My Blog List

Thursday, September 4, 2014

ಮಂಜೂರು ಮಾಡಿದ ಸಾಲ ವಿತರಣೆಗೆ ನಿರಾಕರಿಸಿದ ಬ್ಯಾಂಕು..!

ಮಂಜೂರು ಮಾಡಿದ ಸಾಲ ವಿತರಣೆಗೆ ನಿರಾಕರಿಸಿದ ಬ್ಯಾಂಕು..!

ರೈತನಿಗೆ ಸಿಕ್ಕಿತು ನ್ಯಾಯ..


ಸಾಲ ಮಂಜೂರು ಮಾಡಿದ ಬಳಿಕ ಅದನ್ನು ವಿತರಿಸಬೇಕಾದ್ದು ಬ್ಯಾಂಕಿನ ಕರ್ತವ್ಯ. ಹಾಗೆ ವಿತರಿಸದೇ ಇದ್ದಲ್ಲಿ? ಅದು ತಪ್ಪಾಗುತ್ತದೆ. ಕರ್ತವ್ಯ ಲೋಪವೂ ಆಗುತ್ತದೆ. ಇಂತಹ ಲೋಪಕ್ಕಾಗಿ ಬ್ಯಾಂಕೊಂದನ್ನು ತರಾಟೆಗೆ ತೆಗೆದುಕೊಂಡ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯವು ಸಾಲ ಮಂಜೂರಾಗಿದ್ದ ರೈತನಿಗೆ 4 ಲಕ್ಷ ರೂಪಾಯಿ ಸಾಲದ ಮೊತ್ತವನ್ನು ನೀಡುವುದರ ಜೊತೆಗೆ ಪರಿಹಾರ ಮತ್ತು ಖಟ್ಲೆ ವೆಚ್ಚವಾಗಿ 25,000 ರೂಪಾಯಿಗಳನ್ನು ನೀಡುವಂತೆ ಆದೇಶ  ನೀಡಿದ ಪ್ರಕರಣ ಇಲ್ಲಿದೆ.

ಹರ್ಯಾಣದ ರೈತ ಶಂಶೇರ್ ಸಿಂಗ್ ಯುಕೋ ಬ್ಯಾಂಕಿನಲ್ಲಿ ತನ್ನ ಜಮೀನು ಅಡವು ಇಟ್ಟು 4 ಲಕ್ಷ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ದಾಖಲೆಗಳೆಲ್ಲವನ್ನೂ ಪರಿಶೀಲಿಸಿದ ಬ್ಯಾಂಕ್ ಕೋರಿದ ಸಾಲವನ್ನು ಮಂಜೂರು ಮಾಡಿತು.
ಅದರೆ ಆ ಬಳಿಕ ಜಮೀನು ತನ್ನ ವ್ಯಾಪ್ತಿಯಲ್ಲಿ ಇಲ್ಲ ಎಂಬ ಕಾರಣ ನೀಡಿ ಮಂಜೂರಾದ ಸಾಲವನ್ನು ವಿತರಿಸಲು ನಿರಾಕರಿಸಿತು.

ಸಿಂಗ್ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೊಕ್ಕರು. ‘ನಾನು ಕಿಸಾನ್ ಕ್ರೆಡಿಟ್ ಕಾರ್ಡ್’ ಯೋಜನೆ ಅಡಿಯಲ್ಲಿ ಕೃಷಿ ಜಮೀನು ಅಡವು ಇಟ್ಟು 5 ಲಕ್ಷ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೆ. ಬ್ಯಾಂಕು 4 ಲಕ್ಷ ರೂಪಾಯಿ ಮಂಜೂರು ಮಾಡಿತು.
ಆದರೆ ಬಳಿಕ ಮಂಜೂರಾದ ಸಾಲ ವಿತರಿಸಲು ನಿರಾಕರಿಸಿತು’ ಎಂಬುದು ಸಿಂಗ್ ದೂರಿನ ಸಾರಾಂಶ.

 ಜಿಲ್ಲಾ ಗ್ರಾಹಕ ನ್ಯಾಯಾಲಯ ಸಿಂಗ್ ದೂರನ್ನು ಪುರಸ್ಕರಿಸಿ, ಮಂಜೂರು ಮಾಡಿದ  4 ಲಕ್ಷ ರೂಪಾಯಿ ಸಾಲವನ್ನು ವಿತರಿಸುವಂತೆ ನಿರ್ದೇಶಿಸಿತು.

ಯುಕೋ ಬ್ಯಾಂಕ್ ಈ ತೀರ್ಪಿನ ವಿರುದ್ಧ ಹರ್ಯಾಣ ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿತು. ರಾಜ್ಯ ಗ್ರಾಹಕ ನ್ಯಾಯಾಲಯ ಕೂಡಾ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು.

ಪಟ್ಟು ಬಿಡದ ಯುಕೋ ಬ್ಯಾಂಕ್ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದ (ಎನ್ ಸಿ ಡಿ ಆರ್ ಸಿ) ಮೆಟ್ಟಲೇರಿತು.

ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯವು ಬ್ಯಾಂಕಿನ ಪುನರ್ ಪರಿಶೀಲನಾ ಅರ್ಜಿಯನ್ನು ವಜಾ ಮಾಡಿ ಹರ್ಯಾಣ ರಾಜ್ಯ ಗ್ರಾಹಕ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು.

‘ಸಾಲ ಮಂಜೂರು ಮಾಡುವ ಮುನ್ನ ಬ್ಯಾಂಕು ಸಿಂಗ್ ಅವರು ಸಲ್ಲಿಸಿದ್ದ ಎಲ್ಲಾ ದಾಖಲೆಗಳನ್ನೂ ಪರಿಶೀಲಿಸಿದ್ದರಿಂದ, ಆ ಬಳಿಕ ಸಾಲ ವಿತರಿಸಲು ನಿರಾಕರಿಸಿದ್ದು ಸಂಪೂರ್ಣವಾಗಿ ಅಸಮರ್ಥನೀಯ’ ಎಂದು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ ಸ್ಪಷ್ಟ ಪಡಿಸಿತು.

ಕೃಷಿ ಜಮೀನು ತನ್ನ ಶಾಖೆಯ ವ್ಯಾಪ್ತಿಯಲ್ಲಿ ಇಲ್ಲ ಎಂಬುದಾಗಿ ಬ್ಯಾಂಕು ಮುಂದಿಟ್ಟ ಕಾರಣವನ್ನು ವಿಶ್ಲೇಷಿಸಿದ ನ್ಯಾಯಮೂರ್ತಿ ವಿ.ಕೆ. ಜೈನ್ ಅವರ ಪೀಠವು, ‘ನಮ್ಮ ಅಭಿಪ್ರಾಯದಲ್ಲಿ ಅರ್ಜಿದಾರ ಬ್ಯಾಂಕ್ ಈ ವಿಚಾರವನ್ನು ಮೊದಲೇ ಪರಿಶೀಲಿಸಬೇಕಾಗಿತ್ತು. ಸಿಂಗ್ ಅವರು ತಮ್ಮ ಅರ್ಜಿಯ ಜೊತೆಗೆ ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನೂ ಸಲ್ಲಿಸಿದ್ದರು’ ಎಂದು ಹೇಳಿತು.

ದೂರುದಾರರು ಸಲ್ಲಿಸಿದ ದಾಖಲೆಗಳ ಆಧಾರದಲ್ಲಿ ಸಾಲ ಮಂಜೂರು ಮಾಡಿದ ಬ್ಯಾಂಕು, ದೂರುದಾರರು ಪ್ರಮಾಣಪತ್ರದಲ್ಲಿ ಮಾಡಿದ ಘೋಷಣೆ ತಪ್ಪಾಗಿ ಕಂಡು ಬಂದಲ್ಲಿ ಇಲ್ಲವೇ ಅವರು ಸಲ್ಲಿಸಿದ ದಾಖಲೆಗಳು ನಕಲಿ ಎಂಬುದಾಗಿ  ಬಳಿಕ ಬಳಿಕ ದೃಢ ಪಡುವುದರ ಹೊರತಾಗಿ ಬೇರೆ ಯಾವುದೇ ಕಾರಣಕ್ಕೂ ಸಾಲ ವಿತರಣೆಗೆ ನಿರಾಕರಿಸುವುದು ಅಸರ್ಥನೀಯವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.

ಈ ಪ್ರಕರಣದಲ್ಲಿ ಸಿಂಗ್ ಅವರು ತಪ್ಪು ಪ್ರಮಾಣಪತ್ರವನ್ನು ನೀಡಿಲ್ಲ ಅಥವಾ ತಮ್ಮ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನೂ ಹಾಜರು ಪಡಿಸಿಲ್ಲ. ಅರ್ಜಿದಾರ ಬ್ಯಾಂಕು ಸಂಬಂಧಪಟ್ಟ ಕೃಷಿ ಜಮೀನು ತನ್ನಶಾಖೆಯ ವ್ಯಾಪ್ತಿಗೆ ಬರುತ್ತಿಲ್ಲ ಎಂಬ ಏಕೈಕ ಕಾರಣ ನೀಡಿ ಮಂಜೂರು ಮಾಡಿದ ಸಾಲವನ್ನು ವಿತರಿಸಲು ನಿರಾಕರಿಸಿದ್ದು ಸರಿಯಲ್ಲ ಎಂದು ಪೀಠ ಹೇಳಿತು.

- ನೆತ್ರಕೆರೆ ಉದಯಶಂಕರ

Advertisement