂಭಿಸಿತು. (24 ಫೆಬ್ರುವರಿ 2006ರಿಂದ 2007 ಮೇವರೆಗೆ)

2006: ಫಿಲಿಪ್ಪೀನ್ಸ್ ಅಧ್ಯಕ್ಷೆ ಗ್ಲೋರಿಯಾ ಅರೋಯೋ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ತಮ್ಮ ಸರ್ಕಾರ ಉರುಳಿಸಲು ಸಂಚು ರೂಪಿಸಿದ ಆಪಾದನೆಯಲ್ಲಿ ಸೇನಾಪಡೆಯ ಪ್ರಮುಖ ಅಧಿಕಾರಿಗಳನ್ನು ಬಂಧಿಸಲು ಆಜ್ಞಾಪಿಸಿದರು.

2006: ಭಾರತದ ಖ್ಯಾತ ಪರಮಾಣು ವಿಜ್ಞಾನಿ ಗೋವರ್ಧನ್ ಮೆಹ್ತಾ ಅವರಿಗೆ ತಮ್ಮ ದೇಶದಲ್ಲಿ ಸಂಚರಿಸಲು ಅಮೆರಿಕ ವಿದೇಶಾಂಗ ಸಚಿವಾಲಯ ಅನುಮತಿ ನೀಡಿತು. ಗೋವರ್ಧನ್ ಅವರಿಗೆ ವೀಸಾ ನಿರಾಕರಿಸಲಾಗಿದೆ ಎಂಬ ವರದಿಗಳಿಂದ ಉಂಟಾಗಿದ್ದ ಬಿಕ್ಕಟ್ಟು ಇದರಿಂದಾಗಿ ಪರಿಹಾರಗೊಂಡಿತು.

2006: ಗೋಧ್ರಾ ರೈಲು ದುರಂತದ ನಂತರ ಸಂಭವಿಸಿದ ಹಿಂಸಾಚಾರದಲ್ಲಿ ಭಸ್ಮವಾದ ಬೆಸ್ಟ್ ಬೇಕರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈಯ ಸೆಷನ್ಸ್ ನ್ಯಾಯಾಲಯವು 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ದುಷ್ಕರ್ಮಿಗಳು 2002ರ ಮಾರ್ಚ್ 1ರಂದು ವಡೋದರಾದಲ್ಲಿನ ಬೆಸ್ಟ್ ಬೇಕರಿಗೆ ಬೆಂಕಿ ಹಚ್ಚಿದಾಗ 14 ಜನ ಸಜೀವ ದಹನಗೊಂಡಿದ್ದರು.

2006: ಅನುವಾದ ಅಕಾಡೆಮಿಯು ತಮಗೆ ನೀಡಿದ ಪ್ರಶಸ್ತಿಯನ್ನು ವಾಪಸ್ ಮಾಡಿ ದೇ. ಜವರೇಗೌಡ ಅವರು ಅಕಾಡೆಮಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ ಅವರಿಗೆ ಪತ್ರ ಬರೆದರು. ಅಕಾಡೆಮಿ ಸ್ಥಾಪನೆಗೆ 30 ವರ್ಷ ಏಕಾಂಗಿಯಾಗಿ ದುಡಿದಿದ್ದೇನೆ. ಈಗ ಪ್ರಶಸ್ತಿ ಒಪ್ಪಿಕೊಂಡರೆ ಟೀಕೆ, ವಿಮರ್ಶೆ ಶುರುವಾಗುತ್ತದೆ. ಆದ್ದರಿಂದ ಪ್ರಮಾಣಪತ್ರ ಸಾಕು, ಪ್ರಶಸ್ತಿ ಬೇಡ ಎಂದು ದೇಜಗೌ ತಿಳಿಸಿದರು.

1948: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜನ್ಮದಿನ.

1946: ಜುವಾನ್ ಪೆರೋನ್ ಅವರು ಅರ್ಜೆಂಟೀನಾದ ಅಧ್ಯಕ್ಷರಾಗಿ ಆಯ್ಕೆಯಾದರು.

1945: ಈಜಿಪ್ಟಿನ ಪ್ರಧಾನಿ ಮಹೆರ್ ಪಾಶಾ ಅವರನ್ನು ಸಂಸತ್ತಿನಲ್ಲಿ ಜರ್ಮನಿ, ಮತ್ತು ಜಪಾನ್ ವಿರುದ್ಧದ ಸಮರಘೋಷಣೆ ಓದುತ್ತಿದ್ದಾಗ ಗುಂಡು ಹೊಡೆದು ಕೊಲ್ಲಲಾಯಿತು.

1942: ಭಾರತೀಯ ಸಂಜಾತೆ ಗಾಯತ್ರಿ ಚಕ್ರವರ್ತಿ ಸ್ಪಿವಕ್ ಜನಿಸಿದರು. ಈಕೆ ಲೇಖಕಿ, ಸಾಹಿತ್ಯ ವಿಮರ್ಶಕಿ, ಹಾಗೂ ಭಾಷಾಂತರಕಾರ್ತಿಯಾಗಿ ಖ್ಯಾತಿ ಗಳಿಸಿದರು. ತತ್ವಜ್ಞಾನಿ ಜಾಕಿಸ್ ಡೆರ್ರಿಡಾ ಪುಸ್ತಕವನ್ನು ಇವರು ಇಂಗ್ಲಿಷಿಗೆ ಭಾಷಾಂತರಿಸಿದ್ದರು.

1938: ಟೂಥ್ ಬ್ರಶ್ ಗಳು ನ್ಯೂಜೆರ್ಸಿಯ ಅರ್ಲಿಂಗ್ಟನ್ನಿನಲ್ಲಿ ಮೊತ್ತ ಮೊದಲ ಬಾರಿಗೆ ವಾಣಿಜ್ಯ ಮಟ್ಟದಲ್ಲಿ ಉತ್ಪಾದನೆಯಾದವು.

1936: ಖ್ಯಾತ ಮರಾಠಿ ಕವಿ ಲಕ್ಷ್ಮೀಬಾಯಿ ತಿಲಕ್ ನಿಧನರಾದರು.

1934: ಬೆಂಡೆಟ್ಟೋ `ಬೆಟ್ಟಿನೊ' ಕ್ರಾಕ್ಸಿ ಹುಟ್ಟಿದ ದಿನ. ಇಟಲಿಯ ರಾಜಕಾರಣಿಯಾದ ಇವರು 1983-87ರ ಅವಧಿಯಲ್ಲಿ ರಾಷ್ಟ್ರದ ಮೊತ್ತ ಮೊದಲ ಸಮಾಜವಾದಿ ಪ್ರಧಾನಿಯಾಗಿದ್ದರು.

1920: ನಾನ್ಸಿ ಆಸ್ಟೊರ್ ಜನಿಸಿದರು. ಈಕೆ ಬ್ರಿಟಿಷ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಥಮ ಮಹಿಳೆ.

1825: ಇಂಗ್ಲಿಷ್ ಸಂಪಾದಕ ಥಾಮಸ್ ಬೌಲ್ಡರ್ (1754-1825) ನಿಧನರಾದರು. ಷೇಕ್ಸ್ ಪಿಯರ್, ಓಲ್ಡ್ ಟೆಸ್ಟಾಮೆಂಟ್ ಸೇರಿದಂತೆ ಹಲವು ಕೃತಿಗಳನ್ನು ಇವರು ಸಂಪಾದಿಸಿದ್ದರು.

1582: ಪೋಪ್ ಗ್ರೆಗೊರಿ ಅವರು `ಗ್ರೆಗೋರಿಯನ್ ಕ್ಯಾಲೆಂಡರ್' ಗೆ ಸಮ್ಮತಿ ನೀಡಿ ಅಧಿಕೃತ ಪ್ರಕಟಣೆ ನೀಡಿದರು. ಈ ಕ್ಯಾಲೆಂಡರ್ ಇಟಲಿ ಮತ್ತು ಸ್ಪೇನಿನಲ್ಲಿ ಅಕ್ಟೋಬರ್ 15ರಂದು ಅನುಷ್ಠಾನಕ್ಕೆ ಬಂದಿತು.

1304: ಇಬ್ನ್ ಬಟೂಟ ಹುಟ್ಟಿದ. (1304-1368/69) ಈತ ಮಧ್ಯಯುಗದ ಖ್ಯಾತ ಅರಬ್ ಪ್ರವಾಸಿ ಎಂಬುದಾಗಿ ಹೆಸರು ಪಡೆದ.

Monday, March 29, 2010

ಇಂದಿನ ಇತಿಹಾಸ History Today ಮಾರ್ಚ್ 29


ಇಂದಿನ ಇತಿಹಾಸ

ಮಾರ್ಚ್ 29

ಇಪ್ಪತ್ತೆಂಟು ವರ್ಷಗಳ ಕಾಲ ಜಿಂಬಾಬ್ವೆಯನ್ನು ಮುನ್ನಡೆಸಿದ ಅಧ್ಯಕ್ಷ ರಾಬರ್ಟ್ ಮುಗಾಬೆ (84) ಅವರ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಮಹತ್ವದ ಚುನಾವಣೆ ದೇಶದಲ್ಲಿ ನಡೆಯಿತು.

2009: ಆಸ್ಟ್ರೇಲಿಯಾದ ಕೈರ್ನ್ಸ್‌ನಲ್ಲಿ ಸಾವಿರಾರು ವಿಷಪೂರಿತ ನೆಲಗಪ್ಪೆಗಳನ್ನು ಸಾಮೂಹಿಕವಾಗಿ ಕೊಲ್ಲಲಾಯಿತು. ಇವುಗಳ ಕಳೇಬರಗಳ ಗೊಬ್ಬರವನ್ನು ಕೃಷಿಗೆ ಬಳಸುವ ಪದ್ಧತಿ ಇಲ್ಲಿ ಪ್ರತಿ ವರ್ಷ ಬಳಕೆಯಲ್ಲಿ ಇದೆ.
2009: ಕೋಮು ಪ್ರಚೋದನೆ ಆರೋಪದ ಮೇಲೆ ಬಂಧಿತರಾದ ಬಿಜೆಪಿ ಯುವ ನಾಯಕ ವರುಣ್ ಗಾಂಧಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಮೊಕದ್ದಮೆ ಹೂಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿತು. 1980ರ ರಾಷ್ಟ್ರೀಯ ಭದ್ರತಾ ಕಾಯ್ದೆಯ 3(2)ನೇ ಪರಿಚ್ಛೇದದಡಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದ್ದು, ಕಾಯ್ದೆ ಪ್ರಕಾರ ಆರೋಪಿಗೆ ಕನಿಷ್ಟ ಒಂದು ವರ್ಷ ಜಾಮೀನು ರಹಿತ ಜೈಲು ಶಿಕ್ಷೆ ವಿಧಿಸಬಹುದು.

2009: ವರುಣ್ ಗಾಂಧಿ ಅವರ ಮುಸ್ಲಿಮ್ ವಿರೋಧಿ ಭಾಷಣದ ಬಗ್ಗೆ ಇದುವರೆಗೂ ಮೌನದಿಂದಲೇ ಇದ್ದ ಹಿರಿಯ ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರು ತಮ್ಮ ಮೌನ ಮುರಿದು, ವರುಣ್‌ಗೆ ಟಿಕೆಟ್ ನೀಡಬೇಡಿ ಎಂದು ಹೇಳಿರುವ ಚುನಾವಣಾ ಆಯೋಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

2009: ಬ್ಯಾಂಕ್ ಗ್ರಾಹಕರಿಗೆ ವಿಶೇಷ ಸಿಹಿ ಸುದ್ದಿ. ಖಾತೆ ತೆರೆದಿರುವ ಬ್ಯಾಂಕಿನ ಎಟಿಎಂ ಕೇಂದ್ರಕ್ಕಾಗಿಯೇ ಅಲೆದಾಡುವ ಕಷ್ಟ ಏಪ್ರಿಲ್ 1ರಿಂದ ಪರಿಹಾರವಾಗುವುದು. ಏಕೆಂದರೆ, ಯಾವುದೇ ಎಟಿಎಂ ಕೇಂದ್ರದಲ್ಲಿ ಹಣ ಪಡೆದುಕೊಂಡರೂ ಇನ್ನುಮುಂದೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ! ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ನಿರ್ದೇಶನವೊಂದರಿಂದ ಇದು ಸಾಧ್ಯವಾಗುವುದು. ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಈ ನಿರ್ದೇಶನದ ಪ್ರಕಾರ, ಡೆಬಿಟ್ ಕಾರ್ಡ್ ಹೊಂದಿರುವ ಯಾವುದೇ ಬ್ಯಾಂಕ್ ಗ್ರಾಹಕರು ಯಾವುದೇ ಬ್ಯಾಂಕಿನ ಎಟಿಎಂ ಮೂಲಕ ಹಣ ಪಡೆದುಕೊಳ್ಳಬಹುದು. ಇದಕ್ಕಾಗಿ ಶುಲ್ಕ ವಿಧಿಸುವುದನ್ನು ಇದೇ ಏಪ್ರಿಲ್ 1ರಿಂದ ಹಿಂದಕ್ಕೆ ಪಡೆಯಲಾಗುವುದು.

2009: ತನ್ನ ವಶದಲ್ಲಿ ಇಟ್ಟುಕೊಂಡ ತಮಿಳರನ್ನು ಸರ್ಕಾರಿ ನಿಯಂತ್ರಿತ ಪ್ರದೇಶಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರೆ ಮಾತ್ರ ಎಲ್‌ಟಿಟಿಇಯೊಂದಿಗೆ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಬಹುದು ಎಂದು ಶ್ರೀಲಂಕಾ ಸ್ಪಷ್ಟಪಡಿಸಿತು. ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಾರ್ಯಾಲಯದಲ್ಲಿ ಸುದ್ದಿಗಾರರಿಗೆ ಈ ವಿಷಯ ಸ್ಪಷ್ಪಪಡಿಸಿದ ವಿಶ್ವಸಂಸ್ಥೆಗೆ ಶ್ರೀಲಂಕಾದ ಶಾಶ್ವತ ಪ್ರತಿನಿಧಿಯಾದ ಎಚ್.ಎಂ.ಜಿ.ಸಿ ಪಲಿಹಕ್ಕರ, ಜನವರಿ 30 ರಂದು ಅಧ್ಯಕ್ಷ ಮಹಿಂದ ರಾಜಪಕ್ಸ ಅವರು ವನ್ನಿಯಲ್ಲಿ ಎಲ್‌ಟಿಟಿಇಯೊಂದಿಗಿನ ಕಾರ್ಯಾಚರಣೆಗೆ ಎರಡು ದಿನಗಳ ವಿರಾಮ ಘೋಷಿಸಿದ್ದನ್ನು ಉದಾಹರಿಸಿದರು.

2009: ಇಂಡೋನೇಷ್ಯಾದ ತಂಗೆರಂಗನ್ ಜಿಲ್ಲೆಯಲ್ಲಿ ಸಂಭವಿಸಿದ್ದ ಗಿಂಟಂಗ್ ಅಣೆಕಟ್ಟು ಕುಸಿತ ದುರಂತದ ಸಾವಿನ ಸಂಖ್ಯೆ 93ಕ್ಕೆ ಏರಿತು. ಕಾಣೆಯಾದ ನೂರಾರು ಮಂದಿ ಇನ್ನೂ ಪತ್ತೆಯಾಗಿಲ್ಲ. ಶೋಧನಾ ಕಾರ್ಯ ಮುಂದುವರಿದಿದೆ ಎಂದು ಸರ್ಕಾರಿ ಮೂಲಗಳು ಹೇಳಿದವು.

2009: ದುಬೈ ಕೋರ್ಟ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆ ಕಂಡುಬಂದಿತು. ಮೊದಲ ಮಹಿಳಾ ನ್ಯಾಯಾಧೀಶರಾಗಿ ದಿನದ ಹಿಂದೆ ಪ್ರಮಾಣ ವಚನ ಸ್ವೀಕರಿಸಿದ ಎಬ್ಟಿಸಂ ಅಲಿ ರಷೀದ್ ಬಿದ್ವಾಯಿ (27) ಅವರು, ಯುಎಇ ( ಸಂಯುಕ್ತ ಅರಬ್ ರಾಷ್ಟ್ರಗಳ ಒಕ್ಕೂಟ) ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದಾರೆ.

2009: ಉದ್ಯೋಗಿ ಸಹ ಒಬ್ಬ ಗ್ರಾಹಕ; ತನಗಿರುವ ಸೌಲಭ್ಯ ಪಡೆಯುವ ಎಲ್ಲಾ ಹಕ್ಕೂ ಆತನಿಗೂ ಇದೆ ಎಂದು ದಕ್ಷಿಣ ಮುಂಬೈನ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ತೀರ್ಪು ನೀಡಿತು. ನಿವೃತ್ತ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಿದ ವೇದಿಕೆ, ತಮ್ಮ ಸಂಘಟನೆಯಿಂದ ಎಲ್ಲಾ ಸೌಲಭ್ಯಗಳನ್ನೂ ಪಡೆಯುವ ಹಕ್ಕು ಗ್ರಾಹಕರಾದ ಉದ್ಯೋಗಿಗಳಿಗೆ ಇದೆ. ಈ ವಿಷಯದಲ್ಲಿ ಅಸಂತುಷ್ಟರಾದಾಗ ಅವರು ನ್ಯಾಯಕ್ಕಾಗಿ ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿತು. ಭವಿಷ್ಯ ನಿಧಿ ಇಲಾಖೆಯ ಉದ್ಯೋಗಿ ಹಸ್‌ಮುಖ್ ಪಾರೇಖ್ ಎಂಬವರು, ನಿವೃತ್ತರಾದ ಬಳಿಕ ಭವಿಷ್ಯ ನಿಧಿಗೆ ಸಂಬಂಧಿಸಿದ ಹಣ ಸಕಾಲದಲ್ಲಿ ತಮಗೆ ಬಾರದ ಬಗ್ಗೆ ವೇದಿಕೆಗೆ ದೂರು ನೀಡಿದ್ದರು. 20 ದಿನ ತಡವಾಗಿ ಬಂದದ್ದಕ್ಕೆ ಪ್ರತಿಯಾಗಿ ಪರಿಹಾರವನ್ನೂ ಕೋರಿದ್ದರು. ಪ್ರತಿವಾದಿಯಾಗಿದ್ದ ಭವಿಷ್ಯ ನಿಧಿ ಇಲಾಖೆ, ಒಬ್ಬ ಉದ್ಯೋಗಿ ಗ್ರಾಹಕರ ವೇದಿಕೆಗೆ ಹೋಗುವಂತಿಲ್ಲ ಎಂದು ವಾದಿಸಿತ್ತು. ಉದ್ಯೋಗಿಗಳ ಭವಿಷ್ಯನಿಧಿ ವಿಚಾರದಲ್ಲಿ ಯಾವುದೇ ತಕರಾರು ಇದ್ದರೆ ಅಂತಹವರು ಭವಿಷ್ಯ ನಿಧಿ ಆಯುಕ್ತರನ್ನು ಸಂಪರ್ಕಿಸಬೇಕೇ ಹೊರತು ಗ್ರಾಹಕರ ವೇದಿಕೆಯನ್ನಲ್ಲ ಎಂದು ಪ್ರತಿಪಾದಿಸಿತ್ತು.

2008: ಕನ್ನಡ ಚಲನಚಿತ್ರ ನಿರ್ಮಾಪಕ ಎ.ಜೆ.ನಾಯ್ಡು (38) ನಿಧನರಾದರು. `ಸೈಲೆನ್ಸ್' ಸಿನೆಮಾದ ರಿರೆಕಾರ್ಡಿಂಗಿಗಾಗಿ ಚೆನ್ನೈಗೆ ಹೊರಟಿದ್ದ ಅವರು ನಗರದ ಬಸ್ ನಿಲ್ದಾಣದಲ್ಲೇ ಹೃದಯಾಘಾತದಿಂದ ಅಸುನೀಗಿದರು. ಕೆಲಸಮಯದ ಹಿಂದೆ ತೆರೆಕಂಡಿದ್ದ ಚಲನಚಿತ್ರ `ವಿದ್ಯಾರ್ಥಿ' ಸಹ ನಾಯ್ಡು ಅವರ ನಿರ್ಮಾಣವೇ ಆಗಿತ್ತು. ಅಂತ್ಯಕ್ರಿಯೆ ಮರುದಿನ ನಡೆಯಿತು.

2008: ಹಸಿರು ಅನಿಲದ ಪರಿಣಾಮ ತಗ್ಗಿಸಲು ವಿಶ್ವದ ದೊಡ್ಡ ದೇಶಗಳ ರಾಜಧಾನಿಗಳಲ್ಲಿ ಈದಿನ (ಮಾರ್ಚ್ 29) ರಾತ್ರಿ `ಅರ್ಥ್ ಅವರ್' ಆಚರಿಸಲಾಗುವುದು. ಈದಿನ ರಾತ್ರಿ ಒಂದು ಗಂಟೆ ಕಾಲ ವಿಶ್ವದ ದೊಡ್ಡ ನಗರಗಳಲ್ಲಿ ಎಲ್ಲಾ ದೀಪಗಳನ್ನೂ ದೀಪಗಳನ್ನು ಆರಿಸಲಾಗುವುದು. ತನ್ಮೂಲಕ ವಿದ್ಯುಚ್ಛಕ್ತಿ ಉಳಿಸುವುದು ಈ ಆಂದೋಲನದ ಉದ್ದೇಶ.

2008: ಚಿಪಾಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಕ್ರಿಕೆಟಿನ ನಾಲ್ಕನೇ ದಿನ ರಾಹುಲ್ ದ್ರಾವಿಡ್ ಅವರು ಹತ್ತು ಸಾವಿರ ರನ್ ಪೂರೈಸಿ, 25ನೇ ಶತಕ ದಾಖಲಿಸಿದರು. ಭಾರತ ತಂಡ ತನ್ನ ಮೊದಲ ಇನ್ನಿಂಗ್ಸಿನಲ್ಲಿ 627 ರನ್ ಗಳಿಸಿ ಆಲೌಟಾಯಿತು.

2008: ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಪಟ್ಟ ಹಳ್ಳಿಯಲ್ಲಿ ನಡೆಸಿದ ಉತ್ಖನನದಲ್ಲಿ 20 ಸಾವಿರ ವರ್ಷಗಳ ಹಿಂದಿನ ಪ್ರಾಚೀನ ನಾಗರಿಕತೆಯ ಪಳೆಯುಳಿಕೆಗಳನ್ನು ಪತ್ತೆ ಮಾಡಿತು.
ಉತ್ಖನನದ ವೇಳೆ ಕಲ್ಲಿನಿಂದ ತಯಾರಿಸಿದ 200 ಸಣ್ಣಪುಟ್ಟ ಆಯುಧಗಳು ದೊರಕಿದವು. ಇದರಿಂದಾಗಿ ಅತಿ ಪ್ರಾಚೀನ ನಾಗರಿಕತೆಯ ಅಸ್ತಿತ್ವದ ಬಗ್ಗೆ ಮಹತ್ವದ ಸುಳಿವು ದೊರಕಿತು ಎಂದು ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ಅಧೀಕ್ಷಕ ಅಮಲ್ ರಾಯ್ ತಿಳಿಸಿದರು. ಸಂತಲಪಾರಾ ಹಳ್ಳಿಯಲ್ಲಿ ಒಂದು ಸಾವಿರ ಮೀಟರ್ ಕೃಷಿ ಭೂಮಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಉತ್ಖನನ ನಡೆಯುತ್ತಿದ್ದು, 2-3 ಮೀಟರ್ ಆಳದವರೆಗೆ ಅಗೆದಾಗ ಕಲ್ಲಿನ ಆಯುಧಗಳು ಹಾಗೂ ಇತರ ಬಳಕೆಯ ವಸ್ತುಗಳ ಪಳೆಯುಳಿಕೆಗಳು ಪತ್ತೆಯಾದವು. ಪುಣೆಯ ಡೆಕ್ಕನ್ ಕಾಲೇಜಿನ ಭೂಗರ್ಭ -ಪ್ರಾಚ್ಯವಸ್ತು ತಜ್ಞರಾದ ಎಸ್. ಎನ್. ರಾಜಗುರು ಮತ್ತು ಬಿ. ಸಿ. ದೇವಧರ್ ಅವರ ಮಾರ್ಗದರ್ಶನದಲ್ಲಿ ಉತ್ಖನನ ನಡೆಯಿತು.

2008: ಬೆಂಗಳೂರು, ಪುಣೆ ಹಾಗೂ ಮುಂಬೈ ಸೇರಿದಂತೆ ಮೂರು ಆಯ್ದ ನಗರಗಳಲ್ಲಿ ಜೂನ್ ಅಂತ್ಯದಿಂದ ಆಕರ್ಷಕ ಫೈಬರ್ ಗ್ಲಾಸ್ ಗ್ಯಾಸ್ ಸಿಲಿಂಡರ್ ಒದಗಿಸುವ ಮುಂಚೂಣಿ ಯೋಜನೆಗೆ ಪೆಟ್ರೋಲಿಯಂ ಸಚಿವಾಲಯ ಅನುಮತಿ ನೀಡಿತು. ಫೈಬರ್ ಸಿಲಿಂಡರ್ ಪರಿಚಯಿಸುವ ಮೂಲಕ ರಾಜ್ಯ ಒಡೆತನದ ತೈಲ ಮಾರಾಟ ಕಂಪೆನಿಗಳಿಗೆ (ಒಎಂಸಿ) ತಮ್ಮ ಉದ್ಯಮ ವಿಸ್ತರಿಸಲು ಪೆಟ್ರೋಲಿಯಂ ಸಚಿವಾಲಯ ತಾತ್ವಿಕ ಅನುಮತಿ ನೀಡಿದೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ದಿನ್ಸಾ ಪಟೇಲ್ ಹೇಳಿದರು.

2008: ಲಿಂಗ ಸಂವೇದನಾಶೀಲ ವಿಷಯಕ್ಕೆ ಸಂಬಂಧಿಸಿದ ಬರಹಗಳನ್ನು ಆಧರಿಸಿ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕಿ ಸಿ.ಜಿ.ಮಂಜುಳಾ ಅವರಿಗೆ ಪಾಪುಲೇಷನ್ ಫಸ್ಟ್ ಸಂಸ್ಥೆಯು `ಯು ಎನ್ ಎಫ್ ಪಿ ಎ-ಲಾಡ್ಲಿ ಮಾಧ್ಯಮ ಪ್ರಶಸ್ತಿ'ಯನ್ನು ನೀಡಿ ಗೌರವಿಸಿತು. ಚೆನ್ನೈಯ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ತಮಿಳುನಾಡಿನ ಸಮಾಜ ಕಲ್ಯಾಣ ಸಚಿವೆ ಡಾ.ಪೂಂಗೊದಾಲ್ ಅವರು ಮಂಜುಳಾ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು. ಲಿಂಗ ಸಂವೇದನಾಶೀಲ ಲೇಖನಗಳ ಮೂಲಕ ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸಿದ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಒಟ್ಟು 18 ಮಂದಿ ಮಾಧ್ಯಮ ವ್ಯಕ್ತಿಗಳನ್ನು ಪಾಪುಲೇಷನ್ ಸಂಸ್ಥೆಯು ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಇದರಲ್ಲಿ ಕರ್ನಾಟಕದಿಂದ ಮಂಜುಳಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದರು.. ಸಮಾರಂಭದಲ್ಲಿ ಲೇಖಕಿ ಅಮ್ಮು ಜೋಸೆಫ್ ಅವರಿಗೆ `ವಿಶೇಷ ಮಾಧ್ಯಮ ಪ್ರಶಸ್ತಿ' ನೀಡಲಾಯಿತು.

2008: ರೂಪದರ್ಶಿ ಜೆಸ್ಸಿಕಾಲಾಲ್ ಅವರ ಅತ್ತಿಗೆ ಮೌಸಮಿ (ಸಹೋದರ ರಣಜಿತ್ ಲಾಲ್ ಅವರ ಪತ್ನಿ) ಅವರು ಪತಿಯಿಂದ ಜೀವನಾಂಶ ಕೋರಿ ಹೈಕೋರ್ಟ್ ಮೊರೆ ಹೋದರು. ಪತಿಯಿಂದ ವಂಚನೆಗೆ ಒಳಗಾಗಿ ಪ್ರತ್ಯೇಕವಾದ ತಮಗೆ ನ್ಯಾಯ ದೊರಕಿಸುವಂತೆ ಅವರು ನ್ಯಾಯಾಲಯವನ್ನು ಕೋರಿದರು. ತಮ್ಮ ಕೋರಿಕೆಯನ್ನು ಅನೂರ್ಜಿತಗೊಳಿಸಿದ್ದ ಸೆಷನ್ಸ್ ಕೋರ್ಟ್ ಆದೇಶವನ್ನು ರದ್ದುಪಡಿಸುವಂತೆ ಅವರು ಮನವಿ ಮಾಡಿದರು.

2008: ಇಪ್ಪತ್ತೆಂಟು ವರ್ಷಗಳ ಕಾಲ ಜಿಂಬಾಬ್ವೆಯನ್ನು ಮುನ್ನಡೆಸಿದ ಅಧ್ಯಕ್ಷ ರಾಬರ್ಟ್ ಮುಗಾಬೆ (84) ಅವರ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಮಹತ್ವದ ಚುನಾವಣೆ ದೇಶದಲ್ಲಿ ನಡೆಯಿತು.

2008: ಪಾಕಿಸ್ಥಾನದ ಪ್ರಧಾನಿ ಯೂಸುಫ್ ರಝಾ ಜಿಲಾನಿ ಅವರಿಗೆ ಸಂಸತ್ತಿನಲ್ಲಿ ನಿರೀಕ್ಷೆಗೂ ಮೀರಿ `ಸರ್ವಾನುಮತದಿಂದ ವಿಶ್ವಾಸ ಮತ' ದೊರೆಯಿತು.

2007: ಕಡಲ ತಡಿಯಲ್ಲಿರುವ ಬಾಲಸೋರ್ ಜಿಲ್ಲೆಯ ಚಂಡಿಪುರ ಬಳಿ ಅತ್ಯಾಧುನಿಕ `ಅಸ್ತ್ರ' ಕ್ಷಿಪಣಿಯನ್ನು ಪರೀಕ್ಷಾರ್ಥ ಪ್ರಯೋಗಿಸಲಾಯಿತು. ಈ ಕ್ಷಿಪಣಿಯನ್ನು ಸಂಪೂರ್ಣವಾಗಿ ದೇಶಿ ತಂತ್ರಜ್ಞಾನ ಬಳಸಿಕೊಂಡು ರಕ್ಷಣಾಪಡೆಯ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯವು (ಡಿ ಆರ್ ಡಿ ಎಲ್) ನಿರ್ಮಿಸಿದ್ದು, 80.ಕಿಮಿ ದೂರದವರೆಗಿನ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ.

2007: ಐಐಟಿ ಮತ್ತು ಐಐಎಂ ಸೇರಿದಂತೆ ಕೇಂದ್ರಾಡಳಿತದ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವ ಕೇಂದ್ರೀಯ ಶಿಕ್ಷಣ ಸಂಸ್ಥೆಗಳ (ಪ್ರವೇಶದಲ್ಲಿ ಮೀಸಲಾತಿ) ಕಾಯಿದೆ 2006'ರ ಅನುಷ್ಠಾನವನ್ನು ಮುಂದಿನ ಆದೇಶದ ವರೆಗೆ ಸುಪ್ರೀಂಕೋರ್ಟ್ ತಡೆಹಿಡಿಯಿತು. ಮೀಸಲಾತಿಯ ಫಲಾನುಭವಿಗಳಾದ ಹಿಂದುಳಿದ ಜಾತಿಗಳನ್ನು ಗುರುತಿಸಿದ ವಿಧಾನದ ಬಗ್ಗೆ ಪ್ರಮುಖವಾಗಿ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್ ಮತ್ತು ಎಲ್. ಎಸ್. ಪಂಟಾ, `ಮೀಸಲಾತಿ ನಿರ್ಧರಿಸಲು 1931ರ ಜಾತಿ ಆಧಾರಿತ ಜನಗಣತಿಯೊಂದೇ ಸೂಕ್ತ ಆಧಾರವಾಗಲಾರದು. ಆದ್ದರಿಂದ ಮುಂದಿನ ಆದೇಶದವರೆಗೆ ಈ ಕಾನೂನನ್ನು ಅನುಷ್ಠಾನಗೊಳಿಸಬಾರದು ಎಂದು 36 ಪುಟಗಳ ತೀರ್ಪಿನಲ್ಲಿ ಹೇಳಿದರು.

2007: 1984ರ ಸಿಖ್ ವಿರೋಧಿ ಗಲಭೆಗಳ ಕಾಲದಲ್ಲಿ ಹೆಡ್ ಕಾನ್ಸ್ಟೇಬಲ್ ನಿರಂಜನ ಸಿಂಗ್ ಮತ್ತು ಅವರ ಕುಟುಂಬದ ಇಬ್ಬರು ಸದಸ್ಯರನ್ನು ಹಲ್ಲೆ ನಡೆಸಿ ಕೊಂದು ನಂತರ ಅವರ ಶವಗಳಿಗೆ ಕಿಚ್ಚಿಟ್ಟು ನಾಶಪಡಿಸಿದ ಅಪರಾಧಕ್ಕಾಗಿ ದೆಹಲಿಯ ನ್ಯಾಯಾಲಯವೊಂದು ಮೂವರು ಅಪರಾಧಿಗಳಾದ ಹರಪ್ರಸಾದ ಭಾರಧ್ವಾಜ್, ಆರ್.ಪಿ. ತಿವಾರಿ, ಮತ್ತು ಜಗದೀಶ ಗಿರಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5000 ರೂಪಾಯಿಗಳ ದಂಡ ವಿಧಿಸಿತು.

2006: ಕರ್ನಾಟಕ ಮಾಧ್ಯಮ ಅಕಾಡೆುಯು ವೀಕ್ ಪತ್ರಿಕೆಯ ಸಚ್ಚಿದಾನಂದ ಮೂರ್ತಿ ಅವರಿಗೆ 2005-06ನೇ ಸಾಲಿನ ವಿಶೇಷ ಪ್ರಶಸ್ತಿಯನ್ನೂ ಇತರ 18 ಮಂದಿ ಪತ್ರಕರ್ತರಿಗೆ ವಾರ್ಷಿಕ ಅಕಾಡೆಮಿ ಪ್ರಶಸ್ತಿಯನ್ನೂ ಪ್ರಕಟಿಸಿತು.

2006: ಇಂಟೆಲ್ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆಯು ಗ್ರಾಮೀಣ ಪ್ರದೇಶಗಳಿಗೆ ಹೊಂದಿಕೊಳ್ಳುವ ನೂತನ ಮಾದರಿಯ ಕಂಪ್ಯೂಟರುಗಳನ್ನು ಬಿಡುಗಡೆ ಮಾಡಿತು. ಗ್ರಾಮೀಣ ಪ್ರದೇಶದ ಮುಖ್ಯ ಸಮಸ್ಯೆಗಳಾದ ಧೂಳು, ವಿದ್ಯುತ್ ವ್ಯತ್ಯಯ ಮತ್ತಿತರ ತೊಂದರೆಗಳಿಗೆ ಈ ಕಂಪ್ಯೂಟರ್ ಪರಿಹಾರವಾಗಬಲ್ಲುದು. ವಿದ್ಯುತ್ ವ್ಯತ್ಯಯವಾದರೂ ಕನಿಷ್ಠ 8ರಿಂದ 10 ಗಂಟೆ ಬಳಸಬಹುದಾದ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದ್ದು, ಧೂಳು ಕಂಪ್ಯೂಟರ್ ಒಳ ಸೇರದಂತೆ ಫಿಲ್ಟರ್ ಅಳವಡಿಸಲಾಗಿದೆ. ದರವೂ ಆಕರ್ಷಕವಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಬಿಲ್ ಸ್ಯೂ ದೆಹಲಿಯಲ್ಲಿ ಪ್ರಕಟಿಸಿದರು.

2006: ದೇಶದಲ್ಲಿ ಗೋಹತ್ಯೆಯ ಮೇಲೆ ಸಂಪೂರ್ಣ ನಿಷೇಧ ವಿಧಿಸಲು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ಮತ್ತು ತರುಣ್ ಚಟರ್ಜಿ ಅವರನ್ನು ಒಳಗೊಂಡ ಪೀಠವು ನಿರಾಕರಿಸಿತು.

2006: ಉತ್ತರ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿರುವ ಅಮರಸಿಂಗ್ ಅವರ ರಾಜ್ಯಸಭಾ ಸದಸ್ಯತ್ವವನ್ನು ಉಳಿಸುವ ಸಲುವಾಗಿ ಮುಲಾಯಂ ಸಿಂಗ್ ಸರ್ಕಾರವು ಮಸೂದೆಯೊಂದನ್ನು ತರಾತುರಿಯಲ್ಲಿ ಅಂಗೀಕರಿಸಿ 2003ರ ಅಕ್ಟೋಬರ್ 15ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ತರಲು ನಿರ್ಧರಿಸಿತು. `ಉತ್ತರ ಪ್ರದೇಶ ಅಭಿವೃದ್ಧಿ ಮಂಡಲಿ ಕಾಯ್ದೆ -2006'ರಲ್ಲಿ ಇಡೀ ಮಂಡಳಿಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ರೂಪಾಂತರಿಸಿ ಅದಕ್ಕೆ ಸ್ಥಳೀಯ ಸಂಸ್ಥೆಗಳ ಮಟ್ಟದ ಅಧಿಕಾರ ನೀಡಲಾಯಿತು.

2006: ಮನುಕುಲದ ಒಳಿತು, ಶಾಂತಿ, ಸಂತಸಕ್ಕಾಗಿ ನಡೆಸಲಾಗುವ ಶತಮಾನದ ಮೊದಲ `ಅಥೀರತ್ರಮ್' ಯಾಗವು ಕೇರಳದ ಪುಟ್ಟ ಗ್ರಾಮ ಮೂಲಂಕೋಡ್ನಲ್ಲಿ ಆರಂಭವಾಯಿತು. ಯಾಗದ ವಿಧಿಗಳನ್ನು ನಡೆಸುವ `ಯಜಮಾನನ್' ಕಾವೇರಪ್ರ ಮಾರತ್ ಶಂಕರನಾರಾಯಣನ್ ಸೋಮಯಾಜಿಪ್ಪಾಡ್ ಆಗಮನದೊಂದಿಗೆ ಶ್ರೀಕುರುಂಬ ಭಗವತಿ ದೇವಾಲಯದಲ್ಲಿ 12 ದಿನಗಳ ಯಾಗ ಚಾಲನೆಗೊಂಡಿತು. 72 ಮಂದಿ ವೈದಿಕ ತಜ್ಞರಿಂದ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವ ವೇದಗಳ ಮಂತ್ರಪಠಣ ನಡೆಯಿತು. ಕೇರಳದಲ್ಲಿ `ಅಗ್ನೀದಾನಮ್', `ಸೋಮಯಾಗಮ್' ಮತ್ತು `ಅಥೀರತ್ರಮ್' ಎಂಬ ಮೂರು ವಿಧದ ಯಾಗಗಳನ್ನು ನಡೆಸಲಾಗುತ್ತದೆ. ಇಡೀ ಯಾಗಶಾಲೆಯನ್ನು ಅಗ್ನಿಗೆ ಆಹುತಿ ನೀಡುವುದರೊಂದಿಗೆ `ಅಥೀರತ್ರಮ್' ಯಾಗ ಕೊನೆಗೊಳ್ಳುತ್ತದೆ.

1982: ತೆಲುಗು ಚಲನಚಿತ್ರ ನಟ ಎನ್.ಟಿ. ರಾಮರಾವ್ ಅವರ ಪ್ರಾದೇಶಿಕ ಪಕ್ಷ `ತೆಲುಗುದೇಶಂ' ಹೈದರಾಬಾದಿನಲ್ಲಿ ಉದಯವಾಯಿತು.

1965: ಸಂಗೀತ ಹಾಗೂ ಮೃದಂಗದಲ್ಲಿ ಖ್ಯಾತರಾದ ಆನೂರು ಅನಂತಕೃಷ್ಣ ಶರ್ಮ ಅವರು ಖ್ಯಾತ ಸಂಗೀತ ಮನೆತನದ ಆನೂರು ರಾಮಕೃಷ್ಣ- ಶ್ರೀಲಕ್ಷ್ಮಿ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1957: ನೂತನ ಸಂಸತ್ತಿನ ಕಾಂಗ್ರೆಸ್ ಪಕ್ಷದ ನಾಯರಾಗಿ ಪ್ರಧಾನಿ ಜವಾಹರಲಾಲ್ ನೆಹರೂ ಸರ್ವಾನುಮತದಿಂದ ಆಯ್ಕೆಯಾದರು.

1953: ಕಲಾವಿದ ಉದಯಶಂಕರ ಜನನ.

1949: ಕಲಾವಿದ ಎಂ.ಎಸ್. ಗೋವಿಂದಸ್ವಾಮಿ ಜನನ.

1939: ಕಲಾವಿದ ನಾರಾಯಣ ಢಗೆ ಜನನ.

1929: ಭಾರತದ ಚಿತ್ರನಟ ಉತ್ಪಲ್ ದತ್ (1929-1993) ಹುಟ್ಟಿದ ದಿನ.

1914: ಮದರ್ ಆಫ್ ಅರೋವಿಲ್ ಎಂದೇ ಖ್ಯಾತಳಾಗಿರುವ ಮಿರ್ರಾ ಅಲ್ಫಾಸಾ ಅವರು ಪಾಂಡಿಚೆರಿಯಲ್ಲಿ (ಈಗಿನ ಪುದುಚೆರಿ) ಅರವಿಂದ ಘೋಷ್ ಅವರನ್ನು ಮೊಟ್ಟ ಮೊದಲ ಬಾರಿಗೆ ಭೇಟಿ ಮಾಡಿದರು.

1912: ಜರ್ಮನಿಯ ಖ್ಯಾತ ವಿಮಾನ ಹಾರಾಟಗಾರ್ತಿ ಹನ್ನಾ ರೀಟ್ಸ್ಷ್ ಹುಟ್ಟಿದ ದಿನ. ಆಲ್ಫ್ ಪರ್ವತ ಶ್ರೇಣಿಯ ಮೇಲಿನಿಂದ ಗ್ಲೈಡರ್ ಹಾರಿಸಿದ ಪ್ರಥಮ ವ್ಯಕ್ತಿ ಈಕೆ. ಬರ್ಲಿನ್ನಿನ ಭೂಗತ ಬಂಕರಿನಲ್ಲಿ ಹಿಟ್ಲರನನ್ನು ಜೀವಂತವಾಗಿ ನೋಡಿದ ಕೊನೆಯ ವ್ಯಕ್ತಿಗಳ್ಲಲಿ ಈಕೆ ಕೂಡ ಒಬ್ಬಳು.

1869: ಇಂಗ್ಲಿಷ್ ಶಿಲ್ಪಿ ಎಡ್ವಿನ್ ಲ್ಯೂಟಿನ್ಸ್ (1869-1944) ಜನ್ಮದಿನ. ನವದೆಹಲಿಯ ಯೋಜನೆ ಹಾಗೂ `ವೈಸ್ರಾಯ್ಸ್ ಹೌಸ್'ನ ವಿನ್ಯಾಸ ರೂಪಿಸಿದ ವ್ಯಕ್ತಿ ಈತ. ಈತ ರೂಪಿಸಿದ `ವೈಸ್ರಾಯ್ಸ್ ಹೌಸ್' ಈಗ ರಾಷ್ಟ್ರಪತಿ ಭವನ.

1849: ಲಾರ್ಡ್ ಡಾಲ್ ಹೌಸಿಯು ಪಂಜಾಬ್ನ್ನು ವಶಪಡಿಸಿಕೊಂಡ.

1857: ಯುವ ಸೈನಿಕ ಮಂಗಲಪಾಂಡೆ ಬ್ಯಾರಕ್ ಪುರದಲ್ಲಿ ತನ್ನ ತುಕಡಿಯ ಸಾರ್ಜೆಂಟ್ ಮೇಜರನತ್ತ ಗುಂಡು ಹಾರಿಸಿದ. ಪಾಂಡೆಯನ್ನು ನಿರಾಯುಧನನ್ನಾಗಿ ಮಾಡಿ ನಂತರ ಗಲ್ಲಿಗೇರಿಸಲಾಯಿತು. ಈ ಘಟನೆ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ (ಸಿಪಾಯಿ ದಂಗ) ಮೂಲವಾಯಿತು.

1815: ಸರ್ ಹೆನ್ರಿ ಬಾರ್ಟಲ್ ಫ್ರೇರ್ (1815-1884) ಹುಟ್ಟಿದ ದಿನ. ಭಾರತದಲ್ಲಿ ಬ್ರಿಟಿಷ್ ವಸಾಹತಿನ ಆಡಳಿತಗಾರನಾಗಿದ್ದ ಈತ ಐದು ವರ್ಷಗಳ ಕಾಲ ಬಾಂಬೆಯ (ಈಗಿನ ಮುಂಬೈ) ಗವರ್ನರ್ ಆಗಿದ್ದ.

ಇಂದಿನ ಇತಿಹಾಸ History Today ಫೆಬ್ರುವರಿ 23

ಇಂದಿನ ಇತಿಹಾಸ

ಫೆಬ್ರುವರಿ 23

ಜಗತ್ತಿನ ಚಲನಚಿತ್ರರಂಗದ ಚರಿತ್ರೆಯಲ್ಲಿ ಭಾರತದ ಚಿನ್ನದ ಅಧ್ಯಾಯವೊಂದು ತೆರೆದುಕೊಂಡಿತು. ಭಾರತದ ಪಾಲಿಗೆ ದಶಕಗಳ ಕಾಲ ಕಂಡೂ ಕಾಣದೆ ಮರೀಚಿಕೆಯಂತಿದ್ದ ಆಸ್ಕರ್ ಕಿರೀಟವು 'ಸ್ಲಂಡಾಗ್ ಮಿಲಿಯನೇರ್' ಮೂಲಕ ಈ ನಾಡಿಗೆ ಲಭಿಸಿತು. ಮುಂಬೈ ಕೊಳೆಗೇರಿಯ ಬದುಕಿನ ಕಥಾನಕವೊಂದರ ಸುತ್ತ ಹೆಣೆದುಕೊಂಡ 'ಸ್ಲಂಡಾಗ್ ಮಿಲಿಯನೇರ್'ಗೆ ಸಂಗೀತ ನೀಡಿದ ಎ ಆರ್ ರೆಹಮಾನ್ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇರಳದ ಕೊಲ್ಲಮ್ ಜಿಲ್ಲೆಯ ರಸೂಲ್ ಪೂಕುಟ್ಟಿ ಇದೇ ಚಿತ್ರಕ್ಕಾಗಿ ಅತ್ಯುತ್ತಮ ಧ್ವನಿಸಂಯೋಜನೆ ಪ್ರಶಸ್ತಿಯನ್ನು ಪಡೆದುಕೊಂಡರು

2009: ಜಗತ್ತಿನ ಚಲನಚಿತ್ರರಂಗದ ಚರಿತ್ರೆಯಲ್ಲಿ ಭಾರತದ ಚಿನ್ನದ ಅಧ್ಯಾಯವೊಂದು ತೆರೆದುಕೊಂಡಿತು. ಭಾರತದ ಪಾಲಿಗೆ ದಶಕಗಳ ಕಾಲ ಕಂಡೂ ಕಾಣದೆ ಮರೀಚಿಕೆಯಂತಿದ್ದ ಆಸ್ಕರ್ ಕಿರೀಟವು 'ಸ್ಲಂಡಾಗ್ ಮಿಲಿಯನೇರ್' ಮೂಲಕ ಈ ನಾಡಿಗೆ ಲಭಿಸಿತು. ಮುಂಬೈ ಕೊಳೆಗೇರಿಯ ಬದುಕಿನ ಕಥಾನಕವೊಂದರ ಸುತ್ತ ಹೆಣೆದುಕೊಂಡ 'ಸ್ಲಂಡಾಗ್ ಮಿಲಿಯನೇರ್'ಗೆ ಸಂಗೀತ ನೀಡಿದ ಎ ಆರ್ ರೆಹಮಾನ್ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇರಳದ ಕೊಲ್ಲಮ್ ಜಿಲ್ಲೆಯ ರಸೂಲ್ ಪೂಕುಟ್ಟಿ ಇದೇ ಚಿತ್ರಕ್ಕಾಗಿ ಅತ್ಯುತ್ತಮ ಧ್ವನಿಸಂಯೋಜನೆ ಪ್ರಶಸ್ತಿಯನ್ನು ಪಡೆದುಕೊಂಡರು. ಭಾರತೀಯ ಕಾಲಮಾನದ ಅನ್ವಯ ಲಾಸ್ ಏಂಜಲೀಸಿನಲ್ಲಿ ನಡೆದ ಕಾರ್ಯಕ್ರಮವನ್ನು ಈದಿನ ಬೆಳಗ್ಗೆ ಆರೂವರೆಯಿಂದ ಭಾರತದ ಕೋಟ್ಯಂತರ ಮಂದಿ ವೀಕ್ಷಿಸಿದರು. ರೆಹಮಾನ್ ಮತ್ತು ಪೂಕುಟ್ಟಿ ವೇದಿಕೆ ಏರಿ 'ಪ್ರಶಸ್ತಿ' ಸ್ವೀಕರಿಸುತ್ತ್ದಿದುದನ್ನು ಭಾರತದಾದ್ಯಂತ ಅಸಂಖ್ಯಾತ ಮಂದಿ ಟೀವಿಯ ಮೇಲೆ ವೀಕ್ಷಿಸುತ್ತಾ ರೋಮಾಂಚನಗೊಂಡರು. ಭಾರತೀಯ ಚಿತ್ರರಂಗದ 'ದಂತಕಥೆ' ಸತ್ಯಜಿತ್ ರಾಯ್ ಅವರು ಜೀವನಶ್ರೇಷ್ಠ ಸಾಧನೆಗಾಗಿ 1992ರಲ್ಲಿ ಆಸ್ಕರ್ ಕಿರೀಟ ಧರಿಸಿದ್ದರೆ, ಅದಕ್ಕೂ ಮೊದಲು 1983ರಲ್ಲಿ ರಿಚರ್ಡ್ ಅಟೆನ್ ಬರೋ ಅವರ 'ಗಾಂಧಿ' ಚಿತ್ರದಲ್ಲಿ ಅತ್ಯುತ್ತಮ ವಸ್ತ್ರವಿನ್ಯಾಸಕ್ಕಾಗಿ ಭಾನು ಅಥೇಯಾ ಈ ಪ್ರಶಸ್ತಿ ಪಡೆದಿದ್ದರು. ಈ ಎರಡು ಆಸ್ಕರ್ 'ಮಿಂಚು'ಗಳನ್ನು ಹೊರತು ಪಡಿಸಿದರೆ ಭಾರತೀಯರ ಪಾಲಿಗೆ ಮರೀಚಿಕೆಯಂತಿದ್ದ ಆಸ್ಕರ್ ಇದೀಗ ಏಕಾಏಕಿ ಹೊಳೆಯಾಗಿ ಹರಿದು ಬಂದಿತು. ಭಾರತೀಯ ರಾಜತಾಂತ್ರಿಕ ವಿಕಾಸ್ ಸ್ವರೂಪ್ ಅವರ 'ಕ್ಯೂ ಅಂಡ್ ಎ' ಕಾದಂಬರಿ ಆಧಾರಿತ 'ಸ್ಲಂಡಾಗ್ ಮಿಲಿಯನೇರ್' 81ನೇ ಅಕಾಡೆಮಿ ಪ್ರಶಸ್ತಿಗಳ ಹತ್ತು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಸ್ಲಂಡಾಗ್ ಮಿಲಿಯನೇರ್ ನಿರ್ದೇಶಕ ಇಂಗ್ಲೆಂಡಿನ ಡ್ಯಾನಿ ಬೊಯ್ಲಾ ಅವರಿಗಂತೂ ಹೇಳಿತೀರದ ಸಂತಸ. ಅವರ ಈ 'ಸಾಧನೆ'ಗೆ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೆಶಕ ಪ್ರಶಸ್ತಿಗಳು ಲಭ್ಯವಾದವು. ಇದಲ್ಲದೆ ಇತರ 6 ಪ್ರಶಸ್ತಿಗಳನ್ನು ಈ ಚಿತ್ರ ಪಡೆದುಕೊಂಡಿತು.


2009: ಕಾನ್ಪುರದ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ವೈ-ಫೈ ಜಾಲ ಭೇದಿಸುವುದನ್ನು ತಡೆಯುವ ನೂತನ ತಂತ್ರಜ್ಞಾನವನ್ನು ಕಂಡು ಹಿಡಿಯಿತು. ಇದರ ಮೂಲಕ ಭಯೋತ್ಪಾದಕರು ರಹಸ್ಯ ತಾಣದಲ್ಲಿ ಕುಳಿತು ಮಾಹಿತಿಗಳನ್ನು ಕಲೆ ಹಾಕಿ ದಾಳಿಯ ಸಂಚು ರೂಪಿಸುವುದನ್ನು ತಡೆಯಬಹುದು. ಅಹಮದಾಬಾದಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ನಂತರ ಇಂಟರ್‌ನೆಟ್ ಪ್ರೊಟೊಕಾಲ್ (ಐಫೈ) ಮೂಲಕ ಭಯೋತ್ಪಾದಕರು ವಿವರ ಸಂಗ್ರಹಿಸಿ ದಾಳಿಯ ಸಂಚು ರೂಪಿಸಿರುವುದು ಬೆಳಕಿಗೆ ಬಂದಿತ್ತು. ವೈರ್‌ಲೆಸ್ ಇಂಟ್ರೂಶನ್ ಫ್ರೈವೆನ್ಸ್‌ನ್ ಸಿಸ್ಟಂ (ವಿಪ್ಸ್) ಎಂದು ಕರೆಯಲಾಗುವ ಈ ಹೊಸ ತಂತ್ರಜ್ಞಾನದಲ್ಲಿ ಯಾರೇ ಮಾಹಿತಿ ಕದಿಯಲು ಯತ್ನಿಸಿದರೆ ವೈ-ಫೈ ಪದ್ಧತಿಯಲ್ಲಿ ಅಳವಡಿಸಲಾದ ಸೆನ್ಸಾರ್ ಕೂಗಿಕೊಳ್ಳುತ್ತದೆ ಮತ್ತು ಮಾಹಿತಿ ದೊರೆಯದಂತೆ ಲಾಕ್ ಆಗುತ್ತದೆ ಎಂದು ಐಐಟಿ ಕಾನ್ಪುರದ ನಿರ್ದೇಶಕ ಸಂಜಯ್ ಗೋವಿಂದ ಧಾಂಡೆ ಹೇಳಿದರು. ಪ್ರವೀಣ್ ಭಾಗವತ್ ಅವರ ತಂಡ ಈ ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿದೆ. ಅಹಮದಾಬಾದ್ ಬಾಂಬ್ ಸ್ಫೋಟದಲ್ಲಿ ಸರ್ಕಾರಿ ಮತ್ತು ವ್ಯವಹಾರ ಕೇಂದ್ರಗಳಲ್ಲಿ ಅಳವಡಿರುವ ವೈ-ಫೈ ಸಿಸ್ಟಂ ಮೂಲಕ ಭಯೋತ್ಪಾದಕರು ಮಾಹಿತಿ ಕಲೆಹಾಕಲು ಮುಂದಾಗಿದ್ದರು. ಭದ್ರತಾ ಏಜೆನ್ಸಿಗಳಿಗೆ ಈ ರಹಸ್ಯ ತಿಳಿದಿರಲಿಲ್ಲ. ಆದರೆ ಈಗ ಕಂಡುಹಿಡಿಯಲಾಗಿರುವ ಹೊಸ ತಂತ್ರಜ್ಞಾನದಿಂದ ಉಗ್ರರಿಗೆ ಯಾವುದೇ ಕೃತ್ಯಕ್ಕೂ ಮಾಹಿತಿ ದೊರೆಯಲಾರದು. ಅಹಮದಾಬಾದ್‌ನ ಸರಣಿ ಸ್ಫೋಟದ ಹೊಣೆ ಹೊತ್ತು ಅಮೆರಿಕದ ಹೇವುಡ್ ಕಂಪ್ಯೂಟರ್ ಕೇಂದ್ರದಿಂದ ಕಳೆದ ವರ್ಷದ ಜುಲೈ 27 ರಂದು ಒಂದು ಈ ಮೇಲ್ ಬಂದಿತ್ತು. ಆದರೆ ಈ ಕೇಂದ್ರದ ಮುಖ್ಯಸ್ಥರು ತಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದರು. ಇಂಟರ್‌ನೆಟ್ ಪ್ರೊಟೊಕಾಲ್ (ವೈ-ಫೈ) ವಿಳಾಸವನ್ನು ಬಳಸಿಕೊಂಡು ಈ ಕೆಲಸ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದರು.

2009: ಆಸ್ಕರ್ ಚಿತ್ರದ ಬೆಡಗಿ... ಫ್ರೀದಾ: ಮಂಗಳೂರು ಹುಡುಗಿ. ಸದಾ ಸ್ದುದಿಯಲ್ಲಿರುವ ಊರು ಮಂಗಳೂರು. ಅದು ದೇಶಕ್ಕೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಾಗಲೂ ನಂಟು ಹಾಕಿಕೊಳ್ಳುತ್ತದೆ. ವಿಶ್ವಸುಂದರಿ ಪಟ್ಟ ಅಲಂಕರಿಸಿದ ಐಶ್ವರ್ಯ ರೈ, ಬೂಕರ್ ಪಡೆದ ಅರವಿಂದ ಅಡಿಗ, ಈಗ ಆಸ್ಕರ್ ವಿಜೇತ ಚಿತ್ರದ ಫ್ರೀದಾ... ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯಲ್ಲಿ 'ಸ್ಲಮ್ ಡಾಗ್ ಮಿಲಿಯನೇರ್' ಸಿಂಹಪಾಲು ಪಡೆಯುವುದರೊಂದಿಗೆ ಚಿತ್ರದ ನಟಿ ಫ್ರೀದಾ ಪಿಂಟೋ ಅವರ ಮಂಗಳೂರು ಮೂಲವೂ ಪ್ರಸಿದ್ಧಿಗೆ ಬಂತು. ಫ್ರೀದಾ ಪಿಂಟೋ ಸಂದರ್ಶನವೊಂದರಲ್ಲಿ ತಮ್ಮ ಮೂಲ ಮಂಗಳೂರು ಎಂದು ಹೇಳಿದರು. ಆದರೆ ಆಕೆಯ ತಂದೆ ತಾಯಿ ಬಹಳ ವರ್ಷಗಳ ಹಿಂದೆಯೇ ಮುಂಬೈಗೆ ತೆರಳಿದ್ದರು. ಸದ್ಯ ಮುಂಬೈ ವಾಸಿಗಳು. ಫ್ರೀದಾಳ ತಂದೆ ಕಾರ್ಕಳ ತಾಲ್ಲೂಕಿನ ನೀರುಡೆಯ ಫ್ರೆಡ್ರಿಕ್ ಪಿಂಟೋ. ಪ್ರಸ್ತುತ ಬ್ಯಾಂಕ್ ಆಫ್ ಬರೋಡಾದ ಮುಂಬೈ ಶಾಖೆಯಲ್ಲಿ ಹಿರಿಯ ಪ್ರಬಂಧಕ. ತಾಯಿ ಮಂಗಳೂರು ದೇರೆಬೈಲಿನ ಸಿಲ್ವಿಯಾ ಪಿಂಟೋ. ಮುಂಬೈಯ ಸಂತ ಜೋನ್ಸ್ ಪ್ರೌಢಶಾಲೆಯ ಪ್ರಾಂಶುಪಾಲೆ. ಈ ದಂಪತಿಯ ಎರಡನೇ ಮಗಳು ಫ್ರೀದಾ. ಪಿಂಟೋ ಎಂಬುದು ಗೋವಾ ಮೂಲದಿಂದ ಮಂಗಳೂರಿಗೆ ಬಂದ ಒಂದು ಪಂಥಾನುಯಾಯಿ ಕೊಂಕಣಿ ಕ್ರೈಸ್ತರ ಸರ್‌ನೇಮ್. ಪಿಂಟೋ ಹೆಸರಿನ ಮಂದಿ ಹೆಚ್ಚಾಗಿರುವುದು ಮಂಗಳೂರು, ಗೋವಾ, ಮುಂಬೈ ಕರಾವಳಿಯಲ್ಲಿ.
ಫ್ರೀದಾಗೆ ತಮ್ಮ ಮಂಗಳೂರು ಮೂಲದ ಬಗ್ಗೆ ಹೆಮ್ಮೆಯಿದೆ. ಇಲ್ಲಿನ ದೈಜಿ ವರ್ಲ್ಡ್ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ, 'ನಾನು ಮೊದಲು ಭಾರತೀಯಳು ಹಾಗೂ ಮಂಗಳೂರಿನವಳು. ಯಾಕೆಂದರೆ ನನ್ನ ತಂದೆ- ತಾಯಿ ಮಂಗಳೂರಿನವರು. ಬಾಲ್ಯದ ಕೆಲ ಸಮಯವನ್ನು ಮಂಗಳೂರಿನಲ್ಲಿ ಕಳೆದ್ದಿದೇನೆ' ಎಂದು ಹೇಳಿದರು.

2009: ಕನ್ನಡ ಚಲನಚಿತ್ರ ಕಲಾವಿದರು, ಕಾರ್ಮಿಕರು ಮತ್ತು ತಂತ್ರಜ್ಞರ ಒಕ್ಕೂಟವು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ.ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ಆಯೋಜಿಸಿದ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಚಾಲನೆ ನೀಡಿದರು. ಅಮೃತ ಮಹೋತ್ಸವ ಕುರಿತು ಪ್ರಚಾರ ನೀಡುವ ಉದ್ದೇಶಕ್ಕಾಗಿ ರೂಪಿಸಿದ ಬೇಲೂರು ಶಿಲಾಬಾಲಿಕೆ ಮಾದರಿಯ ಸ್ತಬ್ಧಚಿತ್ರವನ್ನು ಅನಾವರಣ ಮಾಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಲಾಯಿತು. ಬಳಿಕ ಪಾರ್ವತಮ್ಮ ಅವರು, ಕನ್ನಡ ಚಿತ್ರರಂಗದ ಹಲವು ಗಣ್ಯರನ್ನು ಗೌರವಿಸಿದರು.

2008: ಕನ್ನಡದ ಖ್ಯಾತ ಸಾಹಿತಿ ಯಶವಂತ ಚಿತ್ತಾಲ ಅವರಿಗೆ ಅವರ ಕರ್ಮಭೂಮಿಯಾದ ಮಹಾನಗರ ಮುಂಬೈಯಲ್ಲಿ ಅಪಾರ ಸಂಖ್ಯೆಯ ಕನ್ನಡಿಗರ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮುಂಬೈಯ ಕನ್ನಡ ಸಂಘಗಳ ಸಹಕಾರದಿಂದ ಏರ್ಪಡಿಸಿದ ಸುವರ್ಣ ಕರ್ನಾಟಕ ಮುಂಬಯಿ ಉತ್ಸವದ ಸಂದರ್ಭದಲ್ಲಿ ನಾಡೋಜ ಪ್ರೊ. ದೇ.ಜವರೇಗೌಡ ಅವರು ಒಂದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಪತ್ರವನ್ನು ಒಳಗೊಂಡ ಪ್ರಶಸ್ತಿಯನ್ನು ಯಶವಂತ ಚಿತ್ತಾಲ ಅವರಿಗೆ ನೀಡಿದರು.

2008: ಬೀದರಿನ ವಾಯುಪಡೆಯ ತರಬೇತಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಬ್ರಿಟನ್ ನಿರ್ಮಿತ ಅತ್ಯಾಧುನಿಕ `ಹಾಕ್ ಎಂ.ಕೆ. 132' (ಅಡ್ವಾನ್ಸ್ಡ್ ಜೆಟ್ ಟ್ರೇನರ್) ಯುದ್ಧವಿಮಾನಗಳನ್ನು ದೇಶಕ್ಕೆ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ವಾಯುಪಡೆಯ ಅಂಚೆ ವಿಭಾಗವು ಸಿದ್ಧಪಡಿಸಿದ ವಿಶೇಷ ಲಕೋಟೆಯನ್ನು ರಕ್ಷಣಾ ಸಚಿವರು ಬಿಡುಗಡೆಗೊಳಿಸಿದರು.

2008: ವಾಣಿಜ್ಯ ಉದ್ದೇಶದ ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಕ ಕಡ್ಡಾಯ ಆದೇಶ ವಿರೋಧಿಸಿ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟ ಹಾಗೂ ಇತರೆ ಸಂಘಟನೆಗಳು ಕರೆ ಮೇರೆಗೆ ನಡೆದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯದ ದಕ್ಷಿಣ ಭಾಗದಲ್ಲಿ ಮುಷ್ಕರ ಬಹುತೇಕ ಯಶಸ್ವಿಯಾದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗಲಿಲ್ಲ.

2008: ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಮಾಜಿ ನಿರ್ದೇಶಕ ಮತ್ತು ರಾಜ್ಯ ಆಟೊಮೊಬೈಲ್ ವಿತರಕರ ಸಂಘಟನೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಖ್ಯಾತ ಉದ್ಯಮಿ ವಿ.ಟಿ.ವೇಲು (88) ಬೆಂಗಳೂರಿನಲ್ಲಿ ನಿಧನರಾದರು. ಉದ್ಯಮಿ ವಿ.ಎಸ್. ತಿರುವೆಂಗಡಸ್ವಾಮಿ ಮುದಲಿಯಾರ್ ಅವರ ಪುತ್ರ ವಿ.ಟಿ.ವೇಲು ಅವರು ಬೆಂಗಳೂರಿನ ಆರ್ ಬಿ ಎ ಎನ್ ಎಂ ಎಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಬಳಿಕ ಮದ್ರಾಸಿನಲ್ಲಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಯನ ಪೂರ್ಣಗೊಳಿಸಿ ಉದ್ಯಮಕ್ಷೇತ್ರದತ್ತ ಆಸಕ್ತಿ ತಳೆದರು. ಇಂಡಿಯಾ ಗ್ಯಾರೇಜ್ ಮತ್ತು ಸದರ್ನ್ ಮೋಟಾರ್ಸ್ ಸಂಸ್ಥೆಗಳಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು ವಿ ಎಸ್ ಟಿ ಮೋಟಾರ್ಸ್ ಲಿಮಿಟೆಡ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಜೂನ್ 1967ರಲ್ಲಿ ರಾಜ್ಯ ಆಟೊಮೊಬೈಲ್ ವಿತರಕರ ಸಂಘಟನೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಕೆಲ ವರ್ಷಗಳ ಕಾಲ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಮಿಟ್ಸುಬಿಷಿ ಪವರ್ ಟಿಲ್ಲರ್ಸ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮೂವತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಮೈಸೂರು ಪೇಪರ್ ಮಿಲ್ಸ್, ಚೋಳಮಂಡಲಂ ಇನ್ವೆಸ್ಟ್ ಮೆಂಟ್ ಅಂಡ್ ಫೈನಾನ್ಸ್ ಲಿಮಿಟೆಡ್, ಹಟ್ಟಿ ಗೋಲ್ಡ್ ಮೈನ್ಸ್ ಮತ್ತು ಲಕ್ಷ್ಮಿ ಮಿಲ್ಸ್ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ಥಾಪನೆಗೊಳ್ಳುವ ಮುನ್ನ ನಗರಾಭಿವೃದ್ಧಿಗಾಗಿ ರೂಪಿಸಲಾಗಿದ್ದ ಮಂಡಳಿಗೆ ಸದಸ್ಯರಾಗಿ ವೇಲು ಅವರನ್ನು ಸರ್ಕಾರ ನಾಮಕರಣ ಮಾಡಿತ್ತು. ಟೆನ್ನಿಸ್ ಪಟು ಕೂಡ ಆಗಿದ್ದ ಅವರು ಮೈಸೂರು ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್, ಬೆಂಗಳೂರು ಟರ್ಫ್ ಕ್ಲಬ್ ಮತ್ತು ಬೆಂಗಳೂರು ಕ್ಲಬ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಮಲಾಬಾಯಿ ಬಾಲಕಿಯರ ಶೈಕ್ಷಣಿಕ ಟ್ರಸ್ಟಿನ ಗೌರವ ಕಾರ್ಯದರ್ಶಿ ಮತ್ತು ರೋಟರಿ ಕ್ಲಬ್ ಸದಸ್ಯರಾಗಿದ್ದ ಅವರು ಸಾಮಾಜಿಕ ಕಳಕಳಿ ಹೊಂದಿದ್ದರು.

2008: ಕೊಂಕಣಿಯ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂವರು ಸಾಧಕರಾದ ಸಾಹಿತ್ಯ ಕ್ಷೇತ್ರದ ಉಡುಪಿಯ ಡಾ. ಜೆರಾಲ್ಡ್ ಪಿಂಟೋ, ಜಾನಪದ ಕ್ಷೇತ್ರದ ಕುಂಬ್ರಿ ಹೊನ್ನಾವರದ ಮಂಜಯ್ಯ ಶಿವು ಹಾಗೂ ಕಲೆ (ನಾಟಕ) ಕ್ಷೇತ್ರದ ಮಂಗಳೂರಿನ ಫ್ರಾನ್ಸಿಸ್ ಫರ್ನಾಂಡಿಸ್ ಕಾಸ್ಸಿಯಾ ಅವರನ್ನು ಕೊಂಕಣಿ ಸಾಹಿತ್ಯ ಅಕಾಡೆಮಿಯ 2007ನೇ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿತು.

2008: `ಚೀನಿ ಕಮ್' ಚಿತ್ರದಲ್ಲಿ ಅಭಿನಯಕ್ಕಾಗಿ ನಟಿ ಟಬು ಫಿಲಂ ಫೇರ್ ಪ್ರಶಸ್ತಿಯ `ಉತ್ತಮ ನಟಿ' ಗೌರವವನ್ನು ತಮ್ಮದಾಗಿಸಿಕೊಂಡರು. `ತಾರೆ ಜಮೀನ್ ಪರ್' ಚಿತ್ರದ ದರ್ಶೀಲ್ ಉತ್ತಮ ನಟ ಪ್ರಶಸ್ತಿ ಗಳಿಸಿದರು. ಶಾರುಕ್ ಖಾನ್ ನಟಿಸಿದ `ಚಕ್ ದೇ ಇಂಡಿಯ'ವು ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, `ಗುರು' ಚಿತ್ರಕ್ಕಾಗಿ ಎ. ಆರ್. ರೆಹಮಾನ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು.

2007: ನಿತಾರಿ ಮಕ್ಕಳ ಸರಣಿ ಹತ್ಯೆ ಹಿನ್ನೆಲಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಅಸ್ತಿತ್ವಕ್ಕೆ ಬಂತು. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತೆ ಶಾಂತಾ ಸಿನ್ಹಾ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಮಕ್ಕಳ ಹಕ್ಕುಗಳ ಸೂಕ್ತ ಜಾರಿ ಹಾಗೂ ಅವರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಕಾನೂನಿನ ಪರಿಣಾಮಕಾರಿ ಅನುಷ್ಠಾನದ ಉಸ್ತುವಾರಿಯನ್ನು ಈ ಆಯೋಗದ್ದು.

2007: ಅಲ್ಕಟೆಲ್-ಲುಸೆಂಟ್ ಸಂಸ್ಥೆ ಹಕ್ಕುಸ್ವಾಮ್ಯ ಹೊಂದಿದ್ದ ಆಡಿಯೋ ತಂತ್ರಜ್ಞಾನವನ್ನು ಕೃತಿ ಚೌರ್ಯ ಮಾಡ್ದಿದಕ್ಕಾಗಿ 15.2 ಕೋಟಿ ಡಾಲರ್ (ಸುಮಾರು 6800 ಕೋಟಿ ರೂಪಾಯಿ) ನಷ್ಟ ತುಂಬಿಕೊಡಬೇಕು ಎಂದು ಅಮೆರಿಕದ ಫೆಡರಲ್ ಕೋರ್ಟ್ ಪ್ರಮುಖ ಸಾಫ್ಟ್ ವೇರ್ ಸಂಸ್ಥೆ ಮೈಕ್ರೋಸಾಫ್ಟ್ ಗೆ ಆದೇಶ ನೀಡಿತು.

2007: ಪಾಕಿಸ್ಥಾನವು 2000 ಕಿ.ಮೀ. ವ್ಯಾಪ್ತಿಯ ದೂರಗಾಮೀ ಕ್ಷಿಪಣಿ `ಶಹೀನ್-2'ರ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಈ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆಯನ್ನು ನಿರ್ದಿಷ್ಟ ಗುರಿಯ ಮೇಲೆ ಕರಾರುವಾಕ್ಕಾಗಿ ಸ್ಫೋಟಿಸುವ ಸಾಮರ್ಥ್ಯ ಹೊಂದಿದೆ.

2007: ರಂಗಭೂಮಿಯ ಕಲಾ ಕಣಜ ಎಂದೇ ಖ್ಯಾತರಾಗಿದ್ದ ರಂಗ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣ್ಣಿ ವೀರಭದ್ರಪ್ಪ (97) ಅವರು ಹೂವಿನ ಹಡಗಲಿ ಪಟ್ಟಣದಲ್ಲಿ ನಿಧನರಾದರು.

2007: ನೇಪಾಳದ ರಾಜಕುಟುಂಬದ ಹತ್ಯಾಕಾಂಡದ (2001) ಕಥಾ ನಾಯಕಿ ದೇವಯಾನಿ (34) ರಾಣಾ ಅವರ ಮದುವೆ ಭಾರತದ ಕೇಂದ್ರ ಸಚಿವ ಅರ್ಜುನ್ ಸಿಂಗ್ ಅವರ ಮೊಮ್ಮಗ 25ರ ಹರೆಯದ ಉದ್ಯಮಿ ಐಶ್ವರ್ಯಸಿಂಗ್ ಜೊತೆ ನವದೆಹಲಿಯಲ್ಲಿ ನಡೆಯಿತು.

2006: ರಷ್ಯಾ ರಾಜಧಾನಿ ಮಾಸ್ಕೋದಲ್ಲಿನ ಒಳಾಂಗಣ ವಾಣಿಜ್ಯ ಸಮುಚ್ಛಯ ಕುಸಿದು ಬಿದ್ದು 40 ಜನ ಮೃತರಾಗಿ 24ಕ್ಕೂ ಹೆಚ್ಚು ಜನ ಗಾಯಗೊಂಡರು.

2006: ಆಫ್ರಿಕಾ ಖಂಡದ ಮೊಜಾಂಬಿಕ್, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಫೆಬ್ರುವರಿ 22 ಮಧ್ಯರಾತ್ರಿ ಪ್ರಬಲ ಭೂಕಂಪ ಸಂಭವಿಸಿತು. 100 ವರ್ಷಗಳ ನಂತರ ಆಫ್ರಿಕಾದಲ್ಲಿ ಇಂತಹ ಪ್ರಬಲ ಭೂಕಂಪ ಸಂಭವಿಸಿತು.
2006: ಚಿತ್ರನಟಿ ಪ್ರೇಮಾ ಅವರ ನಿಶ್ಚಿತಾರ್ಥ ಸಾಫ್ಟ್ ವೇರ್ ಎಂಜಿನಿಯರ್ ಜೀವನ್ ಅಪ್ಪಚ್ಚು ಅವರ ಜೊತೆಗೆ ಬೆಂಗಳೂರಿನಲ್ಲಿ ನೆರವೇರಿತು.

2006: ಪ್ರೋತ್ಸಾಹದ ಮತ್ತು ಪ್ರಾಯೋಜಕರ ಕೊರತೆಯ ಕಾರಣ ಕರ್ನಾಟಕದ ಖ್ಯಾತ ಈಜುಗಾರ್ತಿ ನಿಶಾ ಮಿಲ್ಲೆಟ್ ನಿವೃತ್ತಿ ಘೋಷಿಸಿದರು.

2000: ವರ್ಷದ ಆಲ್ಬಮ್ ಸೇರಿದಂತೆ ಎಂಟು ಗ್ರಾಮ್ಮಿ ಪ್ರಶಸ್ತಿಗಳನ್ನು `ಸೂಪರ್ ನ್ಯಾಚುರಲ್' ಗಾಗಿ ಗೆದ್ದ ಕಾರ್ಲೋಸ್ ಸಂಟಾನಾ ಅವರು 1983ರಲ್ಲಿ ಒಂದೇ ರಾತ್ರಿಯಲ್ಲಿ ಮೈಕೆಲ್ ಜಾಕ್ಸನ್ ಮಾಡಿದ್ದ ದಾಖಲೆಗಳನ್ನು ಸರಿಗಟ್ಟಿದರು.
1997: ಸ್ಕಾಟ್ ಲ್ಯಾಂಡಿನಲ್ಲಿ ವಿಜ್ಞಾನಿಗಳು ವಯಸ್ಕ ಸ್ತನಿಯ ತದ್ರೂಪು ಸೃಷ್ಟಿಯಲ್ಲಿ (ಕ್ಲೋನಿಂಗ್) ತಾವು ಯಶಸ್ವಿಯಾಗಿದ್ದು ಈ ವಿಧಾನದಲ್ಲಿ `ಡಾಲಿ' ಹೆಸರಿನ ಕುರಿ ಮರಿಯನ್ನು ಸೃಷ್ಟಿಸಿರುವುದಾಗಿ ಪ್ರಕಟಿಸಿದರು.

1954: ಪಿಟ್ಸ್ ಬರ್ಗಿನಲ್ಲಿ ಮೊತ್ತ ಮೊದಲ ಬಾರಿಗೆ ಪೋಲಿಯೊ ವಿರುದ್ಧ ಮಕ್ಕಳಿಗೆ ಸಾಮೂಹಿಕ ಲಸಿಕೆ ಹಾಕಲಾಯಿತು.

1937: ರಾಜಲಕ್ಷ್ಮೀ ತಿರುನಾರಾಯಣ್ ಜನನ.

1935: ಕಲಾವಿದ ಎಚ್. ಎಂ. ಚೆನ್ನಯ್ಯ ಜನನ.

1930: ಖ್ಯಾತ ಸುಗಮ ಸಂಗೀತ ಗಾಯಕ ದೀನನಾಥ ಮಂಜೇಶ್ವರ ಅವರ ಶಿಷ್ಯ ಪರಂಪರೆಯ ಎಂ. ಎನ್. ಶೇಷಗಿರಿ (23-2-1930ರಿಂದ 15-2-2005) ಅವರು ನಿಂಗಪ್ಪ- ಗಂಗಮ್ಮ ದಂಪತಿಯ ಮಗನಾಗಿ ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ಜನಿಸಿದರು.

1905: ನಾಗರಿಕ ಸೇವಾ ಸಂಸ್ಥೆ ರೋಟರಿ ಕ್ಲಬ್ ಅಮೆರಿಕಾದಲ್ಲಿ ಸ್ಥಾಪನೆಗೊಂಡಿತು. ಷಿಕಾಗೊ ಅಟಾರ್ನಿ ಪಾವುಲ್ ಪಿ. ಹ್ಯಾರಿಸ್ ಇದರ ಸ್ಥಾಪಕರು. ಒಬ್ಬರ ಬಳಿಕ ಒಬ್ಬರಂತೆ ಸದಸ್ಯರ ಕಚೇರಿಗಳಲ್ಲಿ ಸಂಸ್ಥೆಯ ಸಭೆ ನಡೆಯಬೇಕಾಗಿದ್ದುದರಿಂದ ಇದಕ್ಕೆ `ರೋಟರಿ' ಹೆಸರನ್ನು ನೀಡಲಾಯಿತು. 1912ರಲ್ಲಿ ಇದರ ಹೆಸರು `ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ರೋಟರಿ ಕ್ಲಬ್ಸ್' ಎಂಬುದಾಗಿ ಬದಲಾಯಿತು. ಈಗಿನ `ರೋಟರಿ ಇಂಟರ್ ನ್ಯಾಷನಲ್' ಎಂಬ ಹೆಸರನ್ನು 1922ರಲ್ಲಿ ಅಂಗೀಕರಿಸಲಾಯಿತು.

1884: ಕಾಸಿಮೀರ್ ಫಂಕ್ (1884-1967) ಹುಟ್ಟಿದ ದಿನ. ಪೋಲಿಷ್ ಅಮೆರಿಕನ್ ಜೀವ ರಸಾಯನ ತಜ್ಞನಾದ ಈತ `ವಿಟಮಿನ್' ಶಬ್ಧವನ್ನು ಚಲಾವಣೆಗೆ ತಂದ.

1874: ಇಂಗ್ಲಿಷ್ ವ್ಯಕ್ತಿ ಮೇಜರ್ ವಾಲ್ಟೇರ್ ವಿಂಗ್ ಫೀಲ್ಡ್ `ಸ್ಪೆಯಿರಿಸ್ಟಿಕ್' (Sphairistike') ಹೆಸರಿನಲ್ಲಿ `ಲಾನ್ ಟೆನಿಸ್' ಆಟಕ್ಕೆ ಪೇಟೆಂಟ್ ಪಡೆದ.

1834: ಗುಸ್ತಾವ್ ನಾಚ್ಟಿಗಲ್ (1834-1885) ಹುಟ್ಟಿದ ದಿನ. ಜರ್ಮನ್ ಸಂಶೋಧಕನಾದ ಈತ ಸಹಾರಾ ಮರುಭೂಮಿಯನ್ನು ಕಂಡು ಹಿಡಿದ.

1821: ಕವಿ ಜಾನ್ ಕೀಟ್ಸ್ ರೋಮಿನಲ್ಲಿ ತನ್ನ 25ನೇ ವಯಸ್ಸಿನಲ್ಲಿ ಕ್ಷಯರೋಗಕ್ಕೆ ತುತ್ತಾಗಿ ಅಸುನೀಗಿದ.

Sunday, March 28, 2010

ಇಂದಿನ ಇತಿಹಾಸ History Today ಮಾರ್ಚ್ 28

ಇಂದಿನ ಇತಿಹಾಸ

ಮಾರ್ಚ್ 28
ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಸ್ಲಂಡಾಗ್ ಮಿಲಿಯನೇರ್ ಚಿತ್ರದ 'ಜೈ ಹೋ' ಗೀತೆಯ ವಿರುದ್ಧ ಬಿಜೆಪಿ 'ಭಯ್‌ ಹೋ' ಎಂಬ ಅದೇ ಮಾದರಿಯ ಸ್ವರವಿರುವ ಅಣಕು ಗೀತೆಯೊಂದನ್ನು ಛೂ ಬಿಟ್ಟಿತು.

2009: ಪ್ರಚೋದನಕಾರಿ ಭಾಷಣದ ಆರೋಪಕ್ಕೆ ಗುರಿಯಾದ ಬಿಜೆಪಿಯ ಲೋಕಸಭಾ ಚುನಾವಣಾ ಅಭ್ಯರ್ಥಿ ವರುಣ್ ಗಾಂಧಿ ಉತ್ತರಪ್ರದೇಶದ ಪಿಲಿಭಿಟ್ ನ್ಯಾಯಾಲಯಕ್ಕೆ ಶರಣಾದರು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಮುಸ್ಲಿಮ್ ವಿರೋಧಿ ಭಾಷಣದ ಹಿನ್ನೆಲೆಯಲ್ಲಿ ತೀವ್ರ ವಿವಾದಕ್ಕೆ ಗುರಿಯಾದ ವರುಣ್ ತಾವು ಜೈಲಿಗೆ ಹೋಗಲು ಸಿದ್ಧ ಎಂದು ಹೇಳಿದ ಕೆಲವೇ ಕ್ಷಣದಲ್ಲಿ ನ್ಯಾಯಾಧೀಶರು ಈ ಆದೇಶ ನೀಡಿದರು. ಇದಕ್ಕೆ ಮುನ್ನ ತಮ್ಮ ಪರ ಘೋಷಣೆ ಕೂಗುತ್ತಾ ಬಿಜೆಪಿಯ ಧ್ವಜ ಹಿಡಿದಿದ್ದ ಬೃಹತ್ ಸಂಖ್ಯೆಯ ಬೆಂಬಲಿಗರೊಂದಿಗೆ ನವದೆಹಲಿಯಿಂದ ಬಂದ ಅವರು ನ್ಯಾಯಾಲಯದ ಆವರಣ ಪ್ರವೇಶಿಸಿದ್ದರು.

2009: ಭೂಮಿಯನ್ನು ತಾಪಮಾನ ಹೆಚ್ಚಳದಿಂದ ರಕ್ಷಿಸುವ ಉದ್ದೇಶದಿಂದ ಸಿಡ್ನಿಯಲ್ಲಿ ಈದಿನ ರಾತ್ರಿ ಒಂದು ಗಂಟೆ ವಿದ್ಯುದ್ದೀಪಗಳನ್ನು (ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 8.30 ರಿಂದ 9.30) ಆರಿಸಿ ಜಗತ್ತಿನ ಇತರೆಡೆಗಳಿಗಿಂತ ಮೊದಲಾಗಿ ಜಾಗತಿಕ 'ಅರ್ತ್ ಅವರ್' ಆಚರಿಸಲಾಯಿತು. ಹೀಗಾಗಿ ಸದಾ ವಿದ್ಯುದ್ದೀಪಗಳಿಂದ ಝಗಮಗಿಸುವ ಸಿಡ್ನಿಯ ಒಪೆರಾ ಹೌಸ್ ಹಾಗೂ ಹಾರ್ಬರ್ ಬ್ರಿಜ್‌ನಲ್ಲಿ ರಾತ್ರಿ ಒಂದು ತಾಸು ಗಾಢಾಂಧಕಾರ ಕವಿದಿತ್ತು. ಪೆಸಿಫಿಕ್ ದ್ವೀಪಸಮೂಹಗಳಲ್ಲಿಯೇ ಅತ್ಯಂತ ದೊಡ್ಡದಾದ ಚಥಂ ದ್ವೀಪದಲ್ಲಿಯೂ 'ಡಿಸೇಲ್ ಜನರೇಟರ್' ಸ್ಥಗಿತಗೊಳಿಸುವ ಮೂಲಕ 'ಅರ್ತ್ ಅವರ್' ಆಚರಿಸಲಾಯಿತು. ವ್ಯಾಟಿಕನ್, ನಯಾಗರಾ ಜಲಪಾತ, ಐಫೆಲ್ ಗೋಪುರ, ಲಾಸ್ ವೇಗಾಸ್, ಕೆಸಿನೊ ಜಲಸಂಧಿ, ಬೀಜಿಂಗಿನ ಒಲಿಂಪಿಕ್ ಸ್ಟೇಡಿಯಂ - ಇವೇ ಮುಂತಾದ ವಿಶ್ವದ ಸುಮಾರು 371 ಪ್ರಸಿದ್ಧ ಸ್ಥಳಗಳಲ್ಲಿ ಒಂದು ತಾಸು ವಿದ್ಯುತ್‌ದೀಪ ಆರಿಸಿ 'ಅರ್ತ್ ಅವರ್' ಆಚರಿಸಲಾಯಿತು.

2009: ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಸ್ಲಂಡಾಗ್ ಮಿಲಿಯನೇರ್ ಚಿತ್ರದ 'ಜೈ ಹೋ' ಗೀತೆಯ ವಿರುದ್ಧ ಬಿಜೆಪಿ 'ಭಯ್‌ ಹೋ' ಎಂಬ ಅದೇ ಮಾದರಿಯ ಸ್ವರವಿರುವ ಅಣಕು ಗೀತೆಯೊಂದನ್ನು ಛೂ ಬಿಟ್ಟಿತು. 'ನಮ್ಮ ಹೊಸ ಗೀತೆ ದೇಶದ ನಿಜವಾದ ಸ್ಥಿತಿಯನ್ನು ಬಿಂಬಿಸುವುದು. ಅದು ಭಯ್ ಹೋ (ಹೆದರಿಕೆ ಇದೆ), ಭೂಕ್ ಹೋ (ಹಸಿವಿದೆ), ಅಂತಕ್ ಹೋ (ಭಯೋತ್ಪಾದಕರಿದ್ದಾರೆ), ಮಹಂಗಾಯೀ ಹೋ (ಹಣದುಬ್ಬರ ಇದೆ) ಆದಾಗ್ಯೂ ಜೈ ಹೋ' ಎಂದು ಹಾಡುತ್ತಾ ಕಾಂಗ್ರೆಸ್ ಪಕ್ಷವನ್ನು ಚುಚ್ಚಲಿದೆ' ಎಂದು ಬಿಜೆಪಿಯ ವಕ್ತಾರ ಸಿದ್ಧಾರ್ಥನಾಥ್ ಸಿಂಗ್ ಹೇಳಿದರು.

2009: ಗುಜರಾತಿನ ಗೋಧ್ರಾ ಗಲಭೆಯ ಸಂಚು ನಡೆಸಿದ ಆರೋಪಕ್ಕಾಗಿ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಸಚಿವೆ ಮಾಯಾ ಕೊದ್ನಾನಿ ಮತ್ತು ವಿಶ್ವಹಿಂದೂಪರಿಷತ್ ಮುಖಂಡ ಜೈದೀಪ್ ಪಟೇಲ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಏಪ್ರಿಲ್ 1ರ ವರೆಗೆ ಪೊಲೀಸ್ ವಶಕ್ಕೆ ಪಡೆಯಲಾಯಿತು. ಬಂಧನ ತಪ್ಪಿಸಲು ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಮಾಯಾಗೆ ಅದನ್ನು ನಿರಾಕರಿಸಲಾಗಿತ್ತು. ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ನ್ಯಾಯಾಲಯಕ್ಕೆ ಶರಣಾಗಿದ್ದರು. ಆಕೆಯನ್ನು ನಂತರ ಪ್ರಕರಣದ ವಿಶೇಷ ತನಿಖಾ ತಂಡದ ಮುಂದೆಯೂ ಹಾಜರು ಪಡಿಸಲಾಯಿತು.

2009: ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಹಾಗೂ ರೈಲ್ವೆ ರಾಜ್ಯ ಸಚಿವ ಆರ್.ವೇಲು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದರು. ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದಿಂದ ತಮ್ಮ ಪಕ್ಷವಾದ ಪಿಎಂಕೆ ಹೊರಬರುವ ಇಂಗಿತ ವ್ಯಕ್ತಪಡಿಸಿದ ಎರಡು ದಿನಗಳ ನಂತರ ಅವರು ಈ ಕ್ರಮಕ್ಕೆ ಮುಂದಾದರು.

2009: ಮದರ್ ತೆರೆಸಾ ನಂತರ ಆ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿದ್ದ 'ಸುಪೀರಿಯರ್ ಜನರಲ್' ಸಿಸ್ಟರ್ ನಿರ್ಮಲ ಅವರು ಅನಾರೋಗ್ಯದ ಕಾರಣದಿಂದ ತನ್ನ ಹನ್ನೆರಡು ವರ್ಷಗಳ ಸೇವೆಗೆ ವಿದಾಯ ಹೇಳಿದರು. ತನ್ನ ನಂತರದ ಸ್ಥಾನದಲ್ಲಿದ್ದ ಸಿಸ್ಟರ್ ಪ್ರೇಮಾ ಅವರಿಗೆ ಕೋಲ್ಕತದಲ್ಲಿ 'ಸುಪರೀಯರ್ ಜನರಲ್' ಪದವಿಯನ್ನು ಹಸ್ತಾಂತರಿಸಿದರು. ಸಿಸ್ಟರ್ ಪ್ರೇಮಾ ಅವರು ಕ್ರೈಸ್ತ ಸನ್ಯಾಸಿನಿಯರಲ್ಲೇ ಅತಿ ಹಿರಿಯರು. ದುರ್ಬಲ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಮನಸ್ಸು ಅವರದು. ಈ ಸೇವೆಯನ್ನು ಪರಿಗಣಿಸಿದ ದಿ ಮಿಷನರೀಸ್ ಆಫ್ ಚಾರಿಟಿ ಅವರನ್ನು 'ಮೂರನೇ ಸುಪೀರಿಯರ್ ಜನರಲ್' ಎಂದು ಅಧಿಕೃತವಾಗಿ ಘೋಷಿಸಿತು. ಮಿಷನರೀಸ್ ಆಫ್ ಚಾರಿಟಿ ಆರು ವರ್ಷಗಳಿಗೊಮ್ಮೆ'ಸುಪೀರಿಯರ್ ಜನರಲ್' ಅವರನ್ನು ಆಯ್ಕೆ ಮಾಡುತ್ತದೆ. ಇದೇ ಜವಾಬ್ದಾರಿ ಹೊತ್ತಿದ್ದ ಸಿಸ್ಟರ್ ನಿರ್ಮಲ ಅವರು ಎರಡು ಅವಧಿಯಲ್ಲಿ (1996 ಮತ್ತು 2002) ಸೇವೆ ಸಲ್ಲಿಸಿದ್ದರು. ಮಾರ್ಚ್ 13ರಂದು ಅವರನ್ನು ಇದೇ ಪದವಿಗೆ ಅವಿರೋಧವಾಗಿ ಮತ್ತೆ ಆಯ್ಕೆ ಮಾಡಲಾಗಿತ್ತು.

2009: ಶ್ರೀಲಂಕಾದ ಹಿಂಸಾಪೀಡಿತ ಉತ್ತರ ಭಾಗದಲ್ಲಿ ಎಲ್‌ಟಿಟಿಇ ಆಕ್ರಮಣವನ್ನು ಹಿಮ್ಮೆಟ್ಟಿಸಿದ ಲಂಕಾ ಭದ್ರತಾ ಪಡೆ ಕಾರ್ಯಾಚರಣೆಯಲ್ಲಿ 31ಉಗ್ರರು, 6 ಸೈನಿಕರು ಮೃತರಾಗಿ, 30 ಕ್ಕೂ ಅಧಿಕ ಮಂದಿ ಗಾಯಗೊಂಡರು. ಇರನಪಲೈ ಉತ್ತರ, ಪುತುಕುಡಿಯಿರುಪ್ಪು ಪೂರ್ವದಲ್ಲಿ ಎಲ್‌ಟಿಟಿ ಇಯು ಮುಂಚೂಣಿ ಸೇನಾ ನೆಲೆಯನ್ನು ಉಲ್ಲಂಘಿಸಲು ಯತ್ನಿಸಿದಾಗ ಅದನ್ನು ಹಿಮ್ಮೆಟ್ಟಿಸಲಾಯಿತು.

2009: 'ಉತ್ತರ ಅಮೆರಿಕ ವಿಶ್ವ ಕನ್ನಡ ಸಂಸ್ಥೆ' (ನಾರ್ತ್ ಅಮೆರಿಕ ವಿಶ್ವ ಕನ್ನಡ ಅಸೋಸಿಯೇಶನ್-ನಾವಿಕ) ಹೆಸರಿನ ಕನ್ನಡಪರ ಸಂಸ್ಥೆ ಅಮೆರಿಕದ ಫಾರ್ಲಿಡಾ ನಗರದಲ್ಲಿ ಸ್ಥಾಪನೆಯಾಯಿತು. ಉತ್ತರ ಅಮೆರಿಕ ಹಾಗೂ ವಿಶ್ವದ ನಾನಾ ಭಾಗಗಳಲ್ಲಿ ನೆಲೆಸಿದ ಹೊರನಾಡ ಕನ್ನಡಿಗರೆಲ್ಲಾ ಒಂದುಗೂಡಿ ಈ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಮೂಲಕ 'ಅಕ್ಕ' ಸಂಸ್ಥೆಯಂತೆ ಮತ್ತೊಂದು ಕನ್ನಡ ಸಂಸ್ಥೆ ಮೈದಳೆದಿದ್ದು, ಜಾಗತಿಕ ಮಟ್ಟದಲ್ಲಿ ಕನ್ನಡ ಸಂಸ್ಕೃತಿಯನ್ನು ಇನ್ನಷ್ಟು ಪ್ರಚಾರ ಮಾಡಲು ಸಜ್ಜಾಯಿತು.

2008: ಚಿಪಾಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಹಣಾಹಣಿಯಲ್ಲಿ ಅತಿ ವೇಗದ ತ್ರಿಶತಕ ದಾಖಲಿಸಿದ ಭಾರತ ತಂಡದ ವೀರೇಂದ್ರ ಸೆಹ್ವಾಗ್ ವಿಶ್ವ ಕ್ರಿಕೆಟ್ನ್ಲಲಿ ಅತ್ಯಂತ ಗೌರವದಿಂದ ಹೆಸರಿಸಲಾಗುವ `ಡಾನ್' ಬ್ರಾಡ್ಮನ್ ಸಾಧನೆಯನ್ನು ಸರಿಗಟ್ಟಿ ನಿಂತರು. ಅತಿ ಹೆಚ್ಚು ತ್ರಿಶತಕ ಗಳಿಸಿದ ಸಾಧಕರ ಪಟ್ಟಿಯಲ್ಲಿ ಭಾರತದ ಆರಂಭಿಕ ಆಟಗಾರನಿಗೆ ಸ್ಥಾನ ಸಿಕ್ಕಿತು. ಅತಿ ಕಡಿಮೆ ಪಂದ್ಯಗಳಲ್ಲಿ ಎರಡು ಬಾರಿ ಇಷ್ಟೊಂದು ದೊಡ್ಡ ಮೊತ್ತದ ಸಾಧನೆ ಮಾಡಿದ ಬಲಗೈ ಬ್ಯಾಟ್ಸ್ಮನ್, ಇಂತಹದೇ ಶ್ರೇಯಕ್ಕೆ ಪಾತ್ರರಾದ ವೆಸ್ಟ್ ಇಂಡೀಸಿನ ಬ್ರಯನ್ ಲಾರಾಗಿಂತ ಸೆಹ್ವಾಗ್ ಮೇಲೆ ನಿಂತರು. ಆದರೆ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಬ್ರಾಡ್ಮನ್ ಗಿಂತ ಸ್ವಲ್ಪ ಕೆಳಗುಳಿದರು.

2008: ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆಯಿರುವ ಪ್ರಧಾನಿ ಕಚೇರಿಯ ಹೊರಭಾಗದಲ್ಲಿ ಸಂಭವಿಸಿದ ಗುಂಡು ಹಾರಾಟದಲ್ಲಿ ದೆಹಲಿ ಪೊಲೀಸ್ ಕಮಾಂಡೋ ಒಬ್ಬರು ಗಾಯಗೊಂಡರು. ಪೊಲೀಸ್ ಕಮಾಂಡೋ ಸಂಜಯ್ ಅವರಿಗೆ ಘಟನೆಯಲ್ಲಿ ಗುಂಡು ತಗುಲಿ ಪೃಷ್ಠದ ಬಳಿ ಗಾಯವಾಯಿತು.

2008: ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನವೇ ತೃತೀಯ ರಂಗ ರಚನೆಯ ಸಾಧ್ಯತೆಗಳನ್ನು ತಳ್ಳಿ ಹಾಕಿದ ಸಿಪಿಐ, ತಾನು ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿತು.

2008: ಲೋಹ ಮತ್ತು ಆಹಾರ ವಸ್ತುಗಳ ದರ ಏರಿಕೆಯು ಹಣದುಬ್ಬರ ದರವನ್ನು ಶೇಕಡಾ 6.68ಕ್ಕೆ ಏರಿಸಿ ಕಳೆದ ಒಂದು ವರ್ಷದಲ್ಲೇ ಅತಿ ಹೆಚ್ಚಿನ ದರ ಏರಿಕೆಯ ದಾಖಲೆಯನ್ನು ನಿರ್ಮಿಸಿತು. ಪರಿಣಾಮವಾಗಿ ಸದ್ಯೋಭವಿಷ್ಯದಲ್ಲಿ ಬಡ್ಡಿದರಗಳು ಇಳಿಯುವ ಆಶೆ ನುಚ್ಚು ನೂರಾಯಿತು. ಇತ್ತೀಚಿನ ತಿಂಗಳುಗಳಲ್ಲಿ ಶೇಕಡಾ 4ರ ಸನಿಹದಲ್ಲಿದ್ದ ಹಣದುಬ್ಬರ ಮೇಲ್ಮುಖವಾಗಿ ಸಾಗುತ್ತಾ ಮಾರ್ಚ್ 15ರಂದು ಕೊನೆಗೊಂಡ ವಾರಾಂತ್ಯ ವೇಳೆಗೆ ಶೇಕಡಾ 0.76ರಷ್ಟು ಹೆಚ್ಚಿತ್ತು.

2008: ಐವತ್ತು ಕೋಟಿ ರೂಪಾಯಿ ಆದಾಯ ತೆರಿಗೆ ವಂಚಿಸಿದ ಪ್ರಕರಣವೊಂದರಲ್ಲಿ ಭೂಗತ ದೊರೆ ದಾವೂದ್ ಇಬ್ರಾಹಿಂ ಆಪ್ತ ಎನ್ನಲಾದ ರೊಮೇಶ್ ಶರ್ಮಾ ತಪ್ಪಿತಸ್ಥ ಎಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿತು. 12 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಆದಾಯ ತೆರಿಗೆ ಕಾಯ್ದೆ ಅಡಿ ಆತನನ್ನು ತಪ್ಪಿತಸ್ಥ ಎಂದು ಘೋಷಿಸಿ ದೆಹಲಿ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕನ್ವಲ್ ಜಿತ್ ಅರೋರಾ ಆದೇಶ ನೀಡಿದರು.

2007: ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ 32 ಪುಟ್ಟ ಪುಟ್ಟ ಕೊಳೆಗೇರಿ ಮಕ್ಕಳನ್ನು ಅಪಹರಿಸಿ, ಬಸ್ಸಿನಲ್ಲಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡ ಶಿಶುವಿಹಾರ ಕೇಂದ್ರದ ಮಾಲೀಕ ಡ್ಯೂಕಾಟ್ 10 ಗಂಟೆಗಳ ಕಾಲ ಆತಂಕ ಸೃಷ್ಟಿಸಿದ. ಅಪಹೃತ 32 ಮಕ್ಕಳು ಸೇರಿದಂತೆ ಶಿಶುವಿಹಾರದ 145 ಮಕ್ಕಳಿಗೆ ಉಚಿತ ವಸತಿ ವ್ಯವಸ್ಥೆ ಹಾಗೂ ಶಿಕ್ಷಣ ಒದಗಿಸಬೇಕು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಅಗಬೇಕು ಎಂಬುದು ಆತನ ಬೇಡಿಕೆಗಳಾಗಿದ್ದವು. ಚಿತ್ರನಟ, ಸಂಸದ ಸೆನ್ ರೋಮನ್ `ಬಾಂಗ್' ರೆವಿಲ್ಲಾ ಜ್ಯೂನಿಯರ್ ಅವರು ಅಪಹರಣಕಾರನ ಜೊತೆಗೆ ಮಾತುಕತೆ ನಡೆಸಿ ಸಂಜೆ ವೇಳೆಗೆ ಮಕ್ಕಳನ್ನು ಬಂಧಮುಕ್ತಗೊಳಿಸಿದರು. ಅಪಹರಣ ಮುಗಿಯುತ್ತಿದ್ದಂತೆಯೇ ಗೊಂಬೆ, ಆಟಿಕೆ, ತಿಂಡಿ ಪೊಟ್ಟಣಗಳೊಂದಿಗೆ ಅಪಹೃತ ಮಕ್ಕಳು ಮತ್ತು ಅಪಹರಣಕಾರ ಅಪಹೃತ ಬಸ್ಸಿನಿಂದ ಹೊರಕ್ಕೆ ಬಂದರು. ಅಪಹರಣಕಾರ ಪ್ರತಿ ಮಗುವಿಗೂ ಮುತ್ತಿಟ್ಟು, ತನ್ನ ಬಳಿ ಇದ್ದ ಗ್ರೆನೇಡನ್ನು ಪ್ರಾಂತೀಯ ಗವರ್ನರರಿಗೆ ಒಪ್ಪಿಸಿ ಶರಣಾಗತನಾದ. ಹಿಂದೆ ವೇತನ ವಿವಾದಕ್ಕೆ ಸಂಬಂಧಿಸಿದಂತೆ ಈತ ಇಬ್ಬರು ಕ್ಯಾಥೋಲಿಕ್ ಪಾದ್ರಿಗಳನ್ನು ಅಪಹರಿಸಿದ್ದ.

2007: ಪತಿಯೊಡನೆ ವಾಸಿಸಲು ನಿರಾಕರಣೆ ಮತ್ತು ಮಗು ಬೇಡ ಎಂದು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಪತ್ನಿಯ ವರ್ತನೆ ಮಾನಸಿಕ ಹಿಂಸೆ ಎನಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಪತಿ ವಿಚ್ಛೇದನ ಕೇಳಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. 22 ವರ್ಷದ ಹಿಂದೆ ಮದುವೆಯಾಗಿ ಕಳೆದ 16 ವರ್ಷಗಳಿಂದಲೂ ಪ್ರತ್ಯೇಕವಾಗಿ ವಾಸಿಸಿದ ಪಶ್ಚಿಮ ಬಂಗಾಳದ ಐಎಎಸ್ ದಂಪತಿ ಸಮೀರ್ ಘೋಷ್ ಮತ್ತು ಜಯಾ ಘೋಷ್ ಅವರ ವಿಚ್ಛೇದನ ಅರ್ಜಿಯನ್ನು ನ್ಯಾಯಾಲಯ ಇದೇ ಆಧಾರದಲ್ಲಿ ಇತ್ಯರ್ಥ ಪಡಿಸಿ, ವಿಚ್ಛೇದನ ಮಂಜೂರು ಮಾಡಿತು.

2007: ಜಾಗತಿಕ ತಾಪಮಾನದ ಪರಿಣಾಮವಾಗಿ ಹಿಮಾಲಯದ ನೀರ್ಗಲ್ಲುಗಳು ಶೀಘ್ರವಾಗಿ ಕರಗುತ್ತಿವೆ ಎಂದು ಫ್ರೆಂಚ್ ಸಂಶೋಧಕರು ಉಪಗ್ರಹ ಚಿತ್ರಗಳನ್ನು ಅಧರಿಸಿ ಬಹಿರಂಗ ಪಡಿಸಿದರು. ಹಿಮಾಲಯದ ನೀರ್ಗಲ್ಲುಗಳು ಕ್ರಮೇಣ ಕರಗುತ್ತಿರುವ ಚಿತ್ರಗಳನ್ನು ಬಿಡುಗಡೆ ಮಾಡಿದ ಅವರು ವಾರ್ಷಿಕ 8ರಿಂದ 10 ಮೀಟರಿನಷ್ಟು ನೀರ್ಗಲ್ಲುಗಳು ಕರಗುತ್ತಿವೆ ಎಂದು ಅವರು ಪ್ರಕಟಿಸಿದರು.

2006: ದೇಶದಲ್ಲೇ ಅಪರೂಪದ್ದಾದ ಜೀವಂತ ಮನುಷ್ಯನ ಇಡೀ ದೇಹದ ಅಚ್ಚು ತೆಗೆಯುವ ಶಿಲ್ಪಕಲಾ ಪ್ರಯೋಗ ಚಿಕ್ಕಮಗಳೂರಿನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಯಶಸ್ವಿಯಾಯಿತು. `ಸ್ಲೀಪಿಂಗ್ ಗರ್ಲ್' ಕಲಾಕೃತಿಗೆ ವಿದ್ಯಾಲಯದ ವಿದ್ಯಾರ್ಥಿನಿ ಜ್ಯೋತಿ ಮತ್ತು `ಥಿಂಕಿಂಗ್ ಮ್ಯಾನ್' ಕಲಾಕೃತಿಗೆ ಸಂಚಾರಿ ಪೊಲೀಸ್ ಪೇದೆ ಕಿರಣ್ ಸ್ವಯಂಸ್ಫೂರ್ತಿಯಿಂದ ರೂಪದರ್ಶಿಗಳಾದರು. ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ಮತ್ತು ಇತರ ಉಪನ್ಯಾಸಕರ ನೇತೃತ್ವದಲ್ಲಿ 40 ವಿದ್ಯಾರ್ಥಿಗಳ ತಂಡ ದಶಮಾನೋತ್ಸವದ ಅಂಗವಾಗಿ ಬೆಳಗ್ಗೆಯಿಂದ ರಾತ್ರಿಯವರೆಗೆ ಶ್ರಮಿಸಿ ಈ ಕಲಾಕೃತಿಗಳನ್ನು ನಿರ್ಮಿಸಿತು. ಜೀವಂತ ಮನುಷ್ಯನನ್ನೇ ಸಂಪೂರ್ಣವಾಗಿ `ಪ್ಲಾಸ್ಟರ್ ಆಫ್ ಪ್ಯಾರಿಸ್' ನಿಂದ ಮುಚ್ಚಿ ಪಡಿಯಚ್ಚು ತೆಗೆದು ಫೈಬರಿಗೆ ಅಳವಡಿಸುವ ಈ ಕಲೆ ಅತ್ಯಂತ ವಿರಳ. ದೇಹದ ಒಂದಂಗುಲವನ್ನೂ ಬಿಡದೆ ಸಂಪೂರ್ಣವಾಗಿ ಮುಚ್ಚಿ ಮೂಗಿಗೆ ಉಸಿರಾಡಲು ಮಾತ್ರ ಪೈಪ್ ಅಳವಡಿಸಿ ಸುಮಾರು 20 ನಿಮಿಷ ಒಂದೇ ಭಂಗಿಯಲ್ಲಿ ಕೂರಿಸಿ ಈ ಪಡಿಯಚ್ಚು ತೆಗೆಯಲಾಯಿತು.

2006: ಗೋಧ್ರಾ ಹತ್ಯಾಕಾಂಡದ ಬಳಿಕ 2002ರ ಏಪ್ರಿಲಿನಲ್ಲಿ ಗುಜರಾತಿನ ಅಹಮದಾಬಾದಿನ ಧನಿಲಿಮ್ಡಾ ಪ್ರದೇಶದಲ್ಲಿ ನಡೆದ ಕೋಮು ಗಲಭೆ ಪ್ರಕರಣದ ಪ್ರಮುಖ ಆರೋಪಿ ಮುಷ್ತಾಕ್ ಕನಿಯೊ ಮತ್ತು ಇತರ 8 ಆರೋಪಿಗಳಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಯಿತು.

2006: ಆಧುನಿಕ ಹರಿಯಾಣದ ಶಿಲ್ಪಿ ಎಂದೇ ಪರಿಗಣಿಸಲಾಗಿದ್ದ ಕಾಂಗ್ರೆಸ್ಸಿನ ಹಿರಿಯ ಮುಖಂಡ, ರಾಜ್ಯದ ಮಾಜಿ ಮುಖ್ಯಮಂತ್ರಿ ಬನ್ಸಿಲಾಲ್ (79) ನವದೆಹಲಿಯಲ್ಲಿ ನಿಧನರಾದರು. ನಾಲ್ಕು ಬಾರಿ ಹರಿಯಾಣದ ಮುಖ್ಯಮಂತ್ರಿ ಆಗಿದ್ದ ಬನ್ಸಿಲಾಲ್ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿ ಇಂದಿರಾಗಾಂಧಿ ಪುತ್ರ ಸಂಜಯಗಾಂಧಿ ನಿಕಟವರ್ತಿಯಾಗಿ ಸಾಕಷ್ಟು ವಾದಕ್ಕೂ ಗುರಿಯಾಗಿದ್ದರು. ನಂತರ ಕಾಂಗ್ರೆಸ್ಸಿನಿಂದ ಹೊರನಡೆದು ಹರಿಯಾಣ ವಿಕಾಸ ಪಕ್ಷ ಸ್ಥಾಪಿಸಿದ್ದರು. 2004ರಲ್ಲಿ ಕಾಂಗ್ರೆಸ್ಸಿಗೆ ಮರಳಿದ್ದರು.

2006: ಟೆಂಪಲ್ ಆಫ್ ಕಾನ್ಷಿಯಸ್ನೆಸ್ಸಿನ ಮುಖ್ಯಸ್ಥ ಆಧ್ಯಾತ್ಮಿಕ ಗುರು ವೇದಾಂತಿ ಮಹರ್ಷಿ (96) ಅಳಿಯಾರಿನಲ್ಲಿ ಹೃದಯಾಘಾತದಿಂದ ನಿಧನರಾದರು.

2006: ಇಸ್ರೇಲ್ ಚುನಾವಣೆ ಬಿಗಿ ಭದ್ರತೆಯ ನಡುವೆ ನಡೆಯಿತು. ಐವತ್ತು ಲಕ್ಷ ಮಂದಿ ಮತ ಚಲಾಯಿಸಿದರು. ಆದರೆ 1999 ಹಾಗೂ 2003ರ ಚುನಾವಣೆಗೆ ಹೋಲಿಸಿದರೆ ಮತ ಚಲಾವಣೆ ಪ್ರಮಾಣ ಕುಸಿಯಿತು.

1979: ಅಮೆರಿಕದ ಅತಿಭೀಕರ ಪರಮಾಣು ವಿದ್ಯುತ್ ಸ್ಥಾವರ ದುರಂತ ಸಂಭವಿಸಿದ ದಿನ. ಪೆನ್ಸಿಲ್ವೇನಿಯಾದ ಥ್ರೀ ಮೈಲ್ ಐಲ್ಯಾಂಡಿನ ಯುನಿಟ್ ಟು ರಿಯಾಕ್ಟರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಹೊರಸೂಸಿದ ಪರಿಣಾಮವಾಗಿ ಈ ದುರಂತ ಘಟಿಸಿತು.

1959: ಕಲಾವಿದ ಸಿಂಧೆ ಡಿ.ಕೆ. ಜನನ.

1958: ಕಲಾವಿದ ವಾಗೀಶ ಭಟ್ ಜನನ.

1955: ಆಕ್ಲೆಂಡಿನ ಈಡನ್ ಪಾರ್ಕಿನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ನ್ಯೂಜಿಲ್ಯಾಂಡ್ 26 ರನ್ನುಗಳಿಗೆ ಆಲ್ ಔಟ್ ಆಗಿ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿತು.

1951: ಕಲಾವಿದ ಶರಣಪ್ಪ ಜಿ. ಶೆಟಗಾರ ಜನನ.

1940: ಕಲಾವಿದ ಶಕುಂತಲಾ ನರಸಿಂಹನ್ ಜನನ.

1939: ಜನರಲ್ ಫ್ರಾಂಕೋಗೆ ಮ್ಯಾಡ್ರಿಡ್ ಶರಣಾಗತಿಯೊಂದಿಗೆ ಸ್ಪಾನಿಶ್ ಅಂತರ್ಯುದ್ಧ ಕೊನೆಗೊಂಡಿತು. ಈ ಗೆಲುವಿನ ಹಿನ್ನೆಲಯಲ್ಲಿ ಫ್ರಾಂಕೋ ಅವರನ್ನು `ಕಾಡಿಲೋ' ಅಂದರೆ ರಾಷ್ಟ್ರದ ನಾಯಕ ಎಂದು ಗೌರವಿಸಲಾಯಿತು.

1930: ಟರ್ಕಿಯಲ್ಲಿನ ಅಂಗೋರಾ ಮತ್ತು ಕಾನ್ ಸ್ಟಾಂಟಿನೋಪಲ್ ನಗರಗಳ ಹೆಸರುಗಳನ್ನು ಕ್ರಮವಾಗಿ ಅಂಕಾರ ಮತ್ತು ಇಸ್ತಾಂಬುಲ್ ಎಂಬುದಾಗಿ ಬದಲಾಯಿಸಲಾಯಿತು.

1926: ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಪಾಲಿ ಉಮ್ರಿಗಾರ್ ಜನ್ಮದಿನ. ಇವರು ಟೆಸ್ಟ್ ಕ್ರಿಕೆಟಿನಲ್ಲಿ ದ್ವಿಶತಕ ಭಾರಿಸಿದ ಮೊಟ್ಟ ಮೊದಲ ಭಾರತೀಯ ಕ್ರಿಕೆಟಿಗ.

1916: ಸಂಗೀತ, ಚಿತ್ರಕಲೆ, ರಂಗಭೂಮಿ ಇತ್ಯಾದಿ ಹಲವಾರು ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದ ಕಾಳಪ್ಪ ಪತ್ತಾರ ಅವರು ಬಡವಿಶ್ವಕರ್ಮ ಕುಟುಂಬದ ಸದಸ್ಯರಾಗಿ ರಾಯಚೂರು ಜಿಲ್ಲೆಯ ತಳಕಲ್ಲಿನಲ್ಲಿ ಜನಿಸಿದರು.

1862: ಅರಿಸ್ಟೈಡ್ ಬ್ರಿಯಾಂಡ್ (1862-1932) ಹುಟ್ಟಿದ ದಿನ. ಹನ್ನೊಂದು ಬಾರಿ ಫ್ರಾನ್ಸಿನ ಪ್ರಧಾನಿಯಾದ ಇವರು `ಲೀಗ್ ಆಫ್ ನೇಷನ್ಸ್' ಸ್ಥಾಪನೆ ಮತ್ತು ವಿಶ್ವಶಾಂತಿಗಾಗಿ ತೀವ್ರವಾಗಿ ಶ್ರಮಿಸಿದರು. ಈ ಯತ್ನಗಳು ಇವರಿಗೆ 1926ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ತಂದು ಕೊಟ್ಟವು. 1926ರ ನೊಬೆಲ್ ಶಾಂತಿ ಪ್ರಶಸ್ತಿ ಇವರ ಜೊತೆಗೆ ಜರ್ಮನಿಯ ಗುಸ್ತಾವ್ ಸ್ಟ್ರೆಸ್ ಮ್ಯಾನ್ ಅವರಿಗೂ ಲಭಿಸಿತು.

1851: ಬರ್ನಾರ್ಡಿನೊ ಲೂಯಿ ಮಚಾಡೊ (1851-1944) ಹುಟ್ಟಿದ ದಿನ. ಬ್ರೆಜಿಲ್ ಸಂಜಾತ ರಾಜಕೀಯ ನಾಯಕನಾದ ಇವರು ಎರಡು ಅವಧಿಗೆ ಪೋರ್ಚುಗಲ್ ಅಧ್ಯಕ್ಷರಾಗಿದ್ದರು.

ಇಂದಿನ ಇತಿಹಾಸ History Today ಫೆಬ್ರುವರಿ 22

ಇಂದಿನ ಇತಿಹಾಸ

ಫೆಬ್ರುವರಿ 22

ಜಾತಿ ಭೇದವಿಲ್ಲದೆ ಅನ್ನ ಹಾಗೂ ಅಕ್ಷರ ದಾಸೋಹದ ಮೂಲಕ ಸಮಾಜ ಸೇವೆ ಮಾಡುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು, ಕರ್ನಾಟಕ ಸರ್ಕಾರವು 2007ನೇ ಸಾಲಿನ `ಕರ್ನಾಟಕ ರತ್ನ' ಪ್ರಶಸ್ತಿಗೆ ಆಯ್ಕೆ ಮಾಡಿತು. ಈ ಮೊದಲು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕುವೆಂಪು (1992), ಚಲನಚಿತ್ರ ಕ್ಷೇತ್ರದ ಸಾಧನೆಗಾಗಿ ಡಾ. ರಾಜಕುಮಾರ್ (1993), ರಾಜಕೀಯ ಕ್ಷೇತ್ರದ ಸಾಧನೆಗಾಗಿ ಎಸ್. ನಿಜಲಿಂಗಪ್ಪ (1999), ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಡಾ. ಸಿ.ಎನ್.ಆರ್. ರಾವ್ (2000), ಸಂಗೀತ ಕ್ಷೇತ್ರದ ಸಾಧನೆಗಾಗಿ ಪಂಡಿತ ಭೀಮಸೇನ ಜೋಶಿ (2005) ಅವರಿಗೆ `ಕರ್ನಾಟಕ ರತ್ನ' ಪ್ರಶಸ್ತಿ ಲಭಿಸಿತು.

2009: ನಿಷೇಧಿತ ಎಲ್‌ಟಿಟಿಇ ಸಂಘಟನೆ ಬಹುತೇಕ ತನ್ನವಾಯು ಬಲವನ್ನು ಕಳೆದುಕೊಂಡಿದೆ ಎಂದು ಶ್ರೀಲಂಕಾ ಸೇನೆ ಹೇಳಿತು. ಕೊಲೊಂಬೋ ಮೇಲೆ ವೈಮಾನಿಕ ದಾಳಿ ನಡೆಸಿದ್ದ ಎಲ್‌ಟಿಟಿಇಗೆ ಸೇರಿದ 2 ವಿಮಾನಗಳನ್ನು ಶ್ರೀಲಂಕಾ ಭದ್ರತಾ ಪಡೆಗಳು ನಾಶಪಡಿಸಿದ ಬಳಿಕ ಸೇನೆಯ ಅಧಿಕಾರಿಗಳು ಈ ವಿಷಯ ತಿಳಿಸಿದರು. 'ಎಲ್‌ಟಿಟಿಇ ಬಳಿ ಇನ್ನೂ ಹೆಚ್ಚಿನ ವಿಮಾನಗಳು ಇವೆ ಎಂದು ನನಗನಿಸುತ್ತಿಲ್ಲ' ಎಂದು ಸೇನೆ ಅಧಿಕಾರಿಯೊಬ್ಬರು ತಿಳಿಸಿದರು. ಉಗ್ರರು ದಾಳಿಗೆ ಬಳಸಿದ್ದ ವಿಮಾನಗಳನ್ನು ಸೇನೆ ಸೂಕ್ತ ಸಮಯಕ್ಕೆ ಪತ್ತೆ ಹಚ್ಚಿದ್ದರಿಂದ ಕೊಲೊಂಬೋ ನಗರಕ್ಕೆ ಹೆಚ್ಚಿನ ಹಾನಿಯಾಗದಂತೆ ತಡೆಯಲು ಸಾಧ್ಯವಾಯಿತು ಎಂದು ಅವರು ಹೇಳಿದರು.

2009: ಉತ್ತರ ಚೀನಾದ ಚಾಂಗ್‌ಸಿ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಅನಿಲ ಸ್ಫೋಟ ಸಂಭವಿಸಿ, ಅದರಲ್ಲಿ ಕೆಲಸ ಮಾಡುತ್ತಿದ್ದ 73 ಮಂದಿ ಮೃತರಾದುದು ಬೆಳಕಿಗೆ ಬಂತು. ಇದು ಇತ್ತೀಚೆಗೆ ಸಂಭವಿಸಿದ ಗಣಿ ದುರಂತಗಳಲ್ಲೇ ಅತ್ಯಂತ ಭೀಕರವಾದುದು ಎಂದು ಪರಿಗಣಿಸಲಾಯಿತು. ಈವರೆಗೆ 73 ಮೃತದೇಹಗಳು ದೊರಕಿದವು. 21 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ 113 ಮಂದಿ ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಭಾರತೀಯ ಕಾಲಮಾನದ ಪ್ರಕಾರ ಹಿಂದಿನ ದಿನ ರಾತ್ರಿ 11.30ಕ್ಕೆ ತುನ್‌ಲಾನ್ ಕಲ್ಲಿದ್ದಲು ಗಣಿಯಲ್ಲಿ ದುರಂತ ಸಂಭವಿಸಿತು. ಆಗ ಕರ್ತವ್ಯದಲ್ಲಿ ತೊಡಗಿದ್ದ 340 ಪಾರಾದರು. 40ಕ್ಕೂ ಹೆಚ್ಚು ಅಂಬುಲೆನ್ಸ್‌ಗಳು ಘಟನಾ ಸ್ಥಳಕ್ಕೆ ಬಂದವು.

2009: ಭಾರತದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಿಸಲಾದ 14 ಪ್ರತಿಮೆಗಳನ್ನು ಇಂಗ್ಲೆಂಡಿನಲ್ಲಿರುವ ಪ್ರಸಿದ್ಧ ದೇವಾಲಯವೊಂದರಲ್ಲಿ ನೂರಾರು ಜನರ ಸಮ್ಮುಖದಲ್ಲಿ ಪ್ರತಿಷ್ಠಾಪಿಸಲಾಯಿತು. 14 ಅಮೃತ ಶಿಲಾ ಪ್ರತಿಮೆಗಳನ್ನು ಜೈಪುರದಲ್ಲಿ ಕೆತ್ತಲಾಗಿದ್ದು ಬ್ರಿಟನ್ನಿನ ಪಶ್ಚಿಮ ಮಿಡ್‌ಲ್ಯಾಂಡ್ಸಿನ ಡೆರ್ಬಿ ಪಟ್ಟಣದಲ್ಲಿರುವ ಗೀತಾ ಭಗವಾನ್ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಈ ಮೂರ್ತಿಗಳು 40 ಸಾವಿರ ಪೌಂಡ್ ಮೌಲ್ಯದ್ದಾಗಿದ್ದು ಭಕ್ತರೇ ಸಂಪೂರ್ಣ ವೆಚ್ಚವನ್ನು ಭರಿಸಿದರು.

2008: ಮುಂಬೈಯಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಮ್ಮದ್ ಶೋಯೆಬ್ ಕಸಂ ಘನ್ಸರ್ ಎಂಬಾತನಿಗೆ ನೀಡಲಾದ ಮರಣ ದಂಡನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಆರ್. ವಿ. ರವೀಂದ್ರನ್ ಮತ್ತು ಮಾರ್ಕಾಂಡೇಯ ಕಟ್ಜು ಅವರನ್ನು ಒಳಗೊಂಡ ನ್ಯಾಯಪೀಠ ಸಿಬಿಐಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೆ ಟಾಡಾ ನ್ಯಾಯಾಲಯ ತಮ್ಮನ್ನು ದೋಷಿಯನ್ನಾಗಿ ಮಾಡಿ ಮರಣ ದಂಡನೆ ವಿಧಿಸಿದ್ದನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ ಅರ್ಜಿಯನ್ನೂ ವಿಚಾರಣೆಗೆ ಸ್ವೀಕರಿಸಿತು.

2008: ತೀವ್ರ ವಿವಾದಕ್ಕೆ ಒಳಗಾಗಿದ್ದ ಸಕ್ರಮ ಯೋಜನೆಯನ್ನು ಪರಿಷ್ಕರಿಸಿದ ಕರ್ನಾಟಕ ರಾಜ್ಯ ಸರ್ಕಾರ, 20 ಗುಣಿಸು 30 ಮತ್ತು 30 ಗುಣಿಸು 40 ಅಡಿ ಅಳತೆಯ ಅನಧಿಕೃತ ನಿವೇಶನಗಳಿಗೆ ನಿಗದಿ ಪಡಿಸಿದ್ದ ದಂಡ ಶುಲ್ಕದಲ್ಲಿ ದೊಡ್ಡ ಪ್ರಮಾಣದ ರಿಯಾಯಿತಿಯನ್ನು ಪ್ರಕಟಿಸಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಬಂದ 118 ಗ್ರಾಮ ಠಾಣಾಗಳಲ್ಲಿನ ನಿವೇಶನಗಳ ಮಾಲೀಕರು ಸಕ್ರಮಕ್ಕೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಈ ಪರಿಷ್ಕೃತ ಸಕ್ರಮ ಯೋಜನೆಗೆ ಸರ್ಕಾರದ ಕಾರ್ಯಕಾರಿ ಸಮಿತಿ ಒಪ್ಪಿಗೆ ನೀಡಿತು.

2008: ವಾಣಿಜ್ಯ ಉದ್ಧೇಶದ ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯಗೊಳಿಸಿದ ಹೈಕೋರ್ಟ್ ಆದೇಶ ವಿರೋಧಿಸಿ ಲಾರಿ, ಖಾಸಗಿ ಬಸ್ಸು, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಮಾಲೀಕರು ಮತ್ತು ಚಾಲಕರು ನೀಡಿದ ಕರೆಯ ಮೇರೆಗೆ ಈದಿನ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಯಿತು.

2008: ದೋಡಾ ಜಿಲ್ಲೆ ಬದೇರ್ ವಾ ಪಟ್ಟಣಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಭೇಟಿಗೆ ಒಂದು ಗಂಟೆ ಮೊದಲು ಸುಧಾರಿತ ಸ್ಫೋಟಕ ಸಾಮಗ್ರಿ ಪತ್ತೆಯಾಯಿತು. ಭಾರಿ ಹಿಮಪಾತದಿಂದ ಉಂಟಾದ ಪರಿಸ್ಥಿತಿ ಅವಲೋಕಿಸಲೆಂದು ಸೋನಿಯಾ ಹಾಗೂ ಶಿವರಾಜ್ ಪಾಟೀಲ್ ಪಟ್ಟಣಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಕೂಲಂಕಷ ಪರಿಶೀಲನೆ ಕೈಗೊಂಡಿತ್ತು. ಆಗ ಬದೇವಾರಿನಿಂದ 3 ಕಿ.ಮೀ.ದೂರದ ದಲಿಘರದಲ್ಲಿ ಸುಧಾರಿತ ಸ್ಫೋಟಕ ಸಾಮಗ್ರಿ ಪತ್ತೆಯಾಯಿತು. ಇದನ್ನು ಹಿಮದೊಳಗೆ ಹುದುಗಿಸಿಡಲಾಗಿತ್ತು.

2008: ವಿವಾದದ ಸುಳಿಗೆ ಸಿಲುಕಿ ರಾಜಸ್ಥಾನದಲ್ಲಿ ನಿಷೇಧಕ್ಕೆ ಒಳಗಾದ `ಜೋಧಾ ಅಕ್ಬರ್' ಸಿನೆಮಾ ಮಧ್ಯ ಪ್ರದೇಶ ಸರ್ಕಾರದ ಕೆಂಗಣ್ಣಿಗೂ ಗುರಿಯಾಯಿತು. ಚಿತ್ರ ಪ್ರದರ್ಶನಕ್ಕೆ ಮಧ್ಯಪ್ರದೇಶದ ರಜಪೂತ ಸಮುದಾಯದಿಂದ ಭಾರಿ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ತತ್ ಕ್ಷಣವೇ ಜಾರಿಗೆ ಬರುವಂತೆ ಚಿತ್ರ ಪ್ರದರ್ಶನ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು.

2008: ವೆನಿಜುವೆಲಾ ವಿಮಾನವೊಂದು ದಟ್ಟಾರಣ್ಯವಿರುವ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ 46 ಪ್ರಯಾಣಿಕರು ಮೃತರಾದರು. ಅತಿಎತ್ತರದ ಮೆರಿಡಾ ನಗರದಿಂದ ಕಾರಕಾಸ್ಗೆ ಹೊರಟಿದ್ದ ವಿಮಾನ ಮಾರ್ಗ ಮಧ್ಯೆ ದಟ್ಟ ಅರಣ್ಯವಿರುವ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು.

2008: ಉತ್ತರ ಶ್ರೀಲಂಕಾದಲ್ಲಿ ಸೇನೆ ಮತ್ತು ಎಲ್ ಟಿ ಟಿ ಇ ಉಗ್ರರ ನಡುವೆ ನಡೆದ ಕಾಳಗದಲ್ಲಿ ಕನಿಷ್ಠ 45 ಮಂದಿ ಮೃತರಾದರು. ಮೃತರಲ್ಲಿ 43 ಉಗ್ರರು ಮತ್ತು ಇಬ್ಬರು ಯೋಧರು.

2008: 20 ಲಕ್ಷ ರೂ ಆಸ್ತಿ ತೆರಿಗೆ ಪಾವತಿಸದ ಕಾರಣ ನಟಿ, ಸಮಾಜವಾದಿ ಸಂಸದೆ ಜಯಪ್ರದಾ ಮಾಲಿಕತ್ವದ ಪ್ರಸಿದ್ಧ `ಜಯಪ್ರದಾ' ಚಿತ್ರಮಂದಿರ ಸಂಕೀರ್ಣವನ್ನು ಚೆನ್ನೈ ಮಹಾನಗರ ಪಾಲಿಕೆ ಜಪ್ತಿ ಮಾಡಿತು.

2007: ಜಾತಿ ಭೇದವಿಲ್ಲದೆ ಅನ್ನ ಹಾಗೂ ಅಕ್ಷರ ದಾಸೋಹದ ಮೂಲಕ ಸಮಾಜ ಸೇವೆ ಮಾಡುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು, ಕರ್ನಾಟಕ ಸರ್ಕಾರವು 2007ನೇ ಸಾಲಿನ `ಕರ್ನಾಟಕ ರತ್ನ' ಪ್ರಶಸ್ತಿಗೆ ಆಯ್ಕೆ ಮಾಡಿತು. ಈ ಮೊದಲು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕುವೆಂಪು (1992), ಚಲನಚಿತ್ರ ಕ್ಷೇತ್ರದ ಸಾಧನೆಗಾಗಿ ಡಾ. ರಾಜಕುಮಾರ್ (1993), ರಾಜಕೀಯ ಕ್ಷೇತ್ರದ ಸಾಧನೆಗಾಗಿ ಎಸ್. ನಿಜಲಿಂಗಪ್ಪ (1999), ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಡಾ. ಸಿ.ಎನ್.ಆರ್. ರಾವ್ (2000), ಸಂಗೀತ ಕ್ಷೇತ್ರದ ಸಾಧನೆಗಾಗಿ ಪಂಡಿತ ಭೀಮಸೇನ ಜೋಶಿ (2005) ಅವರಿಗೆ `ಕರ್ನಾಟಕ ರತ್ನ' ಪ್ರಶಸ್ತಿ ಲಭಿಸಿತು.

2007: ದೆಹಲಿಯ ಪ್ರತಿಷ್ಠಿತ `ಚಮನ್ ಲಾಲ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ'ಗೆ ಬೆಂಗಳೂರಿನ ನೇಪಥ್ಯ ಕಲಾವಿದ ಅ.ನ. ರಮೇಶ್ ಆಯ್ಕೆಯಾದರು. ರಮೇಶ್ ಅವರು ಬೆಳಕಿನ ವಿನ್ಯಾಸ, ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಪ್ರಸಾಧನ ಮೊದಲಾದ ಕ್ಷೇತ್ರಗಳಲ್ಲಿ ನೈಪುಣ್ಯ ಪಡೆದ ಕಲಾವಿದ.

2007: ಬೆಂಗಳೂರಿನಲ್ಲಿರುವ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ಸನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಸ್ವಕ್ಷೇತ್ರ ರಾಮನಗರಕ್ಕೆ ಸ್ಥಳಾಂತರಿಸುವುದರ ಜೊತೆಗೆ ಎರಡು ಆಸ್ಪತ್ರೆ, ವೈದ್ಯಕೀಯ ದಂತವಿಜ್ಞಾನ, ಫಾರ್ಮಸಿ ಕಾಲೇಜುಗಳ ಆರಂಭಕ್ಕೆ ರಾಜ್ಯ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿತು.

2007: ಜವಾಹರಲಾಲ್ ನೆಹರು ಉನ್ನತ ವಿಜ್ಞಾನಗಳ ಕೇಂದ್ರದ ಅಧ್ಯಕ್ಷ ಪ್ರೊ. ಸಿ. ಎನ್. ಆರ್. ರಾವ್ ಅವರು ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟಿಗೆ ಆಯ್ಕೆಯಾದರು.

2007: ಇಟಲಿ ಪ್ರಧಾನಿ ರೊಮಾನೊ ಪ್ರೊಡಿ ಅವರು ತಮ್ಮ ವಿದೇಶ ನೀತಿ ಮತ್ತು ಆಫ್ಘಾನಿಸ್ಥಾನದಲ್ಲಿ ಇಟಲಿ ಸೇನೆ ಕಾರ್ಯಾಚರಣೆ ವಿಷಯಗಳ ಕುರಿತ ಸರ್ಕಾರದ ಮಸೂದೆಗೆ ಸೆನೆಟಿನಲ್ಲಿ ಸೋಲು ಉಂಟಾದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.

2006: ಹಿರಿಯ ಇತಿಹಾಸಕಾರ್ತೆ, ರಾಷ್ಟ್ರೀಯ ಇಂದಿರಾಗಾಂಧಿ ಕಲಾ ಕೇಂದ್ರದ ಅಧ್ಯಕ್ಷೆ ಕಪಿಲಾ ವಾತ್ಸಾಯನ ಅವರು ರಾಜ್ಯಸಭೆ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಸಭೆ ಅಧ್ಯಕ್ಷ, ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಪ್ರಮಾಣವಚನ ಬೋಧಿಸಿದರು.

2006: ಮುಂಬೈ ಕರ್ನಾಟಕ ಸಂಘವು ಪ್ರತಿವರ್ಷವೂ ಕೊಡುವ ವರದರಾಜ ಆದ್ಯ ಪ್ರಶಸ್ತಿಗೆ ಲೇಖಕ- ಕಲಾವಿದ ಡಿ.ಎಸ್ ಚೌಗಲೆ ಆಯ್ಕೆಯಾದರು.

2006: ಇರಾಕಿನ ಸಮರ್ರಾದಲ್ಲಿ ಇಮಾಮ್ ಅಲಿ ಹಲ್-ಹದಿ ಮತ್ತು ಇಮಾಮ್ ಹಸನ್ ಅಲ್-ಅಸ್ಕರಿ ಸ್ಮರಣಾರ್ಥ ನಿರ್ಮಿಸಲಾದ ಅಲ್ ಅಸ್ಕರಿ ಮಸೀದಿ ಮೇಲೆ ಬಾಂಬ್ ದಾಳಿ ನಡೆದು ಅದನ್ನು ಭಾಗಶಃ ಹಾನಿಗೊಳಿಸಲಾಯಿತು. ಮಸೀದಿಯ ಸ್ವರ್ಣಗುಮ್ಮಟ ಕುಸಿದುಬಿತ್ತು. ನಂತರ ಸಂಭವಿಸಿದ ಗಲಭೆಗಳಲ್ಲಿ ಮೂವರು ಪತ್ರಕರ್ತರು ಸೇರಿದಂತೆ ಹಲವರು ಮೃತರಾದರು.

1965: ಕಲಾವಿದ ಮೈಸೂರು ಕೆ. ಕುಮಾರ್ ಜನನ.

1964: ಬ್ರಿಟಿಷ್ ಸಂಜಾತ ಭಾರತೀಯ ಮಾನವ ಶಾಸ್ತ್ರಜ್ಞ ವೆರೀಯರ್ ಎಲ್ವಿನ್ ನಿಧನರಾದರು. ಗುಡ್ಡಗಾಡು ವ್ಯವಹಾರಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರಕ್ಕೆ ಸಲಹೆಗಾರರಾಗಿದ್ದ ಇವರು ಮಧ್ಯಪ್ರದೇಶದ `ಗೊಂಡ' ಜನಾಂಗದ ಬಗ್ಗೆ ಅಧ್ಯಯನ ನಡೆಸಿದ್ದರು.

1958: ಭಾರತದ ಶಿಕ್ಷಣ ತಜ್ಞ, ರಾಜನೀತಿಜ್ಞ ಮೌಲಾನಾ ಅಬುಲ್ ಕಲಂ ಆಜಾದ್ ನಿಧನರಾದರು.

1957: ಇಂಗ್ಲೆಂಡಿನ ರಾಣಿ ಎಲಿಜಬೆತ್ ಅವರು ತಮ್ಮ ಪತಿ ಡ್ಯೂಕ್ ಆಫ್ ಎಡಿನ್ ಬರ್ಗ್ ಅವರಿಗೆ `ರಾಜಕುಮಾರ' ಎಂಬ ಬಿರುದನ್ನು ದಯಪಾಲಿಸಿದರು.

1949: ನಿಕಿ ಲೌಡಾ ಹುಟ್ಟಿದ ದಿನ. ಈತ ಆಸ್ಟ್ರೇಲಿಯಾದ ಮೋಟಾರ್ ರೇಸಿಂಗ್ ಚಾಂಪಿಯನ್.

1944: ಮಹಾತ್ಮಾ ಗಾಂಧೀಜಿ ಪತ್ನಿ ಕಸ್ತೂರಬಾ ಗಾಂಧಿ ನಿಧನರಾದರು.

1932: ಅಮೆರಿಕಾದ ಸೆನೆಟರ್ ಹಾಗೂ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಸಹೋದರ ಎಡ್ವರ್ಡ್ ಕೆನಡಿ ಹುಟ್ಟಿದ ದಿನ.

1918: ಅತ್ಯಂತ ಎತ್ತರದ ಮನುಷ್ಯ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅಮೆರಿಕನ್ ರಾಬರ್ಟ್ ಪರ್ಶಿಂಗ್ ವಾಡ್ಲೊ (1918-1940) ಹುಟ್ಟಿದ ದಿನ. ಈತನ ಎತ್ತರ 8 ಅಡಿ 11 ಅಂಗುಲಗಳು.

1902: ಫ್ರಿಟ್ಜ್ ಸ್ಟ್ರಾಸ್ ಮಾನ್ (1902-1980) ಹುಟ್ಟಿದ ದಿನ. ಜರ್ಮನ್ ಭೌತ ರಾಸಾಯನಿಕ ತಜ್ಞರಾಗಿದ್ದ ಇವರು ಒಟ್ಟೋ ಹಾನ್ ಜೊತೆ ಸೇರಿ ಯುರೇನಿಯಮ್ಮಿನಲ್ಲಿ ನ್ಯೂಟ್ರಾನ್ ಪ್ರಚೋದಿತ ಪರಮಾಣು ವಿದಳನವನ್ನು ಕಂಡು ಹಿಡಿದರು.

1892: ಇಂದುಲಾಲ್ ಯಾಜ್ಞಿಕ್ (1892-1972) ಹುಟ್ಟಿದ ದಿನ. ಇವರು ಭಾರತದ ತತ್ವಜ್ಞಾನಿಯೂ ಸಮಾಜವಾದಿ ನಾಯಕರೂ ಆಗಿದ್ದರು.

1891: ಚಿತ್ರ ಕಲೆಯ ಎಲ್ಲ ಪ್ರಕಾರಗಳಲ್ಲೂ ದುಡಿದ ಕಲಾವಿದ ಅ.ನ. ಸುಬ್ಬರಾಯರು (22-2-1891ರಿಂದ 20-5-1981) ಅಕ್ಕಿಹೆಬ್ಬಾಳು ನರಸಿಂಹಯ್ಯ- ವೆಂಕಮ್ಮ ದಂಪತಿಯ ಮಗನಾಗಿ ಅಕ್ಕಿಹೆಬ್ಬಾಳಿನಲ್ಲಿ ಜನಿಸಿದರು. ಸರ್. ಎಂ. ವಿಶ್ವೇಶ್ವರಯ್ಯ ಅವರ ಸಲಹೆಯಂತೆ ಅವರು ಕಟ್ಟಿದ ಕಲಾಮಂದಿರವು ಕಲೆಯ ಜೊತೆಗೆ ಯಕ್ಷಗಾನ, ಸೂತ್ರದ ಬೊಂಬೆಯಾಟ, ಬಯಲಾಟ, ಜಾನಪದ ಇತ್ಯಾದಿ ಎಲ್ಲ ರಂಗಗಳ ಬೆಳವಣಿಗೆಗೂ ದುಡಿಯಿತು. ಎಲ್. ಶ್ರೀನಿವಾಸ ಮೂರ್ತಿ, ಎಸ್. ರಾಮನಾಥನ್, ಎನ್. ನಾರಾಯಣ್, ನವರತ್ನರಾಮ್, ದಾಶರಥಿ ದೀಕ್ಷಿತ್ ಮುಂತಾದವರೆಲ್ಲ ಈ ಕಲಾಮಂದಿರದಿಂದ ಬಂದವರೇ. ಕಲಾವಿದ ಎ.ಎಸ್. ಮೂರ್ತೆ ಅವರು ಸುಬ್ಬರಾಯರ ಪುತ್ರ.

1857: ಬ್ರಿಟಿಷ್ ಸೇನಾ ಅಧಿಕಾರಿ ಲಾರ್ಡ್ ಬೇಡೆನ್ ಪೊವೆಲ್ (1857-1941) ಹುಟ್ಟಿದರು. ಬಾಯ್ ಸ್ಕೌಟ್ಸ್ ಮತ್ತು ಗರ್ಲ್ ಗೈಡ್ ್ಸನ ಸ್ಥಾಪಕರಾಗಿ ಇವರು ಖ್ಯಾತರಾಗಿದ್ದಾರೆ. 1889ರಲ್ಲಿ ಇದೇ ದಿನ ಬೇಡೆನ್ ಪೊವೆಲ್ ಅವರ ಪತ್ನಿ ಒಲೇವ್ ಬೇಡೆನ್ ಪೊವೆಲ್ (1889-1977) ಹುಟ್ಟಿದರು. ಇವರು 1930ರಿಂದ ಗರ್ಲ್ ಗೈಡ್ಸ್ ಜಾಗತಿಕ ಮುಖ್ಯಸ್ಥೆಯಾಗಿ ಸಂಘಟನೆಯನ್ನು ಮುನ್ನಡೆಸಿದರು.
1732: ಅಮೆರಿಕನ್ ಜನರಲ್ ಜಾರ್ಜ್ ವಾಷಿಂಗ್ಟನ್ (1732-1799) ಹುಟ್ಟಿದರು. ಮುಂದೆ ಇವರೇ ಅಮೆರಿಕಾದ ಪ್ರಥಮ ಅಧ್ಯಕ್ಷರಾದರು.

Saturday, March 27, 2010

ಇಂದಿನ ಇತಿಹಾಸ History Today ಮಾರ್ಚ್ 27

ಇಂದಿನ ಇತಿಹಾಸ

ಮಾರ್ಚ್ 27

ಇಂಡೋನೇಷ್ಯಾದ ತಂಗೆರಂಗ್ ಜಿಲ್ಲೆಯಲ್ಲಿ ಸಿತು ಗಿಂಟಂಗ್ ಅಣೆಕಟ್ಟೆ ಕುಸಿದು ಮೃತಪಟ್ಟವರ ಸಂಖ್ಯೆ 77ಕ್ಕೆ ಏರಿತು. 50 ಕ್ಕೂ ಅಧಿಕ ಮಂದಿ ಗಾಯಗೊಂಡರು. 100 ಕ್ಕೂ ಹೆಚ್ಚಿನ ಸಂಖ್ಯೆಯ ಜನಕಣ್ಮರೆಯಾದರು. ರಾಜಧಾನಿ ಜಕಾರ್ತದ ದಕ್ಷಿಣಕ್ಕಿರುವ ಈ ಅಣೆಕಟ್ಟೆ ಮಾರ್ಚ್ 26ರ ಬೆಳಗಿನ ಜಾವ ಕುಸಿದು ಬಿದ್ದು, ಪಕ್ಕದ ಜನವಸತಿ ಪ್ರದೇಶಗಳು ಜಲಾವೃತಗೊಂಡವು.

ಇಂದು ವಿಶ್ವ ರಂಗಭೂಮಿ ದಿನ. ಇಂಟರ್ ನ್ಯಾಷನಲ್ ಥಿಯೇಟರ್ ಇನ್ ಸ್ಟಿಟ್ಯೂಟ್ 1961ರಲ್ಲಿ ವ್ಯವಸ್ಥೆಗೊಳಿಸಿದ ವಿಶ್ವ ರಂಗಭೂಮಿ ಸಮಾವೇಶದಲ್ಲಿ ಪ್ರತಿವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನ ಆಚರಿಸಲು ನಿರ್ಧರಿಸಲಾಯಿತು. 1962 ರಲ್ಲಿಪ್ಯಾರಿಸ್ಸಿನಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಯೊಂದಿಗೆ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು.

2009: ವಾಯವ್ಯ ಪಾಕಿಸ್ಥಾನದ ಜಮ್ರುದ್ ಪಟ್ಟಣದ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಆತ್ಮಹತ್ಯಾ ದಾಳಿಕೋರ ತನ್ನನ್ನು ಸ್ಛೋಟಿಸಿಕೊಂಡ ಪರಿಣಾಮವಾಗಿ ಸುಮಾರು 70ಕ್ಕೂ ಹೆಚ್ಚು ಜನ ಮೃತರಾಗಿ 100ಕ್ಕೂ ಅಧಿಕ ಮಂದಿ ಗಾಯಗೊಂಡರು. ಸ್ಫೋಟದ ತೀವ್ರತೆಗೆ ಮಸೀದಿ ಪೂರ್ಣ ನೆಲಸಮವಾಯಿತು.

2009: ಇಂಡೋನೇಷ್ಯಾದ ತಂಗೆರಂಗ್ ಜಿಲ್ಲೆಯಲ್ಲಿ ಸಿತು ಗಿಂಟಂಗ್ ಅಣೆಕಟ್ಟೆ ಕುಸಿದು ಮೃತಪಟ್ಟವರ ಸಂಖ್ಯೆ 77ಕ್ಕೆ ಏರಿತು. 50 ಕ್ಕೂ ಅಧಿಕ ಮಂದಿ ಗಾಯಗೊಂಡರು. 100 ಕ್ಕೂ ಹೆಚ್ಚಿನ ಸಂಖ್ಯೆಯ ಜನಕಣ್ಮರೆಯಾದರು. ರಾಜಧಾನಿ ಜಕಾರ್ತದ ದಕ್ಷಿಣಕ್ಕಿರುವ ಈ ಅಣೆಕಟ್ಟೆ ಮಾರ್ಚ್ 26ರ ಬೆಳಗಿನ ಜಾವ ಕುಸಿದು ಬಿದ್ದು, ಪಕ್ಕದ ಜನವಸತಿ ಪ್ರದೇಶಗಳು ಜಲಾವೃತಗೊಂಡವು. ರಾತ್ರಿ ಭಾರಿ ಮಳೆ ಸುರಿದ ಕಾರಣ, 20 ದಶಲಕ್ಷ ಕ್ಯೂಬಿಕ್ ಮೀಟರ್ ಸಾಮರ್ಥ್ಯದ, 15 ಮೀಟರ್ ಎತ್ತರದ ಈ ಅಣೆಕಟ್ಟೆ ಕುಸಿಯಿತು. ಈ ಅಣೆಕಟ್ಟೆಯನ್ನು 1933 ರಲ್ಲಿ ನಿರ್ಮಿಸಲಾಗಿತ್ತು. ಆಗ ಇಂಡೋನೇಷ್ಯ ಡಚ್ ಆಳ್ವಿಕೆಯಲ್ಲಿತ್ತು. ನವೆಂಬರಿನಲ್ಲಿ ಕೂಡ ಈ ಅಣೆಕಟ್ಟೆ ಒಡೆದಿತ್ತು. ಆದರೆ ಯಾವುದೇ ಪ್ರಾಣಾಪಾಯ ಉಂಟಾಗಿರಲಿಲ್ಲ

2008: ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ, ನಾಲ್ವರು ಮೋಟಾರು ವಾಹನ ನಿರೀಕ್ಷಕರು ಮತ್ತು ಆಹಾರ ನಿರೀಕ್ಷಕರೊಬ್ಬರ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 20 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಹಾಸನ ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕ ಕೆ.ಪಿ. ಹೊನಕೇರಿ, ಮಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಸದಾಶಿವ, ಮೋಟಾರು ವಾಹನ ನಿರೀಕ್ಷಕರಾದ ಎಚ್. ಸಿ. ಸತ್ಯನ್ (ಒಒಡಿ ಸಕಲೇಶಪುರ), ಶ್ರೀನಿವಾಸಪ್ಪ (ಒಒಡಿ ದೇವನ ಹಳ್ಳಿ), ಪ್ರಮಥೇಶ್ (ಚಿತ್ರದುರ್ಗ), ಎನ್. ಕರಿಯಪ್ಪ (ಒಒಡಿ ಹಾಸನ) ಮತ್ತು ಗುಲ್ಬರ್ಗದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಎಸ್. ಬಿ. ಫುಲಾರೆ ಅವರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಯಿತು. ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತ ಮತ್ತು ಡಿಐಜಿ ಚರಣ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಪೊಲೀಸ್ ಅಧಿಕಾರಿಗಳು ಬೆಂಗಳೂರು, ಮಂಗಳೂರು, ಹಾಸನ, ಬಳ್ಳಾರಿ, ತುಮಕೂರು, ಚಿತ್ರದುರ್ಗ, ಮೈಸೂರು, ಗುಲ್ಬರ್ಗ ಮತ್ತಿತರ ಕಡೆಗಳಲ್ಲಿ ದಾಳಿ ನಡೆಸಿದರು.

2008: ಎರಡು ವಾರಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇದ್ದು ದಾಖಲೆಯ ಪ್ರಯೋಗಗಳಿಗೆ ಸಾಕ್ಷಿಯಾದ `ಎಂಡೇವರ್' ಗಗನ ನೌಕೆ ಬೆಳಗ್ಗೆ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿತು. ಫ್ಲಾರಿಡಾದ ಕೇಪ್ ಕೆನವರಲ್ನ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಏಳು ಮಂದಿ ಗಗನ ಯಾತ್ರಿಗಳನ್ನು ಹೊತ್ತಿದ್ದ `ಎಂಡೇವರ್' ಬೆಳಿಗ್ಗೆ 6.09 ಗಂಟೆಗೆ ಬಂದಿಳಿದಾಗ ಹೂಸ್ಟನ್ನಿನಲ್ಲಿನ `ನಾಸಾ' ನಿಯಂತ್ರಣ ಕೇಂದ್ರದ ಸಿಬ್ಬಂದಿ ಸಂತಸದಿಂದ ಶುಭಾಶಯ ವಿನಿಮಯ ಮಾಡಿಕೊಂಡರು. ಈ ಬಾರಿಯ ಎಂಡೇವರ್ ಯಾನ ಅತ್ಯಂತ ಫಲಪ್ರದ ಎಂದು ವಿಜ್ಞಾನಿಗಳು ಬಣ್ಣಿಸಿದರು. ಒಟ್ಟು 16 ದಿನಗಳ ಈ ಯಾನದ ಅವಧಿಯಲ್ಲಿ ನೌಕೆಯು 12 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್ಎಸ್) ಅಡಗಿ ಕುಳಿತಿತ್ತು. ಈ ಸಂದರ್ಭದಲ್ಲಿ ವ್ಯೋಮಯಾನಿಗಳು 5 ಬಾರಿ ಬಾಹ್ಯಾಕಾಶ ನಡಿಗೆ ನಡೆಸಿ ದಾಖಲೆ ಸೃಷ್ಟಿಸಿದ್ದರು. ಹಾಗೂ ಜಪಾನಿನ ಒಂದು ಪ್ರಯೋಗಾಲಯ ಮತ್ತು ಕೆನಡಾದ ರೊಬೊಟ್ ಒಂದನ್ನು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2008: ಮಹಾರಾಷ್ಟ್ರ ನಿರ್ಮಾಣ ಸೇನೆಯು (ಎಂ ಎನ್ ಎಸ್) ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ವಿರುದ್ಧದ ದಾಳಿಯನ್ನು ಮುಂದುವರೆಸಿದ್ದು, ಈಗ ಭಿತ್ತಿಚಿತ್ರಗಳ ಮೂಲಕ ಅವರನ್ನು ಪರೋಕ್ಷವಾಗಿ ಟೀಕಿಸುವ ಕೆಲಸ ಮಾಡಿತು. ಪುಣೆ ಬಳಿಯ ಲೊಣಾವಾಲದಲ್ಲಿ ಖರೀದಿಸಿದ ಕೃಷಿ ಭೂಮಿಯನ್ನು ಮೂಲ ಮಾಲೀಕನಿಗೆ ವಾಪಸ್ ಮಾಡುವ ನಿರ್ಧಾರದಿಂದ ಹಿಂದೆ ಸರಿದ ಅಮಿತಾಭ್ ಅವರ ನಿಲುವನ್ನು ಟೀಕಿಸಲು ಎಂ ಎನ್ ಎಸ್ ವ್ಯಂಗ್ಯ ಭಿತ್ತಿಚಿತ್ರವನ್ನು ಬಳಸಿತು. ಭಿತ್ತಿಚಿತ್ರದಲ್ಲಿ ರೇಖಾಚಿತ್ರದ ಕೆಳಗಡೆ ಮರಾಠಿಯಲ್ಲಿ `ಮಜೆ ದಾನ್ ಪರತ್ ಕರಾ' (ನಾನು ದಾನವಾಗಿ ನೀಡಿದ್ದನ್ನು ವಾಪಸ್ ಮಾಡು) ಎಂದು ಬರೆದು ನಂತರ `ಸೂಪರ್ ಶೇತ್ಕರಿ' (ಸೂಪರ್ ರೈತ) ಎಂದು ಬರೆಯಲಾಯಿತು.

2008: ಹಿಂದೂ ದೇವತೆ ದುರ್ಗಾದೇವಿಯ ಪ್ರತಿರೂಪದಂತೆ ಭಿತ್ತಿ ಚಿತ್ರಗಳಲ್ಲಿ ತಮ್ಮನ್ನು ಪ್ರತಿಬಿಂಬಿಸಿಕೊಂಡು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಿಂದೂಗಳ ಭಾವನೆಗಳಿಗೆ ನೋವು ಉಂಟು ಮಾಡಿದ್ದಾರೆ ಎಂದು ಆಪಾದಿಸಿ ಮುಜಾಫರಾಬಾದ್ ನ್ಯಾಯಾಲಯದಲ್ಲಿ ಸಲ್ಲಿಸಿದ ದೂರನ್ನು ವಿಚಾರಣೆಗೆ ಅಂಗೀಕರಿಸಲಾಯಿತು. ಸೋನಿಯಾ ಗಾಂಧಿ ಅವರು ಉತ್ತರಪ್ರದೇಶ ಮತ್ತು ಮುರದಾಬಾದ್ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವಕೀಲ ಸುಧೀರ್ ಓಝಾ ಅವರು ಸಲ್ಲಿಸಿದ ದೂರನ್ನು ಸ್ವೀಕರಿಸಿದ ನ್ಯಾಯಾಧೀಶ ಎಚ್. ಕೆ. ಶ್ರೀವಾತ್ಸವ ಅವರು ಪ್ರಕರಣವನ್ನು ವಿಚಾರಣೆಗಾಗಿ ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಿದರು. ಕಳೆದ ಡಿಸೆಂಬರಿನಲ್ಲಿ ಮ್ಯಾಜಿಸ್ಟ್ರೇಟ್ ಅವರು ಈ ದೂರನ್ನು ವಜಾ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಓಝಾ ಅವರು ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ದುರ್ಗಾದೇವಿಯಂತೆ ಕಾಣಿಸುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭಿತ್ತಿಚಿತ್ರವು ಟಿವಿ ಹಾಗೂ ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿತ್ತು.

2008: ಹೊಗೇನಕಲ್ ಸಮಗ್ರ ನೀರು ಸರಬರಾಜು ಯೋಜನೆಯನ್ನು ಜಾರಿ ಮಾಡಲು ಸಂಪೂರ್ಣ ಬೆಂಬಲ ಹಾಗೂ ಸಹಕಾರ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಗೊತ್ತುವಳಿಯನ್ನು ತಮಿಳುನಾಡು ವಿಧಾನಸಭೆಯು ಅಂಗೀಕರಿಸಿತು. 1,334 ಕೋಟಿ ರೂಪಾಯಿಗಳ ಜಪಾನ್ ಆರ್ಥಿಕ ನೆರವಿನ ಯೋಜನೆಯನ್ನು ಜಾರಿ ಮಾಡುವಾಗ ಕರ್ನಾಟಕವು ವಿರೋಧ ವ್ಯಕ್ತಪಡಿಸದಂತೆ ನೋಡಿಕೊಳ್ಳಬೇಕು ಎಂದು ಗೊತ್ತುವಳಿಯನ್ನು ಮಂಡಿಸಿದ ಸ್ಥಳೀಯಾಡಳಿತ ಸಚಿವ ಎಂ.ಕೆ. ಸ್ಟ್ಯಾಲಿನ್ ಅವರು ಕೇಂದ್ರವನ್ನು ಒತ್ತಾಯಿಸಿದರು. ಕರ್ನಾಟಕದ ಗಡಿಯಲ್ಲಿರುವ ಹೊಗೇನಕಲ್ಲಿನಲ್ಲಿ ನೀರು ಸರಬರಾಜು ಯೋಜನೆ ಜಾರಿ ಮಾಡುವುದಕ್ಕೆ ಬಿಜೆಪಿಯ ಕರ್ನಾಟಕ ಘಟಕ ಮತ್ತು ಇತರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಹೊಗೇನಕಲ್ಲಿನಲ್ಲಿ ಧರಣಿ ನಡೆಸಿದ್ದರ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಈ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.

2008: ಲೋಕಾಯುಕ್ತ ತನಿಖೆಗೆ ಒಳಗಾಗಿದ್ದ ಹತ್ತು ಅಧಿಕಾರಿಗಳ ಹೆಸರನ್ನು ಐಎಎಸ್ ಗೆ ಬಡ್ತಿ ನೀಡಲು ಶಿಫಾರಸು ಮಾಡಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು. ಅಧಿಕಾರಿಗಳ ಹೆಸರು ಶಿಫಾರಸು ಮಾಡಿರುವ ಕೃಷ್ಣ ಸರ್ಕಾರದ ಕ್ರಮ ಸಮರ್ಥನೀಯವಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ನ್ಯಾಯಮೂರ್ತಿ ಸಿ.ಕೆ. ಠಕ್ಕರ್ ಹಾಗೂ ಡಿ.ಕೆ. ಜೈನ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯ ಪಟ್ಟಿತು.

2008: ಕೇಂದ್ರದ ಮಾಜಿ ಸಚಿವ ಹಾಗೂ ಬಿಹಾರದ ಬಿಜೆಪಿ ಮಾಜಿ ಮುಖಂಡ ಜೈ ನಾರಾಯಣ ಪ್ರಸಾದ್ ನಿಷಾದ್ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ರಾಜ್ಯಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು. ನಿಷಾದ್, ತಮ್ಮ ಮಾತೃ ಪಕ್ಷ ಬಿಜೆಪಿ ತ್ಯಜಿಸಿದ್ದರಿಂದ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ ಎಂದು ರಾಜ್ಯಸಭಾ ಅಧ್ಯಕ್ಷ ಹಮಿದ್ ಅನ್ಸಾರಿ ತಿಳಿಸಿದರು. ನಿಷಾದ್, 2005ರ ಚುನಾವಣೆಯಲ್ಲಿ ಆರ್ ಜೆ ಡಿ ಪರ ಚುನಾವಣಾ ಪ್ರಚಾರ ಮಾಡಿದ್ದರಿಂದ ಸುಷ್ಮಾ ಸ್ವರಾಜ್ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.

2008: ಹಿರಿಯ ಧುರೀಣ ಎ. ಬಿ. ಬರ್ಧನ್ ಅವರು ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ 4ನೇ ಬಾರಿಗೆ ಆಯ್ಕೆಯಾದರು. ಹೈದರಾಬಾದಿನಲ್ಲಿ ಪಕ್ಷದ 20ನೇ ರಾಷ್ಟ್ರೀಯ ಸಮ್ಮೇಳನದ ಮುಕ್ತಾಯ ದಿನ ನಡೆದ ಚುನಾವಣೆಯಲ್ಲಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾದರು. ಪಕ್ಷದ ನಲಗೊಂಡ ಕ್ಷೇತ್ರದ ಸಂಸದ ಎಸ್. ಸುಧಾಕರ್ ರೆಡ್ಡಿ ಅವರು ಉಪ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

2008: ವಾಯವ್ಯ ಚೀನಾದ ಜಿಯಾಂಗ್ ಉಗುರ್ ಪ್ರಾಂತ್ಯದಲ್ಲಿ ಪಟಾಕಿ ವಿಲೇವಾರಿ ಕೇಂದ್ರದಲ್ಲಿ ಪಟಾಕಿಗಳನ್ನು ನಾಶಪಡಿಸಲು ಯತ್ನಿಸಿದಾಗ ಸಂಭವಿಸಿದ ಸ್ಛೋಟದಿಂದ 25 ಮಂದಿ ಮೃತರಾಗಿ ಏಳು ಜನರಿಗೆ ಗಾಯಗಳಾದವು.

2008: ಗ್ರಂಥಾಲಯ ಇಲಾಖೆಯನ್ನು ದೇಶದಲ್ಲಿಯೇ ಮಾದರಿಯನ್ನಾಗಿ ರೂಪಿಸಿದ ಕೀರ್ತಿಗೆ ಭಾಜನರಾಗಿರುವ ಇಲಾಖೆಯ ನಿರ್ದೇಶಕ ಪಿ.ವೈ.ರಾಜೇಂದ್ರ ಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಪ್ರತಿಷ್ಠಿತ `ರಂಗನಾಥನ್- ಕೌಲ ಪ್ರತಿಷ್ಠಾನ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಭಾರತೀಯ ಶೈಕ್ಷಣಿಕ ಗ್ರಂಥಾಲಯಗಳ ಸಂಘ, ಭಾರತೀಯ ಸಾರ್ವಜನಿಕ ಗ್ರಂಥಾಲಯಗಳ ಸಂಘ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನೌಕರರ ಸಂಘ, ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯ ಹಾಗೂ ರಂಗನಾಥನ್- ಕೌಲ ಪ್ರತಿಷ್ಠಾನ ಜಂಟಿಯಾಗಿ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು.

2007: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಬಗ್ಗೆ ತನ್ನ ಬಳಿ ಇರುವ ದಾಖಲೆಗಳಲ್ಲಿ ಯಾವ ಮಾಹಿತಿಯೂ ಇಲ್ಲ ಎಂಬ ಆಘಾತಕಾರಿ ವಿಚಾರವನ್ನು ಭಾರತ ಸರ್ಕಾರ ಬಹಿರಂಗಗೊಳಿಸಿತು. ದೆಹಲಿಯ ದೇವ್ ಅಶಿಷ್ ಭಟ್ಟಾಚಾರ್ಯ ಅವರು ಮಾಹಿತಿ ಹಕ್ಕುಗಳ ಕಾಯ್ದೆ ಅಡಿ ಸಲ್ಲಿಸಿದ ಅರ್ಜಿಯೊಂದಕ್ಕೆ ಪ್ರತಿಕ್ರಿಯೆಯಾಗಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಈ ವಿಚಾರವನ್ನು ಒಪ್ಪಿಕೊಂಡರು. ಸ್ವತಃ ಭಟ್ಟಾಚಾರ್ಯ ಅವರು ಈದಿನ ಈ ವಿಚಾರ ಬಹಿರಂಗ ಪಡಿಸಿದರು. ಭಟ್ಟಾಚಾರ್ಯ ಅವರು ಐದು ಪ್ರಶ್ನೆಗಳೊಂದಿಗೆ ಕೇಂದ್ರ ಗೃಹ ಸಚಿವಾಲಯವನ್ನು ಸಂಪರ್ಕಿಸಿ `ಸ್ವಾತಂತ್ರ್ಯ ಚಳವಳಿಯಲ್ಲಿ ಬೋಸ್ ಅವರು ಯಾವ ಪಾತ್ರ ವಹಿಸಿದ್ದರು.' ಎಂಬ ಬಗ್ಗೆ ಮಾಹಿತಿ ಬೇಕು ಎಂದು ಕೇಳಿದ್ದರು. ಬೋಸ್ ಅವರ ಬಗ್ಗೆ ಏನಾದರೂ ರಾಜತಾಂತ್ರಿಕ ಶಿಷ್ಟಾಚಾರವನ್ನು ಭಾರತ ಇಟ್ಟುಕೊಂಡಿದೆಯೇ? ಎಲ್ಲಾದರೂ ಅಂತಹ ರಾಜತಾಂತ್ರಿಕ ಶಿಷ್ಟಾಚಾರಕ್ಕೆ ಬೋಸ್ ಯೋಗ್ಯರಾಗಿದ್ದಾರೆಯೇ ಎಂದೂ ಅರ್ಜಿದಾರರು ಮಾಹಿತಿ ಬಯಸಿದ್ದರು. `ನಿಮ್ಮ ಪತ್ರದಲ್ಲಿ ತಿಳಿಸಲಾಗಿರುವ ಅಂಶಗಳಿಗೆ ಸಂಬಂಧಿಸಿದ ಮಾಹಿತಿ ಲಭ್ಯವಿಲ್ಲ' ಎಂದು ಗೃಹ ಸಚಿವಾಲಯದ ಉಪ ಕಾರ್ಯದರ್ಶಿ ಎಸ್. ಕೆ. ಮಲ್ಹೋತ್ರ ಭಟ್ಟಾಚಾರ್ಯ ಅವರ ಅರ್ಜಿಗೆ ಉತ್ತರವಾಗಿ ಬರೆದ ಪತ್ರದಲ್ಲಿ ತಿಳಿಸಿದರು. `ಈ ಪ್ರತಿಕ್ರಿಯೆ ಕಂಡು ನನಗೆ ಆಘಾತವಾಯಿತು' ಎಂದು ಭಟ್ಟಾಚಾರ್ಯ ಇದಕ್ಕೆ ಪ್ರತಿಕ್ರಿಯಿಸಿದರು. ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತ ಮತ್ತು ಭಾರತದ ಜನತೆಗೆ ಬ್ರಿಟಿಷರ ವಿರುದ್ಧ ಹೋರಾಡುವಲ್ಲಿ ಜನರಿಗೆ ಇರುವ ಕೆಚ್ಚಿನ ಬಗ್ಗೆ ಜಾಗೃತಿ ಮೂಡಿಸಲು ಸಾಕಷ್ಟು ಕೆಲಸ ಮಾಡಿರಬಹುದು. ಆದರೆ ಇದನ್ನು ಸಮರ್ಥಿಸಲು ಬೇಕಾದ ಯಾವ ದಾಖಲೆಗಳೂ ಇಲ್ಲ' ಎಂದು ಸರ್ಕಾರ ಹೇಳುತ್ತದೆ ಎಂದು ಭಟ್ಟಾಚಾರ್ಯ ನುಡಿದರು. ಭಾರತ ರಾಷ್ಟ್ರೀಯ ಸೇನೆಯನ್ನು ಕಟ್ಟಿದ್ದು ಮತ್ತು ಮಣಿಪುರದ ಮೋರೆಹ್ ನಲ್ಲಿ ಹಿಮ್ಮೆಟ್ಟುವ ಮುನ್ನ ಭಾರತದ ಮುಖ್ಯಭಾಗದ ಅತ್ಯಂತ ಸಮೀಪಕ್ಕೆ ಈ ಸೇನೆ ಬಂದಿತ್ತು ಎಂಬುದು ಐತಿಹಾಸಿಕ ವಾಸ್ತವಾಂಶ. ಆದರೆ ನನ್ನ ಅರ್ಜಿಗೆ ಸ್ಪಂದಿಸಿ ಈ ವಿಚಾರವನ್ನು ದಾಖಲೆಗೆ ಸೇರಿಸಲು ಸರ್ಕಾರ ನಿರಾಸಕ್ತವಾಗಿದೆ ಎಂದು ಭಟ್ಟಾಚಾರ್ಯ ಹೇಳಿದರು.

2007: ಕೇಂದ್ರೀಯ ಆಡಳಿತಾತ್ಮಕ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ ಮತ್ತು ಖ್ಯಾತ ಸಂಸ್ಕೃತ ವಿದ್ವಾಂಸ ವಾಸುದೇವ ಪೋದ್ದಾರ ಅವರನ್ನು ಸಂವಿಧಾನ ತಜ್ಞ ಮಾಜಿ ರಾಜ್ಯಸಭಾ ಸದಸ್ಯ ಎಲ್. ಎಂ. ಸಿಂಘ್ವಿ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರ ದಶರಥ ಮಲ್ ಸಿಂಘ್ವಿ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

2007: ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಅವರಿಗೆ ಬ್ಯಾಂಕಾಕ್ ಮೂಲದ ಏಷ್ಯಾ ಮತ್ತು ಶಾಂತ ಸಾಗರ ವಲಯಕ್ಕಾಗಿ ರಚಿಸಲಾದ ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಆಯೋಗವು (ಯುನೆಸ್ಕ್ಯಾಪ್) `ಯುನೆಸ್ಕ್ಯಾಪ್' ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಿತು. ಆಯೋಗವು ತನ್ನ ಅರವತ್ತನೇ ವಾರ್ಷಿಕೋತ್ಸವದ ಅಂಗವಾಗಿ ಬ್ಯಾಂಕಾಕಿನಲ್ಲಿ ನಡೆದ ಸಮಾರಂಭದಲ್ಲಿ ಅಮರ್ತ್ಯ ಸೇನ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿತು.

2006: ಧಾರವಾಡ, ಹುಬ್ಬಳ್ಳಿ ಮತ್ತು ಗುಲ್ಬರ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ 2006-07ನೇ ಸಾಲಿನಲ್ಲೂ 20 ಕೋಟಿ ರೂಪಾಯಿ ಮೀಸಲಿಟ್ಟಿರುವುದಾಗಿ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಪ್ರಕಟಿಸಿದರು.

2006: ಭಾರತದ ಗಗನ್ ನಾರಂಗ್ ಅವರು ಚೀನಾದ ಗುವಾಂಗ್ ಜೊನಲ್ಲಿ ಐ ಎಸ್ ಎಸ್ ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಸ್ವರ್ಣಪದಕ ಗೆದ್ದು 2008ರ ಬೀಜಿಂಗ್ ಒಲಿಂಪಿಕ್ ಕೂಟಕ್ಕೆ ನೇರ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ಲಂಡನ್ನಿನಲ್ಲಿ ಈ ದಿನ ಜಸ್ಟಿನ್ ವಿಟ್ಟಿ ಎಂಬ ಮಹಿಳೆ ಹೆಣ್ಣು ಮಗು ಒಂದಕ್ಕೆ ಜನ್ಮನೀಡಿ ವಿಶಿಷ್ಠ ದಾಖಲೆ ನಿರ್ಮಾಣದ ಅಪರೂಪದ ಕೀರ್ತಿಗೆ ಪಾತ್ರಳಾದಳು. ಅಪರೂಪದ ಈ ದಾಖಲೆ ಏನೆಂದರೆ ಈ ಮಹಿಳೆ ಮತ್ತು ಆಕೆಯ ತಾಯಿ ಕೂಡಾ ಇದೇ ದಿನಾಂಕದಂದು ಹುಟ್ಟಿದ್ದು! ಇದರಿಂದಾಗಿ ಅಜ್ಜಿ, ತಾಯಿ ಮತ್ತು ಮೊಮ್ಮಗಳು ಈ ಮೂರು ತಲೆಮಾರಿನವರಿಗೆ ಒಂದೇ ದಿನ ಹುಟ್ಟುಹಬ್ಬ ಆಚರಿಸುವ ಯೋಗ ಲಭಿಸಿತು. ಪ್ರತಿ 1,33,225 ಜನರಲ್ಲಿ ಒಬ್ಬರು ಮಾತ್ರ ಈ ರೀತಿಯ ದಾಖಲೆಗೆ ಪಾತ್ರರಾಗುತ್ತಾರೆ.

2006: ಆಂಧ್ರ್ರಪ್ರದೇಶದ ಕರೀಂನಗರ ಜಿಲ್ಲೆಯ ಕಿಶನ್ ರಾವ್ ಪೇಟೆ ಗ್ರಾಮದಲ್ಲಿ ಜಿಲ್ಲಾ ಹೋಂಗಾರ್ಡ್ ಚಂದ್ರಲೀಲಾ (28) ಮತ್ತು ಕೈದಿ ಸ್ವಪ್ನಾ (25) ಎಂಬ ಇಬ್ಬರು ಮಹಿಳೆಯರು ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸ್ವಪ್ನಾ ಜಿಲ್ಲಾ ಕಾರಾಗೃಹದಲ್ಲಿ ಇದ್ದಾಗ ಇವರಲ್ಲಿ ಸ್ನೇಹ ಅಂಕುರಿಸಿ ಅದು ಪ್ರೇಮವಾಗಿ ಬೆಳೆದು ವಿವಾಹದಲ್ಲಿ ಪರ್ಯವಸಾನಗೊಂಡಿತು. ಗ್ರಾಮಸ್ಥರೂ ಈ ಜೋಡಿಯನ್ನು ಮನತುಂಬಿ ಹರಸಿದರು.

2006: ಕುಮಟಾದ ಗೌರೀಶ ಕಾಯ್ಕಿಣಿ ಪ್ರತಿಷ್ಠಾನವು 2005ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿಗೆ ಕವಯಿತ್ರಿ ಪ್ರತಿಭಾ ನಂದಕುಮಾರ್ ಅವರನ್ನು ಆಯ್ಕೆ ಮಾಡಿತು.

2000: ಜಮೈಕಾದ ಕಿಂಗ್ ಸ್ಟನ್ನಿನ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಟರ್ಿ್ನ ವಾಲ್ಷ್ ಅವರು ತಮ್ಮ 435ನೇ ವಿಕೆಟನ್ನು ಪಡೆದು ಕಪಿಲ್ ದೇವ್ ಅವರ 434 ಟೆಸ್ಟ್ ವಿಕೆಟ್ ದಾಖಲೆಯನ್ನು ಮುರಿದರು.

1979: ಭಾರತದ ಎಸ್. ವಿಜಯಲಕ್ಷ್ಮಿ ಹುಟ್ಟಿದ ದಿನ. ಈಕೆ ಚೆಸ್ ನಲ್ಲಿ ಭಾರತದ ಪ್ರಪ್ರಥಮ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಎಂಬ ಕೀರ್ತಿಗೆೆ ಪಾತ್ರರಾದರು.

1977: ಕ್ಯಾನರಿ ದ್ವೀಪದ ಲಾಸ್ ರ್ಹೋಡ್ಸ್ ವಿಮಾನ ನಿಲ್ದಾಣದ ರನ್ ವೇಯಲ್ಲಿ ಪಾನ್ ಅಮೆರಿಕನ್ ಮತ್ತು ಕೆ ಎಲ್ ಎಂ ಜಂಬೋ ವಿಮಾನಗಳು ಡಿಕ್ಕಿ ಹೊಡೆದು 574 ಮಂದಿ ಅಸು ನೀಗಿದರು. ಇದು ವಾಯುಯಾನ ಇತಿಹಾಸದ ಅತಿ ಭೀಕರ ದುರಂತ ಎನಿಸಿತು.

1968: ಬಾಹ್ಯಾಕಾಶಕ್ಕೆ ಮೊತ್ತ ಮೊದಲ ಬಾರಿಗೆ ಪಯಣಿಸಿದ ಗಗನಯಾನಿ ಯೂರಿ ಗಗಾರಿನ್ ಮಾಸ್ಕೊದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ಮೃತರಾದರು. ಅವರು ಮೃತರಾದ ಗಾಸ್ತಸ್ಕ್ ಪಟ್ಟಣಕ್ಕೆ ಗಗಾರಿನ್ ಎಂಬುದಾಗಿ ಮರುನಾಮಕರಣ ಮಾಡಲಾಯಿತು.

1958: ನಿಖಿತ ಕ್ರುಶ್ಚೇವ್ ಅವರು ಸೋವಿಯತ್ ಕಮ್ಯೂನಿಸ್ಟ್ ಪಕ್ಷದ ಮೊದಲ ಕಾರ್ಯದರ್ಶಿ ಹುದ್ದೆಯ ಜೊತೆಗೆ ಸೋವಿಯತ್ ಪ್ರಧಾನಿಯಾದರು.

1863: ಲಕ್ಷುರಿ ಕಾರು ಮತ್ತು ವಿಮಾನ ಎಂಜಿನ್ ಗಳ ತಯಾರಕ ಸಂಸ್ಥೆ ರೋಲ್ಸ್- ರಾಯ್ಸ್ ಲಿಮಿಟೆಡ್ಡಿನ ಸ್ಥಾಪಕ ಸರ್ (ಫ್ರೆಡರಿಕ್) ಹೆನ್ರಿ ರಾಯ್ಸ್ (1863-1933) ಜನ್ಮದಿನ.

1845: ವಿಲ್ಹೆಮ್ ಕೊನ್ರಾಡ್ ರಾಂಟ್ ಜೆನ್ (1845-1923) ಹುಟ್ಟಿದ ದಿನ. ಜರ್ಮನ್ ಭೌತತಜ್ಞನಾದ ಈತ ಭೌತವಿಜ್ಞಾನಕ್ಕೆ ನೀಡಲಾಗುವ `ನೊಬೆಲ್' ಪ್ರಶಸ್ತಿಯನ್ನು 1901ರಲ್ಲಿ ಪಡೆಯುವ ಮೂಲಕ ಈ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ. ಪಾರದರ್ಶಕವಲ್ಲದ ವಸ್ತುಗಳ ಮುಖಾಂತರ ಹಾದುಹೋಗುವ ಕ್ಷ-ಕಿರಣಗಳ (ಎಕ್ಸ್-ರೇಸ್) ಪತ್ತೆಗಾಗಿ ಈತನಿಗೆ ಈ ಪ್ರಶಸ್ತಿ ಲಭಿಸಿತು.

1625: ಮೊದಲನೆಯ ಜೇಮ್ಸ್ ಸಾವಿನ ಬಳಿಕ ಮೊದಲನೆಯ ಚಾರ್ಲ್ಸ್ ಇಂಗ್ಲಿಷ್ ಸಿಂಹಾಸನವನ್ನು ಏರಿದ.

ಇಂದಿನ ಇತಿಹಾಸ History Today ಫೆಬ್ರುವರಿ 21

ಇಂದಿನ ಇತಿಹಾಸ

ಫೆಬ್ರುವರಿ 21

ಅತ್ಯಂತ ಕಿರಿಯ ವಯಸ್ಸಿನಲ್ಲಿ ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿ ಲಿಮ್ಕಾ ದಾಖಲೆಗೆ ಪಾತ್ರಳಾದ 7 ವರ್ಷದ ಸುಷ್ಮಾವರ್ಮಾ ಲಖನೌನ ತನ್ನ ಸೈಂಟ್ ಮೀರಾ ಇಂಟರ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಲಿಮ್ಕಾ ಪ್ರಮಾಣ ಪತ್ರ ಪಡೆದರು.

2009: ಅತ್ಯಂತ ಕಿರಿಯ ವಯಸ್ಸಿನಲ್ಲಿ ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿ ಲಿಮ್ಕಾ ದಾಖಲೆಗೆ ಪಾತ್ರಳಾದ 7 ವರ್ಷದ ಸುಷ್ಮಾವರ್ಮಾ ಲಖನೌನ ತನ್ನ ಸೈಂಟ್ ಮೀರಾ ಇಂಟರ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಲಿಮ್ಕಾ ಪ್ರಮಾಣ ಪತ್ರ ಪಡೆದರು.

2009: ಚೆನ್ನೈಯ ಮದ್ರಾಸ್ ಹೈಕೋರ್ಟ್ ಆವರಣದಲ್ಲಿ ನಡೆದ ವಕೀಲರು- ಪೊಲೀಸರ ನಡುವಣ ಮಾರಾಮಾರಿ ಘಟನೆ ತಮಿಳುನಾಡು ರಾಜ್ಯವನ್ನು ಪ್ರಕ್ಷುಬ್ಧ ಸ್ಥಿತಿಗೆ ತಳ್ಳಿತು. ಸೇಲಂನಲ್ಲಿ ಸರ್ಕಾರಿ ವಕೀಲರೊಬ್ಬರನ್ನು ನಿಗೂಢವಾಗಿ ಕೊಲ್ಲಲಾಯಿತು. ರಾಜ್ಯದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುವವರ ವಿರುದ್ಧ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಲಾಯಿತು. ಹೈಕೋರ್ರ್ಟಿಗೂ ಈ ಬಿಸಿ ತಟ್ಟಿ, ರಜೆ ಘೋಷಿಸಲಾಯಿತು.

2009: ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆ ಕಾಫಿ ಬೆಳೆಗಾರರಿಗೆ ಮಳೆ ವಿಮಾ ಯೋಜನೆ ಜಾರಿಗೆ ಸಂಬಂಧಿಸಿ ಅಂಚೆ ಇಲಾಖೆ ಹಾಗೂ ಅಗ್ರಿಕಲ್ಚರಲ್ ಇನ್ಸುರೆನ್ಸ್ ಕಂಪೆನಿ ಆಫ್ ಇಂಡಿಯ ಲಿ. (ಎಐಸಿಐಎಲ್) ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದವು. ಬೆಂಗಳೂರು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಜಿ.ವಿ.ಕೃಷ್ಣರಾವು ಸಮ್ಮುಖ ಎಐಸಿಐಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಪರ್ಶದ್, ಅಂಚೆ ಇಲಾಖೆ ವ್ಯವಹಾರ ಅಭಿವೃದ್ಧಿ ವಿಭಾಗದ ಪೋಸ್ಟ್ ಮಾಸ್ಟರ್ ಜನರಲ್ ಕರುಣಾ ಪಿಳ್ಳೈ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. 3 ಜಿಲ್ಲೆಗಳಲ್ಲಿ ಅರೇಬಿಕಾ, ರೊಬೊಸ್ಟ ಕಾಫಿ ಬೆಳೆಗಾರರು ಈ ವಿಮೆ ಪಡೆಯಲು ಅರ್ಹರು. ಜಿಲ್ಲೆಯ ಅಂಚೆ ಕಚೇರಿಗಳಲ್ಲಿ ವಿಮಾ ಪ್ರೀಮಿಯಂ ಪಾವತಿಸಿ ನೋಂದಣಿ ಮಾಡಿಸಿಕೊಳ್ಳಬಹುದು. ಮಳೆ ಬೀಳುವ ಹಾಗೂ ಕಾಫಿ ಮೊಗ್ಗು ಬಿಡುವ ಕಾಲಾವಧಿಗೆ ಸಂಬಂಧಿಸಿದಂತೆ ವಿವಿಧ ವಿಮಾ ಸ್ಕೀಮ್‌ಗಳಿವೆ ಎಂದು ತಿಳಿಸಲಾಯಿತು.

2009: 'ಭ್ರಷ್ಟಾಚಾರ ನಿಯಂತ್ರಣ ಕಾರ್ಯಕ್ಕೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಪದೇಪದೇ ಅಡ್ಡಿಪಡಿಸ್ದಿದರಿಂದ ಬೇಸತ್ತು ಅಧಿಕಾರಕ್ಕೆ ಬಂದ ಏಳು ತಿಂಗಳ ಬಳಿಕ ರಾಜ್ಯಪಾಲರ ಬಳಿಗೆ ತೆರಳಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೆ' ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಇದೇ ಮೊದಲ ಬಾರಿಗೆ ಬಹಿರಂಗ ಪಡಿಸಿದರು. ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ವತಿಯಿಂದ ಬೆಂಗಳೂರು ನಗರದ ಸಚಿವಾಲಯ ಕ್ಲಬ್ಬಿನಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ತಮ್ಮ ಆಶಯಕ್ಕೆ ತಕ್ಕಂತೆ ಏನೂ ನಡೆಯುತ್ತಿಲ್ಲ ಎಂಬ ಬೇಸರವೇ ಈ ತೀರ್ಮಾನಕ್ಕೆ ಕಾರಣವಾಗಿತ್ತು' ಎಂದು ಹೇಳಿದರು.

2009: ಜ್ಞಾನಪೀಠ ವಿಜೇತ ಸಾಹಿತಿ ಡಾ.ಕೋಟ ಶಿವರಾಮ ಕಾರಂತರು ರೂಪಿಸಿದ ಹೊಸ ರೀತಿಯ ನೃತ್ಯ- ನಾಟಕ ಪ್ರಕಾರವಾದ 'ಯಕ್ಷ ರಂಗ'ದ ಉಚಿತ ಪ್ರದರ್ಶನಗಳನ್ನು ಯಾವುದೇ ಹವ್ಯಾಸಿ ತಂಡ ಅಥವಾ ಸಂಸ್ಥೆ ನೀಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. 'ಯಕ್ಷ ರಂಗ'ದ ಉಚಿತ ಪ್ರದರ್ಶನ ನೀಡುವುದು ಕೃತಿಸ್ವಾಮ್ಯ ಹಕ್ಕನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ ಎಂದು ಎಸ್.ಬಿ.ಸಿನ್ಹಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಹೇಳಿತು. ಈ ತೀರ್ಪಿನಿಂದಾಗಿ ಈ ಮುನ್ನ 'ಯಕ್ಷ ರಂಗ'ದ ಹಕ್ಕುಸ್ವಾಮ್ಯ ಮಾಲಿನಿ ಮಲ್ಯ ಅವರಿಗೆ ಸೇರಿದ್ದಾಗಿದೆ ಎಂದು ತೀರ್ಪು ನೀಡಿದ್ದ ಹೈಕೋರ್ಟ್ ತೀರ್ಪು ವಜಾ ಆಯಿತು. 'ಯಕ್ಷ ರಂಗ'ದ ಒಡೆತನದ ಸಂಬಂಧ ಬಿ.ಮಾಲಿನಿ ಮಲ್ಯ ಮತ್ತು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮಧ್ಯೆ ವ್ಯಾಜ್ಯ ಇತ್ತು. ಈ ನೃತ್ಯ ಪ್ರಕಾರವನ್ನು ಕಾರಂತರು ತನ್ನ ಹೆಸರಿಗೆ ಉಯಿಲು ಬರೆದಿದ್ದಾರೆ ಎಂದು ಮಾಲಿನಿ ವಾದಿಸಿದ್ದರು. ಅಕಾಡೆಮಿಯು 2001ರ ಸೆ.18 ರಂದು ದೆಹಲಿಯಲ್ಲಿ ನೀಡಿದ ಯಕ್ಷ ರಂಗ ಪ್ರದರ್ಶನವೊಂದರ ವಿರುದ್ಧ ಮಾಲಿನಿ ಅವರು ರಾಜ್ಯದ ಜಿಲ್ಲಾ ನ್ಯಾಯಾಲಯವೊಂದರಲ್ಲಿ ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯವು ಈ ನೃತ್ಯ ಪ್ರಕಾರದ ಹಕ್ಕುಸ್ವಾಮ್ಯ ಮಾಲಿನಿ ಮಲ್ಯ ಅವರಿಗೇ ಸೇರಿರುತ್ತದೆ ಎಂದು ತೀರ್ಪು ನೀಡಿತ್ತು. ಆನಂತರ ವ್ಯಾಜ್ಯ ಹೈಕೋರ್ಟ್ ಮೆಟ್ಟಿಲೇರಿ, ಅಲ್ಲಿಯೂ ಮಾಲಿನಿ ಅವರ ಪರವಾಗಿಯೇ ತೀರ್ಪು ಪ್ರಕಟವಾಗಿತ್ತು. ಆದರೆ ಸುಪ್ರೀಂಕೋರ್ಟ್ ಈ ವಾವನ್ನು ಒಪ್ಪಲಿಲ್ಲ. ಸಂಶೋಧನೆ ಅಥವಾ ವಿಮರ್ಶೆ ಒಳಗೊಂಡಂತೆ ಯಾವುದೇ ಖಾಸಗಿ ಉದ್ದೇಶಕ್ಕೆ ಸಾಹಿತ್ಯ ಅಥವಾ ನಾಟಕ ಕೃತಿಯನ್ನು ಬಳಸಿಕೊಂಡು ಅದಕ್ಕೆ ಬೇರೆ ಯಾವುದೇ ಸ್ವರೂಪ ನೀಡಿದರೆ ಅಂತಹ ಸಂದರ್ಭದಲ್ಲಿ ಕೃತಿಸ್ವಾಮ್ಯ ಹಕ್ಕು ಸಾಧಿಸಲಾಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

2009: ಇದೊಂದು ಗೋ ವಿವಾಹ. ಹಿಂದಿನ ವಾರ ಒರಿಸ್ಸಾದ ಬೆಹ್ರಾಂಪುರದಲ್ಲಿ ಹಸು ಮತ್ತು ಎತ್ತು ನಡುವೆ ವೇದ ಮಂತ್ರಗಳ ನಡುವೆ ಮದುವೆಯೊಂದು ನಡೆಯಿತು. ಗೋಮಾತೆಗೆ ಹರಕೆ ಹೊತ್ತುಕೊಂಡಿದ್ದ ವೃದ್ಧೆ ಸರೋಜಿನಿ ತನ್ನ ದಶಕಗಳಷ್ಟು ಹಿಂದಿನ ಆಶಯವನ್ನು ಹಸು ಮತ್ತು ದನದ ಮದುವೆಯನ್ನು ವೇದ ಘೋಷಗಳ ಮಧ್ಯೆ ಸಾಂಗೋಪ ಸಾಂಗವಾಗಿ ನೆರವೇರಿಸುವ ಮೂಲಕ ಈಡೇರಿಸಿಕೊಂಡರು. ಇಲ್ಲಿಯ ಕೇದಾರೇಶ್ವರ ದೇವಸ್ಥಾನದಲ್ಲಿ ಪುರೋಹಿತರ ನೇತೃತ್ವದಲ್ಲಿ ಯಜ್ಞ, ಸಂಸ್ಕೃತ ಶ್ಲೋಕಗಳ ಪಠಣ, ವಿಧಿವತ್ತಾದ ವೇದ ಘೋಷಗಳ ಮಧ್ಯೆ ಮದುವೆ ನಡೆಯಿತು. ಸಾಕಷ್ಟು ಸಂಖ್ಯೆಯಲ್ಲಿ ಅತಿಥಿಗಳೂ ಈ ವಿವಾಹಕ್ಕೆ ಸಾಕ್ಷಿಯಾದರು.

2008: ಭೂಕಕ್ಷೆ ಪ್ರವೇಶಿಸಲು ಅಣಿಯಾಗುತ್ತಿದ್ದ ನಿರುಪಯುಕ್ತ ಬೇಹುಗಾರಿಕಾ ಉಪಗ್ರವೊಂದನ್ನು ಅಮೆರಿಕದ ಕ್ಷಿಪಣಿಯು ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಹೊಡೆದುರುಳಿಸಿತು. 133 ನಾವಿಕ ಮೈಲುಗಳ (ಭೂಮಿಯಿಂದ 247 ಕಿ.ಮೀ. ದೂರ) ಅಂತರದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಉಪಗ್ರಹದ ಒಳಗಿನ ವಿಷಾನಿಲ ತುಂಬಿದ ಟ್ಯಾಂಕ್ ಭೂಮಿಯ ಅಥವಾ ಸಾಗರದ ಯಾವ ಪ್ರದೇಶದಲ್ಲಿ ಸ್ಫೋಟಗೊಂಡಿದೆ ಎಂಬುದು ತಿಳಿದಿಲ್ಲ ಎಂದು ಪೆಂಟಗಾನ್ ಹೇಳಿಕೆ ನೀಡಿತು. 2006ರಲ್ಲಿ ಅಮೆರಿಕ ತನ್ನ ಬೇಹುಗಾರಿಕಾ ಅವಶ್ಯಕತೆಗಾಗಿ ಇದನ್ನು ಪರೀಕ್ಷಾರ್ಥ ಉಡಾಯಿಸಿತ್ತು. ಉಡಾವಣೆಗೊಂಡ ಕೆಲವೇ ಗಂಟೆಗಳಲ್ಲಿ ಇದು ತನ್ನ ಸಂಪರ್ಕ ಕಡಿದುಕೊಂಡಿತ್ತು. ಇದು ವಿರೋಧಿ ಶಕ್ತಿಗಳ ಕೈವಶವಾಗಬಾರದೆಂಬ ಉದ್ದೇಶದಿಂದ ಹೊಡೆದು ಉರುಳಿಸಿರುವುದಾಗಿ ಅಮೆರಿಕ ಹೇಳಿತು. ಎಸ್ಎಂ-3 ಹೆಸರಿನ ಈ ಕ್ಷಿಪಣಿಯ ತೂಕ 2,270 ಕೆ.ಜಿ.

2008: ಡಾ.ಪು.ತಿ.ನ. ಟ್ರಸ್ಟ್ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಕಮಲಾಕರ ಕಡವೆ ಅವರಿಗೆ `ಡಾ.ಪುತಿನ ಕಾವ್ಯ ಪುರಸ್ಕಾರ' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿರಿಯ ಸಾಹಿತಿ ಪ್ರೊ.ಎಲ್.ಎಸ್. ಶೇಷಗಿರಿರಾವ್ ಪ್ರಶಸ್ತಿ ಪ್ರದಾನ ಮಾಡಿದರು.

2008: ಶ್ರೀಕ್ಷೇತ್ರ ಶ್ರವಣಬೆಳಗೊಳ ಸ್ಥಾಪಿಸಿರುವ `ಚಾವುಂಡರಾಯ ಪ್ರಶಸ್ತಿ'ಯನ್ನು ಹಿರಿಯ ಸಾಹಿತಿ ಬಿ. ದೇವುಕುಮಾರ ಶಾಸ್ತ್ರಿ ಅವರಿಗೆ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪರಿಷತ್ತಿನ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು.

2008: ಬಾಹ್ಯಾಕಾಶ ವಿಜ್ಞಾನಿ ಪ್ರೊ. ಯು.ಆರ್.ರಾವ್ ಅವರು ಅಮೆರಿಕದ ವಿಶ್ವ ಕಲೆ ಮತ್ತು ವಿಜ್ಞಾನ ಅಕಾಡೆಮಿಯ ಫೆಲೋ ಆಗಿ ಆಯ್ಕೆಯಾದರು. ರಾವ್ ಅವರ ಸಾಮಾಜಿಕ ಸೇವೆ, ವೃತ್ತಿಯಲ್ಲಿ ಮಾಡಿರುವ ಸಾಧನೆಯನ್ನು ಗಮನಿಸಿ ಫೆಲೋ ಆಗಿ ಆಯ್ಕೆ ಮಾಡಲಾಗಿದೆ ಎಂದು ಇಸ್ರೊ ಪ್ರಕಟಣೆ ತಿಳಿಸಿತು.

2007: ಸಮ್ ಜೌತಾ ಎಕ್ಸ್ಪ್ರೆಸ್ ಸ್ಫೋಟಕ್ಕೆ ಸಂಬಂಧಿಸಿದಂತೆ ಜಂಟಿ ತನಿಖೆ ನಡೆಸಬೇಕು ಎಂಬ ಪಾಕ್ ಪ್ರಸ್ತಾವವನ್ನು ಭಾರತ ತಿರಸ್ಕರಿಸಿತು.

2007: ಅಣ್ವಸ್ತ್ರ ಅಪಘಾತ ಅಪಾಯಗಳನ್ನು ಕಡಿಮೆಗೊಳಿಸುವ ಒಪ್ಪಂದ ಒಂದಕ್ಕೆ ಭಾರತ ಮತ್ತು ಪಾಕಿಸ್ಥಾನನವದೆಹಲಿಯಲ್ಲಿ ಸಹಿ ಹಾಕಿದವು. ಭಾರತದ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಕೆ.ಸಿ. ಸಿಂಗ್ ಮತ್ತು ಪಾಕಿಸ್ಥಾನದ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ತಾರೀಕ್ ಉಸ್ಮಾನ್ ಹೈದರ್ ಒಪ್ಪಂದಕ್ಕೆ ಸಹಿ ಹಾಕಿದರು.

2007: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬಂಧ ಸರ್ಕಾರ ಮತ್ತು ವಿರೋಧಿ ಕಾಂಗ್ರೆಸ್ ನಡುವೆ ಉಂಟಾಗಿದ್ದ ಬಿಕ್ಕಟ್ಟು ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರ ಮಧ್ಯಪ್ರವೇಶದಿಂದ ಕೊನೆಗೊಂಡಿತು. ಮುಂದಿನ ಅಧಿವೇಶನಕ್ಕೆ ಮುಂಚಿತವಾಗಿ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ರಾಜ್ಯಪಾಲರು ಪರಿಷತ್ ಸದಸ್ಯರಿಗೆ ಸೂಚಿಸಿದರು.

2007: ಕನ್ನಡಪ್ರಭದ ಮುಖ್ಯವರದಿಗಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಎಚ್. ಜಿ. ಪಟ್ಟಾಭಿರಾಮ್ (65) ನಿಧನರಾದರು. ಅಪರಾಧ ವರದಿಗಾರಿಕೆಗೆ ಅವರು ಖ್ಯಾತರಾಗಿದ್ದರು.

2007: ಭಾರತ ತಂಡದ ಮಾಜಿ ಆಟಗಾರ ಸುಜಿತ್ ಅವರು ಸೋಮವಾರ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು. ಪ್ರತಿಭಾನ್ವಿತ ಬಲಗೈ ಬ್ಯಾಟ್ಸ್ ಮನ್ ಆಗಿದ್ದ ಸುಜಿತ್ ಸೋಮಸುಂದರ್ 1990-91ರಲ್ಲಿ ಮೊದಲ ಬಾರಿಗೆ ಕರ್ನಾಟಕದ ಪರ ರಣಜಿ ಪಂದ್ಯದಲ್ಲಿ ಆಡಿದ್ದರು.

2007: ಕರ್ನಾಟಕದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಸಿ. ದಿನಕರ್ ಮತ್ತು ಇತರರ ವಿರುದ್ಧ ಉದ್ಯಮಿ ವಿ.ಜಿ. ಸಿದ್ಧಾರ್ಥ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ತಳ್ಳಿ ಹಾಕಿತು. ಕೋರ್ಟ್ ವೆಚ್ಚಕ್ಕಾಗಿ ಅಧಿಕಾರಿಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುವಂತೆಯೂ ನ್ಯಾಯಾಲಯ ಸಿದ್ಧಾರ್ಥ ಅವರಿಗೆ ನ್ಯಾಯಾಲಯ ಸೂಚಿಸಿತು. ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗ್ದಿದಾಗ ಕಾಡುಗಳ್ಳ ವೀರಪ್ಪನ್ ಅವರು ಡಾ. ರಾಜಕುಮಾರ್ ಅವರನ್ನು ಅಪಹರಿಸಿ, ಬಿಡುಗಡೆ ಮಾಡಿದ ಪ್ರಕರಣ ಬಗ್ಗೆ ದಿನಕರ್ ಅವರು ಬರೆದ `ವೀರಪ್ಪನ್ಸ್ ಪ್ರೈಸ್ ಕ್ಯಾಚ್: ರಾಜಕುಮಾರ' ಪುಸ್ತಕದಲ್ಲಿ ತಮ್ಮ ಘನತೆಗೆ ಕುಂದು ತರುವಂತಹ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಿ ಸಿದ್ಧಾರ್ಥ ಮೊಕದ್ದಮೆ ಹೂಡಿದ್ದರು.

2007: ಹಠಾತ್ ಬೆಳವಣಿಗೆಯೊಂದರಲ್ಲಿ ಚುನಾವಣಾ ಆಯೋಗವು ಉತ್ತರ ಪ್ರದೇಶ ರಾಜ್ಯ ವಿಧಾನಸಭೆಗೆ ಏಳು ಹಂತಗಳ ಚುನಾವಣೆಯನ್ನು ಘೋಷಿಸಿತು. ಇದರಿಂದಾಗಿ ವಜಾಭೀತಿಯಲ್ಲಿದ್ದ ಮುಲಯಂ ಸಿಂಗ್ ಸರ್ಕಾರವು ಈ ತೂಗುಕತ್ತಿಯಿಂದ ಸದ್ಯಕ್ಕೆ ಪಾರಾಯಿತು.

2006: ಉದರದ ಸಮಸ್ಯೆಗಳಿಗಾಗಿ ಶಸ್ತ್ರಚಿಕಿತ್ಸೆ ನಡೆದ ಎರಡು ತಿಂಗಳುಗಳಿಗೂ ಹೆಚ್ಚು ಕಾಲದ ವಿಶ್ರಾಂತಿಯ ಬಳಿಕ ಅಮಿತಾಭ್ ಬಚ್ಚನ್ ಅವರು ಬಾಬುಲ್ ಹಾಡು ಮುದ್ರಣ ಮಾಡಿಸಿಕೊಂಡರು.

2006: ರಾಷ್ಟ್ರದ್ಯಂತ ಕುತೂಹಲ ಕೆರಳಿಸಿದ್ದ, ನೂರಾರು ಜನರ ಸಮ್ಮುಖದಲ್ಲಿ ನಡೆದಿದ್ದ ರೂಪದರ್ಶಿ ಜೆಸ್ಸಿಕಾಲಾಲ್ ಕೊಲೆ ಪ್ರಕರಣದ ಮುಖ್ಯ ಆರೋಪಿ ಮನುಶರ್ಮಾ ಸೇರಿದಂತೆ ಎಲ್ಲ ಒಂಬತ್ತು ಆರೋಪಿಗಳನ್ನು ದೆಹಲಿ ನ್ಯಾಯಾಲಯವು ಖುಲಾಸೆ ಮಾಡಿತು. 1999ರ ಏಪ್ರಿಲ್ 29ರ ಮಧ್ಯರಾತ್ರಿ ಜೆಸ್ಸಿಕಾಲಾಲ್ ಕೊಲೆ ನಡೆದಿತ್ತು. ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಭಾಯನಾ ಅವರು ಸಾಕ್ಷ್ಯಗಳ ಅಭಾವದ ಕಾರಣಕ್ಕಾಗಿ ಮಾಜಿ ಕೇಂದ್ರ ಸಚಿವ ವಿನೋದ್ ಶರ್ಮಾ ಅವರ ಪುತ್ರ ಸಿದ್ಧಾರ್ಥ ವಸಿಷ್ಠ ಯಾನೆ ಮನು ಶರ್ಮಾ ಮತ್ತು ಇತರರನ್ನು ಆರೋಪಮುಕ್ತಗೊಳಿಸಿ ತೀರ್ಪು ನೀಡಿದರು. ಈ ತೀರ್ಪಿನ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಅಸಮಾಧಾನ ಭುಗಿಲೆದ್ದು, ಜನ ನೇರವಾಗಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಪ್ರಕರಣದ ಮರುವಿಚಾರಣೆ ನಡೆಸುವಂತೆ ಆಗ್ರಹಿಸಿ ಪತ್ರಗಳನ್ನು ಬರೆದರು.

1974: ಕಲಾವಿದ ಋತ್ವಿಕ್ ಸಿಂಹ ಜನನ.

1964: ಸುಗಮ ಸಂಗೀತ, ಜಾನಪದ, ರಂಗಭೂಮಿ ಮತ್ತಿತರ ಸಾಂಸ್ಕೃತಿಕ ಸಂಘಟನೆಗಳ ರೂವಾರಿ, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಬಿ.ಎಸ್. ನಾರಾಯಣ ಭಟ್- ರುಕ್ಮಿಣಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು.

1961: ಕಲಾವಿದ ಮಂಜುಮಯ್ಯ ಜೆ. ಜನನ.

1947: ಎಡ್ವಿನ್ ಎಚ್ ಲ್ಯಾಂಡ್ ಸಾರ್ವಜನಿಕವಾಗಿ ತನ್ನ ಪೋಲರೈಡ್ ಲ್ಯಾಂಡ್ ಕ್ಯಾಮರಾವನ್ನು ಪ್ರದರ್ಶಿಸಿದ. ಈ ಕ್ಯಾಮರಾ 60 ಸೆಕೆಂಡುಗಳಲ್ಲಿ ಕಪ್ಪು ಬಿಳುಪು ಛಾಯಾಚಿತ್ರ ತೆಗೆದುಕೊಡುವ ಸಾಮರ್ಥ್ಯ ಹೊಂದಿತ್ತು.

1924: ರಾಬರ್ಟ್ ಮುಗಾಬೆ ಹುಟ್ಟಿದ ದಿನ. ಇವರು ಜಿಂಬಾಬ್ವೆಯ ಪ್ರಥಮ ಪ್ರಧಾನಿಯಾಗಿ 1980ರಿಂದ 1987ರ ಅವಧಿಯಲ್ಲಿ ಆಡಳಿತ ನಡೆಸಿದರು.

1916: ಮೊದಲ ಜಾಗತಿಕ ಸಮರ ಕಾಲದ `ವೆರ್ಡನ್ ಹೋರಾಟ' ಆರಂಭವಾಯಿತು. ಫ್ರೆಂಚ್ ಕಡೆಯಲ್ಲಿ ಅಪಾರ ಸಾವು ನೋವು ಆಗುವಂತೆ ಮಾಡುವಲ್ಲಿ ಸಫಲರಾದರೂ ವೆರ್ಡನನ್ನು ವಶಪಡಿಸಿಕೊಳ್ಳುವಲ್ಲಿ ಜರ್ಮನ್ನರು ವಿಫಲರಾದರು.

1894: ಭಾರತೀಯ ವಿಜ್ಞಾನಿ ಶಾಂತಿ ಸ್ವರೂಪ್ ಭಟ್ನಾಗರ್ (1894-1955) ಹುಟ್ಟಿದ ದಿನ. ವಿಜ್ಞಾನ ಕ್ಷೇತ್ರದಲ್ಲಿ ಮಾಡುವ ಸಾಧನೆಗೆ ನೀಡುವ ಸರ್ವೋನ್ನತ ಪ್ರಶಸ್ತಿಗೆ ಇವರ ಹೆಸರನ್ನೇ (ಭಟ್ನಾಗರ್ ಪ್ರಶಸ್ತಿ) ಇಡಲಾಗಿದೆ.

1822: ರಿಚರ್ಡ್ ಸೌತ್ ವೆಲ್ ಬೌರ್ಕೆ (1822-1872) ಹುಟ್ಟಿದ ದಿನ. ಐರಿಷ್ ರಾಜಕಾರಣಿ ಹಾಗೂ ಮೇಯೋವಿನ ಅಧಿಕಾರಿಯಾಗಿದ್ದ ಈತ ಭಾರತದ ವೈಸ್ ರಾಯ್ ಆಗಿದ್ದ ಕಾಲದಲ್ಲಿ ಮೊತ್ತ ಮೊದಲ ಬಾರಿಗೆ ಜನಗಣತಿ ನಡೆಸಿದ. ಅಜ್ಮೀರದಲ್ಲಿ ಮೇಯೊ ಕಾಲೇಜ್ ಸ್ಥಾಪಿಸಿದ. ಕೃಷಿ ಮತ್ತು ವಾಣಿಜ್ಯಕ್ಕಾಗಿ ಪ್ರತ್ಯೇಕ ಇಲಾಖೆಗಳನ್ನು ಆರಂಭಿಸಿದ.

1804: ಬ್ರಿಟಿಷ್ ಎಂಜಿನಿಯರ್ ರಿಚರ್ಡ್ ಟ್ರಿವಿಥಿಕ್ ಮೊತ್ತ ಮೊದಲ ಬಾರಿಗೆ ಹಳಿಗಳ ಮೇಲೆ ಉಗಿಯಂತ್ರವನ್ನು ಓಡಿಸಿದ.

1741: ಇಂಗ್ಲಿಷ್ ಕೃಷಿ ತಜ್ಞ ಜೆತ್ರೊ ಟುಲ್ (1674-1741) ಮೃತನಾದ. ಬರಹಗಾರ, ಸಂಶೋಧಕ ಹಾಗೂ ಕೃಷಿತಜ್ಞನಾದ ಈತನ ಕಲ್ಪನೆಗಳು ಆಧುನಿಕ ಬ್ರಿಟಿಷ್ ಕೃಷಿಗೆ ಅಡಿಪಾಯ ಹಾಕಿದವು.

Advertisement